ಪ್ರಧಾನ ಮಂತ್ರಿಯವರ ಕಛೇರಿ

ವ್ಯಾಪಾರ-20(ಬಿ-20) ಶೃಂಗಸಭೆ ಇಂಡಿಯಾ 2023 ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


"ಭಾರತದ ಚಂದ್ರಯಾನ ಕಾರ್ಯಕ್ರಮವು ವಿಜ್ಞಾನ ಮತ್ತು ಉದ್ಯಮ ಎರಡರ ಯಶಸ್ಸಾಗಿದೆ"
 
"ಬಿ-20ರ ಘೋಷವಾಕ್ಯ - RAISE ನಲ್ಲಿ, 'ಐ-ಇನೋವೇಷನ್' ಹೊಸತನ ಪ್ರತಿನಿಧಿಸುತ್ತದೆ. ಆದರೆ ನಾವೀನ್ಯತೆಯ ಜತೆಗೆ, ನಾನು ಅದರಲ್ಲಿ ಇನ್ನೊಂದು ‘ಐ’ ಅನ್ನು ಸಹ ನೋಡುತ್ತೇನೆ – ಎಲ್ಲರನ್ನೂ ಒಳಗೊಂಡ ಪ್ರಗತಿ-ಅಂತರ್ಗತತೆ”
 
“ನಮ್ಮ ಹೂಡಿಕೆಯ ಬಹುಪಾಲು ಅಗತ್ಯವಿರುವ ವಿಷಯವೆಂದರೆ 'ಪರಸ್ಪರ ನಂಬಿಕೆ”
 
"ಜಾಗತಿಕ ಬೆಳವಣಿಗೆಯ ಭವಿಷ್ಯವು ವ್ಯಾಪಾರ ಭವಿಷ್ಯವನ್ನು ಅವಲಂಬಿಸಿದೆ"
 
"ದಕ್ಷ ಮತ್ತು ವಿಶ್ವಾಸಾರ್ಹ ಜಾಗತಿಕ ಪೂರೈಕೆ ಸರಪಳಿ ನಿರ್ಮಿಸುವಲ್ಲಿ ಭಾರತವು ಪ್ರಮುಖ ಸ್ಥಾನ ಹೊಂದಿದೆ"
 
"ಸುಸ್ಥಿರತೆಯು ಒಂದು ಅವಕಾಶ ಮತ್ತು ವ್ಯವಹಾರ ಮಾದರಿಯಾಗಿದೆ"
 
"ಭಾರತವು ವ್ಯಾಪಾರಕ್ಕಾಗಿ ಹಸಿರು ಸಾಲದ ಮಾರ್ಗಸೂಚಿ ಸಿದ್ಧಪಡಿಸಿದೆ, ಇದು 'ಪೃಥ್ವಿ ಸಕಾರಾತ್ಮಕ' ಕ್ರಿಯೆಗಳ ಮೇಲೆ ಕೇಂದ್ರೀಕೃತವಾಗಿದೆ"
 
"ಉದ್ಯಮಗಳು ಹೆಚ್ಚು ಹೆಚ್ಚು ಜನರ ಖರೀದಿ ಸಾಮರ್ಥ್ಯವನ್ನು ಸುಧಾರಿಸುವತ್ತ ಗಮನ ಹರಿಸಬೇಕು. ಏಕೆಂದರೆ ಸ್ವಯಂ ಕೇಂದ್ರಿತ ವಿಧಾನವು ಎಲ್ಲರಿಗೂ ಹಾನಿ ಮಾಡುತ್ತದೆ"
 
"ನಾವು ಖಂಡಿತವಾಗಿ 'ಅಂತಾರಾಷ್ಟ್ರೀಯ ಗ್ರಾಹಕ ಆರೈಕೆ ದಿನದ' ವ್ಯವಸ್ಥೆಯ ಬಗ್ಗೆ ಯೋಚಿಸಬೇಕು. ಇದು ವ್ಯವಹಾರಗಳು ಮತ್ತು ಗ್ರಾಹಕರ ನಡುವೆ ನಂಬಿಕೆ ಬಲಪಡಿಸಲು ಸಹಾಯ ಮಾಡುತ್ತದೆ"
 
"ಕ್ರಿಪ್ಟೋಕರೆನ್ಸಿಗಳ ಬಗ್ಗೆ ಹೆಚ್ಚು ಸಂಯೋಜಿತ ವಿಧಾನದ ಅವಶ್ಯಕತೆಯಿದೆ"
 
"ಜಾಗತಿಕ ವ್ಯಾಪಾರ ಸಮುದಾಯಗಳು ಮತ್ತು ಸರ್ಕಾರಗಳು ನೈತಿಕ ಕೃತಕ ಬುದ್ಧಿಮತ್ತೆ ಉತ್ತೇಜಿಸುವುದನ್ನು ಖಚಿತಪಡಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡಬೇಕು"
 
"ಸಂಪರ್ಕಿತ ಪ್ರಪಂಚವು ಹಂಚಿಕೆಯ ಉದ್ದೇಶ, ಹಂಚಿಕೆಯ ಪೃಥ್ವಿ, ಹಂಚಿಕೆಯ ಸಮೃದ್ಧಿ ಮತ್ತು ಹಂಚಿಕೆಯ ಭವಿಷ್ಯದ ಬಗ್ಗೆ ಗಮನ ನೀಡಬೇಕು"

Posted On: 27 AUG 2023 1:36PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಬಿ20 ಶೃಂಗಸಭೆ ಇಂಡಿಯಾ-2023 ಉದ್ದೇಶಿಸಿ ಮಾತನಾಡಿದರು. ಬಿ20 ಶೃಂಗಸಭೆ ಇಂಡಿಯಾವು ಬಿ20 ಇಂಡಿಯಾ ವಿಷಯ ಅಥವಾ ಸಂವಹನವನ್ನು ಉದ್ದೇಶಪೂರ್ವಕವಾಗಿ ಚರ್ಚಿಸಲು ವಿಶ್ವಾದ್ಯಂತದಿಂದ ನೀತಿ ನಿರೂಪಕರು, ಉದ್ಯಮ ನಾಯಕರು ಮತ್ತು ತಜ್ಞರನ್ನು ಕರೆತಂದಿದೆ. ಬಿ20 ಇಂಡಿಯಾ ಗೋಷ್ಠಿಯು(ಕಮ್ಯುನಿಕ್) ಜಿ20 ಸದಸ್ಯ ರಾಷ್ಟ್ರಗಳಿಗೆ ಸಲ್ಲಿಸಲು 54 ಶಿಫಾರಸುಗಳು ಮತ್ತು 172 ನೀತಿ ಕ್ರಮಗಳನ್ನು ಒಳಗೊಂಡಿದೆ ಎಂದರು.

ಆಗಸ್ಟ್ 23ರಂದು ಚಂದ್ರಯಾನ ಕಾರ್ಯಕ್ರಮದ ಅಡಿ, ಯಶಸ್ವಿ ಲ್ಯಾಂಡಿಂಗ್ ಮೂಲಕ ಸಂಭ್ರಮಾಚರಣೆಯ ಕ್ಷಣ ನಮ್ಮೆಲ್ಲರದಾಗಿದೆ. ಭಾರತದಲ್ಲಿ ಹಬ್ಬ ಹರಿದಿನಗಳು ಆರಂಭವಾಗಿದ್ದು, ಇಡೀ ಸಮಾಜ ಹಾಗೂ ವ್ಯಾಪಾರ ವಲಯ ಸಂಭ್ರಮದ ಮನಸ್ಥಿತಿಯಲ್ಲಿವೆ. ಯಶಸ್ವಿ ಚಂದ್ರಯಾನದಲ್ಲಿ ಇಸ್ರೋದ ಪಾತ್ರವನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, ಚಂದ್ರಯಾನದ ಅನೇಕ ಘಟಕಗಳನ್ನು ಖಾಸಗಿ ವಲಯ ಮತ್ತು ಎಂಎಸ್‌ಎಂಇಗಳು ಒದಗಿಸಿದ್ದರಿಂದ ಮಿಷನ್‌ನಲ್ಲಿ ಉದ್ಯಮದ ಪಾತ್ರ ಪ್ರಮುಖವಾಗಿದೆ. ಹಾಗಾಗಿ, "ಇದು ವಿಜ್ಞಾನ ಮತ್ತು ಉದ್ಯಮ ಎರಡರ ಯಶಸ್ಸು" ಎಂದು ಅವರು ಹೇಳಿದರು.

ಭಾರತದೊಂದಿಗೆ ಇಡೀ ಜಗತ್ತು ಸಂಭ್ರಮಿಸುತ್ತಿದೆ, ಈ ಆಚರಣೆಯು ಜವಾಬ್ದಾರಿಯುತ ಬಾಹ್ಯಾಕಾಶ ಕಾರ್ಯಕ್ರಮವನ್ನು ಮುನ್ನಡೆಸುತ್ತಿದೆ. ಆಚರಣೆಗಳು ಜವಾಬ್ದಾರಿ, ವೇಗವರ್ಧನೆ, ನಾವೀನ್ಯತೆ, ಸುಸ್ಥಿರತೆ ಮತ್ತು ಸಮಾನತೆ, ಇಂದಿನ ಬಿ-20 ಶೃಂಗಸಭೆಯ ವಿಷಯವಾಗಿದೆ. ಇದು ಮಾನವತೆಯ ಬಗ್ಗೆ ಮತ್ತು 'ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ' ಎಂದು ಪ್ರಧಾನಿ ಹೇಳಿದರು.
 
ಬಿ-20ರ ಥೀಮ್ 'R.A.I.S.E.' ಕುರಿತು ಮಾತನಾಡಿದ ಪ್ರಧಾನಿ, 'ಐ' ನಾವೀನ್ಯತೆಯನ್ನು ಪ್ರತಿನಿಧಿಸುತ್ತದೆಯಾದರೂ, ಅದು ಎಲ್ಲರನ್ನೂ ಒಳಗೊಂಡ ಪ್ರಗತಿ(ಅಂತರ್ಗತತೆ)ಯ ಮತ್ತೊಂದು 'ಐ' ಅನ್ನು ಚಿತ್ರಿಸುತ್ತದೆ. ಜಿ-20ರಲ್ಲಿ ಆಫ್ರಿಕಾ ಒಕ್ಕೂಟಕ್ಕೆ ಶಾಶ್ವತ ಸ್ಥಾನ ನೀಡಲು ಆಹ್ವಾನಿಸುವಾಗ ಅದೇ ದೃಷ್ಟಿ ಅನ್ವಯವಾಗುತ್ತದೆ. ಬಿ-20ರಲ್ಲೂ ಸಹ ಆಫ್ರಿಕಾದ ಆರ್ಥಿಕ ಅಭಿವೃದ್ಧಿಯನ್ನು ಕೇಂದ್ರೀಕೃತ ಪ್ರದೇಶವೆಂದು ಗುರುತಿಸಲಾಗಿದೆ. "ಈ ವೇದಿಕೆಯ ಅಂತರ್ಗತ ವಿಧಾನವು ಈ ಗುಂಪಿನ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬುದನ್ನು ಭಾರತ ನಂಬುತ್ತದೆ". ಇಲ್ಲಿ ತೆಗೆದುಕೊಂಡ ನಿರ್ಧಾರಗಳ ಯಶಸ್ಸು ಜಾಗತಿಕ ಆರ್ಥಿಕ ಸವಾಲುಗಳನ್ನು ಎದುರಿಸುವಲ್ಲಿ ಮತ್ತು ಸುಸ್ಥಿರ ಬೆಳವಣಿಗೆ ಸಾಧಿಸುವಲ್ಲಿ ನೇರ ಪರಿಣಾಮ ಬೀರುತ್ತದೆ ಎಂದು ಪ್ರಧಾನಿ ತಿಳಿಸಿದರು.

ಶತಮಾನಕ್ಕೊಮ್ಮೆ ಸಂಭವಿಸಿದ ವಿಪತ್ತು ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಕಲಿತ ಪಾಠಗಳ ಬಗ್ಗೆ ಮಾತನಾಡಿದ ಶ್ರೀ ಮೋದಿ, ನಮ್ಮ ಹೂಡಿಕೆಯ ಬಹುಪಾಲು ಅಗತ್ಯವಿರುವ ವಿಷಯವೆಂದರೆ 'ಪರಸ್ಪರ ನಂಬಿಕೆ' ಎಂಬುದನ್ನು ಸಾಂಕ್ರಾಮಿಕ ರೋಗವು ನಮಗೆ ಕಲಿಸಿದೆ. ಸಾಂಕ್ರಾಮಿಕ ರೋಗವು ಪರಸ್ಪರ ನಂಬಿಕೆಯ ಸೌಧವನ್ನು ಛಿದ್ರಗೊಳಿಸಿದಾಗ, ಭಾರತವು ಪರಸ್ಪರ ನಂಬಿಕೆಯ ಪತಾಕೆ ಎತ್ತುವ ವಿಶ್ವಾಸ ಮತ್ತು ನಮ್ರತೆಯಿಂದ ನಿಂತಿದೆ. ಭಾರತವು 150ಕ್ಕಿಂತ ಹೆಚ್ಚಿನ ದೇಶಗಳಿಗೆ ಔಷಧಗಳನ್ನು ಲಭ್ಯವಾಗುವಂತೆ ಮಾಡಿದೆ. ಭಾರತದ ಸ್ಥಾನಮಾನವನ್ನು ವಿಶ್ವದ ಫಾರ್ಮಸಿ ತಾಣ ಎಂದು ಪರಿಗಣಿಸಲಾಗಿದೆ. ಅಂತೆಯೇ, ಕೋಟಿಗಟ್ಟಲೆ ಜೀವಗಳನ್ನು ಉಳಿಸಲು ಲಸಿಕೆ ಉತ್ಪಾದನೆ ಹೆಚ್ಚಿಸಲಾಯಿತು. ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳು ಅದರ ಕ್ರಿಯೆ ಮತ್ತು ಅದರ ಪ್ರತಿಕ್ರಿಯೆಯಲ್ಲಿ ತೋರಿಸುತ್ತಿದೆ. "ಭಾರತದ 50ಕ್ಕೂ ಹೆಚ್ಚು ನಗರಗಳಲ್ಲಿ ನಡೆದ ಜಿ-20 ಸಭೆಗಳಲ್ಲಿ ಭಾರತದ ಪ್ರಜಾಪ್ರಭುತ್ವ ಮೌಲ್ಯಗಳು ಸಾಕಾರಗೊಂಡಿವೆ" ಎಂದು ಅವರು ಹೇಳಿದರು.

ಜಾಗತಿಕ ವ್ಯಾಪಾರ ಸಮುದಾಯವು ಭಾರತದೊಂದಿಗೆ ಪಾಲುದಾರಿಕೆ ಹೊಂದಬೇಕು ಎಂದು ಒತ್ತಿ ಹೇಳಿದ ಪ್ರಧಾನ ಮಂತ್ರಿ, ಭಾರತದಲ್ಲಿ ಇರುವ ಯುವ ಪ್ರತಿಭೆಗಳ ಸಮೂಹ ಮತ್ತು ಅದರ ಡಿಜಿಟಲ್ ಕ್ರಾಂತಿಯನ್ನು ಪ್ರಸ್ತಾಪಿಸಿದರು. ಇಲ್ಲಿ ಹೂಡಿಕೆ ಮಾಡಿದರೆ "ಭಾರತದೊಂದಿಗೆ ನಿಮ್ಮ ಸ್ನೇಹ ಹೆಚ್ಚು ಗಾಢವಾಗುತ್ತದೆ, ಇಬ್ಬರಿಗೂ ಹೆಚ್ಚು ಸಮೃದ್ಧಿ ತರುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದರು.
 
"ಉದ್ಯಮ ವ್ಯವಹಾರವು ಸಾಮರ್ಥ್ಯವನ್ನು ಸಮೃದ್ಧಿಯಾಗಿ, ಅಡೆತಡೆಗಳನ್ನು ಅವಕಾಶಗಳಾಗಿ, ಆಕಾಂಕ್ಷೆಗಳನ್ನು ಸಾಧನೆಗಳಾಗಿ ಪರಿವರ್ತಿಸುತ್ತದೆ. ಅವು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಜಾಗತಿಕ ಅಥವಾ ಸ್ಥಳೀಯವಾಗಿರಲಿ, ವ್ಯಾಪಾರವು ಎಲ್ಲರಿಗೂ ಪ್ರಗತಿ ಖಚಿತಪಡಿಸುತ್ತದೆ. ಆದ್ದರಿಂದ, "ಜಾಗತಿಕ ಬೆಳವಣಿಗೆಯ ಭವಿಷ್ಯವು ವ್ಯಾಪಾರ ಭವಿಷ್ಯದ ಮೇಲೆ ಅವಲಂಬಿತವಾಗಿದೆ" ಎಂದು ಪ್ರಧಾನಿ ಹೇಳಿದರು.

ಕೋವಿಡ್ 19 ಸಾಂಕ್ರಾಮಿಕ ರೋಗದ ಪ್ರಾರಂಭದೊಂದಿಗೆ ಜೀವನದಲ್ಲಿ ಸಂಭವಿಸಿದ ರೂಪಾಂತರಗಳ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ಜಾಗತಿಕ ಪೂರೈಕೆ ಸರಪಳಿಯಲ್ಲಿನ ಅಡೆತಡೆಗಳನ್ನು ನಿವಾರಿಸುವಲ್ಲಿ ಅಪೂರ್ವ ಬದಲಾವಣೆಗಳನ್ನು ತರಲಾಗಿದೆ. ಜಾಗತಿಕ ಪೂರೈಕೆ ಸರಪಳಿಯ ದಕ್ಷತೆಯನ್ನು ಪ್ರಶ್ನಿಸಿದ ಪ್ರಧಾನಿ, ಜಗತ್ತಿಗೆ ಅತ್ಯಂತ ಅಗತ್ಯವಿದ್ದಾಗ ಅದು ಅಸ್ತಿತ್ವದಲ್ಲಿರಲಿಲ್ಲ, ಆದರೆ ಇಂದು ಜಗತ್ತು ಎದುರಿಸುತ್ತಿರುವ ಅಡೆತಡೆಗಳಿಗೆ ಭಾರತವೇ ಪರಿಹಾರವಾಗಿದೆ. ಇಂದು ವಿಶ್ವದಲ್ಲೆಡೆ ವಿಶ್ವಾಸಾರ್ಹ ಪೂರೈಕೆ ಸರಪಳಿ ರಚಿಸುವಲ್ಲಿ ಭಾರತದ ಸ್ಥಾನ ಪ್ರಮುಖವಾಗಿದೆ. ಭಾರತವು ಜಾಗತಿಕ ವ್ಯವಹಾರಗಳಿಗೆ  ಕೊಡುಗೆಗಳನ್ನು ನೀಡುತ್ತಿದೆ ಎಂದರು.

ಜಿ-20 ರಾಷ್ಟ್ರಗಳ ವ್ಯವಹಾರಗಳಲ್ಲಿ ಬಿ-20 ಒಂದು ಸದೃಢ ವೇದಿಕೆಯಾಗಿ ಹೊರಹೊಮ್ಮಿದೆ ಎಂದು ಸಂತೋಷ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಸುಸ್ಥಿರತೆಯ ಮೇಲೆ ಗಮನ ಕೇಂದ್ರೀಕರಿಸುವ ಅಗತ್ಯವಿದೆ. ಸುಸ್ಥಿರತೆ ಸ್ವತಃ ಒಂದು ಅವಕಾಶ ಮತ್ತು ವ್ಯವಹಾರ ಮಾದರಿಯಾಗಿರುವುದರಿಂದ ಜಾಗತಿಕ ವ್ಯಾಪಾರ ಮುನ್ನಡೆಯಬೇಕು. ಉತ್ಕೃಷ್ಟ ಆಹಾರ, ಪರಿಸರಸ್ನೇಹಿ ಮತ್ತು ಸಣ್ಣ ರೈತರಿಗೆ ನೆರವಾಗಬಲ್ಲ ಸಿರಿಧಾನ್ಯದ ಉದಾಹರಣೆ ನೀಡಿದ ಪ್ರಧಾನಿ, ಇದು ಆರ್ಥಿಕತೆ ಮತ್ತು ಜೀವನಶೈಲಿಯ ದೃಷ್ಟಿಕೋನದಿಂದ ಗೆಲುವು-ಗೆಲುವಿನ ಮಾದರಿಯಾಗಿದೆ. ಪರಿಸರಸ್ನೇಗಿ ಆರ್ಥಿಕತೆ ಮತ್ತು ಹಸಿರು ಶಕ್ತಿಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಭಾರತವು ಇಡೀ ಜಗತ್ತನ್ನು ಕರೆದೊಯ್ಯುವ ಕಾರ್ಯವಿಧಾನವು ಅಂತಾರರಾಷ್ಟ್ರೀಯ ಸೌರ ಒಕ್ಕೂಟದಂತಹ ಕಾರ್ಯಗಳಲ್ಲಿ ಗೋಚರಿಸುತ್ತಿದೆ ಎಂದರು.
 
ಪೃಥ್ವಿ ಸಂರಕ್ಷಿಸಲು ಇಷ್ಟಪಡುವ ಜನರ ಗುಂಪು ಅಥವಾ ಸಮೂಹ ರಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಜೀವನಶೈಲಿ ಮತ್ತು ವ್ಯವಹಾರಗಳು ಎರಡೂ ಸುಂದರ ಪೃಥ್ವಿಯ  ಪರವಾದಾಗ ಅರ್ಧದಷ್ಟು ಸಮಸ್ಯೆಗಳು ಕಡಿಮೆಯಾಗುತ್ತವೆ. ಹಾಗಾಗಿ, ದೇಶಗಳು ಪರಿಸರಕ್ಕೆ ಅನುಗುಣವಾಗಿ ಜೀವನ ಮತ್ತು ವ್ಯವಹಾರವನ್ನು ಅಳವಡಿಸಿಕೊಳ್ಳಬೇಕು. ಭಾರತವು ವ್ಯಾಪಾರಕ್ಕಾಗಿ ಹಸಿರು ಸಾಲದ ಮಾರ್ಗಸೂಚಿ ಸಿದ್ಧಪಡಿಸಿದೆ. ಇದು ಪೃಥ್ವಿ ಗ್ರಹದ ಸಕಾರಾತ್ಮಕ ಕ್ರಿಯೆಗಳಿಗೆ ಒತ್ತು ನೀಡುತ್ತದೆ. ಜಾಗತಿಕ ವ್ಯಾಪಾರದ ಎಲ್ಲ ದಿಗ್ಗಜರು ಕೈಜೋಡಿಸಿ ಅದನ್ನು ಜಾಗತಿಕ ಆಂದೋಲನವನ್ನಾಗಿ ಮಾಡಬೇಕು ಎಂದು ಪ್ರಧಾನ ಮಂತ್ರಿ ಕರೆ ನೀಡಿದರು.

ವ್ಯಾಪಾರದ ಸಾಂಪ್ರದಾಯಿಕ ವಿಧಾನ ಮರುಪರಿಶೀಲಿಸುವಂತೆ ಪ್ರಧಾನಿ ಕೇಳಿಕೊಂಡರು. ಬ್ರಾಂಡ್ ಮತ್ತು ಮಾರಾಟವನ್ನು ಮೀರಿ ಹೋಗಬೇಕಾದ ಅಗತ್ಯವಿದೆ. “ಒಂದು ವ್ಯಾಪಾರವಾಗಿ, ನಾವು ದೀರ್ಘಾವಧಿಯಲ್ಲಿ ನಮಗೆ ಲಾಭದಾಯಕವಾದ ಪರಿಸರ ವ್ಯವಸ್ಥೆಯನ್ನು ರಚಿಸುವತ್ತ ಗಮನ ಹರಿಸಬೇಕು. ಈಗ ಕಳೆದ ಕೆಲವು ವರ್ಷಗಳಲ್ಲಿ ಭಾರತ ಜಾರಿಗೆ ತಂದ ನೀತಿಗಳಿಂದಾಗಿ ಕೇವಲ 5 ವರ್ಷಗಳಲ್ಲಿ 13.5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ಜನರೇ ನಮ್ಮ ಹೊಸ ಗ್ರಾಹಕರು. ಈ ನವ ಮಧ್ಯಮ ವರ್ಗವೂ ಭಾರತದ ಬೆಳವಣಿಗೆಗೆ ವೇಗ ನೀಡುತ್ತಿದೆ. ಅಂದರೆ, ಬಡವರಿಗಾಗಿ ಸರ್ಕಾರ ಮಾಡಿದ ಕೆಲಸದ ನಿವ್ವಳ ಫಲಾನುಭವಿಗಳು ನಮ್ಮ ಮಧ್ಯಮ ವರ್ಗ ಮತ್ತು ನಮ್ಮ ಎಂಎಸ್‌ಎಂಇಗಳು. ಸ್ವಯಂಕೇಂದ್ರಿತ ಕಾರ್ಯವಿಧಾನವು ಎಲ್ಲರಿಗೂ ಹಾನಿ ಉಂಟು ಮಾಡುವುದರಿಂದ ಹೆಚ್ಚು ಹೆಚ್ಚು ಜನರ ಖರೀದಿ ಶಕ್ತಿ ಸುಧಾರಿಸುವತ್ತ ಉದ್ಯಮ ವ್ಯವಹಾರಗಳು ಗಮನ ಹರಿಸಬೇಕು. ನಿರ್ಣಾಯಕ ವಸ್ತು ಮತ್ತು ಅಪರೂಪದ ಮಣ್ಣಿನ ಲೋಹಗಳಲ್ಲಿ ಅಸಮ ಲಭ್ಯತೆ ಮತ್ತು ಸಾರ್ವತ್ರಿಕ ಅಗತ್ಯತೆಯ ಇದೇ ರೀತಿಯ ಸವಾಲನ್ನು ಉಲ್ಲೇಖಿಸಿದ ಪ್ರಧಾನಿ, "ಅವುಗಳನ್ನು ಹೊಂದಿರುವವರು ಅವುಗಳನ್ನು ಜಾಗತಿಕ ಜವಾಬ್ದಾರಿಯಾಗಿ ನೋಡದಿದ್ದರೆ ಅದು ವಸಾಹತುಶಾಹಿಯ ಹೊಸ ಮಾದರಿಯನ್ನು ಉತ್ತೇಜಿಸುತ್ತದೆ" ಎಂದರು.
 
ಉತ್ಪಾದಕರು ಮತ್ತು ಗ್ರಾಹಕರ ಹಿತಾಸಕ್ತಿಗಳಲ್ಲಿ ಸಮತೋಲನ ಇದ್ದಾಗ ಲಾಭದಾಯಕ ಮಾರುಕಟ್ಟೆ ಉಳಿಸಿಕೊಳ್ಳಬಹುದು. ಇದು ಎಲ್ಲಾ ರಾಷ್ಟ್ರಗಳಿಗೂ ಅನ್ವಯಿಸುತ್ತದೆ. ಇತರ ದೇಶಗಳನ್ನು ಕೇವಲ ಮಾರುಕಟ್ಟೆಯಾಗಿ ಪರಿಗಣಿಸುವುದೇ ಕೆಲಸ ಮಾಡುವುದಿಲ್ಲ. ಆದರೆ ಬೇಗನೇ ಅಥವಾ ನಿಧಾನವಾಗಿ ಉತ್ಪಾದಕ ದೇಶಗಳಿಗೆ ಹಾನಿಯಾಗುತ್ತದೆ. ಈ ಪ್ರಗತಿಯಲ್ಲಿ ಎಲ್ಲರನ್ನೂ ಸಮಾನ ಪಾಲುದಾರರನ್ನಾಗಿಸುವುದೇ ಮುಂದಿನ ದಾರಿಯಾಗಿದೆ. ಹಾಗಾಗಿ, ವ್ಯಾಪಾರಗಳನ್ನು ಹೆಚ್ಚು ಗ್ರಾಹಕ ಕೇಂದ್ರಿತವಾಗಿಸಲು ಚಿಂತನೆ ನಡೆಸುವಂತೆ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರುವ ಉದ್ಯಮ ನಾಯಕರನ್ನು ಒತ್ತಾಯಿಸಿದರು. ಗ್ರಾಹಕರ ಹಿತಾಸಕ್ತಿಗಳ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ. ಇದಕ್ಕಾಗಿ ವಾರ್ಷಿಕ ಅಭಿಯಾನ ನಡೆಸುವುದು ಅಗತ್ಯ. "ಪ್ರತಿ ವರ್ಷ, ಜಾಗತಿಕ ವ್ಯವಹಾರಗಳು ಗ್ರಾಹಕರು ಮತ್ತು ಅವರ ಮಾರುಕಟ್ಟೆಗಳ ಒಳಿತಿಗಾಗಿ ಸಂಕಲ್ಪ ತೊಡಲು ಒಗ್ಗೂಡಬಹುದೇ" ಎಂದು ಪ್ರಧಾನಿ ಕೇಳಿದರು.

ಗ್ರಾಹಕರ ಹಿತಾಸಕ್ತಿಯ ಬಗ್ಗೆ ಮಾತನಾಡಲು ಒಂದು ದಿನ ನಿಗದಿಪಡಿಸುವಂತೆ ಶ್ರೀ ಮೋದಿ ಅವರು ಜಾಗತಿಕ ಉದ್ಯಮ ನಾಯಕರನ್ನು ಕೇಳಿದರು, “ನಾವು ಗ್ರಾಹಕರ ಹಕ್ಕುಗಳ ಬಗ್ಗೆ ಮಾತನಾಡುವಾಗ, ಗ್ರಾಹಕರ ಕಾಳಜಿಯ ಬಗ್ಗೆಯೂ ನಾವು ಗಮನ ಹರಿಸಬೇಕಲ್ಲವೇ? ಏಕೆಂದರೆ ಅದು ಅನೇಕ ಗ್ರಾಹಕ ಹಕ್ಕುಗಳ ಸಮಸ್ಯೆಗಳನ್ನು ಸ್ವಯಂಚಾಲಿತವಾಗಿ ನೋಡಿಕೊಳ್ಳುತ್ತದೆಯೇ? 'ಅಂತಾರಾಷ್ಟ್ರೀಯ ಗ್ರಾಹಕ ಕಾಳಜಿ ದಿನ'ದ ವ್ಯವಸ್ಥೆ ಮಾಡುವ ಬಗ್ಗೆ ನಾವು ಖಂಡಿತವಾಗಿ ಯೋಚಿಸಬೇಕು. ಇದು ವ್ಯವಹಾರಗಳು ಮತ್ತು ಗ್ರಾಹಕರ ನಡುವೆ ವಿಶ್ವಾಸ ಬಲಪಡಿಸಲು ಸಹಾಯ ಮಾಡುತ್ತದೆ. ಗ್ರಾಹಕರು ಅಂದರೆ ನಿರ್ದಿಷ್ಟ ಭೌಗೋಳಿಕತೆಯೊಳಗಿನ ಚಿಲ್ಲರೆ ಗ್ರಾಹಕರಿಗೆ ಸೀಮಿತವಾಗಿಲ್ಲ, ಆದರೆ ಅದು ಜಾಗತಿಕ ವ್ಯಾಪಾರವಾಗಿದೆ. ಜಾಗತಿಕ ಸರಕು ಮತ್ತು ಸೇವೆಗಳ ಗ್ರಾಹಕರಾದ ರಾಷ್ಟ್ರಗಳು ಸಹ ಸೇರುತ್ತವೆ ಎಂದು ಪ್ರಧಾನಿ ತಿಳಿಸಿದರು.
 
ಜಾಗತಿಕ ಉದ್ಯಮ ನಾಯಕರ ಉಪಸ್ಥಿತಿ ಗಮನಿಸಿದ ಪ್ರಧಾನಿ ಅವರು, ಮಹತ್ವದ ಪ್ರಶ್ನೆಗಳನ್ನು ಎತ್ತಿದರು. ಈ ಪ್ರಶ್ನೆಗಳಿಗೆ ನೀಡುವ ಉತ್ತರದಿಂದಲೇ ವ್ಯಾಪಾರ ಮತ್ತು ಮಾನವತೆಯ ಭವಿಷ್ಯ ನಿರ್ಧರಿಸಲಾಗುತ್ತದೆ. ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಪರಸ್ಪರ ಸಹಕಾರ ಅಗತ್ಯ. ಹವಾಮಾನ ಬದಲಾವಣೆ, ಇಂಧನ ವಲಯದ ಬಿಕ್ಕಟ್ಟು, ಆಹಾರ ಪೂರೈಕೆ ಸರಪಳಿಯಲ್ಲಿನ ಅಸಮತೋಲನ, ನೀರಿನ ಭದ್ರತೆ, ಸೈಬರ್ ಭದ್ರತೆ ಮುಂತಾದ ಸಮಸ್ಯೆಗಳು ಉದ್ಯಮ ವ್ಯವಹಾರದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಹಾಗಾಗಿ, ಇವುಗಳನ್ನು ಎದುರಿಸಲು ಪ್ರಯತ್ನಗಳನ್ನು ಹೆಚ್ಚಿಸಬೇಕು. 10-15 ವರ್ಷಗಳ ಹಿಂದೆ ಯಾರೂ ಯೋಚಿಸದ ಸಮಸ್ಯೆಗಳು ಮತ್ತು ಕ್ರಿಪ್ಟೋಕರೆನ್ಸಿಗಳಿಗೆ ಸಂಬಂಧಿಸಿದ ಸವಾಲುಗಳ ಉದಾಹರಣೆ ನೀಡಿದರು. ಈ ವಿಷಯಗಳಲ್ಲಿ ಹೆಚ್ಚಿನ ಸಂಯೋಜಿತ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಾಲುದಾರರ ಸಮಸ್ಯೆಗಳನ್ನು ಪರಿಹರಿಸಬಹುದಾದ ಜಾಗತಿಕ ಮಾರ್ಗಸೂಚಿ ರೂಪಿಸಬೇಕು ಎಂದು ಸಲಹೆ ನೀಡಿದರು. ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದಂತೆ ಇದೇ ರೀತಿಯ ವಿಧಾನ ಅತ್ಯಗತ್ಯ. ಕೃತಕ ಬುದ್ಧಿತ್ತೆಯು ಕೌಶಲ್ಯ ಮತ್ತು ಮರು-ಕೌಶಲ್ಯಕ್ಕೆ ಸಂಬಂಧಿಸಿದಂತೆ ಕೆಲವು ನೈತಿಕ ಪರಿಗಣನೆಗಳು ಮತ್ತು ಸಮಾಜದ ಮೇಲೆ ಬಿರುವ ಪ್ರಭಾವದ ಬಗ್ಗೆ ಕಾಳಜಿ ವಹಿಸಬೇಕು. "ಇಂತಹ ಸಮಸ್ಯೆಗಳನ್ನು ಒಟ್ಟಾಗಿ ಪರಿಹರಿಸಬೇಕು. ಜಾಗತಿಕ ವ್ಯಾಪಾರ ಸಮುದಾಯಗಳು ಮತ್ತು ಸರ್ಕಾರಗಳು ನೈತಿಕ ಕೃತಕ ಬುದ್ಧಿಮತ್ತೆ ವಿಸ್ತರಿಸುವುದನ್ನು ಖಚಿತಪಡಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ”. ವಿವಿಧ ಕ್ಷೇತ್ರಗಳಲ್ಲಿನ ಸಂಭಾವ್ಯ ಅಡೆತಡೆಗಳನ್ನು ಗ್ರಹಿಸುವುದು ಅಗತ್ಯ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.
ವ್ಯವಹಾರಗಳು ಗಡಿ ಮತ್ತು ಎಲ್ಲೆಗಳನ್ನು ದಾಟಿ ಯಶಸ್ವಿಯಾಗಿ ಸಾಗಿವೆ. ಆದರೆ ಈಗ ವ್ಯವಹಾರಗಳನ್ನು ಕೆಳಮಟ್ಟದ ಆಚೆಗೆ ಕೊಂಡೊಯ್ಯುವ ಸಮಯ ಬಂದಿದೆ. ಪೂರೈಕೆ ಸರಪಳಿಯ ಹೊಂದಾಣಿಕೆ ಮತ್ತು ಸುಸ್ಥಿರತೆಯ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಇದನ್ನು ನಡೆಸಬಹುದು. ಬಿ-20 ಶೃಂಗಸಭೆಯು ಸಾಮೂಹಿಕ ಪರಿವರ್ತನೆಗೆ ದಾರಿ ಮಾಡಿಕೊಟ್ಟಿದೆ. “ಸಂಪರ್ಕಿತ ಪ್ರಪಂಚವು ಕೇವಲ ತಂತ್ರಜ್ಞಾನದ ಮೂಲಕ ಸಂಪರ್ಕದಲ್ಲಿರುವುದಿಲ್ಲ ಎಂಬುದನ್ನು ನಾವು ನೆನಪಿಟ್ಟುಕೊಳ್ಳೋಣ. ಇದು ಹಂಚಿದ ಸಾಮಾಜಿಕ ವೇದಿಕೆಗಳ ಬಗ್ಗೆ ಮಾತ್ರವಲ್ಲದೆ ಹಂಚಿಕೆಯ ಉದ್ದೇಶ, ಹಂಚಿಕೆಯ ಪೃಥ್ವಿ ಗ್ರಹ, ಹಂಚಿಕೆಯ ಸಮೃದ್ಧಿ ಮತ್ತು ಹಂಚಿಕೆಯ ಭವಿಷ್ಯದ ಬಗ್ಗೆಯೂ ಇದಾಗಿದೆ” ಎಂದು ಪ್ರಧಾನ ಮಂತ್ರಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
 
ಹಿನ್ನೆಲೆ

ವ್ಯಾಪಾರ-20 (ಬಿ-20) ಜಾಗತಿಕ ವ್ಯಾಪಾರ ಸಮುದಾಯದೊಂದಿಗೆ ಅಧಿಕೃತ ಜಿ-20 ಸಂವಾದ ವೇದಿಕೆಯಾಗಿದೆ. 2010ರಲ್ಲಿ ಸ್ಥಾಪಿತವಾದ ಬಿ-20, ಜಿ-20ರ ಪ್ರಮುಖ ಕಾರ್ಯನಿರತ ಗುಂಪುಗಳಲ್ಲಿ ಒಂದಾಗಿದೆ, ಇದರಲ್ಲಿ ಕಂಪನಿಗಳು ಮತ್ತು ಉದ್ಯಮ ವ್ಯಾಪಾರ ಸಂಸ್ಥೆಗಳು ಭಾಗವಹಿಸುತ್ತವೆ. ಬಿ-20 ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿ ಉತ್ತೇಜಿಸಲು ಸಂಕೀರ್ಣ ಕ್ರಿಯಾಶೀಲ ನೀತಿ ಶಿಫಾರಸುಗಳನ್ನು ನೀಡಲು ಕೆಲಸ ಮಾಡುತ್ತದೆ.

3 ದಿನಗಳ ಶೃಂಗಸಭೆಯು ಆಗಸ್ಟ್ 25ರಿಂದ 27ರ ವರೆಗೆ ನಡೆಯಲಿದೆ. ಇದರ ಥೀಮ್ R.A.I.S.E - ಜವಾಬ್ದಾರಿಯುತ, ವೇಗವರ್ಧಿತ, ನವೀನ, ಸುಸ್ಥಿರ ಮತ್ತು ಸಮಾನ ವ್ಯವಹಾರಗಳು. ಇದರಲ್ಲಿ ಸುಮಾರು 55 ದೇಶಗಳ 1,500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ.

***



(Release ID: 1952717) Visitor Counter : 130