ಪ್ರಧಾನ ಮಂತ್ರಿಯವರ ಕಛೇರಿ

ಚಂದ್ರಗ್ರಹದ ಮೇಲೆ ಚಂದ್ರಯಾನ-3 ಯಶಸ್ವಿಯಾಗಿ ಇಳಿದ ನಂತರ ಪ್ರಧಾನಮಂತ್ರಿಯವರು ವಿಡಿಯೊ ಸಂವಾದ ಮೂಲಕ ಮಾಡಿದ ಭಾಷಣದ ಕನ್ನಡ ಅವತರಣಿಕೆ

Posted On: 23 AUG 2023 6:46PM by PIB Bengaluru

ನನ್ನ ಪ್ರೀತಿಯ ಕುಟುಂಬದ ಸದಸ್ಯರೇ,

 ನಮ್ಮ ಕಣ್ಣೆದುರೇ ಇಂತಹ ಇತಿಹಾಸ ನಿರ್ಮಾಣವಾಗುತ್ತಿರುವುದನ್ನು ಕಂಡಾಗ ಬದುಕು ಧನ್ಯವಾಗುತ್ತದೆ. ಅಂತಹ ಐತಿಹಾಸಿಕ ಘಟನೆಗಳು ರಾಷ್ಟ್ರದ ಪಾಲಿಗೆ ಶಾಶ್ವತ ದಾಖಲೆಯಾಗುತ್ತವೆ. ಈ ಕ್ಷಣ ಅವಿಸ್ಮರಣೀಯ. ಈ ಕ್ಷಣ ಅಭೂತಪೂರ್ವವಾಗಿದೆ. ಈ ಕ್ಷಣ ಅಭಿವೃದ್ಧಿ ಹೊಂದಿದ ಭಾರತದ ವಿಜಯದ ಘೋಷಣೆಯಾಗಿದೆ. ಈ ಕ್ಷಣ ನವ ಭಾರತದ ವಿಜಯೋತ್ಸವ ವಾಗಿದೆ. ಈ ಕ್ಷಣ ಕಷ್ಟಗಳ ಸಾಗರವನ್ನು ದಾಟುವುದಾಗಿದೆ. ಈ ಕ್ಷಣವು ಗೆಲುವಿನ ಹಾದಿಯಲ್ಲಿ ಸಾಗುತ್ತಿದೆ. ಈ ಕ್ಷಣವು 1.4 ಶತಕೋಟಿ ಹೃದಯ ಬಡಿತಗಳ ಸಾಮರ್ಥ್ಯವನ್ನು ಹೊಂದಿದೆ. ಈ ಕ್ಷಣವು ಭಾರತದಲ್ಲಿ ಹೊಸ ಶಕ್ತಿ, ಹೊಸ ನಂಬಿಕೆ ಮತ್ತು ಹೊಸ ಪ್ರಜ್ಞೆಯನ್ನು ಸೂಚಿಸುತ್ತದೆ. ಈ ಕ್ಷಣವು ಭಾರತದ ಆರೋಹಣ ಗತಿವಿಧಿಯ ಕರೆಯಾಗಿದೆ. ‘ಅಮೃತ ಕಾಲ’ದ ಅರುಣೋದಯದಲ್ಲಿ ಯಶಸ್ಸಿನ ಮೊದಲ ಬೆಳಕು ಈ ವರ್ಷ ಸುರಿಸಿದೆ. ನಾವು ಭೂಮಿಯ ಮೇಲೆ ಪ್ರತಿಜ್ಞೆ ಮಾಡಿದ್ದೇವೆ ಮತ್ತು ನಾವು ಅದನ್ನು ಚಂದ್ರಗ್ರಹದ ಮೇಲೆ ಪೂರೈಸಿದ್ದೇವೆ. ನಮ್ಮ ವೈಜ್ಞಾನಿಕ ಸಹೋದ್ಯೋಗಿಗಳಿಗೆ ಕೂಡ "ಭಾರತವು ಈಗ ಚಂದ್ರದ ಮೇಲಿದೆ" ಎಂದು ನಾನು ಹೇಳ ಬಯಸುತ್ತೇನೆ. ಇಂದು ನಾವು ಬಾಹ್ಯಾಕಾಶದಲ್ಲಿ ನವ ಭಾರತದ ಹೊಸ ಹಾರಾಟಕ್ಕೆ ಸಾಕ್ಷಿಯಾಗಿದ್ದೇವೆ. 

 ಸ್ನೇಹಿತರೇ,

 ನಾನು ಪ್ರಸ್ತುತ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾದಲ್ಲಿದ್ದೇನೆ. ಆದಾಗ್ಯೂ, ಪ್ರತಿಯೊಬ್ಬ ದೇಶವಾಸಿಗಳಂತೆ ನನ್ನ ಹೃದಯವೂ ಚಂದ್ರಯಾನ ಸಂಕಲ್ಪದತ್ತ ಕೇಂದ್ರೀಕೃತವಾಗಿತ್ತು. ಹೊಸ ಇತಿಹಾಸ ತೆರೆದುಕೊಳ್ಳುತ್ತಿದ್ದಂತೆ ಪ್ರತಿಯೊಬ್ಬ ಭಾರತೀಯನೂ ಸಂಭ್ರಮಾಚರಣೆಯಲ್ಲಿ ಮುಳುಗಿದ್ದು, ಪ್ರತಿ ಮನೆಯಲ್ಲೂ ಹಬ್ಬದ ಸಂಭ್ರಮ ಶುರುವಾಗಿದೆ. ಈ ಖುಷಿ ಸಂದರ್ಭದಲ್ಲಿ ನನ್ನ ಹೃದಯಾಳದಿಂದ ಮತು ಅತಿ ಉತ್ಸಾಹದಿಂದ, ನಾನು ನನ್ನ ಸಹ ದೇಶವಾಸಿಗಳು ಹಾಗೂ ನನ್ನ ಕುಟುಂಬ ಸದಸ್ಯರಾದ ನಿಮ್ಮೊಂದಿಗೆ ಸಂಪರ್ಕ ಹೊಂದಿದ್ದೇನೆ. ಈ ಕ್ಷಣಕ್ಕಾಗಿ ವರ್ಷಗಟ್ಟಲೆ ಅವಿರತವಾಗಿ ಶ್ರಮಿಸಿದ ಚಂದ್ರಯಾನ ತಂಡ, ಇಸ್ರೋ ತಂಡ ಮತ್ತು ದೇಶದ ಎಲ್ಲಾ ವಿಜ್ಞಾನಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಉತ್ಸಾಹ, ಹುರುಪು, ಸಂತೋಷ ಮತ್ತು ಭಾವನೆಗಳಿಂದ ತುಂಬಿದ ಈ ಅದ್ಭುತ ಕ್ಷಣಕ್ಕಾಗಿ ನಾನು 140 ಕೋಟಿ ದೇಶವಾಸಿಗಳನ್ನು ಅಭಿನಂದಿಸುತ್ತೇನೆ!

 ನನ್ನ ಕುಟುಂಬದ ಸದಸ್ಯರೇ,

ವಿಶ್ವದ ಯಾವುದೇ ದೇಶವು ಈ ತನಕ ತಲುಪಿಲ್ಲದ ಚಂದ್ರ ಗ್ರಹದ ದಕ್ಷಿಣ ಧ್ರುವವನ್ನು ನಮ್ಮ ವಿಜ್ಞಾನಿಗಳ ಕಠಿಣ ಪರಿಶ್ರಮ ಮತ್ತು ಪ್ರತಿಭೆಯ ಮೂಲಕ, ಭಾರತವು ತಲುಪಿದೆ. ಇದು ಐತಿಹಾಸಿಕ ವಿಜಯವಾಗಿದೆ. ಇಂದಿನಿಂದ ಚಂದ್ರಗ್ರಹಕ್ಕೆ ಸಂಬಂಧಿಸಿದ ಕತೆ ಬದಲಾಗುತ್ತವೆ, ಪುರಾಣಗಳು ಸಂಪೂರ್ಣವಾಗಿ ಬದಲಾಗುತ್ತವೆ, ದಾಖಲೆಗಳು ಬದಲಾಗುತ್ತವೆ, ನಿರೂಪಣೆಗಳು ಬದಲಾಗುತ್ತವೆ ಮತ್ತು ಹೊಸ ಪೀಳಿಗೆಗೆ ಗಾದೆಗಳೂ ಬದಲಾಗುತ್ತವೆ. ಭಾರತದಲ್ಲಿ, ನಾವು ಭೂಮಿಯನ್ನು ನಮ್ಮ ತಾಯಿ ಮತ್ತು ಚಂದ್ರಗ್ರಹವನ್ನು ನಮ್ಮ 'ಮಾಮಾ' (ತಾಯಿಯ ತಮ್ಮ ) ಎಂದು ಪ್ರೀತಿಯಿಂದ ಸಂಭೋಧಿಸಿ ಕರೆಯುತ್ತೇವೆ. ಈ ಹಿಂದೆ ನಮ್ಮ ಹಿರಿಯರು "ಚಂದಾ ಮಾಮಾ ಸಾಕಷ್ಟು ದೂರದಲ್ಲಿದ್ದಾರೆ" ಎಂದು ಹೇಳುತ್ತಿದ್ದರು. "ಚಂದಾ ಮಾಮಾ ಕೇವಲ 'ಕಿರು ಪ್ರವಾಸದಷ್ಟು' ದೂರದಲ್ಲಿದ್ದಾರೆ" ಎಂದು ಮಕ್ಕಳು ನಮಗೆ ಹೇಳುವ ದಿನ ಈಗ ಬರಲಿವೆ.

 ಸ್ನೇಹಿತರೇ,

ಈ ಸಂತೋಷದಾಯಕ ಸಂದರ್ಭದಲ್ಲಿ, ನಾನು ಪ್ರಪಂಚದ ಎಲ್ಲಾ ಜನರನ್ನು, ಪ್ರತಿಯೊಂದು ದೇಶ ಮತ್ತು ಪ್ರದೇಶದ ಎಲ್ಲಾ ಜನರನ್ನು, ಉದ್ದೇಶಿಸಿ ಮಾತನಾಡಲು ಬಯಸುತ್ತೇನೆ. ಭಾರತದ ಯಶಸ್ವಿ ಚಂದ್ರಯಾನ ಭಾರತ ಮಾತ್ರವಲ್ಲ ಹೆಮ್ಮೆ ತರುವ ವಿಷಯವಲ್ಲ…. ಭಾರತದ ಜಿ-20 ಅಧ್ಯಕ್ಷ ಸ್ಥಾನಕ್ಕೆ ಜಗತ್ತು ಸಾಕ್ಷಿಯಾಗುತ್ತಿರುವ ವರ್ಷವಿದು. ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ನಮ್ಮ ಸಂಕಲ್ಪವು ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ. ನಾವು ಪ್ರತಿನಿಧಿಸುವ ಈ ಮಾನವ ಕೇಂದ್ರಿತ ಕಾರ್ಯವಿಧಾನವನ್ನು ಸಾರ್ವತ್ರಿಕವಾಗಿ ಸ್ವಾಗತಿಸಿದ್ದಾರೆ. ನಮ್ಮ ಚಂದ್ರಗ್ರಹದ ಮಿಷನ್ ಕೂಡ ಅದೇ ಮಾನವ-ಕೇಂದ್ರಿತ ವಿಧಾನವನ್ನು ಆಧರಿಸಿದೆ. ಆದ್ದರಿಂದ, ಈ ಯಶಸ್ಸು ಎಲ್ಲಾ ಮಾನವೀಯತೆಗೆ ಸೇರಿದೆ. ಮತ್ತು ಇದು ಭವಿಷ್ಯದಲ್ಲಿ ಇತರ ದೇಶಗಳ ಚಂದ್ರಗ್ರಹದ ಇಂತಹದೇ  ಕಾರ್ಯಾಚರಣೆಗಳಿಗೆ ಸಹಾಯ ಮಾಡಲಿದೆ. ಗ್ಲೋಬಲ್ ಸೌತ್ ಸೇರಿದಂತೆ ವಿಶ್ವದ ಎಲ್ಲಾ ದೇಶಗಳು ಅಂತಹ ಸಾಧನೆಗಳನ್ನು ಮಾಡಿ ಅಸಾಧಾರಣವನ್ನು ಸಾಧಿಸಲು ಸಮರ್ಥವಾಗಿವೆ ಎಂದು ನನಗೆ ವಿಶ್ವಾಸವಿದೆ. ನಾವೆಲ್ಲರೂ ಚಂದ್ರ ಮತ್ತು ಅದರಾಚೆಗೆ ಆಕಾಂಕ್ಷೆಯೊಂದಿಗೆ ಇನ್ನಷ್ಟು ಹಾತೊರೆಯಬಹುದು.

ನನ್ನ ಕುಟುಂಬದ ಸದಸ್ಯರೇ,

ಚಂದ್ರಯಾನ ಮಿಷನ್‌ ನ ಈ ಸಾಧನೆಯು ಚಂದ್ರಗ್ರಹದ ಕಕ್ಷೆಯ ಆಚೆಗೆ ಭಾರತದ ಪ್ರಯಾಣವನ್ನು ಮುನ್ನಡೆಸುತ್ತದೆ. ನಾವು ನಮ್ಮ ಸೌರವ್ಯೂಹದ ಮಿತಿಗಳನ್ನು ಪರೀಕ್ಷಿಸುತ್ತೇವೆ ಮತ್ತು ಮಾನವೀಯತೆಯ ಹಾದಿಯಲ್ಲಿ, ಬ್ರಹ್ಮಾಂಡದ ಅನಂತ ಸಾಧ್ಯತೆಗಳನ್ನು ಅರಿತುಕೊಳ್ಳಲು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಭವಿಷ್ಯಕ್ಕಾಗಿ ನಾವು ಅನೇಕ ದೊಡ್ಡ ಮತ್ತು ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿದ್ದೇವೆ. ಶೀಘ್ರದಲ್ಲೇ, ಇಸ್ರೋ ಸೂರ್ಯನ ಆಳವಾದ ಅಧ್ಯಯನಕ್ಕಾಗಿ 'ಆದಿತ್ಯ ಎಲ್-1' ಮಿಷನ್ ಅನ್ನು ಪ್ರಾರಂಭಿಸಲಿದೆ. ಅದರ ಬೆನ್ನಲ್ಲೇ ಶುಕ್ರಗ್ರಹವೂ ಇಸ್ರೋದ ಕಾರ್ಯಸೂಚಿಯಲ್ಲಿದೆ. ಗಗನಯಾನ್ ಮಿಷನ್ ಮೂಲಕ, ದೇಶವು ತನ್ನ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನಕ್ಕಾಗಿ ಶ್ರದ್ಧೆಯಿಂದ ತಯಾರಿ ನಡೆಸುತ್ತಿದೆ. ನಮ್ಮ ಸಾಧನೆಗಳಿಗೆ ಆಕಾಶವೇ ಮಿತಿಯಲ್ಲ ಎಂಬುದನ್ನು ಭಾರತ ಪದೇ ಪದೇ ಸಾಬೀತುಪಡಿಸುತ್ತಿದೆ.

 ಸ್ನೇಹಿತೇ,

ವಿಜ್ಞಾನ ಮತ್ತು ತಂತ್ರಜ್ಞಾನವು ನಮ್ಮ ದೇಶದ ಉಜ್ವಲ ಭವಿಷ್ಯದ ಅಡಿಪಾಯವಾಗಿದೆ. ಆದ್ದರಿಂದ, ದೇಶವು ಈ ದಿನವನ್ನು ಶಾಶ್ವತವಾಗಿ ನೆನಪಿಸಿಕೊಳ್ಳುತ್ತದೆ. ಈ ದಿನವು ಉಜ್ವಲ ಭವಿಷ್ಯದತ್ತ ಸಾಗಲು ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ. ಈ ದಿನವು ನಮ್ಮ ಸಂಕಲ್ಪಗಳನ್ನು ಪೂರೈಸುವ ಮಾರ್ಗವನ್ನು ತೋರಿಸುತ್ತದೆ. ಸೋಲಿನಿಂದ ಪಾಠಗಳನ್ನು ತೆಗೆದುಕೊಳ್ಳುವ ಮೂಲಕ ವಿಜಯವನ್ನು ಹೇಗೆ ಸಾಧಿಸಲಾಗುತ್ತದೆ ಎಂಬುದನ್ನು ಈ ದಿನ ಸಂಕೇತಿಸುತ್ತದೆ. ಮತ್ತೊಮ್ಮೆ, ದೇಶದ ಎಲ್ಲಾ ವಿಜ್ಞಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಭವಿಷ್ಯದ ಕಾರ್ಯಾಚರಣೆಗಳಿಗೆ ಶುಭಾಶಯಗಳು!  ಎಲ್ಲರಿಗೂ ತುಂಬಾ ತುಂಬಾ ಧನ್ಯವಾದಗಳು.

ಹಕ್ಕು ನಿರಾಕರಣೆ: ಇದು ಪ್ರಧಾನಂತ್ರಿಯವರು ಮಾಡಿದ ಭಾಷಣದ ಅಂದಾಜು ಕನ್ನಡ ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

****
 



(Release ID: 1951705) Visitor Counter : 124