ಪ್ರಧಾನ ಮಂತ್ರಿಯವರ ಕಛೇರಿ

ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ʻಸಾಯಿ ಹಿರಾ ಗ್ಲೋಬಲ್ ಕನ್ವೆನ್ಷನ್ ಸೆಂಟರ್ʼ ಉದ್ಘಾಟನೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ

Posted On: 04 JUL 2023 1:39PM by PIB Bengaluru

ಸಾಯಿ ರಾಮ್! ಆಂಧ್ರಪ್ರದೇಶದ ರಾಜ್ಯಪಾಲರಾದ ಶ್ರೀ ಅಬ್ದುಲ್ ನಜೀರ್ ಅವರೇ, ಶ್ರೀ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್‌ನ ವ್ಯವಸ್ಥಾಪಕ ಧರ್ಮದರ್ಶಿಗಳಾದ ಶ್ರೀ ಆರ್.ಜೆ. ರತ್ನಾಕರ್ ಅವರೇ, ಶ್ರೀ ಕೆ. ಚಕ್ರವರ್ತಿ ಅವರೇ, ನನ್ನ ಹಳೆಯ ಸ್ನೇಹಿತರಾದ ಶ್ರೀ ರೈಯುಕೊ ಹಿರಾ ಅವರೇ, ಡಾ. ವಿ. ಮೋಹನ್ ಅವರೇ, ಶ್ರೀ ಎಂ.ಎಸ್. ನಾಗಾನಂದ್ ಅವರೇ, ಶ್ರೀ ನಿಮಿಷ್ ಪಾಂಡ್ಯ ಅವರೇ, ಇತರ ಎಲ್ಲ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ, ಮತ್ತೊಮ್ಮೆ ನಿಮ್ಮೆಲ್ಲರಿಗೂ ಸಾಯಿ ರಾಮ್.

ಪುಟ್ಟಪರ್ತಿಗೆ ಹಲವು ಬಾರಿ ಭೇಟಿ ನೀಡುವ ಸೌಭಾಗ್ಯ ನನಗೆ ದೊರೆತಿದೆ. ನಾನು ಮತ್ತೊಮ್ಮೆ ನಿಮ್ಮೆಲ್ಲರ ನಡುವೆ ಇರಲು ಬಯಸಿದ್ದೆ, ನಿಮ್ಮನ್ನು ಭೇಟಿಯಾಗಲು ಮತ್ತು ಇಂದು ಅಲ್ಲಿ ಉಪಸ್ಥಿತರಿರುವ ಮೂಲಕ ಈ ಕಾರ್ಯಕ್ರಮದ ಭಾಗವಾಗಲು ಬಯಸಿದ್ದೆ. ಆದರೆ, ನನ್ನ ಬಿಡುವುರಹಿತ ವೇಳಾಪಟ್ಟಿಯಿಂದಾಗಿ, ನನಗೆ ಇದು ಸಾಧ್ಯವಾಗಲಿಲ್ಲ. ನನ್ನನ್ನು ಆಹ್ವಾನಿಸುವಾಗ, ಭಾಯಿ ರತ್ನಾಕರ್ ಅವರು 'ನೀವು ಒಮ್ಮೆ ಬಂದು ಆಶೀರ್ವಾದ ನೀಡಬೇಕು' ಎಂದು ಹೇಳಿದರು. ರತ್ನಾಕರ್ ಅವರ ಹೇಳಿಕೆಯನ್ನು ಸರಿಪಡಿಸುವ ಅಗತ್ಯವಿದೆ ನಾನು ಭಾವಿಸುತ್ತೇನೆ. ನಾನು ಖಂಡಿತವಾಗಿಯೂ ಅಲ್ಲಿಗೆ ಬರುತ್ತೇನೆ, ಆದರೆ ಆಶೀರ್ವಾದ ನೀಡಲು ಅಲ್ಲ, ಬದಲಾಗಿ ಆಶೀರ್ವಾದ ಪಡೆಯಲು. ತಂತ್ರಜ್ಞಾನದ ಸಹಾಯದಿಂದ ನಾನು ಇಂದು ನಿಮ್ಮೆಲ್ಲರ ನಡುವೆ ಇದ್ದೇನೆ. ಶ್ರೀ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ ಜೊತೆ ಸಂಬಂಧ ಹೊಂದಿರುವ ಎಲ್ಲಾ ಸದಸ್ಯರು ಮತ್ತು ಸತ್ಯ ಸಾಯಿ ಬಾಬಾ ಅವರ ಎಲ್ಲಾ ಭಕ್ತರನ್ನು ಇಂದು ಈ ಕಾರ್ಯಕ್ರಮಕ್ಕಾಗಿ ನಾನು ಅಭಿನಂದಿಸುತ್ತೇನೆ. ಈ ಇಡೀ ಕಾರ್ಯಕ್ರಮದಲ್ಲಿ ಶ್ರೀ ಸತ್ಯ ಸಾಯಿ ಅವರ ಸ್ಫೂರ್ತಿ ಮತ್ತು ಆಶೀರ್ವಾದ ನಮ್ಮೊಂದಿಗಿದೆ. ಈ ಪವಿತ್ರ ಸಂದರ್ಭದಲ್ಲಿ ಶ್ರೀ ಸತ್ಯ ಸಾಯಿ ಬಾಬಾ ಅವರ ಧ್ಯೇಯದ ವಿಸ್ತರಣೆಯನ್ನು ನೋಡಿ ನನಗೆ ಸಂತಸವಾಗಿದೆ. ದೇಶವು ʻಶ್ರೀ ಹಿರಾ ಗ್ಲೋಬಲ್ ಕನ್ವೆನ್ಷನ್ ಸೆಂಟರ್ʼ ರೂಪದಲ್ಲಿ ಪ್ರಮುಖ ಚಿಂತಕರ ಚಾವಡಿಯನ್ನು ಪಡೆಯುತ್ತಿದೆ. ನಾನು ಈ ಸಮಾವೇಶ ಕೇಂದ್ರದ ಚಿತ್ರಗಳನ್ನು ಮತ್ತು ಅದರ ಇಣುಕುನೋಟಗಳನ್ನು ಈಗ ಪ್ರದರ್ಶಿಸಲಾದ ಕಿರುಚಿತ್ರದಲ್ಲಿ ನೋಡಿದ್ದೇನೆ. ಇದು ಆಧುನಿಕತೆಯ ಸ್ಪರ್ಶದೊಂದಿಗೆ ಆಧ್ಯಾತ್ಮಿಕ ಅನುಭವವನ್ನು ಒದಗಿಸುತ್ತದೆ. ಇದು ಸಾಂಸ್ಕೃತಿಕ ದೈವತ್ವದ ಜೊತೆಗೆ, ಬೌದ್ಧಿಕ ಭವ್ಯತೆಯನ್ನು ಒಳಗೊಂಡಿದೆ. ಈ ಕೇಂದ್ರವು ಆಧ್ಯಾತ್ಮಿಕ ಸಮ್ಮೇಳನಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಪ್ರಪಂಚದಾದ್ಯಂತದ ವಿವಿಧ ಕ್ಷೇತ್ರಗಳ ವಿದ್ವಾಂಸರು ಮತ್ತು ತಜ್ಞರು ಇಲ್ಲಿ ಒಟ್ಟುಗೂಡುತ್ತಾರೆ. ಈ ಕೇಂದ್ರವು ಯುವಕರಿಗೆ ಹೆಚ್ಚಿನ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ.

ಸ್ನೇಹಿತರೇ,

ಯಾವುದೇ ಆಲೋಚನೆಯು ವಿಕಸನಗೊಂಡಾಗ ಮತ್ತು ಕ್ರಿಯೆಯ ರೂಪದಲ್ಲಿ ಪ್ರಕಟವಾದಾಗ ಅದು ಹೆಚ್ಚು ಪರಿಣಾಮಕಾರಿಯಾಗುತ್ತದೆ. ಕೇವಲ ಮಾತುಗಳು ನಿಜವಾದ ಕ್ರಿಯೆಗಳಂತೆ ಗಮನಾರ್ಹ ಪರಿಣಾಮವನ್ನು ಉಂಟು ಮಾಡಲಾರವು. ಇಂದು ಸಮಾವೇಶ ಕೇಂದ್ರದ ಉದ್ಘಾಟನೆಯ ಜೊತೆಗೆ ʻಶ್ರೀ ಸತ್ಯ ಸಾಯಿ ಗ್ಲೋಬಲ್ ಕೌನ್ಸಿಲ್ ನಾಯಕರ ಸಮಾವೇಶʼ  ಕೂಡ ಇಲ್ಲಿ ಆರಂಭವಾಗುತ್ತಿದೆ. ಈ ಸಮ್ಮೇಳನದಲ್ಲಿ ಅನೇಕ ದೇಶಗಳ ಪ್ರತಿನಿಧಿಗಳು ಉಪಸ್ಥಿತರಿರುತ್ತಾರೆ. ವಿಶೇಷವಾಗಿ, ಈ ಕಾರ್ಯಕ್ರಮಕ್ಕಾಗಿ ನೀವು ಆಯ್ಕೆ ಮಾಡಿದ ವಿಷಯವಾದ-  "ಕಾರ್ಯನಿರ್ವಹಣೆ ಮತ್ತು ಸ್ಫೂರ್ತಿ" ಅತ್ಯಂತ ಪರಿಣಾಮಕಾರಿ ಮತ್ತು ಪ್ರಸ್ತುತವಾಗಿದೆ. ನಮ್ಮ ದೇಶದಲ್ಲಿ ಸದಾ ಹೇಳುವ ಯುಕ್ತಿಯೊಂದಿದೆ: यत् यत् आचरति श्रेष्ठः, तत्-तत् एव इतरः जनः॥ ಇದರರ್ಥ, ಉದಾತ್ತರು ಕಾರ್ಯನಿರ್ವಹಿಸಿದರೆ, ಸಮಾಜವು ಅವರನ್ನು ಅನುಸರಿಸುತ್ತದೆ.

ಆದ್ದರಿಂದ, ನಮ್ಮ ನಡವಳಿಕೆಯು ಇತರರಿಗೆ ದೊಡ್ಡ ಪ್ರೇರಣೆಯಾಗುತ್ತದೆ. ಸತ್ಯ ಸಾಯಿಬಾಬಾ ಅವರ ಜೀವನವೇ ಇದಕ್ಕೆ ಜ್ವಲಂತ ಉದಾಹರಣೆಯಾಗಿದೆ. ಇಂದು, ಭಾರತವು ತನ್ನ ಕರ್ತವ್ಯಗಳಿಗೆ ಆದ್ಯತೆ ನೀಡುತ್ತಾ, ಸ್ವಾತಂತ್ರ್ಯದ 100ನೇ ವಾರ್ಷಿಕೋತ್ಸವದ ಗುರಿಗಳತ್ತ ಮುಂದುವರಿಯುತ್ತಿದೆ. ನಮ್ಮ 'ಅಮೃತ ಕಾಲ'ವನ್ನು 'ಕರ್ತವ್ಯ ಕಾಲ'(ಜವಾಬ್ದಾರಿಗಳ ಕಾಲ) ಎಂದು ಹೆಸರಿಸಿದ್ದೇವೆ. ಏಕೆಂದರೆ ಇದು ಆಧ್ಯಾತ್ಮಿಕ ಮೌಲ್ಯಗಳ ಮಾರ್ಗದರ್ಶನವನ್ನು ಮಾತ್ರವಲ್ಲದೆ ಭವಿಷ್ಯದ ಆಕಾಂಕ್ಷೆಗಳನ್ನು ಸಹ ಒಳಗೊಂಡಿದೆ. ಇದು ನಮ್ಮ ಬಲವಾದ ನಂಬಿದೆ. ಇದು ಪ್ರಗತಿ ಮತ್ತು ಪರಂಪರೆ ಎರಡನ್ನೂ ಪ್ರತಿನಿಧಿಸುತ್ತದೆ. ಭಾರತವು ಆಧ್ಯಾತ್ಮಿಕ ಕೇಂದ್ರಗಳ ಪುನರುಜ್ಜೀವನಕ್ಕೆ ಸಾಕ್ಷಿಯಾದರೂ ಸಹ, ತನ್ನ ಆರ್ಥಿಕತೆ ಮತ್ತು ತಂತ್ರಜ್ಞಾನದ ದೃಷ್ಟಿಯಿಂದಲೂ ಬಹಳ ಮುಂದಿದೆ. ಇಂದು, ಭಾರತವು ವಿಶ್ವದ ಅಗ್ರ ಐದು ಆರ್ಥಿಕತೆಗಳಲ್ಲಿ ಒಂದಾಗಿದೆ. ಇಂದು ಭಾರತವು ಜಾಗತಿಕವಾಗಿ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಡಿಜಿಟಲ್ ತಂತ್ರಜ್ಞಾನ ಮತ್ತು ʻ5ಜಿʼಯಂತಹ ಕ್ಷೇತ್ರಗಳಲ್ಲಿ ನಾವು ಪ್ರಮುಖ ದೇಶಗಳೊಂದಿಗೆ ಸ್ಪರ್ಧಿಸುತ್ತಿದ್ದೇವೆ. ವಿಶ್ವಾದ್ಯಂತ ಶೇಕಡಾ 40 ರಷ್ಟು ನೈಜ-ಸಮಯದ ಆನ್‌ಲೈನ್ ವಹಿವಾಟುಗಳು ಭಾರತದಲ್ಲೇ ನಡೆಯುತ್ತಿವೆ. ಸಾಯಿಬಾಬಾ ಅವರ ಹೆಸರಿನೊಂದಿಗೆ ಹೊಸದಾಗಿ ರೂಪುಗೊಂಡ ಪುಟ್ಟಪರ್ತಿ ಜಿಲ್ಲೆಯನ್ನು ಶೇಕಡಾ 100 ರಷ್ಟು ಡಿಜಿಟಲ್ ಮಾಡುವಂತೆ ರತ್ನಾಕರ್ ಜೀ ಮತ್ತು ನಮ್ಮ ಎಲ್ಲಾ ಸಾಯಿ ಭಕ್ತರನ್ನು ನಾನು ಒತ್ತಾಯಿಸಲು ಬಯಸುತ್ತೇನೆ. ಪ್ರತಿಯೊಂದು ವ್ಯವಹಾರವೂ ಡಿಜಿಟಲ್ ಆಗಿರಬೇಕು. ಬಾಬಾ ಅವರ ಆಶೀರ್ವಾದದಿಂದ ನನ್ನ ಸ್ನೇಹಿತ ರತ್ನಾಕರ್ ಜೀ ಅವರು ಈ ಜವಾಬ್ದಾರಿಯನ್ನು ವಹಿಸಿಕೊಂಡರೆ, ಬಾಬಾ ಅವರ ಮುಂದಿನ ಜನ್ಮದಿನದ ವೇಳೆಗೆ ನಾವು ಇಡೀ ಜಿಲ್ಲೆಯನ್ನು ಡಿಜಿಟಲ್ ಮಾಡಲು ಸಾಧ್ಯವಾಗಲಿದೆ.

ಸ್ನೇಹಿತರೇ,

ಸಮಾಜದ ಪ್ರತಿಯೊಂದು ವರ್ಗದ ಭಾಗವಹಿಸುವಿಕೆಯಿಂದ ಬದಲಾವಣೆ ಸಂಭವಿಸುತ್ತಿದೆ. ಆದ್ದರಿಂದ, ʻಗ್ಲೋಬಲ್ ಕೌನ್ಸಿಲ್ʼ ನಂತಹ ಕಾರ್ಯಕ್ರಮಗಳು ಭಾರತದ ಬಗ್ಗೆ ತಿಳಿಯಲು ಮತ್ತು ಪ್ರಪಂಚದ ಉಳಿದ ಭಾಗಗಳನ್ನು ದೇಶದೊಂದಿಗೆ ಸಂಪರ್ಕಿಸಲು ಪರಿಣಾಮಕಾರಿ ಸಾಧನಗಳಾಗಿ ಕಾರ್ಯನಿರ್ವಹಿಸುತ್ತವೆ.

ಸ್ನೇಹಿತರೇ,

ಸಂತರನ್ನು ಹೆಚ್ಚಾಗಿ ನಮ್ಮ ದೇಶದಲ್ಲಿ ಹರಿಯುವ ನೀರಿಗೆ ಹೋಲಿಸಲಾಗುತ್ತದೆ, ಏಕೆಂದರೆ ಅವರು ಎಂದಿಗೂ ತಮ್ಮ ಆಲೋಚನೆಗಳೊಂದಿಗೆ ನಿಲ್ಲುವುದಿಲ್ಲ ಅಥವಾ ತಮ್ಮ ಕಾರ್ಯಗಳನ್ನು ನಿಲ್ಲಿಸುವುದಿಲ್ಲ. ಅವರ ಜೀವನವು ನಿರಂತರ ಹರಿವು ಮತ್ತು ಪಟ್ಟುಬಿಡದ ಪ್ರಯತ್ನದಿಂದ ಕೂಡಿರುತ್ತದೆ. ಒಬ್ಬ ಸಾಮಾನ್ಯ ಭಾರತೀಯನಿಗೆ, ಈ ಸಂತರು ಎಲ್ಲಿ ಜನಿಸಿದರು ಎಂಬುದು ಮುಖ್ಯವಲ್ಲ. ಒಬ್ಬ ನಿಜವಾದ ಸಂತನು ತನ್ನ ನಂಬಿಕೆ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾನೆ. ಆದ್ದರಿಂದ, ನಮ್ಮ ಸಂತರು ಸಾವಿರಾರು ವರ್ಷಗಳಿಂದ 'ಏಕ ಭಾರತ, ಶ್ರೇಷ್ಠ ಭಾರತ' ಎಂಬ ಮನೋಭಾವವನ್ನು ಪೋಷಿಸಿದ್ದಾರೆ. ಸತ್ಯ ಸಾಯಿಬಾಬಾ ಅವರು ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ಜನಿಸಿದರು! ಆದರೆ ಅವರ ಅನುಯಾಯಿಗಳು ಮತ್ತು ಅಭಿಮಾನಿಗಳನ್ನು ವಿಶ್ವದ ಪ್ರತಿಯೊಂದು ಮೂಲೆಯಲ್ಲೂ ಕಾಣಬಹುದು. ಇಂದು, ದೇಶದ ಪ್ರತಿಯೊಂದು ಭಾಗದಲ್ಲೂ ಸತ್ಯಸಾಯಿಗೆ ಸಂಬಂಧಿಸಿದ ಸ್ಥಳಗಳು ಮತ್ತು ಆಶ್ರಮಗಳಿವೆ. ಪ್ರತಿಯೊಂದು ಭಾಷೆ ಮತ್ತು ಸಂಪ್ರದಾಯದ ಜನರು ಒಂದು ಧ್ಯೇಯದ ಅಡಿಯಲ್ಲಿ ʻಪ್ರಶಾಂತಿ ನಿಲಯಂʼನೊಂದಿಗೆ ಸಂಬಂಧ ಹೊಂದಿದ್ದಾರೆ. ಭಾರತದ ಜಾಗೃತಪ್ರಜ್ಞೆಯು ಅದನ್ನು ಒಂದೇ ಎಳೆಯಾಗಿ ಹೆಣೆಯುತ್ತದೆ ಮತ್ತು ಅದನ್ನು ಚಿರಂತನವಾಗಿಸುತ್ತದೆ.

ಸ್ನೇಹಿತರೇ,

ಶ್ರೀ ಸತ್ಯ ಸಾಯಿ ಹೇಳುತ್ತಿದ್ದರು,  सेवा अने, रेंडु अक्षराल-लोने, अनन्त-मइन शक्ति इमिडि उन्दी। ಅಂದರೆ, 'ಮನುಕುಲದ ಸೇವೆಯೇ ದೇವರ ಸೇವೆ.' ಇದನ್ನೇ ಬೇರೆ ರೀತಿಯಲ್ಲಿ ಹೇಳುವುದಾದರೆ, ಅನಂತ ಶಕ್ತಿಯು 'ಸೇವೆ' ಎಂಬ ಕೇವಲ ಎರಡು ಅಕ್ಷರಗಳಲ್ಲಿ ನೆಲೆಸಿದೆ. ಸತ್ಯ ಸಾಯಿ ಅವರ ಜೀವನವು ಈ ಸೇವಾ ಚೈತನ್ಯದ ಜೀವಂತ ಮೂರ್ತರೂಪವಾಗಿತ್ತು. ಸತ್ಯ ಸಾಯಿಬಾಬಾ ಅವರ ಜೀವನವನ್ನು ಹತ್ತಿರದಿಂದ ವೀಕ್ಷಿಸಲು, ಅವರಿಂದ ಕಲಿಯಲು ಮತ್ತು ಅವರ ಆಶೀರ್ವಾದದ ನೆರಳಿನಲ್ಲಿ ಬದುಕಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಅವರು ಸದಾ ನನ್ನ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿದ್ದರು, ಮತ್ತು ನಾನು ಯಾವಾಗಲೂ ಅವರ ಆಶೀರ್ವಾದವನ್ನು ಪಡೆಯುತ್ತಿದ್ದೆ. ನಾನು ಅವರೊಂದಿಗೆ ಸಂಭಾಷಣೆ ನಡೆಸಿದಾಗಲೆಲ್ಲಾ, ಅವರು ಆಳವಾದ ಆಲೋಚನೆಗಳನ್ನು ಅತ್ಯಂತ ಸರಳವಾಗಿ ತಿಳಿಸುತ್ತಿದ್ದರು. 'ಎಲ್ಲರಿಗೂ ಸೇವೆ ಸಲ್ಲಿಸುವುದನ್ನು ಪ್ರೀತಿಸಿ', 'ಯಾವಾಗಲೂ ಸಹಾಯ ಮಾಡಿ, ಎಂದಿಗೂ ನೋಯಿಸಬೇಡಿ', 'ಕಡಿಮೆ ಮಾತು-ಹೆಚ್ಚು ಕೆಲಸ', 'ಪ್ರತಿಯೊಂದು ಅನುಭವವೂ ಒಂದು ಪಾಠ, ಪ್ರತಿಯೊಂದು ನಷ್ಟವೂ ಒಂದು ಲಾಭ'. ನಾನು ಮತ್ತು ಸತ್ಯ ಸಾಯಿ ಅವರ ಭಕ್ತರು ಇಂತಹ ಹಲವಾರು ಬೋಧನೆಗಳನ್ನು ಇಂದಿಗೂ ನೆನಪಿಸಿಕೊಳ್ಳುತ್ತೇವೆ. ಸತ್ಯ ಸಾಯಿ ನಮಗೆ ಅನೇಕ ಜೀವನ ಪಾಠಗಳನ್ನು ನೀಡಿದ್ದಾರೆ. ಅವು ಸೂಕ್ಷ್ಮತೆ ಮತ್ತು ಜೀವನದ ಬಗ್ಗೆ ಆಳವಾದ ಒಳನೋಟಗಳನ್ನು ಹೊಂದಿರುತ್ತವೆ. ಗುಜರಾತ್‌ನಲ್ಲಿ ಭೂಕಂಪ ಸಂಭವಿಸಿದಾಗ ಅವರು ನನ್ನನ್ನು ವಿಶೇಷವಾಗಿ ಕರೆದಿದ್ದು ನನಗೆ ನೆನಪಿದೆ. ಸಾಧ್ಯವಿರುವ ಎಲ್ಲ ರೀತಿಯಲ್ಲಿ ಪರಿಹಾರ ಮತ್ತು ಸಹಾಯವನ್ನು ಒದಗಿಸುವಲ್ಲಿ ಅವರು ವೈಯಕ್ತಿಕವಾಗಿ ತಮ್ಮನ್ನು ತೊಡಗಿಸಿಕೊಂಡರು. ಅವರ ಮಾರ್ಗದರ್ಶನದಲ್ಲಿ ಅವರ ಸಂಸ್ಥೆಯ ಸಾವಿರಾರು ಜನರು ಭುಜ್‌ನ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದರು. ಆ ವ್ಯಕ್ತಿಯು ಯಾರೇ ಆಗಿರಲಿ, ಅವರು ತಮ್ಮವರಂತೆ, ತನಗೆ ತುಂಬಾ ಹತ್ತಿರದವರಂತೆ ಅವರ ಯೋಗಕ್ಷೇಮವನ್ನು ಅವರು ನೋಡಿಕೊಳ್ಳುತ್ತಿದ್ದರು. ಸತ್ಯಸಾಯಿಯವರ ಪ್ರಕಾರ, 'ಮನುಕುಲದ ಸೇವೆಯೇ ದೇವರ ಸೇವೆ'. 'ಪ್ರತಿಯೊಬ್ಬ ಮನುಷ್ಯನಲ್ಲಿ ನಾರಾಯಣ' ಮತ್ತು 'ಪ್ರತಿ ಜೀವಿಯಲ್ಲಿ ಶಿವನನ್ನು' ನೋಡುವ ಈ ಮನೋಭಾವವು ಜನರನ್ನು ದೈವಿಕರನ್ನಾಗಿ ಮಾಡುತ್ತದೆ.

ಸ್ನೇಹಿತರೇ,

ಭಾರತದಂತಹ ದೇಶದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಸ್ಥೆಗಳು ಯಾವಾಗಲೂ ಸಾಮಾಜಿಕ ಉನ್ನತಿಯಲ್ಲಿ ಮಹತ್ವದ ಪಾತ್ರ ವಹಿಸಿವೆ. ಇಂದು, ರಾಷ್ಟ್ರವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿದೆ ಮತ್ತು ಮುಂದಿನ 25 ವರ್ಷಗಳ ಸಂಕಲ್ಪಗಳೊಂದಿಗೆ 'ಅಮೃತ್ ಕಾಲ'ಕ್ಕೆ ಕಾಲಿಟ್ಟಿದೆ. ನಾವು ಪರಂಪರೆ ಮತ್ತು ಅಭಿವೃದ್ಧಿಗೆ ವೇಗವನ್ನು ನೀಡುತ್ತಿರುವ ಈ ಸಂದರ್ಭದಲ್ಲಿ ಸತ್ಯ ಸಾಯಿ ಟ್ರಸ್ಟ್‌ನಂತಹ ಸಂಸ್ಥೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ನಿಮ್ಮ ಆಧ್ಯಾತ್ಮಿಕ ವಿಭಾಗವು ʻಬಾಲ ವಿಕಾಸʼದಂತಹ(ಮಕ್ಕಳ ಅಭಿವೃದ್ಧಿ) ಕಾರ್ಯಕ್ರಮಗಳ ಮೂಲಕ ಭಾರತದ ಯುವ ಪೀಳಿಗೆಯ ಸಾಂಸ್ಕೃತಿಕ ಪರಂಪರೆಯನ್ನು ಪೋಷಿಸುತ್ತಿರುವುದು ನನಗೆ ಸಂತೋಷ ತಂದಿದೆ. ಸತ್ಯ ಸಾಯಿಬಾಬಾ ಅವರು ಮಾನವೀಯ ಸೇವೆಗಾಗಿ ಆಸ್ಪತ್ರೆಗಳನ್ನು ಸ್ಥಾಪಿಸಿದರು ಮತ್ತು ʻಪ್ರಶಾಂತಿ ನಿಲಯಂʼನಲ್ಲಿ ಅತ್ಯಾಧುನಿಕ ಆಸ್ಪತ್ರೆಯೇ ಇದಕ್ಕೆ ಸಾಕ್ಷಿಯಾಗಿದೆ. ಹಲವಾರು ವರ್ಷಗಳಿಂದ, ಸತ್ಯ ಸಾಯಿ ಟ್ರಸ್ಟ್ ಉಚಿತ ಶಿಕ್ಷಣಕ್ಕಾಗಿ ಉತ್ತಮ ಶಾಲೆಗಳು ಮತ್ತು ಕಾಲೇಜುಗಳನ್ನು ನಡೆಸುತ್ತಿದೆ. ರಾಷ್ಟ್ರ ನಿರ್ಮಾಣ ಮತ್ತು ಸಮಾಜದ ಸಬಲೀಕರಣದಲ್ಲಿ ನಿಮ್ಮ ಸಂಸ್ಥೆಯ ಪ್ರಯತ್ನಗಳು ಶ್ಲಾಘನೀಯ. ಸತ್ಯ ಸಾಯಿ ಅವರೊಂದಿಗೆ ನಂಟು ಹೊಂದಿರುವ ಸಂಸ್ಥೆಗಳು ಸಹ ದೇಶ ಕೈಗೊಂಡ ಉಪಕ್ರಮಗಳಲ್ಲಿ ಸಮರ್ಪಣೆಯಿಂದ ಕೆಲಸ ಮಾಡುತ್ತಿವೆ. ಇಂದು, ದೇಶವು 'ಜಲ ಜೀವನ್ ಮಿಷನ್' ಅಡಿಯಲ್ಲಿ ಪ್ರತಿ ಗ್ರಾಮಕ್ಕೂ ಶುದ್ಧ ನೀರು ಪೂರೈಕೆ ಮಾಡುತ್ತಿದೆ. ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ ಕೂಡ ದೂರದ ಹಳ್ಳಿಗಳಿಗೆ ಉಚಿತ ನೀರನ್ನು ಒದಗಿಸುವ ಮೂಲಕ ಮತ್ತು ಈ ಉದಾತ್ತ ಪ್ರಯತ್ನದಲ್ಲಿ ಪಾಲುದಾರರಾಗುವ ಮೂಲಕ ಈ ಮಾನವೀಯ ಉದ್ದೇಶಕ್ಕೆ ಕೊಡುಗೆ ನೀಡುತ್ತಿದೆ.

ಸ್ನೇಹಿತರೇ,

21 ನೇ ಶತಮಾನದ ಸವಾಲುಗಳನ್ನು ಪರಿಗಣಿಸುವುದಾದರೆ, ಹವಾಮಾನ ಬದಲಾವಣೆಯು ಇಡೀ ಜಗತ್ತು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ಭಾರತವು ಜಾಗತಿಕ ವೇದಿಕೆಯಲ್ಲಿ ಮಿಷನ್ "ಲೈಫ್‌" (Living for Environment- LiFE) ನಂತಹ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಜಗತ್ತು ಭಾರತದ ನಾಯಕತ್ವದಲ್ಲಿ ನಂಬಿಕೆ ಹೊಂದಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ, ಭಾರತವು ಈ ವರ್ಷ ʻಜಿ-20ʼಯಂತಹ ಪ್ರಮುಖ ಗುಂಪಿನ ಅಧ್ಯಕ್ಷತೆ ವಹಿಸಿದೆ. ಭಾರತದ ʻಜಿ-20’ ಅಧ್ಯಕ್ಷತೆಯು ಭಾರತದ ಮೂಲಭೂತ ಸಿದ್ಧಾಂತದ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ವಿಷಯಾಧಾರಿತವಾಗಿದೆ. ಜಗತ್ತು ಭಾರತದ ದೃಷ್ಟಿಕೋನದಿಂದ ಪ್ರಭಾವಿತವಾಗಿದೆ, ಮತ್ತು ವಿಶ್ವದಾದ್ಯಂತ ಭಾರತದತ್ತ ಆಕರ್ಷಣೆ ಹೆಚ್ಚುತ್ತಿದೆ. ಜೂನ್ 21ರ ʻಅಂತಾರಾಷ್ಟ್ರೀಯ ಯೋಗ ದಿನʼದಂದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಹೇಗೆ ವಿಶ್ವ ದಾಖಲೆ ನಿರ್ಮಿಸಲಾಯಿತು ಎಂಬುದನ್ನು ನೀವು ನೋಡಿದ್ದೀರಿ. ಯೋಗಕ್ಕಾಗಿ ಗರಿಷ್ಠ ದೇಶಗಳ ಪ್ರತಿನಿಧಿಗಳು ಒಂದೇ ಸಮಯದಲ್ಲಿ, ಒಂದೇ ಸ್ಥಳದಲ್ಲಿ ಒಟ್ಟುಗೂಡಿದರು. ವಿಶ್ವಾದ್ಯಂತ ಯೋಗವು ಜನರ ಜೀವನದ ಅವಿಭಾಜ್ಯ ಅಂಗವಾಗುತ್ತಿದೆ.

ಇಂದು, ಜನರು ಆಯುರ್ವೇದವನ್ನು ಸ್ವೀಕರಿಸುತ್ತಿದ್ದಾರೆ ಮತ್ತು ಭಾರತದ ಸುಸ್ಥಿರ ಜೀವನಶೈಲಿಯಿಂದ ಕಲಿಯಲು ನೋಡುತ್ತಿದ್ದಾರೆ. ನಮ್ಮ ಸಂಸ್ಕೃತಿ, ಪರಂಪರೆಯ ಬಗ್ಗೆ ಕುತೂಹಲ ಮತ್ತು ನಂಬಿಕೆ ನಿರಂತರವಾಗಿ ಹೆಚ್ಚಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ, ವಿವಿಧ ದೇಶಗಳಿಂದ ಹಲವಾರು ವಿಗ್ರಹಗಳನ್ನು ಭಾರತಕ್ಕೆ ಹಿಂದಿರುಗಿಸಲಾಗಿದೆ. ಈ ವಿಗ್ರಹಗಳನ್ನು 50-100 ವರ್ಷಗಳ ಹಿಂದೆ ನಮ್ಮ ದೇಶದಿಂದ ಕಳವು ಮಾಡಲಾಗಿತ್ತು. ಭಾರತದ ಪ್ರಯತ್ನಗಳು ಮತ್ತು ಈ ನಾಯಕತ್ವದ ಹಿಂದೆ ನಮ್ಮ ಸಾಂಸ್ಕೃತಿಕ ಸಿದ್ಧಾಂತವು ನಮ್ಮ ದೊಡ್ಡ ಶಕ್ತಿಯಾಗಿ ಉಳಿದಿದೆ. ಆದ್ದರಿಂದ, ಸತ್ಯ ಸಾಯಿ ಟ್ರಸ್ಟ್‌ನಂತಹ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಸ್ಥೆಗಳು ಅಂತಹ ಎಲ್ಲಾ ಪ್ರಯತ್ನಗಳಲ್ಲಿ ಮಹತ್ವದ ಪಾತ್ರವಹಿಸುತ್ತವೆ. ನೀವು ಮುಂದಿನ ಎರಡು ವರ್ಷಗಳಲ್ಲಿ ಒಂದು ಕೋಟಿ ʻಪ್ರೇಮಾ ತರುʼ(ಲವ್ ಟ್ರೀ) ನೆಡುವ ಪ್ರತಿಜ್ಞೆ ಮಾಡಿದ್ದೀರಿ. ಈ ಪ್ರಯತ್ನ ನಡೆಯುತ್ತದೆ ಎಂದು ನಾನು ಆಶಿಸುತ್ತೇನೆ, ಮತ್ತು ನನ್ನ ಸ್ನೇಹಿತ ಭಾಯಿ ಹಿರಾ ಅವರು ಇಲ್ಲಿರುವಾಗ ಮತ್ತೊಂದು ಆಲೋಚನೆಯನ್ನು ಮುಂದಿಡಲು ನಾನು ಬಯಸುತ್ತೇನೆ. ನಾವು ಜಪಾನ್‌ನ ʻಮಿಯಾವಾಕಿʼ ವಿಧಾನದಂತಹ ಸಣ್ಣ ಕಾಡುಗಳನ್ನು ಬೆಳೆಸುವ ತಂತ್ರವನ್ನೂ ಬಳಸಬಹುದು. ಟ್ರಸ್ಟ್‌ನ ಜನರು ಇದನ್ನು ಕಾರ್ಯಗತಗೊಳಿಸಬೇಕೆಂದು ನಾನು ಬಯಸುತ್ತೇನೆ. ಇದರಿಂದ ನಾವು ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ಸಣ್ಣ ಕಾಡುಗಳನ್ನು ಬೆಳೆಸುವ ಮಾದರಿಯನ್ನು ಪ್ರಸ್ತುತಪಡಿಸಬಹುದು. ಇದನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಮಾಡಬೇಕು, ಏಕೆಂದರೆ ಇದು ಪರಸ್ಪರರನ್ನು ಜೀವಂತವಾಗಿಡುವ ಶಕ್ತಿಯನ್ನು ಹೊಂದಿದೆ. ಮತ್ತೊಂದು ಸಸ್ಯವು ಸಸ್ಯವನ್ನು ಜೀವಂತವಾಗಿಡುವ ಶಕ್ತಿಯನ್ನು ಹೊಂದಿದೆ. ಹಿರಾ ಜೀ ಅವರಿಗೆ ಇದರಲ್ಲಿ ಪರಿಣತಿ ಇದೆ ಎಂದು ನಾನು ತಿಳಿದಿದ್ದೇನೆ. ಹಾಗಾಗಿ ನಾನು ಅವರಿಗೆ ಯಾವುದೇ ಕೆಲಸವನ್ನು ಆತ್ಮವಿಶ್ವಾಸದಿಂದ ನಿಯೋಜಿಸಬಲ್ಲೆ. ಅದಕ್ಕಾಗಿಯೇ ನಾನು ಅವಬರಿಗೆ ಈ ಮಾಹಿತಿ ನೀಡಿದ್ದೇನೆ. ಪ್ಲಾಸ್ಟಿಕ್ ಮುಕ್ತ ಭಾರತದ ಸಂಕಲ್ಪವು ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಜನರನ್ನು ತಲುಪುವಂತಾಗಲಿ.

ಶುದ್ಧ ಇಂಧನ ಪರ್ಯಾಯಗಳ ಕಡೆಗೆ ಜನರನ್ನು ಪ್ರೇರೇಪಿಸಲು ಸೌರ ಶಕ್ತಿಯ ಅಗತ್ಯವಿದೆ. ಆಂಧ್ರಪ್ರದೇಶದ ಬಳಿ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ ಸುಮಾರು 40 ಲಕ್ಷ ವಿದ್ಯಾರ್ಥಿಗಳಿಗೆ ಶ್ರೀ ಅನ್ನ, ರಾಗಿ ಮತ್ತು ಜೋಳದಿಂದ(ಸಿರಿಧಾನ್ಯ) ತಯಾರಿಸಿದ ಊಟವನ್ನು ಒದಗಿಸುತ್ತಿದೆ ಎಂದು ನನಗೆ ತಿಳಿಸಲಾಗಿದೆ. ನಿಮ್ಮ ಕಿರು ವೀಡಿಯೊದಲ್ಲೂ ಅದನ್ನು ನೋಡಿದೆ. ಇದು ಕೂಡ ಶ್ಲಾಘನೀಯ ಉಪಕ್ರಮವಾಗಿದೆ. ಇಂತಹ ಉಪಕ್ರಮಗಳನ್ನು ಇತರ ರಾಜ್ಯಗಳು ಸಹ ಅನುಸರಿಸಿದರೆ, ದೇಶಕ್ಕೆ ಹೆಚ್ಚಿನ ಲಾಭವಾಗುತ್ತದೆ. ʻಶ್ರೀ ಅನ್ನʼವು (ಸಿರಿಧಾನ್ಯ) ಪೌಷ್ಠಿಕಾಂಶವನ್ನು ಒದಗಿಸುವುದಲ್ಲದೆ ಹಲವಾರು ಸಾಧ್ಯತೆಗಳನ್ನು ಸಹ ನೀಡುತ್ತದೆ. ಜಾಗತಿಕ ಮಟ್ಟದಲ್ಲಿ ಇಂತಹ ಎಲ್ಲಾ ಪ್ರಯತ್ನಗಳು ಭಾರತದ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಮತ್ತು ಅದರ ಗುರುತನ್ನು ಬಲಪಡಿಸುತ್ತವೆ.

ಸ್ನೇಹಿತರೇ,

ಸತ್ಯ ಸಾಯಿ ಅವರ ಆಶೀರ್ವಾದ ನಮ್ಮೆಲ್ಲರೊಂದಿಗಿದೆ. ಈ ಶಕ್ತಿಯೊಂದಿಗೆ, ನಾವು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುತ್ತೇವೆ ಮತ್ತು ಇಡೀ ಜಗತ್ತಿಗೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪವನ್ನು ಪೂರೈಸುತ್ತೇವೆ. ನಾನು ನಿಮ್ಮನ್ನು ಮತ್ತೆ ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗಲಿಲ್ಲ, ಆದರೆ ನಾನು ಖಂಡಿತವಾಗಿಯೂ ಭವಿಷ್ಯದಲ್ಲಿ ಬರುತ್ತೇನೆ ಮತ್ತು ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾ ನಿಮ್ಮ ನಡುವೆ ಕಳೆದ ಶ್ರೇಷ್ಠ ಕ್ಷಣಗಳನ್ನು ನೆನಪಿಸಿಕೊಳ್ಳುತ್ತೇನೆ. ನಾನು ಆಗಾಗ್ಗೆ ಹೀರಾ ಜಿ ಅವರನ್ನು ಭೇಟಿಯಾಗುತ್ತಲೇ ಇರುತ್ತೇನೆ. ನಾನು ಇಂದು ಬರಲು ಸಾಧ್ಯವಾಗದಿದ್ದರೂ, ಭವಿಷ್ಯದಲ್ಲಿ ಖಂಡಿತವಾಗಿಯೂ ಬರುತ್ತೇನೆ ಎಂದು ಇಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಈ ನಂಬಿಕೆಯೊಂದಿಗೆ, ನಾನು ನಿಮಗೆ ಶುಭ ಹಾರೈಸುತ್ತೇನೆ. ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು. ಸಾಯಿ ರಾಮ್!

ಗಮನಿಸಿ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.

*****



(Release ID: 1937662) Visitor Counter : 122