ಪ್ರಧಾನ ಮಂತ್ರಿಯವರ ಕಛೇರಿ

ಅಮೆರಿಕ ಸಂಸತ್ತಿನ(ಕಾಂಗ್ರೆಸ್‌) ಜಂಟಿ ಅಧಿವೇಶನ ಉದ್ದೇಶಿಸಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

Posted On: 23 JUN 2023 7:17AM by PIB Bengaluru

ಗೌರವಾನ್ವಿತ ಸ್ಪೀಕರ್, ಉಪಾಧ್ಯಕ್ಷರೆ, ಅಮೆರಿಕ ಸಂಸತ್ತಿನ ಗೌರವಾನ್ವಿತ ಸದಸ್ಯರೆ, ಮಹಿಳೆಯರೆ ಮತ್ತು ಮತ್ತು ಸಜ್ಜನರೆ,

ನಮಸ್ಕಾರ!

ಅಮೆರಿಕ ಸಂಸತ್ತನ್ನು (ಕಾಂಗ್ರೆಸ್) ಉದ್ದೇಶಿಸಿ ಮಾತನಾಡುವುದು ಯಾವಾಗಲೂ ದೊಡ್ಡ ಗೌರವವಾಗಿದೆ. ಇದನ್ನು ನಾನು 2 ಬಾರಿ ಮಾಡುವುದು ಅಸಾಧಾರಣ ವಿಶೇಷತೆಯಾಗಿದೆ. ಈ ಗೌರವಕ್ಕಾಗಿ ಭಾರತದ 140 ಕೋಟಿ ಭಾರತೀಯರ ಪರವಾಗಿ ನಾನು ನನ್ನ ತುಂಬು ಕೃತಜ್ಞತೆ ಸಲ್ಲಿಸುತ್ತೇನೆ. 2016ರಲ್ಲಿ ನಿಮ್ಮಲ್ಲಿ ಅರ್ಧದಷ್ಟು ಜನರು ಇಲ್ಲಿದ್ದೀರಿ ಎಂದು ನಾನು ಭಾವಿಸುತ್ತೇನೆ. ಹಳೆಯ ಸ್ನೇಹಿತರಂತೆ ನಿಮ್ಮ ಪ್ರೀತಿಯನ್ನು ನಾನು ಅನುಭವಿಸುತ್ತೇನೆ. ಇನ್ನರ್ಧ ಸದಸ್ಯರಲ್ಲಿ ಹೊಸ ಸ್ನೇಹದ ಉತ್ಸಾಹವೂ ಕಾಣುತ್ತಿದೆ. 2016ರಲ್ಲಿ ನಾನು ಇಲ್ಲಿ ಭೇಟಿಯಾದ ಸೆನೆಟರ್ ಹ್ಯಾರಿ ರೀಡ್, ಸೆನೆಟರ್ ಜಾನ್ ಮೆಕೇನ್, ಸೆನೆಟರ್ ಒರಿನ್ ಹ್ಯಾಚ್, ಎಲಿಜಾ ಕಮ್ಮಿಂಗ್ಸ್, ಅಲ್ಸಿ ಹೇಸ್ಟಿಂಗ್ಸ್ ಮತ್ತು ಇತರರನ್ನು ನಾನು ನೆನಪಿಸಿಕೊಳ್ಳುತ್ತೇನೆ, ಆದರೆ ಅವರೀಗ ಇಲ್ಲಿಲ್ಲ  ದುಃಖಕರವಾಗಿದೆ.

ಗೌರವಾನ್ವಿತ ಸ್ಪೀಕರ್ ಅವರೆ,

ಇಲ್ಲಿ ನಿಂತು, 7 ವರ್ಷಗಳ ಹಿಂದೆ, ಹ್ಯಾಮಿಲ್ಟನ್ ಎಲ್ಲಾ ಪ್ರಶಸ್ತಿಗಳನ್ನು ಗೆದ್ದ ಜೂನ್ ಅದು, ಇತಿಹಾಸದ ಹಿಂಜರಿಕೆಗಳು ನಮ್ಮ ಹಿಂದೆ ಇವೆ ಎಂದು ನಾನು ಹೇಳಿದೆ. ಈಗ, ನಮ್ಮ ಯುಗವು ಒಂದು ಕವಲು ದಾರಿಯಲ್ಲಿರುವಾಗ, ಈ ಶತಮಾನದ ನಮ್ಮ ಕರೆಯ ಬಗ್ಗೆ ಮಾತನಾಡಲು ನಾನು ಇಲ್ಲಿದ್ದೇನೆ. ನಾವು ಪ್ರಯಾಣಿಸಿದ ದೀರ್ಘ ಮತ್ತು ಅಂಕುಡೊಂಕಾದ ರಸ್ತೆಯ ಮೂಲಕ ನಾವು ಸ್ನೇಹದ ಪರೀಕ್ಷೆ ಎದುರಿಸಿದ್ದೇವೆ. 7 ಬೇಸಿಗೆಗಳ ಹಿಂದೆ ನಾನು ಇಲ್ಲಿಗೆ ಬಂದ ನಂತರ ಬಹಳಷ್ಟು ಬದಲಾಗಿದೆ. ಆದರೆ ಬಹಳಷ್ಟು ಹಾಗೆಯೇ ಉಳಿದಿದೆ - ಭಾರತ ಮತ್ತು ಅಮೆರಿಕ ನಡುವಿನ ಸ್ನೇಹವನ್ನು ಗಾಢಗೊಳಿಸುವ ನಮ್ಮ ಬದ್ಧತೆಯಂತೆ. ಕಳೆದ ಕೆಲವು ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಹಲವು ಪ್ರಗತಿಗಳಾಗಿವೆ. ಅದೇ ಸಮಯದಲ್ಲಿ ಮತ್ತೊಂದು ಕೃತಕ ಬುದ್ಧಿಮತ್ತೆ -  ಅಮೆರಿಕ ಮತ್ತು ಭಾರತದಲ್ಲಿ ಇನ್ನೂ ಹೆಚ್ಚು ಮಹತ್ವದ ಬೆಳವಣಿಗೆಗಳು ನಡೆದಿವೆ.

ಗೌರವಾನ್ವಿತ ಸ್ಪೀಕರ್ ಮತ್ತು ಸದಸ್ಯರೆ,

ಪ್ರಜಾಪ್ರಭುತ್ವದ ಸೌಂದರ್ಯವೆಂದರೆ ಜನರೊಂದಿಗೆ ನಿರಂತರ ಸಂಪರ್ಕ, ಅವರ ಮಾತುಗಳನ್ನು ಆಲಿಸುವುದು ಮತ್ತು ಅವರ ನಾಡಿಮಿಡಿತವನ್ನು ಅನುಭವಿಸುವುದು. ಆದರೆ ಇದು ಸಾಕಷ್ಟು ಸಮಯ, ಶಕ್ತಿ, ಶ್ರಮ ಮತ್ತು ಪ್ರಯಾಣ ತೆಗೆದುಕೊಳ್ಳುತ್ತದೆ ಎಂದು ನನಗೆ ತಿಳಿದಿದೆ. ಇದು ಗುರುವಾರ ಮಧ್ಯಾಹ್ನ - ನಿಮ್ಮಲ್ಲಿ ಕೆಲವರಿಗೆ ವಿರಾಮದ ದಿನ. ಆದ್ದರಿಂದ, ನಿಮ್ಮ ಸಮಯಕ್ಕೆ ನಾನು ಕೃತಜ್ಞನಾಗಿದ್ದೇನೆ. ಕಳೆದ ತಿಂಗಳು ನೀವು ಎಷ್ಟು ಬ್ಯುಸಿಯಾಗಿದ್ದಿರಿ ಎಂಬುದು ನನಗೂ ಗೊತ್ತು.

ನಾನೇ ರೋಮಾಂಚಕ ಪ್ರಜಾಪ್ರಭುತ್ವ ದೇಶದ ಪ್ರಜೆಯಾಗಿ, ನಾನು ಒಂದು ವಿಷಯವನ್ನು ಒಪ್ಪಿಕೊಳ್ಳಬಲ್ಲೆ. ಗೌರವಾನ್ವಿತ ಸ್ಪೀಕರ್ - ನಿಮಗೆ ಕಠಿಣ ಕೆಲಸವಿದೆ! ನಾನು ಉತ್ಸಾಹ, ಮನವೊಲಿಕೆ ಮತ್ತು ನೀತಿಯ ಯುದ್ಧಗಳಿಗೆ ಸಂಬಂಧಿಸಬಲ್ಲೆ. ವಿಚಾರಗಳು ಮತ್ತು ಸಿದ್ಧಾಂತದ ಚರ್ಚೆಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ವಿಶ್ವದ 2 ಮಹಾನ್ ಪ್ರಜಾಪ್ರಭುತ್ವಗಳಾದ ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯವನ್ನು ಆಚರಿಸಲು ನೀವು ಇಂದು ಒಟ್ಟಿಗೆ ಸೇರಿರುವುದನ್ನು ನೋಡಲು ನನಗೆ ಸಂತೋಷವಾಗಿದೆ. ನಿಮಗೆ ಬಲವಾದ ದ್ವಿಪಕ್ಷೀಯ ಒಮ್ಮತದ ಅಗತ್ಯವಿರುವಾಗ ಸಹಾಯ ಮಾಡಲು ನನಗೆ ಸಂತೋಷವಾಗಿದೆ. ಮನೆಯಲ್ಲೇ ವಿಚಾರಗಳ ಸ್ಪರ್ಧೆ ಇರುತ್ತದೆ , ಅದು ಇರಬೇಕು. ಆದರೆ, ನಮ್ಮ ರಾಷ್ಟ್ರಕ್ಕಾಗಿ ಮಾತನಾಡುವಾಗ ನಾವೂ ಒಂದಾಗಬೇಕು. ನೀವು ಅದನ್ನು ಮಾಡಬಹುದು ಎಂದು ತೋರಿಸಿದ್ದೀರಿ. ಅಭಿನಂದನೆಗಳು!

ಗೌರವಾನ್ವಿತ ಸ್ಪೀಕರ್,

ಅಮೆರಿಕದ ಭದ್ರ ಬುನಾದಿಯು ಸಮಾನ ಜನರ ರಾಷ್ಟ್ರದ ವಿಶಾಲ ದೃಷ್ಟಿಕೋನದಿಂದ ಪ್ರೇರಿತವಾಗಿದೆ. ನಿಮ್ಮ ಇತಿಹಾಸದುದ್ದಕ್ಕೂ ನೀವು ವಿಶ್ವಾದ್ಯಂತದ ಜನರನ್ನು ಅಪ್ಪಿಕೊಂಡಿದ್ದೀರಿ. ನೀವು ಅವರನ್ನು ಅಮೆರಿಕದ ಕನಸಿನಲ್ಲಿ ಸಮಾನ ಪಾಲುದಾರರನ್ನಾಗಿ ಮಾಡಿದ್ದೀರಿ. ಭಾರತದಲ್ಲಿ ಬೇರುಗಳನ್ನು ಹೊಂದಿರುವ ಲಕ್ಷಾಂತರ ಮಂದಿ ಇಲ್ಲಿದ್ದಾರೆ. ಅವರಲ್ಲಿ ಕೆಲವರು ಈ ಸಭಾಂಗಣದಲ್ಲಿ ಹೆಮ್ಮೆಯಿಂದ ಕುಳಿತುಕೊಂಡಿದ್ದಾರೆ. ನನ್ನ ಹಿಂದೆ ಒಬ್ಬರಿದ್ದಾರೆ. ಇತಿಹಾಸ ನಿರ್ಮಿಸಿದವರು! ಸಮೋಸಾ ಸಭೆಯು ಈಗ ಸದನದ ಸುವಾಸನೆಯಾಗಿದೆ ಎಂಬುದು ನನಗೆ ತಿಳಿದಿದೆ. ಇದು ಬೆಳೆಯುತ್ತಲೇ ಇರುತ್ತದೆ. ಭಾರತೀಯ ಪಾಕ ಪದ್ಧತಿಯ ಸಂಪೂರ್ಣ ವೈವಿಧ್ಯತೆಯನ್ನು ಇಲ್ಲಿ ತರುತ್ತದೆ ಎಂದು ನಾನು ಭಾವಿಸುತ್ತೇನೆ. ಎರಡು ಶತಮಾನಗಳಲ್ಲಿ ನಾವು ಶ್ರೇಷ್ಠ ಅಮೆರಿಕನ್ನರು ಮತ್ತು ಭಾರತೀಯರ ಜೀವನದ ಮೂಲಕ ನಾವೆಲ್ಲಾ ಪರಸ್ಪರ ಸ್ಫೂರ್ತಿ ಪಡೆದಿದ್ದೇವೆ. ಮಹಾತ್ಮ ಗಾಂಧಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರಿಗೆ ನಾವು ಗೌರವ ಸಲ್ಲಿಸುತ್ತೇವೆ. ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯಕ್ಕಾಗಿ ಶ್ರಮಿಸಿದ ಅನೇಕರನ್ನು ನಾವು ನೆನಪಿಸಿಕೊಳ್ಳುತ್ತೇವೆ. ಇಂದು ನಾನು ಅವರಲ್ಲಿ ಒಬ್ಬರಿಗೆ ಹೃತ್ಪೂರ್ವಕ ಗೌರವವನ್ನು ಸಲ್ಲಿಸಲು ಬಯಸುತ್ತೇನೆ - ಕಾಂಗ್ರೆಸ್‌ನ ಜಾನ್ ಲೂಯಿಸ್.

ಗೌರವಾನ್ವಿತ ಸ್ಪೀಕರ್,

ಪ್ರಜಾಪ್ರಭುತ್ವವು ನಮ್ಮ ಪವಿತ್ರ ಮತ್ತು ಹಂಚಿಕೆಯ ಮೌಲ್ಯಗಳಲ್ಲಿ ಒಂದಾಗಿದೆ. ಇದು ದೀರ್ಘಕಾಲದವರೆಗೆ ವಿಕಸನಗೊಂಡಿತು ಮತ್ತು ವಿವಿಧ ರೂಪಗಳು ಮತ್ತು ವ್ಯವಸ್ಥೆಗಳನ್ನು ಕಂಡಿದೆ. ಆದಾಗ್ಯೂ, ಇತಿಹಾಸದುದ್ದಕ್ಕೂ, ಒಂದು ವಿಷಯ ಸ್ಪಷ್ಟವಾಗಿದೆ.

ಪ್ರಜಾಪ್ರಭುತ್ವವು ಸಮಾನತೆ ಮತ್ತು ಘನತೆಯನ್ನು ಬೆಂಬಲಿಸುವ ಆತ್ಮವಾಗಿದೆ. ಚರ್ಚೆ ಮತ್ತು ಪ್ರವಚನವನ್ನು ಸ್ವಾಗತಿಸುವ ವಿಚಾರವೇ ಪ್ರಜಾಪ್ರಭುತ್ವ. ಪ್ರಜಾಪ್ರಭುತ್ವವು ಚಿಂತನೆ ಮತ್ತು ಅಭಿವ್ಯಕ್ತಿಗೆ ರೆಕ್ಕೆಗಳನ್ನು ನೀಡುವ ಸಂಸ್ಕೃತಿಯಾಗಿದೆ. ಭಾರತವು ಅನಾದಿ ಕಾಲದಿಂದಲೂ ಇಂತಹ ಮೌಲ್ಯಗಳನ್ನು ಹೊಂದಲು ಧನ್ಯವಾಗಿದೆ. ಪ್ರಜಾಸತ್ತಾತ್ಮಕ ಮನೋಭಾವದ ವಿಕಾಸದಲ್ಲಿ ಭಾರತವು ಪ್ರಜಾಪ್ರಭುತ್ವದ ತಾಯಿಯಾಗಿದೆ. ಸಹಸ್ರಮಾನಗಳ ಹಿಂದೆ, ನಮ್ಮ ಹಳೆಯ ಧರ್ಮಗ್ರಂಥಗಳು ಹೇಳಿವೆ:

‘ಏಕಮ್ ಸತ್ ವಿಪ್ರಾ ಬಹುಧಾ ವದಂತಿ’. ಇದರ ಅರ್ಥ - ಸತ್ಯವು ಒಂದೇ, ಆದರೆ ಬುದ್ಧಿವಂತರು ಅದನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ.

ಈಗ, ಅಮೆರಿಕ ಮತ್ತು ಭಾರತವು ಅತ್ಯಂತ ಹಳೆಯ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವವಾಗಿವೆ. ನಮ್ಮ ಪಾಲುದಾರಿಕೆಯು ಪ್ರಜಾಪ್ರಭುತ್ವದ ಭವಿಷ್ಯವನ್ನು ಉತ್ತಮಗೊಳಿಸುತ್ತದೆ. ಒಟ್ಟಾಗಿ, ನಾವು ಜಗತ್ತಿಗೆ ಉತ್ತಮ ಭವಿಷ್ಯವನ್ನು ನೀಡುತ್ತೇವೆ ಮತ್ತು ಭವಿಷ್ಯಕ್ಕೆ ಉತ್ತಮ ಜಗತ್ತನ್ನು ನೀಡುತ್ತೇವೆ.

ಗೌರವಾನ್ವಿತ ಸ್ಪೀಕರ್,

ಕಳೆದ ವರ್ಷ ಭಾರತವು ತನ್ನ ಸ್ವಾತಂತ್ರ್ಯದ 75ನೇ ವರ್ಷ ಆಚರಿಸಿತು. ಪ್ರತಿ ಮೈಲಿಗಲ್ಲು ಮುಖ್ಯ, ಆದರೆ ಇದು ವಿಶೇಷವಾಗಿತ್ತು. ಒಂದಲ್ಲ ಒಂದು ರೂಪದಲ್ಲಿ ವಿದೇಶಿ ಆಳ್ವಿಕೆಯ ಸಾವಿರ ವರ್ಷಗಳ ನಂತರ ನಾವು 75 ವರ್ಷಗಳ ಸ್ವಾತಂತ್ರ್ಯದ ಗಮನಾರ್ಹ ಪ್ರಯಾಣವನ್ನು ಆಚರಿಸಿದ್ದೇವೆ. ಇದು ಕೇವಲ ಪ್ರಜಾಪ್ರಭುತ್ವದ ಆಚರಣೆಯಾಗಿರದೆ ವೈವಿಧ್ಯತೆಯ ಆಚರಣೆಯೂ ಆಗಿತ್ತು. ಸಂವಿಧಾನ ಮಾತ್ರವಲ್ಲ, ಅದರ ಸಾಮಾಜಿಕ ಸಬಲೀಕರಣದ ಮನೋಭಾವವೂ ಆಗಿದೆ. ನಮ್ಮ ಸ್ಪರ್ಧಾತ್ಮಕ ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆ ಮಾತ್ರವಲ್ಲ, ಏಕತೆ ಮತ್ತು ಸಮಗ್ರತೆಯೂ ನಮ್ಮ ಅಗತ್ಯವಾಗಿದೆ.

ನಮ್ಮಲ್ಲಿ 2,500ಕ್ಕೂ ಹೆಚ್ಚು ರಾಜಕೀಯ ಪಕ್ಷಗಳಿವೆ. ಹೌದು, ನೀವು ಕೇಳಿದ್ದು ಸರಿ - ಎರಡು ಸಾವಿರದ ಐನೂರು. ಸುಮಾರು 20 ವಿವಿಧ ಪಕ್ಷಗಳು ಭಾರತದ ವಿವಿಧ ರಾಜ್ಯಗಳನ್ನು ಆಳುತ್ತವೆ. ನಾವು 22 ಅಧಿಕೃತ ಭಾಷೆಗಳನ್ನು ಮತ್ತು ಸಾವಿರಾರು ಉಪಭಾಷೆಗಳನ್ನು ಹೊಂದಿದ್ದೇವೆ, ಆದರೂ ನಾವು ಒಂದೇ ಧ್ವನಿಯಲ್ಲಿ ಮಾತನಾಡುತ್ತೇವೆ. ಪ್ರತಿ ನೂರು ಮೈಲುಗಳಿಗೊಮ್ಮೆ ನಮ್ಮ ತಿನಿಸು ಬದಲಾಗುತ್ತದೆ. ದೋಸೆಯಿಂದ ಆಲೂ ಪ್ರಾಂತಕ್ಕೆ ಮತ್ತು ಶ್ರೀಖಂಡದಿಂದ ಸಂದೇಶಕ್ಕೆ, ಇವೆಲ್ಲವನ್ನೂ ನಾವು ಆನಂದಿಸುತ್ತೇವೆ. ನಾವು ಪ್ರಪಂಚದ ಎಲ್ಲಾ ನಂಬಿಕೆಗಳಿಗೆ ನೆಲೆಯಾಗಿದ್ದೇವೆ ಮತ್ತು ನಾವು ಎಲ್ಲವನ್ನೂ ಆಚರಿಸುತ್ತೇವೆ. ಭಾರತದಲ್ಲಿ, ವೈವಿಧ್ಯತೆಯು ನೈಸರ್ಗಿಕ ಜೀವನ ವಿಧಾನವಾಗಿದೆ.

ಇಂದು ಜಗತ್ತು ಭಾರತದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಬಯಸುತ್ತಿದೆ. ಆ ಕುತೂಹಲವನ್ನು ಈ ಸದನದಲ್ಲೂ ಕಾಣುತ್ತಿದ್ದೇನೆ. ಕಳೆದ ದಶಕದಲ್ಲಿ ಅಮೆರಿಕ  ಸಂಸತ್ತಿನ  100ಕ್ಕೂ ಹೆಚ್ಚು ಸದಸ್ಯರನ್ನು ಸ್ವಾಗತಿಸಿದ್ದು ನಮಗೆ ಗೌರವ ತಂದಿದೆ. ಪ್ರತಿಯೊಬ್ಬರೂ ಭಾರತದ ಅಭಿವೃದ್ಧಿ, ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯನ್ನು ಅರ್ಥ ಮಾಡಿಕೊಳ್ಳಲು ಬಯಸುತ್ತಾರೆ. ಭಾರತ ಏನು ಮಾಡುತ್ತಿದೆ ಮತ್ತು ಹೇಗೆ ಸರಿಯಾಗಿದೆ ಎಂದು ತಿಳಿಯಲು ಪ್ರತಿಯೊಬ್ಬರೂ ಬಯಸುತ್ತಾರೆ. ಆತ್ಮೀಯ ಸ್ನೇಹಿತರಲ್ಲಿ, ನಾನು ಅದೇ ವಿಷಯವನ್ನು ಹಂಚಿಕೊಳ್ಳಲು ಸಂತೋಷ ಪಡುತ್ತೇನೆ.

ಗೌರವಾನ್ವಿತ ಸ್ಪೀಕರ್,

ನಾನು ಪ್ರಧಾನಿಯಾಗಿ ಮೊದಲ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದಾಗ, ಭಾರತವು ವಿಶ್ವದ 10ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಇಂದು ಭಾರತವು 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಭಾರತವು ಶೀಘ್ರದಲ್ಲೇ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ನಾವು ದೊಡ್ಡದಾಗಿ ಬೆಳೆಯುವುದು ಮಾತ್ರವಲ್ಲದೆ, ವೇಗವಾಗಿ ಬೆಳೆಯುತ್ತಿದ್ದೇವೆ. ಭಾರತ ಬೆಳೆದರೆ ಇಡೀ ಜಗತ್ತು ಬೆಳೆಯುತ್ತದೆ. ವಿಶೇಷವಾಗಿ, ನಾವು ವಿಶ್ವದ ಜನಸಂಖ್ಯೆಯ ಆರನೇ ಒಂದು ಭಾಗವಾಗಿದ್ದೇವೆ! ಕಳೆದ ಶತಮಾನದಲ್ಲಿ, ಭಾರತವು ಸ್ವಾತಂತ್ರ್ಯ ಪಡೆದಾಗ, ವಸಾಹತುಶಾಹಿ ಆಳ್ವಿಕೆಯಿಂದ ತಮ್ಮನ್ನು ಮುಕ್ತಗೊಳಿಸಲು ಇತರ ಹಲವು ದೇಶಗಳನ್ನು ಪ್ರೇರೇಪಿಸಿತು. ಈ ಶತಮಾನದಲ್ಲಿ ಭಾರತವು ಬೆಳವಣಿಗೆಯಲ್ಲಿ ಮಾನದಂಡಗಳನ್ನು ಹೊಂದಿಸಿದಾಗ, ಅದು ಇತರ ಹಲವು ದೇಶಗಳಿಗೆ ಅದೇ ರೀತಿ ಮಾಡಲು ಪ್ರೇರೇಪಿಸುತ್ತದೆ. ನಮ್ಮ ದೃಷ್ಟಿ ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ, ಸಬ್ಕಾ ಪ್ರಯಾಸ್. ಇದರ ಅರ್ಥ: ಒಟ್ಟಾಗಿ, ಪ್ರತಿಯೊಬ್ಬರ ಬೆಳವಣಿಗೆಗಾಗಿ, ಪ್ರತಿಯೊಬ್ಬರ ನಂಬಿಕೆ ಮತ್ತು ಪ್ರತಿಯೊಬ್ಬರ ಪ್ರಯತ್ನಗಳೊಂದಿಗೆ ಅಭಿವೃದ್ಧಿ ಹೊಂದುವುದೇ ಆಗಿದೆ.

ಈ ದೃಷ್ಟಿಕೋನ ಹೇಗೆ ಕಾರ್ಯರೂಪಕ್ಕೆ ಪರಿವರ್ತಿಸುತ್ತದೆ, ವೇಗ ಮತ್ತು ಪ್ರಮಾಣದೊಂದಿಗೆ ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇವೆ150 ದಶಲಕ್ಷ ಜನರಿಗೆ ಆಶ್ರಯ ನೀಡಲು ನಾವು ಸುಮಾರು 40 ದಶಲಕ್ಷ ಮನೆಗಳನ್ನು ನೀಡಿದ್ದೇವೆ. ಇದು ಆಸ್ಟ್ರೇಲಿಯಾದ ಜನಸಂಖ್ಯೆಯ ಸುಮಾರು 6 ಪಟ್ಟು! ನಾವು ಸುಮಾರು 500 ದಶಲಕ್ಷ ಜನರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಖಾತ್ರಿಪಡಿಸುವ ರಾಷ್ಟ್ರೀಯ ಆರೋಗ್ಯ ವಿಮಾ ಕಾರ್ಯಕ್ರಮ ನಡೆಸುತ್ತಿದ್ದೇವೆ. ಅದು ದಕ್ಷಿಣ ಅಮೆರಿಕದ ಜನಸಂಖ್ಯೆಗಿಂತ ಹೆಚ್ಚು! ನಾವು ವಿಶ್ವದ ಅತಿದೊಡ್ಡ ಹಣಕಾಸು ಸೇರ್ಪಡೆ ಆಂದೋಲನದೊಂದಿಗೆ ಬ್ಯಾಂಕಿಂಗ್ ಸೇವೆ ಒದಗಿಸಿದ್ದೇವೆ. ಸುಮಾರು 500 ದಶಲಕ್ಷ ಜನರು ಇದರ ಪ್ರಯೋಜನ ಪಡೆದರು.

ಇದು ಉತ್ತರ ಅಮೆರಿಕದ ಜನಸಂಖ್ಯೆಗೆ ಹತ್ತಿರದಲ್ಲಿದೆ! ನಾವು ಡಿಜಿಟಲ್ ಇಂಡಿಯಾ ನಿರ್ಮಾಣಕ್ಕೆ ಶ್ರಮಿಸಿದ್ದೇವೆ. ಇಂದು ದೇಶದಲ್ಲಿ 850 ದಶಲಕ್ಷಕ್ಕಿಂತ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಮತ್ತು ಅಂತರ್ಜಾಲ ಬಳಕೆದಾರರಿದ್ದಾರೆ. ಇದು ಯುರೋಪಿನ ಜನಸಂಖ್ಯೆಗಿಂತ ಹೆಚ್ಚು! ಭಾರತದಲ್ಲಿ ತಯಾರಿಸಿದ 2 ಶತಕೋಟಿ ಡೋಸ್ ಕೋವಿಡ್ ಲಸಿಕೆಗಳೊಂದಿಗೆ ನಾವು ನಮ್ಮ ಜನರನ್ನು ರಕ್ಷಿಸಿದ್ದೇವೆ, ಅದು ಕೂಡ ಉಚಿತವಾಗಿ!

ಗೌರವಾನ್ವಿತ ಸದಸ್ಯರೆ,

ವೇದಗಳು ವಿಶ್ವದ ಪ್ರಾಚೀನ ಗ್ರಂಥಗಳಲ್ಲಿ ಒಂದಾಗಿದೆ. ಋಷಿ ಮುನಿಗಳು, ಸಾಧು ಸಂತರು  ಸಾವಿರಾರು ವರ್ಷಗಳ ಹಿಂದೆ ರಚಿಸಿದ ಮಾನವೀಯತೆಯ ದೊಡ್ಡ ನಿಧಿ ಅದಾಗಿದೆ. ಆಗ, ಮಹಿಳಾ ಋಷಿಗಳು ವೇದಗಳಲ್ಲಿ ಅನೇಕ ಶ್ಲೋಕಗಳನ್ನು ರಚಿಸಿದರು. ಇಂದು ಆಧುನಿಕ ಭಾರತದಲ್ಲಿ ಮಹಿಳೆಯರು ನಮ್ಮನ್ನು ಉತ್ತಮ ಭವಿಷ್ಯದತ್ತ ಕೊಂಡೊಯ್ಯುತ್ತಿದ್ದಾರೆ. ಭಾರತದ ದೃಷ್ಟಿಕೋನ ಕೇವಲ ಮಹಿಳೆಯರಿಗೆ ಅನುಕೂಲವಾಗುವ ಅಭಿವೃದ್ಧಿಯಲ್ಲ. ಇದು ಮಹಿಳಾ ನೇತೃತ್ವದ ಅಭಿವೃದ್ಧಿಯಾಗಿದೆ, ಅಲ್ಲಿ ಮಹಿಳೆಯರು ಪ್ರಗತಿಯ ಪ್ರಯಾಣವನ್ನು ಮುನ್ನಡೆಸುತ್ತಾರೆ. ಒಬ್ಬ ಮಹಿಳೆ ವಿನಮ್ರ ಬುಡಕಟ್ಟು ಹಿನ್ನೆಲೆಯಿಂದ ಬೆಳೆದು ನಮ್ಮ ರಾಷ್ಟ್ರದ ಮುಖ್ಯಸ್ಥೆಯಾಗಿದ್ದಾಳೆ.

ಸುಮಾರು 1.5 ದಶಲಕ್ಷ ಚುನಾಯಿತ ಮಹಿಳೆಯರು ವಿವಿಧ ಹಂತಗಳಲ್ಲಿ ನಮ್ಮನ್ನು ಮುನ್ನಡೆಸುತ್ತಿದ್ದಾರೆ, ಅದು ಸ್ಥಳೀಯ ಸರ್ಕಾರಗಳಲ್ಲಿ. ಇಂದು ಮಹಿಳೆಯರು ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ನಮ್ಮ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಶೇಕಡಾವಾರು ಮಹಿಳಾ ವಿಮಾನ ಪೈಲಟ್‌ಗಳನ್ನು ಹೊಂದಿದೆ. ಅವರು ನಮ್ಮ ಮಂಗಳ ಮಿಷನ್ ಅನ್ನು ಮುನ್ನಡೆಸುವ ಮೂಲಕ ನಮ್ಮನ್ನು ಮಂಗಳ ಗ್ರಹದಲ್ಲಿ ಇರಿಸಿದ್ದಾರೆ. ಹೆಣ್ಣು ಮಗುವಿನ ಮೇಲೆ ಹೂಡಿಕೆ ಮಾಡುವುದು ಇಡೀ ಕುಟುಂಬವನ್ನು ಮೇಲಕ್ಕೆತ್ತುತ್ತದೆ ಎಂದು ನಾನು ನಂಬುತ್ತೇನೆ. ಮಹಿಳೆಯರ ಸಬಲೀಕರಣ, ರಾಷ್ಟ್ರವನ್ನು ಪರಿವರ್ತಿಸುತ್ತದೆ.

ಗೌರವಾನ್ವಿತ ಸ್ಪೀಕರ್,

ಭಾರತವು ಅಪಾರಯುವ ಜನರನ್ನು ಹೊಂದಿರುವ ಪ್ರಾಚೀನ ರಾಷ್ಟ್ರವಾಗಿದೆ. ಭಾರತವು ತನ್ನ ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ. ಆದರೆ ಯುವ ಪೀಳಿಗೆ ಇದನ್ನು ತಂತ್ರಜ್ಞಾನದ ಕೇಂದ್ರವನ್ನಾಗಿ ಮಾಡುತ್ತಿದೆ. ಇನ್‌ಸ್ಟಂಟ್ ಅಥವಾ ನೈಜ ಸಮಯದ ಪಾವತಿಗಳು, ಕೋಡಿಂಗ್ ಅಥವಾ ಕ್ವಾಂಟಮ್ ಕಂಪ್ಯೂಟಿಂಗ್, ಮೆಷಿನ್ ಲರ್ನಿಂಗ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗಳು, ಹಣಕಾಸು ತಂತ್ರಜ್ಞಾನ ಅಥವಾ ಡೇಟಾ ವಿಜ್ಞಾನದಲ್ಲಿ ಸೃಜನಶೀಲ ರೀಲ್‌ಗಳು ಆಗಿರಲಿ, ಇತ್ತೀಚಿನ ತಂತ್ರಜ್ಞಾನವನ್ನು ಸಮಾಜವು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದಕ್ಕೆ ಭಾರತದ ಯುವಕರು ಉತ್ತಮ ಉದಾಹರಣೆಯಾಗಿದೆ. ಭಾರತದಲ್ಲಿ, ತಂತ್ರಜ್ಞಾನವು ನಾವೀನ್ಯತೆಯ ಬಗ್ಗೆ ಮಾತ್ರವಲ್ಲದೆ ಸೇರ್ಪಡೆಗೂ ಸಂಬಂಧಿಸಿದೆ. ಇಂದು ಡಿಜಿಟಲ್ ವೇದಿಕೆಗಳು ಖಾಸಗಿತನ ರಕ್ಷಿಸುವ ಜತೆಗೆ ಜನರ ಹಕ್ಕುಗಳು ಮತ್ತು ಘನತೆಯನ್ನು ಸಶಕ್ತಗೊಳಿಸುತ್ತಿವೆ.

ಕಳೆದ 9 ವರ್ಷಗಳಲ್ಲಿ ಒಂದು ಶತಕೋಟಿ ಜನರು ತಮ್ಮ ಬ್ಯಾಂಕ್ ಖಾತೆಗಳು ಮತ್ತು ಮೊಬೈಲ್ ಫೋನ್‌ಗಳೊಂದಿಗೆ ಸಂಪರ್ಕ ಹೊಂದಿದ ಅನನ್ಯ ಡಿಜಿಟಲ್ ಬಯೋಮೆಟ್ರಿಕ್ ಗುರುತು ಪಡೆದುಕೊಂಡಿದ್ದಾರೆ. ಈ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಹಣಕಾಸಿನ ನೆರವಿನೊಂದಿಗೆ ಸೆಕೆಂಡುಗಳಲ್ಲಿ ನಾಗರಿಕರನ್ನು ತಲುಪಲು ನಮಗೆ ಸಹಾಯ ಮಾಡುತ್ತದೆ. 850 ದಶಲಕ್ಷ ಜನರು ವರ್ಷಕ್ಕೆ 3 ಬಾರಿ ತಮ್ಮ ಖಾತೆಗಳಿಗೆ ನೇರ ನಗದು ವರ್ಗಾವಣೆ ಲಾಭ ಪಡೆಯುತ್ತಿದ್ದಾರೆ. 100 ದಶಲಕ್ಷ ರೈತರು ತಮ್ಮ ಬ್ಯಾಂಕ್ ಖಾತೆಗಳಲ್ಲಿ ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ಸಹಾಯ ಪಡೆಯುತ್ತಿದ್ದಾರೆ. ಅಂತಹ ವರ್ಗಾವಣೆಗಳ ಮೌಲ್ಯವು 320 ಶತಕೋಟಿ ಡಾಲರ್‌ ದಾಟಿದೆ. ಈ ಪಾರದರ್ಶಕ ಪ್ರಕ್ರಿಯೆಯಿಂದ ನಾವು 25 ಶತಕೋಟಿ ಡಾಲರ್ ಹಣವನ್ನು ಉಳಿಸಿದ್ದೇವೆ. ನೀವು ಭಾರತಕ್ಕೆ ಭೇಟಿ ನೀಡಿದರೆ, ಬೀದಿ ವ್ಯಾಪಾರಿಗಳು ಸೇರಿದಂತೆ ಪ್ರತಿಯೊಬ್ಬರೂ ಹಣ ಪಾವತಿಗಾಗಿ ಫೋನ್‌ಗಳನ್ನು ಬಳಸುತ್ತಿರುವುದನ್ನು ನೀವು ನೋಡುತ್ತೀರಿ.

ಕಳೆದ ವರ್ಷ ವಿಶ್ವದ ಪ್ರತಿ 100 ರಿಯಲ್ ಟೈಮ್ ಡಿಜಿಟಲ್ ಪಾವತಿಗಳಲ್ಲಿ 46 ಭಾರತದಲ್ಲೇ ಸಂಭವಿಸಿದೆ. ಸುಮಾರು 4 ಲಕ್ಷ ಮೈಲುಗಳಷ್ಟು ಆಪ್ಟಿಕಲ್ ಫೈಬರ್ ಕೇಬಲ್‌ಗಳು ಮತ್ತು ಅಗ್ಗದ ದರದ ಡೇಟಾವು ಅವಕಾಶಗಳ ಕ್ರಾಂತಿಗೆ ನಾಂದಿ ಹಾಡಿದೆ. ರೈತರು ಹವಾಮಾನ ನವೀಕರಣಗಳನ್ನು ಪರಿಶೀಲಿಸುತ್ತಿದ್ದಾರೆ, ವೃದ್ಧರು ಪಿಂಚಣಿ ಮತ್ತಿತರ ಸಾಮಾಜಿಕ ಭದ್ರತೆ ಪಾವತಿಗಳನ್ನು ಪಡೆಯುತ್ತಿದ್ದಾರೆ, ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆಯುತ್ತಿದ್ದಾರೆ. ವೈದ್ಯರು ಟೆಲಿಮೆಡಿಸಿನ್ ತಲುಪಿಸುತ್ತಿದ್ದಾರೆ, ಮೀನುಗಾರರು ಮೀನುಗಾರಿಕೆಯ ಜಲಭಾಗಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಸಣ್ಣ ಉದ್ಯಮಗಳು ತಮ್ಮ ಫೋನ್‌ಗಳಿಂದಲೇ ಸಾಲ ಪಡೆಯುತ್ತಿದ್ದಾರೆ.

ಗೌರವಾನ್ವಿತ ಸ್ಪೀಕರ್,

ಪ್ರಜಾಪ್ರಭುತ್ವ, ಎಲ್ಲರ ಒಳಗೊಳ್ಳುವಿಕೆ ಮತ್ತು ಸುಸ್ಥಿರತೆಯ ಮನೋಭಾವವು ನಮ್ಮನ್ನು ವ್ಯಾಖ್ಯಾನಿಸುತ್ತದೆ. ಇದು ಜಗತ್ತಿಗೆ ನಮ್ಮ ದೃಷ್ಟಿಕೋನವನ್ನು ಸಹ ರೂಪಿಸುತ್ತದೆ. ಭಾರತವು ನಮ್ಮ ಪೃಥ್ವಿಯ ಜತೆ ಜವಾಬ್ದಾರಿಯುತವಾಗಿ ಬೆಳೆಯುತ್ತದೆ.

ಇದನ್ನು ನಾವು ನಂಬುತ್ತೇವೆ:

ಮಾತಾ ಭೂಮಿ: ಪುತ್ರೋ ಅಹಂ ಪೃಥಿವ್ಯಾ:

ಇದರ ಅರ್ಥ - "ಭೂಮಿಯು ನಮ್ಮ ತಾಯಿ ಮತ್ತು ನಾವು ಅವಳ ಮಕ್ಕಳು."

 

ಭಾರತೀಯ ಸಂಸ್ಕೃತಿಯು ಪರಿಸರ ಮತ್ತು ನಮ್ಮ ಪೃಥ್ವಿ ಗ್ರಹವನ್ನು ಅಪಾರವಾಗಿ ಗೌರವಿಸುತ್ತದೆ. ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ಜತೆಗೆ, ನಾವು ನಮ್ಮ ಸೌರ ಸಾಮರ್ಥ್ಯವನ್ನು 2,300 ಪ್ರತಿಶತದಷ್ಟು ಹೆಚ್ಚಿಸಿದ್ದೇವೆ!

ಭಾರತವುಪ್ಯಾರಿಸ್ ಬದ್ಧತೆಯನ್ನು ಪೂರೈಸಿದ ಏಕೈಕ ಜಿ-20 ದೇಶವಾಯಿತು. 2030ರ ಗುರಿಗಿಂತ 9 ವರ್ಷಗಳ ಮೊದಲೇ ನಮ್ಮ ಇಂಧನ ಮೂಲಗಳಲ್ಲಿ 40 ಪ್ರತಿಶತಕ್ಕೂ ಹೆಚ್ಚು ನವೀಕರಿಸಬಹುದಾದ ಇಂಧನ ಮೂಲಗಳನ್ನು ನಾವು ಮಾಡಿದ್ದೇವೆ. ಆದರೆ ನಾವು ಅಲ್ಲಿಗೆ ನಿಲ್ಲಲಿಲ್ಲ. ಗ್ಲಾಸ್ ಗೋ ಶೃಂಗಸಭೆಯಲ್ಲಿ ನಾನು ಮಿಷನ್ ಲೈಫ್ ಪರಿಸರಕ್ಕಾಗಿ ಜೀವನಶೈಲಿಯನ್ನು ಪ್ರಸ್ತಾಪಿಸಿದೆ. ಸುಸ್ಥಿರತೆಯನ್ನು ನಿಜವಾದ ಜನರ ಚಳುವಳಿಯನ್ನಾಗಿ ಮಾಡಲು ಇದು ಒಂದು ಮಾರ್ಗವಾಗಿದೆ. ಇದು ಕೇವಲ ಸರಕಾರಗಳ ಕೆಲಸ ಎಂದು ಬಿಡಬಾರದು.

ಆಯ್ಕೆಗಳನ್ನು ಮಾಡುವಲ್ಲಿ ಗಮನ ಹರಿಸುವ ಮೂಲಕ, ಪ್ರತಿಯೊಬ್ಬ ವ್ಯಕ್ತಿಗೂ ಸಕಾರಾತ್ಮಕ ಪರಿಣಾಮ ಬೀರಬಹುದು. ಸುಸ್ಥಿರತೆಯನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡುವುದರಿಂದ ಪ್ರಪಂಚವು ಇಂಗಾಲದ ನಿವ್ವಳ ಶೂನ್ಯ ಗುರಿಯನ್ನು ವೇಗವಾಗಿ ತಲುಪಲು ಸಹಾಯ ಮಾಡುತ್ತದೆ. ನಮ್ಮ ದೃಷ್ಟಿಕೋನವು ಪೃಥ್ವಿ ಗ್ರಹದ ಪ್ರಗತಿಯ ಪರವಾಗಿದೆ. ನಮ್ಮ ದೃಷ್ಟಿಕೋನವು ಪೃಥ್ವಿಯ ಸಮೃದ್ಧಿಯ ಪರವಾಗಿದೆ. ನಮ್ಮ ದೃಷ್ಟಿಕೋನವು ಪೃಥ್ವಿಯಲ್ಲಿರುವ ಸಕಲ ಜನರಾಶಿಯ ಪರವಾಗಿದೆ.

ಗೌರವಾನ್ವಿತ ಸ್ಪೀಕರ್,

ನಾವು ವಸುಧೈವ ಕುಟುಂಬ ಅಥವಾ ಜಗತ್ತು ಒಂದೇ ಕುಟುಂಬ ಎಂಬ ಧ್ಯೇಯವಾಕ್ಯದಿಂದ ಬದುಕುತ್ತಿದ್ದೇವೆ. ಪ್ರಪಂಚದೊಂದಿಗೆ ನಮ್ಮ ತೊಡಗಿಸಿಕೊಳ್ಳುವಿಕೆಯು ಪ್ರತಿಯೊಬ್ಬರ ಪ್ರಯೋಜನಕ್ಕಾಗಿ. "ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್" ಶುದ್ಧ ಇಂಧನದೊಂದಿಗೆ ಜಗತ್ತನ್ನು ಸಂಪರ್ಕಿಸಲು ನಮ್ಮೆಲ್ಲರನ್ನು ಸೇರಲು ಪ್ರಯತ್ನಿಸುತ್ತದೆ. "ಒಂದು ಭೂಮಿ, ಒಂದು ಆರೋಗ್ಯ" ಎಂಬುದು ಪ್ರಾಣಿಗಳು ಮತ್ತು ಸಸ್ಯಗಳು ಸೇರಿದಂತೆ ಪ್ರತಿಯೊಬ್ಬರಿಗೂ ಗುಣಮಟ್ಟದ ಆರೋಗ್ಯ ತರುವ ಜಾಗತಿಕ ಕ್ರಿಯೆಯ ದೃಷ್ಟಿಕೋನವಾಗಿದೆ.

"ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" - ನಾವು ಜಿ-20 ಅಧ್ಯಕ್ಷತೆ ವಹಿಸಿರುವಾಗ ಅದೇ ಮನೋಭಾವವನ್ನು ಘೋಷವಾಕ್ಯದಲ್ಲೂ ಕಾಣಬಹುದು. ನಾವು ಯೋಗದ ಮೂಲಕವೂ ಏಕತೆಯ ಮನೋಭಾವವನ್ನು ಮುನ್ನಡೆಸುತ್ತೇವೆ. ನಿನ್ನೆಯಷ್ಟೇ ಇಡೀ ವಿಶ್ವವೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲು ಒಗ್ಗೂಡಿತು. ಕಳೆದ ವಾರವಷ್ಟೇ ವಿಶ್ವಸಂಸ್ಥೆಯಲ್ಲಿ ಶಾಂತಿಪಾಲಕರನ್ನು ಗೌರವಿಸಲು ಸ್ಮಾರಕ ನಿರ್ಮಿಸುವ ನಮ್ಮ ಪ್ರಸ್ತಾವನೆಗೆ ಎಲ್ಲಾ ರಾಷ್ಟ್ರಗಳು ಸೇರಿಕೊಂಡವು.

ಈ ವರ್ಷ, ಸುಸ್ಥಿರ ಕೃಷಿ ಮತ್ತು ಪೋಷಣೆಯನ್ನು ಸಮಾನವಾಗಿ ಉತ್ತೇಜಿಸಲು ಇಡೀ ಜಗತ್ತು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಆಚರಿಸುತ್ತಿದೆ. ಕೋವಿಡ್ ಸಮಯದಲ್ಲಿ, ನಾವು 150ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆಗಳು ಮತ್ತು ಔಷಧಿಗಳನ್ನು ತಲುಪಿಸಿದ್ದೇವೆ. ವಿಪತ್ತುಗಳ ಸಮಯದಲ್ಲಿ ನಾವು ನಮ್ಮ ಸ್ವಂತಕ್ಕಾಗಿ ಮಾಡುವಂತೆ ಮೊದಲ ಪ್ರತಿಸ್ಪಂದಕರಾಗಿ ಇತರರನ್ನು ತಲುಪಿದ್ದೇವೆ. ನಾವು ನಮ್ಮ ಸಾಧಾರಣ ಸಂಪನ್ಮೂಲಗಳನ್ನು ಹೆಚ್ಚು ಅಗತ್ಯವಿರುವವರೊಂದಿಗೆ ಹಂಚಿಕೊಳ್ಳುತ್ತೇವೆ. ನಾವು ಸಾಮರ್ಥ್ಯಗಳನ್ನು ನಿರ್ಮಿಸುತ್ತೇವೆ, ಅವಲಂಬನೆಗಳಲ್ಲ.

ಗೌರವಾನ್ವಿತ ಸ್ಪೀಕರ್,

ಭಾರತದ ಕಾರ್ಯ ವಿಧಾನದ ಬಗ್ಗೆ ನಾನು ಇಡೀ ವಿಶ್ವಕ್ಕೆ ಮಾತನಾಡುವಾಗ, ಅಮೆರಿಕ ವಿಶೇಷ ಸ್ಥಾನ ಪಡೆದುಕೊಂಡಿದೆ. ನಿಮ್ಮೆಲ್ಲರಿಗೂ ನಮ್ಮ ಸಂಬಂಧಗಳು ಬಹಳ ಮುಖ್ಯವೆಂದು ನನಗೆ ತಿಳಿದಿದೆ. ಈ ಕಾಂಗ್ರೆಸ್‌ನ ಪ್ರತಿಯೊಬ್ಬ ಸದಸ್ಯರೂ ಅದರಲ್ಲಿ ಆಳವಾದ ಆಸಕ್ತಿ ಹೊಂದಿದ್ದಾರೆ. ಭಾರತದಲ್ಲಿ ರಕ್ಷಣಾ ಮತ್ತು ಏರೋಸ್ಪೇಸ್ ಬೆಳವಣಿಗೆಯಾದಾಗ, ವಾಷಿಂಗ್ಟನ್, ಅರಿಜೋನಾ, ಜಾರ್ಜಿಯಾ, ಅಲಬಾಮಾ, ದಕ್ಷಿಣ ಕೆರೊಲಿನಾ ಮತ್ತು ಪೆನ್ಸಿಲ್ವೇನಿಯಾ ರಾಜ್ಯಗಳಲ್ಲಿ ಕೈಗಾರಿಕೆಗಳು ಅಭಿವೃದ್ಧಿ ಹೊಂದುತ್ತವೆ. ಅಮೆರಿಕದ  ಕಂಪನಿಗಳು ಬೆಳೆದಾಗ, ಭಾರತದಲ್ಲಿ ಅವರ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಅಭಿವೃದ್ಧಿ ಹೊಂದುತ್ತವೆ. ಭಾರತೀಯರು ಹೆಚ್ಚು ಹಾರಾಟ ನಡೆಸಿದಾಗ, ವಿಮಾನಗಳಿಗಾಗಿ ಒಂದೇ ಆದೇಶವು ಅಮೆರಿಕದ 44 ರಾಜ್ಯಗಳಲ್ಲಿ ದಶಲಕ್ಷಕ್ಕಿಂತಲೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತದೆ.

ಅಮೆರಿಕದ ಫೋನ್ ತಯಾರಕರು ಭಾರತದಲ್ಲಿ ಹೂಡಿಕೆ ಮಾಡಿದಾಗ, ಅದು ಎರಡೂ ದೇಶಗಳಲ್ಲಿ ಉದ್ಯೋಗಗಳು ಮತ್ತು ಅವಕಾಶಗಳ ಸಂಪೂರ್ಣ ಪರಿಸರ ವ್ಯವಸ್ಥೆ ಸೃಷ್ಟಿಸುತ್ತದೆ. ಭಾರತ ಮತ್ತು ಅಮೆರಿಕ ಸೆಮಿಕಂಡಕ್ಟರ್ ಮತ್ತು ನಿರ್ಣಾಯಕ ಖನಿಜಗಳ ಮೇಲೆ ಒಟ್ಟಾಗಿ ಕೆಲಸ ಮಾಡಿದಾಗ, ಪೂರೈಕೆ ಸರಪಳಿಗಳನ್ನು ಹೆಚ್ಚು ವೈವಿಧ್ಯಮಯ, ಹೊಂದಾಣಿಕೆಯ ಮತ್ತು ವಿಶ್ವಾಸಾರ್ಹವಾಗಿಸಲು ಇದು ಜಗತ್ತಿಗೆ ಸಹಾಯ ಮಾಡುತ್ತದೆ. ನಿಜಕ್ಕೂ, ಗೌರವಾನ್ವಿತ ಸ್ಪೀಕರ್ ಅವರೆ, ಶತಮಾನದ ತಿರುವಿನಲ್ಲಿ ನಾವು ರಕ್ಷಣಾ ಸಹಕಾರದಲ್ಲಿ ಅಪರಿಚಿತರಾಗಿದ್ದೆವು. ಆದರೆ ಈಗ ಅಮೆರಿಕ ನಮ್ಮ ಪ್ರಮುಖ ರಕ್ಷಣಾ ಪಾಲುದಾರರಲ್ಲಿ ಒಂದಾಗಿದೆ. ಇಂದು ಭಾರತ ಮತ್ತು ಅಮೆರಿಕ ಬಾಹ್ಯಾಕಾಶದಲ್ಲಿ ಮತ್ತು ಸಮುದ್ರಗಳಲ್ಲಿ, ವಿಜ್ಞಾನದಲ್ಲಿ ಮತ್ತು ಅರೆವಾಹಕಗಳಲ್ಲಿ, ಸ್ಟಾರ್ಟಪ್‌ಗಳು ಮತ್ತು ಸುಸ್ಥಿರತೆಯಲ್ಲಿ, ತಂತ್ರಜ್ಞಾನ ಮತ್ತು ವ್ಯಾಪಾರದಲ್ಲಿ, ಕೃಷಿ ಮತ್ತು ಹಣಕಾಸು, ಕಲೆ ಮತ್ತು ಕೃತಕ ಬುದ್ಧಿಮತ್ತೆ, ಇಂಧನ ಕ್ಷೇತ್ರ, ಶಿಕ್ಷಣ, ಆರೋಗ್ಯ ಮತ್ತು ಮಾನವೀಯ ಪ್ರಯತ್ನಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ.

ನಾನು ಮುಂದೆ ಹೋಗಬಹುದು. ಆದರೆ, ಸಂಕ್ಷಿಪ್ತವಾಗಿ, ನಾನು ಹೇಳುತ್ತೇನೆ, ನಮ್ಮ ಸಹಕಾರದ ವ್ಯಾಪ್ತಿಗೆ ಅಂತ್ಯವಿಲ್ಲ, ನಮ್ಮ ಸಿನರ್ಜಿಗಳ ಸಾಮರ್ಥ್ಯವು ಅಪರಿಮಿತವಾಗಿದೆ, ಮತ್ತು ನಮ್ಮ ಸಂಬಂಧಗಳಲ್ಲಿನ ಸಮನ್ವಯವು ಶ್ರಮರಹಿತವಾಗಿದೆ.

ಈ ಎಲ್ಲದರಲ್ಲೂ ಭಾರತೀಯ ಅಮೆರಿಕನ್ನರ ಪಾತ್ರ ದೊಡ್ಡದು. ಸ್ಪೆಲಿಂಗ್ ಬೀಯಷ್ಟೇ ಅಲ್ಲ, ಎಲ್ಲ ಕ್ಷೇತ್ರದಲ್ಲೂ ಅವರು ಅದ್ಭುತ. ಅವರ ಹೃದಯ ಮತ್ತು ಮನಸ್ಸು, ಪ್ರತಿಭೆ ಮತ್ತು ಕೌಶಲ್ಯ ಮತ್ತು ಅಮೆರಿಕ ಮತ್ತು ಭಾರತದ ಮೇಲಿನ ಅವರ ಪ್ರೀತಿಯಿಂದ ಅವರು ನಮ್ಮನ್ನು ಸಂಪರ್ಕಿಸಿದ್ದಾರೆ. ಅವರು ತೆರೆದ ಬಾಗಿಲುಗಳನ್ನು ಹೊಂದಿದ್ದಾರೆ; ಅವರು ನಮ್ಮ ಪಾಲುದಾರಿಕೆಯ ಸಾಮರ್ಥ್ಯವನ್ನು ತೋರಿಸಿದ್ದಾರೆ.

ಸನ್ಮಾನ್ಯ ಸಭಾಧ್ಯಕ್ಷರೆ ಮತ್ತು ಸದಸ್ಯರೆ,

ಹಿಂದಿನ ಪ್ರತಿ ಭಾರತೀಯ ಪ್ರಧಾನಿ ಮತ್ತು ಅಮೆರಿಕದ ಅಧ್ಯಕ್ಷರು ನಮ್ಮ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ದಿದ್ದಾರೆ. ಆದರೆ ಅದನ್ನು ಎತ್ತರಕ್ಕೆ ಕೊಂಡೊಯ್ದ ಗೌರವ ನಮ್ಮ ಪೀಳಿಗೆಗೆ ಇದೆ. ಇದು ಈ ಶತಮಾನದ ನಿರ್ಣಾಯಕ ಪಾಲುದಾರಿಕೆ ಎಂದು ನಾನು ಅಧ್ಯಕ್ಷ ಬೈಡೆನ್ ಅವರೊಂದಿಗೆ ಒಪ್ಪುತ್ತೇನೆ. ಏಕೆಂದರೆ ಇದು ಒಂದು ದೊಡ್ಡ ಉದ್ದೇಶವನ್ನು ಪೂರೈಸುತ್ತದೆ. ಪ್ರಜಾಪ್ರಭುತ್ವ, ಜನಸಂಖ್ಯೆ ಮತ್ತು ಅದೃಷ್ಟ ನಮಗೆ ಆ ಉದ್ದೇಶವನ್ನು ನೀಡುತ್ತವೆ. ಜಾಗತೀಕರಣದ ಒಂದು ಪರಿಣಾಮವೆಂದರೆ ಪೂರೈಕೆ ಸರಪಳಿಗಳ ಅತಿಯಾದ ಕೇಂದ್ರೀಕರಣವಾಗಿದೆ.

ಪೂರೈಕೆ ಸರಪಳಿಗಳನ್ನು ವೈವಿಧ್ಯಗೊಳಿಸಲು, ವಿಕೇಂದ್ರೀಕರಣಗೊಳಿಸಲು ಮತ್ತು ಪ್ರಜಾಪ್ರಭುತ್ವಗೊಳಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. 21ನೇ ಶತಮಾನದಲ್ಲಿ ತಂತ್ರಜ್ಞಾನವು ಭದ್ರತೆ, ಸಮೃದ್ಧಿ ಮತ್ತು ನಾಯಕತ್ವವನ್ನು ನಿರ್ಧರಿಸುತ್ತದೆ. ಅದಕ್ಕಾಗಿಯೇ ನಮ್ಮ 2 ದೇಶಗಳು ಹೊಸ "ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗಾಗಿ ಉಪಕ್ರಮವನ್ನು" ಸ್ಥಾಪಿಸಿದವು. ನಮ್ಮ ಜ್ಞಾನ ಪಾಲುದಾರಿಕೆಯು ಮಾನವತೆಗೆ ಸೇವೆ ಸಲ್ಲಿಸುತ್ತದೆ ಮತ್ತು ಹವಾಮಾನ ಬದಲಾವಣೆ, ಹಸಿವು ಮತ್ತು ಆರೋಗ್ಯದ ಜಾಗತಿಕ ಸವಾಲುಗಳಿಗೆ ಪರಿಹಾರಗಳನ್ನು ಹುಡುಕುತ್ತದೆ.

ಗೌರವಾನ್ವಿತ ಸ್ಪೀಕರ್ ಮತ್ತು ಸದಸ್ಯರೆ,

ಕಳೆದ ಕೆಲವು ವರ್ಷಗಳಲ್ಲಿ ಆಳವಾದ ವಿಚ್ಛಿದ್ರಕಾರಕ ಬೆಳವಣಿಗೆಗಳನ್ನು ಕಂಡಿದ್ದೇವೆ.  ಉಕ್ರೇನ್ ಸಂಘರ್ಷದೊಂದಿಗೆ ಯುದ್ಧವು ಯುರೋಪ್ ಗೆ ಮುಟ್ಟಿದೆ. ಇದು ಪ್ರದೇಶದಲ್ಲಿ ತೀವ್ರ ನೋವು ಉಂಟುಮಾಡುತ್ತದೆ. ಇದು ಪ್ರಮುಖ ಶಕ್ತಿಗಳನ್ನು ಒಳಗೊಂಡಿರುವುದರಿಂದ ಫಲಿತಾಂಶಗಳು ತೀವ್ರವಾಗಿರುತ್ತವೆ. ಜಾಗತಿಕ ದಕ್ಷಿಣದ ದೇಶಗಳು ವಿಶೇಷವಾಗಿ ಪ್ರಭಾವಿತವಾಗಿವೆ. ಜಾಗತಿಕ ಕ್ರಮವು ವಿಶ್ವಸಂಸ್ಥೆಯ ನಾಗರೀಕ ಸನ್ನದು ತತ್ವಗಳಿಗೆ ಗೌರವ, ವಿವಾದಗಳ ಶಾಂತಿಯುತ ಪರಿಹಾರ ಮತ್ತು ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವವನ್ನು ಆಧರಿಸಿದೆ.

ನಾನು ನೇರವಾಗಿ ಮತ್ತು ಸಾರ್ವಜನಿಕವಾಗಿ ಹೇಳಿದಂತೆ, ಇದು ಯುದ್ಧದ ಯುಗವಲ್ಲ. ಆದರೆ, ಇದು ಸಂಭಾಷಣೆ ಮತ್ತು ರಾಜತಾಂತ್ರಿಕತೆಯ ಕಾಲ. ರಕ್ತಪಾತ ಮತ್ತು ಮಾನವ ಸಂಕಟವನ್ನು ನಿಲ್ಲಿಸಲು ನಾವೆಲ್ಲರೂ ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡಬೇಕು. ಬಲಾತ್ಕಾರ ಮತ್ತು ಮುಖಾಮುಖಿಯ ಕರಾಳ ಮೋಡಗಳು ಇಂಡೋ ಪೆಸಿಫಿಕ್ ವಲಯದಲ್ಲಿ ತಮ್ಮ ಕರಿನೆರಳು ಬಿತ್ತರಿಸುತ್ತಿವೆ. ಈ ಪ್ರದೇಶದ ಸ್ಥಿರತೆ ನಮ್ಮ ಪಾಲುದಾರಿಕೆಯ ಪ್ರಮುಖ ಕಾಳಜಿಗಳಲ್ಲಿ ಒಂದಾಗಿದೆ.

ನಾವು ಮುಕ್ತ, ತೆರೆದ ಮತ್ತು ಎಲ್ಲರನ್ನೂ ಒಳಗೊಂಡ ಇಂಡೋ-ಪೆಸಿಫಿಕ್‌ ದೃಷ್ಟಿಕೋನ ಹಂಚಿಕೊಳ್ಳುತ್ತೇವೆ, ಸುರಕ್ಷಿತ ಸಮುದ್ರಗಳ ಸಂಪರ್ಕ ಹೊಂದಿದ್ದೇವೆ, ಅವುಗಳನ್ನು ಅಂತಾರಾಷ್ಟ್ರೀಯ ಕಾನೂನಿನಿಂದ ವ್ಯಾಖ್ಯಾನಿಸಲಾಗಿದೆ, ಪ್ರಾಬಲ್ಯದಿಂದ ಮುಕ್ತವಾಗಿವೆ. ಆದರೆ ಆಸಿಯಾನ್ ಕೇಂದ್ರೀಯತೆಯಲ್ಲಿ ಲಂಗರು ಹಾಕಲಾಗಿದೆ. ಸಣ್ಣ ಮತ್ತು ದೊಡ್ಡ ಎಲ್ಲಾ ರಾಷ್ಟ್ರಗಳು ತಮ್ಮ ಆಯ್ಕೆಗಳಲ್ಲಿ ಮುಕ್ತ ಮತ್ತು ನಿರ್ಭೀತರಾಗಿರುವ ಪ್ರದೇಶ ಅದಾಗಿದೆ.

ಶಾಂತಿ ಮತ್ತು ಸಮೃದ್ಧಿಯ ಸಹಕಾರ ಪ್ರದೇಶವನ್ನು ನಿರ್ಮಿಸಲು. ನಾವು ಪ್ರಾದೇಶಿಕ ಸಂಸ್ಥೆಗಳ ಮೂಲಕ ಮತ್ತು ಪ್ರದೇಶದ ಒಳಗೆ ಮತ್ತು ಹೊರಗಿನ ನಮ್ಮ ಪಾಲುದಾರರೊಂದಿಗೆ ಕೆಲಸ ಮಾಡುತ್ತೇವೆ. ಇದರಲ್ಲಿ ಕ್ವಾಡ್ ಪ್ರದೇಶ ಉತ್ತಮ ಶಕ್ತಿಯಾಗಿ ಹೊರಹೊಮ್ಮಿದೆ.

ಗೌರವಾನ್ವಿತ ಸ್ಪೀಕರ್,

ಮುಂಬೈನ 9/11 ದುರ್ಘಟನೆ ಮತ್ತು 26/11 ದುರ್ಘಟನೆ ನಂತರ ಭಯೋತ್ಪಾದನೆ ಇನ್ನೂ ಇಡೀ ಜಗತ್ತಿಗೆ ಅಪಾಯವಾಗಿ ಉಳಿದಿದೆ. ಈ ಸಿದ್ಧಾಂತಗಳು ಹೊಸ ಗುರುತುಗಳು ಮತ್ತು ರೂಪಗಳನ್ನು ತೆಗೆದುಕೊಳ್ಳುತ್ತಲೇ ಇರುತ್ತವೆ, ಆದರೆ ಅವುಗಳ ಉದ್ದೇಶಗಳು ಒಂದೇ ಆಗಿರುತ್ತವೆ. ಭಯೋತ್ಪಾದನೆಯು ಮಾನವತೆಯ ಶತ್ರುವಾಗಿದೆ. ಭಯೋತ್ಪಾದನೆಯನ್ನು ಪ್ರಾಯೋಜಿಸುವ ಮತ್ತು ರಫ್ತು ಮಾಡುವ ಎಲ್ಲಾ ಶಕ್ತಿಗಳನ್ನು ನಾವು ಜಯಿಸಬೇಕು.

ಗೌರವಾನ್ವಿತ ಸ್ಪೀಕರ್,

ಕೋವಿಡ್-19ರ ದೊಡ್ಡ ಪರಿಣಾಮವೆಂದರೆ ಅದರಿಂದಾದ ಮಾನವ ನಷ್ಟ ಮತ್ತು ಸಂಕಟ. ಕೋವಿಡ್‌ನಿಂದ ಪ್ರಾಣ ಕಳೆದುಕೊಂಡ ಕಾಂಗ್ರೆಸ್ಸಿಗ, ರಾನ್ ರೈಟ್ ಮತ್ತು ಸಿಬ್ಬಂದಿಯನ್ನು ಸ್ಮರಿಸಲು ನಾನು ಬಯಸುತ್ತೇನೆ. ನಾವು ಸಾಂಕ್ರಾಮಿಕ ರೋಗದಿಂದ ಹೊರಬಂದಂತೆ, ನಾವು ಹೊಸ ವಿಶ್ವ ಕ್ರಮಕ್ಕೆ ಆಕಾರ ನೀಡಬೇಕು. ಪರಿಗಣನೆ ಮತ್ತು ಕಾಳಜಿ ಈ ಸಮಯದ ಅಗತ್ಯವಾಗಿದೆ. ಜಾಗತಿಕ ದಕ್ಷಿಣ ಭಾಗಕ್ಕೆ ಧ್ವನಿ ನೀಡುವುದು ಮುಂದಿನ ದಾರಿ. ಅದಕ್ಕಾಗಿಯೇ ಆಫ್ರಿಕಾ ಒಕ್ಕೂಟಕ್ಕೆ ಜಿ-20 ಪೂರ್ಣ ಸದಸ್ಯತ್ವ ನೀಡುವುದು ಅಗತ್ಯ ಎಂದು ನಾನು ದೃಢವಾಗಿ ನಂಬುತ್ತೇನೆ.

ನಾವು ಬಹುಪಕ್ಷೀಯತೆಯನ್ನು ಪುನರುಜ್ಜೀವನಗೊಳಿಸಬೇಕು. ಉತ್ತಮ ಸಂಪನ್ಮೂಲಗಳು ಮತ್ತು ಪ್ರಾತಿನಿಧ್ಯದೊಂದಿಗೆ ಬಹುಪಕ್ಷೀಯ ಸಂಸ್ಥೆಗಳನ್ನು ಸುಧಾರಿಸಬೇಕು. ಅದು ನಮ್ಮ ಎಲ್ಲಾ ಜಾಗತಿಕ ಆಡಳಿತ ಸಂಸ್ಥೆಗಳಿಗೆ, ವಿಶೇಷವಾಗಿ ವಿಶ್ವಸಂಸ್ಥೆಗೆ ಅನ್ವಯಿಸುತ್ತದೆ. ಜಗತ್ತು ಬದಲಾದಾಗ ನಮ್ಮ ಸಂಸ್ಥೆಗಳೂ ಬದಲಾಗಬೇಕು. ಅಂತಾರಾಷ್ಟ್ರೀಯ ಕಾನೂನಿನ ಆಧಾರದ ಮೇಲೆ ಹೊಸ ವಿಶ್ವ ಕ್ರಮಕ್ಕಾಗಿ ಕೆಲಸ ಮಾಡುವಲ್ಲಿ, ನಮ್ಮ 2 ದೇಶಗಳು ಪಾಲುದಾರರಾಗಿ ಮುಂಚೂಣಿಯಲ್ಲಿರುತ್ತವೆ.

ಗೌರವಾನ್ವಿತ ಸ್ಪೀಕರ್ ಮತ್ತು ಸದಸ್ಯರೆ,

ಇಂದು, ನಾವು ನಮ್ಮ ಸಂಬಂಧದಲ್ಲಿ ಹೊಸ ಎತ್ತರದಲ್ಲಿ ನಿಂತಿದ್ದೇವೆ. ಅದು ನಮ್ಮ 2 ರಾಷ್ಟ್ರಗಳ ಭವಿಷ್ಯವನ್ನು ಮಾತ್ರವಲ್ಲದೆ, ಪ್ರಪಂಚದ ಭವಿಷ್ಯವನ್ನು ರೂಪಿಸುತ್ತದೆ. ಯುವ ಅಮೆರಿಕ ಕವಿ ಅಮಂಡಾ ಗೋರ್ಮನ್ ವ್ಯಕ್ತಪಡಿಸಿದಂತೆ:

"ದಿನ ಬಂದಾಗ ನಾವು ನೆರಳಿನಿಂದ ಹೊರಬರುತ್ತೇವೆ,

ಉರಿಯುತ್ತಿರುವ ಮತ್ತು ಭಯಪಡದ,

ನಾವು ಅದನ್ನು ಮುಕ್ತಗೊಳಿಸಿದಾಗ ಹೊಸ ಉದಯವು ಅರಳುತ್ತದೆ.

ಏಕೆಂದರೆ ಯಾವಾಗಲೂ ಬೆಳಕು ಇರುತ್ತದೆ,

ನಾವು ಅದನ್ನು ನೋಡುವಷ್ಟು ಧೈರ್ಯವಂತರಾಗಿದ್ದರೆ ಮಾತ್ರ."

ನಮ್ಮ ವಿಶ್ವಾಸಾರ್ಹ ಪಾಲುದಾರಿಕೆಯು ಈ ಹೊಸ ಉದಯದಲ್ಲಿ ಸೂರ್ಯನಂತಿದ್ದು ಅದು ಸುತ್ತಲೂ ಬೆಳಕು ಹರಡುತ್ತದೆ.

 

ನಾನು ಒಮ್ಮೆ ಬರೆದ ಕವಿತೆ ನೆನಪಿಗೆ ಬರುತ್ತದೆ:

ಸೂರ್ಯ ಈಗಷ್ಟೇ ಉದಯಿಸಿದ. ಆಕಾಶದಲ್ಲಿ ತಲೆ ಎತ್ತಿ,

ದಟ್ಟವಾದ ಮೋಡಗಳ ಮೂಲಕ ಚುಚ್ಚುತ್ತಾ,

ಬೆಳಕಿನ ಭರವಸೆಯೊಂದಿಗೆ,

ಸೂರ್ಯ ಈಗಷ್ಟೇ ಉದಯಿಸಿದ.

ಆಳವಾದ ಸಂಕಲ್ಪದೊಂದಿಗೆ ಶಸ್ತ್ರಸಜ್ಜಿತ,

ಎಲ್ಲಾ ವಿಲಕ್ಷಣಗಳನ್ನು ಮೀರಿ,

ಕತ್ತಲೆಯ ಶಕ್ತಿಗಳನ್ನು ಹೋಗಲಾಡಿಸಲು,

ಸೂರ್ಯ ಈಗಷ್ಟೇ ಉದಯಿಸಿದ.

ಗೌರವಾನ್ವಿತ ಸ್ಪೀಕರ್ ಮತ್ತು ಸದಸ್ಯರೆ,

ನಾವು ವಿಭಿನ್ನ ಸನ್ನಿವೇಶಗಳು ಮತ್ತು ಇತಿಹಾಸದಿಂದ ಬಂದಿದ್ದೇವೆ, ಆದರೆ ನಾವು ಸಾಮಾನ್ಯ ದೃಷ್ಟಿಕೋನದಿಂದ ಒಂದಾಗಿದ್ದೇವೆ. ಮತ್ತು ಒಂದು ಸಾಮಾನ್ಯ ವಿಧಿಯ ಮೂಲಕ. ನಮ್ಮ ಪಾಲುದಾರಿಕೆಯು ಮುಂದುವರಿದಾಗ, ಆರ್ಥಿಕ ಚೇತರಿಕೆ ಹೆಚ್ಚಾಗುತ್ತದೆ, ನಾವೀನ್ಯತೆ ಬೆಳೆಯುತ್ತದೆ, ವಿಜ್ಞಾನವು ಪ್ರವರ್ಧಮಾನಕ್ಕೆ ಬರುತ್ತದೆ, ಜ್ಞಾನದ ಪ್ರಗತಿಗಳು, ಮಾನವೀಯತೆಯ ಪ್ರಯೋಜನಗಳು, ನಮ್ಮ ಸಮುದ್ರಗಳು ಮತ್ತು ಆಕಾಶಗಳು ಸುರಕ್ಷಿತವಾಗಿರುತ್ತವೆ, ಪ್ರಜಾಪ್ರಭುತ್ವವು ಪ್ರಕಾಶಮಾನವಾಗಿ ಹೊಳೆಯುತ್ತದೆ, ಜಗತ್ತು ಉತ್ತಮ ಸ್ಥಳವಾಗಿರುತ್ತದೆ.ಅದು ನಮ್ಮ ಪಾಲುದಾರಿಕೆಯ ಧ್ಯೇಯವಾಗಿದೆ. ಅದು ಈ ಶತಮಾನದ ನಮ್ಮ ಕರೆ.

ಗೌರವಾನ್ವಿತ ಸ್ಪೀಕರ್ ಮತ್ತು ಸದಸ್ಯರೆ,

ನಮ್ಮ ಪಾಲುದಾರಿಕೆಯ ಉನ್ನತ ಗುಣಮಟ್ಟದಿಂದ ಕೂಡಿದೆ, ಈ ಭೇಟಿಯು ಉತ್ತಮ ಸಕಾರಾತ್ಮಕ ರೂಪಾಂತರವಾಗಿದೆ. ಒಟ್ಟಾಗಿ, ಪ್ರಜಾಪ್ರಭುತ್ವಗಳು ಮುಖ್ಯವೆಂದು ನಾವು ಸಾರುತ್ತೇವೆ. ಭಾರತ-ಅಮೆರಿಕ ಪಾಲುದಾರಿಕೆಗೆ ನಿಮ್ಮ ನಿರಂತರ ಬೆಂಬಲವನ್ನು ನಾನು ನಿರೀಕ್ಷಿಸುತ್ತೇನೆ.

2016ರಲ್ಲಿ ನಾನು ಇಲ್ಲಿದ್ದಾಗ, "ನಮ್ಮ ಸಂಬಂಧವು ಮಹತ್ವದ ಭವಿಷ್ಯಕ್ಕಾಗಿ ಪ್ರಧಾನವಾಗಿದೆ" ಎಂದು ಹೇಳಿದ್ದೆ. ಆ ಭವಿಷ್ಯವು ಇಂದು ಸಾಕಾರಗೊಂಡಿದೆ. ಈ ಗೌರವಕ್ಕಾಗಿ ಮತ್ತೊಮ್ಮೆ ಗೌರವಾನ್ವಿತ ಸ್ಪೀಕರ್, ಉಪಾಧ್ಯಕ್ಷರು ಮತ್ತು ಗೌರವಾನ್ವಿತ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ..

ದೇವರು ಅಮೆರಿಕವನ್ನು ಉತ್ತಮವಾಗಿ ಇಟ್ಟಿರಲಿ.

ಜೈ ಹಿಂದ್.

ಭಾರತ-ಅಮೆರಿಕ ಸ್ನೇಹ ಚಿರಾಯುವಾಗಲಿ.

 

*****

 



(Release ID: 1934738) Visitor Counter : 139