ಸಂಸದೀಯ ವ್ಯವಹಾರಗಳ ಸಚಿವಾಲಯ
ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿಯವರ ನೇತೃತ್ವದ ಭಾರತೀಯ ಸಂಸದೀಯ ಸದ್ಭಾವನಾ ನಿಯೋಗವು ಉರುಗ್ವೆಗೆ ಭೇಟಿ ನೀಡಿದೆ
Posted On:
17 JUN 2023 9:09AM by PIB Bengaluru
ಓರಿಯಂಟಲ್ ರಿಪಬ್ಲಿಕ್ ಆಫ್ ಉರುಗ್ವೆಯ ಸಂಸತ್ತಿನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ (ಕೆಳಮನೆಯ) ಅಧ್ಯಕ್ಷರ ಆಹ್ವಾನದ ಮೇರೆಗೆ, ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿಯವರು ಈ ಎರಡೂ ಪ್ರಜಾಪ್ರಭುತ್ವಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಉದ್ದೇಶದಿಂದ 2023ರ ಜೂನ್ 14ರಿಂದ ಜೂನ್ 17ರವರೆಗೆ ಹತ್ತು ಸದಸ್ಯರ ಸಂಸದೀಯ ಸದ್ಭಾವನಾ ನಿಯೋಗದ ಜೊತೆ ಉರುಗ್ವೆಗೆ ಭೇಟಿ ನೀಡಿದರು.
ಈ ಬಹುಪಕ್ಷೀಯ ನಿಯೋಗವು ಎರಡೂ ಸದನಗಳಿಂದ ಒಂಬತ್ತು ಸಂಸತ್ ಸದಸ್ಯರನ್ನು ಹೊಂದಿತ್ತು. ಲೋಕಸಭೆಯಿಂದ ಆರು ಮಂದಿ, ಶ್ರೀ ಸಂಜಯ್ ಸೇಠ್, ಶ್ರೀಮತಿ ಗೋಮತಿ ಸಾಯಿ, ಶ್ರೀ ಹೇಮಂತ್ ಪಾಟೀಲ್, ಶ್ರೀ ಸಿ.ಎನ್ ಅಣ್ಣಾದೊರೈ, ಡಾ ಗುರುಮೂರ್ತಿ ಮದ್ದಿಲ, ಶ್ರೀಮತಿ ಚಂದ್ರಾಣಿ ಮುರ್ಮು. ರಾಜ್ಯಸಭೆಯಿಂದ ಶ್ರೀಮತಿ ಇಂದು ಬಾಲ ಗೋಸ್ವಾಮಿ, ಶ್ರೀ ದಿನೇಶ್ಚಂದ್ರ ಅನವಾಡಿಯಾ ಮತ್ತು ಶ್ರೀ ನೀರಜ್ ಡಾಂಗಿ. ಸಂಸದೀಯ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯವರಾದ ಶ್ರೀ ಜಿ. ಶ್ರೀನಿವಾಸ್ ಅವರೂ ಈ ನಿಯೋಗದಲ್ಲಿದ್ದರು. ಜೂನ್ 14ರಂದು ಅರ್ಜೆಂಟೀನಾ ಮತ್ತು ಉರುಗ್ವೆಯ ಭಾರತದ ರಾಯಭಾರಿ ಶ್ರೀ ದಿನೇಶ್ ಭಾಟಿಯಾ ಅವರು ನಿಯೋಗವನ್ನು ಸ್ವಾಗತಿಸಿ, ದೇಶದ ಬಗ್ಗೆ ಮತ್ತು ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಗಳ ಹೆಚ್ಚುತ್ತಿರುವ ಪ್ರಾಮುಖ್ಯತೆಯ ಬಗ್ಗೆ ನಿಯೋಗಕ್ಕೆ ವಿವರಣೆ ನೀಡಿದರು.
ಈ ಹಿಂದೆ, ಭಾರತದ ಸಂಸದೀಯ ನಿಯೋಗವು 2012ರಲ್ಲಿ ಆಗಿನ ಲೋಕಸಭಾ ಸ್ಪೀಕರ್ ರವರ ನೇತೃತ್ವದಲ್ಲಿ ಉರುಗ್ವೆಗೆ ಭೇಟಿ ನೀಡಿತ್ತು. ಮಾರ್ಚ್ 2023ರಲ್ಲಿ ನವದೆಹಲಿಯಲ್ಲಿ ನಡೆದ ಉಭಯ ದೇಶಗಳ ವಿದೇಶಾಂಗ ಕಚೇರಿ ಸಮಾಲೋಚನೆಗಳ ನಂತರ, ಉರುಗ್ವೆಗೆ ಭೇಟಿ ನೀಡಲಾಯಿತು.
ಭೇಟಿಯು ಅಧಿಕೃತವಾಗಿ ಜೂನ್ 15ರಂದು ಉರುಗ್ವೆಯ ರಾಜಧಾನಿ ಮಾಂಟೆವಿಡಿಯೊದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ನಿಯೋಗದ ಸದಸ್ಯರೊಂದಿಗೆ ಪ್ರಾರಂಭವಾಯಿತು. ವಾಸ್ತವವಾಗಿ, ಪ್ರತಿಮೆಯ ಬಳಿಯ, ರಾಂಬ್ಲಾದ ಒಂದು ಭಾಗವಾದ, ರಾಜಧಾನಿಯ ಕರಾವಳಿ ರಸ್ತೆಗೆ ಮಹಾತ್ಮ ಗಾಂಧಿಯವರ ಹೆಸರನ್ನು ನೀಡಲಾಗಿದೆ.
ಜೂನ್ 15ರಂದು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ ಅಧ್ಯಕ್ಷರಾದ ಶ್ರೀ ಸೆಬಾಸ್ಟಿಯನ್ ಅಂಡುಜಾರ್ ಅವರು ನಿಯೋಗವನ್ನು ಸ್ವಾಗತಿಸಿದರು. ಉರುಗ್ವೆಯ ಸಂಸತ್ತಿನ ಉಭಯ ಸದನಗಳ ಸದಸ್ಯರ ಸಹ ನಿಯೋಗ ಮಟ್ಟದ ಮಾತುಕತೆಗಳ ನಂತರ, ಸಚಿವ ಶ್ರೀ ಜೋಶಿ ಮತ್ತು ಶ್ರೀ ಅಂಡುಜಾರ್ ಅವರು ಉರುಗ್ವೆಯ ಸಂಸತ್ತಿನಲ್ಲಿ ಭಾರತ-ಉರುಗ್ವೆ ಸಂಸದೀಯ ಸ್ನೇಹಪರ ಗುಂಪನ್ನು ಉದ್ಘಾಟಿಸಿದರು. ಅವರ ಚರ್ಚೆಗಳು ದ್ವಿಪಕ್ಷೀಯ ಸಂಬಂಧಗಳನ್ನು ಸಂಸದೀಯ ರಾಜತಾಂತ್ರಿಕತೆಯ ಮೂಲಕ ಗಟ್ಟಿಗೊಳಿಸುವತ್ತ ಕೇಂದ್ರೀಕೃತವಾಗಿದ್ದವು.
ಸಂಸದೀಯ ನಿಯೋಗದೊಂದಿಗೆ ಭಾರತಕ್ಕೆ ಭೇಟಿ ನೀಡುವಂತೆ ಸಚಿವ ಶ್ರೀ ಅಂಡೂಜರ್ ಅವರನ್ನು ಸಚಿವರಾದ ಶ್ರೀ ಜೋಶಿಯವರು ಆಹ್ವಾನಿಸಿದರು. ಈ ಆಹ್ವಾನವನ್ನು ಶ್ರೀ ಅಂಡೂಜರ್ ಅವರು ಸ್ವೀಕರಿಸಿದ್ದಾರೆ. ಉರುಗ್ವೆಯ ಸಂಸದರ ಪರಸ್ಪರ ಭೇಟಿ, 2023 ಕೊನೆಗೊಳ್ಳುವ ಮೊದಲು ನಡೆಯಲಿದೆ ಎಂದು ತಿಳಿಸಲಾಯಿತು. ದಿನಾಂಕಗಳನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಅಂತಿಮಗೊಳಿಸಿ ತಿಳಿಯಪಡಿಸಲಾಗುವುದು.
ಸಚಿವರ ನಿಯೋಗವು, ರಾಯಭಾರಿ ಭಾಟಿಯಾ ಅವರೊಂದಿಗೆ ಉರುಗ್ವೆಯ ಮೊದಲ ಮಹಿಳಾ ಉಪಾಧ್ಯಕ್ಷೆ ಮತ್ತು ಸೆನೆಟ್, ಮೇಲ್ಮನೆಯ ಅಧ್ಯಕ್ಷೆ ಶ್ರೀಮತಿ ಬೀಟ್ರಿಜ್ ಅರ್ಗಿಮೊನ್ ಅವರನ್ನು ಭೇಟಿಯಾದರು. ಶ್ರೀಮತಿ ಬೀಟ್ರಿಜ್ ಅರ್ಗಿಮೊನ್ ಅವರು ಅಧ್ಯಕ್ಷ ಲೂಯಿಸ್ ಲಕಾಲೆ ಪೌರವರು ಹೊರದೇಶ ಪ್ರವಾಸದಲ್ಲಿದ್ದಾಗ ಉರುಗ್ವೆ ಗಣರಾಜ್ಯದ ಹಂಗಾಮಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ಈ ನಿಯೋಗವನ್ನು ಸ್ವಾಗತಿಸುತ್ತಾ, ಶ್ರೀಮತಿ ಬೀಟ್ರಿಜ್ ಅರ್ಗಿಮೊನ್ ಅವರು ಕೆಲವು ವರ್ಷಗಳ ಹಿಂದೆ ತಮ್ಮ ಭಾರತದ ಫಲಪ್ರದ ಮತ್ತು ಅವಿಸ್ಮರಣೀಯ ಭೇಟಿಯನ್ನು ನೆನಪಿಸಿಕೊಂಡರು. ಉಭಯ ಪ್ರಜಾಪ್ರಭುತ್ವಗಳ ನಡುವಿನ ಸಂಬಂಧಗಳನ್ನು ವಿಸ್ತರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಉಭಯ ಸಭೆಗಳಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸರ್ಕಾರ ಕೈಗೊಂಡ ವಿವಿಧ ನೀತಿ ಉಪಕ್ರಮಗಳಿಂದಾಗಿ ಭಾರತದ ಕ್ಷಿಪ್ರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಬಗ್ಗೆ ಸಚಿವ ಶ್ರೀ ಜೋಶಿಯವರು ಉಲ್ಲೇಖಿಸಿದರು.
ಉರುಗ್ವೆಯಲ್ಲಿ ನೆಲೆಸಿರುವ ಭಾರತೀಯರ ಸಂಘವಾದ ಇಂಡಿಯನ್ ಕಲ್ಚರಲ್ ಅಸೋಸಿಯೇಷನ್ ಆಫ್ ಉರುಗ್ವೆಯು ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾರತದ ನಿಯೋಗವು ಭಾಗವಹಿಸಿತು. ಸ್ಥಳೀಯ ಉರುಗ್ವೆಯ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಧ್ಯಾನದ ಅಧಿವೇಶನದ ಜೊತೆಗೆ, ಉರುಗ್ವೆಯ ಸ್ಥಳೀಯ ಕಲಾವಿದರಿಂದ ಶಾಸ್ತ್ರೀಯ ಒಡಿಸ್ಸಿ ನೃತ್ಯ ಪ್ರದರ್ಶನವನ್ನೂ ನೀಡಲಾಯಿತು. ಉರುಗ್ವೆಯಲ್ಲಿ ಭಾರತೀಯ ಸಂಸ್ಕೃತಿ, ತತ್ವಶಾಸ್ತ್ರ, ಆಧ್ಯಾತ್ಮಿಕತೆ, ಯೋಗ ಮತ್ತು ಧ್ಯಾನದ ಬಗ್ಗೆ ವ್ಯಾಪಕ ಮೆಚ್ಚುಗೆ ಇದ್ದು, ವಿವಿಧ ಭಾರತೀಯ ಯೋಗ ಮತ್ತು ಆಧ್ಯಾತ್ಮಿಕ ಸಂಸ್ಥೆಗಳ ಸಾವಿರಾರು ಅನುಯಾಯಿಗಳು ಉರುಗ್ವೆಯಲ್ಲಿ ನೆಲೆಸಿದ್ದಾರೆ.
ಸಚಿವರನ್ನೊಳಗೊಂಡ ನಿಯೋಗವು ಮಾಂಟೆವೀಡಿಯೊದಲ್ಲಿ ಭಾರತೀಯ ಸಮುದಾಯ ಮತ್ತು ಸ್ನೇಹಪರ ಭಾರತೀಯರೊಂದಿಗೆ ಸಂವಾದ ನಡೆಸುವ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. ಉರುಗ್ವೆಯಲ್ಲಿ 800ಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ.
ಉರುಗ್ವೆ ಸರ್ಕಾರೀ ಸ್ವಾಮ್ಯದ ರಫ್ತು, ಹೂಡಿಕೆಗಳು ಮತ್ತು ದೇಶದ ಚಿತ್ರಣವನ್ನು ಉತ್ತೇಜಿಸುವ ಜವಾಬ್ದಾರಿಯನ್ನು ಹೊತ್ತ ಉರುಗ್ವೆ XXI, ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ ಮತ್ತು ಆರ್ಥಿಕ ಸಂಬಂಧಗಳನ್ನು ಉತ್ತೇಜಿಸುವ ಉದ್ದೇಶದಿಂದ ಜೂನ್ 16ರಂದು ಭಾರತೀಯ ನಿಯೋಗಕ್ಕೆ ತನ್ನ ಪ್ರಸ್ತುತಿಯನ್ನು ನೀಡಿತು. ಭಾರತೀಯ ನಿಯೋಗವು ಉರುಗ್ವೆಯಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕಛೇರಿಗೆ ಭೇಟಿ ನೀಡಿತು. ಈ ಕಛೇರಿಯು 2022ರಲ್ಲಿ ತನ್ನ ಕಾರ್ಯಾಚರಣೆಯ 20 ವರ್ಷಗಳನ್ನು ಪೂರ್ಣಗೊಳಿಸಿತು. ಪ್ರಸ್ತುತ, ಟಿಸಿಎಸ್ ಉರುಗ್ವೆ ದೇಶದಲ್ಲಿ ಮಾನವಶಕ್ತಿಯ ಅತಿದೊಡ್ಡ ಖಾಸಗಿ ವಲಯದ ಉದ್ಯೋಗದಾತ ಸಂಸ್ಥೆಯಾಗಿದೆ.
ಒಂದೆಡೆ, ಭಾರತ ಮತ್ತು ಉರುಗ್ವೆ 2020ರಲ್ಲಿ 60 ವರ್ಷಗಳ ರಾಜತಾಂತ್ರಿಕ ಸಂಬಂಧಗಳನ್ನು ಆಚರಿಸಿದರೆ, ಮತ್ತೊಂದೆಡೆ, ದ್ವಿಪಕ್ಷೀಯ ವ್ಯಾಪಾರವು ಕಳೆದ ಕೆಲವು ವರ್ಷಗಳಲ್ಲಿ ದೃಢವಾದ ಬೆಳವಣಿಗೆಯನ್ನು ಕಂಡಿದೆ. ಈ ದ್ವಿಪಕ್ಷೀಯ ವ್ಯಾಪಾರವು 2022-23ರಲ್ಲಿ 350 ಮಿಲಿಯನ್ ಡಾಲರ್ ಗಿಂತ ಹೆಚ್ಚು ವಹಿವಾಟನ್ನು ದಾಖಲಿಸಿದೆ. ಉಭಯ ಪ್ರಜಾಪ್ರಭುತ್ವ ರಾಷ್ಟ್ರಗಳು ವ್ಯಾಪಾರ ಮತ್ತು ಹೂಡಿಕೆಗಳನ್ನು ಉತ್ತೇಜಿಸಲು ಬದ್ಧವಾಗಿವೆ.
ಕಾರ್ಯದರ್ಶಿ ಜಿ. ಶ್ರೀನಿವಾಸ್ ಅವರು ಮಾತನಾಡಿ, ದೂರದ ಮತ್ತು ಸ್ನೇಹಪರ ದೇಶದಲ್ಲಿ ಆರ್ಥಿಕ ಪ್ರಾಬಲ್ಯದ ಜೊತೆಗೆ ಭಾರತೀಯ ವೈವಿಧ್ಯತೆ ಮತ್ತು ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವ ಈ ಭೇಟಿಯು ಭಾರಿ ಯಶಸ್ವಿಯಾಗಿದೆ ಎಂದು ಬಣ್ಣಿಸಿದರು. ಸ್ವತಃ ಸಚಿವರ ನೇತೃತ್ವದ ಸದ್ಭಾವನಾ ನಿಯೋಗದ ಭೇಟಿಯು ಲ್ಯಾಟಿನ್ ಅಮೆರಿಕನ್ ಪ್ರದೇಶ ಹಾಗೂ ಉರುಗ್ವೆಗೆ ವಾಡಿಕೆಯ ವ್ಯವಹಾರದ ಭೇಟಿಯಲ್ಲ ಎಂದು ರಾಯಭಾರಿ ಭಾಟಿಯಾರವರು ತಿಳಿಸಿದ್ದಾರೆ. ದ್ವಿಪಕ್ಷೀಯ ಸಂಬಂಧಗಳನ್ನು ಉತ್ತಮಗೊಳಿಸಲು, ಇಂತಹ ಉಭಯ ಪಕ್ಷಗಳ ಇನ್ನೂ ಹೆಚ್ಚಿನ ಭೇಟಿಗಳನ್ನು ಅವರು ನಿರೀಕ್ಷಿಸುವುದಾಗಿ ತಿಳಿಸಿದರು.
****
(Release ID: 1933109)