ಪ್ರಧಾನ ಮಂತ್ರಿಯವರ ಕಛೇರಿ

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಸಮುದಾಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ

Posted On: 23 MAY 2023 8:49PM by PIB Bengaluru

ನಮಸ್ತೆ ಆಸ್ಟ್ರೇಲಿಯಾ!

ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಮತ್ತು ನನ್ನ ಆತ್ಮೀಯ ಸ್ನೇಹಿತರಾದ ಗೌರವಾನ್ವಿತ ಆಂಥೋನಿ ಅಲ್ಬನೀಸ್ ಅವರೇ, ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಘನತೆವೆತ್ತ ಸ್ಕಾಟ್ ಮಾರಿಸನ್ ಅವರೇ, ನ್ಯೂ ಸೌತ್ ವೇಲ್ಸ್ ಪ್ರಧಾನಿ ಕ್ರಿಸ್ ಮಿನ್ಸ್ ಅವರೇ, ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರೇ, ಸಂವಹನ ಸಚಿವ ಮಿಚೆಲ್ ರೋಲ್ಯಾಂಡ್ ಅವರೇ, ಇಂಧನ ಸಚಿವರಾದ ಕ್ರಿಸ್ ಬೋವೆನ್ ಅವರೇ, ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್ ಅವರೇ, ಸಹಾಯಕ ವಿದೇಶಾಂಗ ಸಚಿವ ಟಿಮ್ ವ್ಯಾಟ್ಸ್ ಅವರೇ, ಇಲ್ಲಿ ಹಾಜರಿರುವ ನ್ಯೂ ಸೌತ್ ವೇಲ್ಸ್ ಸಂಪುಟದ ಗೌರವಾನ್ವಿತ ಸದಸ್ಯರೇ,  ಪಾರ್ರಮಟ್ಟದ ಸಂಸತ್ ಸದಸ್ಯ ಡಾ. ಆಂಡ್ರ್ಯೂ ಚಾರ್ಲ್ಟನ್ ಅವರೇ, ಇಲ್ಲಿ ಉಪಸ್ಥಿತರಿರುವ ಆಸ್ಟ್ರೇಲಿಯಾದ ಸಂಸತ್ ಸದಸ್ಯರು, ಮೇಯರ್‌ಗಳು, ಉಪ ಮೇಯರ್‌ಗಳು, ಕೌನ್ಸಿಲರ್‌ಗಳೇ ಮತ್ತು ಇಂದು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಸೇರಿರುವ ಆಸ್ಟ್ರೇಲಿಯಾ ನಿವಾಸಿ ಭಾರತೀಯ ವಲಸಿಗರೇ! ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು!

ಮೊದಲನೆಯದಾಗಿ, ನಾವು ಇಂದು ಇಲ್ಲಿ ಭೇಟಿಯಾಗುತ್ತಿರುವ ಈ ನೆಲದ ಸಾಂಪ್ರದಾಯಿಕ ರಕ್ಷಕರನ್ನು ನಾನು ಗೌರವಿಸಲು ಬಯಸುತ್ತೇನೆ. ಭೂತ, ವರ್ತಮಾನ ಮತ್ತು ಉದಯೋನ್ಮುಖ ಹಿರಿಯರಿಗೆ ನಾನು ಗೌರವ ಸಲ್ಲಿಸುತ್ತೇನೆ.

ಸ್ನೇಹಿತರೇ,

ನಾನು 2014ರಲ್ಲಿ ಇಲ್ಲಿಗೆ ಬಂದಾಗ, ಭಾರತದ ಮತ್ತಾವುದೇ ಪ್ರಧಾನಿಗಾಗಿ ನೀವು ಮತ್ತೆ 28 ವರ್ಷಗಳ ಕಾಲ ಕಾಯುವ ಅಗತ್ಯವಿಲ್ಲ ಎಂದು ನಾನು ನಿಮಗೆ ಭರವಸೆ ನೀಡಿದ್ದೆ. ಅದರಂತೆಯೇ ಇಂದು ಸಿಡ್ನಿಯ ಈ ವೇದಿಕೆಯಲ್ಲಿ ಮತ್ತೊಮ್ಮೆ ನಾನು ಹಾಜರಿದ್ದೇನೆ. ಆದರೆ, ಈ ಬಾರಿ ನಾನು ಏಕಾಂಗಿಯಾಗಿ ಬಂದಿಲ್ಲ. ಪ್ರಧಾನಿ ಅಲ್ಬನೀಸ್ ಕೂಡ ನನ್ನೊಂದಿಗೆ ಬಂದಿದ್ದಾರೆ. ಮಾನ್ಯ ಪ್ರಧಾನ ಮಂತ್ರಿಯವರೇ, ನಿಮ್ಮ ಅತ್ಯಂತ ಅವಿಶ್ರಾಂತ ವೇಳಾಪಟ್ಟಿಯ ಹೊರತಾಗಿಯೂ, ನೀವು ನಮ್ಮೆಲ್ಲರಿಗಾಗಿ ಸಮಯವನ್ನು ನೀಡಿದ್ದೀರಿ. ಇದು ಭಾರತೀಯರಾದ ನಮ್ಮ ಬಗ್ಗೆ ನಿಮ್ಮ ಪ್ರೀತಿಯನ್ನು ಸೂಚಿಸುತ್ತದೆ. ನೀವು ಈಗ ಹೇಳಿದ ಮಾತುಗಳು ಭಾರತದ ಬಗ್ಗೆ ಆಸ್ಟ್ರೇಲಿಯಾ ಹೊಂದಿರುವ ಪ್ರೀತಿಯನ್ನು ನಮಗೆ ತಿಳಿಸುತ್ತದೆ. ಈ ವರ್ಷ ಅಹ್ಮದಾಬಾದ್‌ನಲ್ಲಿ ಭಾರತದ ನೆಲದಲ್ಲಿ ಇಲ್ಲಿನ ಪ್ರಧಾನಮಂತ್ರಿಯವರನ್ನು ಸ್ವಾಗತಿಸುವ ಅವಕಾಶವೂ ನನಗೆ ಸಿಕ್ಕಿತ್ತು. ಇಂದು, ಇಲ್ಲಿ ʻಲಿಟಲ್ ಇಂಡಿಯಾʼಕ್ಕೆ ಶಂಕುಸ್ಥಾಪನೆ ನೆರವೇರಿಸುವಾಗ ಅವರು ನನ್ನೊಂದಿಗಿದ್ದರು. ನಾನು ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ! ನನ್ನ ಸ್ನೇಹಿತ ಆಂಥೋನಿ ಅವರಿಗೆ ಧನ್ಯವಾದಗಳು! ಆಸ್ಟ್ರೇಲಿಯಾದ ಅಭಿವೃದ್ಧಿಗೆ ಭಾರತೀಯ ಸಮುದಾಯದ ಕೊಡುಗೆಯನ್ನು ಈ ʻಲಿಟಲ್‌ ಇಂಡಿಯಾʼ ಗುರುತಿಸುತ್ತದೆ. ಈ ವಿಶೇಷ ಗೌರವಕ್ಕಾಗಿ ನಾನು ನ್ಯೂ ಸೌತ್ ವೇಲ್ಸ್‌ನ ಪ್ರಧಾನ ಮಂತ್ರಿ, ಮೇಯರ್, ಉಪ ಮೇಯರ್ ಮತ್ತು ಪರಮಟ್ಟ ನಗರದ ಕೌನ್ಸಿಲರ್‌ಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಸ್ನೇಹಿತರೇ,

ನ್ಯೂ ಸೌತ್ ವೇಲ್ಸ್‌ನಲ್ಲಿರುವ ಅನೇಕ ಭಾರತೀಯ ವಲಸಿಗರು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಮತ್ತು ಅವರಿಗೆ ಸ್ಥಾನವನ್ನು ನೀಡುತ್ತಿರುವುದು ಎಂದು ನನಗೆ ಅತೀವ ಸಂತೋಷ ತಂದಿದೆ. ಪ್ರಸ್ತುತ ನ್ಯೂ ಸೌತ್ ವೇಲ್ಸ್ ಸರ್ಕಾರದ ಉಪ ಪ್ರಧಾನ ಮಂತ್ರಿ ಪ್ರೂ ಕಾರ್ ಮತ್ತು ಖಜಾಂಚಿ ಡೇನಿಯಲ್ ಮುಖೆ ಅವರು ಈ ನಿಟ್ಟಿನಲ್ಲಿ ಪ್ರಮುಖ ಕೊಡುಗೆ ನೀಡುತ್ತಿದ್ದಾರೆ. ನಿನ್ನೆಯಷ್ಟೇ ಸಮೀರ್ ಪಾಂಡೆ ಅವರು ಪರಮಟ್ಟದ ಮೇಯರ್ ಆಗಿ ಆಯ್ಕೆಯಾದರು. ಇದಕ್ಕಾಗಿ ನಾನು ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ! ನನ್ನ ಹೃತ್ಪೂರ್ವಕ ಅಭಿನಂದನೆಗಳು!

ಸ್ನೇಹಿತರೇ,

ಇಂದು, ಪರಮಟ್ಟಾದಲ್ಲಿ ಈ ಬೆಳವಣಿಗೆಗಳು ನಡೆಯುತ್ತಿರುವ ಸಂದರ್ಭದಲ್ಲೇ, ಪಶ್ಚಿಮ ಆಸ್ಟ್ರೇಲಿಯಾದ ಪರ್ತ್ ನಗರದಲ್ಲಿ ಭಾರತೀಯ ಸೈನಿಕ ನೈನ್ ಸಿಂಗ್ ಸೈಲಾನಿ ಅವರ ಹೆಸರನ್ನು ಸೈಲಾನಿ ಅವೆನ್ಯೂಗೆ ನಾಮಕರಣ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಮೊದಲ ಮಹಾಯುದ್ಧದ ಸಮಯದಲ್ಲಿ ಆಸ್ಟ್ರೇಲಿಯಾದ ಸೈನ್ಯಕ್ಕಾಗಿ ಹೋರಾಡುವಾಗ ಅವರು ಹುತಾತ್ಮರಾದರು. ಈ ಗೌರವಕ್ಕಾಗಿ ನಾನು ಪಶ್ಚಿಮ ಆಸ್ಟ್ರೇಲಿಯಾದ ನಾಯಕತ್ವವನ್ನು ಅತ್ಯಂತ ಗೌರವದಿಂದ ಅಭಿನಂದಿಸುತ್ತೇನೆ.

ಸ್ನೇಹಿತರೇ,

ʻ3 ಸಿʼ (3C) ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧವನ್ನು ವ್ಯಾಖ್ಯಾನಿಸುತ್ತದೆ ಎಂದು ಹೇಳುತ್ತಿದ್ದ ಸಮಯವಿತ್ತು. ಈ 3 ʻಸಿʼಗಳು ಯಾವುವು? ಅವುಗಳೆಂದರೆ – ಕಾಮನ್ವೆಲ್ತ್, ಕ್ರಿಕೆಟ್ ಮತ್ತು ಕರಿ. ಭಾರತ ಮತ್ತು ಆಸ್ಟ್ರೇಲಿಯಾ ಸಂಬಂಧಗಳು ʻ3 ಡಿʼ ಅಂದರೆ ಪ್ರಜಾಪ್ರಭುತ್ವ, ಡಯಾಸ್ಪೊರಾ ಮತ್ತು ದೋಸ್ತಿಯನ್ನು ಆಧರಿಸಿವೆ ಎಂದು ನಂತರ ಹೇಳಲಾಯಿತು. ಭಾರತ-ಆಸ್ಟ್ರೇಲಿಯಾ ಸಂಬಂಧಗಳು ʻ3 ಇʼ ಅಥವಾ ಇಂಧನ, ಆರ್ಥಿಕತೆ ಮತ್ತು ಶಿಕ್ಷಣವನ್ನು ಆಧರಿಸಿವೆ ಎಂದು ಕೆಲವರು ಹೇಳಿದರು. ಅಂದರೆ, ಅದು ಕೆಲವೊಮ್ಮೆ ʻಸಿʼ, ಕೆಲವೊಮ್ಮೆ ʻಡಿʼ, ಮತ್ತು ಕೆಲವೊಮ್ಮೆ ʻಇʼಆಗಿತ್ತು. ಇದು ಬಹುಶಃ ವಿಭಿನ್ನ ಅವಧಿಗಳಲ್ಲಿ ನಿಜವಾಗಿದೆ. ಆದರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐತಿಹಾಸಿಕ ಸಂಬಂಧಗಳ ವ್ಯಾಪ್ತಿ ಇದಕ್ಕಿಂತ ದೊಡ್ಡದಾಗಿದೆ, ಈ ಎಲ್ಲಾ ಸಂಬಂಧಗಳ ದೊಡ್ಡ ಅಡಿಪಾಯ ಯಾವುದು ಎಂದು ನಿಮಗೆ ಗೊತ್ತೇ? ಅದರ ಬಗ್ಗೆ ನಿಮಗೆ ತಿಳಿದಿದೆಯೇ? ಪರಸ್ಪರ ನಂಬಿಕೆ ಮತ್ತು ಪರಸ್ಪರ ಗೌರವವೇ ಎರಡೂ ದೇಶಗಳ ನಡುವಿನ ಸಂಬಂಧದ ದೊಡ್ಡ ಅಡಿಪಾಯವಾಗಿದೆ! ಈ ಪರಸ್ಪರ ನಂಬಿಕೆ ಮತ್ತು ಪರಸ್ಪರ ಗೌರವವು ಭಾರತ ಮತ್ತು ಆಸ್ಟ್ರೇಲಿಯಾದ ರಾಜತಾಂತ್ರಿಕ ಸಂಬಂಧಗಳಿಂದಾಗಿ ಮಾತ್ರ ಬೆಳೆದಿಲ್ಲ. ಇದರ ಹಿಂದಿನ ನಿಜವಾದ ಕಾರಣ ಮತ್ತು ನಿಜವಾದ ಶಕ್ತಿ ನೀವೆಲ್ಲರೂ ಆಗಿದ್ದೀರಿ, ಆಸ್ಟ್ರೇಲಿಯಾದಲ್ಲಿ ವಾಸಿಸುವ ಪ್ರತಿಯೊಬ್ಬ ಭಾರತೀಯರೂ ಆಗಿದ್ದೀರಿ! ನೀವು ಅದರ ನಿಜವಾದ ಶಕ್ತಿ. ಆಸ್ಟ್ರೇಲಿಯಾದ 2.5 ಕೋಟಿಗೂ ಹೆಚ್ಚು ನಾಗರಿಕರು ಇದರ ಹಿಂದಿನ ನಿಜವಾದ ಕಾರಣವಾಗಿದ್ದಾರೆ.

ಸ್ನೇಹಿತರೇ,

ಖಂಡಿತವಾಗಿಯೂ ನಮ್ಮ ನಡುವೆ ಭೌಗೋಳಿಕ ಅಂತರವಿದೆ, ಆದರೆ ಹಿಂದೂ ಮಹಾಸಾಗರವು ನಮ್ಮನ್ನು ಸಂಪರ್ಕಿಸುತ್ತದೆ. ನಮ್ಮ ಜೀವನಶೈಲಿ ವಿಭಿನ್ನವಾಗಿದ್ದರೂ, ಯೋಗವು ಈಗ ನಮ್ಮನ್ನು ಸಂಪರ್ಕಿಸುತ್ತದೆ. ನಾವು ಬಹಳ ಸಮಯದಿಂದ ಕ್ರಿಕೆಟ್‌ನೊಂದಿಗೆ ಸಂಬಂಧ ಹೊಂದಿದ್ದೇವೆ, ಆದರೆ ಈಗ ಟೆನಿಸ್ ಮತ್ತು ಚಲನಚಿತ್ರಗಳು ಸಹ ನಮ್ಮನ್ನು ಸಂಪರ್ಕಿಸುತ್ತಿವೆ. ನಾವು ಅಡುಗೆಯ ವಿಭಿನ್ನ ಶೈಲಿಗಳನ್ನು ಹೊಂದಿರಬಹುದು, ಆದರೆ ಈಗ ಮಾಸ್ಟರ್ ಚೆಫ್ ನಮ್ಮನ್ನು ಒಂದುಗೂಡಿಸುತ್ತದೆ. ನಮ್ಮ ದೇಶದಲ್ಲಿ ಹಬ್ಬಗಳನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದ್ದರೂ, ನಾವು ದೀಪಾವಳಿಯ ದೀಪಗಳು ಮತ್ತು ಬೈಸಾಖಿ ಆಚರಣೆಗಳೊಂದಿಗೆ ಸಂಪರ್ಕ ಹೊಂದಿದ್ದೇವೆ. ಎರಡೂ ದೇಶಗಳು ವಿಭಿನ್ನ ಭಾಷೆಗಳನ್ನು ಮಾತನಾಡಬಹುದು ಆದರೆ ಮಲಯಾಳಂ, ತಮಿಳು, ತೆಲುಗು, ಪಂಜಾಬಿ, ಹಿಂದಿ ಭಾಷೆಗಳನ್ನು ಕಲಿಸುವ ಶಾಲೆಗಳು ನಮ್ಮಲ್ಲಿ ಹೇರಳವಾಗಿವೆ.

ಸ್ನೇಹಿತರೇ,

ಆಸ್ಟ್ರೇಲಿಯಾದ ಜನರು, ಇಲ್ಲಿನ ನಿವಾಸಿಗಳು ಕರುಣಾಮಯಿ ಹೃದಯವನ್ನು ಹೊಂದಿದ್ದಾರೆ. ಅವರು ಎಷ್ಟು ಒಳ್ಳೆಯವರು ಮತ್ತು ಪರಿಶುದ್ಧ ಹೃದಯವಂತರು ಎಂದರೆ ಅವರು ಭಾರತದ ಈ ವೈವಿಧ್ಯತೆಯನ್ನು ತೆರೆದ ಹೃದಯದಿಂದ ಸ್ವೀಕರಿಸುತ್ತಾರೆ ಮತ್ತು ಅದಕ್ಕಾಗಿಯೇ ಪರಮಟ್ಟ ಚೌಕವು ಕೆಲವರಿಗೆ 'ಪರಮಾತ್ಮ' (ದೈವಿಕ) ಚೌಕವಾಗಿದೆ; ವಿಗ್ರಾಮ್ ಸ್ಟ್ರೀಟ್ ಅನ್ನು ʻವಿಕ್ರಮ್ ಸ್ಟ್ರೀಟ್ʼ ಎಂದು ಕರೆಯಲಾಗುತ್ತದೆ ಮತ್ತು ಹ್ಯಾರಿಸ್ ಪಾರ್ಕ್ ಅನೇಕ ಜನರಿಗೆ ʻಹರೀಶ್ ಪಾರ್ಕ್ʼ ಆಗುತ್ತದೆ. ಅಂದಹಾಗೆ, ಹ್ಯಾರಿಸ್ ಪಾರ್ಕ್‌ನಲ್ಲಿ ʻಚಟ್ಕಾಜ್‌ʼ ಚಾಟ್ ಮತ್ತು ʻಜೈಪುರ್ ಸ್ವೀಟ್ಸ್‌ʼನ ಜಿಲೇಬಿಗಳ ರುಚಿಯನ್ನು ಯಾರೂ ಮೀರಿಸಲು ಸಾಧ್ಯವಿಲ್ಲ ಎಂದು ನಾನು ಕೇಳಿದ್ದೇನೆ. ನಿಮ್ಮೆಲ್ಲರಿಗೂ ನನ್ನದೊಂದು ವಿನಂತಿಯಿದೆ. ದಯವಿಟ್ಟು ನನ್ನ ಸ್ನೇಹಿತ ಪ್ರಧಾನಿ ಅಲ್ಬನೀಸ್ ಅವರನ್ನು ಈ ಸ್ಥಳಗಳಿಗೆ ಕರೆದೊಯ್ಯಿರಿ.

ಸ್ನೇಹಿತರೇ,

ಆಹಾರ ಮತ್ತು ಚಾಟ್ ವಿಷಯಕ್ಕೆ ಬಂದಾಗ, ಲಖನೌ ನಗರವನ್ನು ಉಲ್ಲೇಖಿಸುವುದು ಸಾಮಾನ್ಯ. ಸಿಡ್ನಿ ಬಳಿ ಲಖನೌ ಎಂಬ ಸ್ಥಳವಿದೆ ಎಂದು ನಾನು ಕೇಳಿದ್ದೇನೆ. ಆದರೆ ಅಲ್ಲಿಯೂ ಚಾಟ್ ಲಭ್ಯವಿದೆಯೇ ಎಂದು ನನಗೆ ಗೊತ್ತಿಲ್ಲ. ಸರಿ, ಇಲ್ಲಿಯೂ, ಲಖನೌ ಬಳಿ ದೆಹಲಿಯೊಂದು ಇರಲೇಬೇಕಲ್ಲವೇ? ವಾಸ್ತವವಾಗಿ, ದೆಹಲಿ ಸ್ಟ್ರೀಟ್, ಬಾಂಬೆ ಸ್ಟ್ರೀಟ್, ಕಾಶ್ಮೀರ್ ಅವೆನ್ಯೂ, ಮಲಬಾರ್ ಅವೆನ್ಯೂ ಮುಂತಾದ ಆಸ್ಟ್ರೇಲಿಯಾದ ಅನೇಕ ಬೀದಿಗಳು ನಿಮ್ಮನ್ನು ಭಾರತಕ್ಕೆ ಸಂಪರ್ಕಿಸುತ್ತವೆ. ಈಗ ಗ್ರೇಟರ್ ಸಿಡ್ನಿಯಲ್ಲಿ ಇಂಡಿಯಾ ಪೆರೇಡ್ ಕೂಡ ಪ್ರಾರಂಭವಾಗಲಿದೆ ಎಂದು ನಾನು ಕೇಳಲ್ಪಟ್ಟೆ. ಇಲ್ಲಿ ನೀವೆಲ್ಲರೂ 'ಸ್ವಾತಂತ್ರ್ಯದ ಅಮೃತ ಮಹೋತ್ಸವ'ವನ್ನು ಬಹಳ ಆಡಂಬರ ಮತ್ತು ಅದ್ಧೂರಿಯಾಗಿ ಆಚರಿಸಿದ್ದೀರಿ ಎಂದು ತಿಳಿದು ನನಗೆ ತುಂಬಾ ಸಂತೋಷವಾಗಿದೆ. ಇಲ್ಲಿನ ವಿವಿಧ ನಗರ ಸಭೆಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಿಡ್ನಿ ಒಪೇರಾ ಹೌಸ್ ಅನ್ನು ತ್ರಿವರ್ಣ ಧ್ವಜದಿಂದ ಬೆಳಗಿಸಿದಾಗ ಭಾರತೀಯರ ಹೃದಯವು ಉಲ್ಲಾಸಿತಗೊಳ್ಳುತ್ತದೆ. ಅಲ್ಲಿ ಭಾರತವೂ ಸಂಭ್ರಮಿಸುತ್ತಿತ್ತು ಮತ್ತು ಅದಕ್ಕಾಗಿ ನಾನು ನ್ಯೂ ಸೌತ್ ವೇಲ್ಸ್ ಸರ್ಕಾರಕ್ಕೆ ನನ್ನ ವಿಶೇಷ ಕೃತಜ್ಞತೆಯನ್ನು ಅರ್ಪಿಸುತ್ತೇನೆ.

ಸ್ನೇಹಿತರೇ,

ನಮ್ಮ ಕ್ರಿಕೆಟ್ ಸಂಬಂಧ ಕೂಡ 75 ವರ್ಷಗಳನ್ನು ಪೂರೈಸಿದೆ. ಕ್ರಿಕೆಟ್ ಮೈದಾನದಲ್ಲಿ ಉತ್ಸಾಹ ಹೆಚ್ಚಾದಷ್ಟೂ ಮೈದಾನದ ಹೊರಗೆ ನಮ್ಮ ಸ್ನೇಹ ಗಾಢವಾಗುತ್ತದೆ. ಈ ಬಾರಿ, ಆಸ್ಟ್ರೇಲಿಯಾದ ಅನೇಕ ಮಹಿಳಾ ಕ್ರಿಕೆಟ್ ಆಟಗಾರರು ʻಐಪಿಎಲ್ʼ ಆಡಲು ಮೊದಲ ಬಾರಿಗೆ ಭಾರತಕ್ಕೆ ಬಂದರು. ಸ್ನೇಹಿತರೇ, ನಾವು ಸ್ನೇಹಿತರು ಸಂತೋಷದ ಸಮಯದಲ್ಲಿ ಮಾತ್ರವಲ್ಲದೆ, ದುಃಖದ ಸಮಯದಲ್ಲೂ ಒಡನಾಡಿ ಆಗಿರುತ್ತಾನೆ. ಕಳೆದ ವರ್ಷ ಶೇನ್ ವಾರ್ನ್ ನಿಧನರಾದಾಗ, ಆಸ್ಟ್ರೇಲಿಯಾದೊಂದಿಗೆ ಕೋಟ್ಯಂತರ ಭಾರತೀಯರು ಸಹ ಶೋಕ ವ್ಯಕ್ತಪಡಿಸಿದ್ದರು. ನಾವು ಕುಟುಂಬದ ಒಬ್ಬ ಸದಸ್ಯನನ್ನು ಕಳೆದುಕೊಂಡಂತೆ ಭಾಸವಾಯಿತು.

ಸ್ನೇಹಿತರೇ,

ನೀವೆಲ್ಲರೂ ಇಲ್ಲಿ ಆಸ್ಟ್ರೇಲಿಯಾದಲ್ಲಿದ್ದೀರಿ. ಇಲ್ಲಿನ ಅಭಿವೃದ್ಧಿಯನ್ನು ನೋಡಿ, ನಮ್ಮ ಭಾರತವೂ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂದು ನೀವೆಲ್ಲರೂ ಕನಸು ಕಂಡಿದ್ದೀರಿ. ಇದು ನಿಮ್ಮ ಕನಸಲ್ಲವೇ? ನಿಮ್ಮ ಹೃದಯದಲ್ಲಿರುವ ಕನಸು ನನ್ನ ಹೃದಯದಲ್ಲೂ ಇದೆ. ಇದು ನನ್ನ ಕನಸೂ ಹೌದು. ಇದು 140 ಕೋಟಿ ಭಾರತೀಯರ ಕನಸು.

ಸ್ನೇಹಿತರೇ,

ಭಾರತದಲ್ಲಿ ಸಾಮರ್ಥ್ಯದ ಕೊರತೆಯಿಲ್ಲ. ಭಾರತದಲ್ಲಿ ಸಂಪನ್ಮೂಲಗಳ ಕೊರತೆಯೂ ಇಲ್ಲ. ಇಂದು, ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಯುವ ಪ್ರತಿಭೆಯ ಕಾರ್ಖಾನೆಯನ್ನು ಹೊಂದಿರುವ ದೇಶ ಭಾರತ. ನೀವು ಹೇಳಿದ್ದು ಸರಿ, ಅದೇ ಭಾರತ. ನಾನು ಇದನ್ನು ಮತ್ತೆ ಪುನರಾವರ್ತಿಸುತ್ತಿದ್ದೇನೆ. ಇಂದು, ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಯುವ ಪ್ರತಿಭಾ ಸಂಪತ್ತನ್ನು ಹೊಂದಿರುವ ದೇಶ ಭಾರತ! ಇದು ಭಾರತ! ಇದು ಭಾರತ! ಈಗ ನಾನು ಕೆಲವು ಸಂಗತಿಗಳನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ. ನಾನು ನಿಮ್ಮಿಂದ ಸರಿಯಾದ ಉತ್ತರವನ್ನು ತಿಳಿದುಕೊಳ್ಳಲು ಬಯಸುತ್ತೇನೆ. ನೀವು ಸಿದ್ಧರಿದ್ದೀರಾ? ಈ ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ವಿಶ್ವದ ಅತ್ಯಂತ ವೇಗದ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಪ್ರಾರಂಭಿಸಿದ ದೇಶ  ಭಾರತ, ಆ ದೇಶ ಯಾವುದು? ಅದು ಭಾರತ ದೇಶ! ಅದು ಭಾರತ ದೇಶ! ಇಂದು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೊಂದಿರುವ ದೇಶ - ಭಾರತ. ಅದು ಭಾರತ ದೇಶ! ಅದು ಭಾರತ ದೇಶ! ಇಂದು ವಿಶ್ವದ ನಂಬರ್ 1 ಸ್ಮಾರ್ಟ್ಫೋನ್ ಡೇಟಾ ಬಳಕೆದಾರ ದೇಶ ಭಾರತ! ಅದು ಭಾರತ ದೇಶ! ಅದು ಭಾರತ ದೇಶ! ಇಂದು ಫಿನ್ ಟೆಕ್ ಅಳವಡಿಕೆ ದರದಲ್ಲಿ ನಂಬರ್ 1 ಸ್ಥಾನದಲ್ಲಿರುವ ದೇಶ ಭಾರತ! ಅದು ಭಾರತ ದೇಶ! ಅದು ಭಾರತ ದೇಶ! ಇಂದು ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲೇ ನಂ.1 ಸ್ಥಾನದಲ್ಲಿರುವ ದೇಶ ಭಾರತ! ಅದು ಭಾರತ ದೇಶ! ಅದು ಭಾರತ ದೇಶ! ಇಂದು ಇಂಟರ್ನೆಟ್ ಬಳಕೆದಾರರ ವಿಷಯದಲ್ಲಿ ವಿಶ್ವದಲ್ಲಿ 2ನೇ ಸ್ಥಾನದಲ್ಲಿರುವ ದೇಶ: ಭಾರತ! ಅದು ಭಾರತ! ಇಂದು, ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ದೇಶ, ಅದು ಭಾರತ ದೇಶ! ಅದು ಭಾರತ ದೇಶ! ಇಂದು, ಅಕ್ಕಿ, ಗೋಧಿ, ಕಬ್ಬಿನ ಉತ್ಪಾದನೆಯ ವಿಷಯದಲ್ಲಿ ವಿಶ್ವದಲ್ಲಿ 2 ನೇ ಸ್ಥಾನದಲ್ಲಿರುವ ದೇಶವೆಂದರೆ: ಭಾರತ, ಅದು ಭಾರತ! ಇಂದು ವಿಶ್ವದಲ್ಲಿ ಹಣ್ಣು ಮತ್ತು ತರಕಾರಿ ಉತ್ಪಾದನೆಯಲ್ಲಿ 2 ನೇ ಸ್ಥಾನದಲ್ಲಿರುವ ದೇಶ ಭಾರತ, ಅದು ಭಾರತ! ಇಂದು, ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿರುವ ದೇಶವೆಂದರೆ ಭಾರತ, ಅದು ಭಾರತ! ವಿಶ್ವದ ಮೂರನೇ ಅತಿದೊಡ್ಡ ಆಟೋಮೊಬೈಲ್ ಮಾರುಕಟ್ಟೆ ಇರುವ ದೇಶವೂ ಭಾರತವೇ. ಅದು ಭಾರತ ದೇಶ! ವಿಶ್ವದ ಮೂರನೇ ಅತಿದೊಡ್ಡ ನಾಗರಿಕ ವಿಮಾನಯಾನ ಮಾರುಕಟ್ಟೆಯನ್ನು ಹೊಂದಿರುವ ದೇಶ ಭಾರತ, ಅದು ಭಾರತ ದೇಶ! ಈಗ ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯೊಂದಿಗೆ ಮುಂದುವರಿಯುತ್ತಿರುವ ದೇಶ ಭಾರತ, ಅದು ಭಾರತ ದೇಶ!

ಸ್ನೇಹಿತರೇ,

ಇಂದು ವಿಶ್ವ ಹಣಕಾಸು ನಿಧಿ (ಐಎಂಎಫ್) ಭಾರತವನ್ನು ಜಾಗತಿಕ ಆರ್ಥಿಕತೆಯ ಉಜ್ವಲ ತಾಣವೆಂದು ಪರಿಗಣಿಸುತ್ತದೆ. ಜೊತೆಗೆ ಯಾವುದಾದರೂ ದೇಶವೊಂದು ಜಾಗತಿಕ ಪ್ರತಿಕೂಲ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸುತ್ತದೆ ಎಂದರೆ ಅದು ಭಾರತ ಎಂದು ವಿಶ್ವ ಬ್ಯಾಂಕ್ ನಂಬುತ್ತದೆ. ಇಂದು, ವಿಶ್ವದ ಅನೇಕ ದೇಶಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬಿಕ್ಕಟ್ಟು ತಲೆದರೋರಿದೆ. ಆದರೆ ಮತ್ತೊಂದೆಡೆ, ಭಾರತೀಯ ಬ್ಯಾಂಕುಗಳ ಶಕ್ತಿಯನ್ನು ಎಲ್ಲೆಡೆ ಶ್ಲಾಘಿಸಲಾಗುತ್ತಿದೆ. 100 ವರ್ಷಗಳಲೇ ವಿಶ್ವದ ಕಂಡ ಅತಿದೊಡ್ಡ ಸಾಂಕ್ರಾಮಿಕದ ಬಿಕ್ಕಟ್ಟಿನ ಮಧ್ಯೆ, ಭಾರತವು ಕಳೆದ ವರ್ಷ ದಾಖಲೆಯ ರಫ್ತು ಮಾಡಿದೆ. ಇಂದು ನಮ್ಮ ವಿದೇಶೀ ವಿನಿಮಯ ಮೀಸಲು ಹೊಸ ಎತ್ತರವನ್ನು ಮುಟ್ಟುತ್ತಿದೆ.

ಸ್ನೇಹಿತರೇ,

ಜಾಗತಿಕ ಒಳಿತಿಗಾಗಿ ಭಾರತ ಹೇಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ನಮ್ಮ ಡಿಜಿಟಲ್ ಪಾಲು ಒಂದು ಉದಾಹರಣೆಯಾಗಿದೆ. ಭಾರತದ ʻಫಿನ್‌ಟೆಕ್ʼ ಕ್ರಾಂತಿಯ ಬಗ್ಗೆ ನಿಮಗೆಲ್ಲರಿಗೂ ಗೊತ್ತಿದೆ. 2014ರಲ್ಲಿ ನಾನು ಇಲ್ಲಿಗೆ ಬಂದಾಗ, ನಾನು ನಿಮ್ಮೊಂದಿಗೆ ಒಂದು ಕನಸನ್ನು ಹಂಚಿಕೊಂಡಿದ್ದು ನಿಮಗೆ ನೆನಪಿರಬಹುದು. ಭಾರತದ ಕಡುಬಡವರು ತಮ್ಮದೇ ಆದ ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕು ಎಂಬುದು ನನ್ನ ಕನಸಾಗಿತ್ತು. ಸ್ನೇಹಿತರೇ, ನೀವು ಹೆಮ್ಮೆ ಪಡುತ್ತೀರಿ; ಕಳೆದ 9 ವರ್ಷಗಳಲ್ಲಿ, ನಾವು ಸುಮಾರು 50 ಕೋಟಿ ಭಾರತೀಯರ ಬ್ಯಾಂಕ್ ಖಾತೆಗಳನ್ನು ತೆರೆದಿದ್ದೇವೆ, ಅಂದರೆ ಸುಮಾರು 500 ದಶಲಕ್ಷ ಜನರು! ಜೊತೆಗೆ, ನಮ್ಮ ಯಶಸ್ಸು ಕೇವಲ ಬ್ಯಾಂಕ್ ಖಾತೆಗಳನ್ನು ತೆರೆಯುವುದಕ್ಕೆ ಸೀಮಿತವಾಗಿಲ್ಲ. ನಾವು ಅಲ್ಲಿಗೇ ನಿಲ್ಲಲಿಲ್ಲ. ಇದು ಭಾರತದಲ್ಲಿ ನಾಗರಿಕ ಸರಬರಾಜಿನ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಪರಿವರ್ತಿಸಿದೆ. ನಾವು ʻಜನ್ ಧನ್ʼ ಬ್ಯಾಂಕ್ ಖಾತೆ, ಮೊಬೈಲ್ ಫೋನ್ ಮತ್ತು ಆಧಾರ್ ಐಡಿಯ ʻಜೆಎಎಂ ಟ್ರಿನಿಟಿʼ ಅಥವಾ ʻಜೆಎಎಂ ತ್ರಿವಳಿʼಯನ್ನು ರಚಿಸಿದ್ದೇವೆ. ಇದು ಕೇವಲ ಒಂದು ಕ್ಲಿಕ್‌ ಮೂಲಕ ಕೋಟ್ಯಂತರ ದೇಶವಾಸಿಗಳಿಗೆ ನೇರ ಲಾಭ ವರ್ಗಾವಣೆಯನ್ನು(ಡಿಬಿಟಿ) ಸಾಧ್ಯವಾಗಿಸಿದೆ, ಕಳೆದ 9 ವರ್ಷಗಳಲ್ಲಿ ದಾಖಲಾದ ಈ ಅಂಕಿ ಅಂಶವು ನಿಮಗೆ ಸಾಕಷ್ಟು ಸಂತೋಷವನ್ನು ನೀಡುತ್ತದೆ - ಕಳೆದ 9 ವರ್ಷಗಳಲ್ಲಿ 28 ಲಕ್ಷ ಕೋಟಿ ರೂ.ಗಳನ್ನು ಅಂದರೆ 500 ಶತಕೋಟಿ ಆಸ್ಟ್ರೇಲಿಯನ್ ಡಾಲರ್‌ಗಳನ್ನು ಅಗತ್ಯವಿರುವವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಕಳುಹಿಸಲಾಗಿದೆ ಎಂದು ತಿಳಿದರೆ ನಿಮಗೆ ಖುಷಿಯಾಗಬಹುದು. ಕರೋನಾ ಅವಧಿಯಲ್ಲಿ, ಅನೇಕ ದೇಶಗಳು ತಮ್ಮ ನಾಗರಿಕರಿಗೆ ಹಣವನ್ನು ಕಳುಹಿಸಲು ಕಷ್ಟಪಟ್ಟವು, ಆದರೆ ಒಂದೇ ಕ್ಲಿಕ್‌ನಲ್ಲಿ ಕಣ್ಣು ಮಿಟುಕಿಸುವಷ್ಟರಲ್ಲಿ ಈ ಕೆಲಸವನ್ನು ಮಾಡುತ್ತಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ʻಯೂನಿವರ್ಸಲ್ ಪಬ್ಲಿಕ್ ಇಂಟರ್ಫೇಸ್ʼ ಅಂದರೆ ಯುಪಿಐ ಭಾರತದಲ್ಲಿ ಆರ್ಥಿಕ ಸೇರ್ಪಡೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ. ಇಂದು ವಿಶ್ವದ ನೈಜ ಸಮಯದ ಡಿಜಿಟಲ್ ಪಾವತಿಗಳಲ್ಲಿ 40 ಪ್ರತಿಶತವು ಭಾರತದಲ್ಲಿ ಮಾತ್ರ ನಡೆಯುತ್ತದೆ. ನೀವು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದರೆ, ಹಣ್ಣು, ತರಕಾರಿ ಅಥವಾ ಪಾನಿಪುರಿ ಬಂಡಿಗಳು ಅಥವಾ ಚಹಾ ಅಂಗಡಿಗಳು ಸೇರಿದಂತೆ ಎಲ್ಲೆಡೆ ಡಿಜಿಟಲ್ ವಹಿವಾಟುಗಳು ನಡೆಯುತ್ತಿರುವುದನ್ನು ನೀವು ನೋಡಿರಬಹುದು.

ಸ್ನೇಹಿತರೇ,

ಭಾರತದ ಈ ಡಿಜಿಟಲ್ ಕ್ರಾಂತಿ ಕೇವಲ ʻಫಿನ್‌ಟೆಕ್ʼಗೆ ಮಾತ್ರ ಸೀಮಿತವಾಗಿಲ್ಲ. ಭಾರತವು ಆಧುನಿಕ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಜನರ ಜೀವನ ಸುಗಮತೆ ಹೆಚ್ಚುತ್ತಿದೆ. ಇದಕ್ಕೆ ಒಂದು ಉದಾಹರಣೆಯೆಂದರೆ ಭಾರತದ ʻಡಿಜಿಲಾಕರ್ʼ, ಇದು ಚಾಲನಾ ಪರವಾನಗಿಯಿಂದ ಹಿಡಿದು ಪದವಿಗಳು ಮತ್ತು ಆಸ್ತಿ ದಾಖಲೆಗಳವರೆಗೆ ಸರ್ಕಾರವು ನೀಡುವ ಪ್ರತಿಯೊಂದು ದಾಖಲೆಯನ್ನು ಸಂಗ್ರಹಿಸುತ್ತದೆ. ʻಡಿಜಿಟಲ್ ಲಾಕರ್ʼನಲ್ಲಿ ಸುಮಾರು ನೂರಾರು ರೀತಿಯ ದಾಖಲೆಗಳು ಪ್ರತಿಬಿಂಬಿತವಾಗುತ್ತವೆ. ನೀವು ಭೌತಿಕ ನಕಲು ಪ್ರತಿಯನ್ನು ಸಂಗ್ರಹಿಸುವ ಅಗತ್ಯವಿಲ್ಲ. ಕೇವಲ ಒಂದು ಪಾಸ್ ವರ್ಡ್ ಇದ್ದರೆ ಸಾಕು. ಈಗ 15 ಕೋಟಿಗೂ ಹೆಚ್ಚು ಅಂದರೆ 150 ದಶಲಕ್ಷಕ್ಕೂ ಹೆಚ್ಚು ಭಾರತೀಯರು ಇದರಲ್ಲಿ ಸೇರಿದ್ದಾರೆ. ಅಂತಹ ಅನೇಕ ಡಿಜಿಟಲ್ ವೇದಿಕೆಗಳು ಇಂದು ಭಾರತೀಯರನ್ನು ಶಕ್ತಿಶಾಲಿಗಳನ್ನಾಗಿ ಮಾಡುತ್ತಿವೆ.

ಸ್ನೇಹಿತರೇ,

ಇಂದು ಜಗತ್ತು ಭಾರತದ ಪ್ರತಿಯೊಂದು ಹೆಜ್ಜೆ ಮತ್ತು ಪ್ರತಿಯೊಂದು ಸಾಧನೆಯ ಬಗ್ಗೆ ತಿಳಿಯಲು ಬಯಸುತ್ತದೆ. ಸಮಕಾಲೀನ ಜಗತ್ತು ಸಾಗುತ್ತಿರುವ ವಿಶ್ವ ಕ್ರಮವನ್ನು ನೋಡುವುದು ಮತ್ತು ಸಾಧ್ಯತೆಗಳನ್ನು ಹುಡುಕುವುದು ಸ್ವಾಭಾವಿಕವಾಗಿದೆ. ಭಾರತವು ಸಾವಿರಾರು ವರ್ಷಗಳಷ್ಟು ಹಳೆಯದಾದ ಜೀವಂತ ನಾಗರಿಕತೆಯಾಗಿದೆ. ಭಾರತವು ಪ್ರಜಾಪ್ರಭುತ್ವದ ತಾಯಿ. ನಾವು ಸಮಯಕ್ಕೆ ಅನುಗುಣವಾಗಿ ನಮ್ಮನ್ನು ರೂಪಿಸಿಕೊಂಡಿದ್ದೇವೆ ಆದರೆ ಯಾವಾಗಲೂ ನಮ್ಮ ಮೂಲಭೂತ ಅಂಶಗಳಿಗೆ ಅಂಟಿಕೊಂಡಿದ್ದೇವೆ. ನಾವು ರಾಷ್ಟ್ರವನ್ನು ಒಂದು ಕುಟುಂಬವಾಗಿ ನೋಡುತ್ತೇವೆ ಮತ್ತು ಜಗತ್ತನ್ನು 'ವಸುದೈವ ಕುಟುಂಬಕಂ' ಎಂದು ಪರಿಗಣಿಸುತ್ತೇವೆ. ಭಾರತದ ಜಿ-20 ಅಧ್ಯಕ್ಷತೆಯ ಧ್ಯೇಯವಾಕ್ಯವು ಭಾರತವು ತನ್ನ ಆದರ್ಶಗಳಿಂದ ಹೇಗೆ ಬದುಕುತ್ತದೆ ಎಂಬುದು ಪ್ರತಿಬಿಂಬಿಸುತ್ತದೆ. ಜಿ-20 ಅಧ್ಯಕ್ಷನಾಗಿ, ಭಾರತವು 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂದು ಹೇಳುತ್ತದೆ. ಪರಿಸರವನ್ನು ರಕ್ಷಿಸಲು ಭಾರತವು ಸೌರ ಶಕ್ತಿಯ ವಿಷಯದಲ್ಲಿ ಬೃಹತ್ ಗುರಿಗಳನ್ನು ನಿಗದಿಪಡಿಸಿದೆ. 'ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್' ಎಂದು ಭಾರತ ಹೇಳುತ್ತದೆ. ಜಾಗತಿಕ ಸಮುದಾಯವು ಆರೋಗ್ಯಕರವಾಗಿರಬೇಕು ಎಂದು ಬಯಸುವ ಭಾರತವು ಈ ನಿಟ್ಟಿನಲ್ಲಿ 'ಒಂದು ಭೂಮಿ, ಒಂದು ಆರೋಗ್ಯ' ಮಂತ್ರವನ್ನು ಪಠಿಸುತ್ತದೆ. ಕರೋನಾ ಬಿಕ್ಕಟ್ಟಿನ ಸಮಯದಲ್ಲಿ ವಿಶ್ವದ 150ಕ್ಕೂ ಹೆಚ್ಚು ದೇಶಗಳಿಗೆ ಔಷಧಗಳನ್ನು ಕಳುಹಿಸಿದ ದೇಶ ಭಾರತ. ಭಾರತವು 100ಕ್ಕೂ ಹೆಚ್ಚು ದೇಶಗಳಿಗೆ ಉಚಿತ ಲಸಿಕೆಗಳನ್ನು ನೀಡುವ ಮೂಲಕ ಕೋಟ್ಯಂತರ ಜನರ ಜೀವವನ್ನು ಉಳಿಸಿದ ದೇಶವಾಗಿದೆ. ಕೊರೊನಾ ಸಮಯದಲ್ಲಿ ನೀವು ಇಲ್ಲಿ ಕೆಲಸ ಮಾಡಿದ ಸೇವಾ ಮನೋಭಾವವು ನಮ್ಮ ಸಂಸ್ಕೃತಿಯ ವಿಶೇಷತೆಯಾಗಿದೆ. ಇಂದು ಐದನೇ ಸಿಖ್ ಗುರು ಶ್ರೀ ಗುರು ಅರ್ಜುನ್ ದೇವ್ ಜಿ ಅವರ ಹುತಾತ್ಮ ದಿನ. ಗುರೂಜಿಯವರ ಜೀವನವು ಎಲ್ಲರಿಗೂ ಸೇವೆ ಸಲ್ಲಿಸುವ ಪಾಠವನ್ನು ಕಲಿಸಿದೆ. ಗುರು ಅರ್ಜುನ್ ದೇವ್ ಜಿ ಅವರು ʻದಸ್ವಂಧʼ ವ್ಯವಸ್ಥೆಯನ್ನು ಪ್ರಾರಂಭಿಸಿದರು. ಅದರಿಂದ ಸ್ಫೂರ್ತಿ ಪಡೆದು, ಕರೋನಾ ಸಮಯದಲ್ಲಿಯೂ, ಅನೇಕ ಗುರುದ್ವಾರಗಳು ಇಲ್ಲಿನ ಜನರಿಗೆ ಸಹಾಯ ಮಾಡಿದವು. ಆ ಅವಧಿಯಲ್ಲಿ, ಇಲ್ಲಿ ಅನೇಕ ದೇವಾಲಯಗಳ ಅಡುಗೆಮನೆಗಳನ್ನು ಸೋಂಕು ಪೀಡಿತ ವ್ಯಕ್ತಿಗಳಿಗಾಗಿ ತೆರೆಯಲಾಯಿತು. ಆಸ್ಟ್ರೇಲಿಯಾದಲ್ಲಿ ವಾಸಿಸುವ ಮತ್ತು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಸಹಾಯ ಮಾಡಲು ಮುಂದೆ ಬಂದರು. ವಿವಿಧ ಸಾಮಾಜಿಕ ಸಂಸ್ಥೆಗಳು ಸಹ ಈ ಅವಧಿಯಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡಿದವು. ಭಾರತೀಯರು ಎಲ್ಲೇ ಇರಲಿ, ಅವರಲ್ಲಿ ಮಾನವೀಯ ಮನೋಭಾವ ಹಾಗೇ ಉಳಿದಿದೆ.

ಸ್ನೇಹಿತರೇ,

ಮಾನವೀಯತೆಯ ಹಿತದೃಷ್ಟಿಯಿಂದ ಮಾಡಿದ ಇಂತಹ ಕಾರ್ಯಗಳಿಂದಾಗಿ, ಇಂದು ಭಾರತವನ್ನು ಜಾಗತಿಕ ಒಳಿತಿನ ಶಕ್ತಿ ಎಂದು ಕರೆಯಲಾಗುತ್ತಿದೆ. ಎಲ್ಲೆಲ್ಲಿ ವಿಪತ್ತು ಸಂಭವಿಸಿದರೂ, ಭಾರತವು ಸಹಾಯ ಮಾಡಲು ಸದಾ ಸಿದ್ಧವಾಗಿದೆ. ಬಿಕ್ಕಟ್ಟು ಎದುರಾದಾಗಲೆಲ್ಲಾ ಅದನ್ನು ಪರಿಹರಿಸಲು ಭಾರತ ಸಿದ್ಧವಿದೆ. ಇಂದು, ʻಅಂತರರಾಷ್ಟ್ರೀಯ ಸೌರ ಮೈತ್ರಿಕೂಟʼದ ಮೂಲಕ ಸೌರ ಶಕ್ತಿಯ ಬಳಕೆಯನ್ನು ಹೆಚ್ಚಿಸುವುದರಿಲಿ, ಪರಸ್ಪರ ಸಹಕಾರದ ಮೂಲಕ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯವನ್ನು ರಚಿಸುವುದಿರಲಿ, ʻಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲೈಯನ್ಸ್ʼ ಅನ್ನು ಮುನ್ನಡೆಸುವುದಿರಲಿ, ಭಾರತವು ಸದಾ ವಿವಿಧ ದೇಶಗಳನ್ನು ಒಂದುಗೂಡಿಸುವ ಬಂಧಕ ಶಕ್ತಿಯಾಗಿದೆ. ಇತ್ತೀಚೆಗೆ, ಟರ್ಕಿಯಲ್ಲಿ ವಿನಾಶಕಾರಿ ಭೂಕಂಪ ಸಂಭವಿಸಿದಾಗ, ಭಾರತವು ʻಆಪರೇಷನ್ ದೋಸ್ತ್ʼ ಮೂಲಕ ಸಹಾಯ ಹಸ್ತ ಚಾಚಿತು. ಭಾರತವು ತನ್ನ ಹಿತಾಸಕ್ತಿಗಳನ್ನು ಎಲ್ಲರ ಹಿತಾಸಕ್ತಿಗಳೊಂದಿಗೆ ಜೋಡಿಸುತ್ತದೆ. 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್' (ಎಲ್ಲರ ಬೆಂಬಲ, ಎಲ್ಲರ ಅಭಿವೃದ್ಧಿ, ಪ್ರತಿಯೊಬ್ಬರ ನಂಬಿಕೆ ಮತ್ತು ಪ್ರತಿಯೊಬ್ಬರ ಪ್ರಯತ್ನಗಳು) ನಮ್ಮ ದೇಶೀಯ ಆಡಳಿತದ ಆಧಾರ ಮಾತ್ರವಲ್ಲ, ಜಾಗತಿಕ ಆಡಳಿತದ ದೂರದೃಷ್ಟಿಯೂ ಆಗಿದೆ.

ಸ್ನೇಹಿತರೇ,

ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವ್ಯೂಹಾತ್ಮಕ ಸಹಭಾಗಿತ್ವವು ನಿರಂತರವಾಗಿ ಆಳವಾಗಿ ಬೆಳೆಯುತ್ತಿದೆ. ಇತ್ತೀಚೆಗೆ ನಾವು ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದಕ್ಕೆ (ಇಸಿಟಿಎ) ಸಹಿ ಹಾಕಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರವು ದ್ವಿಗುಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಈಗ ನಾವು ಸಮಗ್ರ ಆರ್ಥಿಕ ಸಹಕಾರ ಒಪ್ಪಂದದ ಮೇಲೆ ಕೆಲಸ ಮಾಡುತ್ತಿದ್ದೇವೆ. ನಾವು ಸ್ಥಿತಿಸ್ಥಾಪಕ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿಗಳನ್ನು ನಿರ್ಮಿಸುತ್ತಿದ್ದೇವೆ. ಇದು ಎರಡೂ ದೇಶಗಳ ವ್ಯವಹಾರವನ್ನು ಹೆಚ್ಚಿಸುವುದಲ್ಲದೆ, ವಿಶ್ವದಲ್ಲಿ ಹೊಸ ವಿಶ್ವಾಸವನ್ನು ಮೂಡಿಸುತ್ತದೆ. ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅನೇಕ ನೇರ ವಿಮಾನಗಳಿವೆ. ವರ್ಷಗಳಲ್ಲಿ ವಿಮಾನಗಳ ಸಂಖ್ಯೆ ಹೆಚ್ಚಾಗಿದೆ. ಮುಂಬರುವ ದಿನಗಳಲ್ಲಿ ಅವರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಎರಡೂ ದೇಶಗಳು ಪರಸ್ಪರರ ಪದವಿಗಳನ್ನು ಗುರುತಿಸುವಲ್ಲಿ ಮುಂದೆ ಸಾಗಿವೆ. ಇದರಿಂದ ನಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವವಾಗುತ್ತದೆ. ʻವಲಸೆ ಮತ್ತು ಚಲನಶೀಲತೆ ಪಾಲುದಾರಿಕೆʼ ಒಪ್ಪಂದದ ಬಗ್ಗೆಯೂ ಒಮ್ಮತಕ್ಕೆ ಬರಲಾಗಿದೆ. ಇದು ನಮ್ಮ ನುರಿತ ವೃತ್ತಿಪರರಿಗೆ ಆಸ್ಟ್ರೇಲಿಯಾಕ್ಕೆ ಬಂದು ಇಲ್ಲಿ ಕೆಲಸ ಮಾಡುವುದನ್ನು ಸುಲಭಗೊಳಿಸುತ್ತದೆ, ಜೊತೆಗೆ, ಸ್ನೇಹಿತರೇ, ನಾನು ಇಲ್ಲಿರುವಾಗಲೇ ಒಂದು ಘೋಷಣೆ ಮಾಡಲು ಬಯಸುತ್ತೇನೆ, ಬ್ರಿಸ್ಬೇನ್‌ನಲ್ಲಿರುವ ಭಾರತೀಯ ಸಮುದಾಯದ ಬೇಡಿಕೆ ಈಗ ಈಡೇರಲಿದೆ. ಶೀಘ್ರದಲ್ಲೇ ಬ್ರಿಸ್ಬೇನ್‌ನಲ್ಲಿ ಹೊಸ ಭಾರತೀಯ ದೂತಾವಾಸವನ್ನು ತೆರೆಯಲಾಗುವುದು.

ಸ್ನೇಹಿತರೇ,

ಭಾರತ ಮತ್ತು ಆಸ್ಟ್ರೇಲಿಯಾದ ಗಾಢವಾದ ಪಾಲುದಾರಿಕೆಯು ತಾಯಿ ಭಾರತಿಯಲ್ಲಿ ನಂಬಿಕೆ ಹೊಂದಿರುವ ಪ್ರತಿಯೊಬ್ಬರನ್ನೂ ಸಶಕ್ತಗೊಳಿಸುತ್ತದೆ. ನೀವು ಪ್ರತಿಭೆಯನ್ನು ಹೊಂದಿದ್ದೀರಿ, ನಿಮ್ಮ ಕೌಶಲ್ಯಗಳೇ ನಿಮ್ಮ ಶಕ್ತಿ. ನೀವು ನಿಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಸಹ ಹೊಂದಿದ್ದೀರಿ. ಆಸ್ಟ್ರೇಲಿಯಾದ ಜನರೊಂದಿಗೆ ಬೆರೆಯಲು ನಿಮಗೆ ಸಹಾಯ ಮಾಡುವಲ್ಲಿ ಈ ಮೌಲ್ಯಗಳು ಪ್ರಮುಖ ಪಾತ್ರವಹಿಸುತ್ತವೆ. ನಾನು ನಿನ್ನೆ ಪಪುವಾ ನ್ಯೂ ಗಿನಿಯಾದಿಂದ ಬಂದಿದ್ದೇನೆ. ಅಲ್ಲಿ ನಾನು ʻತಿರುಕ್ಕುರಲ್ʼ ಎಂಬ ತಮಿಳು ಸಾಹಿತ್ಯದ ಸ್ಥಳೀಯ ಭಾಷಾ ಅನುವಾದವನ್ನು ಲೋಕಾರ್ಪಣೆ ಮಾಡಿದೆ. ಈ ಭಾಷಾಂತರವನ್ನು ಅಲ್ಲಿನ ಭಾರತೀಯ ಮೂಲದ ಸ್ಥಳೀಯ ರಾಜ್ಯಪಾಲರು ಮಾಡಿದ್ದಾರೆ. ವಿದೇಶದಲ್ಲಿ ವಾಸಿಸುವಾಗಲೂ, ನಾವು ನಮ್ಮ ಬೇರುಗಳ ಬಗ್ಗೆ ಹೆಮ್ಮೆಪಡಬೇಕು ಮತ್ತು ನಮ್ಮ ಬೇರುಗಳೊಂದಿಗೆ ಹೇಗೆ ಸಂಪರ್ಕದಲ್ಲಿರಬೇಕು ಎಂಬುದಕ್ಕೆ ಇದು ಜೀವಂತ ಉದಾಹರಣೆಯಾಗಿದೆ. ನೀವು ಭಾರತೀಯ ಸಂಸ್ಕೃತಿಯ ಪರಿಮಳವನ್ನು ಆಸ್ಟ್ರೇಲಿಯಾದಲ್ಲಿ ಹರಡುತ್ತಿದ್ದೀರಿ. ನೀವು ಭಾರತದ ಸಾಂಸ್ಕೃತಿಕ ರಾಯಭಾರಿಗಳು, ಆಸ್ಟ್ರೇಲಿಯಾದಲ್ಲಿ ಭಾರತದ ಬ್ರಾಂಡ್ ಅಂಬಾಸಿಡರ್‌ಗಳು.

ಸ್ನೇಹಿತರೇ,

ನಾನು ಮಾತು ಮುಗಿಸುವ ಮೊದಲು ನಿಮ್ಮಿಂದ ಒಂದು ಕೇಳಲು ಬಯಸುತ್ತೇನೆ. ನೀವು ಅದನ್ನು ನನಗೆ ಕೊಡಬಲ್ಲಿರಾ? ನಿಮ್ಮ ಧ್ವನಿ ಸ್ವಲ್ಪ ದುರ್ಬಲಗೊಂಡಿದೆ. ನೀವು ಅದನ್ನು ನನಗೆ ಕೊಡುತ್ತೀರಾ? ಖಂಡಿತ? ಹೇಳಿ? ನೀವು ಭಾರತಕ್ಕೆ ಬಂದಾಗಲೆಲ್ಲಾ, ನೀವು ಭಾರತಕ್ಕೆ ಬಂದಾಗಲೆಲ್ಲಾ, ಕನಿಷ್ಠ ಒಬ್ಬ ಆಸ್ಟ್ರೇಲಿಯಾದ ಸ್ನೇಹಿತ ಮತ್ತು ಅವರ ಕುಟುಂಬವನ್ನು ನಿಮ್ಮೊಂದಿಗೆ ಕರೆತರಬೇಕೆಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಇದು ಅವರಿಗೆ ಭಾರತವನ್ನು ಅರ್ಥಮಾಡಿಕೊಳ್ಳಲು ಮತ್ತು ತಿಳಿದುಕೊಳ್ಳಲು ಉತ್ತಮ ಅವಕಾಶವನ್ನು ನೀಡುತ್ತದೆ. ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದೀರಿ. ಬಹಳ ಸಮಯದ ನಂತರ ನಿಮ್ಮನ್ನು ಭೇಟಿಯಾಗುವ ಅವಕಾಶ ನನಗೆ ಸಿಕ್ಕಿದೆ. ನಾನು ನಿಮಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ಸಂತೋಷವನ್ನು ಬಯಸುತ್ತೇನೆ! ಮತ್ತೊಮ್ಮೆ, ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು!

ನನ್ನೊಂದಿಗೆ ಹೇಳಿ - ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಅನಂತ ಧನ್ಯವಾದಗಳು!

***



(Release ID: 1929230) Visitor Counter : 114