ಪ್ರಧಾನ ಮಂತ್ರಿಯವರ ಕಛೇರಿ

ರಾಜಸ್ಥಾನದ ನಾಥದ್ವಾರದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ/ ಲೋಕಾರ್ಪಣೆ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ

Posted On: 10 MAY 2023 3:59PM by PIB Bengaluru

ಭಗವಾನ್ ಶ್ರೀನಾಥ್ ಜೀ ಕಿ ಜೈ!

ರಾಜಸ್ಥಾನದ ರಾಜ್ಯಪಾಲರಾದ ಶ್ರೀ ಕಲ್ರಾಜ್ ಮಿಶ್ರಾ ಅವರೇ, ನನ್ನ ಸ್ನೇಹಿತರಾದ ಮುಖ್ಯಮಂತ್ರಿ ಶ್ರೀ ಅಶೋಕ್ ಗೆಹ್ಲೋಟ್ ಅವರೇ, ವಿಧಾನಸಭೆ ಸ್ಪೀಕರ್ ಶ್ರೀ ಸಿ.ಪಿ.ಜೋಶಿ ಅವರೇ, ರಾಜ್ಯ ಸರ್ಕಾರದ ಸಚಿವರಾದ ಶ್ರೀ ಭಜನ್ ಲಾಲ್ ಜಾತವ್, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಶ್ರೀ ಚಂದ್ರ ಪ್ರಕಾಶ್ ಜೋಶಿ ಅವರೇ, ನನ್ನ ಸಂಸದೀಯ ಸಹೋದ್ಯೋಗಿಗಳಾದ ಸಹೋದರಿ ದಿಯಾ ಕುಮಾರಿ ಅವರೇ, ಶ್ರೀ ಕನಕ್ ಮಲ್ ಕತಾರಾ ಅವರೇ ಮತ್ತು ಶ್ರೀ ಅರ್ಜುನ್ ಲಾಲ್ ಮೀನಾ ಅವರೇ.  ಈ ಸಮಾರಂಭದಲ್ಲಿ ಉಪಸ್ಥಿತರಿರುವ ಇತರ ಎಲ್ಲ ಗಣ್ಯರು ಮತ್ತು ರಾಜಸ್ಥಾನದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ!

ಭಗವಾನ್ ಶ್ರೀನಾಥ್ ಜೀ ಅವರ ಪುಣ್ಯಭೂಮಿ ಹಾಗೂ ವೀರತ್ವದ ಸಂಕೇತವಾದ ಮೇವಾರ್ ನೆಲದಲ್ಲಿ ನಿಮ್ಮ ನಡುವೆ ಉಪಸ್ಥಿತರಿರುವ ಅವಕಾಶ ನನಗೆ ಮತ್ತೊಮ್ಮೆ ಸಿಕ್ಕಿದೆ. ಇಲ್ಲಿಗೆ ಬರುವ ಮೊದಲು, ಭಗವಾನ್ ಶ್ರೀನಾಥ್ ಜೀ ಅವರ ದರ್ಶನ ಪಡೆಯುವ ಅದೃಷ್ಟ ನನ್ನದಾಗಿತ್ತು. ಈ 'ಸ್ವಾತಂತ್ರ್ಯದ ಅಮೃತ ಕಾಲʼದಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಗಳ ಸಾಧನೆಗಾಗಿ ನಾನು ಶ್ರೀನಾಥ್ ಜೀ ಅವರಿಂದ ಆಶೀರ್ವಾದ ಕೋರಿದ್ದೇನೆ.

ಸ್ನೇಹಿತರೇ,

ಇಂದು ರಾಜಸ್ಥಾನದ ಅಭಿವೃದ್ಧಿಗೆ ಸಂಬಂಧಿಸಿದ 5,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ ಅಥವಾ ಶಂಕುಸ್ಥಾಪನೆ ಮಾಡಲಾಗುತ್ತಿದೆ. ಈ ಯೋಜನೆಗಳು ರಾಜಸ್ಥಾನದ ಸಂಪರ್ಕವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿವೆ. ಉದಯಪುರ ಮತ್ತು ಶಾಮ್ಲಾಜಿ ನಡುವೆ ಆರು ಪಥಗಳ ರಾಷ್ಟ್ರೀಯ ಹೆದ್ದಾರಿ-8 ನಿರ್ಮಾಣವು ಉದಯಪುರ, ಡುಂಗರಪುರ ಮತ್ತು ಬನ್ಸ್‌ವಾರಾ ಪ್ರದೇಶಗಳಿಗೆ ಭಾರಿ ಪ್ರಯೋಜನವನ್ನು ನೀಡುತ್ತದೆ. ಇದು ಶಾಮ್ಲಾಜಿ ಮತ್ತು ಕಾಯಾ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಬಿಲಾರಾ ಮತ್ತು ಜೋಧಪುರ ವಿಭಾಗಗಳ ನಿರ್ಮಾಣದೊಂದಿಗೆ, ಜೋಧಪುರ ಮತ್ತು ಗಡಿ ಪ್ರದೇಶವನ್ನು ಸುಲಭವಾಗಿ ತಲುಪಲು ಸಾಧ್ಯವಾಗಲಿದೆ. ಇದರ ಪ್ರಮುಖ ಪ್ರಯೋಜನವೆಂದರೆ ಜೈಪುರದಿಂದ ಜೋಧಪುರಕ್ಕೆ 3 ಗಂಟೆಗಳ ದೂರವೂ ಕಡಿಮೆಯಾಗುತ್ತದೆ. ಚಾರ್ಭುಜಾ ಮತ್ತು ನೀಚ್ಲಿ ಒಡೆನ್ ಯೋಜನೆಗಳು ವಿಶ್ವ ಪರಂಪರೆಯ ತಾಣಗಳಾದ ಕುಂಭಲ್‌ಗಡ್, ಹಲ್ದಿಘಾಟಿ ಮತ್ತು ಶ್ರೀನಾಥ್‌ಜಿಗೆ ಭೇಟಿಯನ್ನು ಬಹಳ ಸಲೀಸಾಗಿಸುತ್ತದೆ. ಶ್ರೀ ನಾಥದ್ವಾರದಿಂದ ದಿಯೋಗಢ ಮದರಿಯಾವರೆಗಿನ ರೈಲು ಮಾರ್ಗವು ಮೇವಾರ್ ಅನ್ನು ಮಾರ್ವಾರ್ ಜೊತೆ ಸಂಪರ್ಕಿಸುತ್ತದೆ. ಇದರಿಂದ ಅಮೃತಶಿಲೆ, ಗ್ರಾನೈಟ್ ಮತ್ತು ಗಣಿಗಾರಿಕೆ ಉದ್ಯಮಗಳಿಗೆ ಹಾಗೂ ವ್ಯಾಪಾರಿಗಳಿಗೆ ಹೆಚ್ಚಿನ ಸಹಾಯಕವಾಗುತ್ತದೆ. ಈ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ರಾಜಸ್ಥಾನದ ಎಲ್ಲ ಜನರನ್ನು ಅಭಿನಂದಿಸುತ್ತೇನೆ.

ಸಹೋದರ ಸಹೋದರಿಯರೇ,

ಭಾರತ ಸರಕಾರವು ರಾಜ್ಯಗಳ ಅಭಿವೃದ್ಧಿಯ ಮೂಲಕ ದೇಶದ ಅಭಿವೃದ್ಧಿಯ ತತ್ವವನ್ನು ನಂಬುತ್ತದೆ. ರಾಜಸ್ಥಾನವು ದೇಶದ ಅತಿದೊಡ್ಡ ರಾಜ್ಯಗಳಲ್ಲಿ ಒಂದಾಗಿದೆ. ರಾಜಸ್ಥಾನವು ಭಾರತದ ಶೌರ್ಯ, ಭಾರತದ ಪರಂಪರೆ ಮತ್ತು ಸಂಸ್ಕೃತಿಯ ಸಂಕೇತವಾಗಿದೆ. ರಾಜಸ್ಥಾನವು ಹೆಚ್ಚು ಅಭಿವೃದ್ಧಿ ಹೊಂದಿದಷ್ಟೂ, ಭಾರತದ ಅಭಿವೃದ್ಧಿ ಸಹ  ವೇಗವನ್ನು ಪಡೆಯುತ್ತದೆ. ಅದಕ್ಕಾಗಿಯೇ ನಮ್ಮ ಸರಕಾರ ರಾಜಸ್ಥಾನದಲ್ಲಿ ಆಧುನಿಕ ಮೂಲಸೌಕರ್ಯಕ್ಕೆ ಗರಿಷ್ಠ ಒತ್ತು ನೀಡುತ್ತಿದೆ. ನಾನು ಆಧುನಿಕ ಮೂಲಸೌಕರ್ಯದ ಬಗ್ಗೆ ಮಾತನಾಡುವಾಗ, ಅದು ಕೇವಲ ರೈಲು ಮತ್ತು ರಸ್ತೆ ಎಂದರ್ಥವಲ್ಲ. ಆಧುನಿಕ ಮೂಲಸೌಕರ್ಯವು ನಗರಗಳು ಮತ್ತು ಹಳ್ಳಿಗಳಲ್ಲಿ ಸಂಪರ್ಕವನ್ನು ಹೆಚ್ಚಿಸುತ್ತದೆ, ದೂರವನ್ನು ಕಡಿಮೆ ಮಾಡುತ್ತದೆ. ಆಧುನಿಕ ಮೂಲಸೌಕರ್ಯವು ಸಮಾಜದಲ್ಲಿ ಸೌಲಭ್ಯಗಳನ್ನು ಹೆಚ್ಚಿಸುತ್ತದೆ ಮತ್ತು ಸಮಾಜವನ್ನು ಸಂಪರ್ಕಿಸುತ್ತದೆ. ಆಧುನಿಕ ಮೂಲಸೌಕರ್ಯವು ಡಿಜಿಟಲ್ ಸೇವೆಗಳನ್ನು ಹೆಚ್ಚಿಸುತ್ತದೆ ಮತ್ತು ಜನರ ಜೀವನವನ್ನು ಸುಲಭಗೊಳಿಸುತ್ತದೆ. ಆಧುನಿಕ ಮೂಲಸೌಕರ್ಯ, ಪರಂಪರೆಯನ್ನು ಉತ್ತೇಜಿಸುವುದರ ಜೊತೆಗೆ, ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ. ಮುಂಬರುವ 25 ವರ್ಷಗಳಲ್ಲಿ ʻಅಭಿವೃದ್ಧಿ ಹೊಂದಿದ ಭಾರತʼದ ಸಂಕಲ್ಪದ ಬಗ್ಗೆ ನಾವು ಮಾತನಾಡುವುದಾದರೆ, ಈ ಮೂಲಸೌಕರ್ಯವು ಕೇಂದ್ರಸ್ಥಾನ ಪಡೆದು, ಹೊಸ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಇಂದು, ದೇಶದ ಎಲ್ಲಾ ರೀತಿಯ ಮೂಲಸೌಕರ್ಯಗಳಲ್ಲಿ ಅಭೂತಪೂರ್ವ ಹೂಡಿಕೆ ಮಾಡಲಾಗುತ್ತಿದೆ. ಈ ಕಾಮಗಾರಿಯೂ ಅಭೂತಪೂರ್ವ ವೇಗದಲ್ಲಿ ನಡೆಯುತ್ತಿದೆ. ಅದು ರೈಲ್ವೆ ಆಗಿರಲಿ, ಹೆದ್ದಾರಿಗಳು ಅಥವಾ ವಿಮಾನ ನಿಲ್ದಾಣಗಳಾಗಿರಲಿ, ಭಾರತ ಸರ್ಕಾರವು ಪ್ರತಿಯೊಂದು ಕ್ಷೇತ್ರದಲ್ಲೂ ಸಾವಿರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದೆ. ಈ ವರ್ಷದ ಬಜೆಟ್ ನಲ್ಲಿಯೂ ಭಾರತ ಸರ್ಕಾರವು ಮೂಲಸೌಕರ್ಯಕ್ಕಾಗಿ 10 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲು ನಿರ್ಧರಿಸಿದೆ.

ಸ್ನೇಹಿತರೇ,

ಮೂಲಸೌಕರ್ಯದ ಮೇಲೆ ಇಷ್ಟೊಂದು ಹೂಡಿಕೆ ಮಾಡುವುದರಿಂದ, ಅದು ಆ ಪ್ರದೇಶದ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಹೊಸ ರಸ್ತೆಗಳು ಮತ್ತು ಹೊಸ ರೈಲ್ವೆ ಮಾರ್ಗಗಳನ್ನು ನಿರ್ಮಿಸಿದಾಗ, ಹಳ್ಳಿಗಳಲ್ಲಿ ʻಪಿಎಂ ಆವಾಸ್ ಯೋಜನೆʼಯಡಿ ಕೋಟ್ಯಂತರ ಮನೆಗಳನ್ನು ನಿರ್ಮಿಸಿದಾಗ, ಕೋಟಿ ಶೌಚಾಲಯಗಳನ್ನು ನಿರ್ಮಿಸಿದಾಗ, ಹಳ್ಳಿಗಳಲ್ಲಿ ಲಕ್ಷಾಂತರ ಕಿಲೋಮೀಟರ್ ಆಪ್ಟಿಕಲ್ ಫೈಬರ್ ಹಾಕಿದಾಗ ಮತ್ತು ಪ್ರತಿ ಮನೆಗೆ ನೀರಿನ ಪೈಪ್ ಗಳನ್ನು ಹಾಕಿದಾಗ, ಅಂತಹ ವಸ್ತುಗಳನ್ನು ಪೂರೈಸುವ ಸ್ಥಳೀಯ ಸಣ್ಣ ಉದ್ಯಮಿಗಳು,  ಆ ಸಣ್ಣ ಅಂಗಡಿಯವರು ಮತ್ತು ಆ ಪ್ರದೇಶದ ಕಾರ್ಮಿಕರು ಇದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯುತ್ತಾರೆ. ಭಾರತ ಸರಕಾರದ ಈ ಯೋಜನೆಗಳು ಆರ್ಥಿಕತೆಗೆ ಹೊಸ ಉತ್ತೇಜನ ನೀಡಿವೆ.

 

ಆದರೆ ಸ್ನೇಹಿತರೇ, ನಮ್ಮ ದೇಶದ ಕೆಲವು ಜನರು ಎಂತಹ ತಿರುಚಿದ ಸಿದ್ಧಾಂತಕ್ಕೆ ಬಲಿಪಶುಗಳಾಗಿದ್ದಾರೆ ಎಂದರೆ, ಅವರಲ್ಲಿ ಬರೀ ನಕಾರಾತ್ಮಕತೆಯೇ ತುಂಬಿದೆ. ಅವರು ದೇಶದಲ್ಲಿ ಯಾವ ಒಳ್ಳೆಯದನ್ನು ನೋಡಲು ಬಯಸುವುದಿಲ್ಲ. ಅವರು ಸದಾ ವಿವಾದವನ್ನು ಸೃಷ್ಟಿಸಲು ಮಾತ್ರ ಬಯಸುತ್ತಾರೆ. ಈಗ ಅಂತಹ ಕೆಲವರು 'ಆಟ್ಟಾ ಪೆಹ್ಲೆ ಕಿ ಡೇಟಾ ಪೆಹ್ಲೆ?ʼ (ಗೋಧಿ ಹಿಟ್ಟು ಮೊದಲೋ ಅಥವಾ ಡೇಟಾ ಮೊದಲು?) ಅಥವಾ 'ಸಡಕ್ ಪೆಹ್ಲೆ ಕಿ ಸ್ಯಾಟಲೈಟ್ ಪೆಹ್ಲೆ' (ರಸ್ತೆಗಳು ಮೊದಲಾ ಅಥವಾ ಉಪಗ್ರಹ ಮೊದಲಾ?) ಎಂದು ಹೇಳುವುದನ್ನು ನೀವು ಕೇಳಿರಬಹುದು? ಆದರೆ ಸುಸ್ಥಿರ ಮತ್ತು ಕ್ಷಿಪ್ರ ಅಭಿವೃದ್ಧಿಗಾಗಿ ಮೂಲಭೂತ ಸೌಕರ್ಯಗಳ ಜೊತೆಗೆ ಆಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಅವಶ್ಯಕ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಪ್ರತಿಯೊಂದು ಹಂತದಲ್ಲೂ ಎಲ್ಲವನ್ನೂ ವೋಟ್ ಬ್ಯಾಂಕ್ ದೃಷ್ಟಿಕೋನದಿಂದ ನೋಡುವವರು, ದೇಶದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಲು ಎಂದಿಗೂ ಸಾಧ್ಯವಾಗುವುದಿಲ್ಲ.

ನಾವು ಅನೇಕ ಬಾರಿ ನೋಡಿರುವಂತೆ, ಗ್ರಾಮದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲಾಗಿರುತ್ತದೆ. ಆದರೆ, ಅದು 4-5 ವರ್ಷಗಳಲ್ಲೇ ಅಸಮರ್ಪಕವಾಗುತ್ತದೆ. 4-5 ವರ್ಷಗಳಲ್ಲಿ ಅಸಮರ್ಪಕವೆಂದು ತೋರುವ ಹಲವಾರು ರಸ್ತೆಗಳು ಅಥವಾ ಮೇಲ್ಸೇತುವೆಗಳಿವೆ. ನಮ್ಮ ದೇಶದಲ್ಲಿ ಈ ಮನಸ್ಥಿತಿಯಿಂದಾಗಿ, ಮೂಲಸೌಕರ್ಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಿಲ್ಲ. ಪರಿಣಾಮವಾಗಿ, ದೇಶವು ಸಾಕಷ್ಟು ತೊಂದರೆ ಅನುಭವಿಸಿದೆ. ಉದಾಹರಣೆಗೆ, ಈ ಹಿಂದೆ ಸಾಕಷ್ಟು ಸಂಖ್ಯೆಯ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಿದ್ದರೆ, ದೇಶದಲ್ಲಿ ವೈದ್ಯರ ಕೊರತೆ ಇರುತ್ತಿರಲಿಲ್ಲ. ರೈಲ್ವೆ ಮಾರ್ಗಗಳನ್ನು ಮೊದಲೇ ವಿದ್ಯುದ್ದೀಕರಣಗೊಳಿಸಿದ್ದರೆ, ಈಗ ಈ ಕೆಲಸವನ್ನು ಮಾಡಲು ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಅಗತ್ಯವಿರಲಿಲ್ಲ. ಈ ಹಿಂದೆ ಕೊಳವೆ ನೀರು ಸರಬರಾಜು ಇದ್ದಿದ್ದರೆ, ಇಂದು 3.5 ಲಕ್ಷ ಕೋಟಿ ರೂ.ಗಳ ವೆಚ್ಚದಲ್ಲಿ ʻಜಲ ಜೀವನ್ ಮಿಷನ್ʼ ಅನ್ನು ಪ್ರಾರಂಭಿಸಬೇಕಾಗಿರಲಿಲ್ಲ. ನಕಾರಾತ್ಮಕತೆಯಿಂದ ತುಂಬಿರುವ ಜನರಿಗೆ ಯಾವುದೇ ದೂರದೃಷ್ಟಿ ಇರುವುದಿಲ್ಲ ಅಥವಾ ರಾಜಕೀಯ ಲಾಭಗಳನ್ನು ಮೀರಿ ಯೋಚಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ನಾಥದ್ವಾರದ ಜೀವನಾಡಿ ಎಂದು ಕರೆಯಲ್ಪಡುವ ನಂದಸಮಂದ್ ಅಣೆಕಟ್ಟು ಅಥವಾ ತಾಂತೋಲ್ ಅಣೆಕಟ್ಟನ್ನು ನಿರ್ಮಿಸದಿದ್ದರೆ ಏನಾಗುತ್ತಿತ್ತು ಎಂದು ಊಹಿಸಿ. ರಾಜಸ್ಥಾನ ಮತ್ತು ಗುಜರಾತ್ ಜನರು ಲಖಾ ಬಂಜಾರಾ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ನೀರಿನ ಅಭಾವದ ಸಮಸ್ಯೆಯನ್ನು ಪರಿಹರಿಸಲು ಲಖಾ ಬಂಜಾರ ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ನೀರಿಗಾಗಿ ಅಷ್ಟೊಂದು ಕೆಲಸ ಮಾಡಿದ್ದು ಯಾರು? ಸುತ್ತಲೂ ಮೆಟ್ಟಿಲು ಬಾವಿಗಳನ್ನು ನಿರ್ಮಿಸಿದವರು ಯಾರು ಎಂದು ನೀವು ಕೇಳಿದರೆ, ಅದು ಲಖಾ ಬಂಜಾರ ಎಂದು ಅಲ್ಲಿನ ಜನರು ಹೇಳುತ್ತಾರೆ; ಅಲ್ಲಿ ಕೊಳವನ್ನು ನಿರ್ಮಿಸಿದವರು ಯಾರು ಎಂದು ನೀವು ಕೇಳಿದರೆ, ಅದು ಲಖಾ ಬಂಜಾರಾ ಎಂದು ಅವರು ಹೇಳುತ್ತಾರೆ. ಗುಜರಾತ್ ಮತ್ತು ರಾಜಸ್ಥಾನದಲ್ಲಿ ಈ ಮಾತನ್ನು ಹೇಳಲಾಗುತ್ತದೆ. ಅಂದರೆ, ನೀರಿಗೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಿದವರು ಲಖಾ ಬಂಜಾರ ಎಂದು ಎಲ್ಲರೂ ನಂಬುತ್ತಾರೆ. ಆದರೆ ಇಂದು ಪರಿಸ್ಥಿತಿ ಹೇಗಿದೆಯೆಂದರೆ ಅದೇ ಲಖಾ ಬಂಜಾರ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಈ ನಕಾರಾತ್ಮಕ ಮನಸ್ಸಿನ ಜನರು ಅವರನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ರಾಜಕೀಯ ಪಕ್ಷಗಳ ಮೈತ್ರಿಕೂಟವನ್ನು ರಚಿಸಲು ಪ್ರಯತ್ನಿಸುತ್ತಾರೆ.

ಸ್ನೇಹಿತರೇ,

ದೂರದೃಷ್ಟಿಯೊಂದಿಗೆ ಮೂಲಸೌಕರ್ಯಗಳನ್ನು ನಿರ್ಮಿಸದ ಪರಿಣಾಮವಾಗಿ ರಾಜಸ್ಥಾನವು ಸಾಕಷ್ಟು ತೊಂದರೆಗಳನ್ನು ಅನುಭವಿಸಿದೆ. ಸಂಪರ್ಕದ ಕೊರತೆಯಿಂದಾಗಿ ಈ ಮರುಭೂಮಿಯಲ್ಲಿ ಪ್ರಯಾಣಿಸುವುದು ಎಷ್ಟು ಕಷ್ಟಕರವಾಗಿತ್ತು ಎಂದು ನಿಮಗೆ ಚೆನ್ನಾಗಿ ಗೊತ್ತಿದೆ. ಈ ತೊಂದರೆ ಕೇವಲ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಇದು ಕೃಷಿ, ಹೈನುಗಾರಿಕೆ, ವ್ಯಾಪಾರ ಮತ್ತು ವ್ಯವಹಾರವನ್ನೂ ಕಷ್ಟಕರವಾಗಿಸಿತು. ಅಟಲ್ ಜೀ ಅವರ ಸರ್ಕಾರವು 2000ರಲ್ಲಿ ʻಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆʼಯನ್ನು ಪ್ರಾರಂಭಿಸಿತು. 2014ರವರೆಗೆ, ಸುಮಾರು 3 ಲಕ್ಷ 80 ಸಾವಿರ ಕಿಲೋಮೀಟರ್ ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲಾಗಿತ್ತು. ಇದರ ನಡುವೆಯೂ ದೇಶದ ಲಕ್ಷಾಂತರ ಹಳ್ಳಿಗಳು ಸರಿಯಾದ ರಸ್ತೆ ಸಂಪರ್ಕವನ್ನು ಹೊಂದಿರಲಿಲ್ಲ. 2014ರಲ್ಲಿ, ಪ್ರತಿ ಹಳ್ಳಿಗೆ ಡಾಂಬರು/ಸಿಮೆಂಟ್‌ ರಸ್ತೆಗಳನ್ನು ಒದಗಿಸುವುದಾಗಿ ಎಂದು ನಾವು ಪ್ರತಿಜ್ಞೆ ಮಾಡಿದೆವು. ಕಳೆದ 9 ವರ್ಷಗಳಲ್ಲಿ ನಾವು ಹಳ್ಳಿಗಳಲ್ಲಿ ಸುಮಾರು 3.5 ಲಕ್ಷ ಕಿಲೋಮೀಟರ್ ಹೊಸ ರಸ್ತೆಗಳನ್ನು ನಿರ್ಮಿಸಿದ್ದೇವೆ. ಈ ಪೈಕಿ 70,000 ಕಿಲೋಮೀಟರ್ ರಸ್ತೆಗಳನ್ನು ರಾಜಸ್ಥಾನದ ಹಳ್ಳಿಗಳಲ್ಲಿ ನಿರ್ಮಿಸಲಾಗಿದೆ. ಈಗ ದೇಶದ ಹೆಚ್ಚಿನ ಹಳ್ಳಿಗಳು ಸದೃಢ  ರಸ್ತೆಗಳ ಮೂಲಕ ಸಂಪರ್ಕ ಹೊಂದಿವೆ.

 

ಕೊಂಚ ಊಹಿಸಿ ನೋಡಿ, ಈ ಕೆಲಸವನ್ನು ಮೊದಲೇ ಮಾಡಿದ್ದರೆ, ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ವಾಸಿಸುವ ನಮ್ಮ ಸಹೋದರ-ಸಹೋದರಿಯರ ಜೀವನ ಎಷ್ಟು ಸುಲಭವಾಗಿರುತ್ತಿತ್ತು. ಸ್ನೇಹಿತರೇ, ಹಳ್ಳಿಗಳನ್ನು ರಸ್ತೆಗಳೊಂದಿಗೆ ಸಂಪರ್ಕಿಸುವುದರ ಜೊತೆಗೆ, ಭಾರತ ಸರಕಾರವು ನಗರಗಳನ್ನು ಆಧುನಿಕ ಹೆದ್ದಾರಿಗಳೊಂದಿಗೆ ಸಂಪರ್ಕಿಸುವಲ್ಲಿಯೂ ನಿರತವಾಗಿದೆ. ಇಂದು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಕಾರ್ಯವು 2014ರ ಹಿಂದಿನ ಅವಧಿಗೆ ಹೋಲಿಸಿದರೆ ದುಪ್ಪಟ್ಟು ವೇಗದಲ್ಲಿ ನಡೆಯುತ್ತಿದೆ. ರಾಜಸ್ಥಾನದ ಹಲವಾರು ಜಿಲ್ಲೆಗಳು ಸಹ ಇದರ ಪ್ರಯೋಜನ ಪಡೆದಿವೆ. ಇತ್ತೀಚೆಗೆ, ನಾನು ದೌಸಾದಲ್ಲಿ ʻದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇʼ ಪ್ರಮುಖ ವಿಭಾಗವನ್ನು ಉದ್ಘಾಟಿಸಿದ್ದೇನೆ.


ಸಹೋದರ ಸಹೋದರಿಯರೇ,

ಇಂದು ಭಾರತದ ಸಮಾಜವು ಮಹತ್ವಾಕಾಂಕ್ಷೆಯ ಸಮಾಜವಾಗಿದೆ. ಇಂದು, 21ನೇ ಶತಮಾನದ ಈ ದಶಕದಲ್ಲಿ, ಜನರು ಕಡಿಮೆ ಸಮಯದಲ್ಲಿ ಗರಿಷ್ಠ ದೂರವನ್ನು ಕ್ರಮಿಸಲು ಬಯಸುತ್ತಾರೆ ಮತ್ತು ಗರಿಷ್ಠ ಸಂಖ್ಯೆಯ ಸೌಲಭ್ಯಗಳನ್ನು ಬಯಸುತ್ತಾರೆ. ಸರಕಾರದ ಭಾಗವಾಗಿರುವ ಕಾರಣ, ಭಾರತದ ಜನರ ಮತ್ತು ರಾಜಸ್ಥಾನದ ಜನರ ಈ ಆಕಾಂಕ್ಷೆಯನ್ನು ಈಡೇರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ರಸ್ತೆಗಳು ಮಾತ್ರವಲ್ಲದೆ, ತ್ವರಿತ ಪ್ರಯಾಣಕ್ಕಾಗಿ ರೈಲ್ವೆಯ ಪ್ರಾಮುಖ್ಯತೆ ನಮಗೆಲ್ಲರಿಗೂ ತಿಳಿದಿದೆ. ಇಂದಿಗೂ, ಬಡವರು ಅಥವಾ ಮಧ್ಯಮ ವರ್ಗದವರು ಕುಟುಂಬದೊಂದಿಗೆ ಎಲ್ಲಿಗಾದರೂ ಹೋಗಲು ಬಯಸಿದರೆ, ಮೊದಲ ಆಯ್ಕೆ ಯಾವಾಗಲೂ ರೈಲೇ ಆಗಿರುತ್ತದೆ. ಅದಕ್ಕಾಗಿಯೇ ಇಂದು ಭಾರತ ಸರಕಾರವು ತನ್ನ ದಶಕಗಳಷ್ಟು ಹಳೆಯದಾದ ರೈಲು ಜಾಲವನ್ನು ಸುಧಾರಿಸುತ್ತಿದೆ ಮತ್ತು ಆಧುನೀಕರಿಸುತ್ತಿದೆ. ಅದು ಆಧುನಿಕ ರೈಲುಗಳಾಗಿರಬಹುದು, ಆಧುನಿಕ ರೈಲ್ವೆ ನಿಲ್ದಾಣಗಳಾಗಿರಬಹುದು ಅಥವಾ ಆಧುನಿಕ ರೈಲ್ವೆ ಹಳಿಗಳಾಗಿರಬಹುದು, ನಾವು ಪ್ರತಿ ಹಂತದಲ್ಲೂ ಏಕಕಾಲದಲ್ಲಿ ಎಲ್ಲಾ ದಿಕ್ಕುಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಇಂದು ರಾಜಸ್ಥಾನವು ತನ್ನ ಮೊದಲ ʻವಂದೇ ಭಾರತ್ ಎಕ್ಸ್‌ಪ್ರೆಸ್ʼ  ರೈಲನ್ನು ಸಹ ಪಡೆದುಕೊಂಡಿದೆ. ಮಾವ್ಲಿ-ಮಾರ್ವಾರ್ ಗೇಜ್ ಪರಿವರ್ತನೆಗಾಗಿ ಬಹಳ ಹಿಂದಿನಿಂದಲೂ ಬೇಡಿಕೆ ಇತ್ತು. ಅದು ಈಗ ಈಡೇರುತ್ತಿದೆ. ಅಂತೆಯೇ, ಅಹಮದಾಬಾದ್ ಮತ್ತು ಉದಯಪುರ ನಡುವಿನ ಸಂಪೂರ್ಣ ಮಾರ್ಗವನ್ನು ಬ್ರಾಡ್‌ಗೇಜ್ ಆಗಿ ಪರಿವರ್ತಿಸುವ ಕೆಲಸವೂ ಕೆಲವು ತಿಂಗಳ ಹಿಂದೆ ಪೂರ್ಣಗೊಂಡಿದೆ. ಉದಯಪುರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಜನರು ಈ ಹೊಸ ಮಾರ್ಗದಲ್ಲಿ ಚಲಿಸುವ ರೈಲುಗಳಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ.

 

ಸ್ನೇಹಿತರೇ, ಇಡೀ ರೈಲು ಜಾಲವನ್ನು ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳಿಂದ ಮುಕ್ತಗೊಳಿಸಿದ ನಂತರ, ನಾವು ಈಗ ಇಡೀ ಜಾಲವನ್ನು ತ್ವರಿತವಾಗಿ ವಿದ್ಯುದ್ದೀಕರಣಗೊಳಿಸುತ್ತಿದ್ದೇವೆ. ಉದಯಪುರ ರೈಲ್ವೆ ನಿಲ್ದಾಣದಂತೆ, ನಾವು ದೇಶದ ನೂರಾರು ರೈಲ್ವೆ ನಿಲ್ದಾಣಗಳನ್ನು ಆಧುನೀಕರಿಸುತ್ತಿದ್ದೇವೆ ಮತ್ತು ಅವುಗಳ ಸಾಮರ್ಥ್ಯವನ್ನು ವಿಸ್ತರಿಸುತ್ತಿದ್ದೇವೆ. ಈ ಎಲ್ಲದರ ಜೊತೆಗೆ, ನಾವು ಸರಕು ರೈಲುಗಳಿಗಾಗಿ ವಿಶೇಷ ಹಳಿಗಳು ಮತ್ತು ಮೀಸಲಾದ ಸರಕು ಕಾರಿಡಾರ್‌ಗಳನ್ನು ನಿರ್ಮಿಸುತ್ತಿದ್ದೇವೆ.


ಸ್ನೇಹಿತರೇ,

ಕಳೆದ 9 ವರ್ಷಗಳಲ್ಲಿ ರಾಜಸ್ಥಾನದ ರೈಲ್ವೆ ಬಜೆಟ್ ಕೂಡ 2014ಕ್ಕೆ ಹೋಲಿಸಿದರೆ 14 ಪಟ್ಟು ಹೆಚ್ಚಾಗಿದೆ. ಕಳೆದ 9 ವರ್ಷಗಳಲ್ಲಿ, ರಾಜಸ್ಥಾನದ ಸುಮಾರು 75 ಪ್ರತಿಶತದಷ್ಟು ರೈಲು ಜಾಲವನ್ನು ವಿದ್ಯುದ್ದೀಕರಿಸಲಾಗಿದೆ. ಇಲ್ಲಿ ಡುಂಗರಪುರ, ಉದಯಪುರ, ಚಿತ್ತೋರ್, ಪಾಲಿ, ಸಿರೋಹಿ ಮತ್ತು ರಾಜ್‌ಸಮಂದ್ ಜಿಲ್ಲೆಗಳು ಗೇಜ್ ಪರಿವರ್ತನೆ ಮತ್ತು ಮಾರ್ಗ ಡಬ್ಲಿಂಗ್‌ನಿಂದಾಗಿ ಅಪಾರ ಪ್ರಯೋಜನ ಪಡೆದಿವೆ. ರೈಲ್ವೆ ಮಾರ್ಗಗಳನ್ನು ಶೇಕಡಾ 100 ರಷ್ಟು ವಿದ್ಯುದ್ದೀಕರಿಸಿದ ರಾಜ್ಯಗಳ ಪಟ್ಟಿಗೆ ರಾಜಸ್ಥಾನವೂ ಸೇರುವ ದಿನ ದೂರವಿಲ್ಲ.

ಸಹೋದರ ಸಹೋದರಿಯರೇ,

ರಾಜಸ್ಥಾನದಲ್ಲಿ ಉತ್ತಮ ಸಂಪರ್ಕವಿರುವುದರಿಂದ, ಇಲ್ಲಿನ ಪ್ರವಾಸೋದ್ಯಮ ಮತ್ತು ನಮ್ಮ ಯಾತ್ರಾ ಸ್ಥಳಗಳು ಸಾಕಷ್ಟು ಪ್ರಯೋಜನ ಪಡೆಯುತ್ತಿವೆ. ಮೇವಾರ್‌ನ ಈ ಪ್ರದೇಶವು ಹಲ್ದಿಘಾಟಿ ಭೂಮಿಯ ಒಂದು ಭಾಗವಾಗಿದೆ. ರಾಣಾ ಪ್ರತಾಪ್ ಅವರ ಶೌರ್ಯ, ಭಾಮಾಷಾ ಅವರ ಸಮರ್ಪಣೆ ಮತ್ತು ರಾಷ್ಟ್ರದ ರಕ್ಷಣೆಗಾಗಿ ವೀರ್ ಪನ್ನಾ ಧಾಯ್ ಅವರ ತ್ಯಾಗದ ಕಥೆಗಳು ಈ ಮಣ್ಣಿನ ಪ್ರತಿಯೊಂದು ಕಣದಲ್ಲಿ ಅಚ್ಚಳಿಯದೆ ಉಳಿದಿವೆ. ನಿನ್ನೆ, ದೇಶವು ಮಹಾರಾಣಾ ಪ್ರತಾಪ್ ಅವರನ್ನು ಅವರ ಜನ್ಮದಿನದ ಅಂಗವಾಗಿ ಬಹಳ ಭಕ್ತಿಯಿಂದ ಸ್ಮರಿಸಿತು. ಈ ಶ್ರೀಮಂತ ಪರಂಪರೆಯನ್ನು ಗರಿಷ್ಠ ಸಂಖ್ಯೆಯ ದೇಶಗಳಿಗೆ ಮತ್ತು ಜಗತ್ತಿಗೆ ಕೊಂಡೊಯ್ಯುವುದು ನಮಗೆ ಅಗತ್ಯವಾಗಿದೆ. ಅದಕ್ಕಾಗಿಯೇ ಇಂದು ಭಾರತ ಸರಕಾರ ತನ್ನ ಪರಂಪರೆಯ ಅಭಿವೃದ್ಧಿಗಾಗಿ ವಿವಿಧ ಸರ್ಕ್ಯೂಟ್‌ಗಳಲ್ಲಿ ಕೆಲಸ ಮಾಡುತ್ತಿದೆ. ಭಗವಾನ್ ಶ್ರೀ ಕೃಷ್ಣನಿಗೆ ಸಂಬಂಧಿಸಿದ ಯಾತ್ರಾ ಸ್ಥಳಗಳನ್ನು ʻಕೃಷ್ಣ ಸರ್ಕ್ಯೂಟ್ʼ ಮೂಲಕ ಸಂಪರ್ಕಿಸಲಾಗುತ್ತಿದೆ. ಇಲ್ಲಿ ರಾಜಾಸ್ಥಾನದಲ್ಲಿ ಗೋವಿಂದ್ ದೇವ್ ಜೀ, ಖತು ಶ್ಯಾಮ್ ಜೀ ಮತ್ತು ಶ್ರೀನಾಥ್ ಜೀ ಅವರ ದರ್ಶನಕ್ಕೆ ಅನುಕೂಲವಾಗುವಂತೆ ʻಕೃಷ್ಣ ಸರ್ಕ್ಯೂಟ್ʼಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಸಹೋದರ ಸಹೋದರಿಯರೇ, ಭಾರತ ಸರಕಾರವು ಸೇವೆಯನ್ನು ಭಕ್ತಿಯೆಂದು ಪರಿಗಣಿಸಿ ಹಗಲು ರಾತ್ರಿ ಶ್ರಮಿಸುತ್ತಿದೆ. ಉತ್ತಮ ಆಡಳಿತದ ಮೂಲಕ ಸಾರ್ವಜನಿಕರ ಜೀವನವನ್ನು ಸುಲಭಗೊಳಿಸುವುದು ನಮ್ಮ ಸರಕಾರದ ಆದ್ಯತೆಯಾಗಿದೆ. ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಸೌಲಭ್ಯಗಳು, ಸಂತೋಷ ಮತ್ತು ಭದ್ರತೆಯನ್ನು ಹೆಚ್ಚಿಸಲು ಅವಿರತ ಕೆಲಸ ನಡೆಯುತ್ತಿದೆ. ಶ್ರೀನಾಥ್ ಜೀ ಅವರ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ! ಈ ಆಶಯದೊಂದಿಗೆ, ಅಭಿವೃದ್ಧಿ ಯೋಜನೆಗಳಿಗಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ಅನಂತ ಧನ್ಯವಾದಗಳು.

ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ! ಧನ್ಯವಾದಗಳು!

 

*****



(Release ID: 1928282) Visitor Counter : 123