ಪ್ರಧಾನ ಮಂತ್ರಿಯವರ ಕಛೇರಿ

ನೂತನ ಸಂಸತ್ ಭವನವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ


ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿ ಬಿಡುಗಡೆ

"ಹೊಸ ಸಂಸತ್ತು 140 ಕೋಟಿ ಭಾರತೀಯರ ಆಕಾಂಕ್ಷೆ ಮತ್ತು ಕನಸುಗಳ ಪ್ರತಿಬಿಂಬ"

"ಇದು ನಮ್ಮ ಪ್ರಜಾಪ್ರಭುತ್ವದ ದೇವಾಲಯವಾಗಿದ್ದು, ಅದು ಜಗತ್ತಿಗೆ ಭಾರತದ ಸಂಕಲ್ಪದ ಸಂದೇಶವನ್ನು ನೀಡುತ್ತದೆ"

"ಭಾರತವು ಮುಂದುವರಿದಾಗ, ಜಗತ್ತು ಮುಂದೆ ಸಾಗುತ್ತದೆ"

"ಪವಿತ್ರ ಸೆಂಗೋಲ್ ನ ಘನತೆಯನ್ನು ನಾವು ಮರುಸ್ಥಾಪಿಸುತ್ತಿರುವುದು ನಮ್ಮ ಸೌಭಾಗ್ಯ. ಸದನದ ಕಾರ್ಯಕಲಾಪಗಳ ಸಮಯದಲ್ಲಿ ಸೆಂಗೋಲ್ ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ"

"ನಮ್ಮ ಪ್ರಜಾಪ್ರಭುತ್ವವು ನಮಗೆ ಸ್ಫೂರ್ತಿಯಾಗಿದೆ ಮತ್ತು ನಮ್ಮ ಸಂವಿಧಾನವು ನಮ್ಮ ಸಂಕಲ್ಪವಾಗಿದೆ"

"ಅಮೃತ ಕಾಲವು ನಮ್ಮ ಪರಂಪರೆಯನ್ನು ಸಂರಕ್ಷಿಸುತ್ತಾ ಅಭಿವೃದ್ಧಿಯ ಹೊಸ ಆಯಾಮಗಳನ್ನು ರೂಪಿಸುವ ಅವಧಿಯಾಗಿದೆ"

"ಇಂದಿನ ಭಾರತವು ಗುಲಾಮಗಿರಿಯ ಮನಃಸ್ಥಿತಿಯನ್ನು ಬಿಟ್ಟು ಕಲೆಯ ಪ್ರಾಚೀನ ವೈಭವವನ್ನು ಆಲಂಗಿಸುತ್ತಿದೆ. ಈ ಹೊಸ ಸಂಸತ್ ಭವನವು ಈ ಪ್ರಯತ್ನಕ್ಕೆ ಜೀವಂತ ಉದಾಹರಣೆಯಾಗಿದೆ"

"ಈ ಕಟ್ಟಡದ ಪ್ರತಿಯೊಂದು ಕಣದಲ್ಲೂ ನಾವು ಏಕ ಭಾರತ ಶ್ರೇಷ್ಠ ಭಾರತದ ಸ್ಫೂರ್ತಿಗೆ ಸಾಕ್ಷಿಯಾಗಿದ್ದೇವೆ"

" ಹೊಸ ಸಂಸತ್ತಿನಲ್ಲಿ ಶ್ರಮಿಕರ ಕೊಡುಗೆಗಳನ್ನು ಅಮರಗೊಳಿಸಿರುವುದು ಇದೇ ಮೊದಲು"

"ಈ ಹೊಸ ಸಂಸತ್ ಭವನದ ಪ್ರತಿಯೊಂದು ಇಟ್ಟಿಗೆ, ಪ್ರತಿ ಗೋಡೆ, ಪ್ರತಿಯೊಂದು ಕಣವನ್ನು ಬಡವರ ಕಲ್ಯಾಣಕ್ಕಾಗಿ ಸಮರ್ಪಿಸಲಾಗುವುದು"

"140 ಕೋಟಿ ಭಾರತೀಯರ ನಿರ್ಣಯವೇ ಹೊಸ ಸಂಸತ್ತನ್ನು ಪವಿತ್ರಗೊಳಿಸುತ್ತದೆ"

Posted On: 28 MAY 2023 2:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನೂತನ ಸಂಸತ್ ಭವನವನ್ನು ದೇಶಕ್ಕೆ ಸಮರ್ಪಿಸಿದರು. ಇದಕ್ಕೂ ಮುನ್ನ ಪ್ರಧಾನಮಂತ್ರಿಯವರು ಹೊಸ ಸಂಸತ್ ಭವನದಲ್ಲಿ ಪೂರ್ವ-ಪಶ್ಚಿಮ ದಿಕ್ಕಿನತ್ತ ಮುಖಮಾಡಿದ ನಂದಿ ಸಹಿತವಾದ ಸೆಂಗೋಲ್ ಅನ್ನು ಪ್ರತಿಷ್ಠಾಪಿಸಿದರು. ಅವರು ದೀಪವನ್ನು ಬೆಳಗಿಸಿ, ಸೆಂಗೋಲ್ ಗೆ ಪುಷ್ಪ ಸಮರ್ಪಿಸಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಪ್ರತಿಯೊಂದು ರಾಷ್ಟ್ರದ ಇತಿಹಾಸವನ್ನು ಅಮರಗೊಳಿಸುವ ಕೆಲವು ಕ್ಷಣಗಳಿವೆ ಎಂದರು. ಕೆಲವು ದಿನಾಂಕಗಳು ಕಾಲಮಾನದ ಮೇಲೆ ಅಮರ ಸಂಕೇತವಾಗುತ್ತವೆ ಎಂದ ಪ್ರಧಾನಮಂತ್ರಿಯವರು, 2023ರ ಮೇ 28 ಅಂತಹ ಒಂದು ದಿನವಾಗಿದೆ ಎಂದರು. "ಅಮೃತ ಮಹೋತ್ಸವಕ್ಕೆ ಭಾರತದ ಜನರು ತಮಗೆ ತಾವೇ ಉಡುಗೊರೆ ನೀಡಿದ್ದಾರೆ" ಎಂದು ಅವರು ಹೇಳಿದರು. ಈ ಅದ್ಭುತ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಇದು ಕೇವಲ ಕಟ್ಟಡವಲ್ಲ, ಇದು 140 ಕೋಟಿ ಭಾರತೀಯರ ಆಕಾಂಕ್ಷೆಗಳು ಮತ್ತು ಕನಸುಗಳ ಪ್ರತಿಬಿಂಬವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ಇದು ನಮ್ಮ ಪ್ರಜಾಪ್ರಭುತ್ವದ ದೇವಾಲಯವಾಗಿದ್ದು, ಇದು ಜಗತ್ತಿಗೆ ಭಾರತದ ಸಂಕಲ್ಪದ ಸಂದೇಶವನ್ನು ನೀಡುತ್ತದೆ" ಎಂದು ಅವರು ಹೇಳಿದರು. "ಈ ಹೊಸ ಸಂಸತ್ ಕಟ್ಟಡವು ಯೋಜನೆಯನ್ನು ವಾಸ್ತವಕ್ಕೆ, ನೀತಿಯನ್ನು ಸಾಕ್ಷಾತ್ಕಾರಕ್ಕೆ, ಇಚ್ಛಾಶಕ್ತಿಯನ್ನು ಕಾರ್ಯಗತಕ್ಕೆ ಮತ್ತು ಸಂಕಲ್ಪವನ್ನು ಸಿದ್ಧಿಗೆ ಸಂಪರ್ಕಿಸುತ್ತದೆ" ಎಂದು ಅವರು ಹೇಳಿದರು. ಇದು ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಸಾಕಾರಗೊಳಿಸುವ ಮಾಧ್ಯಮವಾಗಲಿದೆ. ಇದು ಆತ್ಮನಿರ್ಭರ ಭಾರತದ ಸೂರ್ಯೋದಯಕ್ಕೆ ಸಾಕ್ಷಿಯಾಗಲಿದೆ ಮತ್ತು ವಿಕಸಿತ ಭಾರತದ ಸಾಕ್ಷಾತ್ಕಾರವನ್ನು ನೋಡುತ್ತದೆ. ಈ ಹೊಸ ಕಟ್ಟಡವು ಪ್ರಾಚೀನ ಮತ್ತು ಆಧುನಿಕ ಸಂಯೋಗಕ್ಕೆ ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

"ಹೊಸ ಮಾರ್ಗಗಳನ್ನು ತುಳಿಯುವ ಮೂಲಕ ಮಾತ್ರ ಹೊಸ ಮಾದರಿಗಳನ್ನು ಸ್ಥಾಪಿಸಬಹುದು" ಎಂದು ಹೇಳಿದ ಪ್ರಧಾನಮಂತ್ರಿಯವರು, ನವ ಭಾರತವು ಹೊಸ ಗುರಿಗಳನ್ನು ಸಾಕಾರಗೊಳಿಸುತ್ತಿದೆ ಮತ್ತು ಹೊಸ ಮಾರ್ಗಗಳನ್ನು ರೂಪಿಸುತ್ತಿದೆ ಎಂದು ಒತ್ತಿ ಹೇಳಿದರು. "ಹೊಸ ಶಕ್ತಿ, ಹೊಸ ಹುರುಪು, ಹೊಸ ಉತ್ಸಾಹ, ಹೊಸ ಆಲೋಚನೆ ಮತ್ತು ಹೊಸ ಪ್ರಯಾಣವಿದೆ. ಹೊಸ ದೃಷ್ಟಿಕೋನಗಳು, ಹೊಸ ದಿಕ್ಕುಗಳು, ಹೊಸ ನಿರ್ಣಯಗಳು ಮತ್ತು ಹೊಸ ನಂಬಿಕೆ ಇದೆ", ಎಂದು ಶ್ರೀ ಮೋದಿ ಉದ್ಗರಿಸಿದರು. ಜಗತ್ತು ಭಾರತದ ಸಂಕಲ್ಪ, ಅದರ ನಾಗರಿಕರ ಹುರುಪು ಮತ್ತು ಭಾರತದಲ್ಲಿನ ಮಾನವ ಶಕ್ತಿಯ ಜೀವನವನ್ನು ಗೌರವ ಮತ್ತು ಭರವಸೆಯೊಂದಿಗೆ ನೋಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ಭಾರತವು ಮುಂದೆ ಸಾಗಿದಾಗ, ಜಗತ್ತು ಮುಂದೆ ಸಾಗುತ್ತದೆ" ಎಂದು ಅವರು ಹೇಳಿದರು. ಹೊಸ ಸಂಸತ್ ಭವನವು ಭಾರತದ ಅಭಿವೃದ್ಧಿಯಿಂದ ವಿಶ್ವದ ಅಭಿವೃದ್ಧಿಯನ್ನು ಪ್ರಚೋದಿಸುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಪವಿತ್ರ ಸೆಂಗೋಲ್ ಸ್ಥಾಪನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಮಹಾನ್ ಚೋಳ ಸಾಮ್ರಾಜ್ಯದಲ್ಲಿ ಸೆಂಗೋಲ್ ಅನ್ನು ಸೇವಾ ಕರ್ತವ್ಯ ಮತ್ತು ರಾಷ್ಟ್ರದ ಸಂಕೇತವಾಗಿ ನೋಡಲಾಗುತ್ತಿತ್ತು ಎಂದರು.  ರಾಜಾಜಿ ಮತ್ತು ಅಧೀನಂ ಅವರ ಮಾರ್ಗದರ್ಶನದಲ್ಲಿ, ಈ ಸೆಂಗೋಲ್ ಅಧಿಕಾರ ವರ್ಗಾವಣೆಯ ಪವಿತ್ರ ಸಂಕೇತವಾಯಿತು ಎಂದು ಅವರು ಹೇಳಿದರು. ಇಂದು ಬೆಳಗ್ಗೆ ಈ ಸಂದರ್ಭದಲ್ಲಿ ಆಶೀರ್ವದಿಸಲು ಬಂದ ಅಧೀನಂ ಸಂತರಿಗೆ ಪ್ರಧಾನಮಂತ್ರಿಯವರು ಮತ್ತೊಮ್ಮೆ ನಮಸ್ಕರಿಸಿದರು. "ಈ ಪವಿತ್ರ ಸೆಂಗೋಲ್ ನ ಘನತೆಯನ್ನು ನಾವು ಮರುಸ್ಥಾಪಿಸುತ್ತಿರುವುದು ನಮ್ಮ ಸೌಭಾಗ್ಯ. ಈ ಸೆಂಗೋಲ್ ಸದನದ ಕಾರ್ಯಕಲಾಪಗಳಲ್ಲಿ ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ" ಎಂದು ಅವರು ಹೇಳಿದರು.

"ಭಾರತವು ಪ್ರಜಾಪ್ರಭುತ್ವ ರಾಷ್ಟ್ರ ಮಾತ್ರವಲ್ಲ, ಪ್ರಜಾಪ್ರಭುತ್ವದ ತಾಯಿಯೂ ಹೌದು" ಎಂದು ಹೇಳಿದ ಪ್ರಧಾನಮಂತ್ರಿಯವರು, ರಾಷ್ಟ್ರವು ಜಾಗತಿಕ ಪ್ರಜಾಪ್ರಭುತ್ವದ ಪ್ರಮುಖ ಅಡಿಪಾಯವಾಗಿದೆ ಎಂದರು. ಪ್ರಜಾಪ್ರಭುತ್ವವು ಭಾರತದಲ್ಲಿ ಆಚರಣೆಯಲ್ಲಿರುವ ಒಂದು ವ್ಯವಸ್ಥೆಯಲ್ಲ, ಅದು ಸಂಸ್ಕೃತಿ, ಚಿಂತನೆ ಮತ್ತು ಸಂಪ್ರದಾಯವಾಗಿದೆ ಎಂದು ಅವರು ಒತ್ತಿ ಹೇಳಿದರು. ವೇದಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇದು ಪ್ರಜಾಪ್ರಭುತ್ವ ಸಭೆಗಳು ಮತ್ತು ಸಮಿತಿಗಳ ತತ್ವಗಳನ್ನು ನಮಗೆ ಕಲಿಸುತ್ತದೆ ಎಂದರು. ಮಹಾಭಾರತದಲ್ಲಿ ಗಣರಾಜ್ಯದ ವರ್ಣನೆಯನ್ನು ಕಾಣಬಹುದು ಮತ್ತು ಭಾರತವು ವೈಶಾಲಿಯಲ್ಲಿ ಪ್ರಜಾಪ್ರಭುತ್ವ ಉಳಿದಿತ್ತು ಮತ್ತು ಉಸಿರಾಡಿತ್ತು ಎಂದು ಅವರು ಉಲ್ಲೇಖಿಸಿದರು. "ಭಗವಾನ್ ಬಸವೇಶ್ವರರ ಅನುಭವ ಮಂಟಪ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ" ಎಂದು ಶ್ರೀ ಮೋದಿ ಹೇಳಿದರು. ತಮಿಳುನಾಡಿನಲ್ಲಿ ದೊರೆತಿರುವ ಕ್ರಿ.ಶ. 900ರ ಕಾಲಘಟ್ಟದ ಶಾಸನಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಇದು ಇಂದಿನ ದಿನ ಮತ್ತು ಯುಗದಲ್ಲಿಯೂ ಎಲ್ಲರನ್ನೂ ಅಚ್ಚರಿಗೊಳಿಸುತ್ತದೆ ಎಂದರು. "ನಮ್ಮ  ಪ್ರಜಾಪ್ರಭುತ್ವವು ನಮಗೆ ಸ್ಫೂರ್ತಿಯಾಗಿದೆ ಮತ್ತು ನಮ್ಮ ಸಂವಿಧಾನವೇ ನಮ್ಮ ನಿರ್ಣಯವಾಗಿದೆ" ಎಂದು ಶ್ರೀ ಮೋದಿ ಹೇಳಿದರು, ಈ ನಿರ್ಣಯದ ಅತಿದೊಡ್ಡ ಪ್ರತಿನಿಧಿ ಭಾರತದ ಸಂಸತ್ತು ಎಂದು ಹೇಳಿದರು. ಶ್ಲೋಕವೊಂದನ್ನು ಪಠಿಸಿದ ಪ್ರಧಾನಮಂತ್ರಿಯವರು, ಮುಂದೆ ಸಾಗುವುದನ್ನು ನಿಲ್ಲಿಸುವವರಿಗೆ ಅದೃಷ್ಟ ಮುಗಿದು ಹೋಗುತ್ತದೆ, ಆದರೆ ಸದಾ ಮುಂದೆಸಾಗುವವರ ಹಣೆಬರಹ ಮುಗಿಲುಮುಟ್ಟುತ್ತದೆ ಎಂದು ವಿವರಿಸಿದರು.

ಹಲವು ವರ್ಷಗಳ ಗುಲಾಮಗಿರಿಯ ನಂತರ, ಬಹಳಷ್ಟು ಕಳೆದುಕೊಂಡ ನಂತರ, ಭಾರತವು ತನ್ನ ಪಯಣವನ್ನು ಪುನರಾರಂಭಿಸಿ ಅಮೃತ ಕಾಲವನ್ನು ತಲುಪಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ಅಮೃತ ಕಾಲವು ನಮ್ಮ ಪರಂಪರೆಯನ್ನು ಸಂರಕ್ಷಿಸುವಾಗ ಅಭಿವೃದ್ಧಿಯ ಹೊಸ ಆಯಾಮಗಳನ್ನು ರೂಪಿಸುವ ಅವಧಿಯಾಗಿದೆ. ಇದು ರಾಷ್ಟ್ರಕ್ಕೆ ಹೊಸ ದಿಕ್ಕನ್ನು ನೀಡುವ ಅಮೃತ ಕಾಲ. ಇದು ಅಸಂಖ್ಯಾತ ಆಕಾಂಕ್ಷೆಗಳನ್ನು ಈಡೇರಿಸುವ ಅಮೃತ ಕಾಲ" ಎಂದು ಅವರು ಹೇಳಿದರು. ಪದ್ಯದ ಮೂಲಕ ಪ್ರಜಾಪ್ರಭುತ್ವಕ್ಕೆ ಹೊಸ ಜೀವರಕ್ಷೆಯ ಅಗತ್ಯವನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಪ್ರಜಾಪ್ರಭುತ್ವದ ಕಾರ್ಯಸ್ಥಳ, ಅಂದರೆ ಸಂಸತ್ತು ಕೂಡ ನವ ಮತ್ತು ಆಧುನಿಕವಾಗಿರಬೇಕು ಎಂದು ಒತ್ತಿ ಹೇಳಿದರು.

ಭಾರತದ ಸಮೃದ್ಧಿ ಮತ್ತು ವಾಸ್ತುಶಿಲ್ಪದ ಸುವರ್ಣ ಯುಗವನ್ನು ಪ್ರಧಾನಮಂತ್ರಿ ಸ್ಮರಿಸಿದರು. ಶತಮಾನಗಳ ಗುಲಾಮಗಿರಿಯು ಈ ವೈಭವವನ್ನು ಕಸಿದುಕೊಂಡಿದೆ ಎಂದು ಅವರು ಹೇಳಿದರು. 21 ನೇ ಶತಮಾನದ ಭಾರತವು ಆತ್ಮವಿಶ್ವಾಸದಿಂದ ತುಂಬಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ಇಂದಿನ ಭಾರತವು ಗುಲಾಮಗಿರಿಯ ಮನಃಸ್ಥಿತಿಯನ್ನು ಬಿಟ್ಟು ಕಲೆಯ ಪ್ರಾಚೀನ ವೈಭವವನ್ನು ಸ್ವೀಕರಿಸುತ್ತಿದೆ. ಈ ಹೊಸ ಸಂಸತ್ ಭವನವು ಈ ಪ್ರಯತ್ನಕ್ಕೆ ಜೀವಂತ ಉದಾಹರಣೆಯಾಗಿದೆ", ಎಂದು ಪ್ರಧಾನಮಂತ್ರಿ ಹೇಳಿದರು. ಈ ಕಟ್ಟಡವು ವಿರಾಸತ್ (ಪರಂಪರೆ), ವಾಸ್ತು (ವಾಸ್ತುಶಿಲ್ಪ), ಕಲಾ (ಕಲೆ) ಜೊತೆಗೆ ಕೌಶಲ (ಕೌಶಲ್ಯ), ಸಂಸ್ಕೃತಿ (ಸಂಸ್ಕೃತಿ) ಮತ್ತು ಸಂವಿಧಾನದ ಟಿಪ್ಪಣಿಗಳನ್ನು ಹೊಂದಿದೆ. ಲೋಕಸಭೆಯ ಒಳಾಂಗಣವು ರಾಷ್ಟ್ರೀಯ ಪಕ್ಷಿ ನವಿಲಿನ ಮೇಲೆ ಮತ್ತು ರಾಜ್ಯಸಭೆಯನ್ನು ರಾಷ್ಟ್ರೀಯ ಪುಷ್ಪ ಕಮಲದ ಮೇಲೆ ಕೇಂದ್ರೀಕರಿಸಿದೆ ಎಂದು ಅವರು ಗಮನಸೆಳೆದರು. ಸಂಸತ್ತಿನ ಆವರಣದಲ್ಲಿ ರಾಷ್ಟ್ರೀಯ ವೃಕ್ಷ ಆಲದ ಮರವಿದೆ. ಹೊಸ ಕಟ್ಟಡವು ದೇಶದ ವಿವಿಧ ಭಾಗಗಳ ವಿಶೇಷತೆಗಳನ್ನು ಒಳಗೊಂಡಿದೆ.  ರಾಜಸ್ತಾನದ ಗ್ರಾನೈಟ್, ಮಹಾರಾಷ್ಟ್ರದ ಮರಮುಟ್ಟು ಮತ್ತು ಭಾಧೋಯಿ ಕುಶಲಕರ್ಮಿಗಳ ನೆಲಹಾಸನ್ನು ಅವರು ಉಲ್ಲೇಖಿಸಿದರು. "ಈ ಕಟ್ಟಡದ ಪ್ರತಿಯೊಂದು ಕಣದಲ್ಲೂ ನಾವು ಏಕ ಭಾರತ ಶ್ರೇಷ್ಠ ಭಾರತದ ಸ್ಫೂರ್ತಿಗೆ ಸಾಕ್ಷಿಯಾಗಿದ್ದೇವೆ" ಎಂದು ಅವರು ಹೇಳಿದರು.

ಹಳೆಯ ಸಂಸತ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುವಾಗ ಸಂಸದರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಪ್ರಧಾನಮಂತ್ರಿ ಗಮನಸೆಳೆದರು ಮತ್ತು ತಾಂತ್ರಿಕ ಸೌಲಭ್ಯಗಳ ಕೊರತೆ ಮತ್ತು ಸದನದಲ್ಲಿ ಆಸನಗಳ ಕೊರತೆಯಿಂದಾಗಿ ಸವಾಲುಗಳು ಎದುರಾಗುತ್ತಿರುವ ಉದಾಹರಣೆಗಳನ್ನು ನೀಡಿದರು. ಹೊಸ ಸಂಸತ್ತಿನ ಅಗತ್ಯದ ಬಗ್ಗೆ ದಶಕಗಳಿಂದ ಚರ್ಚಿಸಲಾಗುತ್ತಿದೆ ಮತ್ತು ಹೊಸ ಸಂಸತ್ತನ್ನು ಅಭಿವೃದ್ಧಿಪಡಿಸುವುದು ಸಮಯದ ಅಗತ್ಯವೂ ಆಗಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಹೊಸ ಸಂಸತ್ ಭವನವು ಇತ್ತೀಚಿನ ತಂತ್ರಜ್ಞಾನವನ್ನು ಹೊಂದಿದೆ ಮತ್ತು ಸಭಾಂಗಣಗಳು ಸಹ ಸೂರ್ಯನ ಬೆಳಕನ್ನು ಹೊಂದಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಹೊಸ ಸಂಸತ್ತಿನ ನಿರ್ಮಾಣಕ್ಕೆ ಕೊಡುಗೆ ನೀಡಿದ ಶ್ರಮಿಕರೊಂದಿಗಿನ ತಮ್ಮ ಸಂವಾದವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಸಂಸತ್ತಿನ ನಿರ್ಮಾಣದ ಸಂದರ್ಭದಲ್ಲಿ 60,000 ಶ್ರಮಿಕರಿಗೆ ಉದ್ಯೋಗ ನೀಡಲಾಗಿದೆ ಮತ್ತು ಅವರ ಕೊಡುಗೆಗಳನ್ನು ಎತ್ತಿ ತೋರಿಸುವ ಹೊಸ ಗ್ಯಾಲರಿಯನ್ನು ಸದನದಲ್ಲಿ ಹಾಕಲಾಗಿದೆ ಎಂದು ತಿಳಿಸಿದರು. "ಹೊಸ ಸಂಸತ್ತಿನಲ್ಲಿ ಶ್ರಮಿಕರ ಕೊಡುಗೆಗಳನ್ನು ಅಮರಗೊಳಿಸಿರುವುದು ಇದೇ ಮೊದಲು" ಎಂದು ಪ್ರಧಾನಮಂತ್ರಿ ಹೇಳಿದರು.

ಕಳೆದ 9 ವರ್ಷಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಯಾವುದೇ ತಜ್ಞರು ಈ ನವ ವರ್ಷಗಳನ್ನು ಪುನರ್ನಿರ್ಮಾಣ ಮತ್ತು ಗರೀಬ್ ಕಲ್ಯಾಣ್ ವರ್ಷಗಳೆಂದು ಪರಿಗಣಿಸುತ್ತಾರೆ ಎಂದರು. ಹೊಸ ಕಟ್ಟಡದ ಬಗ್ಗೆ ಹೆಮ್ಮೆಯ ಈ ಘಳಿಗೆಯಲ್ಲಿ, ಬಡವರಿಗಾಗಿ 4 ಕೋಟಿ ಮನೆಗಳನ್ನು ನಿರ್ಮಿಸಿದ್ದಕ್ಕಾಗಿಯೂ ತಮಗೆ ತೃಪ್ತಿ ಇದೆ ಎಂದು ಅವರು ಹೇಳಿದರು. ಅಂತೆಯೇ, 11 ಕೋಟಿ ಶೌಚಾಲಯಗಳು, ಗ್ರಾಮಗಳನ್ನು ಸಂಪರ್ಕಿಸಲು 4 ಲಕ್ಷ ಕಿ.ಮೀ.ಗಿಂತ ಹೆಚ್ಚು ರಸ್ತೆಗಳು, 50 ಸಾವಿರಕ್ಕೂ ಹೆಚ್ಚು ಅಮೃತ ಸರೋವರಗಳು ಮತ್ತು 30 ಸಾವಿರಕ್ಕೂ ಹೆಚ್ಚು ಹೊಸ ಪಂಚಾಯತ್ ಭವನಗಳಂತಹ ಕ್ರಮಗಳ ಬಗ್ಗೆ ಪ್ರಧಾನಮಂತ್ರಿ ತೃಪ್ತಿ ವ್ಯಕ್ತಪಡಿಸಿದರು. "ಪಂಚಾಯತ್ ಭವನಗಳಿಂದ ಸಂಸತ್ತಿನವರೆಗೆ ಒಂದೇ ಒಂದು ಸ್ಫೂರ್ತಿ ನಮಗೆ ಮಾರ್ಗದರ್ಶನ ನೀಡಿತು, ಅಂದರೆ ರಾಷ್ಟ್ರ ಮತ್ತು ಅದರ ಜನರ ಅಭಿವೃದ್ಧಿ" ಎಂದು ಅವರು ಹೇಳಿದರು.

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಪ್ರತಿಯೊಂದು ದೇಶದ ಇತಿಹಾಸದಲ್ಲಿ ಆ ದೇಶದ ಪ್ರಜ್ಞೆ ಜಾಗೃತಗೊಳ್ಳುವ ಸಮಯ ಬರುತ್ತದೆ ಎಂದರು. ಸ್ವಾತಂತ್ರ್ಯಬರುವ 25 ವರ್ಷಗಳ ಮೊದಲು ಗಾಂಧೀಜಿಯವರ ಅಸಹಕಾರ ಚಳವಳಿಯ ಸಮಯದಲ್ಲಿ ಭಾರತದಲ್ಲಿ ಅಂತಹ ಸಮಯ ಬಂದಿತ್ತು ಎಂದು ಅವರು ಒತ್ತಿ ಹೇಳಿದರು, ಇದು ಇಡೀ ದೇಶವನ್ನು ವಿಶ್ವಾಸಭರಿತಗೊಳಿಸಿತ್ತು. "ಗಾಂಧೀಜಿಯವರು ಪ್ರತಿಯೊಬ್ಬ ಭಾರತೀಯನನ್ನೂ ಸ್ವರಾಜ್ಯ ಸಂಕಲ್ಪದೊಂದಿಗೆ ಬೆಸೆದಿದ್ದರು. ಪ್ರತಿಯೊಬ್ಬ ಭಾರತೀಯನೂ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಸಮಯ ಇದು", 1947 ರ ಭಾರತದ ಸ್ವಾತಂತ್ರ್ಯ ಅದರ ಫಲಶ್ರುತಿ ಎಂದು ಪ್ರಧಾನಮಂತ್ರಿ ಹೇಳಿದರು.  ಆಜಾದಿ ಕಾ ಅಮೃತ ಕಾಲವು ಸ್ವತಂತ್ರ ಭಾರತದ ಒಂದು ವೇದಿಕೆಯಾಗಿದ್ದು, ಇದನ್ನು ಐತಿಹಾಸಿಕ ಅವಧಿಗೆ ಹೋಲಿಸಬಹುದು ಎಂದು ಶ್ರೀ ಮೋದಿ ಹೇಳಿದರು. ಮುಂದಿನ 25 ವರ್ಷಗಳಲ್ಲಿ ಭಾರತ ತನ್ನ ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸಲಿದೆ, ಅದು 'ಅಮೃತ ಕಾಲ'. ಪ್ರತಿಯೊಬ್ಬ ನಾಗರಿಕನ ಕೊಡುಗೆಯಿಂದ ಈ 25 ವರ್ಷಗಳಲ್ಲಿ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ಮಾಡುವ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. "ಭಾರತೀಯರ ನಂಬಿಕೆ ರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ" ಎಂದು ಹೇಳಿದ ಪ್ರಧಾನಮಂತ್ರಿ, ಭಾರತದ ಸ್ವಾತಂತ್ರ್ಯ ಹೋರಾಟವು ಆ ಸಮಯದಲ್ಲಿ ವಿಶ್ವದ ಅನೇಕ ದೇಶಗಳಲ್ಲಿ ಹೊಸ ಪ್ರಜ್ಞೆಯನ್ನು ಜಾಗೃತಗೊಳಿಸಿತ್ತು ಎಂದು ಒತ್ತಿ ಹೇಳಿದರು. "ವೈವಿಧ್ಯತೆಯಿಂದ ಕೂಡಿದ, ವಿವಿಧ ಸವಾಲುಗಳನ್ನು ನಿಭಾಯಿಸುವ ಬೃಹತ್ ಜನಸಂಖ್ಯೆಯನ್ನು ಹೊಂದಿರುವ ಭಾರತದಂತಹ ದೇಶವು ನಂಬಿಕೆಯೊಂದಿಗೆ ಮುಂದೆ ಸಾಗಿದಾಗ, ಅದು ವಿಶ್ವದ ಅನೇಕ ದೇಶಗಳಿಗೆ ಸ್ಫೂರ್ತಿ ನೀಡುತ್ತದೆ. ಭಾರತದ ಪ್ರತಿಯೊಂದು ಸಾಧನೆಯೂ ಮುಂಬರುವ ದಿನಗಳಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿರುವ ವಿವಿಧ ದೇಶಗಳಿಗೆ ಸಾಧನೆಯಾಗಲಿದೆ" ಎಂದು ಅವರು ಹೇಳಿದರು. ಅಭಿವೃದ್ಧಿಯ ಸಂಕಲ್ಪವು ಇತರ ಹಲವು ರಾಷ್ಟ್ರಗಳ ಶಕ್ತಿಯಾಗುವುದರಿಂದ ಭಾರತದ ಜವಾಬ್ದಾರಿ ದೊಡ್ಡದಾಗುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಹೊಸ ಸಂಸತ್ ಭವನವು ಅದರ ಯಶಸ್ಸಿನಲ್ಲಿ ರಾಷ್ಟ್ರದ ನಂಬಿಕೆಯನ್ನು ಬಲಪಡಿಸುತ್ತದೆ ಮತ್ತು ವಿಕಸಿತ ಭಾರತದತ್ತ ಎಲ್ಲರನ್ನೂ ಪ್ರೇರೇಪಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. "ನಾವು ರಾಷ್ಟ್ರ ಮೊದಲು ಎಂಬ ಸ್ಫೂರ್ತಿಯೊಂದಿಗೆ ಸಾಗಬೇಕಾಗಿದೆ.  ನಾವು ಎಲ್ಲಕ್ಕಿಂತ ಹೆಚ್ಚಾಗಿ ಕರ್ತವ್ಯದ ಮಾರ್ಗವನ್ನು ಉಳಿಸಿಕೊಳ್ಳಬೇಕು. ನಮ್ಮನ್ನು ನಾವು ನಿರಂತರವಾಗಿ ಸುಧಾರಿಸಿಕೊಳ್ಳುವಾಗ ನಮ್ಮ ನಡವಳಿಕೆಯೊಂದಿಗೆ ನಾವು ಮಾದರಿಯಾಗಿರಬೇಕು. ನಾವು ನಮ್ಮದೇ ಆದ ಹಾದಿಯಲ್ಲಿ ನಡೆಯಬೇಕು" ಎಂದು ಅವರು ಹೇಳಿದರು.

ಹೊಸ ಸಂಸತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ಹೊಸ ಶಕ್ತಿ ಮತ್ತು ಶಕ್ತಿಯನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ನಮ್ಮ ಶ್ರಮಜೀವಿಗಳು ಸಂಸತ್ತನ್ನು ಇಷ್ಟು ಭವ್ಯವಾಗಿಸಿದ್ದರೂ, ತಮ್ಮ ಸಮರ್ಪಣೆಯಿಂದ ಅದನ್ನು ದೈವಿಕಗೊಳಿಸುವುದು ಸಂಸತ್ ಸದಸ್ಯರ ಜವಾಬ್ದಾರಿಯಾಗಿದೆ ಎಂದರು. ಸಂಸತ್ತಿನ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, 140 ಕೋಟಿ ಭಾರತೀಯರ ನಿರ್ಣಯವೇ ಸಂಸತ್ತನ್ನು ಪವಿತ್ರಗೊಳಿಸುತ್ತದೆ ಎಂದರು. ಇಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯವು ಮುಂಬರುವ ಶತಮಾನಗಳನ್ನು ಅಲಂಕರಿಸುತ್ತದೆ ಮತ್ತು ಮುಂದಿನ ಪೀಳಿಗೆಯನ್ನು ಬಲಪಡಿಸುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಬಡವರು, ದಲಿತರು, ಹಿಂದುಳಿದವರು, ಬುಡಕಟ್ಟು ಜನಾಂಗದವರು, ಅಂಗವಿಕಲರು ಮತ್ತು ಸಮಾಜದ ಪ್ರತಿಯೊಂದು ವಂಚಿತ ಕುಟುಂಬಗಳ ಸಬಲೀಕರಣದ ಹಾದಿ, ವಂಚಿತರ ಅಭಿವೃದ್ಧಿಗೆ ಆದ್ಯತೆ ನೀಡುವುದರ ಜೊತೆಗೆ ಈ ಸಂಸತ್ತಿನ ಮೂಲಕ ಹಾದುಹೋಗಲಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. "ಈ ಹೊಸ ಸಂಸತ್ ಭವನದ ಪ್ರತಿಯೊಂದು ಇಟ್ಟಿಗೆ, ಪ್ರತಿ ಗೋಡೆ, ಪ್ರತಿಯೊಂದು ಕಣವನ್ನು ಬಡವರ ಕಲ್ಯಾಣಕ್ಕಾಗಿ ಸಮರ್ಪಿಸಲಾಗುವುದು" ಎಂದು ಶ್ರೀ ಮೋದಿ ಹೇಳಿದರು. ಮುಂದಿನ 25 ವರ್ಷಗಳಲ್ಲಿ, ಈ ಹೊಸ ಸಂಸತ್ ಭವನದಲ್ಲಿ ಮಾಡಬೇಕಾದ ಹೊಸ ಕಾನೂನುಗಳು ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ಮಾಡುತ್ತವೆ, ಬಡತನವನ್ನು ಭಾರತದಿಂದ ದೂರಸರಿಸಲು ಸಹಾಯ ಮಾಡುತ್ತದೆ ಮತ್ತು ದೇಶದ ಯುವಕರು ಮತ್ತು ಮಹಿಳೆಯರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಸಂಸತ್ತಿನ ಹೊಸ ಕಟ್ಟಡವು ಹೊಸ, ಸಮೃದ್ಧ, ಬಲಿಷ್ಠ ಮತ್ತು ವಿಕಸಿತ ಭಾರತದ ಸೃಷ್ಟಿಗೆ ಆಧಾರವಾಗಲಿದೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು. "ಇದು ನೀತಿ, ನ್ಯಾಯ, ಸತ್ಯ, ಘನತೆ ಮತ್ತು ಕರ್ತವ್ಯದ ಹಾದಿಯಲ್ಲಿ ನಡೆಯುವ ಮತ್ತು ಬಲಗೊಳ್ಳುವ ಭಾರತ", ಎಂದು ಪ್ರಧಾನಮಂತ್ರಿ ತಮ್ಮ ಮಾತು ಮುಕ್ತಾಯಗೊಳಿಸಿದರು.

ಲೋಕಸಭೆಯ ಸ್ಪೀಕರ್ ಶ್ರೀ ಓಂ ಬಿರ್ಲಾ ಮತ್ತು ರಾಜ್ಯಸಭೆಯ ಉಪ ಸಭಾಪತಿ ಶ್ರೀ ಹರಿವಂಶ್ ನಾರಾಯಣ್ ಸಿಂಗ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

*****



(Release ID: 1927923) Visitor Counter : 433