ಪ್ರಧಾನ ಮಂತ್ರಿಯವರ ಕಛೇರಿ

ತ್ರಿಶೂರಿನ ಶ್ರೀ ಸೀತಾ ರಾಮಸ್ವಾಮಿ ದೇವಸ್ಥಾನದ ಕಾರ್ಯಕ್ರಮ ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಪ್ರಧಾನ ಮಂತ್ರಿ ಭಾಷಣ

Posted On: 25 APR 2023 9:43PM by PIB Bengaluru

ನಮಸ್ಕಾರ!

ತ್ರಿಶೂರ್ ಪೂರಂ ಹಬ್ಬದ ಸಂದರ್ಭದಲ್ಲಿ ಕೇರಳ ಮತ್ತು ತ್ರಿಶೂರಿನ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಅಭಿನಂದನೆಗಳು. ತ್ರಿಶೂರ್ ಅನ್ನು ಕೇರಳದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲಾಗುತ್ತದೆ. ಎಲ್ಲಿ ಸಂಸ್ಕೃತಿ, ಸಂಪ್ರದಾಯ, ಕಲೆಗಳೂ ಇರುತ್ತವೆಯೋ ಅಲ್ಲಿ ಆಧ್ಯಾತ್ಮದ ಜತೆಗೆ ತತ್ವಜ್ಞಾನವೂ ಇರುತ್ತದೆ. ಹಬ್ಬಗಳ ಜತೆಗೆ ಸಂಭ್ರಮವೂ ಇದೆ. ತ್ರಿಶೂರ್ ಈ ಪರಂಪರೆ ಮತ್ತು ಅಸ್ಮಿತೆಯನ್ನು ಜೀವಂತವಾಗಿರಿಸುತ್ತಿರುವುದಕ್ಕೆ ನನಗೆ ಸಂತಸವಾಗಿದೆ. ಶ್ರೀ ಸೀತಾರಾಮಸ್ವಾಮಿ ದೇವಸ್ಥಾನವು ಅನೇಕ ವರ್ಷಗಳಿಂದ ಈ ದಿಕ್ಕಿನಲ್ಲಿ ಕ್ರಿಯಾತ್ಮಕ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ದೇವಾಲಯವನ್ನು ಈಗ ಹೆಚ್ಚು ದೈವಿಕ ಮತ್ತು ಭವ್ಯವಾಗಿ ಮಾಡಲಾಗಿದೆ ಎಂದು ನನಗೆ ತಿಳಿದುಬಂತು. ಈ ಸಂದರ್ಭದಲ್ಲಿ ಚಿನ್ನದ ಹೊದಿಕೆಯ ಗರ್ಭಗುಡಿಯನ್ನು ಶ್ರೀ ಸೀತಾರಾಮ, ಭಗವಾನ್ ಅಯ್ಯಪ್ಪ ಮತ್ತು ಭಗವಾನ್ ಶಿವನಿಗೆ ಸಮರ್ಪಿಸಲಾಗುತ್ತಿದೆ.

ಸ್ನೇಹಿತರೆ,

ಶ್ರೀ ಸೀತಾರಾಮ ಇರುವಲ್ಲಿ ಶ್ರೀ ಹನುಮಂತನಿಲ್ಲದೇ ಇರಲು ಸಾಧ್ಯವಿಲ್ಲ. ಹಾಗಾಗಿ 55 ಅಡಿ ಎತ್ತರದ ಹನುಮಾನ್ ಜೀ ಅವರ ಭವ್ಯ ಪ್ರತಿಮೆಯು ಭಕ್ತರ ಮೇಲೆ ಅನುಗ್ರಹ ಸುರಿಸಲಿದೆ. ಈ ಸಂದರ್ಭದಲ್ಲಿ ಎಲ್ಲಾ ಭಕ್ತಾದಿಗಳಿಗೆ ಕುಂಭಾಭಿಷೇಕದ ಶುಭಾಶಯಗಳನ್ನು ಸಲ್ಲಿಸುತ್ತೇನೆ. ನಿರ್ದಿಷ್ಟವಾಗಿ, ನಾನು ಶ್ರೀ ಟಿ ಎಸ್ ಕಲ್ಯಾಣರಾಮನ್ ಜೀ ಮತ್ತು ಕಲ್ಯಾಣ್ ಕುಟುಂಬದ ಎಲ್ಲ ಸದಸ್ಯರನ್ನು ಅಭಿನಂದಿಸುತ್ತೇನೆ. ಹಲವು ವರ್ಷಗಳ ಹಿಂದೆ ನೀವು ನನ್ನನ್ನು ಭೇಟಿಯಾಗಲು ಗುಜರಾತ್‌ಗೆ ಬಂದಾಗ ಈ ದೇವಾಲಯದ ಪರಿಣಾಮ ಮತ್ತು ಬೆಳಕಿನ ಬಗ್ಗೆ ವಿವರವಾಗಿ ಹೇಳಿದ್ದು ನನಗೆ ಇಂದಿಗೂ ನೆನಪಿದೆ. ಇಂದು ಭಗವಾನ್ ಶ್ರೀ ಸೀತಾರಾಮ ಜಿ ಅವರ ಆಶೀರ್ವಾದದಿಂದ ನಾನು ಈ ಶುಭ ಸಂದರ್ಭದ ಭಾಗವಾಗುತ್ತಿದ್ದೇನೆ. ಮನಸ್ಸು, ಹೃದಯ ಮತ್ತು ಪ್ರಜ್ಞೆಯಿಂದ ನಾನು ನಿಮ್ಮ ನಡುವೆ ದೇವಸ್ಥಾನದಲ್ಲಿಯೇ ಇದ್ದು, ಆಧ್ಯಾತ್ಮಿಕ ಆನಂದವನ್ನು ಅನುಭವಿಸುತ್ತಿದ್ದೇನೆ.

ಸ್ನೇಹಿತರೆ,

ತ್ರಿಶೂರ್ ಮತ್ತು ಶ್ರೀ ಸೀತಾ ರಾಮಸ್ವಾಮಿ ದೇವಾಲಯವು ನಂಬಿಕೆಯ ಪರಾಕಾಷ್ಠೆ ಮಾತ್ರವಲ್ಲ, ಅವು ಭಾರತದ ಪ್ರಜ್ಞೆ ಮತ್ತು ಆತ್ಮದ ಪ್ರತಿಬಿಂಬವಾಗಿದೆ. ಮಧ್ಯಕಾಲೀನ ಯುಗದಲ್ಲಿ ವಿದೇಶಿ ಆಕ್ರಮಣಕಾರರು ನಮ್ಮ ದೇವಾಲಯಗಳು ಮತ್ತು ವಿಗ್ರಹ, ಮೂರ್ತಿಗಳನ್ನು ನಾಶಪಡಿಸಿದಾಗ, ಅವರು ಭಯೋತ್ಪಾದನೆಯ ಮೂಲಕ ಭಾರತದ ಅಸ್ಮಿತೆಯನ್ನು ನಾಶಪಡಿಸುತ್ತಿದ್ದೇವೆ ಎಂದು ಭಾವಿಸಿದ್ದರು. ಆದರೆ ಭಾರತವು ಸಂಕೇತಗಳಲ್ಲಿ ಗೋಚರಿಸುತ್ತಿದ್ದರೂ, ಅದು ಅದರ ಜ್ಞಾನ ಮತ್ತು ಆಲೋಚನೆಯಲ್ಲಿ ವಾಸಿಸುತ್ತದೆ ಎಂದು ಅವರು ನಿರ್ಲಕ್ಷಿಸಿದ್ದರು. ಭಾರತವು ತನ್ನ ಶಾಶ್ವತವಾದ ಅನ್ವೇಷಣೆಯಲ್ಲಿ ವಾಸಿಸುತ್ತಿದೆ. ಪ್ರತಿ ಸವಾಲು ಎದುರಿಸಿದ ನಂತರವೂ ಭಾರತ ಜೀವಂತವಾಗಿರುವುದಕ್ಕೆ ಇದೇ ಕಾರಣ. ಅದಕ್ಕಾಗಿಯೇ ಭಾರತದ ಆತ್ಮವು ಶ್ರೀ ಸೀತಾ ರಾಮಸ್ವಾಮಿ ಮತ್ತು ಭಗವಾನ್ ಅಯ್ಯಪ್ಪನ ರೂಪದಲ್ಲಿ ತನ್ನ ಅಮರತ್ವವನ್ನು ಸಾರುತ್ತಿದೆ. ಆ ಕಾಲದ ಈ ದೇವಾಲಯಗಳು 'ಏಕ ಭಾರತ ಶ್ರೇಷ್ಠ ಭಾರತ' ಕಲ್ಪನೆಯು ಸಾವಿರಾರು ವರ್ಷಗಳ ಅಮರ ಕಲ್ಪನೆ ಎಂದು ಘೋಷಿಸುತ್ತಿವೆ. ಇಂದು ನಾವು ಸ್ವಾತಂತ್ರ್ಯದ ‘ಅಮೃತ ಕಾಲ’ದಲ್ಲಿ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಪಡುವ ಸಂಕಲ್ಪ ಸ್ವೀಕರಿಸುವ ಮೂಲಕ ಈ ಆಲೋಚನೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದೇವೆ.

ಸ್ನೇಹಿತರೆ,

ನಮ್ಮ ದೇವಸ್ಥಾನಗಳು ಮತ್ತು ತೀರ್ಥಯಾತ್ರೆಗಳು ಶತಮಾನಗಳಿಂದ ನಮ್ಮ ಸಮಾಜದ ಮೌಲ್ಯಗಳು ಮತ್ತು ಸಮೃದ್ಧಿಯ ಸಂಕೇತಗಳಾಗಿವೆ. ಶ್ರೀ ಸೀತಾರಾಮಸ್ವಾಮಿ ದೇವಾಲಯವು ಪ್ರಾಚೀನ ಭಾರತದ ಭವ್ಯತೆ ಮತ್ತು ವೈಭವ ಕಾಪಾಡುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಸಮಾಜದಿಂದ ಪಡೆದ ಸಂಪತ್ತನ್ನು ಸೇವೆ ಎಂದು ಹಿಂದಿರುಗಿಸುವ ವ್ಯವಸ್ಥೆ ಇದ್ದ ದೇವಸ್ಥಾನಗಳ ಸಂಪ್ರದಾಯವನ್ನೂ ಮುಂದಕ್ಕೆ ಕೊಂಡೊಯ್ಯುತ್ತಿದ್ದೀರಿ. ಈ ದೇವಸ್ಥಾನದ ಮೂಲಕ ಅನೇಕ ಜನಕಲ್ಯಾಣ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಹೇಳಿದ್ದೇನೆ. ಈ ಪ್ರಯತ್ನಗಳಿಗೆ ದೇವಸ್ಥಾನವು ದೇಶದ ಇನ್ನಷ್ಟು ನಿರ್ಣಯಗಳನ್ನು ಸೇರಿಸಬೇಕೆಂದು ನಾನು ಬಯಸುತ್ತೇನೆ. ಶ್ರೀ ಅನ್ನದಾನ ಅಭಿಯಾನವಾಗಲಿ, ಸ್ವಚ್ಛತಾ ಅಭಿಯಾನವಾಗಲಿ ಅಥವಾ ನೈಸರ್ಗಿಕ ಕೃಷಿಯ ಬಗ್ಗೆ ಸಾರ್ವಜನಿಕ ಜಾಗೃತಿಯಾಗಲಿ, ನೀವು ಈ ಪ್ರಯತ್ನಗಳಿಗೆ ಹೆಚ್ಚಿನ ವೇಗ ನೀಡಬಹುದು. ಶ್ರೀ ಸೀತಾ ರಾಮಸ್ವಾಮಿಯ ಆಶೀರ್ವಾದವು ಪ್ರತಿಯೊಬ್ಬರ ಮೇಲೆ ಧಾರೆ ಎರೆಯುತ್ತದೆ ಮತ್ತು ನಾವು ದೇಶದ ಸಂಕಲ್ಪಗಳಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ನನಗೆ ಖಾತ್ರಿಯಿದೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ಈ ಶುಭ ಸಂದರ್ಭದಲ್ಲಿ ಅಭಿನಂದನೆಗಳು.

ತುಂಬು ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

***

 



(Release ID: 1922365) Visitor Counter : 97