ಪ್ರಧಾನ ಮಂತ್ರಿಯವರ ಕಛೇರಿ

`ಐಟಿಯು’ ಪ್ರದೇಶ ಕಚೇರಿ ಮತ್ತು ಆವಿಷ್ಕಾರ ಕೇಂದ್ರವನ್ನು ಉದ್ಘಾಟಿಸಿದ ಪ್ರಧಾನಿ


ʻಭಾರತ್ 6ಜಿ ವಿಷನ್ ಡಾಕ್ಯುಮೆಂಟ್ʼ ಅನಾವರಣ ಹಾಗೂ 6ಜಿ ಸಂಶೋಧನಾ ಮತ್ತು ಅಭಿವೃದ್ಧಿ ಪ್ರಯೋಗ ವೇದಿಕೆಗೆ ಚಾಲನೆ

'ಕಾಲ್ ಬಿಫೋರ್ ಯು ಡಿಗ್' ಆ್ಯಪ್ ಬಿಡುಗಡೆ

ತಮ್ಮ ಆರ್ಥಿಕತೆಯನ್ನು ಬೆಳೆಸಲು ಡಿಜಿಟಲ್ ರೂಪಾಂತರವನ್ನು ಬಯಸುವ ದೇಶಗಳಿಗೆ ಭಾರತವು ಮಾದರಿಯಾಗಿದೆ: ಐಟಿಯು ಪ್ರಧಾನ ಕಾರ್ಯದರ್ಶಿ

"ಭಾರತವು ಎರಡು ಪ್ರಮುಖ ಸಾಮರ್ಥ್ಯಗಳನ್ನು ಹೊಂದಿದೆ, ಅವೆಂದರೆ - ನಂಬಿಕೆ ಮತ್ತು ಪ್ರಮಾಣ. ನಂಬಿಕೆ ಮತ್ತು ಪ್ರಮಾಣವಿಲ್ಲದೆ ನಾವು ತಂತ್ರಜ್ಞಾನವನ್ನು ಎಲ್ಲಾ ಮೂಲೆಗಳಿಗೆ ಕೊಂಡೊಯ್ಯಲು ಸಾಧ್ಯವಿಲ್ಲ" 

"ಭಾರತದ ಪಾಲಿಗೆ ದೂರಸಂಪರ್ಕ ತಂತ್ರಜ್ಞಾನವು ಶಕ್ತಿಯ ಸ್ವರೂಪದಲ್ಲಿಲ್ಲ, ಬದಲಿಗೆ ಅದು ಸಬಲೀಕರಣದ ಧ್ಯೇಯವಾಗಿದೆ"

"ಭಾರತವು ಡಿಜಿಟಲ್ ಕ್ರಾಂತಿಯ ಮುಂದಿನ ಹಂತದತ್ತ ವೇಗವಾಗಿ ಸಾಗುತ್ತಿದೆ"

"ಇಂದು ಪ್ರಸ್ತುತಪಡಿಸಿದ ವಿಷನ್ ಡಾಕ್ಯುಮೆಂಟ್ ಮುಂದಿನ ಕೆಲವು ವರ್ಷಗಳಲ್ಲಿ 6ಜಿ ಚಾಲನೆಗೆ ಪ್ರಮುಖ ಆಧಾರವಾಗಲಿದೆ"

"5ಜಿ ಶಕ್ತಿಯೊಂದಿಗೆ ಇಡೀ ವಿಶ್ವದ ಕೆಲಸದ ಸಂಸ್ಕೃತಿಯನ್ನು ಬದಲಾಯಿಸಲು ಭಾರತವು ಅನೇಕ ದೇಶಗಳೊಂದಿಗೆ ಕೆಲಸ ಮಾಡುತ್ತಿದೆ"

"ಐಟಿಯುನ ʻವಿಶ್ವ ದೂರಸಂಪರ್ಕ ಪ್ರಮಾಣೀಕರಣ ಸಭೆʼ ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ದೆಹಲಿಯಲ್ಲಿ ನಡೆಯಲಿದೆ"

"ಈ ದಶಕವು ಭಾರತದ `ತಂತ್ರಜ್ಞಾನದ ದಶಕ’ (tech-Ade) ಆಗಿದೆ” 

Posted On: 22 MAR 2023 2:11PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದಲ್ಲಿ ನೂತನ ʻಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟʼದ (ಐಟಿಯು) ಪ್ರದೇಶ ಕಚೇರಿ ಮತ್ತು ಆವಿಷ್ಕಾರ ಕೇಂದ್ರವನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿಯವರು ʻಭಾರತ್ 6ಜಿʼ ವಿಷನ್ ಡಾಕ್ಯುಮೆಂಟ್ ಅನ್ನು ಅನಾವರಣಗೊಳಿಸಿದರು ಜೊತೆಗೆ ʻ6ಜಿʼ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಾಯೋಗಿಕ ವೇದಿಕೆಗೆ ಚಾಲನೆ ನೀಡಿದರು. 'ಕಾಲ್ ಬಿಫೋರ್ ಯು ಡಿಗ್' ಆ್ಯಪ್ ಅನ್ನು ಅವರು ಬಿಡುಗಡೆ ಮಾಡಿದರು. ʻಐಟಿಯುʼ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳಿಗಾಗಿ (ಐಸಿಟಿ) ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾಗಿದೆ. ಪ್ರದೇಶಿಕ ಕಚೇರಿ ಸ್ಥಾಪನೆಗಾಗಿ ಭಾರತವು ಮಾರ್ಚ್ 2022 ರಲ್ಲಿ ʻಐಟಿಯುʼನೊಂದಿಗೆ ಆತಿಥೇಯ ರಾಷ್ಟ್ರಗಳ ಒಪ್ಪಂದಕ್ಕೆ ಸಹಿ ಹಾಕಿತು. ಇದು ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ, ಶ್ರೀಲಂಕಾ, ಮಾಲ್ಡೀವ್ಸ್, ಅಫ್ಘಾನಿಸ್ತಾನ ಮತ್ತು ಇರಾನ್‌ಗೆ ಸೇವೆ ಸಲ್ಲಿಸಲಿದೆ, ರಾಷ್ಟ್ರಗಳ ನಡುವೆ ಸಮನ್ವಯವನ್ನು ಹೆಚ್ಚಿಸಲಿದೆ ಮತ್ತು ಈ ವಲಯದಲ್ಲಿ ಪರಸ್ಪರ ಲಾಭದಾಯಕ ಆರ್ಥಿಕ ಸಹಕಾರವನ್ನು ಉತ್ತೇಜಿಸುತ್ತದೆ.

ಭಾರತದಲ್ಲಿ ಹೊಸ ʻಐಟಿಯುʼ ಕಚೇರಿ ಮತ್ತು ಆವಿಷ್ಕಾರ ಕೇಂದ್ರವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದ್ದಕ್ಕಾಗಿ ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಡೊರೀನ್-ಬೊಗ್ಡಾನ್ ಮಾರ್ಟಿನ್ ಅವರು ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ಇದು ಭಾರತ ಮತ್ತು ʻಐಟಿಯುʼನ ಸುದೀರ್ಘ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೂಚಿಸುತ್ತದೆ. ಈ ಪ್ರದೇಶದಲ್ಲಿ ʻಐಟಿಯುʼನ ಉಪಸ್ಥಿತಿಯು ಸುಧಾರಿತ ತಂತ್ರಜ್ಞಾನಗಳನ್ನು ಪರಿಚಯಿಸಲು, ಸಾಮರ್ಥ್ಯ ಅಭಿವೃದ್ಧಿಯನ್ನು ಸುಧಾರಿಸಲು ಹಾಗೂ ಉದ್ಯಮಶೀಲತೆ ಮತ್ತು ಪಾಲುದಾರಿಕೆಯನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. " ಡಿಜಿಟಲ್ ರೂಪಾಂತರದ ಮೂಲಕ ತಮ್ಮ ಆರ್ಥಿಕತೆಯನ್ನು ಬೆಳೆಸಲು, ತಮ್ಮ ಸರ್ಕಾರಿ ಸೇವೆಗಳನ್ನು ಉನ್ನತೀಕರಿಸಲು, ಹೂಡಿಕೆಗಳನ್ನು ಆಕರ್ಷಿಸಲು, ವಾಣಿಜ್ಯವನ್ನು ಮರುರೂಪಿಸಲು ಹಾಗೂ ತಮ್ಮ ಜನರನ್ನು ಸಬಲೀಕರಣಗೊಳಿಸಲು ಬಯಸುವ ದೇಶಗಳಿಗೆ ಭಾರತವು ಮಾದರಿಯಾಗಿದೆ" ಎಂದು ಅವರು ಹೇಳಿದರು. ಭಾರತವು ವಿಶ್ವದ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆ, ಡಿಜಿಟಲ್ ಪಾವತಿ ಮಾರುಕಟ್ಟೆ ಮತ್ತು ಟೆಕ್ ಕಾರ್ಯಪಡೆಗಳಿಗೆ ನೆಲೆಯಾಗಿದೆ. ಪ್ರಧಾನಿಯವರ ನಾಯಕತ್ವವು ಭಾರತವನ್ನು ತಂತ್ರಜ್ಞಾನ ಆವಿಷ್ಕಾರಗಳು ಮತ್ತು ಅಳವಡಿಕೆಗಳ ಮುಂಚೂಣಿಯಲ್ಲಿ ಇರಿಸಿದೆ. ʻಆಧಾರ್ʼ, ʻಯುಪಿಐʼ ಮುಂತಾದ ಕ್ರಾಂತಿಕಾರಿ ಉಪಕ್ರಮಗಳೊಂದಿಗೆ ಭಾರತವನ್ನು ಜ್ಞಾನ ಆಧಾರಿತ ಆರ್ಥಿಕತೆಯನ್ನಾಗಿ ಮಾಡುವಲ್ಲಿ ಮೋದಿ ಅವರ ನಾಯಕತ್ವವು ಸಫಲವಾಗಿದೆ ಎಂದು ಅವರು ಹೇಳಿದರು.
 
ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ಹಿಂದೂ ಕ್ಯಾಲೆಂಡರ್‌ನ ಹೊಸ ವರ್ಷವನ್ನು ಗುರುತಿಸುವ ವಿಶೇಷ ದಿನ ಇದಾಗಿದೆ ಎಂದರು. ಎಲ್ಲರಿಗೂ ʻವಿಕ್ರಮ್ ಸಂವತ್ 2080ʼರ ಸಂದರ್ಭದಲ್ಲಿ ಶುಭಾಶಯಗಳನ್ನು ತಿಳಿಸಿದರು. ಭಾರತದ ವೈವಿಧ್ಯತೆ ಮತ್ತು ಶತಮಾನಗಳಿಂದ ಚಾಲ್ತಿಯಲ್ಲಿರುವ ವಿವಿಧ ಕ್ಯಾಲೆಂಡರ್‌ಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಮಲಯಾಳಂ ಕ್ಯಾಲೆಂಡರ್ ಮತ್ತು ತಮಿಳು ಕ್ಯಾಲೆಂಡರ್‌ನ ಉದಾಹರಣೆಗಳನ್ನು ನೀಡಿದರು. ʻವಿಕ್ರಮ್ ಸಂವತ್ʼ ಕ್ಯಾಲೆಂಡರ್ 2080 ವರ್ಷಗಳಿಂದ ನಡೆಯುತ್ತಿದೆ ಎಂದು ಹೇಳಿದರು. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಸ್ತುತ 2023 ಅನ್ನು ಸೂಚಿದರೆ, ʻವಿಕ್ರಮ್ ಸಂವತ್ʼ ಅದಕ್ಕಿಂತಲೂ 57 ವರ್ಷಗಳ ಹಿಂದೆ ಪ್ರಾರಂಭವಾಯಿತು ಎಂದು ಅವರು ಹೇಳಿದರು. ʻಐಟಿಯುʼನ ಪ್ರದೇಶ ಕಚೇರಿ ಮತ್ತು ಆವಿಷ್ಕಾರ ಕೇಂದ್ರವನ್ನು ಉದ್ಘಾಟಿಸಲಾಗುತ್ತಿರುವ ಈ ಶುಭ ದಿನದಂದು ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಹೊಸ ಆರಂಭ ಸಂಭವಿಸುತ್ತದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ʻ6 ಜಿʼ ಪ್ರಯೋಗ ವೇದಿಕೆ ಮತ್ತು ಈ ತಂತ್ರಜ್ಞಾನಕ್ಕೆ ಸಂಬಂಧಿಸಿದ ʻವಿಷನ್ ಡಾಕ್ಯುಮೆಂಟ್ʼ ಅನ್ನು ಅನಾವರಣಗೊಳಿಸಲಾಗಿದೆ. ಇದು ಡಿಜಿಟಲ್ ಇಂಡಿಯಾಗೆ ಹೊಸ ಶಕ್ತಿಯನ್ನು ತಂಬುವುದಲ್ಲದೆ, ಜಗತ್ತಿನ ದಕ್ಷಿಣ ಭಾಗಕ್ಕೆ ಪರಿಹಾರಗಳು ಮತ್ತು ಆವಿಷ್ಕಾರಗಳನ್ನು ಒದಗಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಇದು ಭಾರತದ ಸಂಶೋಧಕರು, ಕೈಗಾರಿಕೆಗಳು ಮತ್ತು ನವೋದ್ಯಮಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಉಪಕ್ರಮವು ದಕ್ಷಿಣ ಏಷ್ಯಾದ ದೇಶಗಳ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರ ಮತ್ತು ಸಹಯೋಗವನ್ನು ಬಲಪಡಿಸುತ್ತದೆ ಎಂದು ಅವರು ತಿಳಿಸಿದರು.

ʻಜಿ 20ʼ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ತನ್ನ ಜವಾಬ್ದಾರಿಗಳನ್ನು ಪೂರೈಸುತ್ತಿರುವುದರಿಂದ, ಪ್ರಾದೇಶಿಕ ವಿಭಜನೆಯನ್ನು ಕಡಿಮೆ ಮಾಡುವುದು ಅದರ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ಹೇಳಿದರು. ಇತ್ತೀಚಿಗೆ ನಡೆದ ದಕ್ಷಿಣ ಜಗತ್ತಿನ ದೇಶಗಳ ಶೃಂಗಸಭೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ದಕ್ಷಿಣ ಜಗತ್ತಿನ ದೇಶಗಳು ತಾಂತ್ರಿಕ ವಿಭಜನೆಯನ್ನು ತ್ವರಿತಗತಿಯಲ್ಲಿ ಮೀರಲು ಪ್ರಯತ್ನಿಸುತ್ತಿರುವುದರಿಂದ ಜಾಗತಿಕ ದಕ್ಷಿಣದ ಅಗತ್ಯಗಳಿಗೆ ಅನುಗುಣವಾಗಿ ತಂತ್ರಜ್ಞಾನ, ವಿನ್ಯಾಸ ಮತ್ತು ಮಾನದಂಡಗಳ ಮಹತ್ವವನ್ನು ಒತ್ತಿ ಹೇಳಿದರು. "ಐಟಿಯು ಪ್ರಾದೇಸಿಕ ಕಚೇರಿ ಮತ್ತು ಆವಿಷ್ಕಾರ ಕೇಂದ್ರವು ಈ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. ಜಾಗತಿಕ ದಕ್ಷಿಣದಲ್ಲಿ ಸಾರ್ವತ್ರಿಕ ಸಂಪರ್ಕವನ್ನು ಒದಗಿಸುವ ಭಾರತದ ಪ್ರಯತ್ನಗಳಿಗೆ ಇದು ವೇಗವನ್ನು ನೀಡುತ್ತದೆ" ಎಂದು ಅವರು ಹೇಳಿದರು.

ಜಾಗತಿಕ ವಿಭಜನೆಯನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತದಿಂದ ನಿರೀಕ್ಷೆಗಳನ್ನು ಹೊಂದಿರುವುದು ಸ್ವಾಭಾವಿಕ ಎಂದು ಪ್ರಧಾನಿ ಹೇಳಿದರು. ಭಾರತದ ಸಾಮರ್ಥ್ಯಗಳು, ನಾವೀನ್ಯತೆ ಸಂಸ್ಕೃತಿ, ಮೂಲಸೌಕರ್ಯ, ನುರಿತ ಮತ್ತು ನವೀನ ಮಾನವಶಕ್ತಿ ಹಾಗೂ ದೇಶದ ಅನುಕೂಲಕರ ನೀತಿ ವಾತಾವರಣವು ಈ ನಿರೀಕ್ಷೆಗಳಿಗೆ ಆಧಾರವಾಗಿದೆ ಎಂದು ಅವರು ಹೇಳಿದರು. "ಭಾರತವು ಎರಡು ಪ್ರಮುಖ ಸಾಮರ್ಥ್ಯಗಳನ್ನು ಹೊಂದಿದೆ ಅವೆಂದರೆ - ನಂಬಿಕೆ ಮತ್ತು ಪ್ರಮಾಣ. ನಂಬಿಕೆ ಮತ್ತು ಪ್ರಮಾಣವಿಲ್ಲದೆ ನಾವು ತಂತ್ರಜ್ಞಾನವನ್ನು ಎಲ್ಲಾ ಮೂಲೆಗಳಿಗೆ ಕೊಂಡೊಯ್ಯಲು ಸಾಧ್ಯವಿಲ್ಲ. ಇಡೀ ಜಗತ್ತು ಈ ದಿಕ್ಕಿನಲ್ಲಿ ಭಾರತದ ಪ್ರಯತ್ನಗಳ ಬಗ್ಗೆ ಮಾತನಾಡುತ್ತಿದೆ," ಎಂದು ಅವರು ಹೇಳಿದರು.
 
ಈ ನಿಟ್ಟಿನಲ್ಲಿ ಭಾರತದ ಪ್ರಯತ್ನಗಳು ವಿಶ್ವದಾದ್ಯಂತ ಚರ್ಚೆಯ ವಿಷಯವಾಗಿದೆ ಎಂದು ಪ್ರಧಾನಿ ಹೇಳಿದರು. ದೇಶದ ಸಾಧನೆಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತವು ಈಗ ನೂರು ಕೋಟಿಗೂ ಹೆಚ್ಚು ಮೊಬೈಲ್ ಸಂಪರ್ಕಗಳನ್ನು ಹೊಂದಿರುವ ವಿಶ್ವದ ಅತ್ಯಂತ ಸಂಪರ್ಕಿತ ಪ್ರಜಾಪ್ರಭುತ್ವವಾಗಿದೆ ಎಂದು ತಿಳಿಸಿದರು. ಅಗ್ಗದ ಸ್ಮಾರ್ಟ್‌ಫೋನ್‌ಗಳು ಮತ್ತು ಡೇಟಾದ ಲಭ್ಯತೆಯು ಈ ಪರಿವರ್ತನೆಗೆ ಕಾರಣವಾಗಿದೆ ಎಂದರು. ʻಯುಪಿಐʼ ಮೂಲಕ ಭಾರತದಲ್ಲಿ ಪ್ರತಿ ತಿಂಗಳು 800 ಕೋಟಿಗೂ ಹೆಚ್ಚು ಡಿಜಿಟಲ್ ಪಾವತಿಗಳನ್ನು ಮಾಡಲಾಗುತ್ತದೆ. ಭಾರತದಲ್ಲಿ ಪ್ರತಿದಿನ 7 ಕೋಟಿಗೂ ಹೆಚ್ಚು ʻಇ-ದೃಢೀಕರಣʼಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ಭಾರತದಲ್ಲಿ ʻಕೋ-ವಿನ್ʼ ವೇದಿಕೆ ಮೂಲಕ 220 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಕಳೆದ ಕೆಲವು ವರ್ಷಗಳಲ್ಲಿ ಭಾರತವು ತನ್ನ ನಾಗರಿಕರ ಬ್ಯಾಂಕ್ ಖಾತೆಗಳಿಗೆ ನೇರ ಲಾಭ ವರ್ಗಾವಣೆಯ ಮೂಲಕ 28 ಲಕ್ಷ ಕೋಟಿ ರೂ.ಗಳನ್ನು ವರ್ಗಾಯಿಸಿದೆ ಎಂದು ಪ್ರಧಾನಿ ತಿಳಿಸಿದರು. ʻಜನ್ ಧನ್ʼ ಯೋಜನೆಯ ಮೂಲಕ ಭಾರತವು ಅಮೆರಿಕದ ಸಂಪೂರ್ಣ ಜನಸಂಖ್ಯೆಗಿಂತ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ತೆರೆಯುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ಬ್ಯಾಂಕ್‌ ಖಾತೆಗಳನ್ನು ಅವುಗಳನ್ನು ವಿಶಿಷ್ಟ ಡಿಜಿಟಲ್ ಗುರುತು ಅಥವಾ ಆಧಾರ್ ಮೂಲಕ ದೃಢೀಕರಿಸಲಾಗಿದೆ ಮತ್ತು ಮೊಬೈಲ್ ಫೋನ್ ಮೂಲಕ ನೂರು ಕೋಟಿಗೂ ಹೆಚ್ಚು ಜನರನ್ನು ಸಂಪರ್ಕಿಸಲು ಇದರಿಂದ ಸಾಧ್ಯವಾಗಿದೆ ಎಂದು ತಿಳಿಸಿದರು. 

"ಭಾರತಕ್ಕೆ ದೂರಸಂಪರ್ಕ ತಂತ್ರಜ್ಞಾನವು ಶಕ್ತಿಯ ಸ್ವರೂಪವಲ್ಲ, ಆದರೆ ಅದರ ಸಬಲೀಕರಣದ ಧ್ಯೇಯವಾಗಿದೆ" ಎಂದು ಪ್ರಧಾನಿ ಹೇಳಿದರು. ಡಿಜಿಟಲ್ ತಂತ್ರಜ್ಞಾನವು ಭಾರತದಲ್ಲಿ ಸಾರ್ವತ್ರಿಕವಾಗಿದ್ದು, ಎಲ್ಲರಿಗೂ ಅದು ಲಭ್ಯವಿದೆ ಎಂದು ಅವರು ಗಮನ ಸೆಳೆದರು. ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಡಿಜಿಟಲ್ ಸೇರ್ಪಡೆ ದೊಡ್ಡ ಪ್ರಮಾಣದಲ್ಲಿ ನಡೆದಿದೆ ಎಂಬುದನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. 2014ಕ್ಕೆ ಮೊದಲು ಭಾರತದಲ್ಲಿ 60 ದಶಲಕ್ಷದಷ್ಟಿದ್ದ ಬ್ರಾಡ್ ಬ್ಯಾಂಡ್ ಸಂಪರ್ಕ ಬಳಕೆದಾರರ ಸಂಖ್ಯೆ, ಇಂದು 800 ದಶಲಕ್ಷಕ್ಕೆ ಏರಿದೆ ಎಂದರು. ಭಾರತದಲ್ಲಿ ಇಂಟರ್ನೆಟ್ ಸಂಪರ್ಕಗಳ ಸಂಖ್ಯೆ 2014ರ ಮೊದಲು ಇದ್ದ 25 ಕೋಟಿಗೆ ಹೋಲಿಸಿದರೆ ಈಗ 85 ಕೋಟಿಗಿಂತಲೂ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಾಲ ಬಳಕೆ ಹೆಚ್ಚಳವನ್ನುಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಹಳ್ಳಿಗಳಲ್ಲಿ ಇಂಟರ್ನೆಟ್‌ ಬಳಕೆದಾರರ ಸಂಖ್ಯೆ ನಗರ ಪ್ರದೇಶಗಳನ್ನು ಮೀರಿದ್ದು, ಡಿಜಿಟಲ್ ಶಕ್ತಿ ದೇಶದ ಮೂಲೆ ಮೂಲೆಗೂ ತಲುಪಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದರು. ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ಸರಕಾರ ಮತ್ತು ಖಾಸಗಿ ವಲಯ 25 ಲಕ್ಷ ಕಿ.ಮೀ ಆಪ್ಟಿಕಲ್ ಫೈಬರ್ ಅಳವಡಿಸಿವೆ ಎಂದು ಅವರು ಮಾಹಿತಿ ನೀಡಿದರು. "2 ಲಕ್ಷ ಗ್ರಾಮ ಪಂಚಾಯಿತಿಗಳನ್ನು ಆಪ್ಟಿಕಲ್ ಫೈಬರ್ ಮೂಲಕ ಸಂಪರ್ಕಿಸಲಾಗಿದೆ ಮತ್ತು 5 ಲಕ್ಷ ʻಸಾಮಾನ್ಯ ಸೇವಾ ಕೇಂದ್ರʼಗಳು ಡಿಜಿಟಲ್ ಸೇವೆಗಳನ್ನು ನೀಡುತ್ತಿವೆ. ಇದು ಡಿಜಿಟಲ್ ಆರ್ಥಿಕತೆಯು ಉಳಿದ ಆರ್ಥಿಕತೆಗಿಂತ ಎರಡೂವರೆ ಪಟ್ಟು ವೇಗವಾಗಿ ವಿಸ್ತರಿಸುತ್ತಿರುವ ಪರಿಸ್ಥಿತಿಗೆ ದಾರಿಮಾಡಿದೆ," ಎಂದು ಶ್ರೀ ಮೋದಿ ಮಾಹಿತಿ ನೀಡಿದರು.

ʻಡಿಜಿಟಲ್ ಇಂಡಿಯಾʼವು ಡಿಜಿಟಲ್ ಅಲ್ಲದ ವಲಯಗಳನ್ನೂ ಬೆಂಬಲಿಸುತ್ತಿದೆ ಎಂದ ಪ್ರಧಾನಮಂತ್ರಿಯವರು, ʻಪ್ರಧಾನಮಂತ್ರಿ ಗತಿಶಕ್ತಿ ಮಾಸ್ಟರ್ ಪ್ಲ್ಯಾನ್ʼನ ಉದಾಹರಣೆಯ ಮೂಲಕ ಇದನ್ನು ವಿವರಿಸಿದರು. 'ಕಾಲ್ ಬಿಫೋರ್ ಯು ಡಿಗ್' ಅಪ್ಲಿಕೇಶನ್ ಇದೇ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ಇದು ಅನಗತ್ಯ ಅಗೆಯುವಿಕೆ ಮತ್ತು ಹಾನಿಯ ಸಂದರ್ಭಗಳನ್ನು ಕಡಿಮೆ ಮಾಡುತ್ತದೆ ಎಂದು ಮಾಹಿತಿ ನೀಡಿದರು.

"ಇಂದಿನ ಭಾರತವು ಡಿಜಿಟಲ್ ಕ್ರಾಂತಿಯ ಮುಂದಿನ ಹಂತದತ್ತ ವೇಗವಾಗಿ ಸಾಗುತ್ತಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ಕೇವಲ 120 ದಿನಗಳಲ್ಲಿ 125ಕ್ಕೂ ಹೆಚ್ಚು ನಗರಗಳಲ್ಲಿ ʻ5ಜಿʼ ಸೇವೆಗಳನ್ನು ಆರಂಭಿಸಲಾಗಿದೆ.  ʻ5 ಜಿʼ ಸೇವೆಗಳು ದೇಶದ ಸರಿಸುಮಾರು 350 ಜಿಲ್ಲೆಗಳನ್ನು ತಲುಪಿರುವುದರಿಂದ ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ʻ5ಜಿʼ ವಿಸ್ತರಿಸಿದ ದೇಶವಾಗಿದೆ ಎಂದು ಒತ್ತಿ ಹೇಳಿದರು. ಭಾರತದ ವಿಶ್ವಾಸದ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ʻ5ಜಿʼ ಜಾರಿಯಾದ 6 ತಿಂಗಳ ನಂತರ ಭಾರತವು ʻ6ಜಿʼ ಬಗ್ಗೆ ಚರ್ಚಿಸುತ್ತಿದೆ ಎಂದರು. "ಇಂದು ಪ್ರಸ್ತುತಪಡಿಸಿದ ʻವಿಷನ್ ಡಾಕ್ಯುಮೆಂಟ್ʼ ಮುಂದಿನ ಕೆಲವು ವರ್ಷಗಳಲ್ಲಿ ʻ6 ಜಿʼ ಚಾಲನೆಗೆ ಪ್ರಮುಖ ಆಧಾರವಾಗಲಿದೆ," ಎಂದು ಅವರು ಹೇಳಿದರು.

ಭಾರತದಲ್ಲಿ ಯಶಸ್ವಿಯಾಗಿ ಅಭಿವೃದ್ಧಿ ಹೊಂದಿದ ದೂರಸಂಪರ್ಕ ತಂತ್ರಜ್ಞಾನವು ವಿಶ್ವದ ಅನೇಕ ರಾಷ್ಟ್ರಗಳ ಗಮನವನ್ನು ಸೆಳೆಯುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ʻ4ಜಿʼಗೆ ಮೊದಲು ಭಾರತವು ದೂರಸಂಪರ್ಕ ತಂತ್ರಜ್ಞಾನದ ಬಳಕೆದಾರ ಮಾತ್ರವಾಗಿತ್ತು, ಆದರೆ ಇಂದು ಅದು ವಿಶ್ವದ ಅತಿದೊಡ್ಡ ದೂರಸಂಪರ್ಕ ತಂತ್ರಜ್ಞಾನದ ರಫ್ತುದಾರನಾಗುವತ್ತ ಸಾಗುತ್ತಿದೆ ಎಂದು ಒತ್ತಿ ಹೇಳಿದರು. "5 ಜಿ ಶಕ್ತಿಯೊಂದಿಗೆ ಇಡೀ ವಿಶ್ವದ ಕೆಲಸದ ಸಂಸ್ಕೃತಿಯನ್ನು ಬದಲಾಯಿಸಲು ಭಾರತವು ಅನೇಕ ದೇಶಗಳೊಂದಿಗೆ ಕೆಲಸ ಮಾಡುತ್ತಿದೆ" ಎಂದು ಅವರು ಮಾಹಿತಿ ನೀಡಿದರು. ʻ5ಜಿʼಗೆ ಸಂಬಂಧಿಸಿದ ಅವಕಾಶಗಳು, ವ್ಯವಹಾರ ಮಾದರಿಗಳು ಮತ್ತು ಉದ್ಯೋಗ ಸಾಮರ್ಥ್ಯವನ್ನು ಅರಿತುಕೊಳ್ಳುವಲ್ಲಿ ಇದು ಬಹಳ ಮಹತ್ವದ ಪಾತ್ರ ವಹಿಸುತ್ತದೆ ಎಂದು ಒತ್ತಿಹೇಳಿದರು. "ಈ 100 ಹೊಸ ಪ್ರಯೋಗಾಲಯಗಳು ಭಾರತದ ಅನನ್ಯ ಅಗತ್ಯಗಳಿಗೆ ಅನುಗುಣವಾಗಿ ʻ5 ಜಿʼ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತವೆ. ಅದು ʻ5ಜಿ ಸ್ಮಾರ್ಟ್ ಕ್ಲಾಸ್ ರೂಂʼ ಆಗಿರಲಿ, ಕೃಷಿ, ಇಂಟಲಿಜೆಂಟ್‌ ಸಾರಿಗೆ ವ್ಯವಸ್ಥೆಗಳು ಅಥವಾ ಆರೋಗ್ಯ ರಕ್ಷಣೆ ತಂತ್ರಾಂಶಗಳಾಗಿರಲಿ ಭಾರತವು ಪ್ರತಿಯೊಂದು ದಿಕ್ಕಿನಲ್ಲಿಯೂ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ", ಎಂದು ಪ್ರಧಾನಿ ಹೇಳಿದರು. ಭಾರತದ ʻ5ಜಿʼ ಮಾನದಂಡಗಳು ಜಾಗತಿಕ ʻ5ಜಿʼ ವ್ಯವಸ್ಥೆಗಳ ಒಂದು ಭಾಗವಾಗಿದೆ ಎಂದು ಗಮನ ಸೆಳೆದ ಪ್ರಧಾನಿ, ಭವಿಷ್ಯದ ತಂತ್ರಜ್ಞಾನಗಳ ಪ್ರಮಾಣೀಕರಣಕ್ಕಾಗಿ ಭಾರತವು ʻಐಟಿಯುʼನೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು. ನೂತನ ಭಾರತೀಯ ʻಐಟಿಯುʼ ಪ್ರದೇಶ ಕಚೇರಿಯು ʻ6ಜಿʼ ಗೆ ಸೂಕ್ತ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಶ್ರೀ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ದೆಹಲಿಯಲ್ಲಿ ʻಐಟಿಯುʼನ ʻವಿಶ್ವ ದೂರಸಂಪರ್ಕ ಪ್ರಮಾಣೀಕರಣ ಸಭೆʼ ನಡೆಯಲಿದ್ದು, ವಿಶ್ವದ ವಿವಿಧ ಭಾಗಗಳ ಪ್ರತಿನಿಧಿಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಘೋಷಿಸಿದ ಪ್ರಧಾನಿ, ಈ ಬಗ್ಗೆ ಸಂತಸ ವ್ಯಕ್ತಪಡಿಸಿದರು. 

ಭಾಷಣದ ಕೊನೆಯಲ್ಲಿ ಭಾರತದ ಅಭಿವೃದ್ಧಿಯ ವೇಗದ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ನಿಟ್ಟಿನಲ್ಲಿ ʻಐಟಿಯುʼನ ಈ ಹೊಸ ಕಚೇರಿಯು ಪ್ರಮುಖ ಪಾತ್ರ ವಹಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. "ಈ ದಶಕವು ಭಾರತದ ತಂತ್ರಜ್ಞಾನದ ದಶಕವಾಗಿದೆʼ(Tech-Ade). ಭಾರತದ ದೂರಸಂಪರ್ಕ ಮತ್ತು ಡಿಜಿಟಲ್ ಮಾದರಿಯು ಸುಗಮ, ಸುರಕ್ಷಿತ ಮತ್ತು ಪಾರದರ್ಶಕವಾಗಿದೆ. ದಕ್ಷಿಣ ಏಷ್ಯಾದ ಎಲ್ಲ ಮಿತ್ರ ರಾಷ್ಟ್ರಗಳು ಇದರ ಲಾಭ ಪಡೆಯಬಹುದು", ಎಂದು ಪ್ರಧಾನಿ ಕರೆ ನೀಡಿದರು.

ಕೇಂದ್ರ ಸಂವಹನ ಸಚಿವ ಶ್ರೀ ಅಶ್ವಿನಿ ವೈಷ್ಣವ್, ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಸುಬ್ರಮಣ್ಯಂ ಜೈಶಂಕರ್, ಕೇಂದ್ರ ಸಂವಹನ ಖಾತೆ ಸಹಾಯಕ ಸಚಿವ ಶ್ರೀ ದೇವುಸಿನ್ಹ ಚೌಹಾಣ್ ಮತ್ತು ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಡೊರೀನ್-ಬೊಗ್ಡಾನ್ ಮಾರ್ಟಿನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ
ʻಐಟಿಯುʼ - ಇದು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳಿಗಾಗಿ (ಐಸಿಟಿ) ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾಗಿದೆ. ಜಿನೀವಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಇದು ಕ್ಷೇತ್ರ ಕಚೇರಿಗಳು, ಪ್ರದೇಶ ಕಚೇರಿಗಳು ಮತ್ತು ಪ್ರದೇಶ ಕಚೇರಿಗಳ ಜಾಲವನ್ನು ಹೊಂದಿದೆ.  ಪ್ರದೇಶ ಕಚೇರಿ ಸ್ಥಾಪನೆಗಾಗಿ ಭಾರತವು ಮಾರ್ಚ್ 2022ರಲ್ಲಿ ʻಐಟಿಯುʼನೊಂದಿಗೆ ಆತಿಥೇಯ ರಾಷ್ಟ್ರಗಳ ಒಪ್ಪಂದಕ್ಕೆ ಸಹಿ ಹಾಕಿತು. ಭಾರತದಲ್ಲಿನ ಪ್ರದೇಶ ಕಚೇರಿಯು ಆವಿಷ್ಕಾರ ಕೇಂದ್ರವನ್ನು ಸಹ ಒಳಗೊಂಡಿರಲಿದ್ದು, ಇದು ʻಐಟಿಯುʼನ ಇತರ ಪ್ರದೇಶ ಕಚೇರಿಗಳಿಗಿಂತ ವಿಶಿಷ್ಟವಾಗಿದೆ. ಭಾರತದಿಂದ ಸಂಪೂರ್ಣವಾಗಿ ಧನಸಹಾಯ ಪಡೆದ ಪ್ರದೇಶ ಕಚೇರಿಯು ನವದೆಹಲಿಯ ಮೆಹ್ರೌಲಿಯಲ್ಲಿರುವ ʻಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ʼ (ಸಿ-ಡಾಟ್) ಕಟ್ಟಡದ ಎರಡನೇ ಮಹಡಿಯಲ್ಲಿದೆ. ಇದು ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ, ಶ್ರೀಲಂಕಾ, ಮಾಲ್ಡೀವ್ಸ್, ಅಫ್ಘಾನಿಸ್ತಾನ ಮತ್ತು ಇರಾನ್‌ಗೆ ಸೇವೆ ಸಲ್ಲಿಸಲಿದೆ, ರಾಷ್ಟ್ರಗಳ ನಡುವೆ ಸಮನ್ವಯವನ್ನು ಹೆಚ್ಚಿಸುತ್ತದೆ ಮತ್ತು ಈ ವಲಯದಲ್ಲಿ ಪರಸ್ಪರ ಲಾಭದಾಯಕ ಆರ್ಥಿಕ ಸಹಕಾರವನ್ನು ಉತ್ತೇಜಿಸುತ್ತದೆ.

ʻಭಾರತ್ 6ಜಿʼ ವಿಷನ್ ಡಾಕ್ಯುಮೆಂಟ್ ಅನ್ನು ʻಟೆಕ್ನಾಲಜಿ ಇನ್ನೋವೇಶನ್ ಗ್ರೂಪ್ ಆನ್ 6ಜಿʼ (ಟಿಐಜಿ -6 ಜಿ) ಸಿದ್ಧಪಡಿಸಿದೆ, ಇದನ್ನು ವಿವಿಧ ಸಚಿವಾಲಯಗಳು / ಇಲಾಖೆಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಪ್ರಮಾಣೀಕರಣ ಸಂಸ್ಥೆಗಳು, ಟೆಲಿಕಾಂ ಸೇವಾ ಪೂರೈಕೆದಾರರು ಮತ್ತು ಉದ್ಯಮದ ಸದಸ್ಯರೊಂದಿಗೆ 2021ರ ನವೆಂಬರ್ನಲ್ಲಿ ರಚಿಸಲಾಯಿತು. ʻ6ಜಿ ಪ್ರಯೋಗ ವೇದಿಕೆಯು(ಟೆಸ್ಟ್‌ ಬೆಡ್), ವಿಕಸನಗೊಳ್ಳುತ್ತಿರುವ ʻಐಸಿಟಿʼ ತಂತ್ರಜ್ಞಾನಗಳನ್ನು ಪರೀಕ್ಷಿಸಲು ಮತ್ತು ಮೌಲ್ಯೀಕರಿಸಲು ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕೆಗಳು, ನವೋದ್ಯಮಗಳು, ʻಎಂಎಸ್ಎಂಇʼಗಳು ಮುಂತಾದವುಗಳಿಗೆ ವೇದಿಕೆ ಒದಗಿಸುತ್ತದೆ. ʻಭಾರತ್ 6ಜಿ ವಿಷನ್ ಡಾಕ್ಯುಮೆಂಟ್ʼ ಮತ್ತು ʻ6ಜಿ ಪ್ರಯೋಗ ವೇದಿಕೆʼಯು ದೇಶದಲ್ಲಿ ನಾವೀನ್ಯತೆ, ಸಾಮರ್ಥ್ಯ ವರ್ಧನೆ ಮತ್ತು ವೇಗದ ತಂತ್ರಜ್ಞಾನ ಅಳವಡಿಕೆಗೆ ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿಸುತ್ತದೆ.

ʻಪಿಎಂ ಗತಿ ಶಕ್ತಿʼ ಅಡಿಯಲ್ಲಿ ಸಮಗ್ರ ಯೋಜನೆ ಮತ್ತು ಮೂಲಸೌಕರ್ಯ ಸಂಪರ್ಕ ಯೋಜನೆಗಳ ಸಂಘಟಿತ ಅನುಷ್ಠಾನ ಆಗಬೇಕೆಂಬ ಪ್ರಧಾನ ಮಂತ್ರಿಯವರ ಆಶಯಕ್ಕೆ ಉದಾಹರಣೆಯಾಗಿ, ʻಕಾಲ್ ಬಿಫೋರ್ ಯು ಡಿಗ್ʼ (ಸಿಬಿಯುಡಿ) ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಇದು ʻಆಪ್ಟಿಕಲ್ ಫೈಬರ್ʼ ಕೇಬಲ್‌ಗಳಂತಹ ಅಂತರ್ಗತ ಸ್ವತ್ತುಗಳಿಗೆ ಹಾನಿಯಾಗುವುದನ್ನು ತಡೆಗಟ್ಟುವ ಸಾಧನವಾಗಿದೆ. ಪ್ರಸ್ತುತ ಯೋಜಿತವಲ್ಲದ ಅಗೆಯುವಿಕೆ ಮತ್ತು ಉತ್ಖನನದಿಂದಾಗಿ ದೇಶಕ್ಕೆ ಪ್ರತಿವರ್ಷ ಸುಮಾರು 3000 ಕೋಟಿ ರೂ.ಗಳ ನಷ್ಟವಾಗುತ್ತಿದೆ. ಈ ಮೊಬೈಲ್ ತಂತ್ರಾಂಶವು ಉತ್ಖನನಕಾರರು ಮತ್ತು ಆಸ್ತಿ ಮಾಲೀಕರನ್ನು ʻಎಸ್ಎಂಎಸ್ʼ / ʻಇಮೇಲ್ʼ ಅಧಿಸೂಚನೆಗಳ ಮೂಲಕ ಸಂಪರ್ಕಿಸುತ್ತದೆ ಮತ್ತು ಕರೆ ಮಾಡಲು ಅವಕಾಶ ಒದಗಿಸುತ್ತದೆ. ಇದರಿಂದಾಗಿ ಭೂಗತ ಸ್ವತ್ತುಗಳ ಸುರಕ್ಷತೆ ಖಾತರಿಯಾಗುವುದಲ್ಲದೆ, ದೇಶದಲ್ಲಿ ಯೋಜಿತ ಉತ್ಖನನಗಳು ನಡೆಯುತ್ತವೆ.

ದೇಶದ ಆಡಳಿತದಲ್ಲಿ 'ಸಂಪೂರ್ಣ-ಸರಕಾರದ ಕಾರ್ಯವಿಧಾನʼ ಅಳವಡಿಸಿಕೊಳ್ಳುವುದನ್ನು ವಿವರಿಸುವ ʻಸಿಬಿಯುಡಿʼ ತಂತ್ರಾಂಶವು, ವ್ಯವಹಾರವನ್ನು ಸುಲಭಗೊಳಿಸುವ ಮೂಲಕ ಎಲ್ಲಾ ಮಧ್ಯಸ್ಥಗಾರರಿಗೆ ಪ್ರಯೋಜನವನ್ನು ನೀಡುತ್ತದೆ. ಇದು ಸಂಭಾವ್ಯ ವ್ಯಾಪಾರ ನಷ್ಟವನ್ನು ತಡೆಯುತ್ತದೆ. ಜೊತೆಗೆ ರಸ್ತೆ, ದೂರಸಂಪರ್ಕ, ನೀರು, ಅನಿಲ ಮತ್ತು ವಿದ್ಯುತ್ ನಂತಹ ಅಗತ್ಯ ಸೇವೆಗಳಲ್ಲಿ ಅಡಚಣೆಗಳು ಕಡಿಮೆಯಾಗಿ ನಾಗರಿಕರಿಗೆ ಅನಾನುಕೂಲತೆ ತಪ್ಪುತ್ತದೆ. 

 

***

 



(Release ID: 1909638) Visitor Counter : 150