ಪ್ರಧಾನ ಮಂತ್ರಿಯವರ ಕಛೇರಿ

ವಿಪತ್ತು ಅಪಾಯ ತಗ್ಗಿಸುವ ರಾಷ್ಟ್ರೀಯ ವೇದಿಕೆಯ 3ನೇ ಅಧಿವೇಶನವನ್ನು ಉದ್ಘಾಟಿಸಿದ ಪ್ರಧಾನಿ


ʻಸುಭಾಷ್ ಚಂದ್ರ ಬೋಸ್ ಆಪದಾ ಪ್ರಬಂಧನ್ ಪ್ರಶಸ್ತಿʼ ಪುರಸ್ಕೃತರನ್ನು ಸತ್ಕರಿಸಿದರು

"ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪಗಳ ನಂತರ, ಭಾರತದ ವಿಪತ್ತು ನಿರ್ವಹಣಾ ಪ್ರಯತ್ನಗಳ ಪಾತ್ರವನ್ನು ಜಗತ್ತು ಗುರುತಿಸಿದೆ ಮತ್ತು ಶ್ಲಾಘಿಸಿದೆ"

"ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲವನ್ನು ಭಾರತ ವಿಸ್ತರಿಸಿದ ರೀತಿಯಿಂದ ದೇಶಕ್ಕೆ ಉತ್ತಮ ಸೇವೆ ದೊರೆತಿದೆ"

"ನಾವು ಸ್ಥಳೀಯ ಮಟ್ಟದಲ್ಲಿ ವಸತಿ ಅಥವಾ ನಗರ ಯೋಜನೆಯ ಮಾದರಿಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಈ ಕ್ಷೇತ್ರಗಳಲ್ಲಿ ಸುಧಾರಿತ ತಂತ್ರಜ್ಞಾನದ ಬಳಕೆಯನ್ನು ನಾವು ಪ್ರೋತ್ಸಾಹಿಸಬೇಕಾಗಿದೆ.

"ವಿಪತ್ತು ನಿರ್ವಹಣೆಯನ್ನು ಬಲಪಡಿಸುವ ಎರಡು ಪ್ರಮುಖ ಅಂಶಗಳೆಂದರೆ ಗುರುತಿಸುವಿಕೆ ಮತ್ತು ಸುಧಾರಣೆ"

"ಸ್ಥಳೀಯ ಭಾಗವಹಿಸುವಿಕೆಯ ಮೂಲಕ ಸ್ಥಳೀಯ ನಿರ್ಮಾಣಗಳಲ್ಲಿ ಸುದೃಢತೆ ಮಂತ್ರವನ್ನು ಅನುಸರಿಸುವ ಮೂಲಕ ಮಾತ್ರ ನೀವು ಯಶಸ್ಸನ್ನು ಪಡೆಯಬಲ್ಲಿರಿ"

"ಮನೆಗಳ ವಯಸ್ಸು, ಒಳಚರಂಡಿ, ನಮ್ಮ ವಿದ್ಯುತ್ ಮತ್ತು ನೀರಿನ ಮೂಲಸೌಕರ್ಯಗಳ ಸುದೃಢತೆ ಅಂಶಗಳ ಬಗ್ಗೆ ಜ್ಞಾನವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ"

"ಆಂಬ್ಯುಲೆನ್ಸ್ ಜಾಲವನ್ನು ಭವಿಷ್ಯ ಸನ್ನದ್ಧಗೊಳಿಸಲು ʻಕೃತಕ ಬುದ್ಧಿಮತ್ತೆʼ(ಎಐ), 5ಜಿ ಮತ್ತು ʻಇಂಟರ್ನೆಟ್ ಆಫ್ ಥಿಂಗ್ಸ್ʼ(ಐಒಟಿ) ಬಳಕೆಯನ್ನು ಅನ್ವೇಷಿಸಿ"

"ಸಂಪ್ರದಾಯ ಮತ್ತು ತಂತ್ರಜ್ಞಾನವು ನಮ್ಮ ಶಕ್ತಿಯಾಗಿದೆ, ಮತ್ತು ಈ ಶಕ್ತಿಯೊಂದಿಗೆ, ನಾವು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ವಿಪತ್ತು ಸುದೃಢತೆಗೆ ಸಂಬಂಧಿಸಿದ ಅತ್ಯುತ್ತಮ ಮಾದರಿಯನ್ನು ಸಿದ್ಧಪಡಿಸಬಹುದು"

Posted On: 10 MAR 2023 6:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ `ವಿಪತ್ತು ಅಪಾಯ ತಗ್ಗಿಸುವ ರಾಷ್ಟ್ರೀಯ ವೇದಿಕೆ’ಯ (ಎನ್.ಪಿ.ಡಿ.ಆರ್.ಆರ್.) 3ನೇ ಅಧಿವೇಶನವನ್ನು ಉದ್ಘಾಟಿಸಿದರು.  ಈ ವೇದಿಕೆಯ 3 ನೇ ಅಧಿವೇಶನದ ಮುಖ್ಯ ವಿಷಯವೆಂದರೆ "ಬದಲಾಗುತ್ತಿರುವ ಹವಾಮಾನದಲ್ಲಿ ಸ್ಥಳೀಯ ನಿರ್ಮಾಣಗಳಲ್ಲಿ ಸುದೃಢತೆ ".

‌ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ʻಸುಭಾಷ್ ಚಂದ್ರ ಬೋಸ್ ಆಪದಾ ಪ್ರಬಂಧನ್ ಪುರಸ್ಕಾರʼ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿದರು. ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಒಎಸ್ಡಿಎಂಎ) ಮತ್ತು ಮಿಜೋರಾಂನ ʻಲುಂಗ್ಲೈ ಅಗ್ನಿಶಾಮಕ ಕೇಂದ್ರʼ  2023ನೇ ಸಾಲಿನ ಈ  ಪುರಸ್ಕಾರದ ವಿಜೇತರು. ವಿಪತ್ತು ಅಪಾಯ ತಗ್ಗಿಸುವ ಕ್ಷೇತ್ರದಲ್ಲಿ ನವೀನ ವಿಚಾರಗಳು, ಉಪಕ್ರಮಗಳು, ಪರಿಕರಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸುವ ವಸ್ತುಪ್ರದರ್ಶನವನ್ನೂ ಪ್ರಧಾನಿ ಉದ್ಘಾಟಿಸಿದರು. ಗೃಹ ಸಚಿವ ಶ್ರೀ ಅಮಿತ್ ಶಾ, ಸಹಾಯಕ ಸಚಿವ ಶ್ರೀ ನಿತ್ಯಾನಂದ ರೈ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಇತ್ತೀಚೆಗೆ ಟರ್ಕಿ ಮತ್ತು ಸಿರಿಯಾದಲ್ಲಿ ಭಾರತೀಯ ರಕ್ಷಣಾ ತಂಡದ ಕಾರ್ಯಕ್ಕೆ ಜಾಗತಿಕ ಮೆಚ್ಚುಗೆ ವ್ಯಕ್ತವಾಗಿದೆ. ಇದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತೆ ಮಾಡಿದೆ ಎಂದರು.  ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲವನ್ನು ಭಾರತ ವಿಸ್ತರಿಸಿದ ರೀತಿಯು ದೇಶಕ್ಕೆ ಉತ್ತಮ ಸೇವೆ ನೀಡಿದೆ ಎಂದು ಪ್ರಧಾನಿ ಹೇಳಿದರು. ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಉತ್ತೇಜಿಸಲು ಹಾಗೂ ಆರೋಗ್ಯಕರ ಸ್ಪರ್ಧೆಯನ್ನು ಹೆಚ್ಚಿಸಲು ಈ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು. ಪ್ರಶಸ್ತಿ ಪುರಸ್ಕೃತರಿಬ್ಬರನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು.

"ಬದಲಾಗುತ್ತಿರುವ ಹವಾಮಾನದಲ್ಲಿ ಸ್ಥಳೀಯ  ನಿರ್ಮಾಣಗಳಲ್ಲಿ ಸುದೃಢತೆ" ಎಂಬ ಕಾರ್ಯಕ್ರಮದ ವಿಷಯವು ಭಾರತೀಯ ಸಂಪ್ರದಾಯಕ್ಕೆ ಪರಿಚಿತವಾಗಿದೆ. ಬಾವಿಗಳು, ವಾಸ್ತುಶಿಲ್ಪ ಮತ್ತು ಹಳೆಯ ನಗರಗಳಲ್ಲಿ ಈ ಅಂಶವು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಪ್ರಧಾನಿ ಹೇಳಿದರು. ಭಾರತದಲ್ಲಿ ವಿಪತ್ತು ನಿರ್ವಹಣೆಯ ವ್ಯವಸ್ಥೆ, ಪರಿಹಾರಗಳು ಮತ್ತು ಕಾರ್ಯತಂತ್ರವು ಯಾವಾಗಲೂ ಸ್ಥಳೀಯವಾಗಿದೆ. ಕಛ್‌ನ ಭುಂಗಾ ಮನೆಗಳು ಭೂಕಂಪದಿಂದ ದೊಡ್ಡ ಪ್ರಮಾಣದಲ್ಲಿ ಬದುಕುಳಿದಿವೆ ಎಂದು ಅವರು ಉದಾಹರಿಸಿದರು. ಹೊಸ ತಂತ್ರಜ್ಞಾನಗಳಿಗೆ ಅನುಗುಣವಾಗಿ ವಸತಿ ಮತ್ತು ನಗರ ಯೋಜನೆಯ ಸ್ಥಳೀಯ ಮಾದರಿಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. "ಹೊಸ ತಂತ್ರಜ್ಞಾನದೊಂದಿಗೆ ಸ್ಥಳೀಯ ತಂತ್ರಜ್ಞಾನ ಮತ್ತು ವಸ್ತುಗಳನ್ನು ಶ್ರೀಮಂತಗೊಳಿಸುವುದು ಸದ್ಯದ ಅಗತ್ಯವಾಗಿದೆ. ನಾವು ಸ್ಥಳೀಯ ಸುದೃಢತೆಯ ಉದಾಹರಣೆಗಳನ್ನು ಭವಿಷ್ಯದ ತಂತ್ರಜ್ಞಾನದೊಂದಿಗೆ ಸಂಪರ್ಕಿಸಿದಾಗ, ಆಗ ಮಾತ್ರ ನಾವು ವಿಪತ್ತು ಸುದೃಢತೆಯ ದಿಕ್ಕಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ,”  ಎಂದು ಅವರು ಅಭಿಪ್ರಾಯಪಟ್ಟರು.

ಹಿಂದಿನ ಜೀವನಶೈಲಿಯು ತುಂಬಾ ಆರಾಮದಾಯಕವಾಗಿತ್ತು. ಬರ, ಪ್ರವಾಹ ಮತ್ತು ನಿರಂತರ ಮಳೆಯಂತಹ ನೈಸರ್ಗಿಕ ವಿಪತ್ತುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಅನುಭವವು ನಮಗೆ ಕಲಿಸಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಹಿಂದಿನ ಸರಕಾರಗಳು ವಿಪತ್ತು ಪರಿಹಾರವನ್ನು ಕೃಷಿ ಇಲಾಖೆಯ ಜೊತೆ ನಂಟು ಮಾಡಿದ್ದು ಸ್ವಾಭಾವಿಕ ಎಂದು ಅವರು ಗಮನಸೆಳೆದರು. ಭೂಕಂಪಗಳಂತಹ ನೈಸರ್ಗಿಕ ವಿಪತ್ತುಗಳು ಸಂಭವಿಸಿದಾಗ, ಸ್ಥಳೀಯ ಸಂಪನ್ಮೂಲಗಳ ಸಹಾಯದಿಂದ ಸ್ಥಳೀಯ ಮಟ್ಟದಲ್ಲಿ ಅದನ್ನು ನಿಭಾಯಿಸಲಾಗುತ್ತಿತ್ತು ಎಂದು ಅವರು ಸ್ಮರಿಸಿದರು. ಆದಾಗ್ಯೂ, ನಾವು ಇಂದು ವಾಸಿಸುತ್ತಿರುವುದು ಒಂದು ಸಣ್ಣ ಜಗತ್ತಾಗಿದ್ದು, ಇಲ್ಲಿ ಪರಸ್ಪರರ ಅನುಭವಗಳು ಮತ್ತು ಪ್ರಯೋಗಗಳಿಂದ ಕಲಿಯುವುದು ರೂಢಿಯಾಗಿದೆ ಎಂದು ಪ್ರಧಾನಿ ಹೇಳಿದರು. ಮತ್ತೊಂದೆಡೆ, ನೈಸರ್ಗಿಕ ವಿಪತ್ತುಗಳ ಸಂಖ್ಯೆಯೂ ಹೆಚ್ಚಾಗಿದೆ ಎಂದು ಅವರು ಗಮನ ಸೆಳೆದರು. ಹಳ್ಳಿಯಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡುವ ಏಕೈಕ ವೈದ್ಯರಿಗೆ ಹೋಲಿಕೆ ಮಾಡಿದ ಪ್ರಧಾನಮಂತ್ರಿಯವರು, ಇಂದಿನ ದಿನ ಮತ್ತು ಯುಗದಲ್ಲಿ ಪ್ರತಿಯೊಂದು ಕಾಯಿಲೆಗೆ ತಜ್ಞ ವೈದ್ಯರಿದ್ದಾರೆ ಎಂಬ ಅಂಶದ ಬಗ್ಗೆ ಬೆಳಕು ಚೆಲ್ಲಿದರು. ಅಂತೆಯೇ, ನೈಸರ್ಗಿಕ ವಿಪತ್ತುಗಳನ್ನು ಎದುರಿಸಲು ಕ್ರಿಯಾತ್ಮಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಕಳೆದ ಶತಮಾನದ ನೈಸರ್ಗಿಕ ವಿಪತ್ತುಗಳನ್ನು ಅಧ್ಯಯನ ಮಾಡುವ ಮೂಲಕ, ನಿಖರವಾದ ಊಹೆಯನ್ನು ಮಾಡಬಹುದು. ಆದರೆ ಈ ವಿಧಾನಗಳನ್ನು ಸರಿಯಾದ ಸಮಯದಲ್ಲಿ ಪರಿಷ್ಕರಿಸಬೇಕು ಎಂದು ಅವರು ಒತ್ತಿಹೇಳಿದರು. 

"ವಿಪತ್ತು ನಿರ್ವಹಣೆಯನ್ನು ಬಲಪಡಿಸುವಲ್ಲಿ ಗುರುತಿಸುವಿಕೆ ಮತ್ತು ಸುಧಾರಣೆ ಎರಡು ಪ್ರಮುಖ ಅಂಶಗಳಾಗಿವೆ" ಎಂದು ಪ್ರಧಾನಿ ಹೇಳಿದರು. ನೈಸರ್ಗಿಕ ವಿಪತ್ತುಗಳಿಂದ ಉಂಟಾಗುವ ಸಂಭಾವ್ಯ ಅಪಾಯಗಳನ್ನು ಗುರುತಿಸಲು ಮತ್ತು ಭವಿಷ್ಯದಲ್ಲಿ ಅದು ಯಾವಾಗ ಅಪ್ಪಳಿಸುತ್ತದೆ ಎಂಬುದನ್ನು ತಿಳಿಯಲು ಗುರುತಿಸುವಿಕೆಯು ಸಹಾಯ ಮಾಡುತ್ತದೆ. ಆದರೆ ಸುಧಾರಣೆಯೆಂದರೆ, ಅದು ಸಂಭವನೀಯ ನೈಸರ್ಗಿಕ ವಿಪತ್ತಿನ ಅಪಾಯಗಳನ್ನು ಕಡಿಮೆ ಮಾಡುವ ವ್ಯವಸ್ಥೆಯಾಗಿದೆ ಎಂದು ಅವರು ವಿವರಿಸಿದರು. ಕಾಲಮಿತಿಯೊಳಗೆ ವ್ಯವಸ್ಥೆಯನ್ನು ಹೆಚ್ಚು ಸಮರ್ಥಗೊಳಿಸುವ ಮೂಲಕ ಅದನ್ನು ಸುಧಾರಿಸಲು ಅವರು ಸಲಹೆ ನೀಡಿದರು ಜೊತೆಗೆ ಅಲ್ಪಾವಧಿಯ ಬದಲು ದೀರ್ಘಕಾಲೀನ ಚಿಂತನೆಯ ವಿಧಾನವನ್ನು ಅನುಸರಿಸುವಂತೆ ಒತ್ತಿ ಹೇಳಿದರು. ಹಿಂದಿನ ವರ್ಷಗಳಲ್ಲಿ ಪಶ್ಚಿಮ ಬಂಗಾಳ ಮತ್ತು ಒಡಿಶಾಕ್ಕೆ ಅಪ್ಪಳಿಸಿದ ಚಂಡಮಾರುತಗಳಿಂದ ಉಂಟಾದ ನೂರಾರು ಸಾವುನೋವುಗಳನ್ನು ಅವರು ನೆನಪಿಸಿಕೊಂಡರು. ಆದರೆ ಸಮಯ ಮತ್ತು ಕಾರ್ಯತಂತ್ರಗಳಲ್ಲಿನ ಬದಲಾವಣೆಗಳೊಂದಿಗೆ, ಭಾರತವು ಈಗ ಚಂಡಮಾರುತಗಳನ್ನು ಎದುರಿಸಲು ಸಮರ್ಥವಾಗಿದೆ, ಅಲ್ಲಿ ಜೀವ ಮತ್ತು ಆಸ್ತಿಪಾಸ್ತಿ ಹಾನಿಯನ್ನು ಕಡಿಮೆ ಮಾಡಲಾಗಿದೆ. "ನಾವು ನೈಸರ್ಗಿಕ ವಿಪತ್ತುಗಳನ್ನು ತಡೆಯಲು ಸಾಧ್ಯವಿಲ್ಲ ಆದರೆ ಉತ್ತಮ ಕಾರ್ಯತಂತ್ರಗಳು ಮತ್ತು ವ್ಯವಸ್ಥೆಗಳನ್ನು ಜಾರಿಗೆ ತರುವ ಮೂಲಕ ನಾವು ಖಂಡಿತವಾಗಿಯೂ ಅದರ ಪರಿಣಾಮಗಳನ್ನು ಕಡಿಮೆ ಮಾಡಬಹುದು" ಎಂದು ಪ್ರಧಾನಿ ಹೇಳಿದರು.
ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ವಿಪತ್ತು ನಿರ್ವಹಣೆಯ ಕಳಪೆ ಸ್ಥಿತಿಯ ಬಗ್ಗೆ ಪ್ರಧಾನಿ ಮಾತನಾಡಿದರು. ಐದು ದಶಕಗಳ ನಂತರವೂ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಯಾವುದೇ ಕಾನೂನು ಇರಲಿಲ್ಲವೆಂದು ಅವರು ಮಾಹಿತಿ ನೀಡಿದರು. 2001ರಲ್ಲಿ ʻರಾಜ್ಯ ವಿಪತ್ತು ನಿರ್ವಹಣಾ ಕಾಯ್ದೆʼಯನ್ನು ಹೊರತಂದ ಮೊದಲ ರಾಜ್ಯ ಗುಜರಾತ್. ಅಂದಿನ ಕೇಂದ್ರ ಸರಕಾರವು ಈ ಕಾಯ್ದೆಯ ಆಧಾರದ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಜಾರಿಗೆ ತಂದಿತು. ಅದರ ನಂತರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿತು ಎಂದರು.

ಸ್ಥಳೀಯ ಸಂಸ್ಥೆಗಳಲ್ಲಿ ವಿಪತ್ತು ನಿರ್ವಹಣಾ ಆಡಳಿತವನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ, “ನಾವು ಯೋಜನೆಯನ್ನು ಸಾಂಸ್ಥಿಕಗೊಳಿಸಬೇಕು ಮತ್ತು ಸ್ಥಳೀಯ ಯೋಜನೆಯನ್ನು ಪರಿಶೀಲಿಸಬೇಕು,ʼʼ ಎಂದರು. ಸಂಪೂರ್ಣ ವ್ಯವಸ್ಥೆಯ ಕೂಲಂಕಷ ಪರಿಶೀಲನೆಯ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಎರಡು ಹಂತಗಳಲ್ಲಿ ಕೆಲಸ ಮಾಡುವಂತೆ ಕರೆ ನೀಡಿದರು. ಮೊದಲನೆಯದಾಗಿ, ವಿಪತ್ತು ನಿರ್ವಹಣಾ ತಜ್ಞರು ಸಾರ್ವಜನಿಕ ಭಾಗವಹಿಸುವಿಕೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಭೂಕಂಪಗಳು, ಚಂಡಮಾರುತಗಳು, ಬೆಂಕಿ ಮತ್ತು ಇತರ ವಿಪತ್ತುಗಳ ಅಪಾಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ನಿರಂತರ ಪ್ರಕ್ರಿಯೆಯನ್ನು ಅವರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಸರಿಯಾದ ಪ್ರಕ್ರಿಯೆ, ಅಣಕು ಪ್ರದರ್ಶನ ಮತ್ತು ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ ಎಂದರು. "ಸ್ಥಳೀಯ ಭಾಗವಹಿಸುವಿಕೆಯಿಂದ, ಸ್ಥಳೀಯ ನಿರ್ಮಾಣಗಳ ಸುದೃಢತೆ ಮಂತ್ರವನ್ನು ಅನುಸರಿಸುವ ಮೂಲಕ ಮಾತ್ರ ನೀವು ಯಶಸ್ಸನ್ನು ಪಡೆಯುತ್ತೀರಿ" ಎಂದು ಅವರು ಪ್ರತಿಪಾದಿಸಿದರು. ಗ್ರಾಮ ಮತ್ತು ನೆರೆಹೊರೆಯ ಮಟ್ಟದಲ್ಲಿ ತರಬೇತಿ 'ಯುವಕ ಮಂಡಲ್' ಮತ್ತು 'ಸಖಿ ಮಂಡಲ್'ಗಳನ್ನು ಬಳಸುವಂತೆ ಮಧ್ಯಸ್ಥಗಾರರನ್ನು ಕೇಳಿದರು. ʻಆಪದಾ ಮಿತ್ರ್ʼ, ʻಎನ್ಎಸ್ಎಸ್-ಎನ್‌ಸಿಸಿʼ, ನಿವೃತ್ತ ಯೋಧರ ಕಾರ್ಯವಿಧಾನಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ರಕ್ಷಣಾ ಕಾರ್ಯವನ್ನು ಸಮಯೋಚಿತವಾಗಿ ಪ್ರಾರಂಭಿಸುವುದರಿಂದ ಅನೇಕ ಜೀವಗಳನ್ನು ಉಳಿಸಬಹುದು. ಹೀಗಾಗಿ ಇದರ ಮೊದಲ ಪ್ರತಿಕ್ರಿಯೆಗಾಗಿ ಸಮುದಾಯ ಕೇಂದ್ರಗಳಲ್ಲಿ ಉಪಕರಣಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಎರಡನೇ ಹಂತದಲ್ಲಿ, ತಂತ್ರಜ್ಞಾನದ ಬಳಕೆಯ ಮೂಲಕ ನೈಜ ಸಮಯದ ನೋಂದಣಿ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯ ಬಗ್ಗೆ ಪ್ರಧಾನಿ ಕೇಳಿದರು. "ಮನೆಗಳ ವಯಸ್ಸು, ಒಳಚರಂಡಿ, ನಮ್ಮ ವಿದ್ಯುತ್ ಮತ್ತು ನೀರಿನ ಮೂಲಸೌಕರ್ಯದ ಸುದೃಢತೆಯಂತಹ ಅಂಶಗಳ ಬಗ್ಗೆ ನಮ್ಮ ಜ್ಞಾನವು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಲು ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು. ಉಷ್ಣಮಾರುತದ ಬಗ್ಗೆ ತಮ್ಮ ಇತ್ತೀಚೆಗೆ ನಡೆದ ಪರಿಶೀಲನಾ ಸಭೆಯಲ್ಲಿ ಆಸ್ಪತ್ರೆಗಳಲ್ಲಿ ಬೆಂಕಿ ಅವಘಡಗಳ ಕುರಿತು ಚರ್ಚಿಸಿದ್ದರ ಬಗ್ಗೆ ಮತ್ತು ಆಸ್ಪತ್ರೆಯ ಅಗ್ನಿ ಸನ್ನದ್ಧತೆಯ ನಿಯಮಿತ ಪರಿಶೀಲನೆಯಿಂದ ಜೀವಗಳನ್ನು ಹೇಗೆ ಉಳಿಸಬಹುದು ಎಂಬುದರ ಬಗ್ಗೆ ಚರ್ಚಿಸಲಾಯಿತು ಎಂದು ಪ್ರಧಾನಿ ತಿಳಿಸಿದರು.

ಕಳೆದ ಕೆಲವು ವರ್ಷಗಳಲ್ಲಿ ಆಸ್ಪತ್ರೆ, ಕಾರ್ಖಾನೆ, ಹೋಟೆಲ್ ಅಥವಾ ಬಹುಮಹಡಿ ವಸತಿ ಕಟ್ಟಡಗಳಂತಹ ಜನನಿಬಿಡ ನಗರ ಪ್ರದೇಶಗಳಲ್ಲಿ ಬೆಂಕಿಯ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಪ್ರಧಾನಿ ಗಮನ ಸೆಳೆದರು. ವಾಹನದ ಮೂಲಕ ತಲುಪುವುದು ಕಷ್ಟಕರವಾದ ಕೆಲಸವಾಗಿರುವ ಜನನಿಬಿಡ ಪ್ರದೇಶಗಳಲ್ಲಿ ಬಹಳ ವ್ಯವಸ್ಥಿತವಾಗಿ ಕೆಲಸ ಮಾಡಬೇಕಾದ ಸವಾಲುಗಳನ್ನು ಅವರು ಎತ್ತಿ ತೋರಿಸಿದರು ಮತ್ತು ಇದಕ್ಕೆ ಪರಿಹಾರವನ್ನು ಕಂಡುಹಿಡಿಯಲು ಒತ್ತಾಯಿಸಿದರು. ಎತ್ತರದ ಕಟ್ಟಡಗಳಲ್ಲಿ ಬೆಂಕಿಯನ್ನು ನಂದಿಸುವ ಸಲುವಾಗಿ ನಮ್ಮ ಅಗ್ನಿಶಾಮಕ ಸಿಬ್ಬಂದಿಯ ಕೌಶಲ್ಯವನ್ನು ನಿರಂತರವಾಗಿ ಹೆಚ್ಚಿಸಲು ಮತ್ತು ಆಗಷ್ಟೇ ಶುರುವಾದ ಕೈಗಾರಿಕೆಗಳಲ್ಲಿ ಹೊತ್ತಿಕೊಳ್ಳುವ ಬೆಂಕಿ ನಂದಿಸಲು ಸಾಕಷ್ಟು ಸಂಪನ್ಮೂಲಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಂತರ ಪ್ರಧಾನಿ ಸೂಚಿಸಿದರು.

ಸ್ಥಳೀಯ ಕೌಶಲ್ಯ ಮತ್ತು ಸಲಕರಣೆಗಳ ನಿರಂತರ ಆಧುನೀಕರಣದ ಅಗತ್ಯದ ಬಗ್ಗೆ ಪ್ರಧಾನಿ ಗಮನ ಸೆಳೆದರು. ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಅರಣ್ಯ ಇಂಧನವನ್ನು ಜೈವಿಕ ಇಂಧನವಾಗಿ ಪರಿವರ್ತಿಸುವ ಉಪಕರಣಗಳನ್ನು ಒದಗಿಸಿ,  ಆ ಗುಂಪುಗಳ ಆದಾಯವನ್ನು ಹೆಚ್ಚಿಸುವುದರ ಜೊತೆಗೆ ಬೆಂಕಿಯ ಸಂಭವವನ್ನು ಕಡಿಮೆ ಮಾಡುವ ಸಾಧ್ಯತೆ ಬಗ್ಗೆ  ಅನ್ವೇಷಿಸುವಂತೆ ಅವರು ಕರೆ ನೀಡಿದರು. ಅನಿಲ ಸೋರಿಕೆಯ ಸಾಧ್ಯತೆಗಳು ಹೆಚ್ಚಿರುವ ಕೈಗಾರಿಕೆಗಳು ಮತ್ತು ಆಸ್ಪತ್ರೆಗಳಿಗೆ ತಜ್ಞರ ಪಡೆಯನ್ನು ರಚಿಸುವ ಬಗ್ಗೆಯೂ ಅವರು ಮಾತನಾಡಿದರು. ಅಂತೆಯೇ, ಆಂಬ್ಯುಲೆನ್ಸ್ ಜಾಲವನ್ನು ಭವಿಷ್ಯಸನ್ನದ್ಧಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ನಿಟ್ಟಿನಲ್ಲಿ ʻಕೃತಕ ಬುದ್ಧಿಮತ್ತೆʼ (ಎಐ), ʻ5ಜಿʼ ಮತ್ತು ʻಇಂಟರ್‌ನೆಟ್ ಆಫ್ ಥಿಂಗ್ಸ್ʼ(ಐಒಟಿ) ಬಳಕೆಯನ್ನು ಅನ್ವೇಷಿಸುವಂತೆ ಕೇಳಿಕೊಂಡರು. ಡ್ರೋನ್‌ಗಳು, ಎಚ್ಚರಿಕೆಗಾಗಿ ಗ್ಯಾಜೆಟ್‌ಗಳು ಮತ್ತು ಅವಶೇಷಗಳ ಅಡಿಯಲ್ಲಿ ಹುದುಗಿರುವ ಜನರನ್ನು ಪತ್ತೆಹಚ್ಚಲು ಸಹಾಯ ಮಾಡುವ ವೈಯಕ್ತಿಕ ಗ್ಯಾಜೆಟ್‌ಗಳ ಬಳಕೆಯನ್ನು ಪರಿಶೀಲಿಸುವಂತೆ ಅವರು ಮಧ್ಯಸ್ಥಗಾರರನ್ನು ಕೇಳಿದರು. ಹೊಸ ವ್ಯವಸ್ಥೆಗಳು ಮತ್ತು ತಂತ್ರಜ್ಞಾನಗಳನ್ನು ರಚಿಸುತ್ತಿರುವ ಜಾಗತಿಕ ಸಾಮಾಜಿಕ ಸಂಸ್ಥೆಗಳ ಕೆಲಸವನ್ನು ಅಧ್ಯಯನ ಮಾಡಲು ಮತ್ತು ಉತ್ತಮ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಅವರು ತಜ್ಞರಿಗೆ ಸಲಹೆ ನೀಡಿದರು. 

ಪ್ರಧಾನಮಂತ್ರಿಯವರು ತಮ್ಮ ಭಾಷಣದ ಕೊನೆಯಲ್ಲಿ, ಪ್ರಪಂಚದಾದ್ಯಂತ ಸಂಭವಿಸುವ ವಿಪತ್ತುಗಳಿಗೆ ಭಾರತವು ತ್ವರಿತವಾಗಿ ಪ್ರತಿಕ್ರಿಯಿಸುತ್ತದೆ ಮತ್ತು ಸ್ಪಂದಿಸುತ್ತದೆ ಮತ್ತು ಸುದೃಢ ಮೂಲಸೌಕರ್ಯಕ್ಕೆ ಉಪಕ್ರಮವನ್ನು ಕೈಗೊಳ್ಳುತ್ತದೆ ಎಂದು ಒತ್ತಿ ಹೇಳಿದರು. ವಿಶ್ವದ 100ಕ್ಕೂ ಹೆಚ್ಚು ದೇಶಗಳು ಭಾರತದ ನಾಯಕತ್ವದಲ್ಲಿ ರಚಿಸಲಾದ ʻವಿಪತ್ತು ತಾಳಿಕೆಯ ಮೂಲಸೌಕರ್ಯದ ಒಕ್ಕೂಟʼಕ್ಕೆ ಸೇರಿಕೊಂಡಿವೆ ಎಂದು ಅವರು ಮಾಹಿತಿ ನೀಡಿದರು. ಇಂದಿನ ಚರ್ಚೆಗಳು ಸಾಕಷ್ಟು ಸಲಹೆಗಳು ಮತ್ತು ಪರಿಹಾರಗಳಿಗೆ ಕಾರಣವಾಗುತ್ತವೆ ಮತ್ತು ಆ ಮೂಲಕ ಭವಿಷ್ಯಕ್ಕಾಗಿ ಕ್ರಿಯಾತ್ಮಕ ಅಂಶಗಳ ಹೊರಹೊಮ್ಮುವಿಕೆಗೆ ಕಾರಣವಾಗುತ್ತವೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು. "ಸಂಪ್ರದಾಯ ಮತ್ತು ತಂತ್ರಜ್ಞಾನವು ನಮ್ಮ ಶಕ್ತಿಯಾಗಿದೆ. ಈ ಶಕ್ತಿಯೊಂದಿಗೆ, ನಾವು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ವಿಪತ್ತು ತಾಳಿಕೆಗೆ ಸಂಬಂಧಿಸಿದ ಅತ್ಯುತ್ತಮ ಮಾದರಿಯನ್ನು ಸಿದ್ಧಪಡಿಸಬಹುದು" ಎಂದು ಪ್ರಧಾನಿ ಹೇಳಿದರು.

ʻಎನ್‌.ಪಿ.ಡಿ.ಆರ್‌.ಅರ್‌.ʼ ಎಂಬುದು ಸಂವಾದ, ಅನುಭವಗಳು, ದೃಷ್ಟಿಕೋನಗಳು, ಆಲೋಚನೆಗಳು, ಕ್ರಿಯೆ-ಆಧಾರಿತ ಸಂಶೋಧನೆ ಹಾಗೂ ವಿಪತ್ತು ಅಪಾಯ ತಗ್ಗಿಸುವ ಕ್ಷೇತ್ರದಲ್ಲಿನ ಅವಕಾಶಗಳನ್ನು ಅನ್ವೇಷಿಸಲು ಅನುಕೂಲವಾಗುವಂತೆ ಭಾರತ ಸರಕಾರವು ರಚಿಸಿದ ಬಹು-ಮಧ್ಯಸ್ಥಗಾರರ ವೇದಿಕೆಯಾಗಿದೆ.

***

 



(Release ID: 1905937) Visitor Counter : 103