ಪ್ರಧಾನ ಮಂತ್ರಿಯವರ ಕಛೇರಿ

'ಮೂಲಸೌಕರ್ಯ ಮತ್ತು ಹೂಡಿಕೆ' ಕುರಿತು ಬಜೆಟ್ ನಂತರದ ವೆಬಿನಾರ್‌ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ


"ಮೂಲಸೌಕರ್ಯ ಅಭಿವೃದ್ಧಿಯು ದೇಶದ ಆರ್ಥಿಕತೆಯ ಚಾಲಕ ಶಕ್ತಿಯಾಗಿದೆ"

"ಇದು ಪ್ರತಿ ಪಾಲುದಾರರಿಗೆ ಹೊಸ ಜವಾಬ್ದಾರಿಗಳು, ಹೊಸ ಸಾಧ್ಯತೆಗಳು ಮತ್ತು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಸಮಯವಾಗಿದೆ"

"ಭಾರತದಲ್ಲಿ ಹೆದ್ದಾರಿಗಳ ಪ್ರಾಮುಖ್ಯತೆಯನ್ನು ಶತಮಾನಗಳಿಂದ ಗುರುತಿಸಲಾಗಿದೆ"

"ಬಡತನವೇ ಪುಣ್ಯ" ಎಂಬ ಮನಸ್ಥಿತಿಯನ್ನು ತೊಡೆದುಹಾಕುವಲ್ಲಿ ನಾವು ಯಶಸ್ವಿಯಾಗಿದ್ದೇವೆ"

"ಈಗ ನಾವು ನಮ್ಮ ವೇಗವನ್ನು ಹೆಚ್ಚಿಸಬೇಕು ಮತ್ತು ಟಾಪ್ ಗೇರ್‌ ನಲ್ಲಿ ಚಲಿಸಬೇಕು"

"ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಭಾರತದ ಮೂಲಸೌಕರ್ಯ ಮತ್ತು ಅದರ ಬಹುಮಾದರಿ ಲಾಜಿಸ್ಟಿಕ್ಸ್‌ನ ಚಿತ್ರಣವನ್ನು ಬದಲಾಯಿಸಲಿದೆ"

"ಪಿಎಂ ಗತಿ ಶಕ್ತಿ ಮಾಸ್ಟರ್ ಪ್ಲಾನ್ ಒಂದು ನಿರ್ಣಾಯಕ ಸಾಧನವಾಗಿದ್ದು ಅದು ಆರ್ಥಿಕ ಮತ್ತು ಮೂಲಸೌಕರ್ಯ ಯೋಜನೆಯನ್ನು ಅಭಿವೃದ್ಧಿಯೊಂದಿಗೆ ಸಂಯೋಜಿಸುತ್ತದೆ"

"ಗುಣಮಟ್ಟ ಮತ್ತು ಬಹುಮಾದರಿ ಮೂಲಸೌಕರ್ಯದೊಂದಿಗೆ, ನಮ್ಮ ಸರಕು ಸಾಗಣೆ ವೆಚ್ಚವು ಮುಂಬರುವ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಲಿದೆ"

"ಭೌತಿಕ ಮೂಲಸೌಕರ್ಯಗಳ ಬಲದ ಜೊತೆಗೆ, ದೇಶದ ಸಾಮಾಜಿಕ ಮೂಲಸೌಕರ್ಯವು ಶಕ್ತಿಯುತವಾಗಿರುವುದು ಸಮಾನ ಅವಶ್ಯಕತೆಯಾಗಿದೆ"

"ನೀವು ಕೇವಲ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿಲ್ಲ, ಭಾರತದ ಬೆ

Posted On: 04 MAR 2023 11:10AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 'ಮೂಲಸೌಕರ್ಯ ಮತ್ತು ಹೂಡಿಕೆ: ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ನೊಂದಿಗೆ ಲಾಜಿಸ್ಟಿಕ್ ದಕ್ಷತೆಯನ್ನು ಸುಧಾರಿಸುವುದು' ಎಂಬ ವಿಷಯ ಕುರಿತು ಬಜೆಟ್ ನಂತರದ ವೆಬಿನಾರ್ ಅನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರ ಬಜೆಟ್ 2023 ರಲ್ಲಿ ಘೋಷಿಸಲಾದ ಉಪಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆಲೋಚನೆಗಳು ಮತ್ತು ಸಲಹೆಗಳನ್ನು ಪಡೆಯಲು ಸರ್ಕಾರವು ಆಯೋಜಿಸಿರುವ ಬಜೆಟ್ ನಂತರದ 12 ವೆಬಿನಾರ್‌ಗಳ ಸರಣಿಯಲ್ಲಿ ಇದು ಎಂಟನೆಯದು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದಿನ ವೆಬಿನಾರ್‌ನಲ್ಲಿ 700 ಕ್ಕೂ ಹೆಚ್ಚು ಸಿಇಒಗಳು ಮತ್ತು ವ್ಯವಸ್ಥಾಪಕ ನಿರ್ದೇಶಕರ ಜೊತೆಗೆ ನೂರಾರು ಪಾಲುದಾರರು ಭಾಗವಹಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಎಲ್ಲಾ ವಲಯದ ತಜ್ಞರು ಮತ್ತು ವಿವಿಧ ಪಾಲುದಾರರು ಈ ವೆಬಿನಾರ್ ಅನ್ನು ಯಶಸ್ವಿ ಮತ್ತು ಪರಿಣಾಮಕಾರಿಯಾಗಿ ಮಾಡಲಿದ್ದಾರೆ ಎಂದು ಪ್ರಧಾನಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.

ಈ ವರ್ಷದ ಬಜೆಟ್ ಮೂಲಸೌಕರ್ಯಕ್ಕೆ ಹೊಸ ಶಕ್ತಿ ನೀಡಲಿದೆ ಎಂದು ಪ್ರಧಾನಿ ಹೇಳಿದರು. ತಜ್ಞರು ಮತ್ತು ಪ್ರಮುಖ ಮಾಧ್ಯಮ ಸಂಸ್ಥೆಗಳು ಬಜೆಟ್ ಮತ್ತು ಅದರ ಕಾರ್ಯತಂತ್ರದ ನಿರ್ಧಾರಗಳನ್ನು ಪ್ರಶಂಸಿಸಿರುವ ಬಗ್ಗೆ ಪ್ರಧಾನಿ ಗಮನಸೆಳೆದರು. 2013-14ಕ್ಕೆ ಹೋಲಿಸಿದರೆ ಭಾರತದ ಬಂಡವಾಳ ವೆಚ್ಚ 5 ಪಟ್ಟು ಹೆಚ್ಚಾಗಿದೆ ಮತ್ತು ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ ಅಡಿಯಲ್ಲಿ 110 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಗುರಿಯೊಂದಿಗೆ ಸರ್ಕಾರ ಸಾಗುತ್ತಿದೆ ಎಂದು ಅವರು ಹೇಳಿದರು. ಇದು ಪ್ರತಿ ಪಾಲುದಾರರಿಗೆ ಹೊಸ ಜವಾಬ್ದಾರಿಗಳು, ಹೊಸ ಸಾಧ್ಯತೆಗಳು ಮತ್ತು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ  ಸಮಯವಾಗಿದೆ  ಎಂದು ಪ್ರಧಾನಿ ಒತ್ತಿ ಹೇಳಿದರು.

ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮಾಡುವ ಅಭಿವೃದ್ಧಿಯ ಜೊತೆಗೆ ಯಾವುದೇ ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ಮೂಲಸೌಕರ್ಯವು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಮೂಲಸೌಕರ್ಯಕ್ಕೆ ಸಂಬಂಧಿಸಿದ ಇತಿಹಾಸದ ಜ್ಞಾನ ಇರುವವರಿಗೆ ಈ ಸತ್ಯವನ್ನು ಚೆನ್ನಾಗಿ ತಿಳಿದಿದೆ ಎಂದು ಅವರು ಒತ್ತಿ ಹೇಳಿದರು. ಪ್ರಧಾನಿಯವರು ಚಂದ್ರಗುಪ್ತ ಮೌರ್ಯ ನಿರ್ಮಿಸಿದ ಉತ್ತರಾಪಥ ಬಗ್ಗೆ ಉಲ್ಲೇಖಿಸಿದರು, ಇದನ್ನು ಅಶೋಕನು ಮುಂದುವರೆಸಿದನು ಮತ್ತು ನಂತರ ಶೇರ್ ಷಾ ಸೂರಿ ಅದನ್ನು ಮೇಲ್ದರ್ಜೆಗೇರಿಸಿದನು. ಇದನ್ನು ಜಿಟಿ ರಸ್ತೆಯನ್ನಾಗಿಸಿದ್ದು ಬ್ರಿಟಿಷರು ಎಂದು ತಿಳಿಸಿದರು. ಭಾರತದಲ್ಲಿ ಹೆದ್ದಾರಿಗಳ ಪ್ರಾಮುಖ್ಯತೆಯನ್ನು ಶತಮಾನಗಳಿಂದ ಗುರುತಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ನದಿಯ ತೀರಗಳು ಮತ್ತು ಜಲಮಾರ್ಗಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಬನಾರಸ್‌ನ ಘಾಟ್‌ಗಳನ್ನು ಜಲಮಾರ್ಗಗಳ ಮೂಲಕ ನೇರವಾಗಿ ಕೋಲ್ಕತ್ತಾಗೆ ಸಂಪರ್ಕಿಸುವ ಉದಾಹರಣೆಯನ್ನು ನೀಡಿದರು. ಇನ್ನೂ ಕಾರ್ಯನಿರ್ವಹಿಸುತ್ತಿರುವ ತಮಿಳುನಾಡಿನ 2 ಸಾವಿರ ವರ್ಷಗಳಷ್ಟು ಹಳೆಯದಾದ ಕಲ್ಲಣೈ ಅಣೆಕಟ್ಟಿನ ಉದಾಹರಣೆಯನ್ನೂ ಪ್ರಧಾನಿ ನೀಡಿದರು.

ಹಿಂದಿನ ಸರ್ಕಾರಗಳಲ್ಲಿ ದೇಶದ ಮೂಲಸೌಕರ್ಯ ಅಭಿವೃದ್ಧಿ ಹೂಡಿಕೆಗೆ ಬಂದ ಅಡೆತಡೆಗಳ ಬಗ್ಗೆ ಗಮನಸೆಳೆದ ಪ್ರಧಾನಿ, ಬಡತನವೇ ಪುಣ್ಯ ಎಂಬ ಪ್ರಚಲಿತ ಮನಸ್ಥಿತಿಯನ್ನು ಎತ್ತಿ ತೋರಿಸಿದರು. ಈ ಮನಸ್ಥಿತಿಯನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಆಧುನಿಕ ಮೂಲಸೌಕರ್ಯದಲ್ಲಿ ದಾಖಲೆಯ ಹೂಡಿಕೆ ಮಾಡುವಲ್ಲಿಯೂ ಪ್ರಸ್ತುತ ಸರ್ಕಾರ ಯಶಸ್ವಿಯಾಗಿದೆ ಎಂದು ಅವರು ಒತ್ತಿ ಹೇಳಿದರು.

ಈ ಪರಿಸ್ಥಿತಿಯಲ್ಲಿನ ಸುಧಾರಣೆಯನ್ನು ವಿವರಿಸಿದ ಪ್ರಧಾನಿ, ರಾಷ್ಟ್ರೀಯ ಹೆದ್ದಾರಿಗಳ ಸರಾಸರಿ ನಿರ್ಮಾಣವು 2014 ಕ್ಕಿಂತ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅಂದಾಜು ದ್ವಿಗುಣಗೊಂಡಿದೆ ಎಂದು ಹೇಳಿದರು. ಅದೇ ರೀತಿ, 2014 ಕ್ಕೂ ಮೊದಲು ವರ್ಷಕ್ಕೆ ಕೇವಲ 600 ಕಿಲೋಮೀಟರ್ ರೈಲು ಮಾರ್ಗವನ್ನು ಮಾತ್ರ ವಿದ್ಯುದ್ದೀಕರಿಸಲಾಯಿತು, ಅದು ಈಗ 4000 ಕಿ.ಮೀ. ತಲುಪುತ್ತಿದೆ. ವಿಮಾನ ನಿಲ್ದಾಣಗಳ ಸಂಖ್ಯೆ ಮತ್ತು ಬಂದರು ಸಾಮರ್ಥ್ಯವು ದುಪ್ಪಟ್ಟಾಗಿದೆ ಎಂದು ಅವರು ಹೇಳಿದರು.

ಮೂಲಸೌಕರ್ಯ ಅಭಿವೃದ್ಧಿಯು ದೇಶದ ಆರ್ಥಿಕತೆಯ ಚಾಲಕ ಶಕ್ತಿಯಾಗಿದೆ, ಇದೇ ಮಾರ್ಗವನ್ನು ಅನುಸರಿಸುವ ಮೂಲಕ ಭಾರತವು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ಸಾಧಿಸುತ್ತದೆ ಎಂದು ಅವರು ಹೇಳಿದರು. ಈಗ ನಾವು ನಮ್ಮ ವೇಗವನ್ನು ಹೆಚ್ಚಿಸಬೇಕು ಮತ್ತು ಟಾಪ್ ಗೇರ್‌ ನಲ್ಲಿ ಚಲಿಸಬೇಕು ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಗತಿ ಶಕ್ತಿ ಮಾಸ್ಟರ್ ಪ್ಲಾನ್ ಆರ್ಥಿಕ ಮತ್ತು ಮೂಲಸೌಕರ್ಯ ಯೋಜನೆಯನ್ನು ಅಭಿವೃದ್ಧಿಯೊಂದಿಗೆ ಸಂಯೋಜಿಸುವ ನಿರ್ಣಾಯಕ ಸಾಧನವಾಗಿದೆ, ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಭಾರತದ ಮೂಲಸೌಕರ್ಯ ಮತ್ತು ಅದರ ಬಹುಮಾದರಿ ಸರಕು ಸಾಗಣೆಯ ಚಿತ್ರಣವನ್ನು ಬದಲಾಯಿಸಲಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಗತಿ ಶಕ್ತಿ ಮಾಸ್ಟರ್ ಪ್ಲಾನ್‌ನ ಫಲಿತಾಂಶಗಳು ಗೋಚರಿಸುತ್ತಿವೆ ಎಂದು ಪ್ರಧಾನಿ ಹೇಳಿದರು. ಸರಕು ಸಾಗಣೆ ದಕ್ಷತೆಯ ಮೇಲೆ ಪರಿಣಾಮ ಬೀರುವ ಅಂತರಗಳನ್ನು ನಾವು ಗುರುತಿಸಿದ್ದೇವೆ. ಅದಕ್ಕಾಗಿಯೇ ಈ ವರ್ಷದ ಬಜೆಟ್‌ನಲ್ಲಿ 100 ನಿರ್ಣಾಯಕ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ ಮತ್ತು 75,000 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಗುಣಮಟ್ಟ ಮತ್ತು ಬಹುಮಾದರಿ ಮೂಲಸೌಕರ್ಯದೊಂದಿಗೆ, ನಮ್ಮ ಸರಕು ಸಾಗಣೆ ವೆಚ್ಚವು ಮುಂಬರುವ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಲಿದೆ. ಇದು ಭಾರತದಲ್ಲಿ ತಯಾರಿಸಿದ ಸರಕುಗಳ ಮೇಲೆ, ನಮ್ಮ ಉತ್ಪನ್ನಗಳ ಸಾಮರ್ಥ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಲಾಜಿಸ್ಟಿಕ್ಸ್ ವಲಯದ ಜೊತೆಗೆ, ಸುಗಮ ಜೀವನ ಮತ್ತು ಸುಲಭ ವ್ಯವಹಾರ ಮಾಡುವಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ ಎಂದ ಪ್ರಧಾನಿಯವರು, ಈ ವಲಯದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಆಹ್ವಾನಿಸಿದರು.

ರಾಜ್ಯಗಳ ಪಾತ್ರವನ್ನು ವಿವರಿಸಿದ ಪ್ರಧಾನಿ, 50 ವರ್ಷಗಳವರೆಗೆ ಬಡ್ಡಿರಹಿತ ಸಾಲಗಳನ್ನು ಒಂದು ವರ್ಷ ವಿಸ್ತರಿಸಲಾಗಿದೆ ಮತ್ತು ಇದಕ್ಕಾಗಿ ಬಜೆಟ್ ವೆಚ್ಚವನ್ನು ಶೇಕಡಾ 30 ರಷ್ಟು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಮೂಲಸೌಕರ್ಯ ಅಭಿವೃದ್ಧಿಗೆ ವಿವಿಧ ಸರಕುಗಳು ಬೇಕಾಗಿರುವುದರಿಂದ ತಮ್ಮ ವಲಯಗಳ ಅಗತ್ಯತೆಗಳ ಸುಧಾರಣೆಗೆ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವ ಮಾರ್ಗಗಳನ್ನು ಕಂಡುಕೊಳ್ಳಲು ಭಾಗವಹಿಸಿದವರಿಗೆ ಪ್ರಧಾನಮಂತ್ರಿ ಕರೆ ನೀಡಿದರು. ನಮಗೆ ಸಮಗ್ರ ವಿಧಾನದ ಅಗತ್ಯವಿದೆ, ಇದರಿಂದ ಭವಿಷ್ಯದ ಮಾರ್ಗಸೂಚಿಯು ಸ್ಪಷ್ಟವಾಗಿರುತ್ತದೆ. ಪ್ರಧಾನಮಂತ್ರಿ ಗತಿ-ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಇದರಲ್ಲಿ ದೊಡ್ಡ ಪಾತ್ರವನ್ನು ಹೊಂದಿದೆ ಎಂದರು. ವಲಯದಲ್ಲಿ ಮರುಬಳಕೆ ಆರ್ಥಿಕತೆಯ ಪರಿಕಲ್ಪನೆಯನ್ನು ಸಂಯೋಜಿಸುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು.

ಕಚ್‌ನಲ್ಲಿ ಸಂಭವಿಸಿದ ಭೂಕಂಪದ ನಂತರದ ತಮ್ಮ ಅನುಭವವನ್ನು ಪ್ರಧಾನಿ ನೆನಪಿಸಿಕೊಂಡರು ಮತ್ತು ರಕ್ಷಣಾ ಕಾರ್ಯದ ನಂತರ ಕಚ್ ಅನ್ನು ಅಭಿವೃದ್ಧಿಪಡಿಸಲು ಸಂಪೂರ್ಣವಾಗಿ ಹೊಸ ವಿಧಾನವನ್ನು ಹೇಗೆ ಅಳವಡಿಸಿಕೊಳ್ಳಲಾಯಿತು ಎಂಬುದನ್ನು ವಿವರಿಸಿದರು. ಈ ಪ್ರದೇಶದ ಮೂಲಸೌಕರ್ಯ ನೇತೃತ್ವದ ಅಭಿವೃದ್ಧಿಯು, ರಾಜಕೀಯವಾಗಿ ಅನುಕೂಲಕರವಾದ ತ್ವರಿತ ಪರಿಹಾರಗಳ ಬದಲಿಗೆ, ಆರ್ಥಿಕ ಚಟುವಟಿಕೆಯ ರೋಮಾಂಚಕ ಕೇಂದ್ರವನ್ನಾಗಿ ಮಾರ್ಪಡಿಸಿತು  ಎಂದು ಅವರು ಹೇಳಿದರು.

ದೇಶದ ಸಾಮಾಜಿಕ ಮೂಲಸೌಕರ್ಯಗಳ ಬಲವರ್ಧನೆಗೆ ಭಾರತದ ಭೌತಿಕ ಮೂಲಸೌಕರ್ಯದ ದೃಢತೆಯೂ ಅಷ್ಟೇ ಮುಖ್ಯವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಬಲವಾದ ಸಾಮಾಜಿಕ ಮೂಲಸೌಕರ್ಯವು ಹೆಚ್ಚು ಪ್ರತಿಭಾವಂತ ಮತ್ತು ಕೌಶಲ್ಯದ ಯುವಕರು ದೇಶಕ್ಕೆ ಸೇವೆ ಸಲ್ಲಿಸಲು ಕಾರಣವಾಗುತ್ತದೆ ಎಂದು ಅವರು ಹೇಳಿದರು. ಈ ಗುರಿಯನ್ನು ಸಾಧಿಸಲು ಕೌಶಲ್ಯ ಅಭಿವೃದ್ಧಿ, ಯೋಜನಾ ನಿರ್ವಹಣೆ, ಆರ್ಥಿಕ ಕೌಶಲ್ಯ ಮತ್ತು ಉದ್ಯಮಶೀಲತೆಯ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ವಿವಿಧ ವಲಯಗಳ ಸಣ್ಣ ಮತ್ತು ಬೃಹತ್ ಕೈಗಾರಿಕೆಗಳಿಗೆ ಸಹಾಯ ಮಾಡುವ ಜೊತೆಗೆ ದೇಶದ ಮಾನವ ಸಂಪನ್ಮೂಲಕ್ಕೆ ಪ್ರಯೋಜನವನ್ನು ನೀಡುವ ಕೌಶಲ್ಯ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಅವರು ಪ್ರಸ್ತಾಪಿಸಿದರು. ಸರ್ಕಾರಗಳಲ್ಲಿನ ವಿವಿಧ ಸಚಿವಾಲಯಗಳು ಈ ದಿಕ್ಕಿನಲ್ಲಿ ತ್ವರಿತ ಗತಿಯಲ್ಲಿ ಕೆಲಸ ಮಾಡಬೇಕೆಂದು ಅವರು ಕರೆ ನೀಡಿದರು.

ಈ ವೆಬಿನಾರ್‌ನಲ್ಲಿ ಪ್ರತಿಯೊಬ್ಬ ಪಾಲುದಾರರ ಸಲಹೆಗಳ ಮಹತ್ವವನ್ನು ತಿಳಿಸಿದ ಪ್ರಧಾನಿಯವರು, ಅವರು ಕೇವಲ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿಲ್ಲ, ಭಾರತದ ಬೆಳವಣಿಗೆಯ ಎಂಜಿನ್‌ಗೆ ವೇಗವನ್ನು ಒದಗಿಸುತ್ತಿದ್ದಾರೆ ಎಂದು ವಿವರಿಸಿದರು. ಮೂಲಸೌಕರ್ಯ ಅಭಿವೃದ್ಧಿಯು ಇನ್ನು ಮುಂದೆ ರೈಲು, ರಸ್ತೆ, ಬಂದರು ಮತ್ತು ವಿಮಾನ ನಿಲ್ದಾಣಗಳಿಗೆ ಸೀಮಿತವಾಗಿರುವುದಿಲ್ಲ, ಈ ವರ್ಷದ ಬಜೆಟ್‌ನ ಭಾಗವಾಗಿ ರೈತರ ಉತ್ಪನ್ನವನ್ನು ಹಳ್ಳಿಗಳಲ್ಲಿ ಸಂಗ್ರಹಿಸಲು ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದರು. ನಗರಗಳು ಮತ್ತು ಹಳ್ಳಿಗಳಲ್ಲಿ ಕ್ಷೇಮ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ, ಹೊಸ ರೈಲು ನಿಲ್ದಾಣಗಳು ಮತ್ತು ಪ್ರತಿ ಕುಟುಂಬಕ್ಕೂ ಪಕ್ಕಾ ಮನೆಗಳನ್ನು ಒದಗಿಸುವ ಉದಾಹರಣೆಗಳನ್ನು ಅವರು ನೀಡಿದರು.

ಎಲ್ಲಾ ಪಾಲುದಾರರ ಅಭಿಪ್ರಾಯಗಳು, ಸಲಹೆಗಳು ಮತ್ತು ಅನುಭವಗಳು ಈ ವರ್ಷದ ಬಜೆಟ್‌ನ ತ್ವರಿತ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಸಹಾಯ ಮಾಡುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

***

 

 

 



(Release ID: 1904209) Visitor Counter : 177