ರಕ್ಷಣಾ ಸಚಿವಾಲಯ

2023-24 ನೇ ಆರ್ಥಿಕ ವರ್ಷದಲ್ಲಿ ರಕ್ಷಣಾ ಬಂಡವಾಳ ಖರೀದಿ ಬಜೆಟ್‌ನ ದಾಖಲೆಯ ಶೇ.75 ರಷ್ಟು ದೇಶೀಯ ಉದ್ಯಮಕ್ಕೆ ಮೀಸಲಿಡಲಾಗಿದೆ: 14 ನೇ ಏರೋ ಇಂಡಿಯಾದಲ್ಲಿ ರಕ್ಷಣಾ ಸಚಿವರ ಘೋಷಣೆ


ಬಂಧನ್ ಸಮಾರಂಭವು ಸುಮಾರು 80,000 ಕೋಟಿ ರೂಪಾಯಿ ಮೌಲ್ಯದ 266 ಪಾಲುದಾರಿಕೆಗಳಿಗೆ ಸಾಕ್ಷಿಯಾಗಿದೆ

ಏರೋ ಇಂಡಿಯಾವು ‘ನವ ಭಾರತʼದ ‘ಹೊಸ ರಕ್ಷಣಾ ವಲಯʼವನ್ನು ಜಗತ್ತಿಗೆ ಪ್ರದರ್ಶಿಸಿದೆ: ಶ್ರೀ ರಾಜನಾಥ್ ಸಿಂಗ್

Posted On: 15 FEB 2023 1:56PM by PIB Bengaluru

ರಕ್ಷಣಾ ಬಂಡವಾಳ ಖರೀದಿ ಬಜೆಟ್‌ನಲ್ಲಿ ದೇಶೀಯ ಉದ್ಯಮಕ್ಕೆ 2022-23ರಲ್ಲಿ ಮೀಸಲಿಟ್ಟಿದ್ದ ಶೇಕಡಾ 68 ರಿಂದ 2023-24 ನೇ ಹಣಕಾಸು ವರ್ಷದಲ್ಲಿ ದಾಖಲೆಯ ಶೇ.75 ರಷ್ಟನ್ನು (ಅಂದಾಜು ಒಂದು ಲಕ್ಷ ಕೋಟಿ ರೂ.) ಮೀಸಲಿಡಲಾಗಿದೆ. ಫೆಬ್ರವರಿ 15, 2023 ರಂದು ಬೆಂಗಳೂರಿನಲ್ಲಿ ನಡೆದ 14 ನೇ ಏರೋ ಇಂಡಿಯಾದ ಬಂಧನ್ ಸಮಾರಂಭದಲ್ಲಿ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು ಇದನ್ನು ಘೋಷಿಸಿದರು. 2023-24 ರಲ್ಲಿ ರಕ್ಷಣಾ ಸಚಿವಾಲಯಕ್ಕೆ  ಒಟ್ಟು 5.94 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಅನ್ನು ನಿಗದಿಪಡಿಸಲಾಗಿದೆ. ಇದು ಒಟ್ಟು ಬಜೆಟ್‌ ನ (45.03 ಲಕ್ಷ ಕೋಟಿ ರೂ.) ಶೇ.13.18 ಆಗಿದೆ. ಆಧುನೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಬಂಡವಾಳ ವೆಚ್ಚವನ್ನು 1.63 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ.

ರಕ್ಷಣಾ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡಲು ‘ಅಮೃತ ಕಾಲʼದ ಆರಂಭದಲ್ಲಿ ಸರ್ಕಾರ ಕೈಗೊಂಡ ಅಭೂತಪೂರ್ವ ಕ್ರಮ ಇದಾಗಿದೆ ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದರು. “ನೀವು ಒಂದು ಹೆಜ್ಜೆ ಇಟ್ಟರೆ, ಸರ್ಕಾರವು ಹತ್ತು ಹೆಜ್ಜೆ ಮುಂದಿಡುವ ಭರವಸೆ ನೀಡುತ್ತದೆ. ಅಭಿವೃದ್ಧಿ ಪಥದಲ್ಲಿ ಸಾಗಲು ಭೂಮಿಯ ಬಗ್ಗೆ ನೀವು ಮಾತನಾಡಿದ್ದೀರಿ. ನಾವು ನಿಮಗೆ ಸಂಪೂರ್ಣ ಆಕಾಶವನ್ನು ಒದಗಿಸುತ್ತಿದ್ದೇವೆ. ಬಂಡವಾಳ ಖರೀದಿಯ ಬಜೆಟ್‌ನ ಮುಕ್ಕಾಲು ಭಾಗವನ್ನು ಸ್ಥಳೀಯ ಉದ್ಯಮಕ್ಕೆ ಮೀಸಲಿಡುವುದು ಆ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ”ಎಂದು ಅವರು ಹೇಳಿದರು.

ಈ ಕ್ರಮದೊಂದಿಗೆ ಭಾರತೀಯ ಉದ್ಯಮವು ಹೆಚ್ಚು ಉತ್ಸಾಹದಿಂದ ಮುಂದೆ ಬರಲಿದೆ ಮತ್ತು ರಕ್ಷಣಾ ಕ್ಷೇತ್ರವನ್ನು ಹೆಚ್ಚು ಶಕ್ತಿಯುತ ಮತ್ತು ಸಮೃದ್ಧವಾಗಿಸಲು ಕೊಡುಗೆ ನೀಡುತ್ತದೆ ಎಂದು ರಕ್ಷಣಾ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಬಲವಾದ ಮತ್ತು ಸ್ವಾವಲಂಬಿ ರಕ್ಷಣಾ ಉದ್ಯಮವು ದೇಶದ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವುದಲ್ಲದೆ, ಆರ್ಥಿಕತೆಯನ್ನು ಬಲಪಡಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಕಳೆದ ಕೆಲವು ವರ್ಷಗಳಲ್ಲಿ, ದೇಶೀಯ ಉದ್ಯಮ-ಸ್ನೇಹಿ ವಾತಾವರಣವನ್ನು ದೇಶದಲ್ಲಿ ಸೃಷ್ಟಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್' ಎಂಬ ದೃಷ್ಟಿಕೋನಕ್ಕೆ ಅನುಗುಣವಾಗಿ. ಸ್ಥಳೀಯ ಕಂಪನಿಗಳು ಬೆಳೆಯಲು ಮತ್ತು ಸ್ನೇಹಪರ ದೇಶಗಳ ಭದ್ರತಾ ಅಗತ್ಯಗಳನ್ನು ಪೂರೈಸುವ ಮೂಲಕ ರಾಷ್ಟ್ರದ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸುವ ಅವಕಾಶವನ್ನು ಇದು ಒದಗಿಸುತ್ತದೆ ಎಂದು ಅವರು ಹೇಳಿದರು.

ಬಂಧನ್ ಸಮಾರಂಭವು 201 ತಿಳುವಳಿಕೆ ಒಪ್ಪಂದಗಳು, 53 ಪ್ರಮುಖ ಘೋಷಣೆಗಳು, ಒಂಬತ್ತು ಉತ್ಪನ್ನ ಬಿಡುಗಡೆಗಳು ಮತ್ತು ಸುಮಾರು 80,000 ಕೋಟಿ ರೂಪಾಯಿ ಮೌಲ್ಯದ ತಂತ್ರಜ್ಞಾನದ ಮೂರು ವರ್ಗಾವಣೆಗಳು ಸೇರಿದಂತೆ 266 ಪಾಲುದಾರಿಕೆಗಳಿಗೆ ಸಾಕ್ಷಿಯಾಯಿತು.

ಪ್ರಮುಖ ಒಪ್ಪಂದಗಳು

  • ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ ಮತ್ತು ಹೆಲಿಕಾಪ್ಟರ್ ಎಂಜಿನ್‌ಗಳ ಜೀವಿತಾವಧಿ ಬೆಂಬಲಕ್ಕಾಗಿ ಜಂಟಿ ಉದ್ಯಮದ ರಚನೆಯಲ್ಲಿ ಕೆಲಸದ ಹಂಚಿಕೆಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮತ್ತು ಫ್ರಾನ್ಸ್‌ ನ ಸಫ್ರಾನ್ ಹೆಲಿಕಾಪ್ಟರ್ ಇಂಜಿನ್‌ ಸಂಸ್ಥೆಗಳ ನಡುವೆ ತಿಳುವಳಿಕೆ ಒಪ್ಪಂದ.
  • ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ನಡುವೆ ಐಡಬ್ಲ್ಯೂಬಿಸಿ ಮತ್ತು ಇತರ ಎಲ್‌ಆರ್‌ಯುಗಳು ಸುಧಾರಿತ ಮಧ್ಯಮ ಯುದ್ಧ ವಿಮಾನಗಳಿಗಾಗಿ (ಎಎಂಸಿಎ) ತಿಳುವಳಿಕೆ ಒಪ್ಪಂದ.
  • ಗಾಳಿ/ಸುಳಿಗಾಳಿ ಪರಿಸ್ಥಿತಿ, ಮಳೆ/ಹಿಮ ಇತ್ಯಾದಿ ಪರಿಸ್ಥಿತಿಗಳಲ್ಲಿ ಕಾರ್ಯಾಚರಣೆಯ ಸಾಮರ್ಥ್ಯದೊಂದಿಗೆ ಭಾರತೀಯ ಸೇನೆಗಾಗಿ ಗಡಿ ಪ್ರದೇಶಗಳಲ್ಲಿ ನಿಯೋಜಿಸಲಾಗುವ ಫಾರ್ವರ್ಡ್ ಲಾಜಿಸ್ಟಿಕ್ ಡ್ರೋನ್‌ಗಳಿಗಾಗಿ ಬಿ‌ ಎಸ್‌ ಎಸ್ ಮೆಟೀರಿಯಲ್ ಲಿಮಿಟೆಡ್ ಮತ್ತು ಪೆಗಾಸಸ್ ಇಂಜಿನಿಯರಿಂಗ್, ADUSEA ಇಂಕ್. ಡಿವಿಷನ್ (ಯು ಎಸ್‌ ಎ) ನಡುವೆ  ಸಹಕಾರ ಒಫ್ಪಂದ
  • ಭಾರತದಲ್ಲಿ ಖಾಸಗಿ ಕಂಪನಿಯಿಂದ ಮೊದಲನೇ ಪ್ರಯಾಣಿಕ ವಿಮಾನವನ್ನು (L 410 UVP-E20 ಆವೃತ್ತಿ) ತಯಾರಿಸಲು ಮತ್ತು ಜೋಡಿಸಲು ಗೋಪಾಲನ್ ಏರೋಸ್ಪೇಸ್ ಇಂಡಿಯಾ ಪ್ರೈವೇಟ್ ಮತ್ತು ಲಿಮಿಟೆಡ್ ಮತ್ತು ಜೆಕ್ ರಿಪಬ್ಲಿಕ್ ನ ಓಮ್ನಿಪೋಲ್ ನಡುವೆ ಯಿಳುವಳಿಕೆ ಒಪ್ಪಂದ
  • ಸಾಗರ್ ಡಿಫೆನ್ಸ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ (SDEPL) ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (IAI) ಸಹಯೋಗದೊಂದಿಗೆ ಭಾರತೀಯ ನೌಕಾಪಡೆಗಾಗಿ IDEX ಚಾಲೆಂಜ್ "ಅಟಾನಮಸ್‌ ವೆಪನೈಸ್ಡ್‌ ಬೋಟ್‌ ಸ್ವಾರ್ಮ್‌" ಗಾಗಿ ತಿಳುವಳಿಕೆ ಒಪ್ಪಂದ.
  • ಭಾರತದಲ್ಲಿ 122mm GRAD BMER ಮತ್ತು NONER ರಾಕೆಟ್‌ಗಳ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಮತ್ತು ಅವಶ್ಯಕತೆಗಳನ್ನು ಪೂರೈಸಲು (ಟಿಒಟಿ ಸೇರಿದಂತೆ) ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಮತ್ತು ಬಲ್ಗೇರಿಯಾದ ಬುಲ್ಟ್‌ ಎಕ್ಸ್‌ ಪ್ರೋ ಲಿಮಿಟೆಡ್‌ ನಡುವೆ ಒಪ್ಪಂದ
  • ಭಾರತೀಯ ನೌಕಾಪಡೆಗಾಗಿ ಮುಂದಿನ ತಲೆಮಾರಿನ ತ್ವರಿತ ದಾಳಿ ನೌಕೆಗಾಗಿ ದೇಶೀಯ ನಿರ್ಮಾಣವನ್ನು ಬೆಂಬಲಿಸಲು MTU 16V4000M73L ಎಂಜಿನ್‌ನ ಸ್ಥಳೀಕರಣದೊಂದಿಗೆ ಪರವಾನಗಿ ಉತ್ಪಾದನೆಗಾಗಿ GRSE ಮತ್ತು ರೋಲ್ಸ್ ರಾಯ್ಸ್ ಸೊಲ್ಯೂಷನ್ಸ್ GmbH (MTU) ನಡುವೆ ಒಪ್ಪಂದ.
  • T-72/T-90 ಟ್ಯಾಂಕ್‌ಗಳಿಗೆ TRAWL ಅಸೆಂಬ್ಲಿ ಅಭಿವೃದ್ಧಿ ಮತ್ತು ಪೂರೈಕೆಗಾಗಿ ತಂತ್ರಜ್ಞಾನ ವರ್ಗಾವಣೆಗಾಗಿ (ಟಿಒಟಿ) R&DEE, ಡಿ ಆರ್‌ ಡಿ ಒ ದೊಂದಿಗೆ ಬಿ ಇ ಎಂ ಎಲ್‌ ಪರವಾನಗಿ ಒಪ್ಪಂದ
  • ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮತ್ತು ಇಸ್ರೇಲ್‌ ನ ಎಲ್ಟಾ ಸಿಸ್ಟಮ್ಸ್ ಲಿಮಿಟೆಡ್ ನಡುವೆ ಭಾರತೀಯ ಪ್ಲಾಟ್‌ಫಾರ್ಮ್‌ಗಳಿಗಾಗಿ ಕಡಲು ಪಹರೆ ರಾಡಾರ್ (MPR) ಗಳಲ್ಲಿ ಭವಿಷ್ಯದ ವ್ಯವಹಾರದ ಸಹಕಾರಕ್ಕಾಗಿ ಒಪ್ಪಂದ.

ಉತ್ಪನ್ನಗಳು

  • ಮೇಲ್ಮೈಯಿಂದ ಆಗಸಕ್ಕೆ ಲಂಬವಾಗಿ ಉಡಾವಣೆ ಮಾಡುವ ಕಡಿಮೆ ವ್ಯಾಪ್ತಿಯ ಕ್ಷಿಪಣಿ (ಭಾರತ್ ಡೈನಾಮಿಕ್ಸ್ ಲಿಮಿಟೆಡ್): VLSRSAM ಮುಂದಿನ ಪೀಳಿಗೆಯ, ಹಡಗು-ಆಧಾರಿತ, ಎಲ್ಲಾ-ಹವಾಮಾನ, ವಾಯು ರಕ್ಷಣಾ ಆಯುಧವಾಗಿದ್ದು, ವಿಮಾನ ಮತ್ತು ಯುಎವಿಗಳಂತಹ ಸೂಪರ್ಸಾನಿಕ್ ಸೀ ಸ್ಕಿಮ್ಮಿಂಗ್ ಗುರಿಗಳ ವಿರುದ್ಧ ತ್ವರಿತ ಪ್ರತಿಕ್ರಿಯೆ ರಕ್ಷಣೆಯಾಗಿ ನೌಕಾಪಡೆಯು ಇದನ್ನು ಬಳಸಬಹುದು. ಕ್ಷಿಪಣಿಯು ಎಲ್ಲಾ ಹವಾಮಾನ ಸಾಮರ್ಥ್ಯವನ್ನು ಹೊಂದಿರುವ ಹೊಗೆರಹಿತ ಪ್ರೊಪಲ್ಷನ್ ವ್ಯವಸ್ಥೆಯನ್ನು ಹೊಂದಿದೆ. ಇದು ಅತ್ಯಾಧುನಿಕ ಎಲೆಕ್ಟ್ರಾನಿಕ್ ವೈಶಿಷ್ಟ್ಯಗಳೊಂದಿಗೆ ಹೆಚ್ಚು ಚುರುಕುಬುದ್ಧಿಯ ಸಂರಚನೆಯನ್ನು ಹೊಂದಿದೆ.
  • ಬಿಎಂಪಿ II ಗಾಗಿ ಎಸ್‌ ಎ ಎಲ್ ಸೀಕರ್ ಎಟಿಜಿಎಂ (ಭಾರತ್ ಡೈನಾಮಿಕ್ಸ್ ಲಿಮಿಟೆಡ್): ಬಿಎಂಪಿ-II ಗಾಗಿ ಅರೆ-ಸಕ್ರಿಯ ಲೇಸರ್ ಸೀಕರ್ ಆಧಾರಿತ ಟ್ಯಾಂ ಕ್‌ ನಿಗ್ರಹ ಗೈಡೆಡ್ ಕ್ಷಿಪಣಿ 4,000 ಮೀಟರ್ ವ್ಯಾಪ್ತಿ ಮತ್ತು 25 ಸೆಕೆಂಡುಗಳ ಹಾರಾಟದ ಸಮಯವನ್ನು ಹೊಂದಿರುವ ಸಬ್‌ಸಾನಿಕ್ ಕ್ಷಿಪಣಿಯಾಗಿದೆ. ಕ್ಷಿಪಣಿಯು ಉಡಾವಣಾ ಟ್ಯೂಬ್‌ನೊಂದಿಗೆ 23 ಕೆಜಿ ಭಾರವಿರುತ್ತದೆ ಮತ್ತು ಟ್ಯಾಂಕ್‌ಗಳು ಮತ್ತು ಪದಾತಿದಳದ ಯುದ್ಧ ವಾಹನಗಳಂತಹ ಚಲಿಸುವ ಮತ್ತು ಸ್ಥಾಯಿ ಗುರಿಗಳನ್ನು ಅಸಮರ್ಥಗೊಳಿಸಲು ವಿವಿಧ ರೀತಿಯ ಭೂಪ್ರದೇಶಗಳಲ್ಲಿ ಬಳಸಬಹುದು.
  • ಜಿಷ್ಣು (ಭಾರತ್ ಡೈನಾಮಿಕ್ಸ್ ಲಿಮಿಟೆಡ್): ಜಿಷ್ಣು, ಡ್ರೋನ್ ಆಧಾರಿತ ಕ್ಷಿಪಣಿ, ಹಗುರವಾದ ಮತ್ತು ಲಘುವಾದ ಗುರಿಗಳನ್ನು ತಲುಪುವ ಸಣ್ಣ ಕ್ಷಿಪಣಿಯಾಗಿದೆ. ಇದು 9 ಸೆಕೆಂಡುಗಳ ಹಾರಾಟದ ಸಮಯದೊಂದಿಗೆ 1.5 ಕಿಮೀ ವ್ಯಾಪ್ತಿಯನ್ನು ಹೊಂದಿದೆ. ಕ್ಷಿಪಣಿಯು ಅರೆ-ಸ್ವಯಂಚಾಲಿತವಾಗಿರಬಹುದು ಅಥವಾ ಸಿಸ್ಟಮ್ಸ್ ಸಂರಚನೆಗಳ ಆಧಾರದ ಮೇಲೆ ಸಂಪೂರ್ಣವಾಗಿ ಸ್ವಯಂಚಾಲಿತವಾಗಿರಬಹುದು.
  • ಸಾಫ್ಟ್‌ವೇರ್ NAVIC/GPS ರಿಸೀವರ್ ಮಾಡ್ಯೂಲ್ ದೇಶೀಯವಾಗಿ ಅಭಿವೃದ್ಧಿಪಡಿಸಿದ ಪ್ರೊಸೆಸರ್‌ಗಳನ್ನು ಆಧರಿಸಿದೆ (ಅಸ್ಟ್ರಾ ಮೈಕ್ರೋವೇವ್ ಪ್ರಾಡಕ್ಟ್ಸ್ ಲಿಮಿಟೆಡ್).
  • ಡಿ ಆರ್‌ ಡಿ ಒ (Astra Microwave Products Limited) ದ ತಂತ್ರಜ್ಞಾನದ ಆಧಾರದ ಮೇಲೆ ದೇಶೀಯವಾಗಿ ನಿರ್ಮಿಸಲಾದ 'ಕೌಂಟರ್ ಡ್ರೋನ್ ರಾಡಾರ್'
  • 9 ಎಂಎಂ ಸಬ್-ಸಾನಿಕ್ ಮದ್ದುಗುಂಡುಗಳು (ಮ್ಯುನಿಷನ್ಸ್ ಇಂಡಿಯಾ ಲಿಮಿಟೆಡ್).
  • ಐ ಒ ಎಸ್‌ ನಲ್ಲಿ ಬಿ ಎಫ್‌ ಟಿ (ಐಡಿಯಾ ಫೋರ್ಜ್‌ ಟೆಕ್ನಾಲಜಿ ಲಿಮಿಟೆಡ್): ಬ್ಲೂಫೈರ್ ಟಚ್, ನಮ್ಮ ಗ್ರೌಂಡ್ ಕಂಟ್ರೋಲ್ ಸ್ಟೇಷನ್ (GCS) ಸಾಫ್ಟ್‌ವೇರ್, ಮ್ಯಾಪಿಂಗ್ ಮತ್ತು ಕಣ್ಗಾವಲು ಕಾರ್ಯಾಚರಣೆಗಳನ್ನು ಯೋಜಿಸಲು ಮತ್ತು ಕಮಾಂಡ್ ಮಾಡಲು ನಿರ್ಮಿಸಲಾಗಿದೆ ಮತ್ತು ಕಾರ್ಯಾಚರಣೆಯ ಪ್ರದೇಶ ಮತ್ತು ಗುರಿ ಸ್ಥಳಗಳ ಮೂಲಕ ಕಾರ್ಯಾಚರಣೆಗಳನ್ನು ಮೊದಲೇ ಯೋಜಿಸುವ ಸಾಮರ್ಥ್ಯದೊಂದಿಗೆ ನಿರ್ಮಿಸಲಾಗಿದೆ.
  • ಹೆಚ್‌ ಎಫ್‌ ಎಸ್‌ ಡಿ ಆರ್‌ ರೇಡಿಯೋ (ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್): ಇದು ಸುಧಾರಿತ ಸಾಫ್ಟ್‌ವೇರ್ ಆಧಾರಿತ ರೇಡಿಯೋ. ರೇಡಿಯೋ ಹಗುರವಾಗಿದ್ದು, 20 W ಪ್ರಸಾರ ಸಾಮರ್ಥ್ಯ ಹೊಂಣದಿದೆ. ಇದು ಹೆಚ್ಚು ಸಂದಣಿಯ ಹೆಚ್‌ ಎಫ್‌ ಬ್ಯಾಂಡ್‌ನಲ್ಲಿ ಕಡಿಮೆ ವ್ಯಾಪ್ತಿಯ ಸಂವಹನ ಅಗತ್ಯತೆಗಳಿಗೆ ಸಂಪೂರ್ಣ ಪರಿಹಾರವನ್ನು ಒದಗಿಸುತ್ತದೆ ಮತ್ತು ಕಣ್ಣಿಗೆ ಕಾಣುವುದಕ್ಕಿಂತ ದೂರದ ದೀರ್ಘ ವ್ಯಾಪ್ತಿಯ ಸಂವಹನಗಳನ್ನು ಒದಗಿಸುತ್ತದೆ.
  • ಗೋನಿಯೊಮೀಟರ್ (ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್): ಇದು ಫಿರಂಗಿಯಿಂದ ಹಗಲು ಅಥವಾ ರಾತ್ರಿಯ ಸಮಯದ ಬಳಕೆಗಾಗಿ ಯಾವುದೇ ಸಮಗ್ರ ವೀಕ್ಷಣೆಯ ಮತ್ತು ಗುಂಡು ಹಾರಿಸುವುದರ ನಿಯಂತ್ರಣ ಮೇಲ್ವಚಾರಣೆ ವ್ಯವಸ್ಥೆಯ ಭಾಗವಾಗಿದೆ.

ಬಂಧನ್ ಸಮಯದಲ್ಲಿ ಪೂರ್ಣಗೊಂಡ ಎಂಒಯುಗಳು ಮತ್ತು ಟಿಒಟಿಗಳು ರಕ್ಷಣೆಯಲ್ಲಿ ವರ್ಧಿತ ಎಫ್‌ಡಿಐಗೆ ದಾರಿ ಮಾಡಿಕೊಡುತ್ತವೆ ಮತ್ತು ವಲಯದಲ್ಲಿನ ಉತ್ಪಾದನೆಯನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತವೆ‌ ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದರು. ಬಂಧನ್ ಕೇವಲ ಆರ್ಥಿಕ ಲಾಭಕ್ಕೆ ಸೀಮಿತವಾದ ಎರಡು ಪಕ್ಷಗಳ ನಡುವಿನ ಒಪ್ಪಂದವಲ್ಲ, ಬದಲಿಗೆ ರಕ್ಷಣಾ ಕ್ಷೇತ್ರದಲ್ಲಿ ರಾಷ್ಟ್ರವನ್ನು ಬಲಪಡಿಸುವ ಹೊಸ ನಿರ್ಣಯವಾಗಿದೆ ಎಂದು ಅವರು ವ್ಯಾಖ್ಯಾನಿಸಿದರು. ಸೌಹಾರ್ದ ರಾಷ್ಟ್ರಗಳೊಂದಿಗೆ ರೂಪಿಸಿದ ಪಾಲುದಾರಿಕೆಯು ಭಾರತದೊಂದಿಗಿನ ಅವುಗಳ ದ್ವಿಪಕ್ಷೀಯ ಸಹಯೋಗವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ಒತ್ತಿ ಹೇಳಿದರು.

ಏರೋ ಇಂಡಿಯಾವು 'ನವ ಭಾರತ'ದ 'ಹೊಸ ರಕ್ಷಣಾ ವಲಯ'ವನ್ನು ಜಗತ್ತಿಗೆ ಪ್ರದರ್ಶಿಸಿದೆ ಎಂದು ರಕ್ಷಣಾ ಸಚಿವರು ಹೇಳಿದರು. ಇದು ಕಳೆದ ಕೆಲವು ವರ್ಷಗಳಲ್ಲಿ ಬೆಳೆದಿರುವುದು ಮಾತ್ರವಲ್ಲ, ಈಗ ಪ್ರಮುಖ ದೇಶಗಳ ರಕ್ಷಣಾ ಕ್ಷೇತ್ರಗಳ ಜೊತೆಗೆ ನಡೆಯಲು ಸಂಪೂರ್ಣವಾಗಿ ಸಿದ್ಧವಾಗಿದೆ. ಈ ಕಾರ್ಯಕ್ರಮವು ಭಾರತೀಯ ರಕ್ಷಣಾ ಉದ್ಯಮವನ್ನು ಬಲಪಡಿಸಲು ಹೊಸ ಮಾರ್ಗವನ್ನು ತೆರೆದಿದೆ ಎಂದು ಅವರು ತೃಪ್ತಿ ವ್ಯಕ್ತಪಡಿಸಿದರು, ಇದು 'ಆತ್ಮನಿರ್ಭರತʼದ ಹೊಸ ಯುಗದ ಆರಂಭವಾಗಿದೆ ಎಂದು ಅವರು ಬಣ್ಣಿಸಿದರು. ಹೊಸ ಶಕ್ತಿ ಮತ್ತು ಸಂಕಲ್ಪದೊಂದಿಗೆ ಈ ಕ್ಷೇತ್ರವು ಪ್ರಗತಿಯ ಪಥದಲ್ಲಿ ಬಲವಾಗಿ ಮುನ್ನಡೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ಆರ್ಥಿಕ ಪ್ರಗತಿಗೆ ನಿರಂತರವಾಗಿ ಕೊಡುಗೆ ನೀಡುತ್ತಿರುವ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದು ಶ್ರೀ ರಾಜನಾಥ್ ಸಿಂಗ್ ಬಣ್ಣಿಸಿದರು. ಏರೋ ಇಂಡಿಯಾವನ್ನು ಆಯೋಜಿಸಲು ಕರ್ನಾಟಕಕ್ಕಿಂತ ಉತ್ತಮವಾದ ಸ್ಥಳ ಬೇರೊಂದಿಲ್ಲ ಎಂದು ಅವರು ಹೇಳಿದರು, ಏಕೆಂದರೆ ರಾಜ್ಯವು ತನ್ನ ದೃಢವಾದ ಸಂಶೋಧನೆ ಮತ್ತು ಅಭಿವೃದ್ಧಿ ಉತ್ಪಾದನಾ ಪರಿಸರ ವ್ಯವಸ್ಥೆಯೊಂದಿಗೆ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಕೈಗಾರಿಕೆಗಳನ್ನು ಆಕರ್ಷಿಸಿದೆ ಎಂದು ಅವರು ಹೇಳಿದರು.

ಕರ್ನಾಟಕ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ರಕ್ಷಣಾ ಕಾರ್ಯದರ್ಶಿ ಶ್ರೀ ಗಿರಿಧರ್ ಅರಮಾನೆ , ರಕ್ಷಣಾ ಇಲಾಖೆಯ ಕಾರ್ಯದರ್ಶಿ, ಆರ್ & ಡಿ ಮತ್ತು ಡಿಆರ್‌ಡಿಒ ಅಧ್ಯಕ್ಷ  ಶ್ರೀ ಸಮೀರ್ ವಿ ಕಾಮತ್, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ವಂದಿತಾ ಶರ್ಮಾ ಮತ್ತು ರಕ್ಷಣಾ ಸಚಿವಾಲಯ ಮತ್ತು ರಾಜ್ಯ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

*****



(Release ID: 1899573) Visitor Counter : 280