ಪ್ರಧಾನ ಮಂತ್ರಿಯವರ ಕಛೇರಿ

ಜೈಪುರ ಮಹಾಖೇಲ್ ಕ್ರೀಡೋತ್ಸವವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರು ಭಾಷಣ ಮಾಡಿದರು


"ಕಲಿಕೆಯಲ್ಲಿ ತೊಡಗಿಕೊಂಡಾಗ ಮಾತ್ರ ಗೆಲುವು ಸಾಧ್ಯವಾಗುತ್ತದೆ"

"ರಾಷ್ಟ್ರದ ಭದ್ರತೆಯ ವಿಷಯದಲ್ಲಿ ರಾಜಸ್ಥಾನದ ಯುವಕರು ಯಾವಾಗಲೂ ಉಳಿದವರಿಗಿಂತ ಮುಂದೆ ಇರುತ್ತಾರೆ"

"ಜೈಪುರ ಮಹಾಖೇಲ್‌ ಕ್ರೀಡೋತ್ಸವದ ಯಶಸ್ವೀ ಸಂಘಟನೆಯು ಭಾರತದ ಪ್ರಯತ್ನಗಳಿಗೆ ಪ್ರಮುಖ ಕೊಂಡಿಯಾಗಿದೆ"

"ದೇಶವು ಹೊಸ ವ್ಯಾಖ್ಯಾನಗಳನ್ನು ರೂಪಿಸುತ್ತಿದೆ ಮತ್ತು ಅಮೃತ ಕಾಲದಲ್ಲಿ ಹೊಸ ಆದೇಶಗಳನ್ನು ರಚಿಸುತ್ತಿದೆ"

"ದೇಶದ ಕ್ರೀಡಾ ಬಜೆಟ್ 2014 ರಿಂದ ಸುಮಾರು ಮೂರು ಪಟ್ಟು ಹೆಚ್ಚಾಗಿದೆ"

"ದೇಶದಲ್ಲಿ ಕ್ರೀಡಾ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ ಮತ್ತು ಖೇಲ್ ಮಹಾಕುಂಭದಂತಹ ದೊಡ್ಡ ಕಾರ್ಯಕ್ರಮಗಳನ್ನು ವೃತ್ತಿಪರ ರೀತಿಯಲ್ಲಿ ಆಯೋಜಿಸಲಾಗುತ್ತಿದೆ"

ಹಣದ ಕೊರತೆಯಿಂದ ಯಾವುದೇ ಯುವಕರು ಹಿಂದೆ ಸರಿಯಬಾರದು ಎಂದು ನಮ್ಮ ಸರ್ಕಾರ ಗಮನ ಕೇಂದ್ರೀಕರಿಸಿದೆ.

"ನೀವು ಫಿಟ್ ಆಗಿರುತ್ತೀರಿ, ಆಗ ಮಾತ್ರ ನೀವು ಸೂಪರ್‌ ಹಿಟ್ ಆಗುತ್ತೀರಿ"

"ರಾಜಸ್ಥಾನದ ಶ್ರೀ ಅನ್ನಾ-ಸಜ್ಜೆ (ಬಜ್ರಾ) ಮತ್ತು ಶ್ರೀ ಅನ್ನ-ಜೋಳ(ಜ್ವಾರ್) ಈ ಸ್ಥಳದ ಅನನ್ಯ ಹೆಗ್ಗುರುತಾಗಿದೆ"

"ಇಂದಿನ ಯುವಕರು ತಮ್ಮ ಬಹುಮುಖ ಪ್ರತಿಭೆ ಮತ್ತು ಬಹು ಆಯಾಮದ ಸಾಮರ್ಥ್ಯಗಳಿಂದಾಗಿ ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿರಲು ಬಯಸುವುದಿಲ್ಲ"

"ಕ್ರೀಡೆ ಕೇವಲ ಒಂದು ಪ್ರಕಾರವಲ್ಲ, ಆದರೆ ಒಂದು ಉದ್ಯಮ"

"ಹೃದಯಪೂರ್ವಕವಾಗಿ ಪ್ರಯತ್ನಗಳನ್ನು ಮಾಡಿದಾಗ, ಫಲಿತಾಂಶಗಳು ಖಚಿತವಾಗಿರುತ್ತವೆ"

"ದೇಶಕ್ಕೆ ಮುಂದಿನ ಚಿನ್ನ ಮತ್ತು ಬೆಳ್ಳಿ ಪದಕ ವಿಜೇತರು ನಿಮ್ಮಿಂದಲೇ ಹೊರಹೊಮ್ಮುತ್ತಾರೆ"

Posted On: 05 FEB 2023 3:30PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೈಪುರ ಮಹಾಖೇಲ್ ಕ್ರೀಡೋತ್ಸವವನ್ನು ಉದ್ದೇಶಿಸಿ ಇಂದು ವಿಡಿಯೊ ಸಮಾವೇಶ ಮೂಲಕ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಕಬ್ಬಡಿ ಪಂದ್ಯವನ್ನು ವೀಕ್ಷಿಸಿದರು. ಜೈಪುರ ಗ್ರಾಮಾಂತರದ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು 2017 ರಿಂದ ಜೈಪುರ ಮಹಾಖೇಲ್ ಕ್ರೀಡೋತ್ಸವವನ್ನು ಆಯೋಜಿಸುತ್ತಿದ್ದಾರೆ.

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಮೆಗಾ ಸ್ಪರ್ಧೆಯಲ್ಲಿ ಪದಕ ಗೆದ್ದ ಆಟಗಾರರು, ತರಬೇತುದಾರರು ಮತ್ತು ಕುಟುಂಬದವರನ್ನು ಅಭಿನಂದಿಸಿದರು. “ಆಟಗಾರರು ಕೇವಲ ಭಾಗವಹಿಸಲು ಮಾತ್ರ ಕ್ರೀಡಾ ಕ್ಷೇತ್ರವನ್ನು ಆಯ್ಕೆ ಮಾಡಲಿಲ್ಲ, ಬದಲಾಗಿ  ಗೆಲ್ಲಲು ಮತ್ತು ಕಲಿಯುವ ಉದ್ದೇಶದಿಂದ ಪಾಲ್ಗೊಂಡಿದ್ದಾರೆ. ಕಲಿಕೆಯಲ್ಲಿ ತೊಡಗಿಸಿಕೊಂಡಾಗ ಗೆಲುವು ಖಚಿತ. ಆಗ, ಯಾವುದೇ ಆಟಗಾರನು ಕ್ರೀಡಾ ಕ್ಷೇತ್ರವನ್ನು ಬರಿಗೈಯಲ್ಲಿ ಬಿಡುವುದಿಲ್ಲ ” ಎಂದು ಹೇಳಿದರು.

ಕ್ರೀಡಾ ಕ್ಷೇತ್ರದಲ್ಲಿ ಭಾರತದ ಹೆಸರನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಅನೇಕ ಹೆಸರಾಂತ ಕ್ರೀಡಾಪಟುಗಳ ಉಪಸ್ಥಿತಿಯನ್ನು ಈ ಸ್ಪರ್ಧೆಯಲ್ಲಿ ಗಮನಿಸಿದ ಪ್ರಧಾನಮಂತ್ರಿ ಅವರು, ಏಷ್ಯನ್ ಗೇಮ್ಸ್ ಪದಕ ವಿಜೇತ ಶ್ರೀ ರಾಮ್ ಸಿಂಗ್, ಪ್ಯಾರಾ-ಅಥ್ಲೀಟ್ ಶ್ರೀ ದೇವೇಂದ್ರ ಜಜಾರಿಯಾ, ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರಾದ ಸಾಕ್ಷಿ ಕುಮಾರಿ, ಅರ್ಜುನ್ ಪ್ರಶಸ್ತಿ ಪುರಸ್ಕೃತರು ಮತ್ತು ಇತರರು ಹಿರಿಯ ಕ್ರೀಡಾಪಟುಗಳು ಮುಂತಾದ ಹೆಸರಾಂತ ಕ್ರೀಡಾಪಟುಗಳ ಹೆಸರನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಜೈಪುರ ಮಹಾಖೇಲ್‌ ನಲ್ಲಿ ಯುವ ಕ್ರೀಡಾಪಟುಗಳನ್ನು ಬೆಂಬಲಿಸಲು ಭಾರತದ ಈ ಹೆಸರಾಂತ ಕ್ರೀಡಾಪಟುಗಳು ಮುಂದೆ ಬಂದಿರುವುದಕ್ಕೆ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು.  

“ದೇಶದಾದ್ಯಂತ ಆಯೋಜಿಸಲಾಗುತ್ತಿರುವ ಕ್ರೀಡಾ ಸ್ಪರ್ಧೆಗಳು ಮತ್ತು ಖೇಲ್ ಮಹಾಕುಂಭಗಳ ಸರಣಿಯು ಈ ರೀತಿಯಲ್ಲಿ ನಡೆಯುತ್ತಿರುವುದು ಕ್ರೀಡಾಲೋಕದ ಸ್ಮರಣೀಯ ಬದಲಾವಣೆಗಳ ಪ್ರತಿಬಿಂಬವಾಗಿದೆ. ರಾಜಸ್ಥಾನದ ನಾಡು ಯುವಜನರ ಉತ್ಸಾಹ ಮತ್ತು ಚೈತನ್ಯಕ್ಕೆ ಹೆಸರುವಾಸಿಯಾಗಿದೆ. ನೆಲದ ಮಕ್ಕಳು ತಮ್ಮ ಶೌರ್ಯದಿಂದ ರಣರಂಗಗಳನ್ನು ಕೂಡಾ ಕ್ರೀಡಾ ಕ್ಷೇತ್ರಗಳನ್ನಾಗಿ ಮಾಡಿದ್ದಾರೆ ಎಂಬುದಕ್ಕೆ ಇಲ್ಲಿನ ಕ್ರೀಡಾ ಇತಿಹಾಸವೇ ಸಾಕ್ಷಿಯಾಗಿದೆ. ರಾಷ್ಟ್ರದ ಭದ್ರತೆಯ ವಿಷಯದಲ್ಲಿ ರಾಜಸ್ಥಾನದ ಯುವಕರು ಯಾವಾಗಲೂ ಉಳಿದವರಿಗಿಂತ ಮುಂದೆ ಇರುತ್ತಾರೆ. ಪ್ರದೇಶದ ಯುವಕರ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯಗಳನ್ನು ರೂಪಿಸಲು ರಾಜಸ್ಥಾನದ ಕ್ರೀಡಾ ಸಂಪ್ರದಾಯಗಳಿಗೆ ಅವರು ಸದಾ ಮನ್ನಣೆ ನೀಡುತ್ತಾರೆ. ನೂರಾರು ವರ್ಷಗಳಿಂದ ರಾಜಸ್ಥಾನದ ಸಂಪ್ರದಾಯಗಳ ಭಾಗವಾಗಿರುವ ದಾದಾ, ಸಿಟೋಲಿಯಾ ಮತ್ತು ರುಮಾಲ್ ಝಾಪಟ್ಟಾ ಮುಂತಾದ ಸಾಂಪ್ರದಾಯಿಕ ಆಟಗಳನ್ನು ಮಕರ ಸಂಕ್ರಾಂತಿಯಂದು ವಿಜ್ರಂಭಣೆಯಿಂದ ಆಯೋಜಿಸಲಾಗುತ್ತಿರುವುದು ಇದಕ್ಕೆ ಉತ್ತಮ ಉದಾಹರಣೆಯಾಗಿದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು.

ತಮ್ಮ ಕ್ರೀಡಾ ಕೊಡುಗೆಗಳಿಂದ ತ್ರಿವರ್ಣ ಧ್ವಜವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ರಾಜಸ್ಥಾನದ ಹಲವಾರು ಕ್ರೀಡಾಪಟುಗಳ ಕುರಿತು ವಿವರಿಸಿದ ಪ್ರಧಾನಮಂತ್ರಿಯವರು, ಜೈಪುರದ ಜನರು ತಮ್ಮ ಸಂಸದೀಯ ಸದಸ್ಯರಾಗಿ ಒಲಿಂಪಿಕ್ ಪದಕ ವಿಜೇತರನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು. ಸಂಸದ ಶ್ರೀ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರ ಕೊಡುಗೆಗಳನ್ನು ಊಲ್ಲೇಖಿಸಿದ ಪ್ರಧಾನಮಂತ್ರಿಯವರು, ಸಂಸದೀಯ ಕ್ರೀಡಾ ಸ್ಪರ್ಧೆಗಳ ರೂಪದಲ್ಲಿ ಕೊಡುಗೆ ನೀಡುವ ಮೂಲಕ ಯುವ ಪೀಳಿಗೆಗೆ ಮರಳಿ ಅವಕಾಶಗಳನ್ನು ನೀಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಹೆಚ್ಚು ಸಮಗ್ರ ಫಲಿತಾಂಶಗಳಿಗಾಗಿ ಇಂತಹ ಕ್ರೀಡಾ ಪ್ರಯತ್ನಗಳನ್ನು ವಿಸ್ತರಿಸಲು ಪ್ರಧಾನಮಂತ್ರಿ ಒತ್ತು ನೀಡಿದರು ಮತ್ತು ಈ ಪ್ರಯತ್ನಗಳ ಕಡೆಗೆ ಮುಂದಿನ ಪ್ರಮುಖ ಕೊಂಡಿಯಾಗಿರುವ  ಜೈಪುರ ಮಹಾಖೇಲ್‌ ಅನ್ನು ಯಶಸ್ವಿಯಾಗಿ ಸಂಘಟಿಸಿದ್ದಕ್ಕಾಗಿ, ಸಂಘಟಕರನ್ನು ಪ್ರಶಂಸಿಸಿದರು. “ಜೈಪುರ ಮಹಾಖೇಲ್‌ ನ ಯಶಸ್ಸನ್ನು ವಿವರಿಸುತ್ತಾ, ಈ ವರ್ಷದ ಆವೃತ್ತಿಯ ಸ್ಪರ್ಧೆಯಲ್ಲಿ 600 ಕ್ಕೂ ಹೆಚ್ಚು ತಂಡಗಳು ಮತ್ತು 6,500 ಯುವಕರು ಭಾಗವಹಿಸಿದ್ದಾರೆ. ಇದರಲ್ಲಿ 125 ಕ್ಕೂ ಹೆಚ್ಚು ಬಾಲಕಿಯರ ತಂಡಗಳ ಭಾಗವಹಿಸಿದ್ದಾರೆ. ಇದು ಅತ್ಯಂತ ಆಹ್ಲಾದಕರ ಸಂದೇಶವನ್ನು ಪ್ರಸಾರ ಮಾಡುತ್ತದೆ”  ಎಂದು ಪ್ರಧಾನಮಂತ್ರಿಯವರು ಹೇಳಿದರು.

"ಸ್ವಾತಂತ್ರ್ಯದ ಅಮೃತ ಕಾಲದಲ್ಲಿ, ದೇಶವು ಹೊಸ ಆಯಾಮದೊಂದಿಗೆ, ಹೊಸ ವ್ಯಾಖ್ಯಾನಗಳನ್ನು ರೂಪಿಸುತ್ತಿದೆ ಮತ್ತು ಹೊಸ ಆದೇಶವನ್ನು ರಚಿಸುತ್ತಿದೆ. ಕ್ರೀಡೆಯನ್ನು ಅಂತಿಮವಾಗಿ ರಾಜಕೀಯ ದೃಷ್ಟಿಕೋನದಿಂದ ನೋಡದೆ ಕ್ರೀಡಾಪಟುವಿನ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಯುವಕರಿಗೆ ಯಾವುದೂ ಅಸಾಧ್ಯವಲ್ಲ, ಅವರ ಸಾಮರ್ಥ್ಯ, ಸ್ವಾಭಿಮಾನ, ಸ್ವಾವಲಂಬನೆ, ಸೌಲಭ್ಯಗಳು ಮತ್ತು ಸಂಪನ್ಮೂಲಗಳ ಬಲವನ್ನು ಅರಿತುಕೊಂಡಾಗ ಪ್ರತಿಯೊಂದು ಉದ್ದೇಶವೂ ಸುಲಭವಾಗುತ್ತದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು.

ಈ ವರ್ಷದ ಕೇಂದ್ರ ಬಜೆಟ್‌ನಲ್ಲಿಯೂ ಇಂತಹ ವಿಧಾನಗಳ ಹೊಳಪು(ಝಲಕ್‌)ಗಳನ್ನು ಕಾಣಬಹುದು. 2014 ರ ಮೊದಲು ಕೇಂದ್ರ ಸರ್ಕಾರದ ಬಜೆಟ್‌ ನಲ್ಲಿ ಕ್ರೀಡಾ ಸಚಿವಾಲಯಕ್ಕೆ ನೀಡುತ್ತಿದ್ದ ರೂ. 800-850 ಕೋಟಿಗಳ ಹಂಚಿಕೆಗೆ ಹೋಲಿಸಿದರೆ ಈ ವರ್ಷ ಬೃಹತ್‌ ಗಾತ್ರದಲ್ಲಿ  ರೂ. 2500 ಕೋಟಿಗಳ ಬಜೆಟ್ ಅನ್ನು ನಿಗದಿಪಡಿಸಲಾಗಿದೆ.  ದೇಶದ ಕ್ರೀಡಾ ಬಜೆಟ್ 2014 ರಿಂದ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ‘ಖೇಲೋ ಇಂಡಿಯಾ’ ಅಭಿಯಾನಕ್ಕೆ ರೂ. 1000 ಕೋಟಿಗೂ ಹೆಚ್ಚು ಹಣವನ್ನು ವಿನಿಯೋಗಿಸಲಾಗಿದ್ದು, ಇದನ್ನು ದೇಶದ ಕ್ರೀಡಾ ಸಂಪನ್ಮೂಲಗಳ ಅಭಿವೃದ್ಧಿಗೆ ಖರ್ಚು ಮಾಡಲಾಗುವುದು” ಎಂದು ಪ್ರಧಾನಮಂತ್ರಿಯವರು ಹೇಳಿದರು.  

“ಭಾರತದ ಯುವಕರಲ್ಲಿ ಕ್ರೀಡೆಯ ಬಗ್ಗೆ ಉತ್ಸಾಹ ಮತ್ತು ಪ್ರತಿಭೆಯ ಕೊರತೆಯಿಲ್ಲ. ಆದರೆ ಸೂಕ್ತ ಸಂಪನ್ಮೂಲಗಳ ಅಲಭ್ಯತೆ ಮತ್ತು ಸರ್ಕಾರದ ಬೆಂಬಲವು ಅಡೆತಡೆಗಳನ್ನು ಸೃಷ್ಟಿಸಿದೆ. ಕ್ರೀಡಾಪಟುಗಳು ಎದುರಿಸುತ್ತಿರುವ ಈ ಸಮಸ್ಯೆಗಳನ್ನು ಇಂದು ಪರಿಹರಿಸಲಾಗುತ್ತಿದೆ. ಕಳೆದ 5-6 ವರ್ಷಗಳಿಂದ ಆಯೋಜಿಸಲಾಗುತ್ತಿರುವ ಜೈಪುರ ಮಹಾಖೇಲ್‌  ಈ ನಿಟ್ಟಿನಲ್ಲಿ ಸ್ಪಷ್ಟ ಉದಾಹರಣೆಯಾಗಿದೆ. ಸಾವಿರಾರು ಯುವಕರ ಪ್ರತಿಭೆಗಳನ್ನು ಯಶಸ್ವಿಯಗಿ ಮುಂಚೂಣಿಯಲ್ಲಿ ಹೊರ ತರುತ್ತಿರುವ ಈ ಜೈಪುರದ ಬಿಜೆಪಿಯ ಸಂಸದರಿಂದ ಪ್ರೇರಿತರಾಗಿ, ದೇಶದ ಪ್ರತಿಯೊಂದು ಭಾಗದಲ್ಲೂ ಖೇಲ್ ಮಹಾಕುಂಭಗಳನ್ನು ಆಯೋಜಿಸಲಾಗುತ್ತಿದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು.

“ಕೇಂದ್ರ ಸರ್ಕಾರದ ಪ್ರಯತ್ನದಿಂದಾಗಿ, ಇಂದು ಜಿಲ್ಲಾ ಮತ್ತು ಸ್ಥಳೀಯ ಮಟ್ಟದಲ್ಲಿ ಕ್ರೀಡಾ ಸೌಲಭ್ಯಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ದೇಶದ ನೂರಾರು ಜಿಲ್ಲೆಗಳಲ್ಲಿ ಲಕ್ಷಾಂತರ ಯುವಕರಿಗೆ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿ ವ್ಯವಸ್ಥೆ ಮಾಡಲಾಗಿದೆ. ರಾಜಸ್ಥಾನ ರಾಜ್ಯದ ಹಲವು ನಗರಗಳಲ್ಲಿ ಕೂಡಾ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಯಾಗುತ್ತಿದೆ. ಇಂದು, ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯಗಳಂತಹ ಕ್ರೀಡಾ ವಿಶ್ವವಿದ್ಯಾನಿಲಯಗಳನ್ನು ದೇಶದಾದ್ಯಂತ ಸ್ಥಾಪಿಸಲಾಗುತ್ತಿದೆ ಮತ್ತು ಈ ವರ್ಷ ಖೇಲ್ ಮಹಾಕುಂಭದಂತಹ ದೊಡ್ಡ ಕಾರ್ಯಕ್ರಮಗಳನ್ನು ವೃತ್ತಿಪರ ರೀತಿಯಲ್ಲಿ ಆಯೋಜಿಸಲಾಗುತ್ತಿದೆ. ಕ್ರೀಡಾ ನಿರ್ವಹಣೆ ಮತ್ತು ಕ್ರೀಡಾ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಶಿಸ್ತುಗಳನ್ನು ಕಲಿಯಲು ವಾತಾವರಣವನ್ನು ಸೃಷ್ಟಿಸುವ ಅಗತ್ಯವಿದೆ. ಆ ಮೂಲಕ ಯುವಕರು ಈ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ಮಾಡಲು ಅವಕಾಶವನ್ನು ಸೃಷ್ಟಿಸುತ್ತಾರೆ” ಎಂದು ಪ್ರಧಾನಮಂತ್ರಿಯವರು ಹೇಳಿದರು.

“ಹಣದ ಕೊರತೆಯಿಂದ ಯಾವುದೇ ಯುವಕರು ಹಿಂದೆ ಸರಿಯಬಾರದು ಎಂದು ಕೇಂದ್ರ ಸರ್ಕಾರವು ನಿರ್ಧರಿಸಿದೆ. ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಕೇಂದ್ರ ಸರ್ಕಾರವು ಈಗ ವಾರ್ಷಿಕವಾಗಿ ರೂ 5 ಲಕ್ಷದವರೆಗೆ ಬೆಂಬಲ ನೀಡುತ್ತಿದೆ. ಪ್ರಮುಖ ಕ್ರೀಡಾ ಪ್ರಶಸ್ತಿಗಳಲ್ಲಿ ನೀಡಲಾಗುವ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ. ಟಾಪ್ಸ್‌ ನಂತಹ ಯೋಜನೆಗಳು ಇದಕ್ಕೆ ಉದಾಹರಣೆಯಾಗಿದೆ. ಆಟಗಾರರು ಒಲಿಂಪಿಕ್ಸ್‌ ಗಾಗಿ ವರ್ಷಗಳ ಕಾಲ ತಯಾರಿ ನಡೆಸಲು ಅನುವು ಮಾಡಿಕೊಡುತ್ತಿದೆ, ಒಲಿಂಪಿಕ್ಸ್‌ನಂತಹ ದೊಡ್ಡ ಜಾಗತಿಕ ಸ್ಪರ್ಧೆಗಳಲ್ಲಿಯೂ ಕೂಡಾ ತನ್ನ ಆಟಗಾರರೊಂದಿಗೆ ಕೇಂದ್ರ ಸರ್ಕಾರವು ಸಂಪೂರ್ಣ ಶಕ್ತಿಯೊಂದಿಗೆ ನಿಂತಿದೆ. ಕ್ರೀಡಾಪಟುಗಳಿಗೆ ಕಲಿಯಲು ವಾತಾವರಣವನ್ನು ಸೃಷ್ಟಿಸುವ ಅಗತ್ಯವಿದೆ. ಆ ಮೂಲಕ ಯುವಕರು ಈ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ಮಾಡಲು ಅವಕಾಶವನ್ನು ಸೃಷ್ಟಿಸುತ್ತಾರೆ” ಎಂದು ಪ್ರಧಾನಮಂತ್ರಿಯವರು ಹೇಳಿದರು.

ಕ್ರೀಡಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ದೈನಂದಿನ ಜೀವನದಲ್ಲಿಯೂ ಸ್ವಾಸ್ಥ್ಯ(ಫಿಟ್‌ನೆಸ್) ಕಾಪಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, “ಯಾವುದೇ ಆಟಗಾರನಿಗೆ ಸ್ವಾಸ್ಥ್ಯ(ಫಿಟ್‌ನೆಸ್) ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಖೇಲೋ ಇಂಡಿಯಾ ಮತ್ತು ಫಿಟ್ ಇಂಡಿಯಾದಂತಹ ಅಭಿಯಾನ ಇದಕ್ಕೆ ಉದಾಹರಣೆಯಾಗಿದೆ. ಫಿಟ್‌ನೆಸ್‌ನಲ್ಲಿ ಆಹಾರ ಮತ್ತು ಪೋಷಣೆಯ ಪಾತ್ರ ಮುಖ್ಯವಾಗಿದೆ. ನೀವು ಯಾವಾಗ ಫಿಟ್ ಆಗಿರುತ್ತೀರಿ, ಆಗ ಮಾತ್ರ ನೀವು ಸೂಪರ್‌ಹಿಟ್ ಆಗುತ್ತೀರಿ" ಎಂದು ಹೇಳಿದರು. “ವಿಶ್ವಸಂಸ್ಥೆಯು 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ಆಚರಿಸುತ್ತಿದೆ. ರಾಜಸ್ಥಾನವು ಸಿರಿಧಾಯಗಳ ಶ್ರೀಮಂತ ಸಂಪ್ರದಾಯವಾದ ಶ್ರೀ ಅನ್ನಕ್ಕೆ ನೆಲೆಯಾಗಿದೆ. ರಾಜಸ್ಥಾನದ ಶ್ರೀ ಅನ್ನ-ಸಜ್ಜೆ(ಬಜ್ರಾ) ಮತ್ತು ಶ್ರೀ ಅನ್ನ-ಜೋಳ(ಜ್ವಾರ್), ಈ ರಾಜ್ಯದ ಅನನ್ಯ ಹೆಗ್ಗುರುತಾಗಿದೆ. ಇಲ್ಲಿ ಮಾಡಿದ ಸಜ್ಜೆ(ಬಾಜ್ರಾ) ಗಂಜಿ ಮತ್ತು ಚುರ್ಮಾವನ್ನು ನೆನಪಿಸಿಕೊಳ್ಳುತ್ತೇನೆ. ಎಲ್ಲಾ ಯುವಕರು ತಮ್ಮ ಆಹಾರದಲ್ಲಿ ಕೇವಲ ಶ್ರೀ ಅನ್ನವನ್ನು ಸೇರಿಸಿಕೊಳ್ಳುವುದು ಮಾತ್ರವಲ್ಲದೆ,  ಅದರ ಬ್ರಾಂಡ್ ಅಂಬಾಸಿಡರ್ ಕೂಡಾ ಆಗಿ ಪ್ರವರ್ತಿಸಬೇಕು” ಎಂದು ಪ್ರಧಾನಮಂತ್ರಿಯವರು ಹೇಳಿದರು.

“ದೇಶವು ಯುವಜನರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು ಮತ್ತು “ಇಂದಿನ ಯುವಕರು ತಮ್ಮ ಬಹುಮುಖ ಪ್ರತಿಭೆ ಮತ್ತು ಬಹು ಆಯಾಮದ ಸಾಮರ್ಥ್ಯಗಳಿಂದ ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿರಲು ಬಯಸುವುದಿಲ್ಲ” ಎಂದು ತಿಳಿಸಿದರು. “ಒಂದೆಡೆ ಆಧುನಿಕ ಕ್ರೀಡಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಮಕ್ಕಳು ಮತ್ತು ಯುವಕರಿಗಾಗಿ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯವನ್ನು ಈ ವರ್ಷದ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದ್ದು, ವಿಜ್ಞಾನ, ಸಂಸ್ಕೃತ ಮತ್ತು ಇತಿಹಾಸದಂತಹ ಪ್ರತಿಯೊಂದು ವಿಷಯದ ಪುಸ್ತಕಗಳು ಪ್ರತಿ ಹಂತದಲ್ಲೂ ನಗರದಿಂದ ಹಳ್ಳಿಯ ವರೆಗಿನ ಸರ್ವರಿಗೂ ಲಭ್ಯವಿರುತ್ತವೆ” ಎಂದು ಪ್ರಧಾನಮಂತ್ರಿಯವರು ಹೇಳಿದರು .

"ಕ್ರೀಡೆಯು ಕೇವಲ ಒಂದು ಪ್ರಕಾರವಲ್ಲ, ಆದರೆ ಒಂದು ಉದ್ಯಮವಾಗಿದೆ. ಕ್ರೀಡೆಗೆ ಸಂಬಂಧಿಸಿದ ವಸ್ತುಗಳು ಮತ್ತು ಸಂಪನ್ಮೂಲಗಳನ್ನು ತಯಾರಿಸುವ ಎಂ.ಎಸ್.ಎಂ.ಇ.ಗಳ ಮೂಲಕ ಹೆಚ್ಚಿನ ಸಂಖ್ಯೆಯ ಜನರು ಉದ್ಯೋಗವನ್ನು ಪಡೆಯುತ್ತಿದ್ದಾರೆ. ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ಎಂ.ಎಸ್‌.ಎಂ.ಇ.ಗಳನ್ನು ಬೆಂಬಲಿಸಿ ಬಲಪಡಿಸಲು ಬಜೆಟ್‌ನಲ್ಲಿ ಹಲವು ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ. ಪಿ.ಎಂ. ವಿಶ್ವಕರ್ಮ ಕೌಶಲ್ ಸಮ್ಮಾನ್ ಅಥವಾ ಪಿ.ಎಂ. ವಿಕಾಸ್ ಯೋಜನೆ ಇದಕ್ಕೊಂದು ಉದಾಹರಣೆಯಾಗಿದೆ. ಇದು ಕೈಯಿಂದ ಮಾಡುವ , ಹಸ್ತಕಲಾ ಕೌಶಲ್ಯ ಮತ್ತು ಕೈ ಉಪಕರಣಗಳನ್ನು ಹೊಂದಿರುವ ಜನರಿಗೆ ಉತ್ತಮ ಸಹಾಯ ಮಾಡುತ್ತದೆ. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಿಂದ ನಮ್ಮ ಯುವಕರಿಗೆ ನೀಡುವ ಆರ್ಥಿಕ ನೆರವಿನೊಂದಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುವುದು. ಆ ಮೂಲಕ ಅವರಿಗೆ ಹೊಸ ಮಾರುಕಟ್ಟೆಗಳನ್ನು ಸೃಷ್ಟಿಸಲಾಗುವುದು” ಎಂದು ಪ್ರಧಾನಮಂತ್ರಿಯವರು ಹೇಳಿದರು .

"ಹೃದಯಪೂರ್ವಕವಾಗಿ ಪ್ರಯತ್ನಗಳನ್ನು ಮಾಡಿದಾಗ, ಫಲಿತಾಂಶಗಳು ಖಚಿತವಾಗಿರುತ್ತವೆ. ಟೋಕಿಯೊ ಒಲಿಂಪಿಕ್ಸ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದ ಸಮಯದಲ್ಲಿ ದೇಶವು ಮಾಡಿದ ವಿವಿಧ ಪ್ರಯತ್ನಗಳನ್ನು , ಅವುಗಳ ಫಲಿತಾಂಶಗಳನ್ನು ಇಂದು ನಾವು ದೇಶದಾದ್ಯಂತ ಕಾಣಬಹುದು. ಜೈಪುರ ಮಹಾಖೇಲ್ ಸಮಯದಲ್ಲಿ ಮಾಡಿದ ಕ್ರೀಡಾ ಪ್ರಯತ್ನಗಳು ಭವಿಷ್ಯದಲ್ಲಿ ಖಂಡಿತಾ ಅದ್ಭುತ ಫಲಿತಾಂಶಗಳನ್ನು ನೀಡುತ್ತವೆ. ದೇಶಕ್ಕೆ ಮುಂದಿನ ಚಿನ್ನ ಮತ್ತು ಬೆಳ್ಳಿ ಪದಕ ವಿಜೇತರು ನಿಮ್ಮಿಂದಲೇ ಹೊರಹೊಮ್ಮುತ್ತಾರೆ. ಸಂಕಲ್ಪ ತೊಟ್ಟರೆ ಒಲಿಂಪಿಕ್ಸ್‌ ನಲ್ಲೂ ತ್ರಿವರ್ಣ ಧ್ವಜದ ವೈಭವ ಮೆರೆಯುತ್ತೀರಿ. ನೀವು ಎಲ್ಲಿಗೆ ಹೋದರೂ, ನೀವು ದೇಶಕ್ಕೆ ಪ್ರಶಸ್ತಿಗಳನ್ನು ತರುತ್ತೀರಿ. ನಮ್ಮ ಯುವಕರು ದೇಶದ ಯಶಸ್ಸನ್ನು ಬಹಳ ಮುಂದಕ್ಕೆ ಕೊಂಡೊಯ್ಯುತ್ತಾರೆ ಎಂದು ನನಗೆ ಖಾತ್ರಿಯಿದೆ” ಎಂದು ಹೇಳುತ್ತಾ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಜೈಪುರ ಗ್ರಾಮಾಂತರ ಲೋಕಸಭಾ ಸಂಸದರಾದ ಶ್ರೀ ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ:

ಈ ವರ್ಷ, ಜೈಪುರ ಮಹಾಖೇಲ್, ಕಬಡ್ಡಿ ಸ್ಪರ್ಧೆಯ ಮೇಲೆ ಕೇಂದ್ರೀಕರಿಸುತ್ತಿದ್ದು, ರಾಷ್ಟ್ರೀಯ ಯುವ ದಿನದಂದು ಅಂದರೆ ಜನವರಿ 12, 2023 ರಂದು ಪ್ರಾರಂಭವಾಯಿತು. ಇದು ಜೈಪುರ ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳ 450 ಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ ಗಳು, ಪುರಸಭೆಗಳು ಮತ್ತು ವಾರ್ಡ್‌ಗಳಿಂದ 6400 ಕ್ಕೂ ಹೆಚ್ಚು ಯುವಕರು ಮತ್ತು ಕ್ರೀಡಾಪಟುಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ. ಜೈಪುರದ ಯುವಕರಿಗೆ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲು ಮಹಾಖೇಲ್ ಅವಕಾಶವನ್ನು ಒದಗಿಸುತ್ತದೆ ಮತ್ತು ಕ್ರೀಡೆಗಳನ್ನು ವೃತ್ತಿಯಾಗಿ ಆಯ್ಕೆ ಮಾಡಲು ಅವರನ್ನು ಪ್ರೇರೇಪಿಸುತ್ತದೆ.

******



(Release ID: 1897296) Visitor Counter : 167