ಪ್ರಧಾನ ಮಂತ್ರಿಯವರ ಕಛೇರಿ

ಟರ್ಕಿಯಲ್ಲಿ ಇಂದು ಸಂಭವಿಸಿದ ಭೂಕಂಪವನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಿರುವ ಎಲ್ಲದಕ್ಕೂ ಸಹಾಯಹಸ್ತ ಚಾಚುವ ಪ್ರಧಾನಮಂತ್ರಿಯವರ ಸೂಚನೆಯ ಹಿನ್ನೆಲೆಯಲ್ಲಿ, ತಕ್ಷಣದ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲು ಪ್ರಧಾನ ಮಂತ್ರಿಯವರ ಕಛೇರಿಯಲ್ಲಿ ಸಭೆ ನಡೆಯಿತು


ಟರ್ಕಿ ಗಣರಾಜ್ಯ ಸರ್ಕಾರದ ಸಮನ್ವಯದೊಂದಿಗೆ ಶೋಧ ಮತ್ತು ಪಾರುಗಾಣಿಕಾ ತಂಡಗಳು, ವೈದ್ಯಕೀಯ ತಂಡಗಳು ಮತ್ತು ಪರಿಹಾರ ಸಾಮಗ್ರಿಗಳನ್ನು ಟರ್ಕಿಗೆ ಕಳುಹಿಸಲಾಗುವುದು

Posted On: 06 FEB 2023 2:34PM by PIB Bengaluru

ಟರ್ಕಿಯಲ್ಲಿ ಇಂದು ಸಂಭವಿಸಿದ ಭೂಕಂಪವನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನೀಡಿದ ಸೂಚನೆಗಳ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರು ತಕ್ಷಣದ ಪರಿಹಾರ ಕ್ರಮಗಳ ಕುರಿತು ಚರ್ಚಿಸಲು ಸೌತ್ ಬ್ಲಾಕ್ ನಲ್ಲಿ ಸಭೆ ನಡೆಸಿದರು. ಟರ್ಕಿ ಗಣರಾಜ್ಯ ಸರ್ಕಾರದ ಸಮನ್ವಯದೊಂದಿಗೆ ಎನ್ ಡಿ ಆರ್ ಎಫ್ ಮತ್ತು ವೈದ್ಯಕೀಯ ತಂಡಗಳ ಶೋಧ ಮತ್ತು ರಕ್ಷಣಾ ತಂಡಗಳನ್ನು ಪರಿಹಾರ ಸಾಮಗ್ರಿಗಳೊಂದಿಗೆ ತಕ್ಷಣ ರವಾನಿಸಲು ನಿರ್ಧರಿಸಲಾಯಿತು.

ಎನ್ ಡಿ ಆರ್ ಎಫ್ ನ 100 ಸಿಬ್ಬಂದಿ ಮತ್ತು ವಿಶೇಷವಾಗಿ ತರಬೇತಿ ಪಡೆದ ಶ್ವಾನದಳಗಳು ಹಾಗೂ ಅಗತ್ಯ ಸಲಕರಣೆಗಳನ್ನು ಒಳಗೊಂಡ ಎನ್ ಡಿ ಆರ್ ಎಫ್ ನ ಎರಡು ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಭೂಕಂಪ ಪೀಡಿತ ಪ್ರದೇಶಕ್ಕೆ ತರಳಲು ಸಿದ್ಧವಾಗಿವೆ. ಅಗತ್ಯ ಔಷಧಿಗಳೊಂದಿಗೆ ತರಬೇತಿ ಪಡೆದ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯೊಂದಿಗೆ ವೈದ್ಯಕೀಯ ತಂಡಗಳನ್ನು ಸಹ ಸಿದ್ಧಪಡಿಸಲಾಗುತ್ತಿದೆ. ಟರ್ಕಿ ಗಣರಾಜ್ಯ ಸರ್ಕಾರ ಮತ್ತು ಅಂಕಾರಾದಲ್ಲಿನ ಭಾರತೀಯ ರಾಯಭಾರ ಕಚೇರಿ ಮತ್ತು ಇಸ್ತಾಂಬುಲ್ ನಲ್ಲಿರುವ ಕಾನ್ಸುಲೇಟ್ ಜನರಲ್ ಕಚೇರಿಯ ಸಮನ್ವಯದೊಂದಿಗೆ ಪರಿಹಾರ ವಸ್ತುಗಳನ್ನು ರವಾನಿಸಲಾಗುವುದು.

ಕ್ಯಾಬಿನೆಟ್ ಕಾರ್ಯದರ್ಶಿ, ಗೃಹ ವ್ಯವಹಾರಗಳು, ಎನ್ ಡಿ ಎಂ ಎ, ಎನ್ ಡಿ ಆರ್ ಎಫ್, ರಕ್ಷಣಾ, ಎಂ ಇ ಎ, ನಾಗರಿಕ ವಿಮಾನಯಾನ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

*****



(Release ID: 1896655) Visitor Counter : 167