ರಾಷ್ಟ್ರಪತಿಗಳ ಕಾರ್ಯಾಲಯ
ಭಾರತೀಯ ಕಂದಾಯ ಸೇವೆ (ಸುಂಕ ಮತ್ತು ಪರೋಕ್ಷ ತೆರಿಗೆಗಳು), ಭಾರತೀಯ ನಾಗರಿಕ ಲೆಕ್ಕಪತ್ರ ಸೇವೆ, ಭಾರತೀಯ ರಕ್ಷಣಾ ಖಾತೆಗಳ ಸೇವೆ, ಭಾರತೀಯ ರೈಲ್ವೆ ಖಾತೆಗಳ ಸೇವೆ ಮತ್ತು ಭಾರತೀಯ ಅಂಚೆ ಮತ್ತು ದೂರಸಂಪರ್ಕ (ಹಣಕಾಸು ಮತ್ತು ಖಾತೆಗಳು) ಸೇವೆಯ ಪ್ರೊಬೇಷನರಿ ಅಧಿಕಾರಿಗಳಿಂದ ರಾಷ್ಟ್ರಪತಿಗಳ ಭೇಟಿ
Posted On:
03 FEB 2023 1:26PM by PIB Bengaluru
ಭಾರತೀಯ ಕಂದಾಯ ಸೇವೆ (ಸುಂಕ ಮತ್ತು ಪರೋಕ್ಷ ತೆರಿಗೆಗಳು), ಭಾರತೀಯ ನಾಗರಿಕ ಲೆಕ್ಕಪತ್ರ ಸೇವೆ, ಭಾರತೀಯ ರಕ್ಷಣಾ ಖಾತೆಗಳ ಸೇವೆ, ಭಾರತೀಯ ರೈಲ್ವೆ ಖಾತೆಗಳ ಸೇವೆ ಮತ್ತು ಭಾರತೀಯ ಅಂಚೆ ಮತ್ತು ದೂರಸಂಪರ್ಕ (ಹಣಕಾಸು ಮತ್ತು ಖಾತೆಗಳು) ಸೇವೆಯ ಪ್ರೊಬೇಷನರಿ ಅಧಿಕಾರಿಗಳು ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು.
ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಸರ್ಕಾರದ ಇಲಾಖೆಗಳ ಆಡಳಿತ ವ್ಯವಸ್ಥೆಯು ಹೆಚ್ಚು ದಕ್ಷ, ಜವಾಬ್ದಾರಿಯುತ ಮತ್ತು ಪಾರದರ್ಶಕ, ತಡೆರಹಿತವಾಗಿ ಸಾಗುತ್ತಿರುವಾಗ, ಕಂದಾಯ ಸೇವೆ ಮತ್ತು ವಿವಿಧ ಖಾತೆಗಳ ಸೇವೆಗಳು ಮೊದಲಿಗಿಂತ ದೊಡ್ಡ ಪಾತ್ರವನ್ನು ವಹಿಸಲಿವೆ. ಎರಡು ದಿನಗಳ ಹಿಂದೆ, ಕೇಂದ್ರ ಬಜೆಟ್ 2023-24ನ್ನು ಮಂಡಿಸಲಾಯಿತು, ಇದು ಮುಂಬರುವ ಹಣಕಾಸು ವರ್ಷಕ್ಕೆ ಸರ್ಕಾರದ ಹಣಕಾಸಿನ ಅಂದಾಜು ಲೆಕ್ಕಾಚಾರವನ್ನು ನೀಡುತ್ತದೆ. ಬಜೆಟ್ ನಾಗರಿಕರಿಗೆ-ವಿಶೇಷವಾಗಿ ಯುವಕರಿಗೆ ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಮತ್ತು ಅನೇಕ ಇತರ ರಾಷ್ಟ್ರೀಯ ಉದ್ದೇಶಗಳನ್ನು ಸಾಧಿಸುತ್ತದೆ. ಎಲ್ಲರೂ ತಮ್ಮ ತಮ್ಮ ಸೇವೆಗಳಲ್ಲಿ ಲೆಕ್ಕಪತ್ರ ನಿರ್ವಹಣೆ, ಲೆಕ್ಕಪರಿಶೋಧನೆ ಮತ್ತು ಬಜೆಟ್ ಮೂಲಕ ತೆರಿಗೆದಾರರ ಹಣದ ಪ್ರತಿ ರೂಪಾಯಿಯನ್ನು ದೇಶದ ಅಭಿವೃದ್ಧಿ ಮತ್ತು ಜನರ ಯೋಗಕ್ಷೇಮಕ್ಕಾಗಿ ಬಳಸುತ್ತಾರೆ ಎಂಬುದನ್ನು ಖಾತ್ರಿಪಡಿಸಬೇಕಾಗಿದೆ.
ಭಾರತೀಯ ಕಂದಾಯ ಸೇವೆಯ (ಸುಂಕ ಮತ್ತು ಪರೋಕ್ಷ ತೆರಿಗೆಗಳು) ಅಧಿಕಾರಿಗಳು ಸರ್ಕಾರದ ಪರೋಕ್ಷ ತೆರಿಗೆಗಳ ಸಂಗ್ರಹಣೆ ಮತ್ತು ಆಡಳಿತದ ಜವಾಬ್ದಾರಿಯುತ ಅಧಿಕಾರಿಗಳಾಗಿ ಸವಾಲಿನ ಕೆಲಸವನ್ನು ಹೊಂದಿರುತ್ತಾರೆ ಎಂದು ರಾಷ್ಟ್ರಪತಿಗಳು ಈ ಸಂದರ್ಭದಲ್ಲಿ ವಿಶೇಷವಾಗಿ ಹೇಳಿದರು. ತೆರಿಗೆ ಅನುಸರಣೆಯನ್ನು ಖಾತ್ರಿಪಡಿಸುವಲ್ಲಿ ಅವರ ಪಾತ್ರವು ಮುಖ್ಯವಾಗಿದೆ. ಇದು ಆರ್ಥಿಕ ಬೆಳವಣಿಗೆ ಮತ್ತು ಅಂತರ್ಗತ ಅಭಿವೃದ್ಧಿಗೆ ನಿರ್ಣಾಯಕ ಕೊಡುಗೆ ನೀಡುತ್ತದೆ. ಭಾರತೀಯ ಕಂದಾಯ ಸೇವೆಯ ಕಸ್ಟಮ್ಸ್ ಅಧಿಕಾರಿಗಳು ದೇಶದ 'ಆರ್ಥಿಕ ಗಡಿ'ಗಳ ರಕ್ಷಕರಾಗಿಯೂ ಕಾರ್ಯನಿರ್ವಹಿಸುತ್ತಾರೆ. ದೇಶವು ಎದುರಿಸುತ್ತಿರುವ ಮಾದಕವಸ್ತು ನಿಯಂತ್ರಣ, ಹಣ ವರ್ಗಾವಣೆ ಮತ್ತು ತೆರಿಗೆ ವಂಚನೆಯ ಸಮಸ್ಯೆಗಳನ್ನು ಎದುರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ತೆರಿಗೆಯು ಕೇವಲ ಸರ್ಕಾರದ ಆದಾಯವನ್ನು ಹೆಚ್ಚಿಸುವ ಸಾಧನವಲ್ಲ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕೆಂದು ಹೇಳಿದರು. ಇದು ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ವಿಮರ್ಶಾತ್ಮಕವಾಗಿ ಮುಖ್ಯವಾಗಿದೆ.
ಆಡಳಿತದಲ್ಲಿ ಹೊಣೆಗಾರಿಕೆಯನ್ನು ಜಾರಿಗೊಳಿಸಲು ಲೆಕ್ಕಪತ್ರ ನಿರ್ವಹಣೆ ಪ್ರಮುಖ ಸಾಧನವಾಗಿದೆ. ಉತ್ತಮ ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆಯು ಉತ್ತಮ ಆಡಳಿತದ ಆಧಾರವಾಗಿದೆ. ಭಾರತೀಯ ನಾಗರಿಕ, ರಕ್ಷಣಾ, ರೈಲ್ವೆ, ಅಂಚೆ ಮತ್ತು ದೂರಸಂಪರ್ಕ ಖಾತೆಗಳ ಸೇವೆಗಳ ಅಧಿಕಾರಿಗಳು ಸರ್ಕಾರದ ಸುಗಮ ಕಾರ್ಯನಿರ್ವಹಣೆಯನ್ನು ಕೈಗೊಳ್ಳಲು ಸಹಾಯ ಮಾಡುವ ದೃಢವಾದ ಹಣಕಾಸು ನಿರ್ವಹಣಾ ವ್ಯವಸ್ಥೆಯನ್ನು ನಿರ್ಮಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಸರ್ಕಾರದಲ್ಲಿ ಅವರ ಪಾತ್ರವು ಮಹತ್ತರವಾಗಿದೆ. ನೀವೆಲ್ಲರೂ ಅತ್ಯಂತ ಬದ್ಧತೆ ಮತ್ತು ಸಂಬಂಧಿತ ಕೌಶಲ್ಯಗಳೊಂದಿಗೆ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಪ್ರೊಬೆಷನರಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಜೊತೆಗೆ ಸೇವಾ ಪೂರೈಕೆಯಲ್ಲಿ ಹೆಚ್ಚಿನ ದಕ್ಷತೆಯ ನಿರೀಕ್ಷೆ ಜನರಲ್ಲಿ ಇತ್ತೀಚೆಗೆ ಹೆಚ್ಚಾಗಿದೆ. ಈ ನಿರೀಕ್ಷೆಗಳನ್ನು ಪೂರೈಸಲು, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವ ಮೂಲಕ ಸರ್ಕಾರಿ ಇಲಾಖೆಗಳು ತಮ್ಮ ವ್ಯವಸ್ಥೆಗಳನ್ನು ಆಧುನೀಕರಿಸುವುದು ಕಡ್ಡಾಯವಾಗಿದೆ. ಹೀಗಾಗಿ, ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಪ್ರಪಂಚದಲ್ಲಿ ಹೆಜ್ಜೆ ಇಡುವುದು ಸವಾಲಿನ ಕ್ಷೇತ್ರವಾಗಿದೆ. ಸೇವೆಗಳ ವ್ಯಾಪ್ತಿಯನ್ನು ಹೆಚ್ಚಿಸಲು, ನಾವು ನಮ್ಮ ಜ್ಞಾನ ಮತ್ತು ವ್ಯವಸ್ಥೆಗಳನ್ನು ನವೀಕರಿಸುತ್ತಲೇ ಇರಬೇಕಾಗುತ್ತದೆ. ನಮ್ಮ ಪಾವತಿ, ಲೆಕ್ಕಪತ್ರ ನಿರ್ವಹಣೆ ಮತ್ತು ತೆರಿಗೆ ಸಂಗ್ರಹ ವ್ಯವಸ್ಥೆಗಳನ್ನು ಸುಗಮ ಮತ್ತು ತಡೆರಹಿತವಾಗಿಸಲು ನಾವು ತಂತ್ರಜ್ಞಾನವನ್ನು ಹೇಗೆ ಅತ್ಯುತ್ತಮವಾಗಿ ಬಳಸಬಹುದು ಎಂಬುದನ್ನು ನೋಡಬೇಕಾಗಿದೆ. ಲೆಕ್ಕಪರಿಶೋಧನೆಯಲ್ಲಿ ತಪ್ಪುಗಳನ್ನು ಬಹಿರಂಗಪಡಿಸಲು ಐಟಿ ಸಾಧನಗಳನ್ನು ಬಳಸಿಕೊಳ್ಳುವುದು ಮಾತ್ರವಲ್ಲದೆ ವಿವಿಧ ಸರ್ಕಾರಿ ಯೋಜನೆಗಳ ಪ್ರಕ್ರಿಯೆಗಳು ಮತ್ತು ಫಲಿತಾಂಶಗಳನ್ನು ಮೌಲ್ಯಮಾಪನ ಮಾಡಲು ಮತ್ತು ಮೇಲ್ವಿಚಾರಣೆ ಮಾಡಲು ಬಳಸಲಾಗುತ್ತದೆ.
ರಾಷ್ಟ್ರವು ತನ್ನ ಮಾನವ ಸಂಪನ್ಮೂಲದ ಬಲದ ಮೇಲೆ ಪ್ರಗತಿ ಹೊಂದುತ್ತದೆ. ಅದು ಇತರ ಭೌತಿಕ ಸಂಪನ್ಮೂಲಗಳನ್ನು ಅತ್ಯುತ್ತಮ ರೀತಿಯಲ್ಲಿ ಕ್ರೋಢೀಕರಿಸುತ್ತದೆ. ಎಲ್ಲಾ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಸಮಗ್ರತೆ ಮತ್ತು ಬದ್ಧತೆಯಿಂದ ನಿರ್ವಹಿಸಬೇಕು. ಈ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ರಾಷ್ಟ್ರಪತಿಗಳು ಯುವ ಅಧಿಕಾರಿಗಳಿಗೆ ಸಲಹೆ ನೀಡಿದರು.
ರಾಷ್ಟ್ರಪತಿಗಳ ಭಾಷಣವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
*****
(Release ID: 1896027)