ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 29-12-2022 ರಂದು ಮಾಡಿದ ‘ಮನ್ ಕಿ ಬಾತ್’ – 97 ನೇ ಭಾಷಣದ ಕನ್ನಡ ಅವತರಣಿಕೆ 

Posted On: 29 JAN 2023 11:43AM by PIB Bengaluru

ನನ್ನ ಪ್ರಿಯ ದೇಶಬಾಂಧವರೆ, ನಮಸ್ಕಾರ. ಇದು 2023 ನೇ ಮೊದಲ ಮನದ ಮಾತು ಜೊತೆಗೆ ಈ ಕಾರ್ಯಕ್ರಮದ 97 ನೇ ಕಂತು ಇದಾಗಿದೆ. ನಿಮ್ಮೆಲ್ಲರೊಂದಿಗೆ ಮತ್ತೊಮ್ಮೆ ಮಾತನಾಡಿ ನನಗೆ ಬಹಳ ಸಂತೋಷವೆನಿಸುತ್ತಿದೆ. ಪ್ರತಿ ವರ್ಷ ಜನವರಿ ತಿಂಗಳು ಬಹಳಷ್ಟು ಕಾರ್ಯಕ್ರಮಗಳಿಂದ ತುಂಬಿ ತುಳುಕುತ್ತದೆ. ಈ ತಿಂಗಳಿನಲ್ಲಿ ಜನವರಿ 14 ರಂದು ಉತ್ತರದಿಂದ ದಕ್ಷಿಣದವರೆಗೆ ಮತ್ತು ಪೂರ್ವದಿಂದ ಪಶ್ಚಿಮದವರೆಗೆ ದೇಶಾದ್ಯಂತ ಹಬ್ಬಗಳ ಉತ್ಸಾಹವಿರುತ್ತದೆ. ಇದರ ನಂತರ ದೇಶ ತನ್ನ ಗಣರಾಜ್ಯೋತ್ಸವವನ್ನು ಆಚರಿಸುತ್ತದೆ. ಈ ವರ್ಷವೂ ಗಣರಾಜ್ಯೋತ್ಸವ ಸಮಾರಂಭದಲ್ಲಿ ಬಹಳಷ್ಟು ಅಂಶಗಳ ಬಗ್ಗೆ ಬಹಳಷ್ಟು ಪ್ರಶಂಸೆ ಮೂಡಿಬರುತ್ತಿದೆ. ಜೈಸಲ್ಮೇರ್ ನಿಂದ  ಪುಲ್ಕಿತ್ ಅವರು ನನಗೆ ಹೀಗೆ ಬರೆದಿದ್ದಾರೆ - ಜನವರಿ 26 ರ ಕವಾಯತಿನ ಸಂದರ್ಭದಲ್ಲಿ ಕಾರ್ಮಿಕರು ಕರ್ತವ್ಯ ಪಥವನ್ನು ನಿರ್ಮಿಸುತ್ತಿರುವುದನ್ನು ಕಂಡು ಬಹಳ ಸಂತೋಷವಾಯಿತು. ಕಾನ್ಪುರದಿಂದ ಜಯಾ ಅವರು ಮೆರವಣಿಗೆಯಲ್ಲಿ ಭಾರತೀಯ ಸಂಸ್ಕೃತಿಯ ವಿವಿಧ ಅಂಶಗಳನ್ನು ಬಿಂಬಿಸುವ ಸ್ಥಬ್ದ ಚಿತ್ರಗಳನ್ನು ಕಂಡು ಆನಂದಿಸಿರುವುದಾಗಿ ಬರೆದಿದ್ದಾರೆ. ಈ ಪರೇಡ್‌ನಲ್ಲಿ ಮೊದಲ ಬಾರಿಗೆ ಭಾಗವಹಿಸಿದ ಸಿಆರ್‌ಪಿಎಫ್‌ನ ಮಹಿಳಾ ತುಕಡಿ ಕೂಡ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದೆ. 

 ಸ್ನೇಹಿತರೇ, ಡೆಹ್ರಾಡೂನ್‌ನ ವತ್ಸಲ್ ಜೀ ಅವರು “ನಾನು ಯಾವಾಗಲೂ ಜನವರಿ 25 ಕ್ಕಾಗಿ ಕಾಯುತ್ತೇನೆ ಏಕೆಂದರೆ ಆ ದಿನದಂದು ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ ಮತ್ತು 25 ರ ಸಂಜೆಯೇ ಜನವರಿ 26 ರ ನನ್ನ ಉತ್ಸಾಹ ಮತ್ತಷ್ಟು ಹೆಚ್ಚುತ್ತದೆ” ಎಂದು ಬರೆದಿದ್ದಾರೆ. ಮೂಲ ಹಂತದಿಂದ ತಮ್ಮ ಸಮರ್ಪಣೆ ಮತ್ತು ಸೇವೆಯ ಮೂಲಕ ಸಾಧನೆ ಮಾಡಿದವರಿಗೆ ಕೊಡಮಾಡುವ ಪೀಪಲ್ಸ್ ಪದ್ಮ ಪ್ರಶಸ್ತಿ ಬಗ್ಗೆಯೂ ಅನೇಕರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಈ ಬಾರಿ ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ಬುಡಕಟ್ಟು ಸಮುದಾಯ ಮತ್ತು ಬುಡಕಟ್ಟು ಜೀವನದೊಂದಿಗೆ ಸಂಬಂಧವನ್ನು ಹೊಂದಿರುವ ಜನರ ಸಾಕಷ್ಟು ಪ್ರತಿನಿದಹಿತ್ವವಿತ್ತು. ಬುಡಕಟ್ಟು ಜನರ ಜೀವನವು ನಗರಗಳ ಗಡಿಬಿಡಿಗಿಂತ ಭಿನ್ನವಾಗಿದೆ, ಅದರ ಸವಾಲುಗಳು ಕೂಡಾ ವಭಿನ್ನವಾಗಿರುತ್ತವೆ. ಇದರ ಹೊರತಾಗಿಯೂ, ಬುಡಕಟ್ಟು ಸಮಾಜಗಳು ತಮ್ಮ ಸಂಪ್ರದಾಯಗಳನ್ನು ಉಳಿಸಲು ಯಾವಾಗಲೂ ಸನ್ನದ್ಧವಾಗಿರುತ್ತವೆ. ಬುಡಕಟ್ಟು ಸಮಾಜಗಳಿಗೆ ಸಂಬಂಧಿಸಿದ ವಸ್ತುಗಳ ಸಂರಕ್ಷಣೆ ಮತ್ತು ಅವುಗಳ ಮೇಲೆ ಸಂಶೋಧನೆಯ ಪ್ರಯತ್ನಗಳನ್ನು ಕೂಡಾ ಮಾಡಲಾಗುತ್ತದೆ. ಹೀಗೆ ಟೊಟೊ, ಕುಇ, ಕುವಿ ಮತ್ತು ಮಾಂಡಾದಂತಹ ಬುಡಕಟ್ಟು ಭಾಷೆಗಳ ಮೇಲೆ ಕೆಲಸ ಮಾಡಿದಂತಹ ಅನೇಕ ಮಹಾನುಭಾವರಿಗೆ ಪದ್ಮ ಪ್ರಶಸ್ತಿ ಲಭಿಸಿದೆ.  ಇದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ. ಧಾನಿರಾಮ್ ಟೊಟೊ, ಜಾನುಮ್ ಸಿಂಗ್ ಸೋಯ್ ಮತ್ತು ಬಿ ರಾಮಕೃಷ್ಣ ರೆಡ್ಡಿ ಇವರ ಹೆಸರು ಈಗ ಸಂಪೂರ್ಣ ದೇಶಕ್ಕೆ ಪರಿಚಿತವಾಗಿದೆ. ಸಿದ್ಧಿ, ಜಾರವಾ ಮತ್ತು ಓಂಗೆಯಂತಹ ಮೂಲ ಬುಡಕಟ್ಟು ಜನಾಂಗದವರೊಂದಿಗೆ ಕೆಲಸ ಮಾಡುವ ಹೀರಾಬಾಯಿ ಲೋಬಿ, ರತನ್ ಚಂದ್ರ ಕಾರ್ ಮತ್ತು ಈಶ್ವರ್ ಚಂದ್ರ ವರ್ಮಾರಂತಹ ಮಹನೀಯರಿಗೂ ಈ ಬಾರಿ ಸನ್ಮಾನಿಸಲಾಗಿದೆ. ಬುಡಕಟ್ಟು ಜನಾಂಗ ನಮ್ಮ ಭೂಮಿ, ನಮ್ಮ ಪರಂಪರೆಯ ಅವಿಭಾಜ್ಯ ಅಂಗವಾಗಿವೆ. ದೇಶ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಮಹತ್ವಪೂರ್ಣವಾಗಿದೆ. ಅವರಿಗಾಗಿ ಕೆಲಸ ಮಾಡುವ ವ್ಯಕ್ತಿತ್ವಗಳನ್ನು ಸನ್ಮಾನಿಸುವುದು ಹೊಸ ಪೀಳಿಗೆಗೂ ಪ್ರೇರಣೆ ನೀಡುತ್ತದೆ. ಈ ವರ್ಷ ಪದ್ಮ ಪ್ರಶಸ್ತಿಯ ನಿನಾದ ನಕ್ಸಲ್ ಪ್ರಭಾವಕ್ಕೆ ಒಳಗಾದಂತಹ ಪ್ರದೇಶಗಳಲ್ಲೂ ಮೊಳಗುತ್ತಿದೆ. ನಕ್ಸಲ್ ಪ್ರಭಾವಿತ ಕ್ಷೇತ್ರಗಳಲ್ಲಿ ದಾರಿ ತಪ್ಪಿದ ಯುವಜನತೆಗೆ ತಮ್ಮ ಪ್ರಯತ್ನದಿಂದ ಸೂಕ್ತ ಮಾರ್ಗವನ್ನು ತೋರಿದಂತಹವರಿಗೂ ಈ ಬಾರಿ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಹಿನ್ನಲೆಯಲ್ಲಿ ಕಾಂಕೇರ್ ನಲ್ಲಿ ಕಟ್ಟಿಗೆಯ ಮೇಲೆ ನಕ್ಷೆ ಬಿಡಿಸುವಅಜಯ್ ಕುಮಾರ್ ಮಾಂಡವಿ ಮತ್ತು ಗಡ್ಚಿರೋಲಿಯ ಪ್ರಸಿದ್ಧ ಝಾಡಿಪಟ್ಟಿ ರಂಭೂಮಿಯೊಂದಿಗೆ ಕೆಲಸ ಮಾಡುವ ಪರಶುರಾಮ್ ಕೋಮಾಜಿ ಖುಣೇ ಅವರಿಗೂ ಈ ಸನ್ಮಾನ ಲಭಿಸಿದೆ. ಇದೇ ರೀತಿ ಈಶಾನ್ಯ ಭಾಗದಲ್ಲಿ ತಮ್ಮ ಸಂಸ್ಕೃತಿಯ ರಕ್ಷಣೆಯಲ್ಲಿ ತೊಡಗಿರುವ ರಾಮ್ ಕುಯಿ ವಾಂಗ್ಬೆ ನಿವುಮೆ, ವಿಕ್ರಂ ಬಹಾದೂರ್ ಜಮಾತಿಯಾ ಮತ್ತು ಕರಮಾ ವಾಂಗ್ಚು ಅವರನ್ನೂ ಸನ್ಮಾನಿಸಲಾಗಿದೆ.   

ಸ್ನೇಹಿತರೇ, ಈ ಬಾರಿ ಪದ್ಮ ಪ್ರಶಸ್ತಿ ಪರಸ್ಕೃತರಾಗುವವರಲ್ಲಿ ಸಂಗೀತ ಲೋಕವನ್ನು ಮತ್ತಷ್ಟು ಸಮೃದ್ಧಗೊಳಿಸಿದಂಥವರೂ ಇದ್ದಾರೆ. ಯಾರಿಗೆ ತಾನೇ ಸಂಗೀತ ಷ್ಟವಾಗುವುದಿಲ್ಲ. ಪ್ರತಿಯೊಬ್ಬನ ಸಂಗೀತದ ಅಭಿರುಚಿ ಬೇರೆ ಬೇರೆಯಾಗಿರಬಹುದು ಆದರೆ ಸಂಗೀತ ಪ್ರತಿಯೊಬ್ಬರ ಜೀವನದ ಭಾಗವಾಗಿರುತ್ತದೆ.    ಈ ಬಾರಿ ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ಸಂತೂರ್, ಬಮ್ಹುಮ್, ದ್ವಿತಾರಾದಂತಹ ನಮ್ಮ ಪಾರಂಪರಿಕ ವಾದ್ಯಗಳ ನಿನಾದವನ್ನು ಪಸರಿಸುವಲ್ಲಿ ಪಾಂಡಿತ್ಯವನ್ನು ಹೊಂದಿರುವವರೂ ಸೇರಿದ್ದಾರೆ. ಗುಲಾಂ ಮೊಹಮ್ಮದ್ ಜಾಜ್, ಮೊವಾ ಸು-ಪೊಂಗ್, ರಿ ಸಿಂಹಬೊರ್ ಕುರಕಾ-ಲಾಂಗ್, ಮುನಿವೆಂಕಟಪ್ಪ ಮತ್ತು ಮಂಗಲ ಕಾಂತಿ ರಾಯ್ ಇಂಥ ಅದೆಷ್ಟೋ ವ್ಯಕ್ತಿಗಳ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. 

ಸ್ನೇಹಿತರೇ, ಪದ್ಮ ಪ್ರಶಸ್ತಿ ಪರಸ್ಕೃತರಲ್ಲಿ ಅನೇಕರು, ನಮ್ಮ ಮಧ್ಯೆಯೇ ಇದ್ದು ಎಂದೆಂದಿಗೂ ದೇಶಕ್ಕೆ ಪ್ರಥಮ ಆದ್ಯತೆ ನೀಡಿದಂತಹವರಾಗಿದ್ದಾರೆ, ದೇಶ ಮೊದಲು ಎಂಬ ಸಿದ್ಧಾಂತಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರು ಸೇವಾಭಾವನೆಯಿಂದ ತಮ್ಮ ಕೆಲಸದಲ್ಲಿ ತೊಡಗಿದ್ದರು ಮತ್ತು ಇದಕ್ಕಾಗಿ ಎಂದಿಗೂ ಪ್ರಶಸ್ತಿ ಪುರಸ್ಕಾರಗಳ ಅಪೇಕ್ಷೆಪಟ್ಟವರಲ್ಲ. ಅವರು ಯಾರಿಗಾಗಿ ಕೆಲಸ ಮಾಡುತ್ತಿದ್ದಾರೆ ಅವರ ಮುಖದ ಮೇಲಿನ ಮಂದಹಾಸವೇ ಅವರಿಗೆ ಬಹುದೊಡ್ಡ ಪ್ರಶಸ್ತಿಯಾಗಿದೆ. ಇಂಥ ಸಮರ್ಪಿತ ಜನರನ್ನು ಸನ್ಮಾನ ಮಾಡುವ ಮೂಲಕ ನಾವು ದೇಶವಾಸಿಗಳ ಗೌರವ ಮತ್ತಷ್ಟು ಹೆಚ್ಚಿದೆ. ನಾನು ಎಲ್ಲ ಪದ್ಮ ಪುರಸ್ಕೃತರ ಹೆಸರುಗಳನ್ನು ಇಲ್ಲಿ ಪ್ರಸ್ತಾಪಿಸಲಾಗುವುದಿಲ್ಲ ಆದರೆ, ನೀವು ಪದ್ಮ ಪುರಸ್ಕೃತರ ಜೀವನದ ಬಗ್ಗೆ ವಿಸ್ತೃತವಾಗಿ ಅರಿಯಿರಿ ಮತ್ತು ಇನ್ನುಳಿದವರಿಗೂ ಅದರ ಬಗ್ಗೆ ತಿಳಿಸಿ ಎಂದು ನಾನು ಆಗ್ರಹಿಸುತ್ತೇನೆ     

ಸ್ನೇಹಿತರೇ ಇಂದು ನಾವು ಆಜಾದಿ ಕೆ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಗಣರಾಜ್ಯೋತ್ಸವದ ಬಗ್ಗೆ ಚರ್ಚಿಸುತ್ತಿರುವಾಗ, ಒಂದು ಆಸಕ್ತಿದಾಯಕ ಪುಸ್ತಕದ ಬಗ್ಗೆ ಪ್ರಸ್ತಾಪಿಸಬಯಸುತ್ತೇನೆ. ಕೆಲ ವಾರಗಳ ಹಿಂದೆ ನನಗೆ ದೊರೆತ  ಪುಸ್ತಕದಲ್ಲಿ ಒಂದು ಆಸಕ್ತಿಕರ ವಿಷಯದ ಬಗ್ಗೆ ಚರ್ಚಿಸಲಾಗಿದೆ. ಈ ಪುಸ್ತಕದ ಹೆಸರು “ಇಂಡಿಯಾ ದಿ ಮದರ್ ಆಫ್ ಡೆಮಾಕ್ರಸಿ” ಎಂದಿದೆ.  ಇದರಲ್ಲಿ ಬಹಳಷ್ಟು ಉತ್ತಮ ಪ್ರಬಂಧಗಳಿವೆ. ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ ಮತ್ತು ನಾವು ಭಾರತೀಯರಿಗೆ ನಮ್ಮ ದೇಶ ಮದರ್ ಆಫ್ ಡೆಮಾಕ್ರಸಿ ಬಗ್ಗೆ ಬಹಳ ಹೆಮ್ಮೆಯಿದೆ. ಪ್ರಜಾಪ್ರಭುತ್ವ ನಮ್ಮ ನರನಾಡಿಗಳಲ್ಲಿದೆ, ನಮ್ಮ ಸಂಸ್ಕೃತಿಯಲ್ಲಿದೆ. ಶತಮಾನಗಳಿಂದ ಇದು ನಮ್ಮ ಕಾರ್ಯವೈಖರಿಯ ಅವಿಭಾಜ್ಯ ಅಂಗವಾಗಿದೆ. ಸ್ವಭಾವತಃ ನಾವು ಒಂದು ಪ್ರಜಾಪ್ರಭುತ್ವ ಸಮಾಜವಾಗಿದ್ದೇವೆ. ಡಾ. ಅಂಬೇಡ್ಕರ್ ಅವರು ಬೌದ್ಧ ಭಿಕ್ಷುಗಳ ಸಂಘದ ಸಾಮ್ಯತೆಯನ್ನು ಭಾರತೀಯ ಸಂಸತ್ತಿಗೆ ಹೋಲಿಸಿದ್ದರು. ನಡೆ, ನಿರ್ಣಯಗಳು, ಸರ್ವಾನುಮತ, ಮತದಾನ ಮತ್ತು ಮತಗಳ ಎಣಿಕೆಗಳಿಗೆ ಅನೇಕ ನಿಯಮಗಳನ್ನು ಹೊಂದಿದ ದು ಸಂಸ್ಥೆ ಎಂದು ಅವರು ಅದನ್ನು ಬಣ್ಣಿಸಿದ್ದರು. ಭಗವಾನ್ ಬುದ್ಧನಿಗೆ ಇದರ ಪ್ರೇರಣೆ ಅಂದಿನ ರಾಜನೈತಿಕ ವ್ಯವಸ್ಥೆಗಳಿಂದ ದೊರೆತಿರಬಹುದು ಎಂಬುದು ಬಾಬಾಸಾಹೇಬರ ನಂಬಿಕೆಯಾಗಿತ್ತು.   

ತಮಿಳುನಾಡಿನಲ್ಲಿ ಉತಿರಮೆರೂರ್ ಎಂಬ ಒಂದು ಪುಟ್ಟ ಆದರೆ ಪ್ರಸಿದ್ಧ ಗ್ರಾಮವಿದೆ. ಇಲ್ಲಿರುವ 1100-1200 ವರ್ಷಗಳ ಹಿಂದಿನ ಕಲ್ಲಿನ ಶಾಸನವೊಂದು ಇಡೀ ವಿಶ್ವವನ್ನೇ ಅಚ್ಚರಿಗೊಳಿಸುತ್ತಿದೆ. ಈ ಶಿಲಾಶಾಸನ ಒಂದು ಪುಟ್ಟ  ಸಂವಿಧಾನದಂತಿದೆ. ದರಲ್ಲಿ ಗ್ರಾಮ ಸಭೆಯನ್ನು ಹೇಗೆ ನಡೆಸಬೇಕು ಮತ್ತು ಅದರ ಸದಸ್ಯರ ಆಯ್ಕೆ ಪ್ರಕ್ರಿಯೆ ಹೇಗಿರಬೇಕು ಎಂಬುದನ್ನು ವಿವರವಾಗಿ ವಿವರಿಸಲಾಗಿದೆ. ನಮ್ಮ ದೇಶದ ಇತಿಹಾಸದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಮತ್ತೊಂದು ಉದಾಹರಣೆಯೆಂದರೆ - 12 ನೇ ಶತಮಾನದ ಭಗವಾನ್ ಬಸವೇಶ್ವರರ ಅನುಭವ ಮಂಟಪ. ಇಲ್ಲಿ ಮುಕ್ತ ಸಂವಾದ ಮತ್ತು ಚರ್ಚೆಗೆ ಉತ್ತೇಜನ ನೀಡಲಾಗುತ್ತಿತ್ತು. ಇದು ಮ್ಯಾಗ್ನಾ ಕಾರ್ಟಾಕ್ಕಿಂತ ಮುಂಚೆಯೇ ಅಸ್ತಿತ್ವದಲ್ಲಿತ್ತು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ವಾರಂಗಲ್‌ನ ಕಾಕತೀಯ ರಾಜವಂಶದ ರಾಜರ ಗಣರಾಜ್ಯ ಸಂಪ್ರದಾಯಗಳು ಸಹ ಬಹಳ ಪ್ರಸಿದ್ಧವಾಗಿದ್ದವು. ಭಕ್ತಿ ಚಳುವಳಿಯು ಪಶ್ಚಿಮ ಭಾರತದಲ್ಲಿ ಪ್ರಜಾಪ್ರಭುತ್ವದ ಸಂಸ್ಕೃತಿಯನ್ನು ವೃದ್ಧಿಸಿತ್ತು. ಗುರುನಾನಕ್ ದೇವ್ ಜಿ ಯವರ ಒಮ್ಮತದಿಂದ ತೆಗೆದುಕೊಂಡ ನಿರ್ಧಾರಗಳ ಮೇಲೆ ಬೆಳಕು ಚೆಲ್ಲುವ ಸಿಖ್ ಪಂಥ್‌ನ ಪ್ರಜಾಪ್ರಭುತ್ವ ಮನೋಭಾವದ ಕುರಿತಾದ ಲೇಖನವನ್ನು ಸಹ ಪುಸ್ತಕದಲ್ಲಿ ಸೇರಿಸಲಾಗಿದೆ. ಮಧ್ಯ ಭಾರತದ ಉರಾಂವ್ ಮತ್ತು ಮುಂಡಾ ಬುಡಕಟ್ಟುಗಳಲ್ಲಿ ಸಮುದಾಯ ಚಾಲಿತ ಮತ್ತು ಒಮ್ಮತದ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಕೂಡಾ ಈ ಪುಸ್ತಕದಲ್ಲಿ ಉತ್ತಮ ಮಾಹಿತಿ ಲಭ್ಯವಿದೆ. ನೀವು ಈ ಪುಸ್ತಕ ಓದಿದ ಮೇಲೆ ದೇಶದ ಎಲ್ಲ ಭಾಗಗಳಲ್ಲಿ ಶತಮಾನಗಳಿಂದ ಹೇಗೆ ಪ್ರಜಾಸತ್ತಾತ್ಮಕ ಭಾವನೆ ಪ್ರವಹಿಸುತ್ತಿದೆ ಎಂಬುದು ಅನುಭವಕ್ಕೆ ಬರುತ್ತದೆ. Mother of Democracy ಯ ರೂಪದಲ್ಲಿ, ನಾವು ನಿರಂತರವಾಗಿ ಈ ವಿಷಯದ ಬಗ್ಗೆ ಆಳವಾಗಿ ಯೋಚಿಸಬೇಕು, ಚರ್ಚಿಸಬೇಕು ಮತ್ತು ವಿಶ್ವಕ್ಕೆ ಅದರ ಅರಿವೂ ಮೂಡಿಸಬೇಕಿದೆ. ಇದರಿಂದ ದೇಶದಲ್ಲಿ ಪ್ರಜಾಪ್ರಭುತ್ವದ ಭಾವನೆ ಮತ್ತಷ್ಟು ಬಲಗೊಳ್ಳುತ್ತದೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಯೋಗ ದಿನ ಮತ್ತು ನಮ್ಮ ವಿವಿಧ ರೀತಿಯ ಗಟ್ಟಿ ಧಾನ್ಯಗಳು – ಸಿರಿ ಧಾನ್ಯಗಳ ನಡುವೆ ಏನು ಸಾಮಾನ್ಯ ಅಂಶವಿದೆ ಎಂದು ನಾನು ನಿಮ್ಮನ್ನು ಕೇಳಿದರೆ, ಇದೆಂಥ ಹೋಲಿಕೆ ಎಂದು ನೀವು ಯೋಚಿಸುತ್ತೀರಿ? ಎರಡರಲ್ಲೂ ಸಾಮ್ಯತೆ ಇದೆ ಎಂದು ನಾನು ಹೇಳಿದರೆ, ನಿಮಗೆ ಆಶ್ಚರ್ಯವಾಗುತ್ತದೆ. ವಾಸ್ತವದಲ್ಲಿ ವಿಶ್ವಸಂಸ್ಥೆಯು, ಭಾರತದ ಪ್ರಸ್ತಾಪದ ನಂತರ ಅಂತರರಾಷ್ಟ್ರೀಯ ಯೋಗ ದಿನ ಮತ್ತು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎರಡರ ನಿರ್ಧಾರವನ್ನು ತೆಗೆದುಕೊಂಡಿದೆ. ಎರಡನೆಯದಾಗಿ, ಯೋಗವು ಆರೋಗ್ಯಕ್ಕೆ  ಸಂಬಂಧಿಸಿದ್ದಾಗಿದೆ ಮತ್ತು ಸಿರಿಧಾನ್ಯಗಳು ಕೂಡ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮೂರನೆಯ ವಿಷಯವು ಹೆಚ್ಚು ಮಹತ್ವಪೂರ್ಣವಾಗಿದೆ- ಎರಡೂ ಅಭಿಯಾನಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯಿಂದಾಗಿ ಕ್ರಾಂತಿ ಮೂಡುತ್ತಿದೆ. ಜನರು ಹೆಚ್ಚಿನ ಪ್ರಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಯೋಗ ಮತ್ತು ದೇಹದಾರ್ಢ್ಯವನ್ನು ತಮ್ಮ ಜೀವನದ ಭಾಗವಾಗಿಸಿಕೊಂಡಂತೆ, ಜನರು ದೊಡ್ಡ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಕೂಡಾ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಜನರು ಈಗ ಸಿರಿಧಾನ್ಯಗಳನ್ನು ತಮ್ಮ ಆಹಾರದಲ್ಲಿ  ಸೇರಿಸಿಕೊಳ್ಳುತ್ತಿದ್ದಾರೆ. ಈ ಬದಲಾವಣೆಯ ದೊಡ್ಡ ಪರಿಣಾಮವೂ ಗೋಚರಿಸುತ್ತಿದೆ. ಸಾಂಪ್ರದಾಯಿಕವಾಗಿ ಸಿರಿಧಾನ್ಯಗಳ ಉತ್ಪಾದನೆ ಮಾಡುತ್ತಿದ್ದ ಸಣ್ಣ ರೈತರು ಉತ್ಸಾಹಭರಿತರಾಗಿದ್ದಾರೆ. ವಿಶ್ವ ಇಂದು ಸಿರಿಧಾನ್ಯಗಳ ಮಹತ್ವವನ್ನು ಅರಿತುಕೊಳ್ಳಲು ಪ್ರಾರಂಭಿಸಿದೆ ಎಂದು ಅವರು ತುಂಬಾ ಸಂತೋಷಪಡುತ್ತಿದ್ದಾರೆ. ಮತ್ತೊಂದೆಡೆ, ಎಫ್‌ಪಿಒಗಳು ಮತ್ತು ಉದ್ಯಮಿಗಳು ಸಿರಿಧಾನ್ಯಗಳನ್ನು ಮಾರುಕಟ್ಟೆಗೆ ತಲುಪಿಸುವ ಮತ್ತು ಜನರಿಗೆ ಲಭ್ಯವಾಗುವಂತೆ ಮಾಡುವ ಪ್ರಯತ್ನಗಳನ್ನು ಆರಂಭಿಸಿದ್ದಾರೆ. 

ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯ ನಿವಾಸಿ ಕೆ.ವಿ. ರಾಮ ಸುಬ್ಬಾರೆಡ್ಡಿ ಅವರು ಸಿರಿಧಾನ್ಯಗಳಿಗಾಗಿ ಉತ್ತಮ ಸಂಬಳದ ಉದ್ಯೋಗವನ್ನು ತೊರೆದರು. ಅಮ್ಮನ ಕೈಯಿಂದ ಮಾಡಿದ ಸಿರಿಧಾನ್ಯಗಳ ರುಚಿ ಎಷ್ಟಿತ್ತೆಂದರೆ ಅವರು ತಮ್ಮ ಗ್ರಾಮದಲ್ಲಿ ಸಜ್ಜೆಯ ಸಂಸ್ಕರಣಾ ಘಟಕವನ್ನೇ ಪ್ರಾರಂಭಿಸಿದರು. ಸುಬ್ಬಾರೆಡ್ಡಿ ಅವರು ಸಿರಿಧಾನ್ಯಗಳ ಪ್ರಯೋಜನಗಳನ್ನು ಜನರಿಗೆ ತಿಳಿಸುತ್ತಿದ್ದಾರೆ ಮತ್ತು ಅವು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಅಲಿಬಾಗ್ ಸಮೀಪದ ಕೆನಾಡ್ ಗ್ರಾಮದ ನಿವಾಸಿ ಶರ್ಮಿಳಾ ಓಸ್ವಾಲ್ ಕಳೆದ 20 ವರ್ಷಗಳಿಂದ ಸಿರಿಧಾನ್ಯಗಳ ಉತ್ಪಾದನೆ ಮೂಲಕ ವಿಶಿಷ್ಟ ರೀತಿಯ ಕೊಡುಗೆ ನೀಡುತ್ತಿದ್ದಾರೆ. ರೈತರಿಗೆ ಸ್ಮಾರ್ಟ್ ಕೃಷಿಯ ತರಬೇತಿ ನೀಡುತ್ತಿದ್ದಾರೆ. ಇವರ ಪ್ರಯತ್ನದಿಂದ ಸಿರಿಧಾನ್ಯಗಳ ಇಳುವರಿ ಮಾತ್ರವಲ್ಲದೆ ರೈತರ ಆದಾಯವೂ ಹೆಚ್ಚಿದೆ.

ಛತ್ತೀಸ್‌ಗಢದ ರಾಯ್‌ಗಡ್‌ಗೆ ಭೇಟಿ ನೀಡುವ ಅವಕಾಶ ನಿಮಗೆ ದೊರೆತರೆ, ನೀವು ಮಿಲೆಟ್ಸ್ ಕೆಫೆಗೆ ಖಂಡಿತ ಭೇಟಿ ನೀಡಿ. ಕೆಲವು ತಿಂಗಳ ಹಿಂದೆ ಆರಂಭವಾದ ಈ ಮಿಲ್ಲೆಟ್ಸ್ ಕೆಫೆಯಲ್ಲಿ ಚೀಲಾ, ದೋಸೆ, ಮೊಮೊಸ್, ಪಿಜ್ಜಾ, ಮಂಚೂರಿಯನ್ ಮುಂತಾದ ವಸ್ತುಗಳು ಹೆಚ್ಚು ಜನಪ್ರಿಯವಾಗುತ್ತಿವೆ. 

ನಾನು ನಿಮಗೆ ಇನ್ನೊಂದು ವಿಷಯ ಕೇಳಬಹುದೇ? ನೀವು ಉದ್ಯಮಿ ಎಂಬ ಪದವನ್ನು ಕೇಳಿರಬೇಕು, ಆದರೆ ನೀವು Milletpreneurs ಅನ್ನು ಕೇಳಿದ್ದೀರಾ? ಒಡಿಶಾದ Milletpreneurs ಇತ್ತೀಚಿನ ದಿನಗಳಲ್ಲಿ ಬಹಳ ಚರ್ಚೆಯಲ್ಲಿದ್ದಾರೆ. ಬುಡಕಟ್ಟು ಜಿಲ್ಲೆ ಸುಂದರ್‌ಗಢ್‌ನ ಸಮೀಪ ಸುಮಾರು 1500 ಮಹಿಳೆಯರ ಸ್ವಸಹಾಯ ಗುಂಪೊಂದು ಒಡಿಶಾ ಮಿಲೆಟ್ಸ್ ಮಿಷನ್‌ ಜೊತೆಗೆ ಕೈಜೋಡಿಸಿದೆ. ಇಲ್ಲಿ ಮಹಿಳೆಯರು ಸಿರಿಧಾನ್ಯಗಳಿಂದ ಕುಕ್ಕೀಸ್, ರಸಗುಲ್ಲಾ, ಗುಲಾಬ್ ಜಾಮೂನ್ ಮತ್ತು ಕೇಕ್ ಕೂಡಾ ತಯಾರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿಂದಾಗಿ, ಮಹಿಳೆಯರ ಆದಾಯವೂ ಹೆಚ್ಚುತ್ತಿದೆ.

ಕರ್ನಾಟಕದ ಕಲಬುರ್ಗಿಯಲ್ಲಿರುವ ಆಳಂದ ಭೂತಾಯಿ (ಆಳಂದ್ ಭೂತಾಯಿ) ಮಿಲೆಟ್ಸ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿಯು ಕಳೆದ ವರ್ಷ ಭಾರತೀಯ ಸಿರಿಧಾನ್ಯಗಳ ಸಂಶೋಧನಾ ಸಂಸ್ಥೆ ಮೇಲ್ವಿಚಾರಣೆಯಲ್ಲಿ ಕೆಲಸವನ್ನು ಪ್ರಾರಂಭಿಸಿತು. ಇಲ್ಲಿನ ಖಾಕ್ರಾ, ಬಿಸ್ಕೆಟ್, ಲಡ್ಡೂಗಳನ್ನು ಜನರು ಇಷ್ಟಪಡುತ್ತಿದ್ದಾರೆ. ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ, ಹುಲ್ಸೂರು ಉತ್ಪಾದಕ ಕಂಪನಿಗೆ ಸೇರಿದ ಮಹಿಳೆಯರು ಸಿರಿಧಾನ್ಯ ಕೃಷಿಯ ಜೊತೆಗೆ ಅವರ ಹಿಟ್ಟನ್ನು ಸಿದ್ಧಪಡಿಸುತ್ತಿದ್ದಾರೆ. ಇದರಿಂದಾಗಿ ಅವರ ಆದಾಯವೂ ಸಾಕಷ್ಟು ಹೆಚ್ಚಿದೆ. ನೈಸರ್ಗಿಕ ಕೃಷಿ ಕೈಗೊಳ್ಳುತ್ತಿರುವ ಛತ್ತೀಸ್‌ಗಢದ ಸಂದೀಪ್ ಶರ್ಮಾ ಅವರ ಎಫ್‌ಪಿಒ ಜೊತೆಗೆ  ಇಂದು 12 ರಾಜ್ಯಗಳ ಕೃಷಿಕರು ಕೈಜೋಡಿಸಿದ್ದಾರೆ. ಬಿಲಾಸ್‌ಪುರದ ಎಫ್‌ಪಿಒ 8 ಬಗೆಯ ಸಿರಿಧಾನ್ಯಗಳ  ಹಿಟ್ಟು ಮತ್ತು ಅದರ ಭಕ್ಷ್ಯಗಳನ್ನು ತಯಾರಿಸುತ್ತಿದೆ.

ಸ್ನೇಹಿತರೇ, ಇಂದು ಭಾರತದ ಮೂಲೆ ಮೂಲೆಯಲ್ಲಿ ನಿರಂತರವಾಗಿ G-20 ಶೃಂಗಸಭೆಗಳು ನಡೆಯುತ್ತಿವೆ ಮತ್ತು G-20 ಶೃಂಗಸಭೆ ನಡೆಯುವಲ್ಲೆಲ್ಲಾ, ಸಿರಿಧಾನ್ಯಗಳಿಂದ ಮಾಡಿದ ಪೌಷ್ಟಿಕ ಮತ್ತು ರುಚಿಕರವಾದ ಭಕ್ಷ್ಯಗಳನ್ನು ಉಣಬಡಿಸಲಾಗುತ್ತಿದೆ ಎಂಬುದು ನನಗೆ ಸಂತೋಷವನ್ನು ನೀಡುತ್ತದೆ. ಇಲ್ಲಿ ತಯಾರಿಸಿದ ಸಜ್ಜೆಯಿಂದ ತಯಾರಿಸಿದ ಖಿಚಡಿ, ಪೋಹಾ, ಖೀರ್ ಮತ್ತು ರೊಟ್ಟಿಯಂತಹ ಖಾದ್ಯಗಳ ಜೊತೆ ಜೊತೆಗೆ ರಾಗಿಯಿಂದ ತಯಾರಿಸಿದ ಪಾಯಸ, ಪೂರಿ ಮತ್ತು ದೋಸೆಗಳನ್ನು ಸಹ ಉಣಬಡಿಸಲಾಗುತ್ತದೆ. G20 ನಡೆಯುತ್ತಿರುವ ಎಲ್ಲ ಸ್ಥಳಗಳಲ್ಲೂ ಸಿರಿಧಾನ್ಯಗಳ ಪ್ರದರ್ಶನಗಳಲ್ಲಿ ಸಿರಿಧಾನ್ಯಗಳಿಂದ ತಯಾರಿಸಲಾದ ಆರೋಗ್ಯ ಪಾನೀಯಗಳು, ಧಾನ್ಯಗಳು ಮತ್ತು ನೂಡಲ್ಸ್ ಅನ್ನು ಪ್ರದರ್ಶಿಸಲಾಗುತ್ತಿದೆ. ಪ್ರಪಂಚದಾದ್ಯಂತದ ಭಾರತೀಯ ಮಿಷನ್‌ಗಳು ಇವುಗಳ ಜನಪ್ರಿಯತೆಯನ್ನು ಹೆಚ್ಚಿಸಲು ಬಹಳಷ್ಟು ಪ್ರಯತ್ನ ಮಾಡುತ್ತಿವೆ. ದೇಶದ ಈ ಪ್ರಯತ್ನ ಮತ್ತು ವಿಶ್ವಾದ್ಯಂತ ಹೆಚ್ಚುತ್ತಿರುವ ಸಿರಿಧಾನ್ಯ ಬೇಡಿಕೆಯು ನಮ್ಮ ಸಣ್ಣಪುಟ್ಟ ರೈತರಿಗೆ ಷ್ಟೊಂದು ಬಲವನ್ನು ನೀಡಲಿದೆ ಎಂದು ನೀವು ಊಹಿಸಬಹುದು. ಇಂದು ಸಿರಿಧಾನ್ಯಗಳಿಂದ ಸಿದ್ಧಪಡಿಸಲಾಗುತ್ತಿರುವ ವಿವಿಧ ರೀತಿಯ ಹೊಸ ತಿಂಡಿ ತಿನಿಸುಗಳು ಯುವ ಪೀಳಿಗೆಗೆ ಕೂಡಾ ಅಷ್ಟೇ ಇಷ್ಟವಾಗುತ್ತಿರುವುದನ್ನು ಕಂಡು  ನನಗೂ ಬಹಳ ಸಂತೋಷವೆನಿಸಿದೆ. ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನು ಅದ್ಭುತವಾಗಿ ಪ್ರಾರಂಭಿಸಿದ್ದಕ್ಕಾಗಿ ಮತ್ತು ಅದನ್ನು ನಿರಂತರವಾಗಿ ಮುನ್ನಡೆಸುತ್ತಿರುವುದಕ್ಕಾಗಿ ನಾನು 'ಮನದ ಮಾತಿನ' ಶ್ರೋತೃಗಳನ್ನು ಅಭಿನಂದಿಸುತ್ತೇನೆ.ನನ್ನ ಪ್ರೀತಿಯ ದೇಶವಾಸಿಗಳೇ, ನಿಮ್ಮೊಂದಿಗೆ ಯಾರಾದರೂ ಟೂರಿಸ್ಟ್ ಹಬ್ ಗೋವಾ ಬಗ್ಗೆ ಮಾತನಾಡಿದಾಗ, ನಿಮಗೆ ಏನು ನೆನಪಿಗೆ ಬರುತ್ತದೆ?  ಗೋವಾ ಹೆಸರು ಕೇಳುತ್ತಲೇ ಎಲ್ಲಕ್ಕಿಂತ ಮೊದಲು ಅಲ್ಲಿನ ಸುಂದರ ಕರಾವಳಿ, ಸಮುದ್ರ ತೀರಗಳು ಮತ್ತು ರುಚಿಯಾದ ಊಟ ತಿಂಡಿಗಳ ನೆನಪು ಬರುವುದು ಸರ್ವೇಸಾಮಾನ್ಯ. ಆದರೆ ಈ ಬಾರಿ ಗೋವಾದಲ್ಲಿ ಮತ್ತೊಂದು ಘಟನೆ ಕೂಡಾ ನಡೆದಿದ್ದು ಅದು ಬಹಳ ಮುಖ್ಯವಾದ ವಿಷಯವಾಗಿತ್ತು. ಇಂದು ಮನದ ಮಾತಿನಲ್ಲಿ ನಾನು ನಿಮ್ಮೊಂದಿಗೆ ಈ ವಿಷಯ ಹಂಚಿಕೊಳ್ಳಲು ಬಯಸುತ್ತೇನೆ. ಗೋವಾದಲ್ಲಿ ಆಯೋಜನೆಯಾಗಿದ್ದ ಈ ಕಾರ್ಯಕ್ರಮವೆಂದರೆ – ಪರ್ಪಲ್ ಫೆಸ್ಟ್. ಈ ನೇರಳೆ ಉತ್ಸವ ಅಥವಾ ಪರ್ಪಲ್ ಫೆಸ್ಟ್ ಅನ್ನು ಗೋವಾದ ಪಣಜಿಯಲ್ಲಿ ಇದೇ ತಿಂಗಳು ಅಂದರೆ ಜನವರಿ 6 ರಿಂದ 8 ರವರೆಗೆ ಆಯೋಜಿಸಲಾಗಿತ್ತು. ದಿವ್ಯಾಂಗರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಇದೊಂದು ಬಹಳ ವಿಶಿಷ್ಟವಾದ ಪ್ರಯತ್ನವಾಗಿತ್ತು. 50 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ನಮ್ಮ ಸೋದರ ಸೋದರಿಯರು ಇದರಲ್ಲಿ ಪಾಲ್ಗೊಂಡಿದ್ದರೆಂದು ತಿಳಿದಾಗ ಈ ಪರ್ಪಲ್ ಫೆಸ್ಟ್ ಎಷ್ಟು ದೊಡ್ಡ ಅವಕಾಶವಾಗಿತ್ತೆಂಬ ಅಂದಾಜು ನಿಮಗೆ ದೊರೆಯುತ್ತದೆ. ಇಲ್ಲಿಗೆ ಬಂದಿದ್ದ ಜನರು ತಾವು “ಮೀರಾಮಾರ್ ತೀರ”ದಲ್ಲಿ ತಿರುಗಾಟ ನಡೆಸುವ ಸಂಪೂರ್ಣ ಆನಂದ ಪಡೆಯಬಹುದೆಂದು ತಿಳಿದು ಬಹಳ ರೋಮಾಂಚಿತರಾಗಿದ್ದರು. ವಾಸ್ತವದಲ್ಲಿ ಮೀರಾಮಾರ್ ತೀರವನ್ನು ನಮ್ಮ ದಿವ್ಯಾಂಗ ಸೋದರ ಸೋದರಿಯರು ಸುಲಭವಾಗಿ ತಲುಪುವಂತಹ ಗೋವಾದಲ್ಲಿನ ಸಮುದ್ರ ತೀರಗಳಲ್ಲಿ ಒಂದಾಗಿ ಮಾಡಲಾಗಿದೆ. ಇಲ್ಲಿ ಕ್ರಿಕೆಟ್ ಪಂದ್ಯಾವಳಿ, ಟೇಬಲ್ ಟೆನ್ನಿಸ್ ಪಂದ್ಯಾವಳಿ, ಮ್ಯಾರಥಾನ್ ಸ್ಪರ್ಧೆಯೊಂದಿಗೆ ಒಂದು ಮಾತು ಬಾರದವರ – ದೃಷ್ಟಿ ಹೀನರ ಸಮಾವೇಶ ಕೂಡಾ ಆಯೋಜಿಸಲಾಗಿತ್ತು. ಇಲ್ಲಿ ಒಂದು ವಿಶಿಷ್ಟ ಪಕ್ಷಿ ವೀಕ್ಷಣಾ ಕಾರ್ಯಕ್ರಮ ಮಾತ್ರವಲ್ಲದೇ ಒಂದು ಚಿತ್ರ ಕೂಡಾ ಪ್ರದರ್ಶಿಸಲಾಯಿತು. ಇದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು, ಇದರಿಂದಾಗಿ ನಮ್ಮೆಲ್ಲಾ ದಿವ್ಯಾಂಗ ಸೋದರ ಸೋದರಿಯರು ಮತ್ತು ಮಕ್ಕಳು ಇದರ ಸಂಪೂರ್ಣ ಆನಂದ ಪಡೆಯುವಂತಾಯಿತು. ಪರ್ಪಲ್ ಫೆಸ್ಟ್ ನ ವಿಶೇಷ ಅಂಶವೆಂದರೆ ಇದರಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆ. ದಿವ್ಯಾಂಗ ಸ್ನೇಹಿ ಉತ್ಪನ್ನಗಳನ್ನು ಈ ಖಾಸಗಿ ವಲಯದ ಪಾಲುದಾರಿಕೆ ಮೂಲಕ ಪ್ರದರ್ಶಿಸಲಾಗಿತ್ತು.  ಈ ಉತ್ಸವದಲ್ಲಿ ದಿವ್ಯಾಂಗರ ಕಲ್ಯಾಣ ಕುರಿತು ಜಾಗರೂಕತೆ ಮೂಡಿಸುವ ಅನೇಕ ಪ್ರಯತ್ನಗಳು ಕಂಡುಬಂದವು. ಪರ್ಪಲ್ ಉತ್ಸವ ಯಶಸ್ವಿಯಾಗಿಸುವುದಕ್ಕೆ ಕಾರಣರಾದ, ಇದರಲ್ಲಿ ಪಾಲ್ಗೊಂಡ ಪ್ರತಿಯೊಬ್ಬರನ್ನೂ ನಾನು ಅಭಿನಂದಿಸುತ್ತಿದ್ದೇನೆ. ಇದನ್ನು ಆಯೋಜಿಸಲು ಹಗಲು ರಾತ್ರಿ ಸತತವಾಗಿ ಶ್ರಮಿಸಿದ ಸ್ವಯಂ ಸೇವಕರನ್ನು ಕೂಡಾ ನಾನು ಅಭಿನಂದಿಸುತ್ತೇನೆ. ಆಕ್ಸೆಸಬಲ್ ಇಂಡಿಯಾ ಕುರಿತ ನಮ್ಮ ಮುನ್ನೋಟವನ್ನು ಸಾಕಾರಗೊಳಿಸುವುದಕ್ಕೆ ಈ ರೀತಿಯ ಅಭಿಯಾನಗಳು ಬಹಳ ಪರಿಣಾಮಕಾರಿ ಎನ್ನುವುದನ್ನು ಸಾಬೀತು ಪಡಿಸುತ್ತವೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಇಂದಿನ ಮನದ ಮಾತಿನಲ್ಲಿ ನಾನು ಹೇಳುವ ಒಂದು ವಿಷಯ ಕೇಳಿ ನಿಮಗೆ ಬಹಳ ಸಂತೋಷವೆನಿಸುತ್ತದೆ, ಬಹಳ ಹೆಮ್ಮೆಯುಂಟಾಗುತ್ತದೆ ಹಾಗೆಯೇ ನಿಮ್ಮ ಮನಸ್ಸು ಆಹಾ ಆಹಾ ಎಂದು ಸಂತೋಷದಿಂದ ಕೂಗುತ್ತದೆ.! ದೇಶದ ಅತ್ಯಂತ ಹಳೆಯ ವಿಜ್ಞಾನ ಸಂಸ್ಥೆಗಳಲ್ಲಿ ಒಂದೆನಿಸಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (Indian Institute of Science) ಎಂದರೆ, IISc ಒಂದು ಅದ್ಭುತ ಉದಾಹರಣೆಯನ್ನು ಪ್ರಸ್ತುತಪಡಿಸುತ್ತಿದೆ. ಮನದ ಮಾತಿನಲ್ಲಿ ನಾನು ಈ ಮೊದಲು ಕೂಡಾ ಇದರ ಕುರಿತು ಮಾತನಾಡಿದ್ದೇನೆ, ಭಾರತದ ಇಬ್ಬರು ಮಹಾನ್ ಪುರುಷರೆನಿಸಿದ ಜೆಮ್ ಶೆಡ್ ಜಿ ಟಾಟಾ ಮತ್ತು ಸ್ವಾಮಿ ವಿವೇಕಾನಂದರು ಯಾವ ರೀತಿ ಈ ಸಂಸ್ಥೆಯ ಹಿಂದಿನ ಸ್ಫೂರ್ತಿಯಾಗಿದ್ದಾರೆಂದು ಹೇಳಿದ್ದೇನೆ. ನನಗೆ ಮತ್ತು ನಿಮಗೆಲ್ಲರಿಗೂ ಸಂತಸ ಮತ್ತು ಹೆಮ್ಮೆ ತರುವ ವಿಷಯವೆಂದರೆ 2022 ನೇ ಇಸವಿಯಲ್ಲಿ, ಈ ಸಂಸ್ಥೆಯ ಹೆಸರಿನಲ್ಲಿ ಒಟ್ಟು 145 ಪೇಟೆಂಟ್ ಗಳಿವೆ. ಇದರ ಅರ್ಥವೆಂದರೆ – ಪ್ರತಿ ಐದು ದಿನಗಳಿಗೊಮ್ಮೆ ಎರಡು ಪೇಟೆಂಟ್ ಗಳು. ಈ ದಾಖಲೆ ನಿಜಕ್ಕೂ ಒಂದು ಅದ್ಭುತವೇ ಸರಿ. ಈ ಯಶಸ್ಸಿಗಾಗಿ ನಾನು IISc ನ ಸಂಪೂರ್ಣ ತಂಡವನ್ನು ಅಭಿನಂದಿಸಲು ಬಯಸುತ್ತೇನೆ.  ಸ್ನೇಹಿತರೇ, ಇಂದು Patent Filing ನಲ್ಲಿ ಭಾರತ 7 ನೇ ಸ್ಥಾನದಲ್ಲಿದೆ ಮತ್ತು ವ್ಯಾಪಾರ ಗುರುತಿನಲ್ಲಿ 5 ನೇ ಸ್ಥಾನದಲ್ಲಿದೆ. ಕೇವಲ ಪೇಟೆಂಟ್ ಗಳ ವಿಷಯಕ್ಕೆ ಬಂದರೆ, ಕಳೆದ ಐದು ವರ್ಷಗಳಲ್ಲಿ ಇದರಲ್ಲಿ ಸುಮಾರು 50 ಪ್ರತಿಶತ ವೃದ್ಧಿಯಾಗಿದೆ. Global Innovation Index ನಲ್ಲಿ ಕೂಡಾ ಭಾರತದ ranking ನಲ್ಲಿ, ಅತ್ಯಂತ ಸುಧಾರಣೆಯಾಗಿದೆ ಮತ್ತು ಈಗ 40 ನೇ ಸ್ಥಾನ ತಲುಪಿದೆ. 2015 ರಲ್ಲಿ ಭಾರತ ಜಾಗತಿಕ ನಾವೀನ್ಯತಾ ಸೂಚ್ಯಂಕದಲ್ಲಿ 80ನೇ ಸ್ಥಾನಕ್ಕಿಂತಲೂ ಹಿಂದಿತ್ತು. ನಿಮಗೆ ಮತ್ತೊಂದು ಆಸಕ್ತಿದಾಯಕ ವಿಷಯ ಹೇಳಲು ಬಯಸುತ್ತೇನೆ. ಭಾರತದಲ್ಲಿ ಕಳೆದ 11 ವರ್ಷಗಳಲ್ಲಿ ಮೊದಲ ಬಾರಿಗೆ Domestic Patent Filing ನ ಸಂಖ್ಯೆ Foreign Filing ಗಿಂತ ಹೆಚ್ಚು ಕಂಡು ಬಂದಿದೆ. ಇದು ಭಾರತದ ವೃದ್ಧಿಯಾಗುತ್ತಿರುವ ವೈಜ್ಞಾನಿಕ ಸಾಮರ್ಥ್ಯವನ್ನು ತೋರುತ್ತದೆ. 

ಸ್ನೇಹಿತರೇ, 21 ನೇ ಶತಮಾನದ ಜಾಗತಿಕ ಆರ್ಥಿಕತೆಯಲ್ಲಿ ಜ್ಞಾನವೇ ಅತ್ಯುನ್ನತ ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಭಾರತದ Techade ನ ಕನಸು ನಮ್ಮೆಲ್ಲಾ Innovators ಮತ್ತು ಅವರ ಪೇಟೆಂಟ್ ಗಳ ಬಲದಿಂದ ಖಂಡಿತವಾಗಿಯೂ ನನಸಾಗುತ್ತದೆಂಬ ವಿಶ್ವಾಸ ನನಗಿದೆ. ಇದರಿಂದ ನಾವೆಲ್ಲರೂ ನಮ್ಮ ದೇಶದಲ್ಲೇ ತಯಾರಿಸಲಾದ ವಿಶ್ವ ಶ್ರೇಣಿಯ ತಂತ್ರಜ್ಞಾನ ಮತ್ತು ಉತ್ಪನ್ನಗಳ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, NaMoApp ನಲ್ಲಿ ನಾನು ತೆಲಂಗಾಣದ ಇಂಜಿನಿಯರ್ ವಿಜಯ್ ಅವರ ಪೋಸ್ಟ್ ನೋಡಿದೆ. ಇದರಲ್ಲಿ ವಿಜಯ್ ಅವರು ಇ-ತ್ಯಾಜ್ಯ ಕುರಿತು ಬರೆದಿದ್ದಾರೆ. ಮನದ ಮಾತಿನಲ್ಲಿ ನಾನು ಈ ವಿಷಯದ ಬಗ್ಗೆ ಮಾತನಾಡಬೇಕೆಂದು ವಿಜಯ್ ಅವರು ಮನವಿ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನಾವು ಈ ಮೊದಲು ಕೂಡಾ ವೇಸ್ಟ್ ಟು ವೆಲ್ತ್ ಅಂದರೆ ಕಸದಿಂದ ರಸ ಕುರಿತು ಮಾತನಾಡಿದ್ದೇವೆ. ಆದರೆ, ಬನ್ನಿ ಇಂದು ಇ-ತ್ಯಾಜ್ಯ ಕುರಿತು ಚರ್ಚಿಸೋಣ. 

ಸ್ನೇಹಿತರೇ, ಇಂದು ಪ್ರತಿ ಮನೆಯಲ್ಲೂ ಮೊಬೈಲ್ ಫೋನ್, ಲ್ಯಾಪ್ ಟಾಪ್, ಟ್ಯಾಬ್ಲೆಟ್ ನಂತಹ ಸಾಧನಗಳು ಸಾಮಾನ್ಯವಾಗಿವೆ. ಇಡೀ ದೇಶದಲ್ಲಿ ಇವುಗಳ ಸಂಖ್ಯೆಯಲ್ಲಿ ಕೋಟಿಗಳಷ್ಟಿರಬಹುದು. ಇಂದಿನ ನವೀನ ಸಾಧನಗಳು ಮುಂದಿನ ಭವಿಷ್ಯದ ಇ-ತ್ಯಾಜ್ಯಗಳೇ ಆಗುತ್ತವೆ. ಯಾರೇ ಆಗಲಿ ಹೊಸ ಸಾಧನವನ್ನು ಖರೀದಿಸಿದಾಗ ಅಥವಾ ತಮ್ಮ ಹಳೆಯ ಸಾಧನವನ್ನು ಬದಲಾಯಿಸಿದಾಗ, ಅದನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತದೆಯೋ ಇಲ್ಲವೋ ಎಂಬ ವಿಷಯದ ಮೇಲೆ ಗಮನ ಹರಿಸುವುದು ಬಹಳ ಅಗತ್ಯವಾಗಿದೆ. ಒಂದುವೇಳೆ ಇ-ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೇ ಇದ್ದರೆ, ನಮ್ಮ ಪರಿಸರಕ್ಕೆ ಕೂಡಾ ಹಾನಿಯುಂಟಾಗಬಹುದು. ಆದರೆ, ಜಾಗರೂಕತೆಯಿಂದ ಈ ರೀತಿ ಮಾಡಿದಾಗ, ಇದು  Recycle ಮತ್ತು ಮರುಬಳಕೆಯ Circular ಆರ್ಥಿಕತೆಯ ಬಹುದೊಡ್ಡ ಶಕ್ತಿಯಾಗಬಹುದು. ಪ್ರತಿ ವರ್ಷ 50 ದಶಲಕ್ಷ ಟನ್ ಇ-ತ್ಯಾಜ್ಯವನ್ನು ಬಿಸಾಡಲಾಗುತ್ತದೆ ಎಂದು ವಿಶ್ವಸಂಸ್ಥೆಯ ಒಂದು ವರದಿ ಹೇಳುತ್ತದೆ. ಎಷ್ಟಾಗುತ್ತದೆಂದು ನೀವು ಅಂದಾಜಿಸಬಹುದೇ? ಮಾನವ ಇತಿಹಾಸದಲ್ಲಿ ಎಷ್ಟು ವಾಣಿಜ್ಯ ವಿಮಾನಗಳನ್ನು ತಯಾರಿಸಲಾಗಿದೆಯೋ ಅವುಗಳೆಲ್ಲದರ ತೂಕವನ್ನು ಒಟ್ಟು ಸೇರಿಸಿದರೂ ಕೂಡಾ, ಈಗ ಉತ್ಪತ್ತಿಯಾಗುತ್ತಿರುವ ಇ-ತ್ಯಾಜ್ಯದ ತೂಕಕ್ಕೆ ಅದು ಸಮನಾಗುವುದಿಲ್ಲ. ಇದು ಪ್ರತಿ ಸೆಕೆಂಡಿಗೆ ಸುಮಾರು 800 ಲ್ಯಾಪ್ ಟಾಪ್ ಗಳನ್ನು ಬಿಸಾಡುತ್ತಿರುವಂತಿದೆ. ಬೇರೆ ಬೇರೆ ಪ್ರಕ್ರಿಯೆಗಳ ಮೂಲಕ ಈ ಇ-ತ್ಯಾಜ್ಯದಿಂದ ಸುಮಾರು 17 ವಿಧದ ಅಮೂಲ್ಯ ಲೋಹ ತೆಗೆಯಬಹುದೆಂದು ತಿಳಿದು ನೀವು ಬೆಚ್ಚಿ ಬೀಳುತ್ತೀರಿ. ಇವುಗಳಲ್ಲಿ ಚಿನ್ನ, ಬೆಳ್ಳಿ, ತಾಮ್ರ ಮತ್ತು ನಿಕ್ಕೆಲ್ ಸೇರಿವೆ. ಆದ್ದರಿಂದ ಇ-ತ್ಯಾಜ್ಯದ ಸದುಪಯೋಗ ಪಡೆದುಕೊಳ್ಳುವುದೆಂದರೆ ಕಸದಿಂದ ರಸ ತಯಾರಿಸುವುದಕ್ಕಿಂತ ಕಡಿಮೆಯೇನಲ್ಲ. ಈ ನಿಟ್ಟಿನಲ್ಲಿ ಇನ್ನೋವೇಟಿವ್ ಕೆಲಸ ಮಾಡುತ್ತಿರುವ ನವೋದ್ಯಮಗಳು ಕಡಿಮೆಯೇನಿಲ್ಲ. ಇಂದು ಸುಮಾರು, 500 E-Waste Recyclers ಈ ಕ್ಷೇತ್ರದೊಂದಿಗೆ ತೊಡಗಿಕೊಂಡಿವೆ ಮತ್ತು ಅನೇಕ ಹೊಸ ಉದ್ಯಮಿಗಳನ್ನು ಕೂಡಾ ಇದರಲ್ಲಿ ಸೇರಿಸಿಕೊಳ್ಳಲಾಗುತ್ತಿದೆ. ಈ ವಲಯವು ಸಾವಿರಾರು ಮಂದಿಗೆ ನೇರ ಉದ್ಯೋಗವನ್ನೂ ನೀಡಿದೆ. ಬೆಂಗಳೂರಿನ E-Parisaraa ಇಂತಹದ್ದೇ ಒಂದು ಪ್ರಯತ್ನದಲ್ಲಿ ತೊಡಗಿಕೊಂಡಿದೆ. ಇದು Printed Circuit Boards ನ ದುಬಾರಿ ಲೋಹಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ದೇಶೀಯ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದೆ. ಇದೇ ರೀತಿ ಮುಂಬೈನಲ್ಲಿ ಕೆಲಸ ಮಾಡುತ್ತಿರುವ Ecoreco (ಇಕೋ- ರೀಕೋ) ಸಂಸ್ಥೆಯು Mobile App ನಿಂದ ಇ-ತ್ಯಾಜ್ಯ ಸಂಗ್ರಹಿಸುವ ಸಿಸ್ಟಂ ಸಿದ್ಧಪಡಿಸಿದೆ. ಉತ್ತರಾಖಂಡದ ರೂಡಕೀ ನಲ್ಲಿರುವ Attero (ಎಟೆರೋ) Recycling ಈ ವಲಯದಲ್ಲಿ ವಿಶ್ವಾದ್ಯಂತ ಅನೇಕ Patents ತನ್ನದಾಗಿಸಿಕೊಂಡಿದೆ. ಈ ಸಂಸ್ಥೆ ಕೂಡಾ ತನ್ನದೇ ಆದ E-Waste Recycling Technology ಅಭಿವೃದ್ಧಿಪಡಿಸಿ ಸಾಕಷ್ಟು ಹೆಸರು ಗಳಿಸಿದೆ. ಭೋಪಾಲ್ ನಲ್ಲಿ Mobile App ಮತ್ತು ಜಾಲತಾಣ ‘ಕಬಾಡೀವಾಲ’ ಮೂಲಕ ಟನ್ ಗಳಷ್ಟು ಇ-ತ್ಯಾಜ್ಯ ಸಂಗ್ರಹಿಸುತ್ತಿದೆ. ಇಂತಹ ಅನೇಕ ಉದಾಹರಣೆಗಳಿವೆ. ಇವೆಲ್ಲವೂ ಭಾರತವನ್ನು ಜಾಗತಿಕ ರೀಸೈಕ್ಲಿಂಗ್ ಹಬ್ ಮಾಡುವಲ್ಲಿ ಸಹಾಯ ಮಾಡುತ್ತಿವೆ, ಆದರೆ ಇಂತಹ ಉಪಕ್ರಮಗಳ ಯಶಸ್ಸಿಗಾಗಿ ಒಂದು ಅತ್ಯಗತ್ಯ ಷರತ್ತು ಕೂಡಾ ಇದೆ – ಅದೆಂದರೆ, ಇ-ತ್ಯಾಜ್ಯ ವಿಲೇವಾರಿ ಮಾಡುವ ಸುರಕ್ಷಿತ ವಿಧಾನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿರಬೇಕು. ಪ್ರತಿ ವರ್ಷ ಕೇವಲ ಶೇಕಡಾ 15-17 ರಷ್ಟು ಇ-ತ್ಯಾಜ್ಯವನ್ನು ಮಾತ್ರಾ ರೀಸೈಕಲ್ ಮಾಡಲಾಗುತ್ತಿದೆ ಎಂದು ಇ-ತ್ಯಾಜ್ಯದ ವಲಯದಲ್ಲಿ ಕೆಲಸ ಮಾಡುವವರು ಹೇಳುತ್ತಾರೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಇಡೀ ವಿಶ್ವದಲ್ಲಿ ಹವಾಮಾನ ಬದಲಾವಣೆ ಮತ್ತು ಜೀವವೈವಿಧ್ಯದ ಸಂರಕ್ಷಣೆ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತದ ಬಲವಾದ ಪ್ರಯತ್ನಗಳ ಬಗ್ಗೆ ನಾವು ಸತತವಾಗಿ ಮಾತನಾಡುತ್ತಿದ್ದೇವೆ. ಭಾರತ ತನ್ನ wetlands ಗಾಗಿ ಮಾಡಿರುವ ಕೆಲಸವನ್ನು ತಿಳಿದರೆ, ನಿಮಗೆ ಕೂಡಾ ಬಹಳ ಸಂತಸವೆನಿಸುತ್ತದೆ. wetlands ಅಂದರೇನು ಎಂದು ಕೆಲವು ಶ್ರೋತೃಗಳು ಯೋಚಿಸುತ್ತಿರಬಹುದು? Wetland sites ಅಥವಾ ಜೌಗು ಪ್ರದೇಶಗಳು  ಎಂದರೆ ಜೌಗು ಮಣ್ಣಿರುವ ಭೂಮಿಯಲ್ಲಿ ವರ್ಷವಿಡೀ ನೀರು ಸಂಗ್ರಹವಾಗಿರುವ ಸ್ಥಳಗಳು ಎಂದರ್ಥ. ಕೆಲವೇ ದಿನಗಳ ನಂತರ ಫೆಬ್ರವರಿ 2 ರಂದು World Wetlands day ಬರಲಿದೆ. ನಮ್ಮ ಭೂಮಿಯ ಅಸ್ತಿತ್ವಕ್ಕೆ ಜೌಗು ಪ್ರದೇಶಗಳು ಬಹಳ ಅತ್ಯಗತ್ಯ, ಏಕೆಂದರೆ ಇವುಗಳನ್ನು ಅನೇಕ ಪಕ್ಷಿಗಳು, ಜೀವಜಂತುಗಳು ಅವಲಂಬಿಸಿರುತ್ತವೆ. ಈ ಜೀವವೈವಿಧ್ಯವನ್ನು ಸಮೃದ್ಧವಾಗಿಸುವುದರೊಂದಿಗೆ ಇದು ಪ್ರವಾಹ ನಿಯಂತ್ರಣ ಮತ್ತು ಅಂತರ್ಜಲ ಮರುಪೂರಣವನ್ನು ಕೂಡಾ ಖಚಿತ ಪಡಿಸುತ್ತದೆ. Ramsar (ರಾಮ್ ಸರ್) Sites ಇಂತಹ ಜೌಗು ಪ್ರದೇಶಗಳಾಗಿವೆ, ಮತ್ತು ಇದಕ್ಕೆ ಅಂತಾರಾಷ್ಟ್ರೀಯ ಪ್ರಾಮುಖ್ಯ ಇದೆ ಎನ್ನುವುದು ನಿಮ್ಮಲ್ಲಿ ಬಹಳಷ್ಟು ಜನರಿಗೆ ತಿಳಿದಿದೆ. Wetlands ಯಾವುದೇ ದೇಶದಲ್ಲಿರಲಿ, ಅದು ಅನೇಕ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ, ಆಗ ಅವುಗಳನ್ನು Ramsar Sites ಎಂದು ಘೋಷಿಸಲಾಗುತ್ತದೆ. Ramsar Sites ನಲ್ಲಿ 20,000 ಅಥವಾ ಅದಕ್ಕಿಂತ ಅಧಿಕ water birds ಇರಬೇಕಾಗುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಜಾತಿಯ ಮೀನುಗಳಿರಬೇಕಾಗುತ್ತದೆ. ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭದಲ್ಲಿ, ಅಮೃತ ಮಹೋತ್ಸವದ ಸಂದರ್ಭದಲ್ಲಿ Ramsar Sites ಕುರಿತ ಒಂದು ಒಳ್ಳೆಯ ಸಮಾಚಾರವನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಮ್ಮ ದೇಶದಲ್ಲಿ ಈಗ Ramsar Sites ಗಳ ಒಟ್ಟು ಸಂಖ್ಯೆ 75 ರಷ್ಟಿದೆ, 2014 ಕ್ಕೂ ಮೊದಲು ದೇಶದಲ್ಲಿ ಕೇವಲ 26 Ramsar Sites ಇದ್ದವು. ಈ ಜೀವವೈವಿಧ್ಯವನ್ನು ಸಂರಕ್ಷಿಸಿರುವ ಸ್ಥಳೀಯ ಸಮುದಾಯ ಪ್ರಶಂಸೆಗೆ ಅರ್ಹವಾಗಿದೆ. ಈ ಪ್ರಕೃತಿಯೊಂದಿಗೆ ಸಾಮರಸ್ಯದೊಂದಿಗೆ ಬಾಳುವ ನಮ್ಮ ಶತಮಾನಗಳಷ್ಟು ಹಳೆಯದಾದ ಸಂಸ್ಕೃತಿ ಮತ್ತು ಪರಂಪರೆ ಗೌರವಪ್ರದವೆನಿಸಿದೆ. ಭಾರತದ ಈ Wetlands ನಮ್ಮ ನೈಸರ್ಗಿಕ ಸಾಮರ್ಥ್ಯದ ಉದಾಹರಣೆಯೂ ಆಗಿದೆ. ಒಡಿಶಾದ ಚಿಲ್ಕಾ ಸರೋವರಕ್ಕೆ 40 ಕ್ಕಿಂತಲೂ ಅಧಿಕ ಜಲ ಪಕ್ಷಿ ಪ್ರಭೇದಗಳಿಗೆ ಆಶ್ರಯ ನೀಡುತ್ತದೆಂದು ಹೇಳಲಾಗುತ್ತದೆ. ಕಯಿಬುಲ್ – ಲಮ್ಜಾವು, ಲೋಕಟಾಕ್ ಅನ್ನು Swamp ಜಿಂಕೆಯ ಏಕೈಕ ನೈಸರ್ಗಿಕ ವಾಸಸ್ಥಾನ - Natural Habitat (ಹೆಬಿಟೇಟ್) ಎಂದು ಹೇಳಲಾಗುತ್ತದೆ. ತಮಿಳುನಾಡಿನ  ವೇದಂತಂಗಲ್ ಅನ್ನು 2022 ರಲ್ಲಿ Ramsar Site ಎಂದು ಘೋಷಿಸಲಾಯಿತು. ಇಲ್ಲಿ ಪಕ್ಷಿ ಸಂಕುಲವನ್ನು ಸಂರಕ್ಷಿಸುವ ಸಂಪೂರ್ಣ ಶ್ರೇಯಸ್ಸು ಆ ಪ್ರದೇಶದ ಸುತ್ತಮುತ್ತಲಿನ ರೈತರಿಗೆ ಸಲ್ಲುತ್ತದೆ. ಕಾಶ್ಮೀರದಲ್ಲಿ ಪಂಜಾತ್ ನಾಗ್ ಸಮುದಾಯವು Annual Fruit Blossom festival ಮೂಲಕ ಒಂದು ದಿನವನ್ನು ವಿಶೇಷ ರೀತಿಯಲ್ಲಿ ಹಳ್ಳಿಯ ನೀರಿನ ಚಿಲುಮೆ, ಕಾಲವೆಗಳ ಸ್ವಚ್ಛತೆಗೆ ಮೀಸಲಿಟ್ಟಿದೆ. ವಿಶ್ವದ  Ramsar Sites ಗಳ ಪೈಕಿ ಹೆಚ್ಚಿನವು ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿವೆ. ಮಣಿಪುರದ ಲೋಕಟಾಕ್ ಮತ್ತು ಪವಿತ್ರ ಸರೋವರವೆನಿಸಿರುವ ರೇಣುಕಾ ಅಲ್ಲಿನ ಸಂಸ್ಕೃತಿಯೊಂದಿಗೆ ಆಳವಾದ ಸಂಬಂಧ ಹೊಂದಿವೆ. ಇದೇ ರೀತಿ Sambhar ಸಂಬಂಧ ದುರ್ಗಾದೇವಿಯ ಅವತಾರ ಶಾಕಾಂಬರಿ ದೇವಿಯೊಂದಿಗೆ ಕೂಡಾ ಇದೆ. ಭಾರತದಲ್ಲಿ Wetlands ನ ವ್ಯಾಪ್ತಿಯ ಕಾರಣವೆಂದರೆ Ramsar Sites ನ ಸುತ್ತಮುತ್ತ ವಾಸಿಸುವ ಜನರು. ನಾನು ಇವರೆಲ್ಲರನ್ನೂ ಪ್ರಶಂಸಿಸುತ್ತೇನೆ ಮತ್ತು ಮನ್ ಕಿ ಬಾತ್ ನ ಶ್ರೋತೃಗಳ ಪರವಾಗಿ ಶುಭಾಶಯಗಳನ್ನು ಕೋರುತ್ತೇನೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಈ ಬಾರಿ ನಮ್ಮ ದೇಶದಲ್ಲಿ ವಿಶೇಷವಾಗಿ ಉತ್ತರ ಭಾರದಲ್ಲಿ ತೀವ್ರವಾದ ಚಳಿಯಿತ್ತು. ಈ ಚಳಿಗಾಲದಲ್ಲಿ ಜನರು ಬೆಟ್ಟಗಳ ಮೇಲೆ ಬಿದ್ದ ಹಿಮದ ಆನಂದವನ್ನೂ ಕೂಡಾ ಸಾಕಷ್ಟು ಅನುಭವಿಸಿದರು. ಜಮ್ಮು ಕಾಶ್ಮೀರದಿಂದ ಇಂತಹದ್ದೇ ಕೆಲವು ಚಿತ್ರಗಳು ಬಂದಿದ್ದು ಇಡೀ ದೇಶದ ಮನಸೂರೆಗೊಂಡವು. ಸಾಮಾಜಿಕ ಮಾಧ್ಯಮದಲ್ಲಂತೂ, ಇಡೀ ವಿಶ್ವದ ಜನರು ಈ ಚಿತ್ರಗಳನ್ನು ಇಷ್ಟಪಡುತ್ತಿದ್ದಾರೆ. ಹಿಮಪಾತದಿಂದಾಗಿ ನಮ್ಮ ಕಾಶ್ಮೀರ ಕಣಿವೆಯು ಪ್ರತಿ ವರ್ಷದಂತೆ ಈ ಬಾರಿ ಕೂಡಾ ಬಹಳ ಸುಂದರವಾಗಿ ಕಂಗೊಳಿಸುತ್ತಿದೆ. ಬನಿಹಾಲ್ ನಿಂದ ಬಡಗಾಮ್ ಗೆ ಹೋಗುವ ರೈಲಿನ ವಿಡಿಯೋವನ್ನು ಕೂಡಾ ಜನರು ವಿಶೇಷವಾಗಿ ನೋಡಿ ಇಷ್ಟಪಡುತ್ತಿದ್ದಾರೆ. ಅತಿ ಸುಂದರ ಹಿಮದಿಂದ ತುಂಬಿದ, ನಾಲ್ಕೂ ದಿಕ್ಕುಗಳಲ್ಲಿ ಬಿಳಿ ಬಣ್ಣದ ಹೊದಿಕೆಯಂತೆ ಕಾಣುವ ಮಂಜು. ಈ ದೃಶ್ಯ ಕಿನ್ನರ ಲೋಕದ ಕತೆಯ ದೃಶ್ಯಗಳಂತೆ ಕಾಣುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ಇದು ಯಾವುದೋ ವಿದೇಶದ ಚಿತ್ರವಲ್ಲ ನಮ್ಮ ದೇಶದ ಕಾಶ್ಮೀರದ ಚಿತ್ರವೆಂದು ಹೇಳುತ್ತಿದ್ದಾರೆ. 

ಓರ್ವ ಸಾಮಾಜಿಕ ಜಾಲತಾಣ ಬಳಕೆದಾರ ಹೀಗೆಂದು ಬರೆದಿದ್ದಾರೆ – ಸ್ವರ್ಗ ಇದಕ್ಕಿಂತ ಸುಂದರವಾಗಿ ಇರಲು ಹೇಗೆ ಸಾಧ್ಯ?’ ಈ ಮಾತು ಖಂಡಿತವಾಗಿಯೂ ಸರಿಯಾಗಿದೆ – ಆದ್ದರಿಂದಲೇ ಅಲ್ಲವೇ ಕಾಶ್ಮೀರವನ್ನು ಭೂಮಿಯ ಸ್ವರ್ಗ ಎಂದು ಕರೆಯುವುದು. ನೀವು ಕೂಡಾ ಈ ಚಿತ್ರಗಳನ್ನು ನೋಡಿ ಕಾಶ್ಮೀರ ಪ್ರವಾಸ ಮಾಡಬೇಕೆಂದು ಖಂಡಿತವಾಗಿ ಯೋಚಿಸಿರುತ್ತೀರಿ ಅಲ್ಲವೇ. ನೀವು ಖಂಡಿತವಾಗಿಯೂ ಹೋಗಿ ಮತ್ತು ನಿಮ್ಮೊಂದಿಗೆ ನಿಮ್ಮ ಸ್ನೇಹಿತರನ್ನು ಕೂಡಾ ಕರೆದೊಯ್ಯಿರಿ. ಕಾಶ್ಮೀರದಲ್ಲಿ ಹಿಮಚ್ಛಾದಿತ ಬೆಟ್ಟಗಳು, ಪ್ರಾಕೃತಿಕ ಸೌಂದರ್ಯ ಮಾತ್ರವಲ್ಲದೇ ನೋಡಲು-ಅರಿಯಲು ಬಹಳಷ್ಟಿದೆ. ಕಾಶ್ಮೀರದ ಸಯ್ಯದಾಬಾದ್ ನಲ್ಲಿ Winter games ಆಯೋಜಿಸಲಾಗಿತ್ತು. ಈ Games ಗಳ ಧ್ಯೇಯ – ಹಿಮ ಕ್ರಿಕೆಟ್ -Snow Cricket ಎಂದಾಗಿತ್ತು. ಸ್ನೋ ಕ್ರಿಕೆಟ್ ಬಹಳ ರೋಮಾಂಚನವಾಗಿರುತ್ತದೆ ಎಂದು ನೀವು ಯೋಚಿಸುತ್ತಿರಬಹುದಲ್ಲವೇ – ನೀವು ಸರಿಯಾಗಿ ಯೋಚಿಸುತ್ತಿದ್ದೀರಿ. ಕಾಶ್ಮೀರದ ಯುವಜನತೆ ಹಿಮದ ನಡುವೆ ಕ್ರಿಕೆಟ್ ಆಟವನ್ನು ಮತ್ತಷ್ಟು ಅದ್ಭುತವನ್ನಾಗಿಸುತ್ತಾರೆ. ಇದರ ಮೂಲಕ ಕಾಶ್ಮೀರದಲ್ಲಿ ಮುಂದೆ ಟೀಮ್ ಇಂಡಿಯಾ ಪರವಾಗಿ ಆಡಬಹುದಾದ ಯುವ ಕ್ರೀಡಾಪಟುಗಳ ಅನ್ವೇಷಣೆ ಕೂಡಾ ನಡೆಯುತ್ತದೆ. ಇದು ಒಂದು ರೀತಿಯಲ್ಲಿ Khelo India Movement ನ ವಿಸ್ತರಣೆಯೇ ಆಗಿದೆ. ಕಾಶ್ಮೀರದಲ್ಲಿ ಯುವಜನತೆಯಲ್ಲಿ ಕ್ರೀಡೆಗಳ ಬಗ್ಗೆ ಉತ್ಸಾಹ ಹೆಚ್ಚಾಗುತ್ತಿದೆ. ಮುಂಬರುವ ದಿನಗಳಲ್ಲಿ ಇವರ ಪೈಕಿ ಅನೇಕ ಯುವಕರು ಯುವತಿಯರು ದೇಶಕ್ಕಾಗಿ ಪದಕಗಳನ್ನು ಗೆಲ್ಲುತ್ತಾರೆ, ತ್ರಿವರ್ಣ ಧ್ವಜ ಹಾರಿಸುತ್ತಾರೆ. ಮುಂದಿನ ಬಾರಿ ನೀವು ಕಾಶ್ಮೀರ ಪ್ರವಾಸ ಯೋಜಿಸುವಾಗ, ಇಂತಹ ವಿಶೇಷತೆಗಳನ್ನು ನೋಡಲು ಕೂಡಾ ಸಮಯ ಮೀಸಲಿಡಿ ಎನ್ನುವುದು ನಿಮಗೆ ನನ್ನ ಸಲಹೆಯಾಗಿದೆ. ಈ ಅನುಭವ ನಿಮ್ಮ ಪ್ರವಾಸವನ್ನು ಮತ್ತಷ್ಟು ಸ್ಮರಣೀಯವಾಗಿಸುತ್ತದೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಗಣತಂತ್ರವನ್ನು ಬಲಿಷ್ಠಗೊಳಿಸುವ ನಮ್ಮ ಪ್ರಯತ್ನ ನಿರಂತರ ಸಾಗುತ್ತಲೇ ಇರಬೇಕು. ಜನರ ಸಹಕಾರದಿಂದ, ಎಲ್ಲರ ಪ್ರಯತ್ನದಿಂದ, ದೇಶಕ್ಕಾಗಿ ನಮ್ಮ ಕರ್ತವ್ಯಗಳನ್ನು ನಿಭಾಯಿಸುವುದರಿಂದ, ಗಣತಂತ್ರ ಸುದೃಢಗೊಳ್ಳುತ್ತದೆ. ನಮ್ಮ ಮನ್ ಕಿ ಬಾತ್ ಕಾರ್ಯಕ್ರಮ  ಕರ್ತವ್ಯನಿಷ್ಟ ಹೋರಾಟಗಾರರ ಗಟ್ಟಿ ಧ್ವನಿಯಾಗಿದೆ ಎಂದು ನನಗೆ ಸಂತೋಷವೆನಿಸುತ್ತದೆ. ಮುಂದಿನ ಬಾರಿ ಪುನಃ ಭೇಟಿಯಾಗೋಣ ಇಂತಹ ಕರ್ತವ್ಯನಿಷ್ಟ ಹೋರಾಟಗಾರರ ಆಸಕ್ತಿಪೂರ್ಣ ಮತ್ತು ಸ್ಫೂರ್ತಿದಾಯಕ ಕತೆಗಳೊಂದಿಗೆ. ಅನಂತಾನಂತ ಧನ್ಯವಾದಗಳು. 

*****



(Release ID: 1894536) Visitor Counter : 163