ಪ್ರಧಾನ ಮಂತ್ರಿಯವರ ಕಛೇರಿ

​​​​​​​ಕಾರಿಯಪ್ಪ ಮೈದಾನದಲ್ಲಿ ನಡೆದ ಎನ್.ಸಿ.ಸಿ. ಪ್ರಧಾನಮಂತ್ರಿ ಫಥಸಂಚಲನವನ್ನುದ್ದೇಶಿಸಿ ಪ್ರಧಾನಂತ್ರಿಯವರು ಭಾಷಣ ಮಾಡಿದರು


"ನೀವು ಅಮೃತ್ ಪೀಳಿಗೆಯನ್ನು ಪ್ರತಿನಿಧಿಸುತ್ತೀರಿ , ಅದು ವಿಕಸಿತ ಮತ್ತು ಆತ್ಮನಿರ್ಭರ ಭಾರತವನ್ನು ರಚಿಸುತ್ತದೆ"

“ಕನಸುಗಳು ನಿರ್ಣಯವಾಗಿ ಬದಲಾದಾಗ ಮತ್ತು ಜೀವನವು ಅದಕ್ಕೆ ಸಮರ್ಪಿತವಾದಾಗ, ಯಶಸ್ಸು ಖಚಿತವಾಗಿದೆ. ಇದು ಭಾರತದ ಯುವಜನತೆಗೆ ಹೊಸ ಅವಕಾಶಗಳ ಸಮಯವಾಗಿದೆ”

"ಭಾರತದ ಸಮಯ ಬಂದಿದೆ"

"ಯುವ ಶಕ್ತಿಯು ಭಾರತದ ಅಭಿವೃದ್ಧಿ ಪಯಣದ ಚಾಲನಾ ಶಕ್ತಿಯಾಗಿದೆ"

"ದೇಶವು ಯುವಜನರ ಶಕ್ತಿ ಮತ್ತು ಉತ್ಸಾಹದಿಂದ ತುಂಬಿರುವಾಗ, ಆ ದೇಶದ ಆದ್ಯತೆಗಳು ಯಾವಾಗಲೂ ಅದರ ಯುವ ಜನತೆಯಾಗಿರುತ್ತಾರೆ"

"ಇದು ವಿಶೇಷವಾಗಿ ರಕ್ಷಣಾ ಪಡೆಗಳು ಮತ್ತು ಸಂಸ್ಥೆಗಳಲ್ಲಿ ದೇಶದ ಹೆಣ್ಣುಮಕ್ಕಳಿಗೆ ಉತ್ತಮ ಅವಕಾಶಗಳ ಸಾಧ್ಯತೆಯ ಸಮಯ"

Posted On: 28 JAN 2023 7:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯ ಕಾರಿಯಪ್ಪ ಪರೇಡ್ ಮೈದಾನದಲ್ಲಿ ವಾರ್ಷಿಕ ಎನ್.ಸಿ.ಸಿ. ಪಿಎಂ ಪಥಸಂಚಲನವನ್ನು ಉದ್ದೇಶಿಸಿ ಭಾಷಣ ಮಾಡಿದರು. ಈ ವರ್ಷ, ಎನ್.ಸಿ.ಸಿ. ಪ್ರಾರಂಭವಾಗಿ 75 ನೇ ವರ್ಷವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ, ಎನ್.ಸಿ.ಸಿ.ಯ 75 ಯಶಸ್ವಿ ವರ್ಷಗಳ ಸ್ಮರಣಾರ್ಥವಾಗಿ ಪ್ರಧಾನಮಂತ್ರಿಯವರು ವಿಶೇಷ ಲಕೋಟೆ ಮತ್ತು 75/- ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿದರು. ಕನ್ಯಾಕುಮಾರಿಯಿಂದ ದೆಹಲಿಗೆ ತರಲಾದ ಏಕತಾ ಜ್ವಾಲೆಯನ್ನು ಪ್ರಧಾನಮಂತ್ರಿಯವರಿಗೆ ಹಸ್ತಾಂತರಿಸಲಾಯಿತು ಮತ್ತು ಕಾರಿಯಪ್ಪ ಮೈದಾನದಲ್ಲಿ ಜ್ಯೋತಿ ಬೆಳಗಲಾಯಿತು. ಹಗಲು-ರಾತ್ರಿ ಕಾರ್ಯಕ್ರಮ ನಡೆಯಿತು ಮತ್ತು 'ಏಕ್ ಭಾರತ್ ಶ್ರೇಷ್ಠ ಭಾರತ' ವಿಷಯದ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಆಚರಣೆಯ ಭಾಗವಾಗಿ ಭಾರತೀಯ ವಸುಧೈವ ಕುಟುಂಬಕಂ ಸಂಕಲ್ಪದಲ್ಲಿ ಭಾಗವಹಿಸಲು, 19 ದೇಶಗಳಿಂದ 196 ಅಧಿಕಾರಿಗಳು ಮತ್ತು ಕೆಡೆಟ್‌ ಗಳನ್ನು ಆಹ್ವಾನಿಸಲಾಯಿತು. 

ಪಥಸಂಚಲನವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿಯವರು, “ಈ ವರ್ಷ ಭಾರತ ಮತ್ತು ಎನ್.ಸಿ.ಸಿ. ಎರಡೂ ತಮ್ಮ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿವೆ. ಎನ್.ಸಿ.ಸಿ.ಯನ್ನು ಮುನ್ನಡೆಸುವ ಮೂಲಕ ಮತ್ತು ಅದರ ಭಾಗವಾಗಿರುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದವರ ಪ್ರಯತ್ನಗಳು ಶ್ಲಾಘನಾರ್ಹ” ಎಂದು ಹೇಳಿದರು.  “ಯುವಜನತೆ ಎನ್.ಸಿ.ಸಿ. ಕೆಡೆಟ್‌ಗಳಾಗಿ ಮತ್ತು ರಾಷ್ಟ್ರದ ಯುವಕರಾಗಿ ದೇಶದ 'ಅಮೃತ್ ಪೀಳಿಗೆ'ಯನ್ನು ಪ್ರತಿನಿಧಿಸುತ್ತಾರೆ, ಇದು ಮುಂಬರುವ 25 ವರ್ಷಗಳಲ್ಲಿ ರಾಷ್ಟ್ರವನ್ನು ಹೊಸ ಹಂತಕ್ಕೆ ಕೊಂಡೊಯ್ಯುತ್ತದೆ ಮತ್ತು 'ವಿಕಸಿತ' ಮತ್ತು 'ಆತ್ಮನಿರ್ಭರ' ಭಾರತವನ್ನು ರಚಿಸುತ್ತದೆ” ಎಂದು ಪ್ರಧಾನಮಂತ್ರಿ ಅವರು ಎನ್.ಸಿ.ಸಿ. ಕೆಡೆಟ್‌ ಗಳಿಗೆ ಹೇಳಿದರು. ಪ್ರತಿದಿನ 50 ಕಿಲೋಮೀಟರ್ ಕ್ರಮಿಸುವ ಮೂಲಕ 60 ದಿನಗಳ ಕಾಲ ಸಂಚರಿಸಿ ಕನ್ಯಾಕುಮಾರಿಯಿಂದ ದೆಹಲಿಯವರೆಗಿನ ಓಟವನ್ನು ಪೂರ್ಣಗೊಳಿಸಿದ ಏಕತಾ ಜ್ವಾಲೆಗಾಗಿ ಎನ್.ಸಿ.ಸಿ. ಕೆಡೆಟ್‌ ಗಳನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು ಹಾಗೂ “ಸಂಜೆಯ ಈ ಜ್ವಾಲೆ ಮತ್ತು ಸಾಂಸ್ಕೃತಿಕ ಸಂಭ್ರಮವು ‘ಏಕ್ ಭಾರತ್ ಶ್ರೇಷ್ಠ ಭಾರತ’ದ ಉತ್ಸಾಹವನ್ನು ಬಲಪಡಿಸಿದೆ” ಎಂದು ಹೇಳಿದರು

ಗಣರಾಜ್ಯೋತ್ಸವ ಪರೇಡ್‌ ನಲ್ಲಿ ಭಾಗವಹಿಸಿದ ಎನ್.ಸಿ.ಸಿ. ಕೆಡೆಟ್‌ ಗಳನ್ನು ಆಸಕ್ತಿಯಿಂದ ಗಮನಿಸಿದ ಪ್ರಧಾನಮಂತ್ರಿ ಅವರು, ಪ್ರಥಮ ಬಾರಿಗೆ ಕರ್ತವ್ಯ ಪಥದಲ್ಲಿ ನಡೆಯುತ್ತಿರುವ ಪರೇಡ್‌ ನ ವಿಶೇಷತೆಯನ್ನು ವಿವರಿಸಿದರು. ಎನ್.ಸಿ.ಸಿ. ಕೆಡೆಟ್‌ ಗಳು ಜೀವನದಲ್ಲಿ ಉತ್ತಮ ಪ್ರೇರಣೆ ಮತ್ತು ಪ್ರೋತ್ಸಾಹಗಳಿಸಲು ರಾಷ್ಟ್ರೀಯ ಯುದ್ಧ ಸ್ಮಾರಕ, ಪೊಲೀಸ್ ಸ್ಮಾರಕ, ಕೆಂಪುಕೋಟೆಯ ನೇತಾಜಿ ಸುಭಾಷ್ ಚಂದ್ರ ಬೋಸ್ ಮ್ಯೂಸಿಯಂ, ಪ್ರಧಾನಮಂತ್ರಿ ವಸ್ತು ಸಂಗ್ರಹಾಲಯ, ಸರ್ದಾರ್ ಪಟೇಲ್ ವಸ್ತು ಸಂಗ್ರಹಾಲಯ ಮತ್ತು ಬಿ.ಆರ್. ಅಂಬೇಡ್ಕರ್ ವಸ್ತು ಸಂಗ್ರಹಾಲಯ ಮುಂತಾದ ಸ್ಥಳಗಳಿಗೆ ಭೇಟಿ ನೀಡುವಂತೆ ಸಲಹೆ ನೀಡಿದರು. 

ಯುವಜನತೆಯ ಕೇಂದ್ರೀಕರಣವು ರಾಷ್ಟ್ರವನ್ನು ನಡೆಸುವ ಪ್ರಮುಖ ಶಕ್ತಿಯಾಗಿರುವುದಾಗಿ ಪ್ರಧಾನಮಂತ್ರಿ ಅವರು ಹೇಳಿದರು. “ಕನಸುಗಳು ನಿರ್ಣಯವಾಗಿ ಪರಿವರ್ತನೆಗೊಂಡಾಗ ಮತ್ತು ಜೀವನವು ಅದಕ್ಕೆ ಸಮರ್ಪಿತವಾದಾಗ ಯಶಸ್ಸು ಖಚಿತ. ಇದು ಭಾರತದ ಯುವಜನತೆಗೆ ಹೊಸ ಅವಕಾಶಗಳ ಸಮಯ. ಭಾರತದ ಸಮಯ ಬಂದಿದೆ ಎಂಬುದು ಎಲ್ಲೆಡೆ ಸ್ಪಷ್ಟವಾಗಿದೆ. ಇಡೀ ಜಗತ್ತು ಭಾರತದತ್ತ ನೋಡುತ್ತಿದೆ ಮತ್ತು ಇದಕ್ಕೆಲ್ಲಾ ಭಾರತದ ಯುವಶಕ್ತಿಯೇ ಕಾರಣ” ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಮುಂಬರುವ ಜಿ-20ಯ ಭಾರತದ ಅಧ್ಯಕ್ಷೀಯತೆಗಾಗಿ ಯುವಜನತೆ ಹೊಂದಿರುವ ಉತ್ಸಾಹದ ಬಗ್ಗೆ ಪ್ರಧಾನಮಂತ್ರಿ ಅವರು ಹೆಮ್ಮೆ ವ್ಯಕ್ತಪಡಿಸಿದರು 

ಯುವಕರಿಗೆ ಸಹಾಯ ಮಾಡುವ ವೇದಿಕೆಯನ್ನು ಒದಗಿಸುವ ಸರ್ಕಾರದ ಪ್ರಯತ್ನಗಳನ್ನು ಪ್ರಸ್ತಾಪಿಸುತ್ತಾ "ದೇಶವು ಯುವಜನರ ಶಕ್ತಿ ಮತ್ತು ಉತ್ಸಾಹದಿಂದ ತುಂಬಿರುವಾಗ, ಆ ದೇಶದ ಆದ್ಯತೆಗಳು ಯಾವಾಗಲೂ ಅದರ ಯುವ ಜನತೆಯಾಗಿರುತ್ತಾರೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು. “ಡಿಜಿಟಲ್ ಕ್ರಾಂತಿಯಾಗಲಿ, ಸ್ಟಾರ್ಟ್ ಅಪ್ ಕ್ರಾಂತಿಯಾಗಲಿ ಅಥವಾ ನಾವೀನ್ಯತೆ ಕ್ರಾಂತಿಯಾಗಲಿ ರಾಷ್ಟ್ರದ ಯುವಜನರಿಗೆ ತಮ್ಮ ಕನಸುಗಳನ್ನು ಸಾಧಿಸುವಲ್ಲಿ ವಿವಿಧ ಕ್ಷೇತ್ರಗಳನ್ನು ತೆರೆಯಲಾಗುತ್ತಿದೆ, ಭಾರತದ ಯುವಜನರೇ ಅದರ ದೊಡ್ಡ ಫಲಾನುಭವಿಗಳಾಗಿದ್ದಾರೆ.“ ಎಂದು ಪ್ರಧಾನಮಂತ್ರಿಯವರು ಹೇಳಿದರು. “ಭಾರತದಲ್ಲಿ ಈಗ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ರೈಫಲ್‌ ಗಳು ಮತ್ತು ಬುಲೆಟ್ ಪ್ರೂಫ್ ಜಾಕೆಟ್‌ ಗಳನ್ನು ಆಮದು ಮಾಡಿಕೊಳ್ಳಲಾಗಿದೆ, ರಕ್ಷಣಾ ಕ್ಷೇತ್ರದಲ್ಲಿನ ಸುಧಾರಣೆಗಳಾಗಿವೆ, ಮತ್ತು ಇಂದು ಭಾರತವು ನೂರಾರು ರಕ್ಷಣಾ ಸಾಧನಗಳನ್ನು ದೇಶೀಯವಾಗಿ ತಯಾರಿಸುತ್ತಿದೆ. ಗಡಿ ಮೂಲಸೌಕರ್ಯ ಕಾರ್ಯಚಟುವಟಿಕೆಗಳು ಅತಿ ವೇಗವಾಗಿ ನಡೆಯುತ್ತಿದೆ. ಈ ಮೂಲಕ,  ಇವುಗಳು ಭಾರತದ ಯುವಕರಿಗೆ ನೂತನ ಅವಕಾಶಗಳು ಮತ್ತು ಸಾಧ್ಯತೆಗಳ ಹೊಸ ಜಗತ್ತನ್ನು ತೆರೆಯುತ್ತಿವೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು .

ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿನ ಪ್ರಗತಿಯ ದಾಪುಗಾಲುಗಳನ್ನು ಪ್ರಧಾನಮಂತ್ರಿಯವರು ಯುವಜನರ ಸಾಮರ್ಥ್ಯಗಳಲ್ಲಿ ವಿಶ್ವಾಸವಿಡುವುದರ ಸಕಾರಾತ್ಮಕ ಫಲಿತಾಂಶಗಳ ಉದಾಹರಣೆಯಾಗಿ ಪ್ರಸ್ತುತಪಡಿಸಿದರು. “ಮೊದಲ ಖಾಸಗಿ ಉಪಗ್ರಹದ ಉಡಾವಣೆಯಂತಹ ಉತ್ತಮ ಫಲಿತಾಂಶಗಳ ಮೂಲಕ ಯುವ ಪ್ರತಿಭೆಗಳಿಗೆ ಬಾಹ್ಯಾಕಾಶ ಕ್ಷೇತ್ರದ ಬಾಗಿಲು ಈಗ ತೆರೆದಿವೆ. ಅದೇ ರೀತಿ, ಗೇಮಿಂಗ್ ಮತ್ತು ಅನಿಮೇಷನ್ ಕ್ಷೇತ್ರವು ಭಾರತದ ಪ್ರತಿಭಾವಂತ ಯುವಕರಿಗೆ ಅವಕಾಶಗಳನ್ನು ವಿಸ್ತರಿಸಿ ನೀಡುತ್ತಿವೆ. ಡ್ರೋನ್ ತಂತ್ರಜ್ಞಾನವು ಮನರಂಜನೆ, ಲಾಜಿಸ್ಟಿಕ್ಸ್ನಿಂದ ಕೃಷಿಯವರೆಗೆ ಹೊಸ ಹೊಸ ವೈವಿದ್ಯಮಯ ಕ್ಷೇತ್ರಗಳ ಬಾಗಿಲನ್ನು ತೆರೆಯುತ್ತಿದೆ.”ಎಂದು ಪ್ರಧಾನಮಂತ್ರಿಯವರು ಹೇಳಿದರು.

ರಕ್ಷಣಾ ಪಡೆಗಳು ಮತ್ತು ಸಂಸ್ಥೆಗಳೊಂದಿಗೆ ಯುವಜನತೆ ಹೆಚ್ಚುಹೆಚ್ಚು ಸಂಬಂಧ ಹೊಂದುವ ಆಕಾಂಕ್ಷೆಯ ಬಗ್ಗೆ ಪ್ರಧಾನಮಂತ್ರಿಯವರು ಮಾತನಾಡುತ್ತಾ, “ಇದು ವಿಶೇಷವಾಗಿ ದೇಶದ ಹೆಣ್ಣುಮಕ್ಕಳಿಗೆ ಉತ್ತಮ ಸಾಧ್ಯತೆಗಳ ಸಮಯ” ಎಂದು ಹೇಳಿದರು. “ಕಳೆದ 8 ವರ್ಷಗಳಲ್ಲಿ ಪೊಲೀಸ್ ಮತ್ತು ಅರೆಸೇನಾ ಪಡೆಗಳಲ್ಲಿ ಮಹಿಳೆಯರ ಸಂಖ್ಯೆ ದ್ವಿಗುಣಗೊಂಡಿರುವದು ಇಂದು ಸಾಕ್ಷಿಯಾಗಿದೆ. ಎಲ್ಲಾ ಮೂರು ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಸೇರ್ಪಡೆ ಹಾದಿ ಸುಗಮವಾಗಿದೆ. ನೌಕಾಪಡೆಯಲ್ಲಿ ಕೂಡಾ ಮಹಿಳೆಯರ ಮೊದಲ ನೇಮಕಾತಿ ನಡೆಯಿತು. ಸಶಸ್ತ್ರ ಪಡೆಗಳಲ್ಲಿ ಮಹಿಳೆಯರು ಯುದ್ಧದಲ್ಲಿ ಕೂಡಾ ಭಾಗವಹಿಸಿತ್ತಿದ್ದಾರೆ. ಪುಣೆಯ ಎನ್.ಡಿ.ಎ.ಯಲ್ಲಿ ಮಹಿಳಾ ಕೆಡೆಟ್‌ ಗಳ ಮೊದಲ ಬ್ಯಾಚ್ ತರಬೇತಿಯನ್ನು ಪ್ರಾರಂಭಿಸಿದೆ. ಸೈನಿಕ ಶಾಲೆಗಳಲ್ಲಿ 1500 ಬಾಲಕಿಯರು ಪ್ರವೇಶ ಪಡೆದಿದ್ದಾರೆ. ಎನ್.ಸಿ.ಸಿ. ಕೂಡಾ ಕಳೆದ ದಶಕದಲ್ಲಿ ಮಹಿಳೆಯರ ಭಾಗವಹಿಸುವಿಕೆಯಲ್ಲಿ ಸ್ಥಿರವಾದ ಏರಿಕೆಯನ್ನು ಕಂಡಿದೆ.” ಎಂದು ಪ್ರಧಾನಮಂತ್ರಿಯವರು ಹೇಳಿದರು.

ಯುವ ಶಕ್ತಿಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, “ದೇಶದ ಗಡಿ ಮತ್ತು ಕರಾವಳಿ ಪ್ರದೇಶಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಕೆಡೆಟ್‌ ಗಳು ದಾಖಲಾಗಿದ್ದಾರೆ ಮತ್ತು ರಾಷ್ಟ್ರದ ಅಭಿವೃದ್ಧಿಗಾಗಿ ಈ ರೀತಿಯಲ್ಲಿ ಹೆಚ್ಚಿನ ಸಂಖ್ಯೆಯ ಯುವಜನತೆ ಒಗ್ಗೂಡಿದರೆ, ದೇಶದ ಯಾವುದೇ ಉದ್ದೇಶವು ಸಾಧಿಸದೆ ಉಳಿಯುವುದಿಲ್ಲ” ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದರು. “ಕೆಡೆಟ್‌ ಗಳು ವೈಯಕ್ತಿಕವಾಗಿ ಮತ್ತು ಸಂಸ್ಥೆಯಾಗಿ ರಾಷ್ಟ್ರದ ಅಭಿವೃದ್ಧಿಯಲ್ಲಿ ತಮ್ಮ ಪಾತ್ರವನ್ನು ವಿಸ್ತರಿಸುತ್ತಾರೆ. ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಅನೇಕ ಧೀರರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಮಾರ್ಗವನ್ನು ಕೈಗೊಂಡಿದ್ದರು, ಆದರೆ ಇಂದು ದೇಶಕ್ಕಾಗಿ ಬದುಕುವ ಯುವಜನತೆಯ ಸಂಕಲ್ಪವೇ ರಾಷ್ಟ್ರವನ್ನು ಹೊಸ ಎತ್ತರದ ಹಂತಕ್ಕೆ ಕೊಂಡೊಯ್ಯುತ್ತಿದೆ” ಎಂದು ಪ್ರಧಾನಮಂತ್ರಿಯವರು ವಿಶ್ವಾಸ ವ್ಯಕ್ತಪಡಿಸಿದರು.

ಜನರ ನಡುವೆ ಭಿನ್ನಾಭಿಪ್ರಾಯಗಳನ್ನು ಬಿತ್ತುವ ಮತ್ತು ಕಂದಕವನ್ನು ಸೃಷ್ಟಿಸುವ ಪ್ರಯತ್ನಗಳ ವಿರುದ್ಧ ಪ್ರಧಾನಮಂತ್ರಿಯವರು ಸ್ಪಷ್ಟವಾದ ಎಚ್ಚರಿಕೆ ಸಂದೇಶವನ್ನು ನೀಡಿದರು. "ಅಂತಹ ಪ್ರಯತ್ನಗಳ ಹೊರತಾಗಿಯೂ ಭಾರತದ ಜನತೆಯಲ್ಲಿ ಎಂದಿಗೂ ಭಿನ್ನಾಭಿಪ್ರಾಯಗಳು ಇರುವುದಿಲ್ಲ" ಎಂದು ಅವರು ಹೇಳಿದರು. " 'ಮಾ ಕೆ ದೂಧ್ ಮೈನ್ ಕಭಿ ದಾರರ್ ನಹಿ ಹೋ ಸಕ್ತಿ'… ಈ ಏಕತೆಯ ಮಂತ್ರವು ಭಾರತದ ಶಕ್ತಿಯಾಗಿದೆ, ಅಂತಿಮ ಪ್ರತಿರೋಧಕವಾಗಿದೆ. ಈ ಏಕತೆಯ ಮಂತ್ರವು ಪ್ರತಿಜ್ಞೆಯಾಗಿದೆ, ಭಾರತವು ಭವ್ಯತೆಯನ್ನು ಸಾಧಿಸುವ ಏಕೈಕ ಮಾರ್ಗವಾಗಿದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು.

“ಇದು ಕೇವಲ ಭಾರತದ ಅಮೃತ ಕಾಲ ಮಾತ್ರವಲ್ಲ ಬದಲಾಗಿ ಭಾರತದ ಯುವಕರ ಅಮೃತ ಕಾಲ ಮತ್ತು ರಾಷ್ಟ್ರವು ತನ್ನ ಸ್ವಾತಂತ್ರ್ಯದ 100 ನೇ ವರ್ಷವನ್ನು ಇನ್ನೇನು ಕೆಲವೇ ವರ್ಷಗಳಲ್ಲಿ ಆಚರಿಸುವಾಗ, ಅದರ ಯಶಸ್ಸು ಯುವಜನತೆಯ ಕೈಯಲ್ಲಿರುತ್ತದೆ. ನಾವು ಯಾವುದೇ ಅವಕಾಶವನ್ನು ಕಳೆದುಕೊಳ್ಳಬಾರದು ಮತ್ತು ಭಾರತವನ್ನು ಹೊಸ ಎತ್ತರದ ಹಂತಕ್ಕೆ ಕೊಂಡೊಯ್ಯುವ ಸಂಕಲ್ಪದೊಂದಿಗೆ ಮುಂದುವರಿಯಬೇಕು" ಎಂದು ಹೇಳುತ್ತಾ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತನ್ನ ಭಾಷಣವನ್ನು ಮುಕ್ತಾಯಗೊಳಿದರು.

ಕೇಂದ್ರ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್, ಎನ್.ಸಿ.ಸಿ.ಯ ಮಹಾ ನಿರ್ದೇಶಕ  ಲೆಫ್ಟಿನೆಂಟ್ ಜನರಲ್ ಗುರ್ಬೀರ್ಪಾಲ್ ಸಿಂಗ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ನೌಕಾಪಡೆ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ವಾಯುಪಡೆ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ಮತ್ತು ರಕ್ಷಣಾ ಕಾರ್ಯದರ್ಶಿ ಶ್ರೀ ಗಿರಿಧರ್ ಅಮಮನೆ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

*****



(Release ID: 1894400) Visitor Counter : 128