ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

  ʻಉದ್ಯೋಗ ಮೇಳʼದ ಅಡಿಯಲ್ಲಿ 71,000 ನೇಮಕಾತಿ ಪತ್ರಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿತರಿಸಿದ ಪ್ರಧಾನಿ


ಹೊಸದಾಗಿ ನೇಮಕಗೊಂಡವರೊಂದಿಗೆ ಪ್ರಧಾನಿ ಸಂವಹನ 

"ನಿರಂತರ ಉದ್ಯೋಗ ಮೇಳಗಳು ಈ ಸರಕಾರದ ಹೆಗ್ಗುರುತಾಗಿ ಮಾರ್ಪಟ್ಟಿವೆ"

"ಕೇಂದ್ರೀಯ ಉದ್ಯೋಗಗಳಲ್ಲಿ, ನೇಮಕಾತಿ ಪ್ರಕ್ರಿಯೆಯು ಹೆಚ್ಚು ಸುವ್ಯವಸ್ಥಿತ ಮತ್ತು ಸಮಯ ಮಿತಿಯಲ್ಲಿ ನಡೆಯುತ್ತಿದೆ"

"ಪಾರದರ್ಶಕ ನೇಮಕಾತಿ ಮತ್ತು ಬಡ್ತಿಗಳು ಯುವಕರಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತವೆ"

ʻನಾಗರಿಕರು ಸದಾ ಸರಿಯಾಗಿರುತ್ತಾರೆ' ಎಂಬ ಸೇವಾ ಮನೋಭಾವದಿಂದ ಸರಕಾರಿ ನೌಕರರು ಸೇವೆ ಸಲ್ಲಿಸಬೇಕು: ಪ್ರಧಾನಿ

"ತಂತ್ರಜ್ಞಾನದ ಮೂಲಕ ಸ್ವಯಂ ಕಲಿಕೆಯು ಇಂದಿನ ಪೀಳಿಗೆಗೆ ಒಂದು ಸದವಕಾಶವಾಗಿದೆ"

"ಇಂದಿನ ಭಾರತವು ಶರವೇಗದ ಬೆಳವಣಿಗೆಗೆ ಸಾಕ್ಷಿಯಾಗುತ್ತಿದ್ದು, ಆ ಮೂಲಕ ಸ್ವಯಂ-ಉದ್ಯೋಗಾವಕಾಶಗಳ ಬೃಹತ್ ವಿಸ್ತರಣೆಗೆ ಕಾರಣವಾಗುತ್ತಿದೆ"

"ನೀವು ಕಲಿಯಬೇಕು ಮತ್ತು ದೇಶವನ್ನು ಮುಂದೆ ಕೊಂಡೊಯ್ಯಲು ನಿಮ್ಮನ್ನು ನೀವು ಸಮರ್ಥರನ್ನಾಗಿಸಿಕೊಳ್ಳಬೇಕು"

Posted On: 20 JAN 2023 11:59AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ಸೇರ್ಪಡೆಗೊಂಡವರಿಗೆ ಸುಮಾರು 71,000 ನೇಮಕಾತಿ ಪತ್ರಗಳನ್ನು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿತರಿಸಿದರು. ಉದ್ಯೋಗ ಸೃಷ್ಟಿಗೆ ಅತ್ಯುನ್ನತ ಆದ್ಯತೆ ನೀಡುವ ಪ್ರಧಾನಮಂತ್ರಿಯವರ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ ʻಉದ್ಯೋಗ ಮೇಳʼ ಒಂದು ಪ್ರಮುಖ ಹೆಜ್ಜೆಯಾಗಿದೆ. ʻಉದ್ಯೋಗ ಮೇಳʼವು ಉದ್ಯೋಗ ಸೃಷ್ಟಿಯ ವೇಗವನ್ನು ಮತ್ತಷ್ಟು ಹೆಚ್ಚಿಸಲು ನೆರವಾಗುವುದಲ್ಲದೆ, ಯುವಜನತೆಯ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಅವರ ಭಾಗವಹಿಸುವಿಕೆಗೆ ಅರ್ಥಪೂರ್ಣ ಅವಕಾಶಗಳನ್ನು ಅದು ಒದಗಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ಸಂದರ್ಭದಲ್ಲಿ ನೇಮಕಗೊಂಡವರೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು.

ʻಪಂಜಾಬ್ ನ್ಯಾಷನಲ್ ಬ್ಯಾಂಕ್ʼಗೆ ನೇಮಕಾತಿ ಪತ್ರ ಪಡೆದ ಪಶ್ಚಿಮ ಬಂಗಾಳದ ಶ್ರೀಮತಿ ಸುಪ್ರಭಾ ಬಿಸ್ವಾಸ್ ಅವರು ಪ್ರಧಾನಮಂತ್ರಿಯವರೊಂದಿಗೆ ಸಂವಾದ ನಡೆಸಿದ ಮೊದಲಿಗರು. ನೇಮಕಾತಿಯ ಪ್ರಕ್ರಿಯೆಯ ವಿವಿಧ ಹಂತಗಳನ್ನು ತ್ವರಿತವಾಗಿ ಪೂರ್ಣಗೊಳಿಸಿದ್ದಕ್ಕಾಗಿ ಮತ್ತು ತಮಗೆ ಸೇವೆ ಸಲ್ಲಿಸುವ ಅವಕಾಶ ನೀಡಿದ್ದಕ್ಕಾಗಿ ಅವರು ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ಅಧ್ಯಯನ ಮುಂದುವರಿಕೆ ಬಗ್ಗೆಯೂ ಸುಪ್ರಭಾ ಅವರನ್ನು ಪ್ರಧಾನಿ ಕೇಳಿದರು. ಇದಕ್ಕೆ ಉತ್ತರಿಸಿದ ಸುಪ್ರಭಾ ಅವರು ʻಐಜಿಒಟಿ (iGOT) ಮಾಡ್ಯೂಲ್‌ʼ ಜತೆಗಿನ ತಮ್ಮ ತಮ್ಮ ಒಡನಾಟವನ್ನು ವಿವರಿಸಿದರು ಮತ್ತು ಮಾಡ್ಯೂಲ್‌ನ ಪ್ರಯೋಜನವನ್ನು ವಿವರಿಸಿದರು. ತಮ್ಮ ಉದ್ಯೋಗದಲ್ಲಿ ಡಿಜಿಟಲ್ ವಹಿವಾಟನ್ನು ಉತ್ತೇಜಿಸುವ ಬಗ್ಗೆಯೂ ಸುಪ್ರಭಾ ಅವರನ್ನು ಶ್ರೀ ಮೋದಿ ಅವರು ವಿಚಾರಿಸಿದರು. ಹೆಣ್ಣುಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಹೆಜ್ಜೆ ಇಡುತ್ತಿರುವುದಕ್ಕೆ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು.

ಶ್ರೀನಗರದ ʻಎನ್ಐಟಿʼಯಲ್ಲಿ ಕಿರಿಯ ಸಹಾಯಕರಾಗಿ ನೇಮಕಗೊಂಡ ಜಮ್ಮು-ಕಾಶ್ಮೀರದ ಶ್ರೀನಗರದ ಶ್ರೀ ಫೈಸಲ್ ಶೌಕತ್ ಷಾ ಅವರು ಸಹ ಪ್ರಧಾನಮಂತ್ರಿಯವರೊಂದಿಗೆ ಸಂವಾದ ನಡೆಸಿದರು. ತಮ್ಮ ಕುಟುಂಬದಲ್ಲಿ ಸರಕಾರಿ ಉದ್ಯೋಗವನ್ನು ಪಡೆದ ಮೊದಲ ಸದಸ್ಯ ತಾವೆಂದು ಫೈಸಲ್ ಮಾಹಿತಿ ನೀಡಿದರು. ಈ ನೇಮಕಾತಿಯು ಗೆಳೆಯರ ಮೇಲೆ ಬೀರುವ ಪರಿಣಾಮದ ಬಗ್ಗೆ ಫೈಸಲ್ ಅವರನ್ನು ಪ್ರಧಾನಿ ಕೇಳಿದರು. ತಮ್ಮ ಸ್ನೇಹಿತರು ಸರಕಾರಿ ಕೆಲಸಕ್ಕೆ ಸೇರಲು ಪ್ರೇರಣೆ ಪಡೆದಿದ್ದಾರೆ ಎಂದು ಫೈಸಲ್ ಪ್ರಧಾನಿಗೆ ಮಾಹಿತಿ ನೀಡಿದರು. ಅವರು ʻಐಜಿಒಟಿʼ (iGOT) ಮಾಡ್ಯೂಲ್‌ನ ಪ್ರಯೋಜನಗಳನ್ನು ಸಹ ತಿಳಿಸಿದರು. ಫೈಸಲ್ ಅವರಂತಹ ಯುವಕರಿಂದಾಗಿ ಜಮ್ಮು ಮತ್ತು ಕಾಶ್ಮೀರ  ಹೊಸ ಎತ್ತರವನ್ನು ತಲುಪಲಿದೆ ಎಂಬ ವಿಶ್ವಾಸವಿದೆ ಎಂದು ಪ್ರಧಾನಿ ವ್ಯಕ್ತಪಡಿಸಿದರು. ಕಲಿಕೆಯನ್ನು ಮುಂದುವರಿಸುವಂತೆ ನೇಮಕಗೊಂಡ ಯುವಕರಿಗೆ ಪ್ರಧಾನಿ ಸಲಹೆ ನೀಡಿದರು. 

ಮಣಿಪುರದ ವಹ್ನೀ ಚಾಂಗ್ ಅವರು ಗುವಾಹಟಿಯ ʻಏಮ್ಸ್‌ʼನಲ್ಲಿ ನರ್ಸಿಂಗ್ ಅಧಿಕಾರಿಯಾಗಿ ನೇಮಕಾತಿ ಪತ್ರವನ್ನು ಪಡೆದುಕೊಂಡರು. ಈಶಾನ್ಯ ಭಾರತದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದು ತಮ್ಮ ಕನಸು ಎಂದು ಅವರು ಹೇಳಿದರು. ಇತರ ಅಭ್ಯರ್ಥಿಗಳಂತೆಯೇ ವಹ್ನೀ ಸಹ ಅವರ ಕುಟುಂಬದಲ್ಲಿ ಸರಕಾರಿ ಉದ್ಯೋಗ ಪಡೆದ ಮೊದಲ ವ್ಯಕ್ತಿಯಾಗಿದ್ದಾರೆ. ಆಯ್ಕೆ ಪ್ರಕ್ರಿಯೆಯಲ್ಲಿ ಏನಾದರೂ ಸಮಸ್ಯೆಗಳನ್ನು ಎದುರಿಸಿದಿರಾ ಎಂದು ಪ್ರಶ್ನಿಸಿದ ಪ್ರಧಾನಿ, ಈ ಬಗ್ಗೆ ತಮ್ಮ ಅನುಭವ ಹಂಚಿಕೊಳ್ಳುವಂತೆ ವಹ್ನೀ ಅವರನ್ನು ಕೇಳಿದರು. ನಿರಂತರ ಕಲಿಕೆಯ ಬಯಕೆಯನ್ನು ಸಹ ವಹ್ನಿ ವ್ಯಕ್ತಪಡಿಸಿದರು. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವನ್ನು ನಿಭಾಯಿಸುವ ಕುರಿತಾಗಿ ಇರುವ ನಿಯಮಗಳ ಬಗ್ಗೆ ಸಂವೇದನಾಶೀಲತೆ ಮತ್ತು ಅರಿವಿನ ಬಗ್ಗೆಯೂ ಅವರು ಮಾಹಿತಿ ನೀಡಿದರು. ಈಶಾನ್ಯ ವಲಯದಲ್ಲಿ ನೇಮಕಗೊಂಡಿದ್ದಕ್ಕಾಗಿ ವಹ್ನೀ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, ಈ ಪ್ರದೇಶದ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ಪುನರುಚ್ಛರಿಸಿದರು.

ಬಿಹಾರ ಮೂಲದ ದಿವ್ಯಾಂಗರಾದ ಶ್ರೀ ರಾಜು ಕುಮಾರ್ ಅವರು ಭಾರತೀಯ ಪೂರ್ವ ರೈಲ್ವೆಯಲ್ಲಿ ಕಿರಿಯ ಎಂಜಿನಿಯರ್ ಆಗಿ ನೇಮಕಾತಿ ಪತ್ರವನ್ನು ಪಡೆದರು. ದಿವ್ಯಾಂಗರಾದ ರಾಜು ತಮ್ಮ ಪ್ರಯಾಣವನ್ನು ವಿವರಿಸಿದರು ಮತ್ತು ಜೀವನದಲ್ಲಿ ಮತ್ತಷ್ಟು ಮುಂದುವರಿಯುವ ಬಯಕೆಯನ್ನು ವ್ಯಕ್ತಪಡಿಸಿದರು. ಅವರು ತಮ್ಮ ಸಹೋದ್ಯೋಗಿಗಳು ಮತ್ತು ಕುಟುಂಬದಿಂದ ಪಡೆದ ಬೆಂಬಲದ ಬಗ್ಗೆಯೂ ಮಾತನಾಡಿದರು. ರಾಜು ಅವರು ʻಕರ್ಮಯೋಗಿ  ಪ್ರಾರಂಭ್‌ʼ ಕೋರ್ಸ್‌ನಲ್ಲಿ 8 ಕೋರ್ಸ್‌ಗಳನ್ನು ಮಾಡಿದ್ದಾರೆ. ಒತ್ತಡ ನಿರ್ವಹಣೆ ಮತ್ತು ನೀತಿ ಸಂಹಿತೆಯ ಕೋರ್ಸ್‌ನಿಂದ ಹೆಚ್ಚಿನ ಪ್ರಯೋಜನ ಪಡೆದಿದ್ದಾರೆ. ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ನಾಗರಿಕ ಸೇವಾ ಪರೀಕ್ಷೆಗೆ ಪ್ರಯತ್ನಿಸುವುದಾಗಿ ಅವರು ಪ್ರಧಾನಿಗೆ ತಿಳಿಸಿದರು. ಪ್ರಧಾನಮಂತ್ರಿಯವರು ಅವರ ಪ್ರಯಾಣಕ್ಕೆ ಶುಭ ಹಾರೈಸಿದರು.

ತೆಲಂಗಾಣದ ಕನ್ನಮಾಲಾ ವಂಶಿ ಕೃಷ್ಣ ಅವರು ʻಕೋಲ್ ಇಂಡಿಯಾ ಲಿಮಿಟೆಡ್ʼನಲ್ಲಿ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ನೇಮಕಾತಿ ಪತ್ರವನ್ನು ಪಡೆದರು. ಪ್ರಧಾನಮಂತ್ರಿಯವರು ತಮ್ಮ ಹೆತ್ತವರ ಕಠಿಣ ಪರಿಶ್ರಮ ಮತ್ತು ಕಷ್ಟಗಳನ್ನು ಉಲ್ಲೇಖಿಸಿದರು. ಹೊಸ ತರಬೇತುದಾರ ವಂಶಿ ಕೃಷ್ಣ ಕೂಡಾ ತಮ್ಮ ಪ್ರಯಾಣವನ್ನು ನೆನಪಿಸಿಕೊಂಡರಲ್ಲದೆ, ʻಉದ್ಯೋಗ ಮೇಳʼ ಉಪಕ್ರಮಕ್ಕಾಗಿ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ಈ ಮಾಡ್ಯೂಲ್ ವಿಶೇಷವಾಗಿ ಮೊಬೈಲ್‌ ಫೋನ್‌ಗಳಲ್ಲಿ ಲಭ್ಯವಿರುವುದರಿಂದ ಬಹಳ ಉಪಯುಕ್ತಕಾರಿ ಎಂದು ಕನ್ನಮಾಲಾ ವಂಶಿ ಕೃಷ್ಣ ಅವರು ಅಭಿಪ್ರಾಯಪಟ್ಟರು. ವಂಶಿ ಕೃಷ್ಣ ಅವರಿಗೆ ಶುಭ ಹಾರೈಸಿದ ಪ್ರಧಾನಿ ಮೋದಿ, ವೃತ್ತಿಜೀವನದಲ್ಲಿ ನಿರಂತರ ಕಲಿಕೆ ಮುಂದುವರಿಸುವಂತೆ ಸಲಹೆ ನೀಡಿದರು. 

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, 2023ರ ಮೊದಲ ʻಉದ್ಯೋಗ ಮೇಳʼವಾಗಿರುವ ಇದು 71,000 ಕುಟುಂಬಗಳಿಗೆ ಸರಕಾರಿ ಉದ್ಯೋಗದ ಅಮೂಲ್ಯ ಉಡುಗೊರೆಯನ್ನು ನೀಡುತ್ತಿದೆ ಎಂದರು. ನೂತನವಾಗಿ ನೇಮಕಗೊಂಡವರನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, ಈ ಉದ್ಯೋಗಾವಕಾಶಗಳು ನೇಮಕಗೊಂಡವರಲ್ಲಿ ಮಾತ್ರವಲ್ಲದೆ ಕೋಟ್ಯಂತರ ಕುಟುಂಬಗಳಲ್ಲೂ ಹೊಸ ಭರವಸೆಯ ಆಶಾಕಿರಣವನ್ನು ಮೂಡಿಸಲಿವೆ ಎಂದರು. ʻಎನ್‌ಡಿಎʼ ಆಡಳಿತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಉದ್ಯೋಗ ಮೇಳಗಳನ್ನು ನಿಯಮಿತವಾಗಿ ಆಯೋಜಿಸುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಲಕ್ಷಾಂತರ ಹೊಸ ಕುಟುಂಬಗಳು ಸರಕಾರಿ ಉದ್ಯೋಗಗಳಿಗೆ ನೇಮಕಗೊಳ್ಳಲಿವೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಅಸ್ಸಾಂ ಸರಕಾರವು ನಿನ್ನೆಯಷ್ಟೇ ʻಉದ್ಯೋಗ ಮೇಳʼವನ್ನು ಆಯೋಜಿಸಿದೆ ಮತ್ತು ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರಾಖಂಡದಂತಹ ರಾಜ್ಯಗಳು ಶೀಘ್ರದಲ್ಲೇ ಇದನ್ನು ಆಯೋಜಿಸಲಿವೆ ಎಂದು ಅವರು ಮಾಹಿತಿ ನೀಡಿದರು. "ನಿಯಮಿತ ಉದ್ಯೋಗ ಮೇಳʼಗಳು ಈ ಸರಕಾರದ ಹೆಗ್ಗುರುತಾಗಿ ಮಾರ್ಪಟ್ಟಿವೆ. ಈ ಸರಕಾರವು ಯಾವುದೇ ನಿರ್ಣಯ ಕೈಗೊಂಡರೂ ಅದು ಸಾಕಾರಗೊಳ್ಳುತ್ತದೆ ಎಂಬುದನ್ನು ಅವು ತೋರಿಸುತ್ತವೆ,ʼʼ ಎಂದು ಪ್ರಧಾನಿ ಹೇಳಿದರು. 

ಹೊಸದಾಗಿ ನೇಮಕಗೊಂಡವರ ಮೊಗದಲ್ಲಿ ಸಂತಸ ಮತ್ತು ಸಂತೃಪ್ತಿಯನ್ನು ಸ್ಪಷ್ಟವಾಗಿ ಗುರುತಿಸಬಹುದು.  ಈ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಸಾಮಾನ್ಯ ಹಿನ್ನೆಲೆಯಿಂದ ಬಂದವರು. ಅನೇಕರು ತಮ್ಮ ಕುಟುಂಬದಲ್ಲಿ ಐದು ತಲೆಮಾರುಗಳಲ್ಲಿ ಸರಕಾರಿ ಉದ್ಯೋಗ ಪಡೆದ ಮೊದಲಿಗರು ಎಂದು ಪ್ರಧಾನಿ ಹೇಳಿದರು. ಇದು ಕೇವಲ ಸರಕಾರಿ ಉದ್ಯೋಗ ಪಡೆಯುವುದಕ್ಕಿಂತಲೂ ಮಿಗಿಲಾದದ್ದು ಎಂದು ಪ್ರಧಾನಿ ಹೇಳಿದರು. ಪಾರದರ್ಶಕ ಮತ್ತು ಸ್ಪಷ್ಟ ನೇಮಕಾತಿ ಪ್ರಕ್ರಿಯೆಯ ಮೂಲಕ ತಮ್ಮ ಪ್ರತಿಭೆಯನ್ನು ಗುರುತಿಸಲಾಗಿದೆ ಎಂದು ಅಭ್ಯರ್ಥಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. "ನೇಮಕಾತಿ ಪ್ರಕ್ರಿಯೆಯಲ್ಲಿ ಭಾರಿ ಬದಲಾವಣೆ ನಿಮ್ಮ ಅನುಭವಕ್ಕೆ ಬಂದಿರಬಹುದು. ಕೇಂದ್ರೀಯ ಉದ್ಯೋಗಗಳಲ್ಲಿ, ನೇಮಕಾತಿ ಪ್ರಕ್ರಿಯೆಯು ಹೆಚ್ಚು ಸುವ್ಯವಸ್ಥಿತ ಮತ್ತು ಕಾಲಮಿತಿಯಲ್ಲಿ ನಡೆಯುತ್ತಿದೆ,ʼʼ ಎಂದು ಪ್ರಧಾನಿ ಹೇಳಿದರು.

ಈ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ವೇಗವು ಇಂದು ಸರಕಾರದ ಕಾರ್ಯಚಟುವಟಿಕೆಗಳ ಪ್ರತಿಯೊಂದು ಅಂಶವನ್ನು ನಿರೂಪಿಸುತ್ತದೆ ಎಂದು ಪ್ರಧಾನಿ ಹೇಳಿದರು. ವಾಡಿಕೆಯ ಪ್ರಚಾರಗಳು ಸಹ ವಿಳಂಬ ಮತ್ತು ವಿವಾದಗಳಲ್ಲಿ ಮುಳುಗಿದ್ದ ಸಮಯವನ್ನು ಶ್ರೀ ಮೋದಿ ಅವರು ನೆನಪಿಸಿಕೊಂಡರು. ಈ ಸರಕಾರವು ಅಂತಹ ಸಮಸ್ಯೆಗಳನ್ನು ಪರಿಹರಿಸಿದೆ ಮತ್ತು ಪಾರದರ್ಶಕ ಪ್ರಕ್ರಿಯೆಯನ್ನು ಖಚಿತಪಡಿಸಿದೆ ಎಂದು ಅವರು ಹೇಳಿದರು. "ಪಾರದರ್ಶಕ ನೇಮಕಾತಿ ಮತ್ತು ಬಡ್ತಿ ಯುವಜನರಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ" ಎಂದು ಅವರು ಅಭಿಪ್ರಾಯಪಟ್ಟರು.

ಇಂದು ತಮ್ಮ ನೇಮಕಾತಿ ಪತ್ರಗಳನ್ನು ಸ್ವೀಕರಿಸಿದವರಿಗೆ, ಇದು ಅವರ ಹೊಸ ಪ್ರಯಾಣವೊಂದರ ಆರಂಭ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ರಾಷ್ಟ್ರದ ಅಭಿವೃದ್ಧಿಯ ಪಯಣದಲ್ಲಿ ಸರಕಾರಿ ಯಂತ್ರದ ಭಾಗವಾಗುವ ಮೂಲಕ ಉದ್ಯೋಗಿಗಳು ನೀಡಬಹುದಾದ ಕೊಡುಗೆಗಳು ಮತ್ತು ಪಾಲುದಾರಿಕೆಗಳನ್ನು ಒತ್ತಿ ಹೇಳಿದರು. ಪ್ರಸ್ತುತ ಹೊಸದಾಗಿ ನೇಮಕಗೊಂಡಿರುವ ಅನೇಕರು ಸರಕಾರದ ನೇರ ಪ್ರತಿನಿಧಿಗಳಾಗಿ ಸಾರ್ವಜನಿಕರೊಂದಿಗೆ ಸಂವಹನ ನಡೆಸಲಿದ್ದಾರೆ. ಅವರು ತಮ್ಮದೇ ಆದ ರೀತಿಯಲ್ಲಿ ಜನರ ಮೇಲೆ ಪ್ರಭಾವ ಬೀರುತ್ತಾರೆ ಎಂದು ಪ್ರಧಾನಿ ಗಮನ ಸೆಳೆದರು. ʻಗ್ರಾಹಕರು ಸದಾ ಸರಿಯಾಗಿರುತ್ತಾರೆʼ ಎಂಬ ವ್ಯಾಪಾರ ಮತ್ತು ಕೈಗಾರಿಕಾ ಜಗತ್ತಿನ ಗಾದೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, 'ನಾಗರಿಕ ಯಾವಾಗಲೂ ಸರಿಯಾಗಿರುತ್ತಾರೆ' ಎಂಬ ಇದೇ ರೀತಿಯ ಮಂತ್ರವನ್ನು ಆಡಳಿತದಲ್ಲಿ ಜಾರಿಗೆ ತರಬೇಕು ಎಂದು ಹೇಳಿದರು. "ಇದು ಸೇವಾ ಮನೋಭಾವದ ಭಾವನೆಯನ್ನು ಹೆಚ್ಚಿಸುತ್ತದೆ ಮತ್ತು ಅದನ್ನು ಬಲಪಡಿಸುತ್ತದೆ" ಎಂದು ಅವರು ಹೇಳಿದರು. ಯಾರೇ ಸರಕಾರಿ ಉದ್ಯೋಗಕ್ಕೆ ಸೇರಿದರೂ ಅದನ್ನು ಸರಕಾರಿ ಸೇವೆ ಎಂದು ಉಲ್ಲೇಖಿಸಲಾಗುತ್ತದೆಯೇ ಹೊರತು ಉದ್ಯೋಗವಾಗಿ ಅಲ್ಲ ಎಂದು ಪ್ರಧಾನಿ. 140 ಕೋಟಿ ಭಾರತೀಯ ನಾಗರಿಕರಿಗೆ ಸೇವೆ ಸಲ್ಲಿಸುವ ಮೂಲಕ ಅನುಭವಿಸಬಹುದಾದ ಸಂತೋಷವನ್ನು ವಿಶೇಷವಾಗಿ ಉಲ್ಲೇಖಿಸಿದ ಅವರು ಜನರ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಅನೇಕ ಸರಕಾರಿ ನೌಕರರು ʻಐಜಿಒಟಿʼ (iGOT) ಕರ್ಮಯೋಗಿ’ ವೇದಿಕೆಯಲ್ಲಿ ಆನ್‌ಲೈನ್ ಕೋರ್ಸ್‌ಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಅಧಿಕೃತ ತರಬೇತಿಯ ಜೊತೆಗೆ, ಈ ವೇದಿಕೆಯು ವೈಯಕ್ತಿಕ ಅಭಿವೃದ್ಧಿಗಾಗಿ ಹಲವು ಕೋರ್ಸ್‌ಗಳನ್ನು ಹೊಂದಿದೆ ಎಂದರು. ತಂತ್ರಜ್ಞಾನದ ಮೂಲಕ ಸ್ವಯಂ ಕಲಿಕೆ ಇಂದಿನ ಪೀಳಿಗೆಗೆ ಒಂದು ಅವಕಾಶವಾಗಿದೆ ಎಂದು ಅವರು ಹೇಳಿದರು. ಇದಕ್ಕೆ ತಮ್ಮನ್ನೇ ಉದಾಹರಣೆಯಾಗಿ ಉಲ್ಲೇಖಿಸಿದ ಶ್ರೀ ಮೋದಿ ಅವರು ತಮ್ಮಲ್ಲಿರುವ ವಿದ್ಯಾರ್ಥಿಯನ್ನು ತಾವು ಎಂದಿಗೂ ಸಾಯಲು ಬಿಡಲಿಲ್ಲ ಎಂದು ಹೇಳಿದರು. "ಸ್ವಯಂ ಕಲಿಕೆಯ ಮನೋಭಾವವು ಕಲಿಯುವವರ, ಅವರ ಸಂಸ್ಥೆಗಳ ಮತ್ತು ಭಾರತದ ಸಾಮರ್ಥ್ಯಗಳನ್ನು ಸುಧಾರಿಸುತ್ತದೆ" ಎಂದು ತಿಳಿಸಿದರು.

"ವೇಗವಾಗಿ ಬದಲಾಗುತ್ತಿರುವ ಭಾರತದಲ್ಲಿ, ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳು ನಿರಂತರವಾಗಿ ಸುಧಾರಿಸುತ್ತಿವೆ. ಈ ವೇಗದ ಬೆಳವಣಿಗೆಯು ಸ್ವಯಂ-ಉದ್ಯೋಗಾವಕಾಶಗಳ ಬೃಹತ್ ವಿಸ್ತರಣೆಗೆ ಕಾರಣವಾಗುತ್ತದೆ. ಇಂದಿನ ಭಾರತವು ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಮಗ್ರ ದೃಷ್ಟಿಕೋನದೊಂದಿಗೆ ಕ್ರಮ ಕೈಗೊಂಡಿರುವುದರಿಂದ ಲಕ್ಷಾಂತರ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಮೂಲಸೌಕರ್ಯದಲ್ಲಿ ನೂರು ಲಕ್ಷ ಕೋಟಿ ಹೂಡಿಕೆಯ ಉದಾಹರಣೆಯನ್ನು ನೀಡಿದ ಅವರು, ಹೊಸದಾಗಿ ನಿರ್ಮಿಸಲಾದ ರಸ್ತೆ ಹೇಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಒತ್ತಿ ಹೇಳಿದರು. ಹೊಸ ರಸ್ತೆಗಳು ಅಥವಾ ರೈಲ್ವೆ ಮಾರ್ಗಗಳ ಅಂಚಿನಲ್ಲಿ ಹೊಸ ಮಾರುಕಟ್ಟೆಗಳು ಹೊರಹೊಮ್ಮುತ್ತವೆ, ಆಹಾರ ಧಾನ್ಯಗಳನ್ನು ಹೊಲದಿಂದ ಮಾರುಕಟ್ಟೆಗೆ ಸಾಗಿಸುವುದು ಸುಲಭವಾಗುತ್ತದೆ, ಜೊತೆಗೆ ಪ್ರವಾಸೋದ್ಯಮಕ್ಕೂ ಇದು ಉತ್ತೇಜನ ನೀಡುತ್ತದೆ ಎಂದು ಪ್ರಧಾನಿ ಉಲ್ಲೇಖಿಸಿದರು. "ಈ ಎಲ್ಲ ಸಾಧ್ಯತೆಗಳು ಉದ್ಯೋಗಾವಕಾಶಗಳಿಗೆ ನಾಂದಿ ಹಾಡಿದವು" ಎಂದು ಪ್ರಧಾನಿ ಹೇಳಿದರು.

ಪ್ರತಿ ಹಳ್ಳಿಗೂ ಬ್ರಾಡ್‌ಬ್ಯಾಂಡ್ ಸಂಪರ್ಕ ಒದಗಿಸುವ ʻಭಾರತ್-ನೆಟ್ʼ ಯೋಜನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇದರಿಂದ ಸೃಷ್ಟಿಯಾಗುವ ಉದ್ಯೋಗಾವಕಾಶಗಳ ಹೊಸ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಿದರು. ತಂತ್ರಜ್ಞಾನದ ಬಗ್ಗೆ ಹೆಚ್ಚು ತಿಳಿವಳಿಕೆ ಇಲ್ಲದವರೂ ಸಹ ಇದರ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಬಲ್ಲರು ಎಂದು ಪ್ರಧಾನಿ ಹೇಳಿದರು. ಇದು ಹಳ್ಳಿಗಳಲ್ಲಿ ಆನ್‌ಲೈನ್ ಸೇವೆಗಳನ್ನು ಒದಗಿಸುವ ಮೂಲಕ ಉದ್ಯಮಶೀಲತೆಯ ಹೊಸ ಕ್ಷೇತ್ರವನ್ನು ತೆರೆದಿದೆ. 2 ಮತ್ತು 3ನೇ ಶ್ರೇಣಿಯ ನಗರಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಉಲ್ಲೇಖಿಸಿದ ಶ್ರೀ ಮೋದಿ, ಈ ಯಶಸ್ಸು ವಿಶ್ವದಲ್ಲಿ ಯುವಕರಿಗೆ ಹೊಸ ಗುರುತನ್ನು ಸೃಷ್ಟಿಸಿದೆ ಎಂದರು.

ನೇಮಕಗೊಂಡವರ ಪ್ರಯಾಣ ಮತ್ತು ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ದೇಶದ ಜನರ ಸೇವೆ ಮಾಡಲು ಅವಕಾಶ ಪಡೆದಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು. ಜೊತೆಗೆ ಅವರನ್ನು ಇಲ್ಲಿಯವರೆಗೆ ಕರೆತಂದದ್ದ ಅಂಶ ಯಾವುದೆಂದು ಸದಾ ನೆನಪಿನಲ್ಲಿರುವಂತೆ ಪ್ರೇರೇಪಿಸಿದರು. ಕಲಿಕೆ ಮತ್ತು ಸೇವೆ ಮುಂದುವರಿಸಲು ಸೂಚಿಸಿದರು. "ದೇಶವನ್ನು ಮುನ್ನಡೆಸಲು ನೀವು ಕಲಿಯಬೇಕು ಮತ್ತು ನಿಮ್ಮನ್ನು ಸಮರ್ಥರನ್ನಾಗಿ ಮಾಡಿಕೊಳ್ಳಬೇಕು" ಎಂದು ಕರೆ ನೀಡುವ ಮೂಲಕ ಪ್ರಧಾನಿ ಮಾತು ಮುಗಿಸಿದರು.

ಹಿನ್ನೆಲೆ

ಉದ್ಯೋಗ ಸೃಷ್ಟಿಗೆ ಅತ್ಯುನ್ನತ ಆದ್ಯತೆ ನೀಡುವ ಪ್ರಧಾನಮಂತ್ರಿಯವರ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ ʻಉದ್ಯೋಗ ಮೇಳʼ ಒಂದು ಪ್ರಮುಖ ಹೆಜ್ಜೆಯಾಗಿದೆ. ʻಉದ್ಯೋಗ ಮೇಳʼವು ಉದ್ಯೋಗ ಸೃಷ್ಟಿಗೆ ಮತ್ತಷ್ಟು ವೇಗ ನೀಡುವುದರ ಜೊತೆಗೆ, ಯುವಕರ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಅವರ ಭಾಗವಹಿಸುವಿಕೆಗೆ ಅರ್ಥಪೂರ್ಣ ಅವಕಾಶಗಳನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ ಹೊಸ ಅಭ್ಯರ್ಥಿಗಳು ಕೇಂದ್ರ ಸರಕಾರದ ಅಡಿಯಲ್ಲಿ ಜ್ಯೂನಿಯರ್ ಇಂಜಿನಿಯರ್, ಲೋಕೋ ಪೈಲಟ್, ಟೆಕ್ನಿಷಿಯನ್ಸ್, ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್, ಕಾನ್ಸ್‌ಟೆಬಲ್, ಸ್ಟೆನೋಗ್ರಾಫರ್, ಜೂನಿಯರ್ ಅಕೌಂಟೆಂಟ್, ಗ್ರಾಮೀಣ ಡಾಕ್ ಸೇವಕ್, ಆದಾಯ ತೆರಿಗೆ ಇನ್ಸ್‌ಪೆಕ್ಟರ್‌, ಟೀಚರ್, ನರ್ಸ್, ಡಾಕ್ಟರ್, ಸೋಷಿಯಲ್ ಸೆಕ್ಯುರಿಟಿ ಆಫೀಸರ್, ಪಿಎ, ಎಂಟಿಎಸ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕೊಳ್ಳಲಿದ್ದಾರೆ.

ಹೊಸದಾಗಿ ಸೇರ್ಪಡೆಗೊಂಡ ಅಧಿಕಾರಿಗಳು ʻಕರ್ಮಯೋಗಿ ಪ್ರಾರಂಭ್‌ʼ ಮಾಡ್ಯೂಲ್‌ನಲ್ಲಿ ಪಡೆದ ಕಲಿಕಾ ಅನುಭವವನ್ನೂ ಸಹ ಈ ʻಉದ್ಯೋಗ ಮೇಳʼಕಾರ್ಯಕ್ರಮದಲ್ಲಿ ಹಂಚಿಕೊಳ್ಳಲಾಗುವುದು. ʻಕರ್ಮಯೋಗಿ ಪ್ರಾರಂಭ್‌ʼ ಮಾಡ್ಯೂಲ್ ಎನ್ನುವುದು ವಿವಿಧ ಸರಕಾರಿ ಇಲಾಖೆಗಳಲ್ಲಿ ಹೊಸದಾಗಿ ನೇಮಕಗೊಂಡ ಎಲ್ಲರಿಗೂ ಆನ್‌ಲೈನ್ ಓರಿಯಂಟೇಶನ್ ಕೋರ್ಸ್ ಆಗಿದೆ.

*****



(Release ID: 1892470) Visitor Counter : 221