ಪ್ರಧಾನ ಮಂತ್ರಿಯವರ ಕಛೇರಿ

ಜನವರಿ 18 ರಂದು ಬಸ್ತಿ ಜಿಲ್ಲೆಯಲ್ಲಿ ಆಯೋಜಿಸಲಾಗಿರುವ ಸಂಸದ್ ಖೇಲ್ ಮಹಾಕುಂಭ 2022-23 ರ ಎರಡನೇ ಹಂತವನ್ನು ಉದ್ಘಾಟಿಸಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ 

Posted On: 17 JAN 2023 4:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022-23 ನೇ ಸಾಲಿನ ಸಂಸದ್ ಖೇಲ್ ಮಹಾಕುಂಭ 2023ರ ಎರಡನೇ ಹಂತವನ್ನು ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಾಳೆ ಅಂದರೆ ಜನವರಿ 18 ರಂದು ಮಧ್ಯಾಹ್ನ 1 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. 2021 ರಿಂದ ಬಸ್ತಿಯ ಸಂಸದ ಶ್ರೀ ಹರೀಶ್ ದ್ವಿವೇದಿ ಅವರು ಸಂಸದ್ ಖೇಲ್ ಮಹಾಕುಂಭವನ್ನು ಆಯೋಜಿಸುತ್ತಾ ಬಂದಿದ್ದಾರೆ. 

ಸಂಸದ್ ಖೇಲ್ ಮಹಾಕುಂಭ 2022-23ನ್ನು ಎರಡು ಹಂತಗಳಲ್ಲಿ ಆಯೋಜಿಸಲಾಗಿದೆ. ಮೊದಲ ಹಂತವನ್ನು ಕಳೆದ ವರ್ಷ ಡಿಸೆಂಬರ್ 10 ರಿಂದ 16 ರವರೆಗೆ ಆಯೋಜಿಸಲಾಗಿತ್ತು. ಖೇಲ್ ಮಹಾಕುಂಭದ ಎರಡನೇ ಹಂತವನ್ನು ನಾಳೆಯಿಂದ ಜನವರಿ 28ರವರೆಗೆ ಆಯೋಜಿಸಲಾಗಿದೆ.

ಖೇಲ್ ಮಹಾಕುಂಭದಲ್ಲಿ ಯುವಜನತೆಗೆ ಕುಸ್ತಿ, ಕಬಡ್ಡಿ, ಖೋ ಖೋ, ಬಾಸ್ಕೆಟ್‌ಬಾಲ್, ಫುಟ್‌ಬಾಲ್, ಹಾಕಿ, ವಾಲಿಬಾಲ್, ಹ್ಯಾಂಡ್‌ಬಾಲ್, ಚೆಸ್, ಕೇರಂ, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಮುಂತಾದ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಲ್ಲಿ ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇವುಗಳಲ್ಲದೆ ಪ್ರಬಂಧ ಬರೆಯುವ ಸ್ಪರ್ಧೆ, ಚಿತ್ರಕಲೆ, ರಂಗೋಲಿ ಸ್ಪರ್ಧೆಗಳು ಸಹ ಇರುತ್ತವೆ. 

ಖೇಲ್ ಮಹಾಕುಂಭವು ಒಂದು ನವೀನ ರೀತಿಯ ಕಾರ್ಯಕ್ರಮವಾಗಿದ್ದು, ಇದು ಬಸ್ತಿ ಜಿಲ್ಲೆಯ ಮತ್ತು ನೆರೆಯ ಪ್ರದೇಶಗಳ ಯುವಕ-ಯುವತಿಯರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಮತ್ತು ವೇದಿಕೆಯನ್ನು ಒದಗಿಸುತ್ತದೆ. ಕ್ರೀಡೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಲು ಅವರನ್ನು ಪ್ರೇರೇಪಿಸುತ್ತದೆ. ಈ ಭಾಗದ ಯುವಕರಲ್ಲಿ ಶಿಸ್ತು, ತಂಡದಲ್ಲಿ ಕೆಲಸ ಮಾಡುವ ಸ್ಫೂರ್ತಿ ಉತ್ಸಾಹ, ಆರೋಗ್ಯಕರ ಸ್ಪರ್ಧೆ, ಆತ್ಮ ವಿಶ್ವಾಸ ಮತ್ತು ರಾಷ್ಟ್ರೀಯತೆಯ ಮನೋಭಾವವನ್ನು ಬೆಳೆಸಲು ಸಹಾಯಕವಾಗಿದೆ.

****



(Release ID: 1891812) Visitor Counter : 172