ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಮೊಬೈಲ್ ಆ್ಯಪ್ 'ಪ್ರಹರಿ' ಮತ್ತು 13 ಕೈಪಿಡಿಗಳ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಿದರು


ಈ ಬಿಎಸ್‌ಎಫ್‌ 'ಪ್ರಹರಿ' ಆ್ಯಪ್ ಕ್ರಿಯಾಶೀಲ ಆಡಳಿತಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ, ಈಗ ಯೋಧರು ವೈಯಕ್ತಿಕ ಮತ್ತು ಸೇವಾ ಸಂಬಂಧಿತ ಮಾಹಿತಿ, ವಸತಿ, ಆಯುಷ್ಮಾನ್ ಸಿಎಪಿಎಫ್‌ ಮತ್ತು ರಜೆ  ಸಂಬಂಧಿತ ಮಾಹಿತಿಯನ್ನು ತಮ್ಮ ಮೊಬೈಲ್‌ನಲ್ಲಿ ಪಡೆಯಬಹುದು
 
ಅದು ಜಿಪಿಎಫ್, ಬಯೋ ಡೇಟಾ ಅಥವಾ "ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ಲಕ್ಷ್ಯವಿಡುವ ವ್ಯವಸ್ಥೆ" (ಸಿಪಿ-ಜಿಆರ್‌ಎಎಂಎಸ್) ಅಥವಾ ವಿವಿಧ ಕಲ್ಯಾಣ ಯೋಜನೆಗಳ ಕುರಿತಾದ ಕುಂದುಕೊರತೆ ಪರಿಹಾರವಾಗಿರಲಿ, ಈಗ ಯೋಧರು ಈ ಎಲ್ಲಾ ಮಾಹಿತಿಯನ್ನು ಆ್ಯಪ್ ಮೂಲಕ ಪಡೆಯಬಹುದು ಮತ್ತು ಇದು ಗೃಹ ವ್ಯವಹಾರಗಳ ಸಚಿವಾಲಯದ ಪೋರ್ಟಲ್ಲಿಗು ಸಹ ಸಂಪರ್ಕ ಹೊಂದಿರುತ್ತದೆ  
 
ಹೆಚ್ಚುವರಿಯಾಗಿ, ನಿರೀಕ್ಷಿತ ಪರಿಷ್ಕರಣೆ ಮತ್ತು 13 ಕೈಪಿಡಿಗಳಲ್ಲಿನ ನವೀಕರಣವು ಕಾರ್ಯಾಚರಣೆಗಳು, ಆಡಳಿತ ಮತ್ತು ತರಬೇತಿಯ ಉತ್ತಮ ಅರಿವನ್ನು ಹೆಚ್ಚಿಸುತ್ತದೆ ಮತ್ತು ಕಾರ್ಯಗಳನ್ನು ವೇಗಗೊಳಿಸುತ್ತದೆ
 
ದೇಶದ ಗಡಿಯ ಭದ್ರತೆಯನ್ನು ಕಂಬಗಳಿಂದ ಅಥವಾ ಬೇಲಿಯಿಂದ ಮಾಡಲು ಸಾಧ್ಯವಿಲ್ಲ, ಆದರೆ ಗಡಿಯಲ್ಲಿ ನಿಂತಿರುವ ಸೈನಿಕರ ಶೌರ್ಯ, ದೇಶಭಕ್ತಿ ಮತ್ತು ಜಾಗರೂಕತೆಯಿಂದ ಮಾತ್ರ ಸಾಧ್ಯ.
 
ಗಡಿ ಭದ್ರತಾ ಪಡೆಗೆ ಒಂದು ಮಹಾವೀರ ಚಕ್ರ, 4 ಕೀರ್ತಿ ಚಕ್ರಗಳು, 13 ವೀರ ಚಕ್ರಗಳು ಮತ್ತು 13 ಶೌರ್ಯ ಚಕ್ರಗಳು ಸೇರಿದಂತೆ ಹಲವಾರು ಶೌರ್ಯ ಪ್ರಶಸ್ತಿಗಳನ್ನು ನೀ

Posted On: 29 DEC 2022 6:00PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಮೊಬೈಲ್ ಆ್ಯಪ್  'ಪ್ರಹರಿ' ಮತ್ತು ಕೈಪಿಡಿಯನ್ನು ಬಿಡುಗಡೆ ಮಾಡಿದರು. ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ, ಕೇಂದ್ರ ಗೃಹ ಕಾರ್ಯದರ್ಶಿ, ಬಿಎಸ್‌ಎಫ್ ಮಹಾನಿರ್ದೇಶಕರು, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಗೃಹ ಸಚಿವಾಲಯ, ಕೇಂದ್ರಾಡಳಿತ ಪ್ರದೇಶಗಳು ಮತ್ತು ಬಿಎಸ್‌ಎಫ್‌ನ ಹಲವಾರು ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ತಮ್ಮ ಭಾಷಣದಲ್ಲಿ ಬಿಎಸ್‌ಎಫ್ ‘ಪ್ರಹರಿ’ ಆ್ಯಪ್  ಪೂರ್ವಭಾವಿ ಆಡಳಿತಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು. ಈಗ ಯೋಧರು ತಮ್ಮ ಮೊಬೈಲ್‌ಗಳಲ್ಲಿ ವಸತಿ, ಆಯುಷ್ಮಾನ್- ಸಿಎಪಿಎಫ್ ಮತ್ತು ರಜೆಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ವೈಯಕ್ತಿಕ ಮಾಹಿತಿಯನ್ನು ಪಡೆಯಬಹುದು. ಅದು ಜಿಪಿಎಫ್F, ಬಯೋ ಡೇಟಾ ಅಥವಾ "ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ಲಕ್ಷ್ಯವಿಡುವ ವ್ಯವಸ್ಥೆ" " (ಸಿಪಿ-ಜಿಆರ್ಎಎಂಎಸ್) ಅಥವಾ ವಿವಿಧ ಕಲ್ಯಾಣ ಯೋಜನೆಗಳ ಕುರಿತಾದ ಕುಂದುಕೊರತೆ ಪರಿಹಾರವಾಗಿರಲಿ, ಈಗ ಯೋಧರು ಈ ಎಲ್ಲಾ ಮಾಹಿತಿಯನ್ನು ಆ್ಯಪ್  ಮೂಲಕ ಪಡೆಯಬಹುದು ಮತ್ತು ಈ ಆ್ಯಪ್  ಗೃಹ ವ್ಯವಹಾರಗಳ ಸಚಿವಾಲಯದ ಪೋರ್ಟಲ್ಲಿಗೂ ಸಂಪರ್ಕ ಹೊಂದಿದೆ. ಇದರೊಂದಿಗೆ, ಕಾರ್ಯಾಚರಣೆಗಳು, ಆಡಳಿತ ಮತ್ತು ತರಬೇತಿಯ ಅರಿವನ್ನು ಹೆಚ್ಚಿಸುವ ಮತ್ತು ಕೆಲಸದ ವೇಗವನ್ನು ಹೆಚ್ಚಿಸುವ 13 ಕೈಪಿಡಿಗಳಲ್ಲಿ ನಿರೀಕ್ಷಿತ ಪರಿಷ್ಕರಣೆ ಮತ್ತು ನವೀಕರಣಕ್ಕಾಗಿ ಅವರು ಬಿಎಸ್ಎಫ್ ಮಹಾನಿರ್ದೇಶಕ ಶ್ರೀ ಪಂಕಜ್ ಕುಮಾರ್ ಮತ್ತು ಅವರ ಸಂಪೂರ್ಣ ತಂಡವನ್ನು ಅಭಿನಂದಿಸಿದರು. ಇದು ಎಲ್ಲಾ ಶ್ರೇಣಿಯ ಬಿಎಸ್‌ಎಫ್ ಯೋಧರು ಮತ್ತು ಅಧಿಕಾರಿಗಳ ಕೆಲಸವನ್ನು ಸುಗಮಗೊಳಿಸುತ್ತದೆ ಎಂದು ತಮಗೆ ಖಚಿತವಾಗಿದೆ ಎಂದು ಶ್ರೀ ಶಾ ಹೇಳಿದರು. ಈ ಹೊಸ ಉಪಕ್ರಮಗಳು ಬಿಎಸ್‌ಎಫ್‌ನ ಕಾರ್ಯದಲ್ಲಿ ಅನುಕೂಲತೆಯನ್ನು ತರುತ್ತವೆ ಎಂದು ಅವರು ಹೇಳಿದರು.

ಗಡಿ ಭದ್ರತಾ ಪಡೆ ದೇಶದ ಅತ್ಯಂತ ಕಠಿಣವಾದ ಗಡಿಯನ್ನು ಕಾಪಾಡುತ್ತಿದೆ ಎಂದು ಗೃಹ ಸಚಿವರು ಹೇಳಿದರು. ಅಟಲ್ ಜಿ ಅವರು ‘ಒಂದು ಗಡಿ ಒಂದು ಪಡೆ’ ಎಂಬ ಪರಿಕಲ್ಪನೆಯನ್ನು ರೂಪಿಸಿದ ನಂತರ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗಿನ ನಮ್ಮ ಗಡಿಗಳ ಜವಾಬ್ದಾರಿಯನ್ನು ಬಿಎಸ್‌ಎಫ್ ನ ಜವಾಬ್ದಾರಿಗೆ ಒಳಪಡಿಸಲಾಗಿದೆ ಮತ್ತು ಬಿಎಸ್‌ಎಫ್ ನ ವೀರ ಸೈನಿಕರು ಈ ಗಡಿಗಳನ್ನು ಹೆಚ್ಚಿನ ಜಾಗರೂಕತೆ, ಶಕ್ತಿ ಮತ್ತು ತ್ವರಿತತೆ ಮತ್ತು ನಿರಂತರ ಪ್ರಯತ್ನಗಳೊಂದಿಗೆ ನಿರ್ವಹಿಸುತ್ತಿದ್ದಾರೆ. ದೇಶದ ಗಡಿಯ ಭದ್ರತೆಯನ್ನು ಕಂಬಗಳಿಂದ ಅಥವಾ ಬೇಲಿಯಿಂದ ಖಾತ್ರಿಪಡಿಸಲು ಸಾಧ್ಯವಿಲ್ಲ, ಆದರೆ ಆ ಗಡಿಯಲ್ಲಿ ನಿಂತಿರುವ ಸೈನಿಕರ ಶೌರ್ಯ, ದೇಶಪ್ರೇಮ ಮತ್ತು ಜಾಗರೂಕತೆಯಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ, ಶ್ರೀ ಶಾ ಅವರು ದೇಶದ ಗೃಹ ಸಚಿವರಾಗಿ, ಎಲ್ಲಾ ಬಿಎಸ್ಎಫ್ ಸಿಬ್ಬಂದಿಗಳ ಶೌರ್ಯ ಮತ್ತು ಜಾಗರೂಕತೆಯನ್ನು ಶ್ಲಾಘಿಸಲು ಬಯಸುತ್ತೇನೆ ಎಂದು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇತ್ತೀಚೆಗೆ ವೈಬ್ರಂಟ್ ವಿಲೇಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಹಳ್ಳಿಯೊಳಗೆ ಪ್ರವಾಸೋದ್ಯಮವನ್ನು ಹೆಚ್ಚಿಸಲು, ಗ್ರಾಮವನ್ನು ಸ್ವಾವಲಂಬಿಯನ್ನಾಗಿ ಮಾಡಲು ಮತ್ತು ಸಂಪೂರ್ಣ ಸಜ್ಜುಗೊಳಿಸಲು ವೈಬ್ರೆಂಟ್ ವಿಲೇಜ್ ಕಾರ್ಯಕ್ರಮದ ಮೂಲಕ ಎಲ್ಲಾ ಗಡಿ ಭದ್ರತಾ ಪಡೆಗಳು ಪ್ರಯತ್ನಿಸಬೇಕು ಎಂದು ಅವರು ಒತ್ತಾಯಿಸಿದರು. ಗಡಿ ಗ್ರಾಮದೊಳಗೆ ಜನರಿದ್ದಾಗ ಮಾತ್ರ ಗಡಿ ಭದ್ರತೆ ಸಾಧ್ಯ, ಗಡಿಯಲ್ಲಿ ಸೈನಿಕರ ನಿಯೋಜನೆ ಜತೆಗೆ ಗ್ರಾಮದಲ್ಲಿ ನೆಲೆಸಿರುವ ದೇಶಪ್ರೇಮಿ ನಾಗರಿಕರಿಂದ ಮಾತ್ರ ಶಾಶ್ವತ ಭದ್ರತೆ ಒದಗಿಸಲು ಸಾಧ್ಯ ಮತ್ತು ಎಲ್ಲಾ ಗಡಿ ಕಾವಲು ಪಡೆಗಳು ಅದನ್ನು ಬಲಪಡಿಸಬೇಕು ಎಂದು ಶ್ರೀ ಷಾ ಹೇಳಿದರು
 
ಗಡಿ ಭದ್ರತಾ ಪಡೆಗೆ ಸುದೀರ್ಘ ಇತಿಹಾಸವಿದೆ ಮತ್ತು ಒಂದು ಮಹಾವೀರ ಚಕ್ರ, 4 ಕೀರ್ತಿ ಚಕ್ರಗಳು, 13 ವೀರ ಚಕ್ರಗಳು ಮತ್ತು 13 ಶೌರ್ಯ ಚಕ್ರಗಳು ಸೇರಿದಂತೆ ಹಲವಾರು ಶೌರ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಪ್ರತಿ ಯುದ್ಧದ ಬಗ್ಗೆ ಒಂದೊಂದು ಪುಸ್ತಕ ಬರೆಯಬಹುದಾದಷ್ಟು ಶೌರ್ಯದಿಂದ ಬಿಎಸ್‌ಎಫ್ ಅನೇಕ ಯುದ್ಧಗಳನ್ನು ಮಾಡಿದೆ. ಕಳೆದ 3 ವರ್ಷಗಳಲ್ಲಿ 26,000 ಕೆಜಿ ಮಾದಕ ದ್ರವ್ಯ ಮತ್ತು 2,500 ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಬಿಎಸ್ಎಫ್ ಮೂಲಕ ವಶಪಡಿಸಿಕೊಳ್ಳಲಾಗಿದೆ ಎಂದು ಗೃಹ ಸಚಿವರು ಹೇಳಿದರು. ಗಡಿಯಲ್ಲಿ ಆ್ಯಂಟಿ ಡ್ರೋನ್ ತಂತ್ರಜ್ಞಾನ (ಡ್ರೋನ್‌ ನಿರೋಧಕ) ಇನ್ನೂ ಪ್ರಾಯೋಗಿಕ ಹಂತದಲ್ಲಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ಯಶಸ್ವಿಯಾಗಿದೆ ಎಂದರು. ಕಳೆದ 6 ತಿಂಗಳ ಅವಧಿಯಲ್ಲಿ ಬಿಎಸ್‌ಎಫ್ ಪಶ್ಚಿಮ ಗಡಿಯಲ್ಲಿ 22 ಡ್ರೋನ್‌ಗಳನ್ನು ಹೊಡೆದುರುಳಿಸಿದೆ, ಇದು ದೊಡ್ಡ ಸಾಧನೆಯಾಗಿದೆ. ಕೆಟ್ಟ ಉದ್ದೇಶದಿಂದ ಮಾದಕ ದ್ರವ್ಯ ಮತ್ತು ಭಯೋತ್ಪಾದನೆಯನ್ನು ಹರಡಲು ಶಸ್ತ್ರಾಸ್ತ್ರಗಳನ್ನು ಹೊತ್ತ ಡ್ರೋನ್‌ಗಳ ವಿರುದ್ಧವೂ ಯಶಸ್ಸನ್ನು ಸಾಧಿಸಲಾಗುತ್ತಿದೆ.  ಗಡಿಯುದ್ದಕ್ಕೂ ವಶಪಡಿಸಿಕೊಂಡ ಡ್ರೋನ್‌ಗಳ ಸ್ಥಳಗಳು ಮತ್ತು ಸಂಪರ್ಕಗಳ ಸಂಪೂರ್ಣವಾದ ವರದಿ ಮಾಡಲು ಮತ್ತು ಗುರುತಿಸಲು ನೋಯ್ಡಾದಲ್ಲಿ "ಬಿಎಸ್‌ ಎಫ್ ಡ್ರೋನ್ / ಯುಎವಿ ಮತ್ತು ಸೈಬರ್ ಫೋರೆನ್ಸಿಕ್ ಲ್ಯಾಬ್" ಅನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. 

ಕಠಿಣ ಭೌಗೋಳಿಕ ಪರಿಸ್ಥಿತಿಗಳಿಂದಾಗಿ ಗಡಿಯಲ್ಲಿ ಕೆಲವು ಸ್ಥಳಗಳಲ್ಲಿ ಬೇಲಿ ಹಾಕಲು ಸಾಧ್ಯವಾಗಲಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಬಿಎಸ್ಎಫ್ ಅಲ್ಲಿ ಎಲೆಕ್ಟ್ರಾನಿಕ್ ಕಣ್ಗಾವಲಿಗಾಗಿ ಆಂತರಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ, ಅದರ ವೆಚ್ಚವು ತುಂಬಾ ಕಡಿಮೆಯಾಗಿದೆ ಮತ್ತು ಅದರ ದಕ್ಷತೆಯು ತುಂಬಾ ಹೆಚ್ಚಾಗಿದೆ. ಬಿಎಸ್ಎಫ್ ಯೋಧರು ನಿರಂತರ ಜಾಗರೂಕತೆಯಿಂದ ಗಡಿಯನ್ನು ಭದ್ರಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ರೀ ಶಾ ಹೇಳಿದರು. ಕಠಿಣವಾದ ಸ್ಥಳಗಳಲ್ಲಿ 140 ಕಿಮೀ ಬೇಲಿ ಮತ್ತು ಸುಮಾರು 400 ಕಿಮೀ ರಸ್ತೆಗಳ ನಿರ್ಮಾಣ ಪೂರ್ಣಗೊಂಡಿದೆ. ಇದರೊಂದಿಗೆ 120ಕ್ಕೂ ಹೆಚ್ಚು ಗಡಿ ಔಟ್‌ ಪೋಸ್ಟುಗಳನ್ನು ನಿರ್ಮಿಸಲಾಗಿದೆ. ಗಡಿಯಲ್ಲಿ ಬಿಎಸ್‌ಎಫ್ ಯೋಧರು 40 ಡಿಗ್ರಿಯಿಂದ 46 ಡಿಗ್ರಿ ತಾಪಮಾನದಲ್ಲಿ ನಿಂತು ದೇಶವನ್ನು ರಕ್ಷಿಸುವ ಅದೇ ಜಾಗ್ರತೆಯೊಂದಿಗೆ ಮೋದಿ ಸರ್ಕಾರ ಯೋಧರಕುಟುಂಬವನ್ನು ನೋಡಿಕೊಳ್ಳುತ್ತದೆ ಎಂದು ಗೃಹ ಸಚಿವರು ಹೇಳಿದರು. ವಸತಿಗಾಗಿ ಹೊಸ ಆ್ಯಪ್ ಅನ್ನು ರಚಿಸಲಾಗಿದ್ದು, ಬಿಡುಗಡೆಯಾದ 2 ತಿಂಗಳೊಳಗೆ ವಸತಿ ಸಂತೃಪ್ತಿ ಅನುಪಾತವು 10% ರಷ್ಟು ಹೆಚ್ಚಾಗಿದೆ, ಇದು ದೊಡ್ಡ ಸಾಧನೆಯಾಗಿದೆ ಎಂದು ಶ್ರೀ ಶಾ ಹೇಳಿದರು. ಇದು ಕ್ರಿಯಾಶೀಲ ಆಡಳಿತಕ್ಕೆ ಒಂದು ಉತ್ತಮ ಉದಾಹರಣೆಯೂ ಹೌದು ಎಂದರು.
 
ಗಡಿ ಭಾರತದ ಅಭಿವೃದ್ಧಿಗೆ ಸರ್ಕಾರ ಶ್ರಮಿಸಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. 9 ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಇನ್ನೂ 14 ನಿರ್ಮಾಣದ ಪ್ರಕ್ರಿಯೆಯಲ್ಲಿದೆ. ಗಡಿ ಜಿಲ್ಲೆಗಳಲ್ಲಿ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನಡೆಸುವ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳನ್ನು ಜಿಲ್ಲಾಧಿಕಾರಿಗಳ ಸಹಾಯದಿಂದ 100% ಅನುಷ್ಠಾನಗೊಳಿಸುವುದು ಅವಶ್ಯಕ ಎಂದು ಗೃಹ ಸಚಿವರು ಬಿಎಸ್‌ಎಫ್‌ನ ಎಲ್ಲಾ ಹಿರಿಯ ಅಧಿಕಾರಿಗಳಿಗೆ ತಿಳಿಸಿದರು. ಗಡಿ ಗ್ರಾಮಗಳನ್ನು ತೊರೆಯುತ್ತಿರುವ ಜನರಿಗೆ ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಅವರ ಅವಶ್ಯಕತೆಗಳನ್ನು ಪೂರೈಸಿದರೆ ಅವರು ಹಳ್ಳಿಯಲ್ಲಿಯೇ ಉಳಿಯಲು ಕಾರಣ ಸಿಗುತ್ತದೆ ಎಂದು ಹೇಳಿದರು. ಇದರೊಂದಿಗೆ ಅಡುಗೆ ಅನಿಲ, ವಿದ್ಯುತ್, ಕುಡಿಯುವ ನೀರಿನ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟರೆ ತಮ್ಮನ್ನು ನೋಡಿಕೊಳ್ಳುತ್ತಿದ್ದಾರೆ ಮತ್ತು ಇಲ್ಲೇ ಉಳಿಯಬೇಕು ಎನ್ನುವ ಭಾವನೆಯೂ ಮೂಡುತ್ತದೆ. ದೇಶವನ್ನು ಸ್ವಾವಲಂಬಿಯಾಗಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೈಗೊಂಡಿರುವ ಉಪಕ್ರಮಗಳನ್ನು ಗಡಿ ಪ್ರದೇಶಗಳಲ್ಲಿ ಆದ್ಯತೆಯ ಮೇರೆಗೆ ಜಾರಿಗೊಳಿಸಬೇಕು ಎಂದು ಹೇಳಿದ ಗೃಹ ಸಚಿವರು, ಇದರಲ್ಲಿ ದೇಶದ ಗಡಿಯಲ್ಲಿ ನಿಯೋಜಿಸಲಾಗಿರುವ ಭದ್ರತಾ ಪಡೆಗಳು ವಿಶೇಷವಾಗಿ ಬಿಎಸ್ಎಫ್ ನದು ಪ್ರಮುಖ ಪಾತ್ರವಿದೆ ಎಂದರು.

*****



(Release ID: 1887420) Visitor Counter : 152