ರಾಷ್ಟ್ರಪತಿಗಳ ಕಾರ್ಯಾಲಯ

ರಾಷ್ಟ್ರಪತಿಗಳನ್ನು ಭೇಟಿಯಾದ ಭಾರತೀಯ ಪೊಲೀಸ್ ಸೇವೆ, ಭಾರತೀಯ ಅಂಚೆ ಸೇವೆ, ಭಾರತೀಯ ರೈಲ್ವೆ ಲೆಕ್ಕಪತ್ರ ಸೇವೆ, ಭಾರತೀಯ ಕಂದಾಯ ಸೇವೆ ಮತ್ತು ಭಾರತೀಯ ರೇಡಿಯೋ ನಿಯಂತ್ರಣ ಸೇವೆಯ ಪ್ರಶಿಕ್ಷಣಾರ್ಥಿ ಅಧಿಕಾರಿಗಳು/ ಅಧಿಕಾರಿಗಳು 

Posted On: 07 DEC 2022 2:20PM by PIB Bengaluru

ಭಾರತೀಯ ಪೊಲೀಸ್ ಸೇವೆ, ಭಾರತೀಯ ಅಂಚೆ ಸೇವೆ, ಭಾರತೀಯ ರೈಲ್ವೆ ಲೆಕ್ಕಪತ್ರ ಸೇವೆ ಮತ್ತು ಭಾರತೀಯ ಕಂದಾಯ ಸೇವೆಯ ಪ್ರಶಿಕ್ಷಣಾರ್ಥಿ ಅಧಿಕಾರಿಗಳು ಹಾಗೂ ಭಾರತೀಯ ರೇಡಿಯೋ ನಿಯಂತ್ರಣ ಸೇವೆಯ ಅಧಿಕಾರಿಗಳು ಇಂದು (ಡಿಸೆಂಬರ್ 7, 2022) ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು.

ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, “ಅತ್ಯುನ್ನತ ಜವಾಬ್ದಾರಿಯನ್ನು ಹೊಂದಿರುವ ಹುದ್ದೆಗಳಿಗೆ ನಿಮ್ಮನ್ನು ಆಯ್ಕೆ ಮಾಡಲಾಗಿದೆ. ರಾಷ್ಟ್ರೀಯ ಪ್ರಾಮುಖ್ಯತೆಯ ನೀತಿಗಳನ್ನು ಜಾರಿಗೆ ತರುವಲ್ಲಿ ಮತ್ತು ಆ ಮೂಲಕ ಜನರ ಭವಿಷ್ಯವನ್ನು ರೂಪಿಸುವಲ್ಲಿ ಅಧಿಕಾರಿಗಳು ಹೊಂದಿರುವ ಸಾಮರ್ಥ್ಯಗಳ ಮೇಲೆ ಆಡಳಿತ ವ್ಯವಸ್ಥೆಯು ಅಪಾರ ವಿಶ್ವಾಸ ಇಟ್ಟಿದೆ. ಅಧಿಕಾರಿಗಳು ತಮ್ಮ ಸೇವೆಗಳಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಾಗ ನಾಗರಿಕ ಕೇಂದ್ರಿತ ದೃಷ್ಟಿಕೋನವನ್ನು ಅನುಸರಿಸುವರೆಂಬ ನಿರೀಕ್ಷೆಯಿದೆ,ʼʼ ಎಂದು ಹೇಳಿದರು. ಅಧಿಕಾರಿಗಳು ತಮ್ಮ ಗುರಿಗಳು ಮತ್ತು ಕ್ರಿಯೆಗಳ ಬಗ್ಗೆ ಜಾಗರೂಕರಾಗಿರಬೇಕು. ಜೊತೆಗೆ ತಮ್ಮ ಉದ್ದೇಶಗಳು ಮತ್ತು ಗುರಿಗಳನ್ನು ರಾಷ್ಟ್ರದ ವಿಶಾಲ ಗುರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ರಾಷ್ಟ್ರಪತಿಗಳು ಸಲಹೆ ನೀಡಿದರು.

ಇದು ತಂತ್ರಜ್ಞಾನದ ಯುಗ. ಆಡಳಿತ ಮತ್ತು ಆಡಳಿತ ಕ್ಷೇತ್ರದಲ್ಲಿ ಆವಿಷ್ಕಾರಕ್ಕೆ ವಿಪುಲ ಅವಕಾಶಗಳಿವೆ. ಆಡಳಿತವನ್ನು ಹೆಚ್ಚು ಹೆಚ್ಚು ಪರಿಣಾಮಕಾರಿ, ತ್ವರಿತ, ಪಾರದರ್ಶಕ ಮತ್ತು ಜನಪರವಾಗಿಸಲು ತಂತ್ರಜ್ಞಾನವನ್ನು ಬಳಸಬಹುದು ಎಂದು ರಾಷ್ಟ್ರಪತಿಗಳು ಹೇಳಿದರು.

ಭಾರತೀಯ ಕಂದಾಯ ಸೇವೆಯ ಪ್ರಶಿಕ್ಷಣಾರ್ಥಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಅವರು ವಹಿಸಬೇಕಾದ ಅವಳಿ ಪಾತ್ರಗಳ ಬಗ್ಗೆ ವಿವರಿಸಿದರು. “ತೆರಿಗೆದಾರರಿಗಾಗಿ ತೆರಿಗೆ ಕಾನೂನುಗಳ ಅನುಸರಣೆಯನ್ನು ಸುಗಮಗೊಳಿಸುವುದ ಜೊತೆಗೆ, ತೆರಿಗೆ ವಂಚನೆಯನ್ನು ತಡೆಯುವ ನಿಟ್ಟಿನಲ್ಲಿ ವಿಶ್ವಾಸಾರ್ಹ ಕ್ರಮಗಳನ್ನು ಕೈಗೊಳ್ಳಲು ಕೊಡುಗೆ ನೀಡಬೇಕೆಂದರು. ತೆರಿಗೆದಾರರ ಜೊತೆ ಹೆಚ್ಚು ಗೌರವಯುತವಾಗಿ ಸಂವಹನ ನಡೆಸಬೇಕು. ತೆರಿಗೆ ಪಾವತಿ ವ್ಯವಸ್ಥೆಯು ಸ್ವಯಂಪ್ರೇರಿತ ತೆರಿಗೆ ನಿಯಮಗಳ ಅನುಸರಣೆಯತ್ತ ಸಾಗಬೇಕು. ಭಾರತ ಸರಕಾರದ ʻಫೇಸ್‌ಲೆಸ್‌ ಅಸೆಸ್‌ಮೆಂಟ್‌ ಸ್ಕೀಮ್‌ʼ ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಹೊಸ ʻಫೇಸ್‌ಲೆಸ್‌ ಅಸೆಸ್‌ಮೆಂಟ್‌ʼ ಪರಿಸರ ವ್ಯವಸ್ಥೆಯ ಪರಿಚಯ ಬೆಳೆಸಿಕೊಳ್ಳುವಂತೆ ರಾಷ್ಟ್ರಪತಿಗಳು ಸಲಹೆ ನೀಡಿದರು.

ಭಾರತೀಯ ರೇಡಿಯೋ ನಿಯಂತ್ರಕ ಸೇವೆಯ ಕಾರ್ಯಗಳ ಬಗ್ಗೆ ಮಾತನಾಡಿದ ರಾಷ್ಟ್ರಪತಿಗಳು, ಈ ಸೇವೆಯು ಬಹಳ ಮಹತ್ವದ್ದಾಗಿದೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದು ಹೇಳಿದರು. ʻಸ್ಪೆಕ್ಟ್ರಂʼ ಪರವಾನಗಿಗಳ ಹಂಚಿಕೆ, ʻಸ್ಪೆಕ್ಟ್ರಂʼ ಹರಾಜು ನಡೆಸುವುದು ಮತ್ತು ಅಗತ್ಯ ಅನುಮತಿಗಳನ್ನು ಒದಗಿಸುವುದು ಈ ಸೇವೆಯ ಕೆಲವು ಪ್ರಮುಖ ಜವಾಬ್ದಾರಿಗಳಾಗಿವೆ. ಡಿಜಿಟಲ್ ಪರಿಸರದಲ್ಲಿ, ದೂರ-ಸಂವಹನ ಜಾಲಗಳನ್ನು ವಿಸ್ತರಿಸಲು ಮತ್ತು ಡೇಟಾ ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಈಡೇರಿಸಲು ʻಸ್ಪೆಕ್ಟ್ರಂʼ ಲಭ್ಯತೆಯ ಅಗತ್ಯ ಸಾಕಷ್ಟಿದೆ ಎಂದು ಅವರು ಹೇಳಿದರು. ಭಾರತೀಯ ರೇಡಿಯೋ ನಿಯಂತ್ರಣ ಸೇವೆಯ ಅಧಿಕಾರಿಗಳು ಸಂಬಂಧಿತ ನೀತಿಗಳನ್ನು ರೂಪಿಸಲು ಮತ್ತು ಅನುಷ್ಠಾನಗೊಳಿಸಲು ಹೊಸ ಆಲೋಚನೆಗಳು ಹಾಗೂ ತಂತ್ರಜ್ಞಾನಗಳನ್ನು ಹೊರತರುತ್ತಾರೆ ಎಂಬ ವಿಶ್ವಾಸವನ್ನು ರಾಷ್ಟ್ರಪತಿಗಳು ವ್ಯಕ್ತಪಡಿಸಿದರು.

ಕಡುಬಡವರ ಹಿತವನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳಿಗೆ ಸೂಕ್ತ ಸಲಹೆ-ಸೂಚನೆ ನೀಡುವ ಮೂಲಕ ರಾಷ್ಟ್ರಪತಿಗಳು ತಮ್ಮ ಮಾತು ಮುಗಿಸಿದರು. ಸಾರ್ವಜನಿಕ ನೀತಿಯು ಸಾಮಾಜಿಕ ನ್ಯಾಯದ ಸಾಧನವಾಗಿದೆ. ಹೀಗಾಗಿ ಸಾರ್ವಜನಿಕ ವಲಯದ ಸಿಬ್ಬಂದಿ ಸಾಮಾಜಿಕ ಬದಲಾವಣೆಯ ಏಜೆಂಟರೆಂದು ಎಂದು ರಾಷ್ಟ್ರಪತಿಗಳು ಅಭಿಪ್ರಾಯಪಟ್ಟರು. ಅಧಿಕಾರಿಗಳು ಸಾರ್ವಜನಿಕ ಸೇವೆಯನ್ನು ತಮ್ಮ ವೃತ್ತಿಯಾಗಿ ಆರಿಸಿಕೊಂಡಿದ್ದಾರೆ; ಆದ್ದರಿಂದ ಅವರು ರಾಷ್ಟ್ರ ಸೇವೆ ಮಾಡಲು ಇಲ್ಲಿಗೆ ಬಂದಿದ್ದಾರೆ ಎಂಬುದನ್ನು ಸದಾ ನೆನಪಿಡಬೇಕೆಂದು ಅವರು ಸಲಹೆ ನೀಡಿದರು. 
ರಾಷ್ಟ್ರಪತಿಯವರ ಭಾಷಣವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

****



(Release ID: 1881390) Visitor Counter : 80