ಪ್ರಧಾನ ಮಂತ್ರಿಯವರ ಕಛೇರಿ

ಮಣಿಪುರ ಸಂಗೈ ಉತ್ಸವವನ್ನು ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಪ್ರಧಾನಮಂತ್ರಿಯವರು ಭಾಷಣ ಮಾಡಿದರು


" ಮಣಿಪುರದ ಜನರ ಲವಲವಿಕೆ, ಉತ್ಸಾಹ ಮತ್ತು ಭಾವಪೂರ್ಣತೆಯನ್ನು ಮಣಿಪುರ ಸಂಗೈ ಉತ್ಸವವು ತೋರಿಸಿಕೊಡುತ್ತದೆ."

" ಒಂದು ಪುಟ್ಟ ಭಾರತವನ್ನು ವೀಕ್ಷಿಸಬಹುದಾದಷ್ಟು ಸೊಗಸಾದ ಹಾರದಂತಿದೆ ಮಣಿಪುರ"

" ಭಾರತದ ಜೀವವೈವಿಧ್ಯತೆಯನ್ನು ಸಂಗೈ ಉತ್ಸವವು ಆಚರಿಸುತ್ತಿದೆ"

"ಪ್ರಕೃತಿ, ಪ್ರಾಣಿಗಳು ಮತ್ತು ಸಸ್ಯಗಳನ್ನು ನಾವು ನಮ್ಮ ಹಬ್ಬಗಳು ಮತ್ತು ಆಚರಣೆಗಳ ಭಾಗವಾಗಿ ಮಾಡಿದಾಗ, ಸಹಬಾಳ್ವೆಯು ನಮ್ಮ ಜೀವನದ ನೈಸರ್ಗಿಕ ಭಾಗವಾಗುತ್ತದೆ"

Posted On: 30 NOV 2022 5:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ ಮಣಿಪುರ ಸಂಗೈ ಉತ್ಸವವನ್ನು ಉದ್ದೇಶಿಸಿ ಭಾಷಣ ಮಾಡಿದರು. ರಾಜ್ಯದಲ್ಲಿಯೇ ಅತಿ ದೊಡ್ಡ ಉತ್ಸವ ಎಂದು ಹೆಸರಿಸಲಾದ ಮಣಿಪುರ ಸಂಗೈ ಉತ್ಸವವು ಮಣಿಪುರವನ್ನು ವಿಶ್ವ ದರ್ಜೆಯ ಪ್ರವಾಸೋದ್ಯಮ ತಾಣವಾಗಿ ಉತ್ತೇಜಿಸಲು ಸಹಾಯ ಮಾಡುತ್ತದೆ. ಮಣಿಪುರದಲ್ಲಿ ಮಾತ್ರ ಕಂಡುಬರುವ , ರಾಜ್ಯ ಪ್ರಾಣಿಯಾದ ಹುಬ್ಬು ಕೊಂಬಿನ ಜಿಂಕೆಯ “ಸಂಗೈ” ಹೆಸರನ್ನು ಈ ಹಬ್ಬಕ್ಕೆ ಇಡಲಾಗಿದೆ.

ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ಅಂತರದ ನಂತರ “ಸಂಗೈ” ಉತ್ಸವವನ್ನು ಆಯೋಜಿಸಲಾಗಿದೆ. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಮಣಿಪುರ ಸಂಗೈ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಮಣಿಪುರದ ಜನತೆಯನ್ನು ಅಭಿನಂದಿಸಿದರು. ದೊಡ್ಡ ಮಟ್ಟದ ವ್ಯವಸ್ಥೆಗಳ ಬಗ್ಗೆ ಪ್ರಧಾನಮಂತ್ರಿಯವರು ಸಂತೋಷ ವ್ಯಕ್ತಪಡಿಸಿದರು. "ಮಣಿಪುರ ಸಂಗೈ ಉತ್ಸವವು ಮಣಿಪುರದ ಜನರ ಲವಲವಿಕೆ, ಉತ್ಸಾಹ ಮತ್ತು ಭಾವಪೂರ್ಣತೆಯನ್ನು ಎತ್ತಿ ತೋರಿಸುತ್ತದೆ" ಎಂದು ಪ್ರಧಾನಮಂತ್ರಿಯವರು ಹೇಳಿದರು. ಈ ಉತ್ಸವವನ್ನು ಅಚ್ಚುಕಟ್ಟಾಗಿ ಆಯೋಜಿಸಲು ಮಣಿಪುರ ಸರ್ಕಾರ ಮತ್ತು ಮುಖ್ಯಮಂತ್ರಿ ಶ್ರೀ ಎನ್. ಬಿರೇನ್ ಸಿಂಗ್ ಅವರು ಮಾಡಿರುವ ಪ್ರಯತ್ನಗಳು ಮತ್ತು ಸಮಗ್ರ ದೃಷ್ಟಿಕೋನವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು.

ಮಣಿಪುರದ ಹೇರಳವಾದ ಪ್ರಾಕೃತಿಕ ಸೌಂದರ್ಯ, ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ವೈವಿಧ್ಯತೆಯ ಕುರಿತು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, “ಪ್ರತಿಯೊಬ್ಬರೂ ಒಮ್ಮೆಯಾದರೂ ಮಣಿಪುರ ರಾಜ್ಯಕ್ಕೆ ಭೇಟಿ ನೀಡಲು ಬಯಸುತ್ತಾರೆ” ಎಂದು ಹೇಳಿದರು ಮತ್ತು ಇದನ್ನು ವಿವಿಧ ರತ್ನಗಳಿಂದ ಮಾಡಲ್ಪಟ್ಟ ಸುಂದರವಾದ ಹಾರಕ್ಕೆ ಹೋಲಿಸಿ ಸಾದೃಶ್ಯತೆ ನೀಡಿದರು. “ಮಣಿಪುರವು ಒಂದು ಸೊಗಸಾದ ಮಾಲೆಯಂತಿದ್ದು, ಈ ರಾಜ್ಯವು ಸಂಪೂರ್ಣವಾಗಿ ಪುಟ್ಟ ಭಾರತದಂತಿದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು.

ಭಾರತವು ತನ್ನ ಅಮೃತ ಕಾಲದಲ್ಲಿ ‘ಏಕ್ ಭಾರತ್ ಶ್ರೇಷ್ಠ ಭಾರತ್’ಎಂಬ ಸ್ಫೂರ್ತಿಯೊಂದಿಗೆ ಮುನ್ನಡೆಯುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ‘ಏಕತೆಯ ಹಬ್ಬ’ಎಂಬ ವಿಷಯಾಧಾರಿತ ಸಂಗೈ ಉತ್ಸವದ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, “ಈ ಉತ್ಸವದ ಯಶಸ್ವಿ ಸಂಘಟನೆಯು ಮುಂದಿನ ದಿನಗಳಲ್ಲಿ ರಾಷ್ಟ್ರಕ್ಕೆ ಶಕ್ತಿ ಮತ್ತು ಸ್ಫೂರ್ತಿಯ ಮೂಲವಾಗಿ ಕಾರ್ಯನಿರ್ವಹಿಸಲಿದೆ” ಎಂದು ಹೇಳಿದರು. “ಸಂಗೈ ಮಣಿಪುರದ ರಾಜ್ಯ ಪ್ರಾಣಿ ಮಾತ್ರವಲ್ಲದೆ ಭಾರತದ ನಂಬಿಕೆ ಮತ್ತು ವಿಶ‍್ವಾಸಗಳಲ್ಲಿ ವಿಶೇಷ ಸ್ಥಾನವನ್ನು ಕೂಡಾ ಹೊಂದಿದೆ. ಸಂಗೈ ಉತ್ಸವ ಆಚರಣೆಯು ಭಾರತದ ಜೀವವೈವಿಧ್ಯತೆಯ ಪ್ರತೀಕವಾಗಿದೆ. ಈ ಹಬ್ಬದ ಆಚರಣೆಯು ಪ್ರಕೃತಿಯೊಂದಿಗೆ ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಬಂಧಗಳನ್ನು ಸಹ ಬೆಸೆಯುತ್ತದೆ. ಸುಸ್ಥಿರ ಜೀವನಶೈಲಿಗಾಗಿ ಅನಿವಾರ್ಯವಾದ ಸಾಮಾಜಿಕ ಸಂವೇದನೆಯನ್ನು ಈ ಹಬ್ಬವು ಪ್ರೇರೇಪಿಸುತ್ತದೆ. ಪ್ರಕೃತಿ, ಪ್ರಾಣಿಗಳು ಮತ್ತು ಸಸ್ಯಗಳನ್ನು ನಾವು ನಮ್ಮ ಹಬ್ಬಗಳು ಮತ್ತು ಆಚರಣೆಗಳ ಭಾಗವಾಗಿ ಮಾಡಿದಾಗ, ಸಹಬಾಳ್ವೆಯು ನಮ್ಮ ಜೀವನದ ನೈಸರ್ಗಿಕ ಭಾಗವಾಗುತ್ತದೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ರಾಜ್ಯ ರಾಜಧಾನಿಯಲ್ಲಿ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಸಂಗೈ ಉತ್ಸವವನ್ನು ಆಯೋಜಿಸಲಾಗುತ್ತಿದ್ದು, ಆ ಮೂಲಕ ‘ಏಕತೆಯ ಹಬ್ಬ’ದ ಉತ್ಸಾಹ-ಲವಲವಿಕೆಗೆ ವಿಸ್ತರಣೆಯಾಗುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇದಕ್ಕಾಗಿ ಹರ್ಷ ವ್ಯಕ್ತಪಡಿಸಿದರು. ನಾಗಾಲ್ಯಾಂಡ್ ಗಡಿಯಿಂದ ಮ್ಯಾನ್ಮಾರ್ ಗಡಿಯವರೆಗೆ ಸುಮಾರು 14 ಸ್ಥಳಗಳಲ್ಲಿ ಹಬ್ಬದ ವಿವಿಧ ಭಾವಗಳು ಮತ್ತು ಬಣ್ಣಗಳನ್ನು ನಾವು ಕಾಣಬಹುದು. ನಾವು ಇಂತಹ ಹಬ್ಬದ ಘಟನೆಗಳನ್ನು ಹೆಚ್ಚು ಹೆಚ್ಚು ಜನರೊಂದಿಗೆ ಬೆಸೆದಾಗ, ಅದರ ಸಂಪೂರ್ಣ ಸಾಮರ್ಥ್ಯವು ಮುಂಚೂಣಿಗೆ ಬರುತ್ತದೆ" ಎಂದು ಪ್ರಧಾನಮಂತ್ರಿಯವರು ಹೇಳಿದರು. ಸಂಗೈ ಹಬ್ಬದ ವಿನೂತನ ಉಪಕ್ರಮವನ್ನು ವೈಭವಪೂರ್ಣವಾಗಿ ಆಯೋಜಿಸಿದವರನ್ನು ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಶ್ಲಾಘಿಸಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ ಪ್ರಧಾನಮಂತ್ರಿಯವರು, ನಮ್ಮ ದೇಶದ ಹಬ್ಬಗಳು ಮತ್ತು ಜಾತ್ರೆಗಳ ಶತಮಾನಗಳಷ್ಟು ಹಳೆಯ ಸಂಪ್ರದಾಯಗಳನ್ನು ಉಲ್ಲೇಖಿಸಿದರು ಮತ್ತು “ಇದು ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವುದಲ್ಲದೆ ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸುತ್ತದೆ. ಸಂಗೈ ಉತ್ಸವದಂತಹ ಕಾರ್ಯಕ್ರಮಗಳು ಹೂಡಿಕೆದಾರರು ಮತ್ತು ಕೈಗಾರಿಕೆಗಳಿಗೆ ಪ್ರಮುಖ ಆಕರ್ಷಣೆಯಾಗಿದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು. "ಭವಿಷ್ಯದಲ್ಲಿ ಈ ಉತ್ಸವವು ರಾಜ್ಯದಲ್ಲಿ ಸುಖಸಂತೋಷ ಮತ್ತು ಅಭಿವೃದ್ಧಿಯ ಪ್ರಬಲ ಮಾಧ್ಯಮವಾಗಲಿದೆ ಎಂಬ ಸಂಪೂರ್ಣ ನಂಬಿಕೆ ನನಗಿದೆ" ಎಂದು ಹೇಳುತ್ತಾ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

*****



(Release ID: 1880106) Visitor Counter : 181