ಪ್ರಧಾನ ಮಂತ್ರಿಯವರ ಕಛೇರಿ

ಜಾಗತಿಕ ಹೂಡಿಕೆದಾರರ ಸಭೆ 'ಇನ್ವೆಸ್ಟ್ ಕರ್ನಾಟಕ 2022' ಉದ್ಘಾಟನಾ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿಯವರ ಭಾಷಣ


​​​​​​​"ಪ್ರತಿಭೆ ಅಥವಾ ತಂತ್ರಜ್ಞಾನದ ವಿಷಯ ಬಂದಾಗ 'ಬ್ರ್ಯಾಂಡ್ ಬೆಂಗಳೂರು' ಮೊದಲು ಮನಸ್ಸಿಗೆ ಬರುತ್ತದೆ"

‘ಇನ್ವೆಸ್ಟ್ ಕರ್ನಾಟಕ 2022’ ಸ್ಪರ್ಧಾತ್ಮಕ ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಪರಿಪೂರ್ಣ ಉದಾಹರಣೆಯಾಗಿದೆ”

"ಈ ಅನಿಶ್ಚಿತ ಕಾಲದಲ್ಲಿ ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳ ಬಗ್ಗೆ ಜಗತ್ತಿಗೆ ಮನವರಿಕೆಯಾಗಿದೆ"

"ಹೂಡಿಕೆದಾರರನ್ನು ರೆಡ್ ಟೇಪ್ನಲ್ಲಿ ಸಿಲುಕಿಸುವ ಬದಲು, ನಾವು ಹೂಡಿಕೆಗಾಗಿ ಕೆಂಪುಹಾಸಿನ  ವಾತಾವರಣವನ್ನು ಸೃಷ್ಟಿಸಿದ್ದೇವೆ"

"ನವ ಭಾರತದ ನಿರ್ಮಾಣವು ದಿಟ್ಟ ಸುಧಾರಣೆಗಳು, ಬೃಹತ್ ಮೂಲಸೌಕರ್ಯ ಮತ್ತು ಅತ್ಯುತ್ತಮ ಪ್ರತಿಭೆಯಿಂದ ಮಾತ್ರ ಸಾಧ್ಯ"

"ಹೂಡಿಕೆ ಮತ್ತು ಮಾನವ ಬಂಡವಾಳದ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಮಾತ್ರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಬಹುದು"

"ಡಬಲ್ ಇಂಜಿನ್ ಸರ್ಕಾರದ ಶಕ್ತಿಯು ಕರ್ನಾಟಕದ ಅಭಿವೃದ್ಧಿಯನ್ನು ಹುರಿದುಂಬಿಸುತ್ತಿದೆ"

"ಭಾರತದಲ್ಲಿ ಹೂಡಿಕೆ ಮಾಡುವುದು ಎಂದರೆ ಸೇರ್ಪಡೆಗಾಗಿ ಹೂಡಿಕೆ ಮಾಡುವುದು, ಪ್ರಜಾಪ್ರಭುತ್ವದಲ್ಲಿ ಹೂಡಿಕೆ ಮಾಡುವುದು, ಜಗತ್ತಿಗಾಗಿ ಹೂಡಿಕೆ ಮಾಡುವುದು ಮತ್ತು ಉತ್ತಮ, ಸ್ವಚ್ಛ ಮತ್ತು ಸುರಕ್ಷಿತ ಗ್ರಹಕ್ಕಾಗಿ ಹೂಡಿಕೆ ಮಾಡುವುದಾಗಿದೆ"

Posted On: 02 NOV 2022 11:40AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ನಾಟಕ ರಾಜ್ಯದ ಜಾಗತಿಕ ಹೂಡಿಕೆದಾರರ ಸಮಾವೇಶ ‘ಇನ್ವೆಸ್ಟ್ ಕರ್ನಾಟಕ 2022’ ರ ಉದ್ಘಾಟನಾ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಯವರು, ನಿನ್ನೆ ಕರ್ನಾಟಕದಲ್ಲಿ ಆಚರಿಸಲಾದ ರಾಜ್ಯೋತ್ಸವಕ್ಕೆ ಜನತೆಗೆ ಶುಭಾಶಯಗಳನ್ನು ಕೋರಿದರು. ಕರ್ನಾಟಕವು ಸಂಪ್ರದಾಯ ಮತ್ತು ತಂತ್ರಜ್ಞಾನ, ಪ್ರಕೃತಿ ಮತ್ತು ಸಂಸ್ಕೃತಿ, ಅದ್ಭುತ ವಾಸ್ತುಶಿಲ್ಪ ಮತ್ತು ರೋಮಾಂಚಕ ನವೋದ್ಯಮಗಳ ಸಮ್ಮಿಲನವಾಗಿದೆ ಎಂದು ಪ್ರಧಾನಿ ಹೇಳಿದರು. ಪ್ರತಿಭೆ ಅಥವಾ ತಂತ್ರಜ್ಞಾನದ ವಿಷಯಕ್ಕೆ ಬಂದಾಗ ಬ್ರಾಂಡ್ ಬೆಂಗಳೂರು ಮೊದಲು ಮನಸ್ಸಿಗೆ ಬರುತ್ತದೆ. ಈ ಹೆಸರು ಭಾರತದಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದಲ್ಲಿ ಸ್ಥಾಪಿತವಾಗಿದೆ ಎಂದು ಶ್ರೀ ಮೋದಿ ಹೇಳಿದರು.

ಕರ್ನಾಟಕದಲ್ಲಿ ಹೂಡಿಕೆದಾರರ ಸಮಾವೇಶದ ಆಯೋಜನೆಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ, ಇದು ಸ್ಪರ್ಧಾತ್ಮಕ ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಉತ್ತಮ ಉದಾಹರಣೆಯಾಗಿದೆ ಎಂದರು. ತಯಾರಿಕೆ ಮತ್ತು ಉತ್ಪಾದನೆಯು ಮುಖ್ಯವಾಗಿ ರಾಜ್ಯ ಸರ್ಕಾರದ ನೀತಿಗಳು ಮತ್ತು ನಿಯಂತ್ರಣದ ಮೇಲೆ ಅವಲಂಬಿತವಾಗಿದೆ ಎಂದು ಅವರು ಹೇಳಿದರು. ಈ ಜಾಗತಿಕ ಹೂಡಿಕೆದಾರರ ಸಮಾವೇಶದ ಮೂಲಕ, ರಾಜ್ಯಗಳು ನಿರ್ದಿಷ್ಟ ವಲಯಗಳನ್ನು ಗುರಿಯಾಗಿಸಬಹುದು ಮತ್ತು ಇತರ ದೇಶಗಳೊಂದಿಗೆ ಪಾಲುದಾರಿಕೆಯನ್ನು ರೂಪಿಸಬಹುದು ಎಂದು ಅವರು ಹೇಳಿದರು. ಈ ಸಮಾವೇಶದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಪಾಲುದಾರಿಕೆಗಳನ್ನು ಯೋಜಿಸಲಾಗಿದೆ, ಇದು ರಾಷ್ಟ್ರದ ಯುವಜನರಿಗೆ ಉದ್ಯೋಗವನ್ನು ಸೃಷ್ಟಿಸಲು ಕಾರಣವಾಗುತ್ತದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

21ನೇ ಶತಮಾನದಲ್ಲಿ ಭಾರತ ಈಗಿರುವ ಸ್ಥಾನದಿಂದ ಮುಂದೆ ಸಾಗಬೇಕಿದೆ ಎಂದು ಪ್ರಧಾನಿ ಹೇಳಿದರು. ಭಾರತ ಕಳೆದ ವರ್ಷ 84 ಶತಕೋಟಿ ಡಾಲರ್ಗಳ ದಾಖಲೆಯ ವಿದೇಶಿ ಹೂಡಿಕೆಯನ್ನು ಸ್ವೀಕರಿಸಿದೆ ಎಂದರು. ಭಾರತದ ಬಗೆಗಿನ ಜಾಗತಿಕ ಆಶಾವಾದದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, “ಇದು ಅನಿಶ್ಚಿತ ಸಮಯ, ಬಹುತೇಕ ರಾಷ್ಟ್ರಗಳಿಗೆ ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳ ಬಗ್ಗೆ ಮನವರಿಕೆಯಾಗಿದೆ. ವಿಘಟನೆಯ ಈ ಸಂದರ್ಭದಲ್ಲಿ, ಭಾರತವು ಪ್ರಪಂಚದೊಂದಿಗೆ ಸಾಗುತ್ತಿದೆ ಮತ್ತು ಪ್ರಪಂಚದೊಂದಿಗೆ ಕೆಲಸ ಮಾಡಲು ಒತ್ತು ನೀಡುತ್ತಿದೆ. ಪೂರೈಕೆ ಸರಪಳಿಗೆ ಅಡ್ಡಿಯಾದ ಅವಧಿಯಲ್ಲಿ ಭಾರತವು ಔಷಧಿಗಳು ಮತ್ತು ಲಸಿಕೆಗಳ ಪೂರೈಕೆಯ ಬಗ್ಗೆ ಜಗತ್ತಿಗೆ ಭರವಸೆ ನೀಡಿತು ಎಂದು ಅವರು ಹೇಳಿದರು. ಮಾರುಕಟ್ಟೆಯು ಪೂರ್ಣಮಟ್ಟ ತಲುಪಿರುವ ವಾತಾವರಣದ ಹೊರತಾಗಿಯೂ, ನಮ್ಮ ದೇಶೀಯ ಮಾರುಕಟ್ಟೆಗಳು ನಾಗರಿಕರ ಆಕಾಂಕ್ಷೆಗಳಿಂದ ಪ್ರಬಲವಾಗಿವೆ. ಜಾಗತಿಕ ಬಿಕ್ಕಟ್ಟಿನ ಸಮಯದಲ್ಲೂ, ತಜ್ಞರು, ವಿಶ್ಲೇಷಕರು ಮತ್ತು ಅರ್ಥಶಾಸ್ತ್ರಜ್ಞರು ಭಾರತವನ್ನು ಉಜ್ವಲ ತಾಣವೆಂದು ಶ್ಲಾಘಿಸಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರತಿ ದಿನವೂ ಭಾರತದ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸಲು ನಮ್ಮ ಮೂಲಭೂತ ಅಂಶಗಳನ್ನು ಭದ್ರಪಡಿಸುವ ನಿಟ್ಟಿನಲ್ಲಿ ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಶ್ರೀ ಮೋದಿ ಹೇಳಿದರು. ಭಾರತದ ಆರ್ಥಿಕತೆಯ ಪಥವನ್ನು ಅರ್ಥಮಾಡಿಕೊಳ್ಳುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. 9-10 ವರ್ಷಗಳ ಹಿಂದೆ ದೇಶವು ನೀತಿ ಮತ್ತು ಅನುಷ್ಠಾನ-ಸಂಬಂಧಿತ ಸಮಸ್ಯೆಗಳೊಂದಿಗೆ ಸೆಣಸಾಡುತ್ತಿದ್ದಾಗ ಆಡಳಿತ ವಿಧಾನದಲ್ಲಿ ತಂದ ಬದಲಾವಣೆಯನ್ನು ಅವರು ವಿವರಿಸಿದರು. ಹೂಡಿಕೆದಾರರನ್ನು ರೆಡ್ ಟೇಪ್ನಲ್ಲಿ ಸಿಲುಕಿಸುವ ಬದಲು, ನಾವು ಹೂಡಿಕೆಗಾಗಿ ಕೆಂಪು ಹಾಸಿನ ವಾತಾವರಣವನ್ನು ಸೃಷ್ಟಿಸಿದ್ದೇವೆ ಮತ್ತು ಹೊಸ ಸಂಕೀರ್ಣ ಕಾನೂನುಗಳನ್ನು ಮಾಡುವ ಬದಲು ನಾವು ಅವುಗಳನ್ನು ಸರಳಗೊಳಿಸಿದ್ದೇವೆ  ಎಂದು ಅವರು ಒತ್ತಿ ಹೇಳಿದರು.

ದಿಟ್ಟ ಸುಧಾರಣೆಗಳು, ಬೃಹತ್ ಮೂಲಸೌಕರ್ಯ ಮತ್ತು ಅತ್ಯುತ್ತಮ ಪ್ರತಿಭೆಗಳಿಂದ ಮಾತ್ರ ನವ ಭಾರತ ನಿರ್ಮಾಣ ಸಾಧ್ಯ ಎಂದು ಪ್ರಧಾನಿ ಹೇಳಿದರು. ಇಂದು ಸರ್ಕಾರದ ಪ್ರತಿಯೊಂದು ಕ್ಷೇತ್ರದಲ್ಲೂ ದಿಟ್ಟ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಜಿಎಸ್ಟಿ, ಐಬಿಸಿ, ಬ್ಯಾಂಕಿಂಗ್ ಸುಧಾರಣೆಗಳು, ಯುಪಿಐ, 1500 ಹಳತಾದ ಕಾನೂನುಗಳ ರದ್ದತಿ ಮತ್ತು 40 ಸಾವಿರ ಅನಗತ್ಯ ಅನುಸರಣೆಗಳನ್ನು ತೆಗೆದುಹಾಕಿರುವುದನ್ನು ಅವರು ಪ್ರಸ್ತಾಪಿಸಿದರು. ಅನೇಕ ಕಂಪನಿ ಕಾನೂನು ನಿಬಂಧನೆಗಳ ನಿರಪರಾಧೀಕರಣ, ಮುಖಾಮುಖಿರಹಿತ ಮೌಲ್ಯಮಾಪನ, ಎಫ್ಡಿಐಗೆ ಹೊಸ ಮಾರ್ಗಗಳು, ಡ್ರೋನ್ ನಿಯಮಗಳ ಉದಾರೀಕರಣ, ಜಿಯೋಸ್ಪೇಷಿಯಲ್ ಮತ್ತು ಬಾಹ್ಯಾಕಾಶ ಹಾಗೂ ರಕ್ಷಣಾ ವಲಯದಂತಹ ಕ್ಷೇತ್ರಗಳಲ್ಲಿ ಕೈಗೊಂಡಿರುವ ಕ್ರಮಗಳು ಅಭೂತಪೂರ್ವ ಶಕ್ತಿಯನ್ನು ನೀಡುತ್ತಿವೆ ಎಂದು ಅವರು ಹೇಳಿದರು. ಕಳೆದ 8 ವರ್ಷಗಳಲ್ಲಿ ಕಾರ್ಯಾಚರಣೆಯ ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಂಡಿದೆ ಮತ್ತು ಮೆಟ್ರೋ 20 ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಿದೆ ಎಂದು ಪ್ರಧಾನಿ ಹೇಳಿದರು.

ಪ್ರಧಾನಮಂತ್ರಿ-ಗತಿಶಕ್ತಿ ರಾಷ್ಟ್ರೀಯ ಮಹಾಯೋಜನೆಯ ಗುರಿಯನ್ನು ವಿವರಿಸಿದ ಪ್ರಧಾನಿಯವರು, ಇದು ಸಮಗ್ರ ಮೂಲಸೌಕರ್ಯ ಅಭಿವೃದ್ಧಿಯ ಗುರಿಯನ್ನು ಹೊಂದಿದೆ ಎಂದರು. ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಮಾತ್ರವಲ್ಲದೆ ಅಸ್ತಿತ್ವದಲ್ಲಿರುವ ಮೂಲಸೌಕರ್ಯಕ್ಕೂ ಮುನ್ನೋಟವನ್ನು ಸಿದ್ಧಪಡಿಸಲಾಗಿದೆ ಮತ್ತು ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಅತ್ಯಂತ ಪರಿಣಾಮಕಾರಿ ಮಾರ್ಗವನ್ನು ಚರ್ಚಿಸಲಾಗಿದೆ ಎಂದು ಅವರು ವಿವರಿಸಿದರು. ಕೊನೆಯ-ಮೈಲಿ ಸಂಪರ್ಕ ಮತ್ತು ಉತ್ಪನ್ನ ಅಥವಾ ಸೇವೆಯನ್ನು ವಿಶ್ವ ದರ್ಜೆಗೇರಿಸುವ ಮೂಲಕ ಸುಧಾರಿಸುವ ಮಾರ್ಗಗಳಿಗೆ ಒತ್ತು ನೀಡಿರುವ ಬಗ್ಗೆ ಅವರು ಹೇಳಿದರು. ಈ ಪಯಣದಲ್ಲಿ ಯುವಜನರು ಮಾಡಿರುವ ದಾಪುಗಾಲುಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು ಭಾರತದ ಪ್ರತಿಯೊಂದು ಕ್ಷೇತ್ರವೂ ಯುವಪಡೆಯ ಬಲದಿಂದ ಮುನ್ನಡೆಯುತ್ತಿದೆ ಎಂದರು.

ಹೂಡಿಕೆ ಮತ್ತು ಮಾನವ ಬಂಡವಾಳದ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಮಾತ್ರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಬಹುದು ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಚಿಂತನೆಯ ಮೇಲೆ ಮುಂದುವರಿಯುತ್ತಾ, ನಾವು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಉತ್ತೇಜಿಸಿದ್ದೇವೆ. ನಮ್ಮ ಗುರಿ ಉತ್ಪಾದಕತೆಯನ್ನು ಹೆಚ್ಚಿಸುವುದು ಮತ್ತು ಮಾನವ ಬಂಡವಾಳವನ್ನು ಸುಧಾರಿಸುವುದಾಗಿದೆ ಎಂದರು. ಆರೋಗ್ಯ ಖಾತ್ರಿ ಯೋಜನೆಗಳ ಜೊತೆಗೆ ಉತ್ಪಾದನೆ ಆಧರಿತ ಪ್ರೋತ್ಸಾಹದಂತಹ ವಿಷಯಗಳ ಮೇಲೆ ಏಕಕಾಲದಲ್ಲಿ ಒತ್ತು; ಸುಲಭ ವ್ಯವಹಾರ ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು; ಹೆದ್ದಾರಿಗಳ ಜಾಲ ಹಾಗೂ ಶೌಚಾಲಯಗಳು ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ; ಭವಿಷ್ಯದ ಮೂಲಸೌಕರ್ಯ ಮತ್ತು ಸ್ಮಾರ್ಟ್ ಶಾಲೆಗಳ ಬಗ್ಗೆ ಒತ್ತು ನೀಡಲಾಗುತ್ತಿದೆ ಎಂದು ಪ್ರಧಾನ ಮಂತ್ರಿ ವಿವರಿಸಿದರು. ದೇಶದ ಪರಿಸರ ಸ್ನೇಹಿ ಬೆಳವಣಿಗೆಯ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಹಸಿರು ಬೆಳವಣಿಗೆ ಮತ್ತು ಸುಸ್ಥಿರ ಇಂಧನ ಕಡೆಗೆ ನಮ್ಮ ಉಪಕ್ರಮಗಳು ಹೆಚ್ಚು ಹೆಚ್ಚು ಹೂಡಿಕೆದಾರರನ್ನು ಆಕರ್ಷಿಸಿವೆ. ತಮ್ಮ ವೆಚ್ಚವನ್ನು ಮರಳಿ ಪಡೆಯಲು ಬಯಸುವವರು ಮತ್ತು ಈ ಭೂಮಿಯ ಮೇಲಿನ ತಮ್ಮ ಜವಾಬ್ದಾರಿಯನ್ನು ಪೂರೈಸಲು ಬಯಸುವವರು, ಭರವಸೆಯಿಂದ ಭಾರತದತ್ತ ನೋಡುತ್ತಿದ್ದಾರೆ ಎಂದರು.

ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರದ ಶಕ್ತಿಯ ಬಗ್ಗೆ ಮಾತನಾಡಿದ ಪ್ರಧಾನಿ, ರಾಜ್ಯದಲ್ಲಿ ಅನೇಕ ಕ್ಷೇತ್ರಗಳ ತ್ವರಿತ ಅಭಿವೃದ್ಧಿಗೆ ಇದೂ ಒಂದು ಕಾರಣವಾಗಿದೆ ಎಂದು ಹೇಳಿದರು. ಈ ಕುರಿತು ಉದಾಹರಣೆಗಳನ್ನು ನೀಡಿದ ಅವರು, ಸುಗಮ ವ್ಯವಹಾರದಲ್ಲಿ ಅಗ್ರ ಶ್ರೇಯಾಂಕದ ರಾಜ್ಯಗಳ ಪೈಕಿ ಕರ್ನಾಟಕವು ತನ್ನ ಸ್ಥಾನವನ್ನು ಉಳಿಸಿಕೊಂಡಿದೆ ಮತ್ತು ಎಫ್ಡಿಐ ವಿಷಯದಲ್ಲಿ ಅಗ್ರ ರಾಜ್ಯಗಳ ಪಟ್ಟಿಗೆ ಸೇರ್ಪಡೆಯಾಗಲು ಇದು ಕಾರಣವಾಗಿದೆ ಎಂದು ಪ್ರಧಾನಿ ಹೇಳಿದರು. ಫಾರ್ಚೂನ್ 500 ಕಂಪನಿಗಳಲ್ಲಿ 400 ಕರ್ನಾಟಕದಲ್ಲಿವೆ ಮತ್ತು ಭಾರತದ 100 ಕ್ಕೂ ಹೆಚ್ಚು ಯುನಿಕಾರ್ನ್ಗಳಲ್ಲಿ 40 ಕ್ಕೂ ಹೆಚ್ಚು ಕರ್ನಾಟಕದಲ್ಲಿವೆ ಎಂದು ಅವರು ಒತ್ತಿ ಹೇಳಿದರು. ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಫಿನ್ಟೆಕ್, ಬಯೋಟೆಕ್, ಸ್ಟಾರ್ಟ್ಅಪ್ಗಳು ಮತ್ತು ಸುಸ್ಥಿರ ಇಂಧನದ ನೆಲೆಯಾಗಿರುವ ಕರ್ನಾಟಕವನ್ನು ಇಂದು ವಿಶ್ವದ ಅತಿದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಎಂದು ಪರಿಗಣಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿಯ ಹೊಸ ಕಥೆ ಬರೆಯಲಾಗುತ್ತಿದೆ ಎಂದು ಅವರು ಹೇಳಿದರು. ಕರ್ನಾಟಕದ ಹಲವಾರು ಅಭಿವೃದ್ಧಿ ಮಾನದಂಡಗಳು ಭಾರತದ ಇತರ ರಾಜ್ಯಗಳಿಗೆ ಮಾತ್ರವಲ್ಲದೆ ಕೆಲವು ದೇಶಗಳಿಗೂ ಸವಾಲಾಗಿವೆ ಎಂದು ಅವರು ಹೇಳಿದರು. ಭಾರತವು ಉತ್ಪಾದನಾ ವಲಯದ ಹೊಸ ಹಂತವನ್ನು ಪ್ರವೇಶಿಸುತ್ತಿದೆ ಎಂದ ಪ್ರಧಾನಿಯವರು, ರಾಷ್ಟ್ರೀಯ ಸೆಮಿಕಂಡಕ್ಟರ್ ಮಿಷನ್ ಅನ್ನು ಪ್ರಸ್ತಾಪಿಸಿದರು ಮತ್ತು ಇಲ್ಲಿನ ಟೆಕ್ ಪರಿಸರ ವ್ಯವಸ್ಥೆಯು ಚಿಪ್ ವಿನ್ಯಾಸ ಮತ್ತು ಉತ್ಪಾದನೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು.

ಹೂಡಿಕೆದಾರರ ದೃಷ್ಟಿಕೋನ ಹಾಗೂ ಭಾರತದ ದೃಷ್ಟಿಕೋನದ ನಡುವಿನ ಸಾದೃಶ್ಯವನ್ನು ವಿವರಿಸಿದ ಪ್ರಧಾನಮಂತ್ರಿಯವರು, ಹೂಡಿಕೆದಾರರು ಮಧ್ಯಮ ಮತ್ತು ದೀರ್ಘಾವಧಿಯ ದೃಷ್ಟಿಕೋನದೊಂದಿಗೆ ಮುನ್ನಡೆಯುತ್ತಿದ್ದರೆ, ಭಾರತವೂ ಸ್ಪೂರ್ತಿದಾಯಕ ದೀರ್ಘಾವಧಿ ದೃಷ್ಟಿಕೋನವನ್ನು ಹೊಂದಿದೆ ಎಂದು ತಿಳಿಸಿದರು. ನ್ಯಾನೊ ಯೂರಿಯಾ, ಹೈಡ್ರೋಜನ್ ಇಂಧನ, ಹಸಿರು ಅಮೋನಿಯಾ, ಕಲ್ಲಿದ್ದಲು ಅನಿಲೀಕರಣ ಮತ್ತು ಬಾಹ್ಯಾಕಾಶ ಉಪಗ್ರಹಗಳ ಉದಾಹರಣೆಗಳನ್ನು ನೀಡಿದ ಅವರು ಇಂದು ಭಾರತವು ವಿಶ್ವದ ಅಭಿವೃದ್ಧಿಯ ಮಂತ್ರದೊಂದಿಗೆ ಮುನ್ನಡೆಯುತ್ತಿದೆ ಎಂದು ಒತ್ತಿ ಹೇಳಿದರು. ಇದು ಭಾರತದ ಅಮೃತ ಕಾಲ. ಆಜಾದಿ ಕಾ ಅಮೃತ ಮಹೋತ್ಸವದಲ್ಲಿ, ದೇಶದ ಜನರು ನವ ಭಾರತವನ್ನು ನಿರ್ಮಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು. ಭಾರತವು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ಹೊಂದಿದೆ ಮತ್ತು ಹೂಡಿಕೆ ಮತ್ತು ಭಾರತದ ಸ್ಫೂರ್ತಿ ಒಟ್ಟಿಗೆ ಸೇರುವುದು ಬಹಳ ಮುಖ್ಯವಾಗಿದೆ. ಅಂತರ್ಗತ, ಪ್ರಜಾಪ್ರಭುತ್ವ ಮತ್ತು ಬಲಿಷ್ಠ ಭಾರತದ ಅಭಿವೃದ್ಧಿಯು ವಿಶ್ವದ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ ಎಂದು ಅವರು ಹೇಳಿದರು. ಭಾರತದಲ್ಲಿ ಹೂಡಿಕೆ ಮಾಡುವುದು ಎಂದರೆ ಸೇರ್ಪಡೆಗಾಗಿ ಹೂಡಿಕೆ ಮಾಡುವುದು, ಪ್ರಜಾಪ್ರಭುತ್ವದಲ್ಲಿ ಹೂಡಿಕೆ ಮಾಡುವುದು, ಜಗತ್ತಿಗೆ ಹೂಡಿಕೆ ಮಾಡುವುದು ಮತ್ತು ಉತ್ತಮ, ಸ್ವಚ್ಛ ಮತ್ತು ಸುರಕ್ಷಿತ ಗ್ರಹಕ್ಕಾಗಿ ಹೂಡಿಕೆ ಮಾಡುವುದಾಗಿದೆ ಎಂದು ಹೆಳಿದ ಪ್ರಧಾನಿ ತಮ್ಮ ಭಾಷಣ ಮುಗಿಸಿದರು.

ಹಿನ್ನೆಲೆ

ಸಮಾವೇಶವು ನಿರೀಕ್ಷಿತ ಹೂಡಿಕೆದಾರರನ್ನು ಆಕರ್ಷಿಸಲು ಮತ್ತು ಮುಂದಿನ ದಶಕದಲ್ಲಿ ಅಭಿವೃದ್ಧಿ ಯೋಜನೆಯನ್ನು ರೂಪಿಸುವ ಗುರಿಯನ್ನು ಹೊಂದಿದೆ. ಬೆಂಗಳೂರಿನಲ್ಲಿ ನವೆಂಬರ್ 2 ರಿಂದ 4 ರವರೆಗೆ ನಡೆಯುವ ಮೂರು ದಿನಗಳ ಸಮಾವೇಶವು 80 ಕ್ಕೂ ಹೆಚ್ಚು ಅಧಿವೇಶನಗಳಿಗೆ ಸಾಕ್ಷಿಯಾಗಲಿದೆ. ಭಾಷಣಕಾರರಲ್ಲಿ ಉನ್ನತ ಉದ್ಯಮದ ನಾಯಕರಾದ ಕುಮಾರ ಮಂಗಲಂ ಬಿರ್ಲಾ, ಸಜ್ಜನ್ ಜಿಂದಾಲ್ ಮತ್ತು ವಿಕ್ರಮ್ ಕಿರ್ಲೋಸ್ಕರ್ ಮತ್ತಿತರರು ಇದ್ದಾರೆ. ಇದರೊಂದಿಗೆ, ಮುನ್ನೂರಕ್ಕೂ ಹೆಚ್ಚು ಪ್ರದರ್ಶಕರೊಂದಿಗೆ ಹಲವಾರು ದೇಶಗಳ ವ್ಯಾಪಾರ ಪ್ರದರ್ಶನಗಳು ನಡೆಯುತ್ತವೆ. ದೇಶದ ಅಧಿವೇಶನಗಳನ್ನು ಪ್ರತಿಯೊಂದೂ ಪಾಲುದಾರ ರಾಷ್ಟ್ರಗಳು - ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ಸ್, ದಕ್ಷಿಣ ಕೊರಿಯಾ, ಜಪಾನ್ ಮತ್ತು ಆಸ್ಟ್ರೇಲಿಯಾಗಳು ಆಯೋಜಿಸಿವೆ. ಇವು ಆಯಾ ದೇಶಗಳ ಉನ್ನತ ಮಟ್ಟದ ಸಚಿವರು ಮತ್ತು ಕೈಗಾರಿಕಾ ನಿಯೋಗಗಳನ್ನು ಹೊಂದಿವೆ. ಜಾಗತಿಕ ಮಟ್ಟದ ಈ ಸಮಾವೇಶವು ಕರ್ನಾಟಕಕ್ಕೆ ತನ್ನ ಸಂಸ್ಕೃತಿಯನ್ನು ಜಗತ್ತಿಗೆ ಪ್ರದರ್ಶಿಸಲು ಅವಕಾಶವನ್ನು ನೀಡುತ್ತದೆ.

*****



(Release ID: 1873095) Visitor Counter : 260