ಪ್ರಧಾನ ಮಂತ್ರಿಯವರ ಕಛೇರಿ

ಅಯೋಧ್ಯೆಯಲ್ಲಿ ಲತಾ ಮಂಗೇಶ್ಕರ್ ಚೌಕ್ ಸಮರ್ಪಣೆ ಸಂದರ್ಭದಲ್ಲಿ ವಿಡಿಯೋ ಸಂದೇಶದ ಮೂಲಕ ಪ್ರಧಾನಮಂತ್ರಿ ಅವರಿಂದ ಭಾಷಣ


"ಲತಾ ಜೀ ತಮ್ಮ ದೈವಿಕ ಧ್ವನಿಯಿಂದ ಇಡೀ ಜಗತ್ತನ್ನು ಆವರಿಸಿದರು"

"ಭಗವಾನ್ ಶ್ರೀ ರಾಮನು ಅಯೋಧ್ಯೆಯ ಭವ್ಯ ದೇವಾಲಯಕ್ಕೆ ಬರಲಿದ್ದಾನೆ"

"ಭಗವಾನ್ ರಾಮನ ಆಶೀರ್ವಾದದಿಂದ ಮಂದಿರ ನಿರ್ಮಾಣ ತ್ವರಿತ ಗತಿಯಿಂದ ಸಾಗುತ್ತಿರುವುದನ್ನು ನೋಡಿ ಇಡೀ ದೇಶವೇ ರೋಮಾಂಚನಗೊಂಡಿದೆ"

"ಇದು 'ಪರಂಪರೆಯನ್ನು ಕುರಿತ ಹೆಮ್ಮೆ'ಯ ಪುನರಾವರ್ತನೆ ಮತ್ತು ಇದು ರಾಷ್ಟ್ರದ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯವಾಗಿದೆ"

"ಭಗವಾನ್ ರಾಮನು ನಮ್ಮ ನಾಗರಿಕತೆಯ ಸಂಕೇತ ಮತ್ತು ನಮ್ಮ ನೈತಿಕತೆ, ಮೌಲ್ಯಗಳು, ಘನತೆ ಮತ್ತು ಕರ್ತವ್ಯದ ಜೀವಂತ ಆದರ್ಶ"

"ಲತಾ ದೀದಿಯ ಸ್ತೋತ್ರಗಳು ನಮ್ಮ ಆತ್ಮಸಾಕ್ಷಿಯನ್ನು ಶ್ರೀರಾಮನಲ್ಲಿ ಲೀನವಾಗಿಸಿವೆ"

"ಲತಾ ಜೀ ಅವರು ಪಠಿಸಿದ ಮಂತ್ರಗಳು ಅವರ ಗಾಯನವನ್ನು ಪ್ರತಿಧ್ವನಿಸುವುದಲ್ಲದೆ, ಅವರ ನಂಬಿಕೆ, ಆಧ್ಯಾತ್ಮಿಕತೆ ಮತ್ತು ಪರಿಶುದ್ಧತೆಯನ್ನು ಸಹ ಪ್ರತಿಧ್ವನಿಸುತ್ತವೆ.

"ಲತಾ ದೀದಿಯ ಗಾಯನವು ಮುಂದಿನ ಯುಗಯುಗಗಳವರೆಗೆ ಈ ದೇಶದ ಪ್ರತಿಯೊಂದು ಕಣವನ್ನು ಸಂಪರ್ಕಿಸುತ್ತದೆ"


Posted On: 28 SEP 2022 1:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಯೋಧ್ಯೆಯ ಲತಾ ಮಂಗೇಶ್ಕರ್ ಚೌಕ್ ಸಮರ್ಪಣೆಯ ಸಂದರ್ಭದಲ್ಲಿ ವಿಡಿಯೋ ಸಂದೇಶದ ಮೂಲಕ ಸಭಿಕರನ್ನುದ್ದೇಶಿಸಿ ಭಾಷಣ ಮಾಡಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಪ್ರತಿಯೊಬ್ಬ ಭಾರತೀಯರ ಪೂಜ್ಯ ಮತ್ತು ಪ್ರೀತಿಯ ಆರಾಧ್ಯದೈವ ಲತಾ ದೀದಿಯ ಜನ್ಮದಿನವನ್ನು ಆಚರಿಸಿರುತ್ತಿರುವುದನ್ನು ಪ್ರಸ್ತಾಪಿಸಿದರು. ನವರಾತ್ರಿ ಉತ್ಸವದ ಮೂರನೇ ದಿನದಂದು ಮಾತೆ ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ ಎಂದವರು ಹೇಳಿದರು. ಒಬ್ಬ ಅನ್ವೇಷಕನು ಅಥವಾ ಭಕ್ತನು ಕಠಿಣ ಸಾಧನೆಯನ್ನು ಮಾಡುತ್ತ ಸಾಗಿದಾಗ, ಅವನು ಅಥವಾ ಅವಳು ಮಾ ಚಂದ್ರಘಂಟಾ ದೇವಿಯ ಕೃಪೆಯಿಂದ ದೈವಿಕ ಧ್ವನಿಗಳ ಅನುಭವವನ್ನು ಪಡೆಯುತ್ತಾರೆ ಎಂದು ಪ್ರಧಾನಿ ಹೇಳಿದರು. "ಲತಾ ಜೀ ಅವರು ಸರಸ್ವತಿಯ ಅಂತಹ ಅನ್ವೇಷಕರಲ್ಲಿ, ಅನುಗ್ರಹ ಪಡೆದವರಲ್ಲಿ  ಒಬ್ಬರಾಗಿದ್ದರು, ಅವರು ತಮ್ಮ ದೈವಿಕ ಧ್ವನಿಯಿಂದ ಇಡೀ ಜಗತ್ತನ್ನು ಮೂಕ ವಿಸ್ಮಿತಗೊಳಿಸಿದರು. ಲತಾ ಜೀ ಅವರು ಸಾಧನೆ ಮಾಡಿದರು, ನಮಗೆಲ್ಲರಿಗೂ ವರ ಸಿಕ್ಕಿತು" ಎಂದು ಪ್ರಧಾನಿ ಹೇಳಿದರು. ಅಯೋಧ್ಯೆಯ ಲತಾ ಮಂಗೇಶ್ಕರ್ ಚೌಕ್ ನಲ್ಲಿ ಪ್ರತಿಷ್ಠಾಪಿಸಲಾದ ಮಾ ಸರಸ್ವತಿಯ ಬೃಹತ್ ವೀಣೆ ಸಂಗೀತ ಅಭ್ಯಾಸದ ಸಂಕೇತವಾಗಲಿದೆ ಎಂದೂ ಶ್ರೀ ಮೋದಿ ಒತ್ತಿ ಹೇಳಿದರು. ಚೌಕ್ ಸಂಕೀರ್ಣದಲ್ಲಿನ ಸರೋವರದ ಹರಿಯುವ ನೀರಿನಲ್ಲಿ ಅಮೃತಶಿಲೆಯಿಂದ ಮಾಡಿದ 92 ಬಿಳಿ ಕಮಲಗಳು ಲತಾ ಜೀ ಅವರ ಜೀವಿತಾವಧಿಯನ್ನು ಪ್ರತಿನಿಧಿಸುತ್ತವೆ ಎಂದು ಪ್ರಧಾನ ಮಂತ್ರಿ ಅವರು ಅಭಿಪ್ರಾಯಪಟ್ಟರು.  

ವಿನೂತನ ಪ್ರಯತ್ನಕ್ಕಾಗಿ ಉತ್ತರ ಪ್ರದೇಶ ಸರ್ಕಾರ ಮತ್ತು ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರವನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು ಮತ್ತು ಎಲ್ಲಾ ದೇಶವಾಸಿಗಳ ಪರವಾಗಿ ಲತಾ ಜೀ ಅವರಿಗೆ ತಮ್ಮ ಹೃತ್ಪೂರ್ವಕ ನಮನಗಳನ್ನು ಸಲ್ಲಿಸಿದರು. "ಅವರ ಜೀವನದಿಂದ ನಾವು ಪಡೆದ ಆಶೀರ್ವಾದಗಳು ಅವರ ಸುಮಧುರ ಹಾಡುಗಳ ಮೂಲಕ ಮುಂದಿನ ಪೀಳಿಗೆಗಳ ಮೇಲೆಯೂ ತಮ್ಮ  ಛಾಪು ಮೂಡಿಸುವುದನ್ನು ಮುಂದುವರಿಸಬೇಕು ಎಂದು ನಾನು ಭಗವಾನ್ ಶ್ರೀ ರಾಮನನ್ನು ಪ್ರಾರ್ಥಿಸುತ್ತೇನೆ", ಎಂದು ಪ್ರಧಾನ ಮಂತ್ರಿ ಹೇಳಿದರು.

ಲತಾ ದೀದಿ ಅವರ ಜನ್ಮದಿನಕ್ಕೆ ಸಂಬಂಧಿಸಿದ ಹಲವಾರು ಭಾವನಾತ್ಮಕ ಮತ್ತು ಪ್ರೀತಿಯ ನೆನಪುಗಳನ್ನು ನೆನಪಿನಾಳದಿಂದ ಹೆಕ್ಕಿ ತೆಗೆದ  ಪ್ರಧಾನಮಂತ್ರಿಯವರು, ಪ್ರತಿಬಾರಿ ಅವರೊಂದಿಗೆ ಮಾತನಾಡಿದಾಗಲೂ ಅವರ ಧ್ವನಿಯ ಪರಿಚಿತ ಮಾಧುರ್ಯವು ತಮ್ಮನ್ನು  ಮಂತ್ರಮುಗ್ಧಗೊಳಿಸುತ್ತಿತ್ತು ಎಂದು ಹೇಳಿದರು. "ದೀದಿ ಆಗಾಗ್ಗೆ ನನಗೆ ಹೇಳುತ್ತಿದ್ದರು: 'ಮನುಷ್ಯನನ್ನು ವಯಸ್ಸಿನಿಂದ ಗುರುತಿಸುವುದಲ್ಲ ಆತನ ಕರ್ಮಗಳಿಂದ, ಮತ್ತು ಆತ ದೇಶಕ್ಕಾಗಿ ಹೆಚ್ಚು ಹೆಚ್ಚು ಕೆಲಸ ಮಾಡಿದಷ್ಟೂ ಅವನು ದೊಡ್ಡವನಾಗುತ್ತಾನೆ!' ಎನ್ನುತ್ತಿದ್ದುದನ್ನು ಸ್ಮರಿಸಿದ ಪ್ರಧಾನ ಮಂತ್ರಿ "ಅಯೋಧ್ಯೆಯ ಲತಾ ಮಂಗೇಶ್ಕರ್ ಚೌಕ್ ಮತ್ತು ಅವರಿಗೆ ಸಂಬಂಧಿಸಿದ ಅಂತಹ ಎಲ್ಲಾ ನೆನಪುಗಳು ರಾಷ್ಟ್ರದ ಬಗ್ಗೆ ಕರ್ತವ್ಯ ಪ್ರಜ್ಞೆಯನ್ನು ಅನುಭವಿಸಲು ನಮಗೆ ಅನುವು ಮಾಡಿಕೊಡುತ್ತವೆ ಎಂದು ನಾನು ನಂಬುತ್ತೇನೆ" ಎಂದೂ ಹೇಳಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿದ ನಂತರ ಲತಾ ದೀದಿ ಅವರಿಂದ ಪ್ರಧಾನಿಗೆ ಕರೆ ಬಂದ ಸಮಯವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಅಂತಿಮವಾಗಿ ಬೆಳವಣಿಗೆ ಬಗ್ಗೆ ಲತಾ ದೀದಿ ಅವರು ಬಹಳ ಸಂತೋಷ ವ್ಯಕ್ತಪಡಿಸಿದರು ಎಂದೂ ಹೇಳಿದರು. ಲತಾ ದೀದಿ ಅವರು ಹಾಡಿದ 'ಮನ್ ಕಿ ಅಯೋಧ್ಯಾ ತಬ್ ತಕ್ ಸೂನಿ, ಜಬ್ ತಕ್ ರಾಮ್ ನಾ ಆಯೇ' ಎಂಬ ಸ್ತೋತ್ರವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಅಯೋಧ್ಯೆಯ ಭವ್ಯ ದೇವಾಲಯಕ್ಕೆ ಭಗವಾನ್ ಶ್ರೀ ರಾಮನ ಆಗಮನ ಖಚಿತಪಟ್ಟಿರುವುದರ ಬಗ್ಗೆ ಹೇಳಿದರು. ಕೋಟ್ಯಂತರ ಜನರಲ್ಲಿ ರಾಮನನ್ನು ಪ್ರತಿಷ್ಠಾಪಿಸಿದ ಲತಾ ದೀದಿಯ ಹೆಸರು ಈಗ ಪವಿತ್ರ ನಗರವಾದ ಅಯೋಧ್ಯೆಯೊಂದಿಗೆ ಶಾಶ್ವತವಾಗಿ ಬೆಸೆಯಲ್ಪಟ್ಟಂತಾಗಿದೆ  ಎಂದೂ ಪ್ರಧಾನಿ ಹೇಳಿದರು. ರಾಮ ಚರಿತ್ ಮಾನಸವನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿಯವರು "ರಾಮ್ ತೇ ಅಧಿಕ್, ರಾಮ್ ಕರ್ ದಾಸ" ಎಂದು ಪಠಿಸಿದರು, ಇದರರ್ಥ ಭಗವಾನ್ ರಾಮನ ಭಕ್ತರು ಭಗವಾನ್ ರಾಮನ ಆಗಮನಕ್ಕೆ ಮುಂಚಿತವಾಗಿ ಆಗಮಿಸುತ್ತಾರೆ. ಆದ್ದರಿಂದ, ಲತಾ ಅವರ ನೆನಪಿನಲ್ಲಿ ನಿರ್ಮಿಸಲಾದ ಲತಾ ಮಂಗೇಶ್ಕರ್ ಚೌಕ್ ಭವ್ಯ ದೇವಾಲಯ ಪೂರ್ಣಗೊಳ್ಳುವ ಮೊದಲು ಬಂದಿದೆ ಎಂದರು.

ಅಯೋಧ್ಯೆಯ ಹೆಮ್ಮೆಯ ಪರಂಪರೆಯ ಮರುಸ್ಥಾಪನೆ ಮತ್ತು ನಗರದಲ್ಲಿ ಅಭಿವೃದ್ಧಿಯ ಹೊಸ ಅರುಣೋದಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ  ಪ್ರಧಾನಮಂತ್ರಿಯವರು, ಭಗವಾನ್ ರಾಮನು ನಮ್ಮ ನಾಗರಿಕತೆಯ ಸಂಕೇತ ಮತ್ತು ನಮ್ಮ ನೈತಿಕತೆ, ಮೌಲ್ಯಗಳು, ಘನತೆ ಮತ್ತು ಕರ್ತವ್ಯದ ಜೀವಂತ ಆದರ್ಶವಾಗಿದ್ದಾನೆ ಎಂದು ನುಡಿದರು. "ಅಯೋಧ್ಯೆಯಿಂದ ರಾಮೇಶ್ವರಂವರೆಗೆ, ಭಗವಾನ್ ರಾಮನು ಭಾರತದ ಪ್ರತಿಯೊಂದು ಕಣದಲ್ಲೂ ಸೇರಿಕೊಂಡಿದ್ದಾನೆ" ಎಂದು ಶ್ರೀ ಮೋದಿ ಬಣ್ಣಿಸಿದರು. ಭಗವಾನ್ ರಾಮನ ಆಶೀರ್ವಾದದಿಂದ ಮಂದಿರ ನಿರ್ಮಾಣಕ್ಕೆ ಭಾರೀ ವೇಗ ದೊರಕಿದೆ, ಇದನ್ನು  ನೋಡಿ ಇಡೀ ದೇಶವೇ ರೋಮಾಂಚನಗೊಂಡಿದೆ ಎಂದೂ  ಪ್ರಧಾನ ಮಂತ್ರಿ ಅವರು ಅಭಿಪ್ರಾಯಪಟ್ಟರು.

ಅಭಿವೃದ್ಧಿಗೊಂಡಿರುವ  ಲತಾ ಮಂಗೇಶ್ಕರ್ ಚೌಕ್ ಸ್ಥಳವು ಅಯೋಧ್ಯೆಯ ಸಾಂಸ್ಕೃತಿಕ ಮಹತ್ವದ  ವಿವಿಧ ಸ್ಥಳಗಳನ್ನು ಜೋಡಿಸುವ  ಪ್ರಮುಖ ಸಂಪರ್ಕ ತಾಣಗಳಲ್ಲಿ ಒಂದಾಗಿದೆ ಎಂದು ಪ್ರಧಾನಮಂತ್ರಿಯವರು ಹರ್ಷ ವ್ಯಕ್ತಪಡಿಸಿದರು. ಈ ಚೌಕವು  ರಾಮ್ ಕಿ ಪೈಡಿ ಬಳಿ ಇದೆ ಮತ್ತು ಸರಯೂವಿನ ಪವಿತ್ರ ನೀರಿನ ಹರಿವಿಗೆ ಹತ್ತಿರದಲ್ಲಿದೆ. "ಲತಾ ದೀದಿ ಅವರ ಹೆಸರಿನಲ್ಲಿ ಚೌಕ್ ನಿರ್ಮಿಸಲು ಇದಕ್ಕಿಂತ ಉತ್ತಮ ಸ್ಥಳ ಬೇರಾವುದಿದೆ?" ಎಂದು ಪ್ರಧಾನಿ ಉದ್ಗರಿಸಿದರು. ಅನೇಕ ಯುಗಗಳ ನಂತರ ಅಯೋಧ್ಯೆಯು ಭಗವಾನ್ ರಾಮನನ್ನು ಹಿಡಿದಿಟ್ಟುಕೊಂಡಿರುವ ರೀತಿಯನ್ನು ಹೋಲಿಕೆ ಮಾಡಿದ ಪ್ರಧಾನಮಂತ್ರಿಯವರು, ಲತಾ ದೀದಿಯ ಸ್ತೋತ್ರಗಳು ನಮ್ಮ ಆತ್ಮಸಾಕ್ಷಿಯನ್ನು, ಅಂತಪ್ರಜ್ಞೆಯನ್ನು ಶ್ರೀರಾಮನಲ್ಲಿ ವಿಲೀನಗೊಳಿಸಿವೆ, ಬೆಸೆದಿವೆ ಎಂದು ಹೇಳಿದರು.

ಅದು ಮಾನಸ ಮಂತ್ರ 'ಶ್ರೀ ರಾಮಚಂದ್ರ ಕೃಪಾಲು ಭಜ್ ಮನ್, ಹರನ್ ಭವ ಭಯಾ ದಾರುಣಂ' ಆಗಿರಬಹುದು, ಅಥವಾ ಮೀರಾಬಾಯಿಯ 'ಪಾಯೋ ಜೀ ಮೈನೆ ರಾಮ್ ರತನ್ ಧನ್ ಪಾಯೋ' ನಂತಹ ಸ್ತೋತ್ರಗಳಾಗಿರಬಹುದು; ಬಾಪು ಅವರ ಅಚ್ಚುಮೆಚ್ಚಿನ 'ವೈಷ್ಣವ ಜನ' ಆಗಿರಬಹುದು ಅಥವಾ 'ತುಮ್ ಆಶಾ ವಿಶ್ವಾಸ್ ಹಮಾರೆ ರಾಮ್' ನಂತಹ ಮಧುರ ರಾಗಗಳು ಜನರ ಮನಸ್ಸಿನಲ್ಲಿ ಅಚ್ಚೊತ್ತಿದಂತಹ ಅನುಭವ ಪಡೆದಿವೆ, ಅನೇಕ ದೇಶವಾಸಿಗಳು ಲತಾ ಜೀ ಅವರ ಹಾಡುಗಳ ಮೂಲಕ ಭಗವಾನ್ ರಾಮನನ್ನು ಅನುಭವಿಸಿದ್ದಾರೆ, ಕಲ್ಪಿಸಿಕೊಂಡಿದ್ದಾರೆ ಎಂದು ಪ್ರಧಾನಿ ಹೇಳಿದರು. "ನಾವು ಲತಾ ದೀದಿಯ ದಿವ್ಯ,ದೈವಿಕ ಧ್ವನಿಯ ಮೂಲಕ ಭಗವಾನ್ ರಾಮನ ಅಲೌಕಿಕ ಮಾಧುರ್ಯವನ್ನು ಅನುಭವಿಸಿದ್ದೇವೆ" ಎಂದೂ ಶ್ರೀ ಮೋದಿ ಹೇಳಿದರು.

ಲತಾ ದೀದಿ ಅವರ ಧ್ವನಿಯಲ್ಲಿ 'ವಂದೇ ಮಾತರಂ' ಎಂಬ ಕರೆಯನ್ನು ನಾವು ಕೇಳುತ್ತಿದ್ದಂತೆ ಭಾರತ ಮಾತೆಯ ವಿಶಾಲ ರೂಪವು ನಮ್ಮ ಕಣ್ಣ ಮುಂದೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ ಎಂಬುದನ್ನು  ಪ್ರಧಾನ ಮಂತ್ರಿಯವರು ಪ್ರಮುಖವಾಗಿ ಪ್ರಸ್ತಾಪಿಸಿದರು. "ಲತಾ ದೀದಿ ಯಾವಾಗಲೂ ನಾಗರಿಕ ಕರ್ತವ್ಯಗಳ ಬಗ್ಗೆ ತುಂಬಾ ಜಾಗೃತರಾಗಿದ್ದರು, ಅದೇ ರೀತಿ ಚೌಕ್ ಅಯೋಧ್ಯೆಯಲ್ಲಿ ವಾಸಿಸುವ ಜನರಿಗೆ ಮತ್ತು ಅಯೋಧ್ಯೆಗೆ ಬರುವ ಜನರಿಗೆ ಕರ್ತವ್ಯದತ್ತ ಅರ್ಪಣಾಭಾವಕ್ಕೆ ಪ್ರೇರಣೆ ನೀಡುತ್ತದೆ" ಎಂದು ಪ್ರಧಾನಿ ಹೇಳಿದರು. "ಈ ಚೌಕ, ಈ ವೀಣೆ ಅಯೋಧ್ಯೆಯ ಅಭಿವೃದ್ಧಿ ಮತ್ತು ಅಯೋಧ್ಯೆಯ ಸ್ಫೂರ್ತಿಯನ್ನು ಅನುರಣಿಸುತ್ತದೆ” ಎಂದು ಅವರು ವಿಶ್ಲೇಶಿಸಿದರು. ಲತಾ ದೀದಿ ಅವರ ಹೆಸರಿನ ಚೌಕ್ ಕಲಾ ಜಗತ್ತಿಗೆ ಸಂಬಂಧಿಸಿದ ಜನರಿಗೆ ಸ್ಫೂರ್ತಿಯ ಸ್ಥಳವಾಗಲಿದೆ ಎಂದು ಶ್ರೀ ಮೋದಿ ಬಲವಾಗಿ ಪ್ರತಿಪಾದಿಸಿದರು. ಆಧುನಿಕತೆಯತ್ತ ಸಾಗುತ್ತಿರುವಾಗ ಮತ್ತು ಅದರ ಬೇರುಗಳೊಂದಿಗೆ ಸಂಪರ್ಕದಲ್ಲಿರುವಾಗ ಭಾರತದ ಕಲೆ ಮತ್ತು ಸಂಸ್ಕೃತಿಯನ್ನು ವಿಶ್ವದ ಮೂಲೆಮೂಲೆಗಳಿಗೆ ಕೊಂಡೊಯ್ಯಲು ಇದು ಪ್ರತಿಯೊಬ್ಬರಿಗೂ ನೆನಪಿಸುತ್ತದೆ. "ಭಾರತದ ಕಲೆ ಮತ್ತು ಸಂಸ್ಕೃತಿಯನ್ನು ವಿಶ್ವದ ಮೂಲೆ ಮೂಲೆಗೆ ಕೊಂಡೊಯ್ಯುವುದು ನಮ್ಮ ಕರ್ತವ್ಯ" ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವಾಗ ಪ್ರಧಾನಮಂತ್ರಿಯವರು, ಸಾವಿರ ವರ್ಷಗಳಷ್ಟು ಹಳೆಯದಾದ ಭಾರತದ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತಾ ಭಾರತದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳುವ  ಅಗತ್ಯವನ್ನು ಒತ್ತಿ ಹೇಳಿದರು. "ಲತಾ ದೀದಿಯ ಗಾಯನವು ಬರಲಿರುವ ಯುಗಯುಗಗಳಲ್ಲಿ ದೇಶದ ಪ್ರತಿಯೊಂದು ಕಣವನ್ನು ಬೆಸೆಯುತ್ತದೆ, ಸಂಪರ್ಕಿಸುತ್ತದೆ" ಎಂದು ಅವರು ಹೇಳಿದರು.

 

*******

 

 

 



(Release ID: 1863080) Visitor Counter : 144