ಭೂವಿಜ್ಞಾನ ಸಚಿವಾಲಯ

ಪ್ರಸ್ತುತ ನಡೆಯುತ್ತಿರುವ ಕರಾವಳಿ ಸ್ವಚ್ಛತಾ ಅಭಿಯಾನಕ್ಕೆ ಸಮಾಜದ ವಿವಿಧ ವಿಭಾಗಗಳಿಂದ ಮತ್ತು ಇತರರಲ್ಲದೆ, ರಾಜ್ಯಪಾಲರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್


ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಸೆಲೆಬ್ರಿಟಿಗಳು, ಚಲನಚಿತ್ರ ಮತ್ತು ಕ್ರೀಡಾ ವ್ಯಕ್ತಿಗಳು, ನಾಗರಿಕ ಸಮಾಜ ಗುಂಪುಗಳ ಸದಸ್ಯರು ಅಪಾರ ಉತ್ಸಾಹದಿಂದ ಅಭಿಯಾನದಲ್ಲಿ ಸೇರಲಿದ್ದಾರೆ

"ಸ್ವಚ್ಛ ಸಾಗರ, ಸುರಕ್ಷಿತ್ ಸಾಗರ್" ಎಂಬ ಶೀರ್ಷಿಕೆಯ ವಿಶ್ವದ ಅತಿ ದೀರ್ಘ ಮತ್ತು ಅತಿದೊಡ್ಡ ಬೀಚ್ ಸ್ವಚ್ಛತಾ ಅಭಿಯಾನಕ್ಕೆ ಎಲ್ಲರೂ ತಮ್ಮ ಬೆಂಬಲವನ್ನು ಘೋಷಿಸುತ್ತಿದ್ದಾರೆ: ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಯಾನಕ್ಕೆ ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಿ ಮೋದಿಗೆ ಸಚಿವರಿಂದ  ಧನ್ಯವಾದ

ಹೊಸದಿಲ್ಲಿಯಲ್ಲಿ  ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಸಚಿವರು, "ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ"ದಂದು ಸಮುದ್ರ ತೀರದಿಂದ 1,500 ಟನ್ ಕಸ, ಮುಖ್ಯವಾಗಿ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ತೆಗೆದುಹಾಕುವ ಗುರಿಯನ್ನು ಸಾಧಿಸುವ ಉದಾತ್ತ ಧ್ಯೇಯಕ್ಕೆ ಮಾಧ್ಯಮಗಳ ಸಂಪೂರ್ಣ ಬೆಂಬಲವನ್ನು ಕೋರಿದರು.

ನಿನ್ನೆ ಮುಂಬೈಯ ಜುಹು ಕಡಲತೀರದಿಂದ ಕಸವನ್ನು ತೆಗೆಯುವ ಸ್ವಯಂಸೇವಕರ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ ಅವರು ಭಾರತದ ಕರಾವಳಿಯನ್ನು ಸ್ವಚ್ಛವಾಗಿಡುವ ಅಗತ್ಯವನ್ನು ಒತ್ತಿ ಹೇಳಿದರು.

Posted On: 13 SEP 2022 6:35PM by PIB Bengaluru

75 ದಿನಗಳ ಕಾಲ ನಡೆಯುತ್ತಿರುವ ಕರಾವಳಿ ಸ್ವಚ್ಛತಾ ಅಭಿಯಾನಕ್ಕೆ ಸಮಾಜದ ವಿವಿಧ ವಿಭಾಗಗಳಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಮತ್ತು ಇತರರಲ್ಲದೆ, ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಸೆಲೆಬ್ರಿಟಿಗಳು, ಚಲನಚಿತ್ರ ಮತ್ತು ಕ್ರೀಡಾ ವ್ಯಕ್ತಿಗಳು, ನಾಗರಿಕ ಸಮಾಜ ಗುಂಪುಗಳು ಇತ್ಯಾದಿಗಳು ಅಭಿಯಾನಕ್ಕೆ ಅಪಾರ ಉತ್ಸಾಹದಿಂದ ಕೈಜೋಡಿಸುತ್ತಿವೆ ಮತ್ತು "ಸ್ವಚ್ಛ ಸಾಗರ, ಸುರಕ್ಷಿತ್ ಸಾಗರ್" ಎಂಬ ಶೀರ್ಷಿಕೆಯ ವಿಶ್ವದ ಅತಿ ದೀರ್ಘ ಮತ್ತು ಅತಿದೊಡ್ಡ ಬೀಚ್ ಸ್ವಚ್ಛತಾ ಅಭಿಯಾನಕ್ಕೆ ತಮ್ಮ ಬೆಂಬಲವನ್ನು ಘೋಷಿಸುತ್ತಿವೆ. ಈ ಅಭಿಯಾನವನ್ನು  ಕೇಂದ್ರ ಭೂ ವಿಜ್ಞಾನ ಸಚಿವಾಲಯವು ಕೇಂದ್ರದ ಇತರ ಎಲ್ಲಾ  ಸಚಿವಾಲಯಗಳು, ಇಲಾಖೆಗಳು ಮತ್ತು ಕರಾವಳಿ ರಾಜ್ಯಗಳ ಸರ್ಕಾರಗಳ ಸಹಯೋಗದೊಂದಿಗೆ ಸಂಯೋಜಿಸಿದೆ.

ಸೆಪ್ಟೆಂಬರ್ 17 ರಂದು ಆಯೋಜನೆಯಾಗಿರುವ "ಅಂತರರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ"ಕ್ಕೆ ಮೂರು ದಿನಗಳ ಮೊದಲು ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ), ಭೂ ವಿಜ್ಞಾನಗಳ ಸಹಾಯಕ  ಸಚಿವರು (ಸ್ವತಂತ್ರ ನಿರ್ವಹಣೆ); ಪ್ರಧಾನ ಮಂತ್ರಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಪರಮಾಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವರೂ ಆಗಿರುವ  ಡಾ. ಜಿತೇಂದ್ರ ಸಿಂಗ್ ಅವರು ತಾವು ಸೆಪ್ಟೆಂಬರ್ 17 ರಂದು ಮುಂಬೈಯ ಜುಹು ಕಡಲಕಿನಾರೆಯಲ್ಲಿ ನಡೆಯುವ ಅಭಿಯಾನದಲ್ಲಿ ಭಾಗವಹಿಸುವುದಾಗಿ ತಿಳಿಸಿದರಲ್ಲದೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಬಿಜೆಪಿ ಸಂಸದರಾದ ಪೂನಂ ಮಹಾಜನ್ ಮತ್ತು ಇತರ ಹಲವಾರು ವ್ಯಕ್ತಿಗಳು ಜುಹುವಿನಲ್ಲಿ ಸೇರಲಿದ್ದಾರೆ ಜೊತೆಗೆ ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳು  ಭಾಗವಹಿಸಲಿವೆ ಎಂದೂ ಮಾಹಿತಿ ನೀಡಿದರು.

ಸಾಮಾಜಿಕ ಮಾಧ್ಯಮಗಳ ಮೂಲಕ ಬೆಂಬಲ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಚಿವರು ಧನ್ಯವಾದ ಅರ್ಪಿಸಿದರು. ಮುಂಬೈನ ಜುಹು ಕಡಲತೀರದಿಂದ ಕಸವನ್ನು ತೆಗೆಯುವ ಸ್ವಯಂಸೇವಕರ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನ ಮಂತ್ರಿ ಅವರು, ಭಾರತದ ಕರಾವಳಿಯನ್ನು ಸ್ವಚ್ಛವಾಗಿಡುವ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ. ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಕಡಲ ಕಿನಾರೆಗಳಲ್ಲಿ (ಬೀಚ್ ಗಳಲ್ಲಿ) ಸ್ವಚ್ಛತೆಯ ಬಗ್ಗೆ ಪೋಸ್ಟ್ ಮಾಡಿದ ವೀಡಿಯೊಗೆ ಪ್ರತಿಕ್ರಿಯಿಸಿರುವ ಮೋದಿ ಅವರು , "ಪ್ರಶಂಸನೀಯ... ಈ ಪ್ರಯತ್ನದಲ್ಲಿ ಭಾಗಿಯಾರುವ ಎಲ್ಲರನ್ನೂ ನಾನು ಶ್ಲಾಘಿಸುತ್ತೇನೆ. ಭಾರತವು ಉದ್ದವಾದ ಮತ್ತು ಸುಂದರವಾದ ಕಡಲತೀರದಿಂದ ಆಶೀರ್ವದಿಸಲ್ಪಟ್ಟಿದೆ ಮತ್ತು ನಮ್ಮ ಕರಾವಳಿಗಳನ್ನು ಸ್ವಚ್ಛವಾಗಿಡುವತ್ತ ನಾವು ಗಮನ ಹರಿಸುವುದು ಬಹಳ ಮುಖ್ಯ" ಎಂದು ಟ್ವೀಟ್ ಮಾಡಿದ್ದಾರೆ.  "ಮುಂಬೈನ ಜುಹು ಬೀಚ್ ನಲ್ಲಿ ಸ್ವಚ್ಛತಾ ಆಂದೋಲನವನ್ನು ಆಯೋಜಿಸಲಾಗಿತ್ತು, ವಿಶೇಷವಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡದ್ದನ್ನು ಮತ್ತು ನಾಗರಿಕ ಸಮಾಜವು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದನ್ನು ನೋಡಿದ್ದೇನೆ” ಎಂದೂ ಪ್ರಧಾನ ಮಂತ್ರಿ ಅವರು ಹೇಳಿದ್ದಾರೆ.        

.

ವಿಶ್ವವಿಖ್ಯಾತ ಪುರಿ ಕಡಲತೀರದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸ್ವಚ್ಛತಾ ಅಭಿಯಾನದ ಮುಂದಾಳತ್ವ ವಹಿಸಲಿದ್ದು, ಕೇಂದ್ರದ ಮಾಜಿ ಸಚಿವ ಪ್ರತಾಪ್ ಚಂದ್ರ ಸಾರಂಗಿ ಚಂಡಿಪುರದಲ್ಲಿ ಕೈಜೋಡಿಸಲಿದ್ದಾರೆ ಎಂದೂ ಡಾ.ಜಿತೇಂದ್ರ ಸಿಂಗ್ ಮಾಹಿತಿ ನೀಡಿದರು. ಪಶ್ಚಿಮ ಬಂಗಾಳದ ಹೂಗ್ಲಿಯ ಬಿಜೆಪಿ ಸಂಸದೆ ಶ್ರೀಮತಿ ಲಾಕೆಟ್ ಚಟರ್ಜಿ ಅವರು ದಿಘಾದಲ್ಲಿ ಹಾಗು ಆರ್.ಕೆ. ಮಿಷನ್ ಮುಖ್ಯಸ್ಥರು ದಕ್ಷಿಣ ಬಂಗಾಳದ ಬಕ್ಕಲಿಯಲ್ಲಿ ಅಭಿಯಾನದ ನೇತೃತ್ವ ವಹಿಸಲಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಅವರು ಪೋರ್ ಬಂದರ್ (ಮಾಧವಪುರ)ದಲ್ಲಿ, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪುರುಷೋತ್ತಮ್ ಖೋಡಾಭಾಯಿ ರೂಪಾಲಾ ಅವರು ಅಮ್ರೇಲಿಯ ಜಫ್ರಾಬಾದ್ ನಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.

ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ ಮತ್ತು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸೆಪ್ಟೆಂಬರ್ 17 ರಂದು ದಕ್ಷಿಣ ಮತ್ತು ಉತ್ತರ ಗೋವಾ ಕಡಲತೀರಗಳಲ್ಲಿ ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ.

ಅದೇ ರೀತಿ, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕೊಚ್ಚಿಯಲ್ಲಿ, ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ.ಮುರಳೀಧರನ್ ತಿರುವನಂತಪುರಂನ ಕೋವಲಂ ಕಡಲ ಕಿನಾರೆಯಲ್ಲಿ ಸ್ವಚ್ಛತಾ ಆಂದೋಲನದಲ್ಲಿ  ಭಾಗವಹಿಸುತ್ತಾರೆ.

ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಂಗಳೂರಿನ ಪಣಂಬೂರು ಕಡಲ ತೀರದಲ್ಲಿ ಅಭಿಯಾನದಲ್ಲಿ ಭಾಗವಹಿಸಲಿದ್ದು, ತೆಲಂಗಾಣದ ರಾಜ್ಯಪಾಲ ಡಾ. ತಮಿಳಿಸೈ ಸೌಂದರರಾಜನ್ ಅವರು ಪುದುಚೇರಿ ಕಡಲ ಕಿನಾರೆಯಲ್ಲಿ  ಕೈಜೋಡಿಸಲಿದ್ದಾರೆ.

ಮಿಜೋರಾಂನ ರಾಜ್ಯಪಾಲ ಡಾ.ಕೆ.ಹರಿ ಬಾಬು ಅವರು ವೈಜಾಗ್ ಕಡಲ ಕಿನಾರೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಎಲ್.ಮುರುಗನ್ ಅವರು ಚೆನ್ನೈನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಭಿಯಾನವು  ಸರ್ಕಾರದ ಧೋರಣೆಯೊಂದಿಗೆ ಇಡೀ ರಾಷ್ಟ್ರವು ಭಾಗವಹಿಸುವಂತಹ ವಿಧಾನವನ್ನು  ಅನುಸರಿಸಿದೆ ಎಂದೂ  ಡಾ. ಜಿತೇಂದ್ರ ಸಿಂಗ್ ಅವರು ಮಾಹಿತಿ ನೀಡಿದರು.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಜಲಶಕ್ತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ, ವಿದೇಶಾಂಗ ವ್ಯವಹಾರಗಳು, ಮಾಹಿತಿ ಮತ್ತು ಪ್ರಸಾರ, ಹಾಗು  ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್)ಯಂತಹ ಸಂಘಟನೆಗಳು, ಭಾರತೀಯ ಕರಾವಳಿ ಕಾವಲು ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್.ಡಿ.ಎಂ.ಎ), ಸೀಮಾ ಜಾಗರಣ್ ಮಂಚ್, ಎಸ್.ಎಫ್.ಡಿ., ಪರ್ಯಾವರಣ್ ಸಂರಕ್ಷಣಾ ಗತಿವಿಧಿ (ಪಿ.ಎಸ್.ಜಿ.) ಮುಂತಾದ ಸಂಸ್ಥೆಗಳ ಸಕ್ರಿಯ ಸಹಕಾರದಲ್ಲಿ  ಸಾಮಾಜಿಕ ಸಂಘಟನೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಲಿವೆ ಎಂದು  ಡಾ. ಜಿತೇಂದ್ರ ಸಿಂಗ್ ಹೇಳಿದರು.

ವಿಶ್ವದಲ್ಲೇ ಮೊದಲ ಬಾರಿಗೆ ಮತ್ತು ದೀರ್ಘಕಾಲದವರೆಗೆ ನಡೆಯುತ್ತಿರುವ ಕರಾವಳಿ ಸ್ವಚ್ಛತಾ ಅಭಿಯಾನಕ್ಕೆ ಕರಾವಳಿ ರಾಜ್ಯಗಳ ಸಂಸದರು ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ ಮತ್ತು ಸ್ಥಳೀಯ ಎನ್.ಜಿ.ಒ.(ಸರಕಾರೇತರ ಸ್ವಯಂ ಸೇವಾ ಸಂಘಟನೆ) ಗಳನ್ನು ಒಳಗೊಳ್ಳುವ ಮೂಲಕ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುವಂತೆಯೂ ಭೂ ವಿಜ್ಞಾನ ಸಚಿವಾಲಯಕ್ಕೆ ಸಲಹೆ ನೀಡಿದ್ದಾರೆ.

*****



(Release ID: 1859589) Visitor Counter : 118