ಪ್ರಧಾನ ಮಂತ್ರಿಯವರ ಕಛೇರಿ

ಮಂಗಳೂರಿನಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ.


"ಮಂಗಳೂರಿನಲ್ಲಿ ಸುಮಾರು 3800 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿ, ಉದ್ಘಾಟಿಸಿದ ಪ್ರಧಾನಮಂತ್ರಿ"

"ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು, 'ಮೇಕ್ ಇನ್ ಇಂಡಿಯಾ' ಮತ್ತು ದೇಶದ ಉತ್ಪಾದನಾ ವಲಯವನ್ನು ವಿಸ್ತರಿಸುವುದು ತುಂಬಾ ಅಗತ್ಯ”

"ಸಾಗರಮಾಲಾ ಯೋಜನೆಯ ಅತಿದೊಡ್ಡ ಫಲಾನುಭವಿಗಳಲ್ಲಿ ಕರ್ನಾಟಕವೂ ಒಂದಾಗಿದೆ"

"ಮೊದಲ ಬಾರಿಗೆ 30 ಲಕ್ಷಕ್ಕೂ ಹೆಚ್ಚು ಕರ್ನಾಟಕದ ಗ್ರಾಮೀಣ ಕುಟುಂಬಗಳಿಗೆ ಕೊಳಾಯಿ ನೀರು ತಲುಪಿದೆ"

"ಕರ್ನಾಟಕದ 30 ಲಕ್ಷಕ್ಕೂ ಹೆಚ್ಚು ರೋಗಿಗಳು ಆಯುಷ್ಮಾನ್ ಭಾರತದ ಪ್ರಯೋಜನ ಪಡೆದುಕೊಂಡಿದ್ದಾರೆ"

"ಪ್ರವಾಸೋದ್ಯಮ ಬೆಳೆದಾಗ, ಅದು ನಮ್ಮ ಗುಡಿ ಕೈಗಾರಿಕೆಗಳು, ನಮ್ಮ ಕುಶಲಕರ್ಮಿಗಳು, ಗ್ರಾಮೋದ್ಯೋಗಗಳು, ಬೀದಿಬದಿ ವ್ಯಾಪಾರಿಗಳು, ಆಟೋ ರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರಿಗೆ ಪ್ರಯೋಜನ ನೀಡುತ್ತದೆ"

"ಇಂದು ಡಿಜಿಟಲ್ ಪಾವತಿಗಳು ಐತಿಹಾಸಿಕ ಮಟ್ಟದಲ್ಲಿದ್ದು, ಭೀಮ್-ಯುಪಿಐನಂತಹ ನಮ್ಮ ಆವಿಷ್ಕಾರಗಳು ವಿಶ್ವದ ಗಮನ ಸೆಳೆಯುತ್ತಿವೆ"

"ಸುಮಾರು 6 ಲಕ್ಷ ಕಿ.ಮೀ ಆಪ್ಟಿಕಲ್ ಫೈಬರ್ ಅಳವಡಿಸುವ ಮೂಲಕ ಗ್ರಾಮ ಪಂಚಾಯತ್ ಗಳನ್ನು ಸಂಪರ್ಕಿಸಲಾಗುತ್ತಿದೆ"

"ಭಾರತವು ಸರಕು ರಫ್ತಿನಲ್ಲಿ 418 ಶತಕೋಟಿ ಡಾಲರ್ ಅಂದರೆ 31 ಲಕ್ಷ ಕೋಟಿ ರೂಪಾಯಿಗಳ ಹೊಸ ದಾಖಲೆ ಮಾಡಿದೆ"

"ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ, ರೈಲ್ವೆ ಮತ್ತು ರಸ್ತೆಗಳ ಇನ್ನೂರ ಐವತ್ತಕ್ಕೂ ಹೆಚ್ಚು ಯೋಜನೆಗಳನ್ನು ಗುರುತಿಸಲಾಗಿದ್ದು, ಇದು ತಡೆರಹಿತ ಬಂದರು ಸಂಪರ್ಕಕ್ಕೆ ನೆರವಾಗುತ್ತದೆ"

Posted On: 02 SEP 2022 4:19PM by PIB Bengaluru


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿಂದು ಸುಮಾರು 3800 ಕೋಟಿ ರೂ.ಗಳ ಯಾಂತ್ರೀಕರಣ ಮತ್ತು ಕೈಗಾರಿಕೀಕರಣ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಇಂದು ಭಾರತದ ಇತಿಹಾಸದಲ್ಲಿ ಸ್ಮರಣಾರ್ಹ ದಿನವಾಗಿದೆ ಎಂದರು. ಅದು ಪ್ರಾದೇಶಿಕ ಭದ್ರತೆಯಾಗಿರಲಿ ಅಥವಾ ಆರ್ಥಿಕ ಭದ್ರತೆಯಾಗಿರಲಿ, ಭಾರತವು ಭಾರಿ ಅವಕಾಶಗಳಿಗೆ ಸಾಕ್ಷಿಯಾಗುತ್ತಿದೆ. ಇಂದು ಮುಂಜಾನೆ ಐ.ಎನ್.ಎಸ್. ವಿಕ್ರಾಂತ್ ಕಾರ್ಯಾರಂಭ ಮಾಡಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಎಲ್ಲ ಭಾರತೀಯರು ಹೆಮ್ಮೆ ಪಡುತ್ತಿದ್ದಾರೆ ಎಂದರು. 
ಉದ್ಘಾಟನೆಯಾದ ಅಥವಾ ಶಂಕುಸ್ಥಾಪನೆ ನೆರವೇರಿಸಲಾದ ಯೋಜನೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಈ ಯೋಜನೆಗಳು ಕರ್ನಾಟಕದಲ್ಲಿ ಸುಗಮ ಜೀವನ ಮತ್ತು ಉದ್ಯೋಗಾವಕಾಶವನ್ನು ಹೆಚ್ಚಿಸುತ್ತವೆ, ವಿಶೇಷವಾಗಿ 'ಒಂದು ಜಿಲ್ಲೆ ಮತ್ತು ಒಂದು ಉತ್ಪನ್ನ' ಯೋಜನೆಯು ಈ ಪ್ರದೇಶದ ಮೀನುಗಾರರು, ಕುಶಲಕರ್ಮಿಗಳು ಮತ್ತು ರೈತರ ಉತ್ಪನ್ನಗಳಿಗೆ ಮಾರುಕಟ್ಟೆಯ ಲಭ್ಯತೆಯನ್ನು ಸುಗಮಗೊಳಿಸುತ್ತದೆ ಎಂದು ಹೇಳಿದರು.


ಪಂಚ ಪ್ರತಿಜ್ಞೆಗಳ (ಪಂಚ ಪ್ರಾಣ) ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ತಾವು ಕೆಂಪುಕೋಟೆಯಿಂದ ಆಡಿದ ಐದು ಪ್ರತಿಜ್ಞೆಗಳಲ್ಲಿ ಮೊದಲನೆಯದು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣವಾಗಿದೆ ಎಂದು ಹೇಳಿದರು. "ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು, ದೇಶದ ಉತ್ಪಾದನಾ ವಲಯವನ್ನು 'ಮೇಕ್ ಇನ್ ಇಂಡಿಯಾ'ವಾಗಿ ವಿಸ್ತರಿಸುವುದು ಬಹಳ ಅಗತ್ಯವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು.


ಬಂದರು ಆಧಾರಿತ ಅಭಿವೃದ್ಧಿಯತ್ತ ದೇಶ ಕೈಗೊಂಡಿರುವ ಪ್ರಯತ್ನಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇದು ಅಭಿವೃದ್ಧಿಯ ಪ್ರಮುಖ ಮಂತ್ರವಾಗಿದೆ ಎಂದು ಪ್ರತಿಪಾದಿಸಿದರು. ಇಂತಹ ಪ್ರಯತ್ನಗಳ ಪರಿಣಾಮವಾಗಿ, ಕೇವಲ 8 ವರ್ಷಗಳಲ್ಲಿ ಭಾರತದ ಬಂದರುಗಳ ಸಾಮರ್ಥ್ಯವು ಬಹುತೇಕ ದ್ವಿಗುಣಗೊಂಡಿದೆ ಎಂದರು.
ಕಳೆದ 8 ವರ್ಷಗಳಲ್ಲಿನ ಆದ್ಯತೆಯ ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಕರ್ನಾಟಕವು ಅದರಿಂದ ಅಪಾರ ಪ್ರಯೋಜನವನ್ನು ಪಡೆದಿದೆ ಎಂದು ಹೇಳಿದರು. "ಸಾಗರಮಾಲಾ ಯೋಜನೆಯ ಅತಿದೊಡ್ಡ ಫಲಾನುಭವಿಗಳಲ್ಲಿ ಕರ್ನಾಟಕವೂ ಒಂದಾಗಿದೆ", ಎಂದು ಪ್ರಧಾನಮಂತ್ರಿ ಹೇಳಿದರು. ರಾಜ್ಯದಲ್ಲಿ ಕಳೆದ 8 ವರ್ಷಗಳಲ್ಲಿ 70 ಸಾವಿರ ಕೋಟಿ ರೂ. ಮೌಲ್ಯದ ಹೆದ್ದಾರಿ ಯೋಜನೆಗಳನ್ನು ಸೇರ್ಪಡೆ ಮಾಡಲಾಗಿದ್ದು, ಒಂದು ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಯೋಜನೆಗಳು ಪ್ರಗತಿಯಲ್ಲಿವೆ ಎಂದರು. ಕಳೆದ 8 ವರ್ಷಗಳಲ್ಲಿ ಕರ್ನಾಟಕದ ಯೋಜನೆಗಳ ರೈಲ್ವೆ ಬಜೆಟ್ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದರು.


ಕಳೆದ 8 ವರ್ಷಗಳಲ್ಲಿನ ಬೆಳವಣಿಗೆಗಳನ್ನು ಗಮನಿಸಿದ ಪ್ರಧಾನಮಂತ್ರಿಯವರು, ದೇಶದಲ್ಲಿ ಬಡವರಿಗಾಗಿ 3 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ ಮತ್ತು ಕರ್ನಾಟಕದಲ್ಲಿ, ಬಡವರಿಗಾಗಿ 8 ಲಕ್ಷಕ್ಕೂ ಹೆಚ್ಚು ಪಕ್ಕಾ ಮನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು. "ಸಾವಿರಾರು ಮಧ್ಯಮ ವರ್ಗದ ಕುಟುಂಬಗಳಿಗೂ ತಮ್ಮ ಮನೆಗಳನ್ನು ನಿರ್ಮಿಸಿಕೊಳ್ಳಲು ಕೋಟ್ಯಂತರ ರೂಪಾಯಿಗಳ ನೆರವು ಒದಗಿಸಲಾಗಿದೆ" ಎಂದು ಪ್ರಧಾನಮಂತ್ರಿ ತಿಳಿಸಿದರು. ಜಲ ಜೀವನ್ ಅಭಿಯಾನದ ಅಡಿಯಲ್ಲಿ, ದೇಶದ 6 ಕೋಟಿಗೂ ಹೆಚ್ಚು ಕುಟುಂಬಗಳು ಕೇವಲ 3 ವರ್ಷಗಳಲ್ಲಿ ಕೊಳವೆ ನೀರಿನ ಸಂಪರ್ಕ ಪಡೆದಿವೆ ಎಂದು ಅವರು ಒತ್ತಿ ಹೇಳಿದರು. "ಕರ್ನಾಟಕದ ಗ್ರಾಮೀಣ ಕುಟುಂಬಗಳಿಗೆ ಮೊದಲ ಬಾರಿಗೆ 30 ಲಕ್ಷಕ್ಕೂ ಹೆಚ್ಚು ಜನರಿಗೆ ಕೊಳವೆ ಮೂಲಕ ನೀರು ತಲುಪಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಆಯುಷ್ಮಾನ್ ಭಾರತ್ ಯೋಜನೆಯಡಿ, ದೇಶದ ಸುಮಾರು 4 ಕೋಟಿ ಬಡ ರೋಗಿಗಳು ಆಸ್ಪತ್ರೆ ದಾಖಲಾತಿ ವೇಳೆ ಉಚಿತ ಚಿಕಿತ್ಸೆ ಪಡೆದಿದ್ದಾರೆ ಎಂದು ಪ್ರಧಾನಮಂತ್ರಿ ತಿಳಿಸಿದರು. "ಈ ಕಾರಣಕ್ಕಾಗಿ, ಬಡವರು ಖರ್ಚು ಮಾಡಬೇಕಾಗಿದ್ದ ಸುಮಾರು 50 ಸಾವಿರ ಕೋಟಿ ರೂಪಾಯಿಗಳನ್ನು ಉಳಿಸಿದ್ದಾರೆ. ಕರ್ನಾಟಕದ 30 ಲಕ್ಷಕ್ಕೂ ಹೆಚ್ಚು ರೋಗಿಗಳು ಆಯುಷ್ಮಾನ್ ಭಾರತದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ", ಎಂದು ಪ್ರಧಾನಮಂತ್ರಿ ಹೇಳಿದರು.


ದುರ್ಬಲ ಆರ್ಥಿಕ ಪರಿಸ್ಥಿತಿಗಳಿಂದಾಗಿ ಮರೆತುಹೋದವರು ನಿರ್ಲಕ್ಷಿತರಾಗದಂತೆ ಸರ್ಕಾರ ನೋಡಿಕೊಳ್ಳುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸಣ್ಣ ರೈತರು, ಸಣ್ಣ ವ್ಯಾಪಾರಿಗಳು, ಮೀನುಗಾರರು, ಬೀದಿಬದಿ ವ್ಯಾಪಾರಿಗಳು ಮತ್ತು ಅಂತಹ ಕೋಟ್ಯಂತರ ಜನರು ಮೊದಲ ಬಾರಿಗೆ ದೇಶದ ಅಭಿವೃದ್ಧಿಯ ಪ್ರಯೋಜನಗಳನ್ನು ಪಡೆಯಲು ಪ್ರಾರಂಭಿಸಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. "ಅವರು ಭಾರತದ ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರುತ್ತಿದ್ದಾರೆ" ಎಂದೂ ಅವರು ಹೇಳಿದರು.
ಭಾರತದ ಏಳೂವರೆ ಸಾವಿರ ಕಿಲೋಮೀಟರ್ ಕರಾವಳಿಯತ್ತ ಎಲ್ಲರ ಗಮನ ಸೆಳೆದ ಪ್ರಧಾನಮಂತ್ರಿಯವರು, ದೇಶದ ಈ ಸಾಮರ್ಥ್ಯದ ಸಂಪೂರ್ಣ ಪ್ರಯೋಜನವನ್ನು ನಾವು ಪಡೆದುಕೊಳ್ಳಬೇಕು ಎಂದು ಹೇಳಿದರು. "ಪ್ರವಾಸೋದ್ಯಮ ಬೆಳೆದಾಗ, ಅದು ನಮ್ಮ ಗುಡಿ ಕೈಗಾರಿಕೆಗಳು, ನಮ್ಮ ಕುಶಲಕರ್ಮಿಗಳು, ಗ್ರಾಮೋದ್ಯೋಗ, ಬೀದಿಬದಿ ವ್ಯಾಪಾರಿಗಳು, ಆಟೋ ರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರು ಮೊದಲಾದವರಿಗೆ ಉಪಯುಕ್ತವಾಗುತ್ತದೆ. ನವಮಂಗಳೂರು ಬಂದರು ಕ್ರೂಸ್ ಪ್ರವಾಸೋದ್ಯಮವನ್ನು ಉತ್ತೇಜಿಸಲು ನಿರಂತರವಾಗಿ ಹೊಸ ಸೌಲಭ್ಯಗಳನ್ನು ಸೇರಿಸುತ್ತಿರುವುದು ತಮಗೆ ಸಂತಸ ತಂದಿದೆ ಎಂದರು.


"ಇಂದು ಡಿಜಿಟಲ್ ಪಾವತಿಗಳು ಐತಿಹಾಸಿಕ ಮಟ್ಟದಲ್ಲಿವೆ ಮತ್ತು ಭೀಮ್-ಯುಪಿಐನಂತಹ ನಮ್ಮ ಆವಿಷ್ಕಾರಗಳು ವಿಶ್ವದ ಗಮನವನ್ನು ಸೆಳೆಯುತ್ತಿವೆ" ಎಂದು ಪ್ರಧಾನಮಂತ್ರಿ ಹೇಳಿದರು. ಇಂದು, ದೇಶದ ಜನರು ಬಲಿಷ್ಠ ಸಂಪರ್ಕದೊಂದಿಗೆ ವೇಗದ ಮತ್ತು ಅಗ್ಗದ ಇಂಟರ್ನೆಟ್ ಅನ್ನು ಬಯಸುತ್ತಾರೆ ಎಂದು ಅವರು ಹೇಳಿದರು. ಇಂದು, ಸುಮಾರು 6 ಲಕ್ಷ ಕಿ.ಮೀ ಆಪ್ಟಿಕಲ್ ಫೈಬರ್ ಅಳವಡಿಸುವ ಮೂಲಕ ಗ್ರಾಮ ಪಂಚಾಯಿತಿಗಳನ್ನು ಸಂಪರ್ಕಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. "5ಜಿ ಸೌಲಭ್ಯವು ಈ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ತರಲಿದೆ. ಕರ್ನಾಟಕ ಸರ್ಕಾರವು ಜನರ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ತ್ವರಿತವಾಗಿ ಪೂರೈಸಲು ಶ್ರಮಿಸುತ್ತಿರುವುದು ತಮಗೆ ಹರ್ಷವೆನಿಸಿದೆ", ಎಂದು ಅವರು ಹೇಳಿದರು.
ಕೆಲವು ದಿನಗಳ ಹಿಂದೆ ಹೊರಬಿದ್ದ ಜಿಡಿಪಿ ಅಂಕಿಅಂಶಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಕೊರೊನಾ ಅವಧಿಯಲ್ಲಿ ಭಾರತ ಕೈಗೊಂಡ ನೀತಿಗಳು ಮತ್ತು ಕೈಗೊಂಡ ನಿರ್ಧಾರಗಳು ಭಾರತದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಹೇಳಿದರು. "ಕಳೆದ ವರ್ಷ, ಅನೇಕ ಜಾಗತಿಕ ಅಡೆತಡೆಗಳ ಹೊರತಾಗಿಯೂ, ಭಾರತದ ರಫ್ತು ಒಟ್ಟು 670 ಶತಕೋಟಿ ಡಾಲರ್ ಅಂದರೆ 50 ಲಕ್ಷ ಕೋಟಿ ರೂ. ಆಗಿತ್ತು. ಪ್ರತಿಯೊಂದು ಸವಾಲನ್ನು ಮೆಟ್ಟಿನಿಂತು ಭಾರತವು 418 ಶತಕೋಟಿ ಡಾಲರ್ ಅಂದರೆ 31 ಲಕ್ಷ ಕೋಟಿ ರೂಪಾಯಿಗಳ ಸರಕು ರಫ್ತು ಮಾಡಿ ಹೊಸ ದಾಖಲೆ ನಿರ್ಮಿಸಿದೆ" ಎಂದು ಪ್ರಧಾನಮಂತ್ರಿ ಹೇಳಿದರು.


ದೇಶದ ಬೆಳವಣಿಗೆಯ ಚಾಲಕಶಕ್ತಿಯಾದ ಪ್ರತಿಯೊಂದು ವಲಯವೂ ಇಂದು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಸೇವಾ ವಲಯವು ಸಹ ತ್ವರಿತ ಬೆಳವಣಿಗೆಯತ್ತ ಸಾಗುತ್ತಿದೆ. ಪಿಎಲ್ ಐ ಯೋಜನೆಗಳ ಪರಿಣಾಮವನ್ನು ಉತ್ಪಾದನಾ ವಲಯದಲ್ಲಿ ಬಹಳ ಸ್ಪಷ್ಟವಾಗಿ ಕಾಣಬಹುದು ಎಂದು ಅವರು ಹೇಳಿದರು. "ಮೊಬೈಲ್ ಫೋನ್ ಗಳು ಸೇರಿದಂತೆ ಇಡೀ ವಿದ್ಯುನ್ಮಾನ ಉತ್ಪಾದನಾ ವಲಯವು ಅನೇಕ ಪಟ್ಟು ಬೆಳೆದಿದೆ" ಎಂದು ಅವರು ಹೇಳಿದರು. ಪ್ರಧಾನಮಂತ್ರಿಯವರು ಭಾರತದ ಹೊರಹೊಮ್ಮುತ್ತಿರುವ ಆಟಿಕೆ ವಲಯದ ಬಗ್ಗೆಯೂ ಎಲ್ಲರ ಗಮನ ಸೆಳೆದರು, ಆ ಕ್ಷೇತ್ರದಲ್ಲಿ 3 ವರ್ಷಗಳಲ್ಲಿ ಆಟಿಕೆಗಳ ಆಮದು ಕಡಿಮೆಯಾಗಿದೆ ಮತ್ತು ರಫ್ತು ಬಹುತೇಕ ಹೆಚ್ಚಾಗಿದೆ. "ಭಾರತೀಯ ಸರಕುಗಳನ್ನು ರಫ್ತು ಮಾಡಲು ತಮ್ಮ ಸಂಪನ್ಮೂಲಗಳನ್ನು ಒದಗಿಸುವ ಮಂಗಳೂರಿನಂತಹ ಪ್ರಮುಖ ಬಂದರುಗಳನ್ನು ಹೊಂದಿರುವ ದೇಶದ ಕರಾವಳಿ ಪ್ರದೇಶಗಳಿಂದ ಇದು ನೇರವಾಗಿ ಪ್ರಯೋಜನ ಪಡೆಯುತ್ತಿವೆ" ಎಂದು ಪ್ರಧಾನಮಂತ್ರಿ ಹೇಳಿದರು.


ಸರ್ಕಾರದ ಪ್ರಯತ್ನಗಳೊಂದಿಗೆ, ದೇಶವು ಕೆಲವು ವರ್ಷಗಳಲ್ಲಿ ಕರಾವಳಿ ಸಂಚಾರದಲ್ಲಿ ಗಮನಾರ್ಹ ಹೆಚ್ಚಳಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ದೇಶದ ವಿವಿಧ ಬಂದರುಗಳಲ್ಲಿ ಹೆಚ್ಚಿದ ಸೌಲಭ್ಯಗಳು ಮತ್ತು ಸಂಪನ್ಮೂಲಗಳಿಂದಾಗಿ, ಕರಾವಳಿ ಆಂದೋಲನವು ಈಗ ಸುಲಭವಾಗಿದೆ" ಎಂದು ಅವರು ಹೇಳಿದರು. "ಬಂದರು ಸಂಪರ್ಕವು ಉತ್ತಮವಾಗಿರಬೇಕು, ಅದನ್ನು ತ್ವರಿತಗೊಳಿಸಬೇಕು ಎಂಬುದು ಸರ್ಕಾರದ ಪ್ರಯತ್ನವಾಗಿದೆ. ಆದ್ದರಿಂದ, ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ, ರೈಲ್ವೆ ಮತ್ತು ರಸ್ತೆಗಳ ಇನ್ನೂರೈವತ್ತಕ್ಕೂ ಹೆಚ್ಚು ಯೋಜನೆಗಳನ್ನು ಗುರುತಿಸಲಾಗಿದ್ದು, ಇದು ತಡೆರಹಿತ ಬಂದರು ಸಂಪರ್ಕಕ್ಕೆ ನೆರವಾಗುತ್ತದೆ", ಎಂದು ಪ್ರಧಾನಮಂತ್ರಿ ಹೇಳಿದರು.


ಆಜಾದಿ ಕಾ ಅಮೃತ ಮಹೋತ್ಸವದ ಆಚರಣೆಯ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಗುಲಾಮಗಿರಿಯ ಕಪಿಮುಷ್ಟಿಯಿಂದ ಭಾರತದ ನೆಲವನ್ನು ರಕ್ಷಿಸಲು ರಾಣಿ ಅಬ್ಬಕ್ಕ ಮತ್ತು ರಾಣಿ ಚೆನ್ನಭೈರಾ ದೇವಿ ಮಾಡಿದ ಹೋರಾಟಗಳನ್ನು  ಸ್ಮರಿಸಿದರು. "ಇಂದು, ಈ ಧೈರ್ಯಶಾಲಿ ಮಹಿಳೆಯರು ರಫ್ತು ಕ್ಷೇತ್ರದಲ್ಲಿ ಮುಂದುವರಿಯುತ್ತಿರುವ ಭಾರತಕ್ಕೆ ದೊಡ್ಡ ಸ್ಫೂರ್ತಿಯಾಗಿದ್ದಾರೆ" ಎಂದೂ ಹೇಳಿದರು.
ಪ್ರಧಾನಮಂತ್ರಿಯವರು ಕರ್ನಾಟಕದ ಕರಾವಳಿ ಪ್ರದೇಶವನ್ನು ಉಲ್ಲೇಖಿಸುವ ಮೂಲಕ ತಮ್ಮ ಭಾಷಣವನ್ನು  ಮುಕ್ತಾಯಗೊಳಿಸಿದರು. "ದೇಶಭಕ್ತಿಯ, ರಾಷ್ಟ್ರೀಯ ಸಂಕಲ್ಪದ ಈ ಶಕ್ತಿಯಿಂದ ನಾನು ಸದಾ ಪ್ರೇರೇಪಿತನಾಗಿದ್ದೇನೆ. ಮಂಗಳೂರಿನಲ್ಲಿ ಕಂಡುಬರುವ ಈ ಶಕ್ತಿಯು  ಅಂತಹ ಅಭಿವೃದ್ಧಿಯ ಪಥವನ್ನು ಉಜ್ವಲಗೊಳಿಸುವುದನ್ನು ಮುಂದುವರಿಸಲಿ, ಅದೇ ಆಶಯದೊಂದಿಗೆ, ಈ ಅಭಿವೃದ್ಧಿ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು" ಎಂದು ಹೇಳಿದರು.
ಕರ್ನಾಟಕದ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ,  ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ  ಶ್ರೀ ಪ್ರಲ್ಹಾದ್ ಜೋಶಿ, ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ ಶ್ರೀ ಸರ್ಬಾನಂದ ಸೋನೊವಾಲ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ, ಕೇಂದ್ರದ ಸಹಾಯಕ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್, ಶ್ರೀ ಶಂತನು ಠಾಕೂರ್ ಮತ್ತು ಸುಶ್ರೀ  ಶೋಭಾ ಕರಂದ್ಲಾಜೆ, ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್,  ರಾಜ್ಯದ ಸಚಿವರುಗಳಾದ ಶ್ರೀ ಅಂಗಾರ ಎಸ್, ಶ್ರೀ ಸುನಿಲ್ ಕುಮಾರ್ ವಿ ಮತ್ತು ಶ್ರೀ ಕೋಟ ಶ್ರೀನಿವಾಸ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಯೋಜನೆಗಳ ವಿವರಗಳು:
ಪ್ರಧಾನಮಂತ್ರಿಯವರು ಮಂಗಳೂರಿನಲ್ಲಿ ಸುಮಾರು 3800 ಕೋಟಿ ರೂ.ಗಳ ಯಾಂತ್ರೀಕರಣ ಮತ್ತು ಕೈಗಾರಿಕೀಕರಣ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.


ಕಂಟೈನರ್ ಗಳು ಮತ್ತು ಇತರ ಸರಕುಗಳ ನಿರ್ವಹಣೆಗಾಗಿ ನವಮಂಗಳೂರು ಬಂದರು ಪ್ರಾಧಿಕಾರವು ಕೈಗೆತ್ತಿಕೊಂಡಿರುವ 280 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಬರ್ತ್ ನಂ. 14ರ ಯಾಂತ್ರೀಕರಣ ಯೋಜನೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ಯಾಂತ್ರೀಕೃತ ಟರ್ಮಿನಲ್ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಸರಕು ಸಂಚಾರದ (ಟರ್ನ್ ಅರೌಂಡ್) ಸಮಯ ತಗ್ಗಿಸುತ್ತದೆ, ಪ್ರೀ-ಬರ್ತಿಂಗ್ ವಿಳಂಬ ಮತ್ತು ಬಂದರಿನಲ್ಲಿ ಇರುವ ಸಮಯವನ್ನು ಸುಮಾರು ಶೇ. 35ರಷ್ಟು ಕಡಿಮೆ ಮಾಡುತ್ತದೆ, ಇದರಿಂದಾಗಿ ವ್ಯಾಪಾರ ಪರಿಸರಕ್ಕೆ ಉತ್ತೇಜನ ನೀಡುತ್ತದೆ. ಯೋಜನೆಯ ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ, ಆ ಮೂಲಕ ನಿರ್ವಹಣಾ ಸಾಮರ್ಥ್ಯಕ್ಕೆ 4.2 ಎಂಟಿಪಿಎ ಸೇರಿಸಲಾಗಿದೆ, ಇದು 2025ರ ವೇಳೆಗೆ 6 ಎಂಟಿಪಿಎಗೆ ಹೆಚ್ಚಳವಾಗಲಿದೆ.


 ಬಂದರು ಕೈಗೆತ್ತಿಕೊಂಡಿರುವ ಸುಮಾರು 1000 ಕೋಟಿ ರೂ.ಗಳ ಐದು ಯೋಜನೆಗಳಿಗೆ ಪ್ರಧಾನಮಂತ್ರಿಯವರು ಶಿಲಾನ್ಯಾಸ ನೆರವೇರಿಸಿದರು. ಅತ್ಯಾಧುನಿಕ ಕ್ರಯೋಜೆನಿಕ್ ಎಲ್ಪಿಜಿ ಸಂಗ್ರಹಣಾ ಟ್ಯಾಂಕ್ ಟರ್ಮಿನಲ್ ಹೊಂದಿರುವ ಸಮಗ್ರ ಎಲ್ಪಿಜಿ ಮತ್ತು ಸಗಟು ದ್ರವೀಕೃತ ಪಿಒಎಲ್ ಸೌಲಭ್ಯವು 45,000 ಟನ್ ಗಳ ಪೂರ್ಣ ಲೋಡ್ ವಿಎಲ್.ಜಿ.ಸಿ (ಬಹಳ ದೊಡ್ಡ ಅನಿಲ ವಾಹಕಗಳು) ಅನ್ನು ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ಇಳಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸೌಲಭ್ಯವು ಈ ಪ್ರದೇಶದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಬಲಪಡಿಸುತ್ತದೆ  ಮತ್ತು ದೇಶದ ಉನ್ನತ ಎಲ್ಪಿಜಿ ಆಮದು ಬಂದರುಗಳಲ್ಲಿ ಒಂದಾಗಿ ಬಂದರಿನ ಸ್ಥಾನಮಾನವನ್ನು ವರ್ಧಿಸುತ್ತದೆ. ಪ್ರಧಾನಮಂತ್ರಿಯವರು ಶೇಖರಣಾ ಟ್ಯಾಂಕ್ ಗಳು ಮತ್ತು ಖಾದ್ಯ ತೈಲ ಸಂಸ್ಕರಣಾಗಾರಗಳ ನಿರ್ಮಾಣ, ಬಿಟುಮೆನ್ ಸಂಗ್ರಹಣಾ ಮತ್ತು ಸಂಬಂಧಿತ ಸೌಲಭ್ಯಗಳ ನಿರ್ಮಾಣ ಮತ್ತು ಬಿಟುಮೆನ್ ಮತ್ತು ಖಾದ್ಯ ತೈಲ ಸಂಗ್ರಹಣೆ ಮತ್ತು ಸಂಬಂಧಿತ ಸೌಲಭ್ಯಗಳ ನಿರ್ಮಾಣದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳು ಬಿಟುಮೆನ್ ಮತ್ತು ಖಾದ್ಯ ತೈಲ ಹಡಗುಗಳ ಸಂಚಾರದ ಸಮಯವನ್ನು ಸುಧಾರಿಸುತ್ತವೆ ಮತ್ತು ವ್ಯಾಪಾರಕ್ಕಾಗಿ ಒಟ್ಟಾರೆ ಸರಕು ವೆಚ್ಚವನ್ನು ತಗ್ಗಿಸುತ್ತದೆ. ಪ್ರಧಾನಮಂತ್ರಿಯವರು ಕುಳಾಯಿಯಲ್ಲಿ ಮೀನುಗಾರಿಕಾ ಬಂದರಿನ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು, ಇದು ಮೀನು ಹಿಡಿಯುವಿಕೆಯನ್ನು ಸುರಕ್ಷಿತವಾಗಿ ನಿರ್ವಹಿಸಲು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಸಾಗರಮಾಲಾ ಕಾರ್ಯಕ್ರಮದ ಅಡಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು  ಮತ್ತು ಇದು ಮೀನುಗಾರ ಸಮುದಾಯಕ್ಕೆ ಗಮನಾರ್ಹವಾದ ಸಾಮಾಜಿಕ-ಆರ್ಥಿಕ ಪ್ರಯೋಜನ ತರಲು ಕಾರಣವಾಗುತ್ತದೆ.


ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಕೈಗೆತ್ತಿಕೊಂಡಿರುವ ಎರಡು ಯೋಜನೆಗಳಾದ BS VI ಉನ್ನತೀಕರಣ ಯೋಜನೆ ಮತ್ತು ಸಮುದ್ರ ನೀರು ಶುದ್ಧೀಕರಣ ಘಟಕವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ಸುಮಾರು 1830 ಕೋಟಿ ರೂ.ಗಳ ಬಿಎಸ್-6 ಉನ್ನತೀಕರಣ ಯೋಜನೆಯು ಅಲ್ಟ್ರಾ-ಪ್ಯೂರ್ ಪರಿಸರ ಸ್ನೇಹಿ ಬಿಎಸ್-6 ಗ್ರೇಡ್ ಇಂಧನ (10 ಪಿಪಿಎಂ ಗಿಂತ ಕಡಿಮೆ ಗಂಧಕದ ಅಂಶದೊಂದಿಗೆ) ಉತ್ಪಾದನೆಗೆ ಅನುಕೂಲ ಮಾಡಿಕೊಡುತ್ತದೆ. ಸುಮಾರು 680 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾದ ಸಮುದ್ರ ನೀರು ಶುದ್ಧೀಕರಣ ಘಟಕವು ಸಿಹಿನೀರಿನ ಮೇಲಿನ ಅವಲಂಬನೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ ಮತ್ತು ವರ್ಷವಿಡೀ ಹೈಡ್ರೋಕಾರ್ಬನ್ ಗಳು ಮತ್ತು ಪೆಟ್ರೋಕೆಮಿಕಲ್ ಗಳ ನಿಯಮಿತ ಪೂರೈಕೆಯನ್ನು ಖಚಿತಪಡಿಸುತ್ತದೆ. ಪ್ರತಿನಿತ್ಯ 30 ದಶಲಕ್ಷ ಲೀಟರ್ (ಎಂಎಲ್ಡಿ) ಸಾಮರ್ಥ್ಯವನ್ನು ಹೊಂದಿರುವ ಈ ಸ್ಥಾವರವು ಸಂಸ್ಕರಣಾ ಪ್ರಕ್ರಿಯೆಗಳಿಗೆ ಅಗತ್ಯವಿರುವ ನೀರಾಗಿ ಸಮುದ್ರದ ನೀರನ್ನು ಪರಿವರ್ತಿಸುತ್ತದೆ.

 

 

 

 

*****

 



(Release ID: 1856442) Visitor Counter : 261