ಗಣಿ ಸಚಿವಾಲಯ
ಖನಿಜಾನ್ವೇಷಣೆಗೆ ಹೆಚ್ಚಿನ ಖಾಸಗಿ ಸಂಸ್ಥೆಗಳನ್ನು ಆಕರ್ಷಿಸಲು ಸರ್ಕಾರ ಉತ್ಸುಕವಾಗಿದೆ- ಶ್ರೀ ಪ್ರಲ್ಹಾದ್ ಜೋಶಿ
ಒಟ್ಟಾರೆ ಕಲ್ಲಿದ್ದಲು ಉತ್ಪಾದನೆ 900 ಮಿಲಿಯನ್ ಟನ್ ತಲುಪುವ ಸಾಧ್ಯತೆ;
ಈ ವರ್ಷ ಒಟ್ಟು ಕಲ್ಲಿದ್ದಲು ಉತ್ಪಾದನೆ ದಾಖಲೆಯ 140 ಮಿಲಿಯನ್ ಟನ್
Posted On:
23 AUG 2022 3:04PM by PIB Bengaluru
ಖನಿಜಾನ್ವೇಷಣೆಗೆ ಹೆಚ್ಚಿನ ಖಾಸಗಿ ಉದ್ಯಮಿಗಳನ್ನು ಆಕರ್ಷಿಸಲು ಕೇಂದ್ರ ಸರ್ಕಾರವು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು. ಡ್ರೋಣ್ ಗಳು ಮತ್ತು ಇತರೆ ಇತ್ತೀಚಿನ ಆಧುನಿಕ ತಂತ್ರಜ್ಞಾನಗಳ ಅಧಿಕ ಬಳಕೆಯ ಮೂಲಕ ಪರಿಸರದ ಮೇಲೆ ಹೆಚ್ಚಿನ ಪ್ರತಿಕೂಲ ಪರಿಣಾಮ ಬೀರದಂತೆ ಖನಿಜಗಳ ಶೋಧ ಕಾರ್ಯ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಎನ್ ಎಂಡಿಸಿ ನಿಯಮಿತ, ಉಕ್ಕು ಸಚಿವಾಲಯ, ಗಣಿ ಸಚಿವಾಲಯ ಮತ್ತು ಎಫ್ ಐಸಿಸಿಐ ಇಂದು ಇಲ್ಲಿ ಆಯೋಜಿಸಿದ್ದ “ಭಾರತೀಯ ಖನಿಜಗಳು ಮತ್ತು ಲೋಹಗಳ ಉದ್ಯಮ ಪರಿವರ್ತನೆ- 2030 ರೆಡೆಗೆ ಮತ್ತು ವಿಷನ್ 2047” ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಪ್ರಲ್ಹಾದ್ ಜೋಶಿ ಅವರು ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜು ಮೂಲಕ ಕಳೆದ ವರ್ಷ 25000 ಕೋಟಿ ರೂ.ಗೂ ಅಧಿಕ ಹೆಚ್ಚುವರಿ ಆದಾಯವನ್ನು ಗಳಿಸಲಾಗಿದೆ ಮತ್ತು ಒಡಿಶಾ ರಾಜ್ಯವು ಆದಾಯ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು.
ನವ ಯುಗದ ಖನಿಜಗಳ ಅನ್ವೇಷಣೆಯತ್ತ ಗಮನಹರಿಸುವಂತೆ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (ಜಿಎಸ್ಐ) ಗೆ ಸಚಿವರು ಕರೆ ನೀಡಿದರು. ಗಣಿಗಾರಿಕಾ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ಕೈಗೊಂಡಿರುವ ಕೆಲವು ಸುಧಾರಣೆಗಳನ್ನು ಪ್ರಸ್ತಾಪಿಸಿದ ಶ್ರೀ ಜೋಶಿ ಅವರು, ಕಳೆದ ಹಣಕಾಸು ವರ್ಷದಲ್ಲಿ 89 ಮಿಲಿಯನ್ ಟನ್ ಇದ್ದ ಗಣಿ ನಿಕ್ಷೇಪಗಳಲ್ಲಿನ ಕಲ್ಲಿದ್ದಲು ಗಣಿಗಾರಿಕೆ ಈ ವರ್ಷ 140 ಮಿಲಿಯನ್ ಟನ್ ತಲುಪುವ ನಿರೀಕ್ಷೆಯಿದೆ ಎಂದು ಹೇಳಿದರು. ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ಕಲ್ಲಿದ್ದಲು ಉತ್ಪಾದನೆಯು ದಾಖಲೆಯ 900 ಮಿಲಿಯನ್ ಟನ್ಗಳನ್ನು ತಲುಪುವ ಸಾಧ್ಯತೆಯಿದೆ ಎಂದು ಸಚಿವರು ಹೇಳಿದರು.

ಖನಿಜಗಳ ಅನ್ವೇಷಣೆ ಅಥವಾ ಶೋಧನ ಕಾರ್ಯಕ್ಕೆ ಮತ್ತಷ್ಟು ಒತ್ತು ನೀಡಲು, ರಾಷ್ಟ್ರೀಯ ಖನಿಜ ಶೋಧನಾ ಟ್ರಸ್ಟ್ (ಎನ್ ಎಂಇಟಿ) ಅನ್ನು ಸ್ವಾಯತ್ತ ಸಂಸ್ಥೆಯಾಗಿ ಮಾಡಲಾಗಿದೆ ಎಂದು ಸಚಿವರು ಹೇಳಿದರು. ಶ್ರೀ ಪ್ರಲ್ಹಾದ್ ಜೋಶಿ ಅವರು ಇತ್ತೀಚಿನ ತಮ್ಮ ಯಶಸ್ವಿ ಆಸ್ಟ್ರೇಲಿಯಾ ಭೇಟಿಯನ್ನು ಸ್ಮರಿಸಿಕೊಂಡರು, ಆಸ್ಟ್ರೇಲಿಯಾಕ್ಕೆ ಹೋಲಿಸಿದರೆ ನಮ್ಮ ಖನಿಜಗಳ ಶೋಧನಾ ಕಾರ್ಯವು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿದೆ ಎಂದು ಹೇಳಿದರು. ಇತ್ತೀಚಿನ ನವೀನ ಉಪಕ್ರಮಗಳು ಮತ್ತು ಕಾಯ್ದೆಗಳು ಮತ್ತು ನಿಯಮಗಳಲ್ಲಿನ ತಿದ್ದುಪಡಿಗಳ ಪರಿಣಾಮವಾಗಿ, ಕಳೆದ ಏಳು ವರ್ಷಗಳಲ್ಲಿ 190 ಪ್ರಮುಖ ಖನಿಜ ನಿಕ್ಷೇಪಗಳನ್ನು ಹರಾಜು ಹಾಕಲಾಗಿದೆ ಎಂದು ಅವರು ಹೇಳಿದರು. ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜು ಒಂದು ದೊಡ್ಡ ಯಶಸ್ಸು ಕಂಡಿದೆ ಎಂದು ಉಲ್ಲೇಖಿಸಿದ ಸಚಿವರು, ಹಂಚಿಕೆಯಾದ ಕಲ್ಲಿದ್ದಲು ನಿಕ್ಷೇಪಗಳಿಂದ ಶೀಘ್ರವೇ ಉತ್ಪಾದನೆ ಆರಂಭಿಸಬೇಕು ಅಥವಾ ಇಲ್ಲವೇ ಆ ನಿಕ್ಷೇಪಗಳನ್ನು ಮರು ಹರಾಜಿಗಾಗಿ ಸಚಿವಾಲಯದ ವಶಕ್ಕೆ ಒಪ್ಪಿಸಬೇಕು ಎಂದು ಸಾರ್ವಜನಿಕ ವಲಯದ ಘಟಕಗಳನ್ನು ಒತ್ತಾಯಿಸಿದರು.
******
(Release ID: 1853890)