ಪ್ರಧಾನ ಮಂತ್ರಿಯವರ ಕಛೇರಿ

76ನೇ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯ ಮೇಲಿನಿಂದ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ

Posted On: 15 AUG 2022 2:17PM by PIB Bengaluru

ಪ್ರಧಾನಿ ಅವರ ಭಾಷಣದ ಮುಖ್ಯಾಂಶಗಳು ಹೀಗಿವೆ :
1.    ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದ ಮಹತ್ವದ ಸಂದರ್ಭದಲ್ಲಿ ನನ್ನ ಪ್ರೀತಿಯ ಎಲ್ಲಾ ದೇಶವಾಸಿಗಳಿಗೆ ಅಭಿನಂದನೆಗಳು! ತಮ್ಮ ದೇಶವನ್ನು ಅಪಾರವಾಗಿ ಪ್ರೀತಿಸುವ ನಮ್ಮ ಭಾರತೀಯರು, ನಮ್ಮ ತ್ರಿವರ್ಣ ಧ್ವಜವನ್ನು ಭಾರತದ ಮೂಲೆ ಮೂಲೆಗಳಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಹೆಮ್ಮೆ, ಗೌರವ ಮತ್ತು ವೈಭವದಿಂದ ಹಾರಿಸುವುದನ್ನು ನೋಡುವುದು ನಿಜಕ್ಕೂ ಹೃದಯಸ್ಪರ್ಶಿ ಅನುಭವ.
2.    ಪೂಜ್ಯ ಬಾಪೂಜಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾ ಸಾಹೇಬ್ ಅಂಬೇಡ್ಕರ್, ವೀರ್ ಸಾವರ್ಕರ್ ಅವರಿಗೆ ಎಲ್ಲಾ ದೇಶವಾಸಿಗಳು ಚಿರಋಣಿಗಳಾಗಿದ್ದಾರೆ.  ಮಾತೃಭೂಮಿ ಋಣ ತೀರಿಸುವುದೊಂದೇ ಅವರ ಏಕೈಕ ಜೀವನ ಮಾರ್ಗವಾಗಿತ್ತು.
3.    ಮಂಗಲ್ ಪಾಂಡೆ, ತಾಂತ್ಯಾ ಟೋಪಿ, ಭಗತ್ ಸಿಂಗ್, ಸುಖದೇವ್, ರಾಜಗುರು, ಚಂದ್ರಶೇಖರ್ ಆಜಾದ್, ಅಶ್ಫಾಕ್ ಉಲ್ಲಾ ಖಾನ್, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಬ್ರಿಟಿಷ್ ಆಡಳಿತದ ಅಡಿಪಾಯವನ್ನು ಅಲುಗಾಡಿಸಿದ ನಮ್ಮ ಅಸಂಖ್ಯಾತ ಕ್ರಾಂತಿಕಾರಿಗಳಿಗೆ ಈ ದೇಶವು ಆಭಾರಿಯಾಗಿದೆ. ರಾಣಿ ಲಕ್ಷ್ಮಿಬಾಯಿ, ಝಲ್ಕರಿ ಬಾಯಿ, ದುರ್ಗಾ ಭಾಬಿ, ರಾಣಿ ಗೈದಿನ್ಲಿಯು, ರಾಣಿ ಚೆನ್ನಮ್ಮ, ಬೇಗಂ ಹಜರತ್ ಮಹಲ್, ವೇಲು ನಾಚಿಯಾರ್…ಹೀಗೆ ಭಾರತದ ಮಹಿಳಾ ಶಕ್ತಿಯ ಸಾಮರ್ಥ್ಯವನ್ನು ತೋರಿಸಿದ ಈ ದಿಟ್ಟ ವನಿತೆಯರಿಗೆ ಈ ರಾಷ್ಟ್ರವು ಆಭಾರಿಯಾಗಿದೆ.
4.    ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಸ್ವಾತಂತ್ರ್ಯಾನಂತರ ದೇಶವನ್ನು ಕಟ್ಟಿದ ಡಾ. ರಾಜೇಂದ್ರ ಪ್ರಸಾದ್, ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಶ್ಯಾಮಪ್ರಸಾದ್ ಮುಖರ್ಜಿ, ಲಾಲ್ ಬಹದ್ದೂರ್ ಶಾಸ್ತ್ರಿ, ದೀನ್ ದಯಾಳ್ ಉಪಾಧ್ಯಾಯ, ಜೈ ಪ್ರಕಾಶ್ ನಾರಾಯಣ್, ರಾಮ್ ಮನೋಹರ್ ಲೋಹಿಯಾ, ಆಚಾರ್ಯ ವಿನೋಬಾ ಭಾವೆ, ನಾನಾಜಿ ದೇಶ್ ಮುಖ್, ಸುಬ್ರಮಣ್ಯ ಭಾರತಿ ಅವರಂತಹ ಅಸಂಖ್ಯಾತ ಮಹಾನ್ ವ್ಯಕ್ತಿಗಳಿಗೆ ಗೌರವ ಸಲ್ಲಿಸಲು ಇಂದು ಸದಾವಕಾಶ ಒದಗಿಬಂದಿದೆ.
5.    ನಾವು ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತನಾಡುವಾಗ, ಕಾಡುಗಳಲ್ಲಿ ವಾಸಿಸುವ ನಮ್ಮ ಬುಡಕಟ್ಟು ಸಮಾಜದ ಬಗ್ಗೆ ತಪ್ಪದೆ ಹೆಮ್ಮೆ ಪಡಲೇಬೇಕು. ಈ ಸಾಲಿನಲ್ಲಿ ಭಗವಾನ್ ಬಿರ್ಸಾ ಮುಂಡಾ, ಸಿಧು-ಕನ್ಹು, ಅಲ್ಲೂರಿ ಸೀತಾರಾಮ ರಾಜು, ಗೋವಿಂದ ಗುರು ಅವರಂತಹ ಅಸಂಖ್ಯಾತ ಹೆಸರುಗಳಿವೆ. ಅವರು ಸ್ವಾತಂತ್ರ್ಯ ಚಳವಳಿಯ ಧ್ವನಿಯಾದರು. ದೂರದ ಕಾಡಿನಲ್ಲಿ ನನ್ನ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು, ತಾಯಂದಿರು ಮತ್ತು ಯುವಕರನ್ನು ಮಾತೃಭೂಮಿಗಾಗಿ ಬದುಕಲು ಮತ್ತು ಪ್ರಾಣವನ್ನೂ ಬೇಕಾದರೂ ಕೊಡಲು ಪ್ರೇರೇಪಿಸಿದರು. ಸ್ವಾತಂತ್ರ್ಯ ಸಂಗ್ರಾಮಕ್ಕೆ ಅನೇಕ ಮಜಲುಗಳು ಇರುವುದು ಈ ದೇಶದ ಸೌಭಾಗ್ಯವಾಗಿದೆ.
6.    ಕಳೆದ ವರ್ಷದಿಂದ, ದೇಶವು 'ಅಮೃತ ಮಹೋತ್ಸವ'ವನ್ನು ಹೇಗೆ ಆಚರಿಸುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಇದೆಲ್ಲವೂ 2021ರಲ್ಲಿ `ದಂಡಿ ಯಾತ್ರೆ’ಯೊಂದಿಗೆ ಪ್ರಾರಂಭವಾಯಿತು. `ಸ್ವಾತಂತ್ರ್ಯದ ಅಮೃತ ಮಹೋತ್ಸವ'ದ ಗುರಿಗಳ ವ್ಯಾಪ್ತಿಯನ್ನು ವಿಸ್ತರಿಸಲು ಜನರು ಭಾರತದ ಪ್ರತಿಯೊಂದು ಜಿಲ್ಲೆಯಲ್ಲೂ, ಮೂಲೆ ಮೂಲೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿದರು. ಬಹುಶಃ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ಉದ್ದೇಶಕ್ಕಾಗಿ ಇಷ್ಟು ದೊಡ್ಡ ಮತ್ತು ಸಮಗ್ರವಾದ ಹಬ್ಬವನ್ನು ಆಚರಿಸಲಾಗಿದೆ.
7.    ಕೆಲವು ಕಾರಣಗಳಿಗಾಗಿ ಇತಿಹಾಸದಲ್ಲಿ ಉಲ್ಲೇಖಗೊಳ್ಳದ ಅಥವಾ ಮರೆತುಹೋದ ಎಲ್ಲಾ ಮಹಾನ್ ವ್ಯಕ್ತಿಗಳನ್ನು ಸ್ಮರಿಸುವ ಪ್ರಯತ್ನವನ್ನು ಭಾರತದ ಮೂಲೆ ಮೂಲೆಗಳಲ್ಲಿಯೂ ಮಾಡಲಾಯಿತು.  ಇಂದು, ದೇಶದ ಮೂಲೆ ಮೂಲೆಗಳಿಂದ ಅಂತಹ ಎಲ್ಲಾ ವೀರರು ಮತ್ತು ಮಹಾನ್ ಪುರುಷರ ಪರಿಚಯವನ್ನು ರಾಷ್ಟ್ರವು ಪಡೆದಿದೆ ಮತ್ತು ಅವರ ತ್ಯಾಗಕ್ಕಾಗಿ ಅವರಿಗೆ ಗೌರವ ಸಲ್ಲಿಸಿದೆ. ಅಮೃತ ಮಹೋತ್ಸವದ ಸಂದರ್ಭದಲ್ಲಿ ಈ ಎಲ್ಲ ಮಹಾಪುರುಷರಿಗೆ ಶ್ರದ್ಧಾಂಜಲಿ ಸಲ್ಲಿಸಲು ಇದೊಂದು ಸದಾವಕಾಶ.
8.    ಇಂದು, ʻಆಜಾದಿ ಕಾ ಅಮೃತ ಮಹೋತ್ಸವʼವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಕಳೆದ 75 ವರ್ಷಗಳಲ್ಲಿ ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು, ದೇಶವನ್ನು ರಕ್ಷಿಸಿದವರು ಮತ್ತು ದೇಶದ ಸಂಕಲ್ಪಗಳನ್ನು ಪೂರೈಸಿದವರು ಮಾತೃಭೂಮಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಲು ಸಕಾಲವಾಗಿದೆ; ಅವರು ಸೇನಾ ಸಿಬ್ಬಂದಿಯಾಗಿರಲೀ, ಪೊಲೀಸ್ ಸಿಬ್ಬಂದಿಯಾಗಿರಲೀ, ಅಧಿಕಾರಿಗಳಾಗಿರಲೀ, ಜನ ಪ್ರತಿನಿಧಿಗಳಾಗಿರಲೀ, ಸ್ಥಳೀಯ ಆಡಳಿತಗಾರರಾಗಿರಲೀ, ರಾಜ್ಯ ಆಡಳಿತ ಅಥವಾ ಕೇಂದ್ರ ಆಡಳಿತದ ಪ್ರತಿನಿಧಿಗಳಾಗಿರಲೀ ಯಾರೇ ಆಗಿದ್ದರೂ ಸರಿ. ಕಳೆದ 75 ವರ್ಷಗಳಲ್ಲಿ ವಿವಿಧ ಸವಾಲುಗಳ ನಡುವೆಯೂ ದೇಶವನ್ನು ಮುನ್ನಡೆಸಲು ಸಾಧ್ಯವಿರುವ ಎಲ್ಲವನ್ನೂ ಮಾಡಿದ ದೇಶದ ಕೋಟ್ಯಾಂತರ ನಾಗರಿಕರ ಕೊಡುಗೆಗಳನ್ನೂ ನಾವು ಇಂದು ನೆನಪಿಸಿಕೊಳ್ಳಬೇಕು.
9.    75 ವರ್ಷಗಳ ಈ ಪ್ರಯಾಣವು ಏರಿಳಿತಗಳಿಂದ ಕೂಡಿದೆ. ಒಳ್ಳೆಯ ಮತ್ತು ಕೆಟ್ಟ ಸಮಯಗಳ ನಡುವೆ ನಮ್ಮ ದೇಶವಾಸಿಗಳು ವಿವಿಧ ಸಾಧನೆಗಳನ್ನು ಮಾಡಿದ್ದಾರೆ; ಅವರು ತಮ್ಮ ಕೈಲಾದ ಗರಿಷ್ಠ ಪ್ರಯತ್ನಗಳನ್ನು ಮಾಡಿದ್ದಾರೆಯೇ ಹೊರತು ಕೈಚೆಲ್ಲಿಲ್ಲ, ಸಂಕಲ್ಪಗಳು ವ್ಯರ್ಥವಾಗಲು ಅವರು ಬಿಡಲಿಲ್ಲ.
10.    ಭಾರತವು ಬಲವಾದ ಸಂಸ್ಕೃತಿ ಮತ್ತು ಮೌಲ್ಯಗಳ ಅಂತರ್ಗತ ಸಾಮರ್ಥ್ಯವನ್ನು ಹೊಂದಿದೆ; ಅಲ್ಲಿನ ಜನರ ನಡುವೆ ಮನಸ್ಸು ಮತ್ತು ಆತ್ಮದಲ್ಲಿ ಆಳವಾಗಿ ಹುದುಗಿರುವ ಆಲೋಚನೆಗಳ ಬಂಧವನ್ನು ಹೊಂದಿದೆ ಮತ್ತು ಭಾರತವು ಎಲ್ಲಾ ಪ್ರಜಾಪ್ರಭುತ್ವದ ತಾಯಿಯಾಗಿದೆ ಎಂದು ಜಗತ್ತಿಗೆ ತಿಳಿದಿರಲಿಲ್ಲ. ತಮ್ಮ ಮನಸ್ಸಿನ ಆಳದಲ್ಲಿ ಪ್ರಜಾಸತ್ತೆಯನ್ನು ಹೊಂದಿರುವ ಜನರು ದೃಢನಿಶ್ಚಯ ಮತ್ತು ದೃಢ ಸಂಕಲ್ಪದಿಂದ ಹೆಜ್ಜೆ ಹಾಕಿದಾಗ, ಅದು ವಿಶ್ವದ ಅತ್ಯಂತ ಶಕ್ತಿಶಾಲಿ ಸುಲ್ತಾನರಿಗೂ ವಿನಾಶದ ಸೂಚನೆಯೇ ಸರಿ. ನಾವು ಅಮೂಲ್ಯವಾದ ಶಕ್ತಿಯನ್ನು ಹೊಂದಿದ್ದೇವೆ ಎಂದು ಪ್ರಜಾಪ್ರಭುತ್ವದ ತಾಯಿಯಾದ ಭಾರತವು ಎಲ್ಲರಿಗೂ ಸಾಬೀತುಪಡಿಸಿದೆ.
11.    75 ವರ್ಷಗಳ ಪ್ರಯಾಣದಲ್ಲಿ, ಭರವಸೆಗಳು, ಆಕಾಂಕ್ಷೆಗಳು, ಏರಿಳಿತಗಳ ನಡುವೆ, ಪ್ರತಿಯೊಬ್ಬರ ಪ್ರಯತ್ನದಿಂದ ನಾವು ಇಲ್ಲಿಯವರೆಗೆ ತಲುಪಲು ಸಾಧ್ಯವಾಗಿದೆ. 2014ರಲ್ಲಿ, ನನ್ನ ದೇಶವಾಸಿಗಳು ನನಗೆ ಈ ಜವಾಬ್ದಾರಿಯನ್ನು ನೀಡಿದರು. ಇದರೊಂದಿಗೆ, ಐತಿಹಾಸಿಕ ಕೆಂಪು ಕೋಟೆಯ ಮೇಲಿಂದ ನನ್ನ ಪ್ರೀತಿಯ ದೇಶವಾಸಿಗಳಿಗಾಗಿ ವೈಭವದ ಸ್ತುತಿಯನ್ನು ಹಾಡುವ ಅವಕಾಶ ಪಡೆದ ಸ್ವತಂತ್ರ ಭಾರತದಲ್ಲಿ ಜನಿಸಿದ ಮೊದಲ ಭಾರತೀಯನೆಂಬ  ಸುಯೋಗ ನನ್ನದಾಯಿತು.
12.    ಮಹಾತ್ಮಾ ಗಾಂಧಿಯವರ ಒಳಗೊಳ್ಳುವಿಕೆಯ ಆಶಯವನ್ನು ಈಡೇರಿಸಲು ಭಾರತದ ಪೂರ್ವ ಅಥವಾ ಪಶ್ಚಿಮ, ಉತ್ತರ ಅಥವಾ ದಕ್ಷಿಣ ಅಕ್ಷಾಂಶ-ರೇಖಾಂಶಗಳು, ಸಾಗರ ತಳಗಳು ಅಥವಾ ಹಿಮಾಲಯ ಶಿಖರಗಳು ಹೀಗೆ ದಶ ದಿಕ್ಕುಗಳಲ್ಲೂ ಸಿಕ್ಕ ಯಾವೊಂದು ಅವಕಾಶವನ್ನೂ ನಾನು ಬಿಟ್ಟುಕೊಟ್ಟಿಲ್ಲ. ಕೊನೆಯ ಮೈಲಿಯಲ್ಲಿ ಕುಳಿತಿರುವ ವ್ಯಕ್ತಿಯನ್ನು ಸಶಕ್ತಗೊಳಿಸುವ ಮತ್ತು ಮೇಲೆತ್ತುವ ಬಾಪೂ ಅವರ ಆಶಯಕ್ಕೆ ನಾನು ಬದ್ಧನಾಗಿದ್ದೇನೆ.
13.    ನಾವು ಇಂದು ಅಮೃತ ಮಹೋತ್ಸವದಂದು 75 ವರ್ಷಗಳ ಭವ್ಯ ವರ್ಷಗಳ ಪ್ರಯಾಣವನ್ನು ಮುಗಿಸುತ್ತಿದ್ದೇವೆ. 76ನೇ ವರ್ಷದ ಮೊದಲ ದಿನದಂದು ಬೆಳಗ್ಗೆ, ಇಷ್ಟು ಅಗಾಧ ಕೊಡುಗೆಯ ರಾಷ್ಟ್ರವನ್ನು ನೋಡಿ ನನಗೆ ಹೆಮ್ಮೆ ಎನಿಸುತ್ತಿದೆ. 
14.    ದೇಶದ ಪ್ರತಿಯೊಬ್ಬ ನಾಗರಿಕ ಸಹ ಪರಿಸ್ಥಿತಿ ಬದಲಾಯಿಸಲು ಬಯಸುತ್ತಾನೆ, ಪರಿಸ್ಥಿತಿ ಬದಲಾಗುವುದನ್ನು ನೋಡಲು ಬಯಸುತ್ತಾನೆ, ಆದರೆ ಕಾಯಲು ಸಿದ್ಧನಿಲ್ಲ. ಅವರು ಈ ಬದಲಾವಣೆಗಳು ತಮ್ಮ ಕಣ್ಣ ಮುಂದೆ ಸಂಭವಿಸಬೇಕೆಂದು ಬಯಸುತ್ತಾರೆ ಮತ್ತು ಅದನ್ನು ತನ್ನ ಕರ್ತವ್ಯದ ಭಾಗವಾಗಿಸಲು ಬಯಸುತ್ತಾರೆ.  ಅದು ಕೇಂದ್ರ ಸರಕಾರವಾಗಿರಲೀ, ರಾಜ್ಯ ಸರಕಾರವಾಗಿರಲೀ, ಸ್ಥಳೀಯ ಆಡಳಿತ ಸಂಸ್ಥೆಗಳಾಗಲಿ, ಯಾವುದೇ ರೀತಿಯ ಆಡಳಿತ ವ್ಯವಸ್ಥೆಯಾಗಿರಲಿ, ಪ್ರತಿಯೊಬ್ಬರೂ ಈ ಮಹತ್ವಾಕಾಂಕ್ಷೆಯ ಸಮಾಜದತ್ತ ಗಮನ ಹರಿಸಬೇಕು ಮತ್ತು ಅದರ ಆಶೋತ್ತರಳ ಈಡೇರಿಕೆಗಾಗಿ ನಾವು ಹೆಚ್ಚು ಕಾಲ ಕಾಯಲು ಸಾಧ್ಯವಿಲ್ಲ ಎಂಬುದು ನನ್ನ ನಂಬಿಕೆ. 
15.    ನಮ್ಮ ಮಹಾತ್ವಾಕಾಂಕ್ಷಿ ಸಮಾಜ ಬಹಳ ಸಮಯದಿಂದ ಕಾಯುತ್ತಿದೆ. ಆದರೆ ಈಗ ಸಮಾಜದ ಜನರು ತಮ್ಮ ಮುಂದಿನ ಪೀಳಿಗೆಯನ್ನು ಹೀಗೆಯೇ ಕಾಯುತ್ತಾ ಬದುಕುವಂತೆ ಒತ್ತಾಯಿಸಲು ಸಿದ್ಧರಿಲ್ಲ.  ಆದ್ದರಿಂದ ಈ 'ಅಮೃತ್ ಕಾಲ'ದ ಮೊದಲ ಉದಯವು ಆ ಮಹತ್ವಾಕಾಂಕ್ಷೆಯ ಸಮಾಜದ ಆಕಾಂಕ್ಷೆಗಳನ್ನು ಪೂರೈಸಲು ನಮಗೆ ದೊಡ್ಡ ಸುವರ್ಣಾವಕಾಶವನ್ನು ತಂದಿದೆ.
16.    ಇತ್ತೀಚೆಗೆ, ನಾವು ಅಂತಹ ಒಂದು ಅಥವಾ ಎರಡು ಶಕ್ತಿಗಳನ್ನು ನೋಡಿದ್ದೇವೆ ಮತ್ತು ಅನುಭವಿಸಿದ್ದೇವೆ. ಅದು ಭಾರತದಲ್ಲಿ ಸಾಮೂಹಿಕ ಪ್ರಜ್ಞೆಯ ಪುನರುಜ್ಜೀವನವೇ ಸರಿ. ಈ ಜಾಗೃತಿ ಪ್ರಜ್ಞೆಯೇ, ಈ ಪುನರುಜ್ಜೀವನವೇ ನಮ್ಮ ದೊಡ್ಡ ಆಸ್ತಿ ಎಂದು ನಾನು ಭಾವಿಸುತ್ತೇನೆ.  ಆಗಸ್ಟ್ 10ರವರೆಗೆ, ಜನರು ದೇಶದೊಳಗಿನ ಶಕ್ತಿಯ ಬಗ್ಗೆ ತಿಳಿದಿರಲಿಲ್ಲ. ಆದರೆ ಕಳೆದ ಮೂರು ದಿನಗಳಿಂದ, ದೇಶವು ತ್ರಿವರ್ಣ ಧ್ವಜದ ಪ್ರಯಾಣವನ್ನು ಆಚರಿಸಲು ಪ್ರಾರಂಭಿಸಿದ ರೀತಿಯು ಅಮೋಘವಾದುದು. ಸಮಾಜ ವಿಜ್ಞಾನದ ಪ್ರಮುಖ ತಜ್ಞರಿಗೂ ತ್ರಿವರ್ಣ ಧ್ವಜದಿಂದ ಅನಾವರಣಗೊಂಡ ನನ್ನ ದೇಶದ ಶಕ್ತಿಯನ್ನು ಊಹಿಸಲು ಸಾಧ್ಯವಿಲ್ಲ.
17.    ಜಗತ್ತು ಭಾರತವನ್ನು ಹೆಮ್ಮೆಯಿಂದ ಮತ್ತು ನಿರೀಕ್ಷೆಯಿಂದ ನೋಡುತ್ತಿದೆ. ಜಗತ್ತು, ಭೂಮಿಯ ಮೇಲಿನ ಸಮಸ್ಯೆಗಳಿಗೆ ಭಾರತದ ಪರಿಹಾರಗಳನ್ನು ಹುಡುಕಲು ಪ್ರಾರಂಭಿಸಿದೆ. ಪ್ರಪಂಚದಲ್ಲಿನ ಈ ಬದಲಾವಣೆ, ಪ್ರಪಂಚದ ಚಿಂತನೆಯಲ್ಲಿನ ಈ ಬದಲಾವಣೆ, ನಮ್ಮ 75 ವರ್ಷಗಳ ಅನುಭವದ ಪ್ರಯಾಣದ ಫಲಿತಾಂಶವಾಗಿದೆ.
18.    ನಿರೀಕ್ಷೆಗಳನ್ನು ಪೂರೈಸುವ ಶಕ್ತಿ ನಿಜವಾಗಿಯೂ ಎಲ್ಲಿದೆ ಎಂದು ಜಗತ್ತು ಅರಿತುಕೊಳ್ಳಲು ಪ್ರಾರಂಭಿಸಿದೆ. ನಾನು ಅದನ್ನು ಸ್ತ್ರೀ ಶಕ್ತಿಯಾಗಿ ನೋಡುತ್ತೇನೆ. ನಾನು ಅದನ್ನು ʻತ್ರಿವಳಿ ಶಕ್ತಿʼ ಅಥವಾ ʻತ್ರಿ-ಶಕ್ತಿʼಯಾಗಿ ನೋಡುತ್ತೇನೆ, ಅವೆಂದರೆ - ʻಆಕಾಂಕ್ಷೆʼ, ʻಮರು-ಜಾಗೃತಿʼ ಮತ್ತು ʻವಿಶ್ವದ ನಿರೀಕ್ಷೆಗಳುʼ. ಇವುಗಳನ್ನು ಪೂರೈಸುವ ನಿಟ್ಟಿನಲ್ಲಿ, ಭಾರತದ ಮೇಲೆ ವಿಶ್ವದ ಈ ನಂಬಿಕೆಯನ್ನು ಜಾಗೃತಗೊಳಿಸುವಲ್ಲಿ ನನ್ನ ದೇಶವಾಸಿಗಳು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ನಮಗೆ ತಿಳಿದಿದೆ.
19.    130 ಕೋಟಿ ದೇಶವಾಸಿಗಳು ಹಲವಾರು ದಶಕಗಳ ಅನುಭವದ ನಂತರ ಸ್ಥಿರ ಸರಕಾರದ ಮಹತ್ವ, ರಾಜಕೀಯ ಸ್ಥಿರತೆಯ ಶಕ್ತಿ, ನೀತಿಗಳು ಮತ್ತು ನೀತಿಗಳ ಮೇಲೆ ಜನರ ವಿಶ್ವಾಸ ಹೇಗೆ ಬೆಳೆಯುತ್ತದೆ ಎಂಬುದನ್ನು ಜಗತ್ತಿಗೆ ತೋರಿಸಿದ್ದಾರೆ. ಜಗತ್ತು ಕೂಡ ಈಗ ಅದನ್ನು ಅರ್ಥಮಾಡಿಕೊಳ್ಳಲು ಸಮರ್ಥವಾಗಿದೆ. ರಾಜಕೀಯ ಸ್ಥಿರತೆ, ನೀತಿಗಳಲ್ಲಿ ಚಲನಶೀಲತೆ, ನಿರ್ಧಾರ ತೆಗೆದುಕೊಳ್ಳುವಲ್ಲಿ ವೇಗ, ಏಕರೂಪತೆ ಮತ್ತು ಸಾರ್ವತ್ರಿಕ ನಂಬಿಕೆ ಇದ್ದಾಗ ಪ್ರತಿಯೊಬ್ಬರೂ ಅಭಿವೃದ್ಧಿಯಲ್ಲಿ ಪಾಲುದಾರರಾಗುತ್ತಾರೆ.
20.    ನಾವು ʻಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ ಮಂತ್ರದೊಂದಿಗೆ ನಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ಆದರೆ ಕ್ರಮೇಣ ದೇಶವಾಸಿಗಳು ʻಸಬ್ ಕಾ ವಿಶ್ವಾಸ್, ಮತ್ತು ಸಬ್ ಕಾ ಪ್ರಯಾಸ್ʼನೊಂದಿಗೆ ಅದಕ್ಕೆ ಹೆಚ್ಚಿನ ಬಣ್ಣಗಳನ್ನು ಸೇರಿಸಿದ್ದಾರೆ. ಆದ್ದರಿಂದ, ನಾವು ನಮ್ಮ ಸಾಮೂಹಿಕ ಶಕ್ತಿ ಮತ್ತು ಸಾಮೂಹಿಕ ಸಾಮರ್ಥ್ಯವನ್ನು ನೋಡಿದ್ದೇವೆ.
21.    ಪ್ರತಿ ಜಿಲ್ಲೆಯಲ್ಲಿ 75 `ಅಮೃತ್ ಸರೋವರ್’ಗಳನ್ನು ನಿರ್ಮಿಸುವ ಅಭಿಯಾನದೊಂದಿಗೆ ಇಂದು ʻಆಜಾದಿ ಕಾ ಅಮೃತ ಮಹೋತ್ಸವʼವನ್ನು ಆಚರಿಸಲಾಗುತ್ತಿದೆ. ಪ್ರತಿ ಹಳ್ಳಿಯ ಜನರು ಅಭಿಯಾನಕ್ಕೆ ಕೈ ಜೋಡಿಸುತ್ತಿದ್ದಾರೆ ಮತ್ತು ತಮ್ಮ ಸೇವೆಗಳನ್ನು ನೀಡುತ್ತಿದ್ದಾರೆ. ಜನರು ತಮ್ಮ ಸ್ವಂತ ಪ್ರಯತ್ನಗಳಿಂದ, ತಮ್ಮ ತಮ್ಮ ಗ್ರಾಮಗಳಲ್ಲಿ ನೀರಿನ ಸಂರಕ್ಷಣೆಗಾಗಿ ಬೃಹತ್ ಅಭಿಯಾನವನ್ನು ನಡೆಸುತ್ತಿದ್ದಾರೆ.
22.    ಇಂದು, ನಾನು 130 ಕೋಟಿ ದೇಶವಾಸಿಗಳ ಶಕ್ತಿಯ ಬಗ್ಗೆ ಮಾತನಾಡುತ್ತಿದ್ದೇನೆ, ಅವರ ಕನಸುಗಳಿಗೆ ಸಾಕ್ಷಿಯಾಗುತ್ತಿದ್ದೇನೆ ಮತ್ತು ಕೆಂಪು ಕೋಟೆಯಿಂದ ಅವರ ಸಂಕಲ್ಪಗಳ ಅನುಭವವನ್ನು ಪಡೆಯುತ್ತಿದ್ದೇನೆ. ಮುಂಬರುವ 25 ವರ್ಷಗಳಲ್ಲಿ ನಾವು ನಮ್ಮ ಗಮನವನ್ನು ʻಪಂಚ ಪ್ರಾಣʼದ ಮೇಲೆ ಕೇಂದ್ರೀಕರಿಸಬೇಕು ಎಂದು ನಾನು ನಂಬುತ್ತೇನೆ. ನೀವು ನಿಮ್ಮ ಸಂಕಲ್ಪಗಳು ಮತ್ತು ಶಕ್ತಿಯ ಮೇಲೆ ಗಮನ ಹರಿಸಬೇಕು. ಮತ್ತು ದೇಶವು 2047ರಲ್ಲಿ ತನ್ನ 100ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ವೇಳೆಗೆ ಆ ʻಪಂಚ ಪ್ರಾಣʼವನ್ನು ಅಪ್ಪಿಕೊಳ್ಳುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಎಲ್ಲಾ ಕನಸುಗಳನ್ನು ಈಡೇರಿಸುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಬೇಕು.
23.    ʻಅಮೃತಕಾಲʼದ ʻಪಂಚಪ್ರಾಣʼಗಳೆಂದರೆ- ಅಭಿವೃದ್ಧಿ ಹೊಂದಿದ ಭಾರತದ ಗುರಿ; ವಸಾಹತುಶಾಹಿ ಮನಸ್ಥಿತಿಯ ಯಾವುದೇ ಕುರುಹು ಇಲ್ಲದಂತೆ ತೆಗೆದುಹಾಕುವುದು; ನಮ್ಮ ಬೇರುಗಳ ಬಗ್ಗೆ ಹೆಮ್ಮೆ ಪಡುವುದು;  ಏಕತೆ ಮತ್ತು ಕರ್ತವ್ಯ ಪ್ರಜ್ಞೆ.
24.    ಸಹಕಾರಿ ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯ ಇಂದಿನ ಅಗತ್ಯವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವ ಬಗ್ಗೆ ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆಯ ಮನೋಭಾವವಿರಲಿ.
25.    ನನ್ನ ಮೊದಲ ಭಾಷಣದಲ್ಲಿ ನಾನು ಮೊದಲು ಸ್ವಚ್ಛತೆಯ ಬಗ್ಗೆ ಮಾತನಾಡಿದಾಗ, ಇಡೀ ದೇಶವು ಅದನ್ನು ಅಪ್ಪಿಕೊಂಡಿತು. ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸ್ವಚ್ಛತೆಯತ್ತ ಸಾಗಿದರು ಮತ್ತು ಈಗ ಕೊಳಕುತನದ ಬಗ್ಗೆ ಜನರಲ್ಲಿ ಅಸಹ್ಯ ಹುಟ್ಟಿದೆ. ಈ ದೇಶವು ಆ ಕೆಲಸವನ್ನು ಮಾಡಿದೆ, ಮಾಡುತ್ತಿದೆ ಮತ್ತು ಭವಿಷ್ಯದಲ್ಲಿಯೂ ಅದನ್ನು ಮುಂದುವರಿಸುತ್ತದೆ. ಭಾರತದಲ್ಲಿ ಇಂದು ಬಯಲು ಮಲವಿಸರ್ಜನೆಯಿಂದ ಮುಕ್ತಿ ಸಾಧ್ಯವಾಗಿದೆ.
26.    ಜಗತ್ತು ಸಂದಿಗ್ಧ ಸ್ಥಿತಿಯಲ್ಲಿದ್ದಾಗಲೂ, ಭಾರತವು ಕಾಲಮಿತಿಯಲ್ಲಿ 200 ಕೋಟಿ ಲಸಿಕೆಗಳ ಗುರಿಯನ್ನು ದಾಟಿ ಹಿಂದಿನ ಎಲ್ಲಾ ದಾಖಲೆಗಳನ್ನು ಛಿದ್ರಗೊಳಿಸಿದೆ.
27.    ನಾವು ಕೊಲ್ಲಿಯಿಂದ ಬರುವ ಇಂಧನದ ಮೇಲೆ ಅವಲಂಬಿತರಾಗಿದ್ದೇವೆ. ಜೈವಿಕ ತೈಲದ ಕಡೆಗೆ ಹೇಗೆ ಚಲಿಸಬೇಕೆಂದು ನಾವು ನಿರ್ಧರಿಸಿದ್ದೆವು. 10 ಪ್ರತಿಶತ ಎಥೆನಾಲ್ ಮಿಶ್ರಣವು ಬಹಳ ದೊಡ್ಡ ಕನಸಿನಂತೆ ತೋರಿತು. ಹಳೆಯ ಅನುಭವಗಳು ಈ ಗುರಿ ಸಾಧನೆ ಅಸಾಧ್ಯವೆಂದು ಹೇಳುತ್ತಿದ್ದವು. ಆದರೆ ದೇಶವು ನಿಗದಿತ ಸಮಯಕ್ಕಿಂತ ಮೊದಲೇ 10 ಪ್ರತಿಶತದಷ್ಟು ಎಥೆನಾಲ್ ಮಿಶ್ರಣದ ಈ ಕನಸನ್ನು ನನಸಾಗಿಸಿದೆ.
28.    ಇಷ್ಟು ಕಡಿಮೆ ಅವಧಿಯಲ್ಲಿ 2.5 ಕೋಟಿ ಜನರಿಗೆ ವಿದ್ಯುತ್ ಸಂಪರ್ಕ ಒದಗಿಸುವುದು ಸಣ್ಣ ಕೆಲಸವಲ್ಲ, ಆದರೆ ದೇಶವು ಅದನ್ನು ಸಾಧಿಸಿದೆ. ಇಂದು ದೇಶವು ಲಕ್ಷಾಂತರ ಕುಟುಂಬಗಳ ಮನೆಗಳಿಗೆ ತ್ವರಿತಗತಿಯಲ್ಲಿ ನಲ್ಲಿಯ ಮೂಲಕ ನೀರನ್ನು ಒದಗಿಸುತ್ತಿದೆ.
29.    ಒಮ್ಮೆ ನಾವು ದೃಢ ನಿರ್ಧಾರ ಮಾಡಿದ್ದಾದರೆ, ನಮ್ಮ ಗುರಿಗಳನ್ನು ಸಾಧಿಸಬಹುದು ಎಂದು ಅನುಭವವು ನಮಗೆ ಹೇಳುತ್ತದೆ. ನವೀಕರಿಸಬಹುದಾದ ಇಂಧನದ ಗುರಿಯಾಗಿರಲಿ, ದೇಶದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸುವ ಉದ್ದೇಶವಿರಲಿ ಅಥವಾ ವೈದ್ಯರ ಕಾರ್ಯಪಡೆಯನ್ನು ಸೃಷ್ಟಿಸುವ ಉದ್ದೇಶವಿರಲಿ, ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಶರವೇಗದಲ್ಲಿ ಸಾಗಿದ್ದೇವೆ. 
30.    ಸಹೋದರರೇ, ಲೋಕವು ನಮಗೆ ಎಷ್ಟು ದಿನಗಳ ಕಾಲ ನಮಗೆ ಪ್ರಮಾಣಪತ್ರಗಳನ್ನು ನೀಡಬಲ್ಲದು? ಪ್ರಪಂಚದ ಪ್ರಮಾಣಪತ್ರಗಳ ಮೇಲೆ ನಾವು ಎಷ್ಟು ಕಾಲ ಬದುಕಬೇಕು? ನಾವು ನಮ್ಮದೇ ಆದ ಮಾನದಂಡಗಳನ್ನು ಹೊಂದಬಾರದೇಕೆ? 130 ಕೋಟಿ ಜನಸಂಖ್ಯೆಯ ಈ ದೇಶವು ತನ್ನ ಮಾನದಂಡಗಳನ್ನು ಮೀರುವ ಪ್ರಯತ್ನವನ್ನು ಮಾಡದಿರಲು ಸಾಧ್ಯವೇ? ಯಾವುದೇ ಪರಿಸ್ಥಿತಿಯಲ್ಲಿ ನಾವು ಇತರರಂತೆ ಕಾಣಲು ಪ್ರಯತ್ನಿಸಬಾರದು. ನಮ್ಮ ಸ್ವಂತ ಸಾಮರ್ಥ್ಯದೊಂದಿಗೆ ಬೆಳೆಯುವುದು ನಮ್ಮ ಮನೋಧರ್ಮವಾಗಿರಬೇಕು. ನಾವು ಗುಲಾಮಗಿರಿಯಿಂದ ಸ್ವಾತಂತ್ರ್ಯವನ್ನು ಬಯಸುತ್ತೇವೆ. ಗುಲಾಮಗಿರಿಯ ಅಂಶವು ಸಪ್ತ ಸಮುದ್ರಗಳ ಅಡಿಯಲ್ಲಿಯೂ ಎಲ್ಲಿಯೂ ಸಹ ಎಳ್ಳಷ್ಟೂ ನಮ್ಮ ಮನಸ್ಸಿನಲ್ಲಿ ಉಳಿಯಬಾರದು.
31.    ಸಾಕಷ್ಟು ಚಿಂತನ-ಮಂಥನದೊಂದಿಗೆ, ವಿವಿಧ ಜನರಿಂದ ವಿಚಾರಗಳ ವಿನಿಮಯದೊಂದಿಗೆ ರೂಪಿಸಲಾದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ನನ್ನಲ್ಲಿ ಭರವಸೆ ಮೂಡಿಸಿದೆ. ಇದು ದೇಶದ ಶಿಕ್ಷಣ ನೀತಿಯ ಮೂಲವಾಗಿದೆ. ನಾವು ಒತ್ತಿಹೇಳುವ ಕೌಶಲ್ಯವು ಅಂತಹ ಒಂದು ಸಾಮರ್ಥ್ಯವನ್ನು, ಗುಲಾಮಗಿರಿಯಿಂದ ಮುಕ್ತರಾಗಲು ಅದು ನಮಗೆ ಶಕ್ತಿ ನೀಡುತ್ತದೆ.
32.    ಕೆಲವೊಮ್ಮೆ ನಮ್ಮ ಪ್ರತಿಭೆಯು ಭರವಸೆಯ ಸಂಕೋಲೆಯಲ್ಲಿ ಬಂಧಿಯಾಗುವುದನ್ನು ಎಂದು ನಾವು ನೋಡಿದ್ದೇವೆ. ಇದು ಗುಲಾಮರ ಮನಸ್ಥಿತಿಯ ಪರಿಣಾಮವಾಗಿದೆ. ನಮ್ಮ ದೇಶದ ಪ್ರತಿಯೊಂದು ಭಾಷೆಯ ಬಗ್ಗೆ ನಾವು ಹೆಮ್ಮೆ ಪಡಬೇಕು. ನಮಗೆ ಭಾಷೆ ತಿಳಿದಿರಬಹುದು ಅಥವಾ ತಿಳಿಯದೇ ಇರಬಹುದು, ಆದರೆ ಅದು ನನ್ನ ದೇಶದ ಭಾಷೆ ಮತ್ತು ಇದು ನಮ್ಮ ಪೂರ್ವಜರು ಜಗತ್ತಿಗೆ ನೀಡಿದ ಭಾಷೆ ಎಂದು ನಾವು ಹೆಮ್ಮೆಪಡಬೇಕು.
33.    ಇಂದು ನಾವು ʻಡಿಜಿಟಲ್ ಇಂಡಿಯಾʼದ ರಚನೆಯನ್ನು ನೋಡುತ್ತಿದ್ದೇವೆ. ನಾವು ನವೋದ್ಯಮಗಳನ್ನು ನೋಡುತ್ತಿದ್ದೇವೆ. ಈ ಜನರೆಲ್ಲಾ ಯಾರು? ಇದು 2ನೇ ಶ್ರೇಣಿ ಮತ್ತು 3ನೇ ಶ್ರೇಣಿ ನಗರಗಳಲ್ಲಿ ಅಥವಾ ಹಳ್ಳಿಗಳಲ್ಲಿ ವಾಸಿಸುವ ಮತ್ತು ಬಡ ಕುಟುಂಬಗಳಿಗೆ ಸೇರಿದ ಪ್ರತಿಭೆಗಳ ಸಮೂಹವಾಗಿದೆ. ಈ ಯುವಕರು ಇಂದು ಹೊಸ ಆವಿಷ್ಕಾರಗಳೊಂದಿಗೆ ವಿಶ್ವದ ಮುಂದೆ ಬರುತ್ತಿದ್ದಾರೆ.
34.    ಇಂದು ಜಗತ್ತು ಸಮಗ್ರ ಆರೋಗ್ಯ ರಕ್ಷಣೆಯ ಬಗ್ಗೆ ಚರ್ಚಿಸುತ್ತಿದೆ. ಆದರೆ ಜಗತ್ತು ಸಮಗ್ರ ಆರೋಗ್ಯ ರಕ್ಷಣೆಯ ಬಗ್ಗೆ ಮಾತನಾಡುವಾಗ, ಭಾರತದ ಯೋಗ, ಭಾರತದ ಆಯುರ್ವೇದ ಮತ್ತು ಭಾರತದ ಸಮಗ್ರ ಜೀವನಶೈಲಿಯ ಕಡೆಗೆ ದೃಷ್ಟಿ ಹಾಯಿಸುತ್ತದೆ. ಇದು ನಾವು ಜಗತ್ತಿಗೆ ಒದಗಿಸುತ್ತಿರುವ ನಮ್ಮ ಬಳುವಳಿ.
35.    ಇಂದು ಜಗತ್ತು ಅದರಿಂದ ಪ್ರಭಾವಿತವಾಗುತ್ತಿದೆ. ಈಗ ನಮ್ಮ ಶಕ್ತಿಯನ್ನು ನೋಡಿ. ನಾವು ಪ್ರಕೃತಿಯೊಂದಿಗೆ ಹೇಗೆ ಬದುಕಬೇಕೆಂದು ತಿಳಿದಿರುವ ಜನರು. ಭತ್ತ ಮತ್ತು ಸಿರಿಧಾನ್ಯಗಳು ನಮ್ಮ ಗೃಹೋಪಯೋಗಿ ವಸ್ತುಗಳು. ಇದು ನಮ್ಮ ಪರಂಪರೆ. ನಮ್ಮ ಸಣ್ಣ ರೈತರ ಕಠಿಣ ಪರಿಶ್ರಮದಿಂದಾಗಿ, ಭತ್ತವು ಸಣ್ಣ ತುಂಡು ಭೂಮಿಯಲ್ಲಿ ಪ್ರವರ್ಧಮಾನಕ್ಕೆ ಬಂದಿತು. ಇಂದು ಜಗತ್ತು ಸಿರಿಧಾನ್ಯ ವರ್ಷವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲು ಮುಂದಾಗಿದೆ. ಇದರರ್ಥ ಇಂದು ಪ್ರಪಂಚದಾದ್ಯಂತ ನಮ್ಮ ಪರಂಪರೆಯನ್ನು ಪ್ರಶಂಸಿಸಲಾಗುತ್ತಿದೆ. ನಾವು ಅದರ ಬಗ್ಗೆ ಹೆಮ್ಮೆಪಡುವುದನ್ನು ಕಲಿಯೋಣ. ನಾವು ಜಗತ್ತಿಗೆ ನೀಡಬಹುದಾದದ್ದು ಇನ್ನೂ ಸಾಕಷ್ಟಿದೆ.
36.    ನಾವು ಸಸ್ಯಗಳಲ್ಲಿ ದೈವವನ್ನು ನೋಡುವ ಜನರು. ನಾವು ನದಿಯನ್ನು ತಾಯಿ ಎಂದು ಪರಿಗಣಿಸುವ ಜನರು. ಪ್ರತಿ ಕಲ್ಲಿನಲ್ಲಿಯೂ ಶಂಕರನನ್ನು ನೋಡುವ ಜನರು ನಾವು. ಇದು ನಮ್ಮ ಶಕ್ತಿ. ನಾವು ಪ್ರತಿಯೊಂದು ನದಿಯನ್ನು ತಾಯಿಯ ರೂಪದಲ್ಲಿ ನೋಡುತ್ತೇವೆ. ಪರಿಸರದ ಇಂತಹ ಅಗಾಧತೆಯು ನಮ್ಮ ಹೆಮ್ಮೆಯಾಗಿದೆ! ಅಂತಹ ಪರಂಪರೆಯ ಬಗ್ಗೆ ನಾವು ಹೆಮ್ಮೆಪಟ್ಟಾಗ, ಜಗತ್ತು ಸಹ ಅದರ ಬಗ್ಗೆ ಹೆಮ್ಮೆ ಪಡುತ್ತದೆ.
37.    ಜಗತ್ತಿನ ಎಲ್ಲಾ ಉದ್ವಿಗ್ನತೆಗಳಿಗೆ ʻಮೇಲುಗೈ ನೀತಿʼಯೇ ಕಾರಣ. ಈ ಮನೋಭಾವದಿಂದ ಉಂಟಾಗುವ ಸಂಘರ್ಷಗಳಿಂದಾಗಿ ಇಂದು ಜಗತ್ತು ತೀವ್ರವಾದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದನ್ನು ಪರಿಹರಿಸುವ ಬುದ್ಧಿವಂತಿಕೆ ನಮ್ಮಲ್ಲಿದೆ. ನಮ್ಮ ವಿದ್ವಾಂಸರು "ಏಕಂ ಸತ್ ವಿಪ್ರ ಬಹುಧಾ ವದಂತಿ" ಎಂದು ಹೇಳಿದ್ದಾರೆ, ಅಂದರೆ ಪರಿಪೂರ್ಣ ಸತ್ಯವು ಒಂದೇ. ಆದರೆ ಅದು ವಿಭಿನ್ನವಾಗಿ ವ್ಯಕ್ತವಾಗುತ್ತದೆ. ಇದು ನಮ್ಮ ವೈಭವ.
38.    ನಾವು ಲೋಕ ಕಲ್ಯಾಣವನ್ನು ಕಂಡ ಜನರು; "ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯ"ದಲ್ಲಿ ನಂಬಿಕೆಯಿಡುವ ಮೂಲಕ ನಾವು ನಮ್ಮ ಜನರಿಗೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಸಾಮಾಜಿಕ ಒಳಿತು ಮಾಡುವ ಹಾದಿಯಲ್ಲಿ ಸಾಗುತ್ತಿದ್ದೇವೆ. ಎಲ್ಲರೂ ಸಮೃದ್ಧರಾಗಿ ಮತ್ತು ಸಂತೋಷವಾಗಿರಲಿ, ಎಲ್ಲರೂ ಅನಾರೋಗ್ಯದಿಂದ ಮುಕ್ತರಾಗಲಿ, ಎಲ್ಲರೂ ಶುಭವಾದದ್ದನ್ನು ನೋಡಲಿ ಮತ್ತು ಯಾರೂ ತೊಂದರೆಗೊಳಗಾಗದಿರಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಇದು ನಮ್ಮ ಮೌಲ್ಯಗಳಲ್ಲಿ ಬೇರೂರಿದೆ.
39.    ಅದೇ ರೀತಿಯಲ್ಲಿ, ಮತ್ತೊಂದು ಅತ್ಯಂತ ಪ್ರಮುಖ ವಿಷಯವೆಂದರೆ ಏಕತೆ ಮತ್ತು ಒಗ್ಗಟ್ಟು. ನಾವು ನಮ್ಮ ಬೃಹತ್ ದೇಶದ ವೈವಿಧ್ಯತೆಯನ್ನು ಆಚರಿಸಬೇಕಾಗಿದೆ. ಅಸಂಖ್ಯಾತ ಸಂಪ್ರದಾಯಗಳು ಮತ್ತು ಪಂಥಗಳ ಶಾಂತಿಯುತ ಸಹಬಾಳ್ವೆಯು ನಮ್ಮ ಹೆಮ್ಮೆಯಾಗಿದೆ. ನಮಗೆ ಎಲ್ಲರೂ ಸಮಾನರು. ಯಾರೂ ಕೀಳು ಅಥವಾ ಶ್ರೇಷ್ಠರಲ್ಲ; ಎಲ್ಲರೂ ನಮ್ಮವರೇ. ದೇಶದ ಏಕತೆಗೆ ನಾವೆಲ್ಲಾ ಒಂದೇ ಎಂಬ ಭಾವನೆ ಮುಖ್ಯ.
40.    ನನ್ನ ಸಹೋದರ ಸಹೋದರಿಯರೇ, ಕೆಂಪು ಕೋಟೆಯ ಈ ವೇದಿಕೆಯಿಂದ, ನಾನು ಸಹ ನೋವನ್ನು ಹಂಚಿಕೊಳ್ಳಲು ಬಯಸುತ್ತೇನೆ.  ನಾನು ನಿಮ್ಮೊಂದಿಗೆ ಕೆಲವೊಂದು ಬೇಸರದ ವಿಷಯಗಳನ್ನು ಹೇಳಿಕೊಳ್ಳಲು ಬಯಸುತ್ತೇನೆ. ನಮ್ಮ ದೈನಂದಿನ ಮಾತುಗಳಲ್ಲಿ, ನಡವಳಿಕೆಯಲ್ಲಿ ನಾವು ವಿಕೃತಿಯನ್ನು ಮೆರೆದಿದ್ದೇವೆ ಎಂದು ಹೇಳಲು ನನಗೆ ನೋವಾಗುತ್ತದೆ. ನಾವು ಸಾಂದರ್ಭಿಕವಾಗಿ ಅವಾಚ್ಯ ಶಬ್ದಗಳು ಮತ್ತು ಆಕ್ಷೇಪಾರ್ಹ ಪದಗಳನ್ನು ಬಳಸುತ್ತಿದ್ದೇವೆ. ಅವು ನಿಂದನೀಯ ಮತ್ತು ನಮ್ಮ ಮಹಿಳಾ ವಿರೋಧಿ. ನಮ್ಮ ದೈನಂದಿನ ಜೀವನದಲ್ಲಿ ಮಹಿಳೆಯರನ್ನು ಅವಮಾನಿಸುವ ಮತ್ತು ಕೀಳಾಗಿಸುವ ಪ್ರತಿಯೊಂದು ನಡವಳಿಕೆ, ಸಂಸ್ಕೃತಿಯನ್ನು ತೊಡೆದುಹಾಕಲು ನಾವು ಪ್ರತಿಜ್ಞೆ ಮಾಡಬಹುದಲ್ಲವೇ? ರಾಷ್ಟ್ರದ ಕನಸುಗಳನ್ನು ಈಡೇರಿಸುವಲ್ಲಿ ಮಹಿಳೆಯರ ಹೆಮ್ಮೆಯೇ ದೊಡ್ಡ ಆಸ್ತಿಯಾಗಲಿದೆ. ನಾನು ಈ ಶಕ್ತಿಯನ್ನು ನೋಡಿದ್ದೇನೆ ಮತ್ತು ಆದ್ದರಿಂದಲೇ ನಾನು ಅದನ್ನು ಒತ್ತಾಯಿಸುತ್ತಿದ್ದೇನೆ.
41.    ದಿನದ 24 ತಾಸುಗಳ ಕಾಲ ವಿದ್ಯುತ್ ಒದಗಿಸುವ ಪ್ರಯತ್ನವನ್ನು ಮಾಡುವುದು ಸರಕಾರದ ಕೆಲಸವಾಗಿದೆ, ಆದರೆ ಸಾಧ್ಯವಾದಷ್ಟು ಹೆಚ್ಚು ಘಟಕಗಳನ್ನು ಉಳಿಸುವುದು ನಾಗರಿಕರ ಕರ್ತವ್ಯವಾಗಿದೆ. ಪ್ರತಿಯೊಂದು ಹೊಲಕ್ಕೂ ನೀರು ಪೂರೈಸುವುದು ಸರಕಾರದ ಜವಾಬ್ದಾರಿ ಮತ್ತು ಪ್ರಯತ್ನವಾಗಿದೆ, ಆದರೆ ಪ್ರತಿಯೊಂದು ಹೊಲಗಳಿಂದ ಒಂದು ಧ್ವನಿ ಹೊರಹೊಮ್ಮಬೇಕೆಂದು- 'ಪ್ರತಿ ಹನಿಗೆ ಹೆಚ್ಚು ಬೆಳೆ'ಯ ಮೇಲೆ ಗಮನ ಹರಿಸುವ ಮೂಲಕ ನಾವು ನೀರಿನ ಉಳಿತಾಯ ಮುಂದುವರಿಸುವ ಧ್ವನಿ ಹೊರಹೊಮ್ಮಬೇಕೆಂದು ನಾನು ಬಯಸುತ್ತೇನೆ. ರಾಸಾಯನಿಕ ಮುಕ್ತ ಕೃಷಿ, ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ ಮಾಡುವುದು ನಮ್ಮ ಕರ್ತವ್ಯವಾಗಿದೆ.
42.    ಸ್ನೇಹಿತರೇ, ಅದು ಪೊಲೀಸರಾಗಿರಲಿ ಅಥವಾ ಜನರಾಗಿರಲಿ, ಆಡಳಿತಗಾರನಾಗಿರಲೀ ಅಥವಾ ಅಧಿಕಾರಿಯಾಗಿರಲೀ, ಈ ನಾಗರಿಕ ಕರ್ತವ್ಯದಿಂದ ಯಾರೂ ಹೊರತಲ್ಲ. ಪ್ರತಿಯೊಬ್ಬರೂ ತಮ್ಮ ನಾಗರಿಕ ಕರ್ತವ್ಯಗಳನ್ನು ನಿರ್ವಹಿಸಿದರೆ, ನಾವು ಸಮಯಕ್ಕಿಂತ ಮುಂಚಿತವಾಗಿ ಅಪೇಕ್ಷಿತ ಗುರಿಗಳನ್ನು ಸಾಧಿಸಬಹುದು ಎಂದು ನನಗೆ ಖಾತರಿಯಿದೆ.
43.    ಇಂದು ಮಹರ್ಷಿ ಅರವಿಂದರ ಜನ್ಮದಿನವೂ ಆಗಿದೆ. ನಾನು ಆ ಮಹಾಪುರುಷನ ಪಾದಗಳಿಗೆ ನಮಸ್ಕರಿಸುತ್ತೇನೆ. 'ಸ್ವದೇಶದಿಂದ ಸ್ವರಾಜ್ಯʼ ಮತ್ತು ʻಸ್ವರಾಜ್ಯʼದಿಂದ ʻಸುರಾಜ್ಯʼ ಎಂದು ಕರೆ ನೀಡಿದ ಮಹಾನ್ ವ್ಯಕ್ತಿಯನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ. ಇದು ಅವರ ಮಂತ್ರ. ಆದ್ದರಿಂದ, 'ಆತ್ಮನಿರ್ಭರ ಭಾರತ'ವು ಪ್ರತಿಯೊಬ್ಬ ನಾಗರಿಕನ, ಪ್ರತಿ ಸರಕಾರದ ಮತ್ತು ಸಮಾಜದ ಪ್ರತಿಯೊಂದು ಘಟಕದ ಜವಾಬ್ದಾರಿಯಾಗುತ್ತದೆ. 'ಆತ್ಮನಿರ್ಭರ ಭಾರತ'ವು ಸರಕಾರದ ಕಾರ್ಯಸೂಚಿ ಅಥವಾ ಕಾರ್ಯಕ್ರಮವಲ್ಲ. ಇದು ಸಮಾಜದ ಜನಾಂದೋಲನ. ಇದನ್ನು ನಾವು ಮುಂದಕ್ಕೆ ಒಯ್ಯಬೇಕಾಗಿದೆ.
44.    ನನ್ನ ಸ್ನೇಹಿತರೇ, ಸ್ವಾತಂತ್ರ್ಯದ 75 ವರ್ಷಗಳ ನಂತರ ಇಂದು ನಾವು ಈ ಶಬ್ದವನ್ನು ಕೇಳಿದ್ದೇವೆ, ಅದನ್ನು ಕೇಳಲು ನಮ್ಮ ಕಿವಿಗಳು ಹಾತೊರೆಯುತ್ತಿದ್ದವು. 75 ವರ್ಷಗಳ ನಂತರ ಮೊದಲ ಬಾರಿಗೆ ʻಮೇಡ್ ಇನ್ ಇಂಡಿಯಾʼ ಫಿರಂಗಿ ಕೆಂಪು ಕೋಟೆಯಿಂದ ತ್ರಿವರ್ಣ ಧ್ವಜಕ್ಕೆ ನಮಸ್ಕರಿಸಿದೆ. ಈ ಶಬ್ದದಿಂದ ಸ್ಫೂರ್ತಿ ಪಡೆಯದ ಭಾರತೀಯರು ಯಾರಾದರೂ ಇರಲು ಸಾಧ್ಯವೇ?
45.    ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ಇಂದು ನಾನು ನನ್ನ ದೇಶದ ಸೈನಿಕರನ್ನು ಹೃತ್ಪೂರ್ವಕವಾಗಿ ಅಭಿನಂದಿಸಲು ಬಯಸುತ್ತೇನೆ. ಸ್ವಾವಲಂಬನೆಯ ಈ ಜವಾಬ್ದಾರಿಯನ್ನು ಸೇನೆಯ ಯೋಧರು ಸಂಘಟಿತ ರೀತಿಯಲ್ಲಿ ಮತ್ತು ಧೈರ್ಯದಿಂದ ನಿಭಾಯಿಸಿದ ರೀತಿಗೆ ನಾನು ವಂದಿಸುತ್ತೇನೆ.  ಸಶಸ್ತ್ರ ಪಡೆಗಳು ಪಟ್ಟಿಯನ್ನು ತಯಾರಿಸಿ, 300 ರಕ್ಷಣಾ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳದಿರಲು ನಿರ್ಧರಿಸಿದಾಗ ಅದು ನಮ್ಮ ದೇಶದ ಪಾಲಿಗೆ ಸಣ್ಣ ನಿರ್ಣಯವೇನೂ ಆಗಿರಲಿಲ್ಲ.
46.    ʻಪಿಎಲ್ಐʼ ಯೋಜನೆಯ ಬಗ್ಗೆ ಹೇಳುವುದಾದರೆ, ವಿಶ್ವದಾದ್ಯಂತದ ಜನರು ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಭಾರತಕ್ಕೆ ಬರುತ್ತಿದ್ದಾರೆ. ಅವರು ತಮ್ಮೊಂದಿಗೆ ಹೊಸ ತಂತ್ರಜ್ಞಾನವನ್ನು ತರುತ್ತಿದ್ದಾರೆ. ಅವರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ. ಭಾರತವು ಉತ್ಪಾದನಾ ಕೇಂದ್ರವಾಗುತ್ತಿದೆ. ಇದರಿಂದ ಸ್ವಾವಲಂಬಿ ಭಾರತಕ್ಕೆ ಅಡಿಪಾಯ ನಿರ್ಮಾಣವಾಗುತ್ತಿದೆ. 
47.    ಅದು ವಿದ್ಯುನ್ಮಾನ ಸರಕುಗಳೇ ಇರಲಿ ಅಥವಾ ಮೊಬೈಲ್ ಫೋನ್‌ಗಳ ಉತ್ಪಾದನೆಯಾಗಿರಲೀ, ಇಂದು ದೇಶವು ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ನಮ್ಮ ʻಬ್ರಹ್ಮೋಸ್ʼ ಅನ್ನು ವಿಶ್ವಕ್ಕೆ ರಫ್ತು ಮಾಡಿದರೆ ಯಾವ ಭಾರತೀಯನಿಗೆ ತಾನೆ ಹೆಮ್ಮೆಯಾಗುವುದಿಲ್ಲ? ಇಂದು ʻವಂದೇ ಭಾರತ್ʼ ರೈಲು ಮತ್ತು ನಮ್ಮ ಮೆಟ್ರೋ ರೈಲು ಬೋಗಿಗಳು ವಿಶ್ವದ ಆಕರ್ಷಣೆಯ ವಸ್ತುಗಳಾಗುತ್ತಿವೆ.
48.    ಇಂಧನ ಕ್ಷೇತ್ರದಲ್ಲಿ ನಾವು ಸ್ವಾವಲಂಬಿಗಳಾಗಬೇಕು. ಇಂಧನ ಕ್ಷೇತ್ರದಲ್ಲಿ ನಾವು ಎಷ್ಟು ಕಾಲ ಇತರರ ಮೇಲೆ ಅವಲಂಬಿತರಾಗಿರಲು ಸಾಧ್ಯ? ಸೌರಶಕ್ತಿ, ಪವನ ಶಕ್ತಿ, ವಿವಿಧ ನವೀಕರಿಸಬಹುದಾದ ಇಂಧನ ಮೂಲಗಳ ಕ್ಷೇತ್ರದಲ್ಲಿ ನಾವು ಸ್ವಾವಲಂಬಿಗಳಾಗಿರಬೇಕು ಮತ್ತು ʻಮಿಷನ್ ಹೈಡ್ರೋಜನ್ʼ, ಜೈವಿಕ ಇಂಧನ ಮತ್ತು ವಿದ್ಯುತ್ ಚಾಲಿತ ವಾಹನಗಳ ವಿಷಯದಲ್ಲಿ ಮುನ್ನಡೆಯಬೇಕು.
49.    ನೈಸರ್ಗಿಕ ಕೃಷಿಯು ಇಂದು ನಮ್ಮ ಸ್ವಾವಲಂಬನೆಗೆ ಒಂದು ಮಾರ್ಗವಾಗಿದೆ. ಇಂದು ʻನ್ಯಾನೊʼ ರಸಗೊಬ್ಬರದ ಕಾರ್ಖಾನೆಗಳು ದೇಶದಲ್ಲಿ ಹೊಸ ಭರವಸೆಯನ್ನು ಮೂಡಿಸಿವೆ. ನೈಸರ್ಗಿಕ ಕೃಷಿ ಮತ್ತು ರಾಸಾಯನಿಕ ಮುಕ್ತ ಕೃಷಿ ಸ್ವಾವಲಂಬನೆಗೆ ಉತ್ತೇಜನ ನೀಡುತ್ತದೆ. ಇಂದು, ದೇಶದಲ್ಲಿ ಹಸಿರು ಉದ್ಯೋಗಗಳ ರೂಪದಲ್ಲಿ ಹೊಸ ಉದ್ಯೋಗಾವಕಾಶಗಳು ಬಹಳ ವೇಗವಾಗಿ ಸೃಷ್ಟಿಯಾಗುತ್ತಿವೆ.
50.    ಭಾರತವು ತನ್ನ ನೀತಿಗಳ ಮೂಲಕ ಬಾಹ್ಯಾಕಾಶ ಕ್ಷೇತ್ರವನ್ನು ಮುಕ್ತಗೊಳಿಸಿವೆ. ಭಾರತವು ಡ್ರೋನ್‌ಗೆ ಸಂಬಂಧಿಸಿದಂತೆ ವಿಶ್ವದ ಅತ್ಯಂತ ಪ್ರಗತಿಪರ ನೀತಿಯನ್ನು ಹೊರತಂದಿದೆ. ನಾವು ದೇಶದ ಯುವಕರಿಗೆ ಅವಕಾಶಗಳ ಹೊಸ ಬಾಗಿಲುಗಳನ್ನು ತೆರೆದಿದ್ದೇವೆ.
51.    ಖಾಸಗಿ ವಲಯವು ಮುಂದೆ ಬರಬೇಕೆಂದು ನಾನು ಕರೆ ನೀಡುತ್ತೇನೆ. ನಾವು ಪ್ರಪಂಚದ ಮೇಲೆ ಪ್ರಾಬಲ್ಯ ಸಾಧಿಸಬೇಕು. ವಿಶ್ವದ ಅಗತ್ಯಗಳನ್ನು ಪೂರೈಸುವಲ್ಲಿ ಭಾರತವು ಹಿಂದೆ ಬೀಳದಂತೆ ನೋಡಿಕೊಳ್ಳುವುದು ಸ್ವಾವಲಂಬಿ ಭಾರತದ ಕನಸುಗಳಲ್ಲಿ ಒಂದಾಗಿದೆ. ಅದು ʻಎಂಎಸ್‌ಎಂಇʼ ಗಳಾಗಿದ್ದರೂ ಸಹ, ನಾವು ನಮ್ಮ ಉತ್ಪನ್ನಗಳನ್ನು ʻಶೂನ್ಯ ದೋಷʼ, ʻಶೂನ್ಯ ಲೋಪʼದೊಂದಿಗೆ ಜಗತ್ತಿಗೆ ಕೊಡಬೇಕು. ನಾವು ʻಸ್ವದೇಶಿʼ ಬಗ್ಗೆ ಹೆಮ್ಮೆ ಪಡಬೇಕು.
52.    ಇಂದಿನವರೆಗೆ ನಾವು ನಮ್ಮ ಪೂಜ್ಯ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ʻಜೈ ಜವಾನ್, ಜೈ ಕಿಸಾನ್ʼ ಎಂಬ ಸ್ಫೂರ್ತಿದಾಯಕ ಘೋಷಣೆಗಾಗಿ ನೆನಪಿಸಿಕೊಳ್ಳುತ್ತೇವೆ. ನಂತರ ಅಟಲ್ ಬಿಹಾರಿ ವಾಜಪೇಯಿ ಅವರು ʻಜೈ ವಿಜ್ಞಾನʼದ ಹೊಸ ಕೊಂಡಿಯನ್ನು ಸೇರಿಸಿದರು ಮತ್ತು ನಾವು ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದೇವೆ. ಆದರೆ ಈ ಹೊಸ ಹಂತದಲ್ಲಿ, ʻಅಮೃತ ಕಾಲʼದಲ್ಲಿ ಈಗ ʻಜೈ ಅನುಸಂಧಾನ್ʼ (ಜೈ ಆವಿಷ್ಕಾರ) ಅನ್ನು ಸೇರಿಸುವುದು ಅನಿವಾರ್ಯವಾಗಿದೆ. “ಜೈ ಜವಾನ್, ಜೈ ಕಿಸಾನ್”, “ಜೈ ವಿಜ್ಞಾನ್”, “ಜೈ ಅನುಸಂಧಾನ್”.
53.    ಇಂದು ನಾವು 5ಜಿ ಯುಗವನ್ನು ಪ್ರವೇಶಿಸಲು ಸಿದ್ಧರಾಗಿದ್ದೇವೆ. ನಾವು ಜಾಗತಿಕ ಹಂತಗಳಿಗೆ ತಕ್ಕಂತೆ ಹೊಂದಿಕೊಳ್ಳಲು ಈಗ ಹೆಚ್ಚು ಸಮಯ ಕಾಯಬೇಕಾಗಿಲ್ಲ. ʻಆಪ್ಟಿಕಲ್ ಫೈಬರ್ʼ ಕೊನೆಯ ಮೈಲಿಯವರೆಗೆ ಪ್ರತಿ ಹಳ್ಳಿಯನ್ನು ತಲುಪುವಂತೆ ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ. ʻಡಿಜಿಟಲ್ ಇಂಡಿಯಾʼದ ಕನಸನ್ನು ಗ್ರಾಮೀಣ ಭಾರತದ ಮೂಲಕ ಸಾಧಿಸಲಾಗುವುದು ಎಂದು ನನಗೆ ಸಂಪೂರ್ಣ ಮಾಹಿತಿ ಇದೆ. ಇಂದು ಭಾರತದ ನಾಲ್ಕು ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳನ್ನು ಹಳ್ಳಿಗಳಲ್ಲಿ ಅಭಿವೃದ್ಧಿಪಡಿಸುತ್ತಿರುವುದು ನನಗೆ ಸಂತೋಷ ತಂದಿದೆ, ಅವುಗಳನ್ನು ಆ ಹಳ್ಳಿಯ ಯುವಕರೇ ನಿರ್ವಹಿಸುತ್ತಿದ್ದಾರೆ.
54.    ಸೆಮಿಕಂಡಕ್ಟರ್‌ಗಳನ್ನು ಅಭಿವೃದ್ಧಿಪಡಿಸುವ, 5ಜಿ ಯುಗವನ್ನು ಪ್ರವೇಶಿಸುವ, ಆಪ್ಟಿಕಲ್ ಫೈಬರ್ ಜಾಲವನ್ನು ವಿಸ್ತರಿಸುವ ಈ ʻಡಿಜಿಟಲ್ ಇಂಡಿಯಾʼ ಆಂದೋಲನವು ನಮ್ಮನ್ನು ನಾವು ಆಧುನಿಕ ಮತ್ತು ಅಭಿವೃದ್ಧಿ ಹೊಂದಿದವರೆಂದು ಸಾಬೀತುಪಡಿಸಲು ಮಾತ್ರವಲ್ಲ.  ಇದು ಮೂರು ಆಂತರಿಕ ಕಾರ್ಯಾಚರಣೆಗಳಿಂದಾಗಿ ಸಾಧ್ಯವಾಗಿದೆ. ಶಿಕ್ಷಣ ಪರಿಸರ ವ್ಯವಸ್ಥೆಯ ಸಂಪೂರ್ಣ ಪರಿವರ್ತನೆ, ಆರೋಗ್ಯ ಮೂಲಸೌಕರ್ಯದಲ್ಲಿ ಕ್ರಾಂತಿ ಮತ್ತು ನಾಗರಿಕರ ಜೀವನಶೈಲಿಯ ಗುಣಮಟ್ಟದಲ್ಲಿ ಸುಧಾರಣೆ ಡಿಜಿಟಲೀಕರಣದಿಂದ ಮಾತ್ರ ಸಾಧ್ಯವಾಗಿದೆ.
55.    ಸ್ನೇಹಿತರೇ, ಮನುಕುಲದ ತಂತ್ರಜ್ಞಾನ ಯುಗ ಎಂದು ಶ್ಲಾಘಿಸಲಾದ ಈ ದಶಕದಲ್ಲಿ ಭಾರತವು ಅಸಾಧಾರಣವಾಗಿ ಮುನ್ನಡೆಯಲಿದೆ ಎಂದು ನಾನು ಊಹಿಸಬಲ್ಲೆ. ಇದು ಒಂದು ದಶಕದ ತಂತ್ರಜ್ಞಾನವಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ, ಭಾರತವು ಜಾಗತಿಕವಾಗಿ ಪರಿಗಣಿಸಲೇಬೇಕಾದ ಒಂದು ಅಗಾಧ ಶಕ್ತಿಯಾಗಿ ಮಾರ್ಪಟ್ಟಿದೆ. ಈ ತಂತ್ರಜ್ಞಾನ ಯುಗದಲ್ಲಿ ಕೊಡುಗೆ ನೀಡುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ.
56.    ನಮ್ಮ ʻಅಟಲ್ ಇನ್ನೋವೇಶನ್ ಮಿಷನ್ʼ, ನಮ್ಮ ಇನ್‌ಕ್ಯುಬೇಷನ್‌ ಕೇಂದ್ರಗಳು, ನಮ್ಮ ನವೋದ್ಯಮಗಳು ಸಂಪೂರ್ಣ ಹೊಸ ವಲಯವನ್ನು ಅಭಿವೃದ್ಧಿಪಡಿಸುತ್ತಿವೆ;  ಯುವ ಪೀಳಿಗೆಗೆ ಹೊಸ ಅವಕಾಶಗಳನ್ನು ತೆರೆಯುತ್ತಿವೆ. ಇದು ಬಾಹ್ಯಾಕಾಶ ಯೋಜನೆಯೇ ಆಗಿರಲಿ, ಆಳ ಸಾಗರ ಯೋಜನೆಯೇ ಆಗಿರಲಿ, ನಾವು ಸಾಗರದ ಆಳಕ್ಕೆ ಹೋಗಲು ಬಯಸಿದರೂ ಅಥವಾ ನಾವು ಆಕಾಶವನ್ನು ಸ್ಪರ್ಶಿಸಲು ಬಯಸಿದರೂ, ಇವು ಹೊಸ ವಲಯಗಳು, ಅವುಗಳ ಮೂಲಕ ನಾವು ಮುಂದುವರಿಯುತ್ತಿದ್ದೇವೆ.
57.    ನಮ್ಮ ಸಣ್ಣ ರೈತರು, ಉದ್ಯಮಿಗಳು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು, ಗುಡಿ ಕೈಗಾರಿಕೆಗಳು, ಸೂಕ್ಷ್ಮ ಕೈಗಾರಿಕೆಗಳು, ಬೀದಿಬದಿ ವ್ಯಾಪಾರಿಗಳು, ಗೃಹ ಕಾರ್ಮಿಕರು, ದಿನಗೂಲಿಗಳು, ಆಟೋ ರಿಕ್ಷಾ ಚಾಲಕರು, ಬಸ್ ಸೇವೆ ಪೂರೈಕೆದಾರರು ಮುಂತಾದವರ ಸಾಮರ್ಥ್ಯವನ್ನು ನಾವು ಗುರುತಿಸಬೇಕು ಮತ್ತು ಬಲಪಡಿಸಬೇಕು. ಇವರು ಜನಸಂಖ್ಯೆಯ ಅತಿ ದೊಡ್ಡ ಪ್ರಮಾಣವನ್ನು ಪ್ರತಿನಿಧಿಸುತ್ತಾರೆ, ಅವರನ್ನು ಸಶಕ್ತಗೊಳಿಸಬೇಕಾಗಿದೆ.
58.    ಕಳೆದ ಕೆಲವು ವರ್ಷಗಳ ಅನುಭವದಿಂದ ನಾನೊಂದು ವಿಷಯ ಹೇಳಲು ಬಯಸುತ್ತೇನೆ. ನ್ಯಾಯಾಂಗ ಕ್ಷೇತ್ರದಲ್ಲಿ, ನ್ಯಾಯಾಲಯಗಳಲ್ಲಿ ಕೆಲಸ ಮಾಡುತ್ತಿರುವ 'ನಾರಿ ಶಕ್ತಿ'ಯ ಸಾಮರ್ಥ್ಯವನ್ನು ನೀವು ನೋಡಿರಬಹುದು. ಗ್ರಾಮೀಣ ಪ್ರದೇಶದ ಜನ ಪ್ರತಿನಿಧಿಗಳನ್ನು ಒಮ್ಮೆ ನೋಡಿ, ನಮ್ಮ 'ನಾರಿ ಶಕ್ತಿ' ನಮ್ಮ ಹಳ್ಳಿಗಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿಷ್ಠೆಯಿಂದ ತೊಡಗಿಸಿಕೊಂಡಿದೆ. ಜ್ಞಾನ ಅಥವಾ ವಿಜ್ಞಾನದ ಕ್ಷೇತ್ರವನ್ನು ನೋಡಿ, ನಮ್ಮ ದೇಶದ 'ನಾರಿ ಶಕ್ತಿ' ಗೋಚರಿಸುತ್ತದೆ. ಪೊಲೀಸ್ ಪಡೆಯಲ್ಲಿಯೂ ಸಹ, ನಮ್ಮ 'ನಾರಿ ಶಕ್ತಿ' ಜನರನ್ನು ರಕ್ಷಿಸುವ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳುತ್ತಿದೆ.
59.    ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ, ಅದು ಆಟದ ಮೈದಾನವಾಗಿರಲೀ ಅಥವಾ ಯುದ್ಧಭೂಮಿಯಾಗಿರಲೀ, ಭಾರತದ 'ನಾರಿ ಶಕ್ತಿ' ಹೊಸ ಸಾಮರ್ಥ್ಯ ಮತ್ತು ಹೊಸ ನಂಬಿಕೆಯೊಂದಿಗೆ ಮುಂದೆ ಬರುತ್ತಿದೆ. ಭಾರತದ 75 ವರ್ಷಗಳ ಪ್ರಯಾಣದಲ್ಲಿ ನೀಡಿದ ಕೊಡುಗೆಗೆ ಹೋಲಿಸಿದರೆ ಮುಂದಿನ 25 ವರ್ಷಗಳಲ್ಲಿ ನನ್ನ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಮೂಲಕ 'ನಾರಿ ಶಕ್ತಿ'ಯ ಅನೇಕ ಕೊಡುಗೆಗಳನ್ನು ನಾನು ನೋಡಬಹುದು. ಈ ಅಂಶದ ಬಗ್ಗೆ ನಾವು ಹೆಚ್ಚು ಗಮನ ಹರಿಸಿದಷ್ಟೂ, ನಮ್ಮ ಹೆಣ್ಣುಮಕ್ಕಳಿಗೆ ನಾವು ಹೆಚ್ಚು ಅವಕಾಶಗಳು ಮತ್ತು ಸೌಲಭ್ಯಗಳನ್ನು ಒದಗಿಸಿದಷ್ಟೂ, ಅವರು ಅದಕ್ಕಿಂತ ಹೆಚ್ಚಿನದನ್ನು ನಮಗೆ ಹಿಂದಿರುಗಿಸುತ್ತಾರೆ. ಅವರು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ.
60.    ನಮ್ಮ ದೇಶದ ಅನೇಕ ರಾಜ್ಯಗಳು, ದೇಶವನ್ನು ಮುನ್ನಡೆಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿವೆ, ಅನೇಕ ಕ್ಷೇತ್ರಗಳಲ್ಲಿ ಮುನ್ನಡೆಸಿವೆ ಮತ್ತು ಉದಾಹರಣೆಗಳಾಗಿ ಕೆಲಸ ಮಾಡಿವೆ. ಇದು ನಮ್ಮ ಒಕ್ಕೂಟ ವ್ಯವಸ್ಥೆಗೆ ಬಲ ನೀಡುತ್ತದೆ. ಆದರೆ ಇಂದು ನಮಗೆ ಸಹಕಾರಿ ಒಕ್ಕೂಟ ವ್ಯವಸ್ಥೆ ಮತ್ತು ಸಹಕಾರಿ ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯ ಅಗತ್ಯವಿದೆ. ಅಭಿವೃದ್ಧಿಗಾಗಿ ನಮಗೆ ಸ್ಪರ್ಧೆಯ ಅಗತ್ಯವಿದೆ.
61.    ನಾನು ಎಲ್ಲವನ್ನೂ ಚರ್ಚಿಸಲು ಬಯಸುವುದಿಲ್ಲ. ಆದರೆ ಖಂಡಿತವಾಗಿಯೂ ಎರಡು ವಿಷಯಗಳ ಮೇಲೆ ಗಮನ ಹರಿಸಲು ಬಯಸುತ್ತೇನೆ. ಅವೆಂದರೆ, ಒಂದು ಭ್ರಷ್ಟಾಚಾರ ಮತ್ತು ಇನ್ನೊಂದು ಸ್ವಜನಪಕ್ಷಪಾತ. ನಾವು ಭ್ರಷ್ಟಾಚಾರದ ವಿರುದ್ಧ ನಮ್ಮ ಸಂಪೂರ್ಣ ಶಕ್ತಿ ಬಳಸಿ ಹೋರಾಡಬೇಕು. ಕಳೆದ ಎಂಟು ವರ್ಷಗಳಲ್ಲಿ, ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ, ಆಧಾರ್ ಮತ್ತು ಮೊಬೈಲ್ ನಂತಹ ಎಲ್ಲಾ ಆಧುನಿಕ ವ್ಯವಸ್ಥೆಗಳನ್ನು ಬಳಸಿಕೊಂಡು, ತಪ್ಪು ಕೈಗಳಿಗೆ ಸೇರುತ್ತಿದ್ದ ಎರಡು ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಿದ್ದೇವೆ. ಆ ಮೂಲಕ ನಾವು ದೇಶದ ಒಳಿತಿಗಾಗಿ ಕೆಲಸ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ.
62.    ಹಿಂದಿನ ಸರಕಾರದ ಅವಧಿಯಲ್ಲಿ ಬ್ಯಾಂಕುಗಳನ್ನು ಲೂಟಿ ಮಾಡಿದ ನಂತರ ಕೆಲವರು ದೇಶದಿಂದ ಪಲಾಯನ ಮಾಡಿದರು. ನಾವು ಅಂಥವರ ಆಸ್ತಿಯನ್ನು ವಶಪಡಿಸಿಕೊಂಡಿದ್ದೇವೆ ಮತ್ತು ಅವರನ್ನು ದೇಶಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದೇವೆ. ಇವರಲ್ಲಿ ಕೆಲವರನ್ನು ಜೈಲುಪಾಲು ಮಾಡಲಾಗಿದೆ. ದೇಶವನ್ನು ಲೂಟಿ ಮಾಡಿದವರು ಹಿಂದಿರುಗುವಂತೆ ಒತ್ತಾಯಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ.
63.    ಸಹೋದರ ಸಹೋದರಿಯರೇ, ಭ್ರಷ್ಟರು ಗೆದ್ದಲುಗಳಂತೆ ದೇಶವನ್ನು ತಿನ್ನುತ್ತಿದ್ದಾರೆ. ನಾನು ಅವರ ವಿರುದ್ಧ ಹೋರಾಡಬೇಕು, ಹೋರಾಟವನ್ನು ತೀವ್ರಗೊಳಿಸಬೇಕು ಮತ್ತು ಅದನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ಯಬೇಕು. ಆದ್ದರಿಂದ, ನನ್ನ 130 ಕೋಟಿ ದೇಶವಾಸಿಗಳೇ, ದಯವಿಟ್ಟು ನನ್ನನ್ನು ಆಶೀರ್ವದಿಸಿ ಮತ್ತು ನನ್ನನ್ನು ಬೆಂಬಲಿಸಿ! ಇಂದು ನಾನು ನಿಮ್ಮ ಬೆಂಬಲ ಮತ್ತು ಸಹಕಾರವನ್ನು ಕೋರಲು ಬಂದಿದ್ದೇನೆ, ಇದರಿಂದ ನಾನು ಈ ಯುದ್ಧದಲ್ಲಿ ಹೋರಾಡಬಹುದು. ಈ ಯುದ್ಧದಲ್ಲಿ ದೇಶವು ವಿಜಯಶಾಲಿಯಾಗುತ್ತದೆ ಎಂದು ನಾನು ಭಾವಿಸುತ್ತೇನೆ.
64.    ನ್ಯಾಯಾಲಯದಲ್ಲಿ ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರನ್ನು ಅಥವಾ ಅಂತಹ ಪ್ರಕರಣಗಳಿಗಾಗಿ ಜೈಲಿಗೆ ಹೋಗಿ ಬಂದವರನ್ನು ವೈಭವೀಕರಿಸಲು ಕೆಲವರು ಇಷ್ಟು ಕೀಳುಮಟ್ಟಕ್ಕೆ ಇಳಿದಿರುವುದು ನಿಜವಾಗಿಯೂ ದುಃಖದ ಸಂಗತಿಯಾಗಿದೆ. ಆದ್ದರಿಂದ, ಸಮಾಜದಲ್ಲಿ ಭ್ರಷ್ಟರ ವಿರುದ್ಧ ದ್ವೇಷದ ಭಾವನೆ ಮೂಡುವವರೆಗೆ, ಈ ರೀತಿಯ ಮನಸ್ಥಿತಿ ಕೊನೆಗೊಳ್ಳುವುದಿಲ್ಲ.
65.    ಇದೇ ವೇಳೆ, ನಾನು ಸ್ವಜನಪಕ್ಷಪಾತದ ಬಗ್ಗೆ ಚರ್ಚಿಸಲು ಬಯಸುತ್ತೇನೆ. ಸ್ವಜನಪಕ್ಷಪಾತದ ಬಗ್ಗೆ ನಾನು ಮಾತನಾಡುವಾಗ ನಾನು ರಾಜಕೀಯದಲ್ಲಿ ಸ್ವಜನಪಕ್ಷಪಾತದ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ ಎಂದು ಜನರು ಭಾವಿಸುತ್ತಾರೆ. ಆದರೆ ವಾಸ್ತವವೆಂದರೆ, ಈ ಅಸ್ವಸ್ಥತೆಯು ದೇಶದ ಎಲ್ಲಾ ಸಂಸ್ಥೆಗಳಲ್ಲಿ ಹರಡಿದೆ, ಇದು ಪ್ರತಿಭೆ ಮತ್ತು ಅವಕಾಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ನಾನು ಕೆಂಪುಕೋಟೆಯ ಮೇಲಿನಿಂದ ದೇಶದ ಜನರಿಗೆ ಮನವಿ ಮಾಡುತ್ತೇನೆ, ಭಾರತದ ರಾಜಕೀಯ ಮತ್ತು ಎಲ್ಲಾ ಸಂಸ್ಥೆಗಳಿಂದ ಸ್ವಜನಪಕ್ಷಪಾತದ ಪಿಡುಗನ್ನು ಬೇರು ಸಮೇತ ಕಿತ್ತು ಹಾಕಿ ಶುದ್ಧೀಕರಣಗೊಳಿಸಲು ಭಾರತೀಯ ಸಂವಿಧಾನದ ನೈಜ ಆಶಯದಂತೆ ತ್ರಿವರ್ಣ ಧ್ವಜದ ಅಡಿಯಲ್ಲಿ ಪ್ರತಿಜ್ಞೆ ಮಾಡಿ.
66.    ಹೊಸ ಸಾಧ್ಯತೆಗಳನ್ನು ಪೋಷಿಸುವ ಮೂಲಕ, ಹೊಸ ಸಂಕಲ್ಪಗಳನ್ನು ಸಾಕಾರಗೊಳಿಸುವ ಮೂಲಕ ಮತ್ತು ಆತ್ಮವಿಶ್ವಾಸದಿಂದ ಮುಂದುವರಿಯುವ ಮೂಲಕ 'ಅಮೃತ ಕಾಲ'ವನ್ನು ಪ್ರಾರಂಭಿಸುವಂತೆ ಇಂದು ನಾನು ದೇಶವಾಸಿಗಳನ್ನು ಒತ್ತಾಯಿಸುತ್ತೇನೆ. ಸ್ವಾತಂತ್ರ್ಯದ "ಅಮೃತ ಮಹೋತ್ಸವ"ವು 'ಅಮೃತ ಕಾಲ'ದ ದಿಕ್ಕಿನಲ್ಲಿ ಚಲಿಸಿದೆ. ಆದ್ದರಿಂದ, ಈ 'ಅಮೃತ ಕಾಲ'ದಲ್ಲಿ 'ಸಬ್‌ ಕಾ ಪ್ರಯಾಸ್' (ಎಲ್ಲರ ಪ್ರಯತ್ನಗಳು) ಅಗತ್ಯವಾಗಿದೆ. ʻಟೀಮ್ ಇಂಡಿಯಾʼದ ಸ್ಫೂರ್ತಿ ದೇಶವನ್ನು ಮುಂದಕ್ಕೆ ಕೊಂಡೊಯ್ಯಲಿದೆ. 130 ಕೋಟಿ ದೇಶವಾಸಿಗಳ ಈ ಭಾರತವು ಒಂದು ತಂಡವಾಗಿ ಮುಂದುವರಿಯುವ ಮೂಲಕ ಎಲ್ಲಾ ಕನಸುಗಳನ್ನು ನನಸಾಗಿಸುತ್ತದೆ.

 

*******



(Release ID: 1852450) Visitor Counter : 302