ಉಪರಾಷ್ಟ್ರಪತಿಗಳ ಕಾರ್ಯಾಲಯ

ಮಹಿಳಾ ವಿಮೋಚನೆಗೆ ಅಡ್ಡಿಯಾಗಿರುವ ಅಡೆತಡೆಗಳನ್ನು ತೆಗೆದುಹಾಕುವಂತೆ ಉಪ ರಾಷ್ಟ್ರಪತಿ ಕರೆ


ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ಕರೆ ನೀಡಿದ ಉಪ ರಾಷ್ಟ್ರಪತಿ
‘ನಿಮ್ಮ ಧರ್ಮವನ್ನು ಪಾಲಿಸಿ, ಇತರರ ನಂಬಿಕೆಯನ್ನು ಅವಹೇಳನ ಮಾಡಬೇಡಿ’: ಉಪ ರಾಷ್ಟ್ರಪತಿ

21 ನೇ ಶತಮಾನದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಶಿಕ್ಷಣಕ್ಕೆ ಭವಿಷ್ಯದ ವಿಧಾನವನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಒತ್ತಿಹೇಳಿದ ಉಪ ರಾಷ್ಟ್ರಪತಿ

ಉರು ಹೊಡೆಯುವ ಕಲಿಕೆಯಿಂದ 'ಸಕ್ರಿಯ ಕಲಿಕೆ'ಗೆ ಬದಲಾಗುವಂತೆ ಕರೆ

ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ಪ್ಲಾಟಿನಂ ಜುಬಿಲಿ ಆಚರಣೆಯನ್ನು ಉದ್ಘಾಟಿಸಿದ ಉಪ ರಾಷ್ಟ್ರಪತಿ

Posted On: 09 JUL 2022 2:33PM by PIB Bengaluru

ದೇಶದಲ್ಲಿ ಮಹಿಳೆಯರ ವಿಮೋಚನೆಗೆ ಅಡ್ಡಿಯಾಗಿರುವ ಅಡೆತಡೆಗಳನ್ನು ನಿರ್ಮೂಲನೆ ಮಾಡುವಂತೆ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ. ನಮ್ಮ ನಾಗರಿಕತೆಯ ತತ್ವಗಳು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಮಾನ ಭಾಗವಹಿಸುವಿಕೆಗೆ ಪ್ರೋತ್ಸಾಹಿಸುತ್ತಿದ್ದರೂ, ಮಹಿಳೆಯರು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಇನ್ನೂ ಅರಿತುಕೊಳ್ಳದ ಹಲವಾರು ಕ್ಷೇತ್ರಗಳಿವೆ ಎಂದು ಅವರು ಹೇಳಿದರು.

ಇಂದು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ಪ್ಲಾಟಿನಂ ಜುಬಿಲಿ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಉಪ ರಾಷ್ಟ್ರಪತಿಯವರು, ಸರ್ಕಾರಗಳ ನಿರಂತರ ಪ್ರಯತ್ನಗಳ ಮೂಲಕ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕೆಂದು ಕರೆ ನೀಡಿದರು. ಅವಕಾಶ ಸಿಕ್ಕರೆ ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ಅವರು ಹೇಳಿದರು.

ಭಾರತೀಯರು ಎಲ್ಲಾ ಕ್ಷೇತ್ರಗಳಲ್ಲೂ ನಾಯಕರ ಸ್ಥಾನ ಪಡೆಯುತ್ತಿರುವ ಬಗ್ಗೆ ಗಮನ ಸೆಳೆದ ಅವರು, ಭಾರತದ ಪ್ರಗತಿಯು ಜಾಗತಿಕ ವೇದಿಕೆಯಲ್ಲಿ ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ ಎಂದು ಹೇಳಿದರು. ಧಾರ್ಮಿಕ ಅಸಹಿಷ್ಣುತೆಯ ವಿಷಯದ ಬಗ್ಗೆ ಪ್ರಸ್ತಾಪಿಸಿದ ಶ್ರೀ ನಾಯ್ಡು, ಧರ್ಮವು ವೈಯಕ್ತಿಕ ವಿಷಯವಾಗಿದೆ ಮತ್ತು ಯಾರಾದರೂ ತಮ್ಮ ಧಮರ್ದ ಬಗ್ಗೆ ಹೆಮ್ಮೆ ಪಡಬಹುದು ಮತ್ತು ಆಚರಿಸಬಹುದು. ಆದರೆ ಇತರರ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದರು. ಜಾತ್ಯತೀತತೆ ಮತ್ತು ಇತರರ ನಂಬಿಕೆಗಳ ಬಗೆಗಿನ ಸಹಿಷ್ಣುತೆ ಭಾರತೀಯ ನೈತಿಕತೆಯ ಪ್ರಮುಖ ಸಾರವಾಗಿದೆ ಮತ್ತು ವಿರಳ ಘಟನೆಗಳು ಬಹುತ್ವ ಮತ್ತು ಒಳಗೊಳ್ಳುವಿಕೆಯ ಮೌಲ್ಯಗಳಿಗೆ ಭಾರತಕ್ಕಿರುವ ಬದ್ಧತೆಯನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು.

ಶಿಕ್ಷಣದಲ್ಲಿ ಭಾರತದ ಭವ್ಯ ಪರಂಪರೆಯ ಬಗ್ಗೆ ಉಲ್ಲೇಖಿಸಿದ ಉಪರಾಷ್ಟ್ರಪತಿಯವರು ಪ್ರಾಚೀನ ಕಾಲದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭಾರತ ನೀಡಿದ ಅದ್ಭುತ ಕೊಡುಗೆಯಿಂದಾಗಿ 'ವಿಶ್ವ ಗುರು' ಸ್ಥಾನಮಾನವನ್ನು ಗಳಿಸಿದೆ ಎಂದು ಹೇಳಿದರು. ಪ್ರಾಚೀನ ಭಾರತದ ಶ್ರೇಷ್ಠ ಮಹಿಳಾ ವಿದ್ವಾಂಸರಾದ ಗಾರ್ಗಿ ಮತ್ತು ಮೈತ್ರೇಯಿ ಅವರ ಹೆಸರನ್ನು ಪ್ರಸ್ತಾಪಿಸಿದ ಅವರು, ಪುರಾತನ ಕಾಲದಿಂದಲೂ ಮಹಿಳಾ ಶಿಕ್ಷಣಕ್ಕೆ ಸ್ಪಷ್ಟವಾದ ಒತ್ತು ನೀಡಲಾಯಿತು ಎಂದು ಹೇಳಿದರು. ಶಿಕ್ಷಣದ ಮಹಾನ್ ಪೋಷಕರಾಗಿದ್ದ ಕರ್ನಾಟಕದ ಅನೇಕ ಪ್ರಗತಿಪರ ಆಡಳಿತಗಾರರು ಮತ್ತು ಸುಧಾರಕರಾದ ಅತ್ತಿಮಬ್ಬೆ ಮತ್ತು ಸೋವಲದೇವಿ ಮತ್ತು ಶಿಕ್ಷಣದ ಮೂಲಕ ಮಹಿಳಾ ವಿಮೋಚನೆಗೆ ಒತ್ತು ನೀಡಿದ ವೀರಶೈವ ಚಳುವಳಿಯನ್ನು ಅವರು ಶ್ಲಾಘಿಸಿದರು.

ಮೌಂಟ್ ಕಾರ್ಮೆಲ್ ಕಾಲೇಜಿನ ಅನೇಕ ಪ್ರಸಿದ್ಧ ಹಳೆಯ ಮಹಿಳಾ ವಿದ್ಯಾರ್ಥಿಗಳ ಹೆಸರುಗಳನ್ನು ಪ್ರಸ್ತಾಪಿಸಿದ ಉಪ ರಾಷ್ಟ್ರಪತಿಯವರು, ಶಿಕ್ಷಣದಲ್ಲಿ ಲಿಂಗ ಅಸಮಾನತೆಯನ್ನು ನಿವಾರಿಸುವ ಮೂಲಕ ಬದಲಾವಣೆಯ ವೇಗವರ್ಧಕಗಳಾಗಲು ಸ್ವಾತಂತ್ರ್ಯದ ನಂತರ ಮಹಿಳೆಯರನ್ನು ಸಬಲೀಕರಣಗೊಳಿಸಿದ್ದಕ್ಕಾಗಿ ಕಾಲೇಜನ್ನು ಶ್ಲಾಘಿಸಿದರು.

ಕಾರ್ಯಕ್ಷೇತ್ರಗಳು ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಬಗ್ಗೆ ಗಮನ ಸೆಳೆದ ಶ್ರೀ ನಾಯ್ಡು, ಕೃತಕ ಬುದ್ಧಿಮತ್ತೆಯಿಂದ ಡೇಟಾ ವಿಶ್ಲೇಷಣೆಯವರೆಗಿನ ವಿದ್ಯಾರ್ಥಿಗಳ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಶಿಕ್ಷಣಕ್ಕೆ ಭವಿಷ್ಯದ ವಿಧಾನವನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು. ಪರಿಣಾಮಕಾರಿ ಸಂವಹನ ಕೌಶಲ್ಯಗಳನ್ನು ಹೊಂದಿರುವುದು ಅಷ್ಟೇ ಮುಖ್ಯವಾಗಿದೆ ಎಂದು ಅವರು ಹೇಳಿದರು.

ಹೊರಹೊಮ್ಮುತ್ತಿರುವ ಮತ್ತು ಅಸ್ತಿತ್ವದಲ್ಲಿರುವ ವೃತ್ತಿ ಆಯ್ಕೆಗಳಿಗಾಗಿ ಉದ್ಯೋಗಿಗಳು ಈಗ ವೈವಿಧ್ಯಮಯ ಕ್ಷೇತ್ರಗಳ ವ್ಯಾಪಕ ಜ್ಞಾನವನ್ನು ಹೊಂದಿರಬೇಕು. ಯುವಕರು ತಮ್ಮ ವಿಶೇಷತೆಯಲ್ಲಿ ಆಳವಾದ ಜ್ಞಾನವನ್ನು ಹೊಂದಿರಬೇಕು, ಹಾಗೆಯೇ ಇತರ ವಿಷಯಗಳ ಮೂಲಭೂತ ಅಂಶಗಳಲ್ಲಿ ಸಹ ಬಲಿಷ್ಠವಾಗಿರಬೇಕು. 21 ನೇ ಶತಮಾನದ ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಲು ವಿವಿಧ ಕ್ಷೇತ್ರಗಳ ಜ್ಞಾನವನ್ನು ಒಟ್ಟುಗೂಡಿಸುವ ಮತ್ತು ಸಂಯೋಜಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.

ಬಾಯಿಪಾಠದ ಕಲಿಕೆಯಿಂದ ‘ಸಕ್ರಿಯ ಕಲಿಕೆ’ಯತ್ತ ಸಾಗುವ ಅಗತ್ಯವನ್ನು ಒತ್ತಿ ಹೇಳಿದ ಉಪ ರಾಷ್ಟ್ರಪತಿಯವರು, ಶಿಕ್ಷಣ ಸಂಸ್ಥೆಗಳು ನಿರಂತರ ಮೌಲ್ಯನಿರ್ಣಯದ ಆಧಾರದ ಮೇಲೆ ಮೌಲ್ಯಮಾಪನವನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ವಿಷಯಗಳಲ್ಲಿನ ಬಿಗಿತ ಮತ್ತು ಕಟ್ಟುನಿಟ್ಟಿನ ವಿಭಾಗೀಕರಣವನ್ನು ಮುರಿಯಬೇಕು ಎಂದು ಕರೆ ನೀಡಿದ ಅವರು, ಅಂತರ ಶಿಸ್ತೀಯ ಮತ್ತು ಬಹು-ಶಿಸ್ತೀಯ ಕಲಿಕೆ ಭವಿಷ್ಯದ ದಾರಿಯಾಗಿದೆ ಎಂದು ಒತ್ತಿ ಹೇಳಿದರು.

ನಿಷ್ಪಕ್ಷಪಾತ ಮತ್ತು ಸಮ ಸಮಾಜವನ್ನು ನಿರ್ಮಿಸಲು ಶಿಕ್ಷಣ ಅತ್ಯಂತ ಶಕ್ತಿಶಾಲಿ ಸಾಧನ ಎಂದು ಹೇಳಿದ ಶ್ರೀ ನಾಯ್ಡು, ಶಿಕ್ಷಣ ಸಂಸ್ಥೆಗಳು ಯುವಜನರನ್ನು ಸೂಕ್ತವಾದ ಕೌಶಲ್ಯಗಳೊಂದಿಗೆ ಕೇವಲ ಉದ್ಯೋಗಿಗಳನ್ನಾಗಿ ಮಾಡಲು ಸಜ್ಜುಗೊಳಿಸುವುದು ಮಾತ್ರವಲ್ಲದೆ, ನವ ಭಾರತದ ಬೆಳವಣಿಗೆಯಲ್ಲಿ ವೇಗವರ್ಧಕಗಳಾಗಿಯೂ ಸಹ ಸಜ್ಜುಗೊಳಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಮೌಂಟ್ ಕಾರ್ಮೆಲ್ ಕಾಲೇಜಿನ ಪ್ಲಾಟಿನಂ ಜುಬಿಲಿ ವರ್ಷದ ಸ್ಮರಣಾರ್ಥವಾಗಿ ಅಂಚೆ ಇಲಾಖೆಯ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು.

ಕರ್ನಾಟಕ ರಾಜ್ಯಪಾಲರಾದ ಶ್ರೀ ಥಾವರಚಂದ್ ಗೆಹ್ಲೋಟ್, ಗೋವಾದ ಮಾಜಿ ರಾಜ್ಯಪಾಲರಾದ ಶ್ರೀಮತಿ ಮಾರ್ಗರೆಟ್ ಆಳ್ವ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಲಿಂಗರಾಜ್ ಗಾಂಧಿ, ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಡಾ. ಎಸ್.ರಾಜೇಂದ್ರ ಕುಮಾರ್, ಬೆಂಗಳೂರಿನ ಆರ್ಚ್ ಬಿಷಪ್ ಪೀಟರ್ ಮಚಾಡೊ, ಡಾ. ಸಿಸ್ಟರ್ ಕ್ರಿಸ್, ಮದರ್ ಜನರಲ್, ಕಾರ್ಮೆಲೈಟ್ ಸಿಸ್ಟರ್ಸ್ ಆಫ್ ಸೇಂಟ್ ತೆರೇಸಾ, ಸಿಸ್ಟರ್ ಬರ್ನಿಸ್, ಪ್ರಾಂತೀಯ ಮುಖ್ಯಸ್ಥೆ, ಕಾರ್ಮೆಲೈಟ್ ಸಿಸ್ಟರ್ಸ್ ಆಫ್ ಸೇಂಟ್ ತೆರೇಸಾ, ಸಿಸ್ಟರ್ ಅಪರ್ಣಾ, ಸುಪೀರಿಯರ್, ಮೌಂಟ್ ಕಾರ್ಮೆಲ್ ಸಂಸ್ಥೆಗಳು; ಮೌಂಟ್ ಕಾರ್ಮೆಲ್ ಕಾಲೇಜಿನ ಪ್ರಾಂಶುಪಾಲೆ ಡಾ. ಸಿಸ್ಟರ್ ಅರ್ಪಣಾ, ಗಣ್ಯರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

*******

 

 

 

 

 



(Release ID: 1840363) Visitor Counter : 229