ಪ್ರಧಾನ ಮಂತ್ರಿಯವರ ಕಛೇರಿ

ಥಾಮಸ್ ಕಪ್ ಮತ್ತು ಉಬರ್ ಕಪ್ ತಂಡದ ಜೊತೆ ಪ್ರಧಾನ ಮಂತ್ರಿ ಸಂವಾದ


“ದಶಕಗಳ ಬಳಿಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಇಡೀ ತಂಡಕ್ಕೆ ದೇಶದ ಪರವಾಗಿ ನನ್ನ ಅಭಿನಂದನೆಗಳು, ಇದು ಸಣ್ಣ ಸಂಗತಿಯಲ್ಲ”

“ಈಗ ಭಾರತ ಹಿಂದುಳಿಯಲಾರದು. ನಿಮ್ಮ ಜಯಭೇರಿ ಕ್ರೀಡೆಗೆ ಸಂಬಂಧಿಸಿ ತಲೆಮಾರುಗಳನ್ನು ಪ್ರೇರೇಪಿಸುತ್ತದೆ”

“ಇಂತಹ ಯಶಸ್ಸು ದೇಶದ ಇಡೀ ಕ್ರೀಡಾ ಪರಿಸರ ವ್ಯವಸ್ಥೆಯಲ್ಲಿ ಬಹಳಷ್ಟು ಶಕ್ತಿ ಮತ್ತು ವಿಶ್ವಾಸವನ್ನು ತುಂಬುತ್ತದೆ”

“ನಮ್ಮ ಮಹಿಳಾ ತಂಡ ತನ್ನ ಸ್ಥಾನಮಾನವನ್ನು ಮತ್ತೆ ಮತ್ತೆ ಕಾಲಾನುಕ್ರಮದಲ್ಲಿ ಸಾಬೀತು ಮಾಡಿದೆ. ಇದು ಬರೇ ಕಾಲಕ್ಕೆ ಸಂಬಂಧಿಸಿದ ವಿಷಯ, ಈ ಬಾರಿ ಅಲ್ಲದಿದ್ದರೂ, ಮುಂದಿನ ಬಾರಿ ನಾವು ಖಚಿತವಾಗಿ ಗೆಲ್ಲುತ್ತೇವೆ”

“ಅಭಿ ತೋ ಬಹುತ್ ಖೇಲ್ನಾ ಭೀ ಹೈ ಔರ್ ಖಿಲ್ನಾ ಭೀ ಹೈ-ನೀವು ಇನ್ನಷ್ಟು ಆಟವಾಡಬೇಕು ಮತ್ತು ಬಹಳಷ್ಟನ್ನು ಸಾಧಿಸಬೇಕು”
“ನಾನಿದನ್ನು ಮಾಡಬಲ್ಲೆ ಎಂಬುದು ನವಭಾರತದ ಮನಸ್ಥಿತಿಯಾಗಿದೆ”

ಭಾರತದ ಕ್ರೀಡಾ ಇತಿಹಾಸದಲ್ಲಿ ಇದೊಂದು ಸುವರ್ಣ ಅಧ್ಯಾಯದಂತೆ ಮತ್ತು ನಿಮ್ಮಂತಹ ಚಾಂಪಿಯನ್ ಗಳು ಹಾಗು ನಿಮ್ಮ ತಲೆಮಾರಿನ ಆಟಗಾರರು ಇದರ ರಚನಕಾರರು. ನಾವು ಈ ಚಲನೆ ಮುಂದೆ ಸಾಗುತ್ತಿರುವಂತೆ ಗಮನವಿಡಬೇಕು”

ದೂರವಾಣಿ ಕರೆಯಲ್ಲಿ ಭರವಸೆ ಕೊಟ್ಟಂತೆ “ಬಾಲ್ ಮಿಥಾಯಿ” ತಂದುದಕ್ಕೆ ಲಕ್ಷ್ಯಾ ಸೇನ್ ಅವರಿಗೆ ಪ್ರಧಾನ ಮಂತ್ರಿ ಧನ್ಯವಾದ.

Posted On: 22 MAY 2022 11:10AM by PIB Bengaluru

ಬ್ಯಾಡ್ಮಿಂಟನ್ ಚಾಂಪಿಯನ್ ನ ಥಾಮಸ್ ಕಪ್ ಮತ್ತು ಉಬರ್ ಕಪ್ ತಂಡಗಳ ಜೊತೆ  ಪ್ರಧಾನ ಮಂತ್ರಿ ಸಂವಾದ ನಡೆಸಿದರು, ಇದರಲ್ಲಿ ಥಾಮಸ್ ಕಪ್ ಮತ್ತು ಉಬರ್ ಕಪ್ ಗಳಿಗೆ ಸಂಬಂಧಿಸಿದ ತಮ್ಮ ಅನುಭವವನ್ನು ತಂಡಗಳು ಹಂಚಿಕೊಂಡವು. ಆಟಗಾರರು ತಮ್ಮ ಆಟದ ವಿವಿಧ ಆಯಾಮಗಳು, ಬ್ಯಾಡ್ಮಿಂಟನ್ ಆಚೆಗಿನ ಬದುಕು ಮತ್ತು ಇತರ ವಿಷಯಗಳನ್ನು ಹಂಚಿಕೊಂಡರು.
ಕಿಡಂಬಿ ಶ್ರೀಕಾಂತ್ ಅವರು ಇಷ್ಟೊಂದು ಹೆಮ್ಮೆಯ ರೀತಿಯಲ್ಲಿ ಪ್ರಧಾನ ಮಂತ್ರಿ ಅವರು ಗುರುತಿಸುತ್ತಿರುವುದು ಆಟಗಾರರಲ್ಲಿ ಬಹಳ ದೊಡ್ಡ ಸಂತೋಷದ ಭಾವನೆಯನ್ನು ಮೂಡಿಸಿದೆ ಎಂದರು. ಪ್ರಧಾನ ಮಂತ್ರಿ ಅವರು ತಂಡದ ನಾಯಕರಿಗೆ ಅವರ ನಾಯಕತ್ವದ ರೀತಿ ಮತ್ತು ಸವಾಲುಗಳ ಕುರಿತಂತೆ ಕೇಳಿದರು. ಪ್ರತಿಯೊಬ್ಬರೂ ಬಹಳ ಚೆನ್ನಾಗಿ ಆಡಿದ್ದಾರೆ ಮತ್ತು ತಂಡದಿಂದ ಅತ್ಯುತ್ತಮವಾದುದನ್ನು ಪಡೆಯುವ ಕೆಲಸ ಮಾಡಲಾಯಿತು ಎಂದು ಶ್ರೀಕಾಂತ್ ತಿಳಿಸಿದರು. ನಿರ್ಣಾಯಕ ಪಂದ್ಯದಲ್ಲಿ ಆಡುವ ಅವಕಾಶ ಲಭಿಸಿದುದಕ್ಕಾಗಿ ಅವರು ಸಂತಸ ವ್ಯಕ್ತಪಡಿಸಿದರು. ಅವರ ವಿಶ್ವ ನಂಬರ್ 1 ಶ್ರೇಯಾಂಕ ಮತ್ತು ಥಾಮಸ್ ಕಪ್ ನಲ್ಲಿ ಚಿನ್ನದ ಕುರಿತು ಪ್ರಧಾನ ಮಂತ್ರಿ ಅವರ ಪ್ರಶ್ನೆಗೆ ಹಿರಿಯ ಶಟ್ಲ್ ಆಟಗಾರ ಎರಡು ಮೈಲಿಗಲ್ಲುಗಳೂ ತಮ್ಮ ಕನಸಾಗಿದ್ದವು ಮತ್ತು ಅವುಗಳನ್ನು ಸಾಧಿಸಲಾಗಿರುವ ಬಗ್ಗೆ ತನಗೆ ಸಂತಸವಿದೆ ಎಂದರು. ಈ ಮೊದಲಿನ ವರ್ಷಗಳಲ್ಲಿ ಬಹಳ ದೊಡ್ಡದಾದಂತಹ ಸಾಧನೆಗಳನ್ನು ಮಾಡದಿರುವುದರಿಂದ ಥಾಮಸ್ ಕಪ್ ಬಗ್ಗೆ ಬಹಳ ಚರ್ಚೆಯಾಗುತ್ತಿರಲಿಲ್ಲ ಮತ್ತು ದೇಶದಲ್ಲಿ ಈ ತಂಡದ  ಅಗಾಧ ಸಾಧನೆಯನ್ನು ಮನಗಾಣಲು ಕೆಲಕಾಲ ಬೇಕಾಯಿತು ಎಂದವರು ಹೇಳಿದರು. “ದಶಕಗಳ ಬಳಿಕ ಭಾರತದ ಧ್ವಜವನ್ನು ದೃಢವಾಗಿ ಸ್ಥಾಪಿಸಿದುದಕ್ಕಾಗಿ ಇಡೀ ದೇಶದ ಪರವಾಗಿ ನಾನು ನಿಮ್ಮನ್ನು ಮತ್ತು ನಿಮ್ಮ ಇಡೀ ತಂಡವನ್ನು ಅಭಿನಂದಿಸುತ್ತೇನೆ. ಇದೇನು ಸಣ್ಣ  ಸಾಧನೆಯಲ್ಲ. ಭಾರೀ ಒತ್ತಡದ ನಡುವೆ ಉಸಿರು ಬಿಗಿ ಹಿಡಿದು ತಂಡವನ್ನು ಇಡಿಯಾಗಿರಿಕೊಂಡು ಸಾಧನೆ ಮಾಡಿರುವುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ನಾನು ದೂರವಾಣಿಯಲ್ಲಿ ನಿಮ್ಮನ್ನು ಅಭಿನಂದಿಸಿದ್ದೆ, ಆದರೆ ಈಗ ವೈಯಕ್ತಿಕವಾಗಿ ನಿಮ್ಮನ್ನು ಅಭಿನಂದಿಸಿದ ಸಂತೋಷವನ್ನು ಅನುಭವಿಸುತ್ತಿದ್ದೇನೆ” ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು. 
ಸಾತ್ವಿಕ್ ಸಾಯಿರಾಜ್ ರಾನ್ಕಿರೆಡ್ಡಿ ಅವರು ಕಳೆದ ಹತ್ತು ದಿನಗಳ ಸಂಭ್ರಮ ಮತ್ತು ಸಂಕಷ್ಟಗಳ ವಿವರವನ್ನಿತ್ತರು. ತಂಡದಿಂದ ಮತ್ತು ಪೂರಕ ಸಿಬ್ಬಂದಿಯಿಂದ ತಮಗೆ ದೊರೆತ ಬೆಂಬಲವನ್ನು ಅವರು ಸ್ಮರಿಸಿಕೊಂಡರು. ತಂಡವು ಈಗಲೂ ವಿಜಯದ ಕ್ಷಣಗಳನ್ನು ಅನುಭವಿಸುತ್ತಿದೆ ಎಂದರು. ಪ್ರಧಾನ  ಮಂತ್ರಿ ಅವರು ಈ ಸಂತೋಷವನ್ನು ಹಂಚಿಕೊಂಡರು ಮತ್ತು ತಂಡದ ಸದಸ್ಯರು ತಮ್ಮ ಮೇಲೆ ಪದಕಗಳನ್ನಿಟ್ಟು ಮಲಗಿದ ಮತ್ತು ಸಂತೋಷದಿಂದ ನಿದ್ದೆಗೆಟ್ಟ ಸಂದರ್ಭಗಳ ಟ್ವೀಟ್ ಗಳನ್ನು ನೆನಪಿಸಿದರು. ರಾನ್ಕಿರೆಡ್ಡಿ ಅವರು ತಮ್ಮ ಕೋಚ್ ಗಳ ಜೊತೆಗಿನ ಸಾಧನೆಯ ಪುನರ್ವಿಮರ್ಶೆ ಕುರಿತಂತೆ ವಿವರಿಸಿದರು. ಪ್ರಧಾನ ಮಂತ್ರಿ ಅವರು ಪರಿಸ್ಥಿತಿಗೆ ತಕ್ಕಂತೆ ಅವರ ಹೊಂದಾಣಿಕೆ ಗುಣದ ಬಗ್ಗೆ ಶ್ಲಾಘಿಸಿದರು. ಭವಿಷ್ಯದ ಗುರಿಗಳಲ್ಲಿಯೂ ಒಳಿತಾಗಲಿ ಎಂದವರಿಗೆ ಪ್ರಧಾನ ಮಂತ್ರಿ ಹಾರೈಸಿದರು. 
ಚಿರಾಗ್ ಶೆಟ್ಟಿ ಅವರು ಕೂಡಾ ಪಂದ್ಯಾಟದಲ್ಲಿ ತಮ್ಮ ಪಾತ್ರವನ್ನು ವಿವರಿಸಿದರು ಮತ್ತು ಒಲಿಂಪಿಕ್ ತಂಡದೊಂದಿಗೆ ಪ್ರಧಾನ ಮಂತ್ರಿ ಅವರ ನಿವಾಸಕ್ಕೆ ಬಂದುದನ್ನು ಸ್ಮರಿಸಿಕೊಂಡರು. ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲಲಾಗದುದಕ್ಕೆ ಕೆಲವು ಆಟಗಾರರಲ್ಲಿ ಉಂಟಾಗಿದ್ದ ಹತಾಶೆಯನ್ನು ತಾನು ಗಮನಿಸಿದ್ದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಆದಾಗ್ಯೂ ಆಟಗಾರರು ದೃಢ ನಿಶ್ಚಯದಿಂದ ಇದ್ದುದನ್ನು ಮತ್ತು ಅವರೀಗ ಎಲ್ಲ ನಿರೀಕ್ಷೆಗಳನ್ನು ಸರಿಯಾಗಿ ಈಡೇರಿಸಿರುವುದನ್ನೂ ಅವರು ನೆನಪಿಸಿಕೊಂಡರು. “ಒಂದು ಸೋಲು ಕೊನೆಯೇನಲ್ಲ. ಯಾರೇ ಆಗಲಿ ಆತನಲ್ಲಿ ದೃಢ ನಿರ್ಧಾರ ಇರಬೇಕು. ಮತ್ತು ಜೀವನದಲ್ಲಿ ಹವ್ಯಾಸ, ಗುರಿಗಳು ಇರಬೇಕು. ಇಂತಹ ಜನರಿಗೆ ಜಯ ಎಂಬುದು ಸಹಜ ಫಲಿತಾಂಶವಾಗಿ ಲಭಿಸುತ್ತದೆ. ನೀವದನ್ನು ಮಾಡಿ ತೋರಿಸಿದ್ದೀರಿ”, ಎಂದವರು ಹೇಳಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಪದಕಗಳನ್ನು ತಂಡವು ಗೆಲ್ಲಲಿದೆ ಎಂಬ ಆಶಾವಾದವನ್ನು ಪ್ರಧಾನ ಮಂತ್ರಿ ಅವರು ವ್ಯಕ್ತಪಡಿಸಿದರು. ಅವರು ಬಹಳಷ್ಟು ಆಟವಾಡಬೇಕು ಮತ್ತು ಸಾಧಿಸಬೇಕು (ಖೇಲ್ನಾ ಭೀ ಹೈ ಖಿಲ್ನಾ ಭೀ ಹೈ) ಮತ್ತು ಕ್ರೀಡಾ ಜಗತ್ತಿನಲ್ಲಿ ದೇಶವನ್ನು ಮುಂದಕ್ಕೆ ಕೊಂಡೊಯ್ಯಬೇಕು. “ಈಗ ಭಾರತ ಹಿಂದುಳಿಯದು. ನಿಮ್ಮ ವಿಜಯಗಳು ಕ್ರೀಡಾ ಕ್ಷೇತ್ರದ ತಲೆಮಾರುಗಳನ್ನು ಪ್ರೇರೇಪಿಸಲಿವೆ” ಎಂದು ಪ್ರಧಾನ ಮಂತ್ರಿ ಹೇಳಿದರು.    
ವಿಜಯದ ಬಳಿಕ ದೂರವಾಣಿ ಕರೆಯ ವೇಳೆ ಭರವಸೆ ನೀಡಿದಂತೆ “ಬಾಲ್ ಮಿಥಾಯಿ” ತಂದುದಕ್ಕಾಗಿ ಪ್ರಧಾನ ಮಂತ್ರಿ ಅವರು ಲಕ್ಷ್ಯ ಸೇನ್ ರಿಗೆ ಧನ್ಯವಾದ ಹೇಳಿದರು.  ಲಕ್ಷ್ಯ ಸೇನ್ ಅವರು ಯುವ ಒಲಿಂಪಿಕ್ಸ್ ನಲ್ಲಿ ಗೆದ್ದ ಬಳಿಕ ಪ್ರಧಾನ ಮಂತ್ರಿ ಅವರನ್ನು ಭೇಟಿಯಾದುದನ್ನು ಮತ್ತು ಈಗ ಥಾಮಸ್ ಕಪ್ ಗೆಲುವಿನ ಬಳಿಕ ಭೇಟಿಯಾಗುತ್ತಿರುವುದನ್ನು ನೆನಪಿಸಿಕೊಂಡರು. ಇಂತಹ ಭೇಟಿಗಳಿಂದ ಆಟಗಾರರಿಗೆ ಬಹಳ ದೊಡ್ಡ ಪ್ರೇರಣೆ ದೊರೆಯುತ್ತದೆ ಎಂದವರು ಹೇಳಿದರು. “ನಾನು ಭಾರತಕ್ಕಾಗಿ ಪದಕಗಳನ್ನು ಗಳಿಸುತ್ತಲೇ ಇರಲು ಮತ್ತು ನಿಮ್ಮನ್ನು ಹೀಗೆ ಭೇಟಿಯಾಗುತ್ತಲೇ ಇರಲು ಬಯಸುತ್ತೇನೆ” ಎಂದು ಈ ಯುವ ಬ್ಯಾಡ್ಮಿಂಟನ್ ಆಟಗಾರರು ಹೇಳಿದರು. ಪಂದ್ಯಾಟದ ವೇಳೆ ಲಕ್ಷ್ಯಾ ಅವರು ಆಹಾರಕ್ಕೆ ಸಂಬಂಧಿಸಿದ (ಫುಡ್ ಪಾಯಿಸನಿಂಗ್) ಸಮಸ್ಯೆಯಿಂದ ಬಳಲಿದ ಬಗ್ಗೆ ಪ್ರಧಾನ ಮಂತ್ರಿ ವಿಚಾರಿಸಿದರು. ಕ್ರೀಡೆಯ ಕ್ಷೇತ್ರಕ್ಕೆ ಬರುತ್ತಿರುವ ಯುವಜನರಿಗೆ ತಮ್ಮ ಸಲಹೆ ಏನು ಎಂಬ ಕುರಿತ ಪ್ರಶ್ನೆಗೆ ಲಕ್ಷ್ಯಾ ಅವರು ತಮ್ಮ ಸಮಯವನ್ನು ತರಬೇತಿಗೆ ಮೀಸಲಿಡಬೇಕು ಎಂದರು. ಆಹಾರ ಸಮಸ್ಯೆಯ ಸಂದರ್ಭದಲ್ಲಿ ತೋರಿದ ಶಕ್ತಿ ಮತ್ತು ಸಮತೋಲನದ ಬಗ್ಗೆ ನೆನಪಿಸಿಕೊಳ್ಳುವಂತೆ ಪ್ರಧಾನ ಮಂತ್ರಿ ಅವರು ಲಕ್ಷ್ಯಾ ಅವರಿಗೆ ಹೇಳಿದರಲ್ಲದೆ, ಅವರ ಶಕ್ತಿ ಮತು ದೃಢ ಸಂಕಲ್ಪದಿಂದ ಕಲಿತ ಪಾಠಗಳನ್ನು ಸ್ಮರಿಸಿಕೊಳ್ಳುವಂತೆಯೂ ತಿಳಿಸಿದರು.    
ಎಚ್.ಎಸ್. ಪ್ರಣೋಯ್ ಅವರು ಭಾರತದ ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಸಂದರ್ಭದಲ್ಲಿ ಈ ಪ್ರತಿಷ್ಠಿತ ಪಂದ್ಯಾಟದಲ್ಲಿ ಗೆಲುವು ಸಾಧಿಸಿರುವುದು ಹೆಚ್ಚು ಹೆಮ್ಮೆಯ ಸಂಗತಿ ಎಂದರು. ಕ್ವಾರ್ಟರ್ ಫೈನಲ್ ನಲ್ಲಿ ಮತ್ತು ಸೆಮಿ ಫೈನಲ್ ನಲ್ಲಿ ಭಾರೀ ಒತ್ತಡ ಇತ್ತು, ತಂಡದ ಸಹಾಯದಿಂದ ಅದನ್ನು ನಿಭಾಯಿಸಲು ಸಾಧ್ಯವಾದುದು ತಮಗೆ ಸಂತೋಷ ತಂದಿತು ಎಂದು  ತಿಳಿಸಿದರು.  ಪ್ರಣೋಯ್ ಅವರಲ್ಲಿಯ ಹೋರಾಟದ ವ್ಯಕ್ತಿತ್ವವನ್ನು ಪ್ರಧಾನ ಮಂತ್ರಿ ಗುರುತಿಸಿದ್ದಲ್ಲದೆ ವಿಜಯಕ್ಕೆ ಸಂಬಂಧಿಸಿ ಅವರ ದೋರಣೆ ಅವರ ಬಹಳ ದೊಡ್ಡ ಶಕ್ತಿ  ಎಂದರು.
ತಂಡದ ಅತ್ಯಂತ ಕಿರಿಯರಾದ ಉನ್ನತಿ ಹೂಡಾ ಅವರನ್ನು ಪ್ರಧಾನ ಮಂತ್ರಿಯವರು ಹಾರ್ದಿಕವಾಗಿ ಅಭಿನಂದಿಸಿದರು. ಪದಕ ವಿಜೇತರು ಮತ್ತು ಪದಕ ವಿಜೇತರಲ್ಲದವರ ಮಧ್ಯೆ ಎಂದೂ ತಾರತಮ್ಯ ಮಾಡದಿರುವುದಕ್ಕಾಗಿ ಪ್ರಧಾನ ಮಂತ್ರಿ ಅವರನ್ನು ಉನ್ನತಿ ಹೂಡಾ ಶ್ಲಾಘಿಸಿದರು. ಆಕೆಯ ದೃಢ ನಿಶ್ಚಯವನ್ನು ಪ್ರಧಾನ ಮಂತ್ರಿ ಕೊಂಡಾಡಿದರಲ್ಲದೆ ಗುಣಮಟ್ಟದ ಕ್ರೀಡಾಳುಗಳನ್ನು ನೀಡಿದ ಹರಿಯಾಣದ ಮಣ್ಣಿನ ವಿಶೇಷ ಗುಣದ ಬಗ್ಗೆ ಕೇಳಿದರು.  “ದೂದ್ ಧಾಯಿ” ಆಹಾರಪಥ್ಯ ಪ್ರತಿಯೊಬ್ಬರ ಸಂತೋಷಕ್ಕೆ ಮುಖ್ಯ ಕಾರಣವಾಗಿದೆ ಎಂದು ಉನ್ನತಿ ಉತ್ತರಿಸಿದರು. ಉನ್ನತಿ ಅವರು ಅವರ ಹೆಸರೇ ಹೇಳುವಂತೆ ಹೊಳೆಯುತ್ತಾರೆ ಎಂಬ ಬಗ್ಗೆ ತಮಗೆ ದೃಢ ವಿಶ್ವಾಸವಿದೆ ಎಂದು ಪ್ರಧಾನ ಮಂತ್ರಿ ಅವರು ಉನ್ನತಿಯವರಿಗೆ ತಿಳಿಸಿದರು. ಉನ್ನತಿ ಅವರು  ಬಹಳ ದೂರ ಸಾಗಲಿಕ್ಕಿದೆ ಮತ್ತು ಗೆಲುವು ಸಾಧಿಸಿದಾಗ ಅವುಗಳು  ಸಂತೃಪ್ತಿಯ ವಿರಾಮಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಪ್ರಧಾನ ಮಂತ್ರಿ ಅವರು ಹೇಳಿದರು.
ಟ್ರೀಸಾ ಜೋಲಿ ಅವರು ತಮ್ಮ ಕ್ರೀಡಾ ಮಹತ್ವಾಕಾಂಕ್ಷೆಗೆ ತಮ್ಮ ಕುಟುಂಬದಿಂದ ದೊರೆತ ಅದ್ಭುತ ಬೆಂಬಲದ ಬಗ್ಗೆ ಹೇಳಿದರು. ಉಬರ್ ಕಪ್ ನಲ್ಲಿ ನಮ್ಮ ಮಹಿಳಾ ತಂಡ ಆಡಿದ ರೀತಿಯಿಂದ ದೇಶಕ್ಕೆ ಹೆಮ್ಮೆಯುಂಟಾಗಿದೆ ಎಂದು ಪ್ರಧಾನ ಮಂತ್ರಿ ಅವರು ಹೇಳಿದರು.
ಕೊನೆಯಲ್ಲಿ  ಪ್ರಧಾನ ಮಂತ್ರಿ ಅವರು ಈ ತಂಡ ಥಾಮಸ್ ಕಪ್ ಗೆಲ್ಲುವ ಮೂಲಕ ದೇಶಕ್ಕೆ ಭಾರೀ ಶಕ್ತಿಯನ್ನು ತುಂಬಿದೆ ಎಂದರು. ಏಳು ದಶಕಗಳ ಬಹಳ ಸುದೀರ್ಘ ಕಾಲಾವಧಿಯ ಕಾಯುವಿಕೆ ಅಂತ್ಯಗೊಂಡಿದೆ. “ಬ್ಯಾಡ್ಮಿಂಟನ್ ಅನ್ನು ಯಾರೆಲ್ಲ ಅರ್ಥ ಮಾಡಿಕೊಳ್ಳಬಲ್ಲರೋ, ಅವರು ಈ ಬಗ್ಗೆ ಕನಸು ಕಂಡಿದ್ದರು, ಆ ಕನಸನ್ನು ನೀವು ನನಸು ಮಾಡಿರುವಿರಿ” ಇಂತಹ ಯಶಸ್ಸು ದೇಶದ ಇಡೀ ಕ್ರೀಡಾ ಪರಿಸರ ವ್ಯವಸ್ಥೆಯಲ್ಲಿ ಶಕ್ತಿ ಮತ್ತು ವಿಶ್ವಾಸವನ್ನು ತುಂಬುತ್ತದೆ. ನಿಮ್ಮ ಜಯ ನಾಯಕರ ವಾಕ್ಚಾತುರ್ಯದಿಂದ ಅಥವಾ ಬಹಳ ಶ್ರೇಷ್ಠ ಕೋಚ್ ಗಳಿಂದ ಸಾಧ್ಯವಾಗದುದನ್ನು ಮಾಡಿದೆ” ಎಂದೂ ಶ್ರೀ ಮೋದಿ ಹೇಳಿದರು.
 
 
ಉಬರ್ ಕಪ್ ಕುರಿತು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ಅವರು ನಾವು ವಿಜಯಕ್ಕಾಗಿ ಕಾಯುವಾಗ ನಾವು ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಂಡು ಕಾಯುತ್ತಿರುತ್ತೇವೆ ಎಂದರು. ಈಗಿರುವ ಹಾಲಿ ತಂಡದ ಗುಣಮಟ್ಟದ ಕ್ರೀಡಾಳುಗಳು ಉತ್ತಮ ಫಲಿತಾಂಶವನ್ನು ಶೀಘ್ರವೇ ತರುತ್ತಾರೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು. “ನಮ್ಮ ಮಹಿಳಾ ತಂಡ ತನ್ನ ಸಮಯವನ್ನು ತೋರಿಸಿದೆ.ಮತ್ತು ಅವರ ಸ್ಥಾನಮಾನವನ್ನು ಕಂಡುಕೊಂಡಿದೆ. ಇದು ಕಾಲಕ್ಕೆ ಸಂಬಂಧಪಟ್ಟ ವಿಷಯ, ಈ ಸಾರಿಯಲ್ಲದಿದ್ದರೂ ಮುಂದಿನ ಬಾರಿ ನಾವು ಗೆಲ್ಲುವುದು ಖಚಿತ” ಎಂದವರು ಹೇಳಿದರು.
ಸ್ವಾತಂತ್ರ್ಯದ 75 ನೇ ವರ್ಷದಲ್ಲಿ, ಈ ಜಯಗಳು ಮತ್ತು ಯಶಸ್ಸಿನ ತುತ್ತತುದಿಗೇರುವಿಕೆ ಪ್ರತಿಯೊಬ್ಬ ಭಾರತೀಯನಲ್ಲೂ ಭಾರೀ ಹೆಮ್ಮೆಯನ್ನು ತುಂಬಿದೆ.”ನಾನು ಮಾಡಬಲ್ಲೆ” ಎಂಬುದು ನವ ಭಾರತದ ಮನಸ್ಥಿತಿಯಾಗಿದೆ ಎಂದವರು ಹೇಳಿದರು. ಸ್ಪರ್ಧೆಯ ಬಗ್ಗೆ ಚಿಂತಾಕ್ರಾಂತರಾಗಿರುವುದಕ್ಕಿಂತ ತಮ್ಮ ಸಾಧನೆಯ ಮೇಲೆ ಗಮನ ಕೇಂದ್ರೀಕರಿಸುವುದು ಬಹಳ ಮುಖ್ಯ ಎಂದೂ ಅವರು ಹೇಳಿದರು.ನಿರೀಕ್ಷೆಗಳ ಒತ್ತಡ ಈಗ ಹೆಚ್ಚಲಿದೆ ಮತ್ತು ಅದು ಸರಿ ಕೂಡಾ, ಆದರೆ ಅವರು ದೇಶದ ನಿರೀಕ್ಷೆಯ ಒತ್ತಡದಡಿಯಲ್ಲಿ  ಸಿಲುಕಿಕೊಳ್ಳಬಾರದು ಎಂದ ಅವರು “ ಈ ಒತ್ತಡವನ್ನು ನಾವು ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳಬೇಕು. ನಾವು ಇದನ್ನೊಂದು ಪ್ರೇರಣೆ ಮತ್ತು ಬೆಂಬಲವಾಗಿ ಪರಿಗಣಿಸಬೇಕು” ಎಂದೂ ಹೇಳಿದರು.
ಕಳೆದ 7-8 ವರ್ಷಗಳಲ್ಲಿ  ನಮ್ಮ ಆಟಗಾರರು ಹೊಸ ದಾಖಲೆಗಳನ್ನು ಸೃಷ್ಟಿಸಿರುವುದರತ್ತ ಪ್ರಧಾನ ಮಂತ್ರಿ ಅವರು ಬೆಟ್ಟು ಮಾಡಿದರು. ಒಲಿಂಪಿಕ್ಸ್ ನಲ್ಲಿ, ಪ್ಯಾರಾಲಿಂಪಿಕ್ಸ್ ಮತ್ತು ಡೆಫ್ಲಿಂಪಿಕ್ಸ್ ನಲ್ಲಿ ಅದ್ಭುತ ಸಾಧನೆಗಳಾಗಿರುವುದರತ್ತ ಅವರು ಗಮನ ಸೆಳೆದರು. ಇಂದು ಕ್ರೀಡೆಗೆ ಸಂಬಂಧಿಸಿ ಮನೋಭೂಮಿಕೆ ಬದಲಾಗುತ್ತಿದೆ ಎಂದು ಹೇಳಿದ ಅವರು ಹೊಸ ವಾತಾವರಣವೊಂದು ಈ ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿದೆ. “ಇದು ಭಾರತದ ಕ್ರೀಡಾ ಚರಿತ್ರೆಯಲ್ಲಿ ಸುವರ್ಣ ಅಧ್ಯಾಯ ಮತ್ತು ನಿಮ್ಮಂತಹ ಚಾಂಪಿಯನ್ ಗಳು ಮತ್ತು ನಿಮ್ಮ ತಲೆಮಾರಿನ ಆಟಗಾರರು ಇದರ ಲೇಖಕರು. ಈ ಮುನ್ನಡೆ ಸದಾ ಚಾಲ್ತಿಯಲ್ಲಿರುವಂತೆ ನಾವು ನಿಗಾ ಇಡಬೇಕಾಗಿದೆ” ಎಂದು ಹೇಳಿದರು.  ಪ್ರಧಾನ ಮಂತ್ರಿ ಅವರು ದೇಶದ ಕ್ರೀಡಾಳುಗಳಿಗೆ ಎಲ್ಲಾ ರೀತಿಯ ಬೆಂಬಲದ ಭರವಸೆ ನೀಡಿದರು.  

 

*****



(Release ID: 1827533) Visitor Counter : 133