ಪ್ರಧಾನ ಮಂತ್ರಿಯವರ ಕಛೇರಿ
ಟ್ರಾಯ್ ಬೆಳ್ಳಿಮಹೋತ್ಸವ ಆಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಿ ಭಾಷಣ
“ಸ್ವಯಂ ನಿರ್ಮಿತ 5ಜಿ ಟೆಸ್ಟ್-ಬೆಡ್ ದೂರಸಂಪರ್ಕ ವಲಯದಲ್ಲಿ ನಿರ್ಣಾಯಕ ಹಾಗೂ ಆಧುನಿಕ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ’’
“21ನೇ ಶತಮಾನದಲ್ಲಿ ಸಂಪರ್ಕ ಭಾರತದ ಪ್ರಗತಿಯ ವೇಗವನ್ನು ನಿರ್ಧರಿಸುತ್ತದೆ’’
“5ಜಿ ತಂತ್ರಜ್ಞಾನವು ದೇಶದ ಆಡಳಿತದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಲಿದೆ ಮತ್ತು ಜೀವನ ಹಾಗೂ ವ್ಯವಹಾರವನ್ನು ಸುಲಭಗೊಳಿಸಲಿದೆ’’
“2-ಜಿ ಯುಗದ ಹತಾಶೆ, ನಿರಾಶೆ, ಭ್ರಷ್ಟಾಚಾರ ಮತ್ತು ನೀತಿ ಪಾರ್ಶ್ವವಾಯುಗಳಿಂದ ಹೊರಬಂದು ಕ್ಷಿಪ್ರವಾಗಿ 3ಜಿಯಿಂದ 4ಜಿ ಮತ್ತು ಇದೀಗ 5ಜಿಯಿಂದ 6ಜಿ ಯತ್ತ ದೇಶ ಸಾಗುತ್ತಿದೆ’’
“ಕಳೆದ 8 ವರ್ಷಗಳಲ್ಲಿ ರೀಚ್, ರಿಫಾರ್ಮ್, ರೆಗ್ಯುಲೇಟ್, ರೆಸ್ಪಾಂಡ್ ಮತ್ತು ರೆವಲ್ಯೂಷನೈಸ್ ಎಂಬ ‘ಪಂಚಾಮೃತ’ದ ಮೂಲಕ ದೂರಸಂಪರ್ಕ ವಲಯಕ್ಕೆ ಹೊಸ ಶಕ್ತಿ ತುಂಬಲಾಗಿದೆ’’
“ಮೊಬೈಲ್ ಉತ್ಪಾದನಾ ಘಟಕಗಳ ಸಂಖ್ಯೆ 2ರಿಂದ 200ಕ್ಕೂ ಅಧಿಕವಾಗಿವೆ, ಅವು ಕಡು ಬಡಕುಟುಂಬಗಳಿಗೂ ಮೊಬೈಲ್ ಫೋನ್ ತಲುಪಿಸುತ್ತಿವೆ’’
“ಇಂದು ಎಲ್ಲರಿಗೂ ಸಹಭಾಗಿತ್ವದ ನಿಯಂತ್ರಣದ ಅಗತ್ಯದ ಅನುಭವವಾಗುತ್ತಿದೆ. ಅದಕ್ಕಾಗಿ ಎಲ್ಲ ನಿಯಂತ್ರಕರು ಒಗ್ಗೂಡುವುದು, ಸಾಮಾನ್ಯ ವೇದಿಕೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಉತ್ತಮ ಸಮನ್ವಯಕ್ಕಾಗಿ ಪರಿಹಾರಗಳನ್ನು ಕಂಡುಹಿಡಿಯುವುದು ಅತ್ಯವಶ್ಯಕ’’
Posted On:
17 MAY 2022 12:24PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಷಣ ಮಾಡಿದರು. ಅದರ ನೆನಪಿಗಾಗಿ ಸ್ಮಾರಕ ಅಂಚೆ ಚೀಟಿಯನ್ನೂ ಸಹ ಅವರು ಬಿಡುಗಡೆ ಮಾಡಿದರು. ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಶ್ರೀ ದೇವುಸಿಂಹ ಚೌಹಾಣ್ ಮತ್ತು ಶ್ರೀ ಎಲ್. ಮುರುಗನ್ ಮತ್ತು ದೂರಸಂಪರ್ಕ ಮತ್ತು ಪ್ರಸಾರ ವಲಯದ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಇಂದು ರಾಷ್ಟ್ರಕ್ಕೆ ಸಮರ್ಪಿಸಿದ ಸ್ವಯಂ ನಿರ್ಮಿತ 5ಜಿ ಟೆಸ್ಟ್ ಬೆಡ್, ದೂರಸಂಪರ್ಕ ಕ್ಷೇತ್ರದಲ್ಲಿ ನಿರ್ಣಾಯಕ ಮತ್ತು ಆಧುನಿಕ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದರು. ಐಐಟಿ ಸೇರಿ ಈ ಯೋಜನೆಗೆ ಸಂಬಂಧಿಸಿದ ಎಲ್ಲರಿಗೂ ಪ್ರಧಾನಿ ಅಭಿನಂದನೆ ಸಲ್ಲಿಸಿದರು. “ದೇಶದ ಸ್ವಯಂ 5ಜಿ ಮಾನದಂಡವನ್ನು 5ಜಿಐ ವಿಧಾನದಲ್ಲಿ ರೂಪಿಸಲಾಗಿದೆ, ಇದು ದೇಶಕ್ಕೆ ಬಹು ಹೆಮ್ಮೆಯ ವಿಷಯವಾಗಿದೆ. ದೇಶದ ಹಳ್ಳಿಗಳಿಗೆ 5ಜಿ ತಂತ್ರಜ್ಞಾನವನ್ನು ತಲುಪಿಸುವಲ್ಲಿ ಇದು ದೊಡ್ಡ ಮಹತ್ವದ ಪಾತ್ರವನ್ನು ವಹಿಸುತ್ತದೆ’’ ಎಂದು ಅವರು ಹೇಳಿದರು.
21ನೇ ಶತಮಾನದಲ್ಲಿ ಸಂಪರ್ಕವು ಭಾರತದ ಪ್ರಗತಿಯ ವೇಗವನ್ನು ನಿರ್ಧರಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಹಾಗಾಗಿ ಸಂಪರ್ಕವನ್ನು ಪ್ರತಿ ಹಂತದಲ್ಲೂ ಆಧುನೀಕರಿಸಬೇಕಾಗಿದೆ. 5ಜಿ ತಂತ್ರಜ್ಞಾನವು ದೇಶದ ಆಡಳಿತದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ, ಜೀವನ ಮತ್ತು ವ್ಯವಹಾರವನ್ನು ಸುಲಭವಾಗಿಸುತ್ತದೆ. ಇದು ಕೃಷಿ, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಮತ್ತು ಸಾರಿಗೆಯಂತಹ ಪ್ರತಿಯೊಂದು ವಲಯದಲ್ಲಿ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಹೆಚ್ಚಿನ ಅನುಕೂಲಗಳನ್ನು ಒದಗಿಸುತ್ತದೆ ಮತ್ತು ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. 5ಜಿ ಯ ಕ್ಷಿಪ್ರ ಬಿಡುಗಡೆಗಾಗಿ ಸರ್ಕಾರ ಮತ್ತು ಉದ್ಯಮ ಎರಡರ ಪ್ರಯತ್ನಗಳು ಅತ್ಯಗತ್ಯ ಎಂದು ಅವರು ಹೇಳಿದರು.
ಸ್ವಾವಲಂಬನೆ ಮತ್ತು ಆರೋಗ್ಯಕರ ಪೈಪೋಟಿಯು ಸಮಾಜ ಮತ್ತು ಆರ್ಥಿಕತೆಯಲ್ಲಿ ಹೇಗೆ ಗುಣಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ ಎಂಬುದಕ್ಕೆ ದೂರಸಂಪರ್ಕ ವಲಯವು ಉತ್ತಮ ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಹತಾಶೆ, ನಿರಾಶೆ, ಭ್ರಷ್ಟಾಚಾರ ಮತ್ತು ನೀತಿ ಪಾರ್ಶ್ವವಾಯುಗಳ 2ಜಿ ಯುಗದಿಂದ ಹೊರಬಂದು, ದೇಶವು 3ಜಿ ಯಿಂದ 4ಜಿ ಮತ್ತು ಇದೀಗ 5ಜಿ ಮತ್ತು 6ಜಿಯತ್ತ ಕ್ಷಿಪ್ರವಾಗಿ ಸಾಗುತ್ತಿದೆ ಎಂದರು.
ಕಳೆದ 8 ವರ್ಷಗಳಲ್ಲಿ, ರೀಚ್(ತಲುಪುವುದು), ರಿಫಾರ್ಮ್(ಸುಧಾರಣೆ) ರೆಗ್ಯುಲೇಟ್ (ನಿಯಂತ್ರಣ), ರೆಸ್ಪಾಂಡ್ (ಸ್ಪಂದಿಸುವುದು) ಮತ್ತು ರೆವಲ್ಯೂಷನೈಸ್ (ಕ್ರಾಂತಿ)ಯ ‘ಪಂಚಾಮೃತ’ದೊಂದಿಗೆ ದೂರಸಂಪರ್ಕ ವಲಯಕ್ಕೆ ಹೊಸ ಶಕ್ತಿಯನ್ನು ತುಂಬಲಾಗಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಇದರಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ ಶ್ರೇಯ ಟ್ರಾಯ್ಗೆ ಸಲ್ಲುತ್ತದೆ ಎಂದವರು ಹೇಳಿದರು. ಇದೀಗ ದೇಶವು ಸಂಕುಚಿತ ಮನೋಭಾವದಿಂದ ಯೋಚಿಸುವುದನ್ನು ಬಿಟ್ಟು ಮತ್ತು 'ಇಡೀ ಸರ್ಕಾರದ ವಿಧಾನ' ದೊಂದಿಗೆ ಮುನ್ನಡೆಯುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ನಾವು ದೇಶದಲ್ಲಿ ದೂರಸಂಪರ್ಕ ಸಾಂದ್ರತೆ (ಟೆಲಿಡೆನ್ಸಿಟಿ) ಮತ್ತು ಅಂತರ್ಜಾಲ ಬಳಕೆದಾರರ ವಿಷಯದಲ್ಲಿ ವಿಶ್ವದಲ್ಲೇ ಅತ್ಯಂತ ವೇಗವಾಗಿ ವಿಸ್ತರಣೆ ಮಾಡುತ್ತಿದ್ದೇವೆ, ಅದರಲ್ಲಿ ದೂರಸಂಪರ್ಕ ಸೇರಿದಂತೆ ಹಲವು ಕ್ಷೇತ್ರಗಳು ಇದರಲ್ಲಿ ಪಾತ್ರವಹಿಸಿವೆ ಎಂದು ಪ್ರಧಾನಿ ಹೇಳಿದರು.
ಕಡುಬಡಕುಟುಂಬಗಳ ಜನರಿಗೂ ಮೊಬೈಲ್ ಲಭ್ಯವಾಗುವಂತೆ ಮಾಡಲು ದೇಶದಲ್ಲಿಯೇ ಮೊಬೈಲ್ ಫೋನ್ಗಳ ಉತ್ಪಾದನೆಗೆ ಒತ್ತು ನೀಡಲಾಗಿದೆ ಎಂದು ಪ್ರಧಾನಿ ಹೇಳಿದರು. ಅದರ ಪರಿಣಾಮ ಮೊಬೈಲ್ ತಯಾರಿಕಾ ಘಟಕಗಳ ಸಂಖ್ಯೆ 2ರಿಂದ 200ಕ್ಕೂ ಅಧಿಕ ಸಂಖ್ಯೆಗೆ ಏರಿದೆ ಎಂದರು.
ಇಂದು ಭಾರತ ದೇಶದ ಪ್ರತಿಯೊಂದು ಗ್ರಾಮವನ್ನು ಆಪ್ಟಿಕಲ್ ಫೈಬರ್ನೊಂದಿಗೆ ಸಂಪರ್ಕಿಸಿದೆ ಎಂದು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು. 2014ರ ಮೊದಲು ಭಾರತದಲ್ಲಿ 100 ಗ್ರಾಮ ಪಂಚಾಯಿತಿಗಳಿಗೂ ಆಪ್ಟಿಕಲ್ ಫೈಬರ್ ಸಂಪರ್ಕ ಕಲ್ಪಿಸಿರಲಿಲ್ಲ ಎಂದು ಅವರು ಹೇಳಿದರು. ಆದರೆ ಇಂದು ನಾವು ಸುಮಾರು 1.75 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ ಒದಗಿಸುವಂತೆ ಮಾಡಿದ್ದೇವೆ.ಇದರಿಂದಾಗಿ ನೂರಾರು ಸರ್ಕಾರಿ ಸೇವೆಗಳು ಗ್ರಾಮಗಳಿಗೆ ನೇರವಾಗಿ ತಲುಪುತ್ತಿವೆ ಎಂದರು.
ಸದ್ಯದ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ಟ್ರಾಯ್ ನಂತಹ ನಿಯಂತ್ರಕರಿಗೆ ‘ಇಡೀ ಸರ್ಕಾರದ ವಿಧಾನ’ ಅತ್ಯಂತ ಮುಖ್ಯವಾಗಿದೆ ಎಂದು ಪ್ರಧಾನಿ ಹೇಳಿದರು. “ಇಂದು ನಿಯಂತ್ರಣವು ಕೇವಲ ಒಂದು ವಲಯದ ಗಡಿಗಳಿಗೆ ಸೀಮಿತವಾಗಿಲ್ಲ. ತಂತ್ರಜ್ಞಾನವು ನಾನಾ ಕ್ಷೇತ್ರಗಳನ್ನು ಪರಸ್ಪರ ಸಂಪರ್ಕಿಸುತ್ತಿದೆ. ಅದಕ್ಕಾಗಿಯೇ ಇಂದು ಎಲ್ಲರಿಗೂ ಸಹಭಾಗಿತ್ವ ನಿಯಂತ್ರಣದ ಅಗತ್ಯತೆಯ ಅನುಭವವಾಗುತ್ತಿದೆ. ಅದಕ್ಕಾಗಿ ಎಲ್ಲಾ ನಿಯಂತ್ರಕರು ಒಗ್ಗೂಡುವುದು, ಸಾಮಾನ್ಯ ವೇದಿಕೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಉತ್ತಮ ಸಮನ್ವಯಕ್ಕಾಗಿ ಪರಿಹಾರಗಳನ್ನು ಕಂಡುಹಿಡಿಯುವುದು ಅತ್ಯವಶ್ಯಕ” ಎಂದು ಪ್ರಧಾನಮಂತ್ರಿ ಹೇಳಿದರು.
***
(Release ID: 1826069)
Visitor Counter : 138
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam