ಪ್ರಧಾನ ಮಂತ್ರಿಯವರ ಕಛೇರಿ

ಶಿವಗಿರಿಯ 90 ನೇ ವಾರ್ಷಿಕೋತ್ಸವ ಮತ್ತು ಬ್ರಹ್ಮ ವಿದ್ಯಾಲಯದ ಸುವರ್ಣ ಮಹೋತ್ಸವದ ಒಂದು ವರ್ಷದ ಜಂಟಿ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಭಾಗಿ


“ಜಂಟಿ ಆಚರಣೆ ಭಾರತದ ಅಮರ ಪಯಣದ ಕಲ್ಪನೆಯ ಸಂಕೇತ: ವಿಭಿನ್ನ ಅವಧಿ, ವಿಭಿನ್ನ ಮಾಧ್ಯಮಗಳ ಮೂಲಕ ಇದು ಮುಂದುವರೆಯುತ್ತದೆ”

“ನಮ್ಮ ಶಕ್ತಿ ಕೇಂದ್ರಗಳು ಎಂದರೆ ಕೇವಲ ತೀರ್ಥಯಾತ್ರೆಗಳಲ್ಲ, ಅವು ನಂಬಿಕೆಯ ಕೇಂದ್ರಗಳ ಜತೆಗೆ ‘ಏಕ್ ಭಾರತ್ ಶ್ರೇಷ್ಠ ಭಾರತದ’ ಚೈತನ್ಯವನ್ನು ಜಾಗೃತಗೊಳಿಸುವ ತಾಣಗಳು”

“ಭಾರತದಲ್ಲಿ ನಮ್ಮ ಋಷಿಗಳು ಮತ್ತು ಗುರುಗಳು ಸದಾ ನಮ್ಮ ಆಲೋಚನೆಗಳನ್ನು ಸಂಸ್ಕರಿಸಿದರು ಮತ್ತು ನಡತೆಯನ್ನು ಉತ್ತಮಗೊಳಿಸಿದರು”

“ಜಾತಿ ಹೆಸರಿನಲ್ಲಿ ನಡೆಯುತ್ತಿದ್ದ ತಾರತಮ್ಯದ ವಿರುದ್ಧ ಶ್ರೀ ನಾರಾಯಣ ಗುರುಗಳು ತಾರ್ಕಿಕ ಮತ್ತು ವಾಸ್ತವಿಕ ಹೋರಾಟ ನಡೆಸಿದರು. ಇಂದು ನಾರಾಯಣ ಗುರೂಜಿ ಅವರ ಪ್ರೇರಣೆಯಿಂದ ದೇಶದಲ್ಲಿ ಬಡವರು, ದೀನ ದಲಿತರು, ಹಿಂದುಳಿದವರ ಸೇವೆ ಮಾಡಲಾಗುತ್ತಿದೆ ಮತ್ತು ಅವರ ಹಕ್ಕುಗಳನ್ನು ನೀಡಲಾಗುತ್ತಿದೆ”

“ಶ್ರೀ ನಾರಾಯಣ ಗುರು ಆಮೂಲಾಗ್ರ ಚಿಂತಕ ಮತ್ತು ಒಬ್ಬ ವಾಸ್ತವಿಕ ಸುಧಾರಕ”

“ಸಮಾಜ ಸುಧಾರಣೆಯ ಮಾರ್ಗದಲ್ಲಿ ನಾವು ಹೆಜ್ಜೆ ಹಾಕಿದರೆ, ಸಮಾಜದಲ್ಲಿ ಸ್ವಯಂ ಸುಧಾರಣೆಯ ಶಕ್ತಿ ಜಾಗೃತವಾಗುತ್ತದೆ, “ಬೇಟಿ ಬಚಾವೋ ಬೇಟಿ ಫಡಾವೋ” ಇದಕ್ಕೆ ಒಂದು ಉದಾಹರಣೆ”

Posted On: 26 APR 2022 12:29PM by PIB Bengaluru

ನಂ 7, ಲೋಕ ಕಲ್ಯಾಣ ಮಾರ್ಗದಲ್ಲಿ ನಡೆದ ಶಿವಗಿರಿಯ 90 ನೇ ವಾರ್ಷಿಕೋತ್ಸವ ಮತ್ತು ಬ್ರಹ್ಮ ವಿದ್ಯಾಲಯದ ಸುವರ್ಣ ಮಹೋತ್ಸವದ ಒಂದು ವರ್ಷದ ಜಂಟಿ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಇಡೀ ವರ್ಷದ ಜಂಟಿ ಆಚರಣೆಗೆ ಅವರು ಚಾಲನೆ ನೀಡಿದರು. ಶಿವಗಿರಿ ತೀರ್ಥಯಾತ್ರೆ ಮತ್ತು ಬ್ರಹ್ಮ ವಿದ್ಯಾಲಯವನ್ನು ಶ್ರೇಷ್ಠ ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಅವರ ಆಶಿರ್ವಾದ ಮತ್ತು ಮಾರ್ಗದರ್ಶನದಲ್ಲಿ ಆರಂಭಿಸಲಾಯಿತು. ಈ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಗಿರಿ ಮಠದ ಆಧ್ಯಾತ್ಮಿಕ ಮುಖಂಡರು ಮತ್ತು ಭಕ್ತರು, ಕೇಂದ್ರ ಸಚಿವರಾದ ಶ್ರೀ ರಾಜೀವ್ ಚಂದ್ರಶೇಖರ್ ಮತ್ತು ಶ್ರೀ ವಿ. ಮುರಳೀಧರನ್ ಅವರು ಪಾಲ್ಗೊಂಡರು.     
ತಮ್ಮ ಮನೆಗೆ ಸಂತರನ್ನು ಸ್ವಾಗತಿಸಿದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಅವರು ಸಂತಸ ವ್ಯಕ್ತಪಡಿಸಿದರು. ಶಿವಗಿರಿ ಮಠದ ಸಂತರು ಮತ್ತು ಭಕ್ತರನ್ನು ಹಲವಾರು ವರ್ಷಗಳಿಂದ ಭೇಟಿ ಮಾಡುತ್ತಿರುವುದನ್ನು ಮತ್ತು ಅವರು ಯಾವಾಗಲೂ ಪರಸ್ಪರ ಕ್ರಿಯೆಯ ಮೂಲಕ ಹೇಗೆ ಚೈತನ್ಯದಿಂದ ಇರುತ್ತಾರೆ ಎನ್ನುವುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ಉತ್ತರಾಖಂಡ – ಕೇದರ್ ನಾಥ್ ದುರಂತ ಸಂದರ್ಭದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭವನ್ನು ಅವರು ಮೆಲುಕು ಹಾಕಿದರು ಮತ್ತು ಕೇರಳದ ಸಚಿವರು, ಗುಜರಾತ್ ನ ಮುಖ್ಯಮಂತ್ರಿಯಾಗಿದ್ದ ತಾವು ಶಿವಗಿರಿ ಮಠದ ಸಂತರಿಗೆ ನೆರವು ನೀಡುವಂತೆ ಮನವಿ ಮಾಡಲಾಗಿತ್ತು. ಆಗ ಒದಗಿಸಿದ ಸವಲತ್ತನ್ನು ತಾವು ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಮಂತ್ರಿ ಅವರು ಹೇಳಿದರು.  

ಶಿವಗಿರಿ ತೀರ್ಥಯಾತ್ರೆಯ 90 ನೇ ವರ್ಷಾಚರಣೆ ಮತ್ತು ಬ್ರಹ್ಮ ವಿದ್ಯಾಲಯದ ಸುವರ್ಣ ಮಹೋತ್ಸವ ಈ ಸಂಸ್ಥೆಗಳ ಯಾನವಷ್ಟೇ ಅಲ್ಲ, “ಇದು ಭಾರತದ ಕಲ್ಪನೆಯ ಅಮರ ಪಯಣವಾಗಿದೆ. ಇದು ವಿಭಿನ್ನ ಅವಧಿಗಳಲ್ಲಿ, ವಿಭಿನ್ನ ಮಾಧ್ಯಮಗಳ ಮೂಲಕ ಮುಂದುವರೆಯುತ್ತದೆ” ಎಂದರು. ಮುಂದುವರೆದು ಮಾತನಾಡಿದ ಅವರು, “ವಾರಣಸಿಯ ಶಿವನ ನಗರವಾಗಲಿ ಅಥವಾ ವರ್ಕಳದ ಶಿವಗಿರಿಯಾಗಿರಲಿ, ಭಾರತದ ಪ್ರತಿಯೊಂದು ಶಕ್ತಿ ಕೇಂದ್ರ ನಮ್ಮೆಲ್ಲ ಭಾರತೀಯರ ಜೀವನದಲ್ಲಿ ವಿಶೇಷ ಸ್ಥಾನ ಹೊಂದಿವೆ. ನಮ್ಮ ಶಕ್ತಿ ಕೇಂದ್ರಗಳು ಕೇವಲ ತೀರ್ಥಯಾತ್ರೆಗಳಲ್ಲ, ಅವು ನಂಬಿಕೆಯ ಶ್ರದ್ಧಾ ಕೇಂದ್ರಗಳ ಜತೆಗೆ ‘ಏಕ್ ಭಾರತ್ ಶ್ರೇಷ್ಠ ಭಾರತದ’ ಚೈತನ್ಯವನ್ನು ಜಾಗೃತಗೊಳಿಸುವ ಸ್ಥಾಪನೆಗಳಾಗಿವೆ ಎಂದು ಹೇಳಿದರು.    

ಅನೇಕ ದೇಶಗಳು ಮತ್ತು ನಾಗರಿಕತೆಗಳು ತಮ್ಮ ಧರ್ಮದಿಂದ ದೂರ ಸರಿದು ಭೌತಿಕವಾಗಿ ಆಧ್ಯಾತ್ಮಿಕ ಮಾರ್ಗದತ್ತ ಸಾಗುತ್ತಿದ್ದರೆ ಭಾರತದಲ್ಲಿ ನಮ್ಮ ಋಷಿ ಮುನಿಗಳು ಮತ್ತು ಗುರುಗಳು ಸದಾ ಕಾಲ ನಮ್ಮ ಆಲೋಚನೆಗಳನ್ನು ಸಂಸ್ಕರಿಸುತ್ತಾ ಮತ್ತು ನಮ್ಮ ನಡತೆಯನ್ನು ಉತ್ತಮಗೊಳಿಸುತ್ತಾ ಬಂದಿದ್ದಾರೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಶ್ರೀ ನಾರಾಯಣ ಗುರುಗಳು ಆಧುನಿಕತೆಯ ಬಗ್ಗೆ ಮಾತನಾಡಿದ್ದಾರೆ. ಆದರೆ ಅವರು ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಶ್ರೀಮಂತಗೊಳಿಸಿದ್ದಾರೆ. ಅವರು ಶಿಕ್ಷಣ ಮತ್ತು ವಿಜ್ಞಾನದ ಬಗ್ಗೆಯೂ ಬೆಳಕು ಚೆಲ್ಲಿದರು. ಆದರೆ ಭಾರತದ ಧರ್ಮ, ನಂಬಿಕೆ ಮತ್ತು ಸಾವಿರ ವರ್ಷಗಳ ಹಿಂದಿನ ಸಂಪ್ರದಾಯಗಳ ವೈಭವ ಹೆಚ್ಚಿಸಲು ಎಂದಿಗೂ ಹಿಂಜರಿಯಲಿಲ್ಲ. ಶ್ರೀ ನಾರಾಯಣಗುರುಗಳು ಕೆಡಕುಗಳ ವಿರುದ್ಧ ಪ್ರಚಾರ ಮಾಡಿದರು ಮತ್ತು ಭಾರತಕ್ಕೆ ಅದರ ವಾಸ್ತವತೆಯ ಅರಿವು ಮೂಡಿಸಿದರು. “ಜಾತಿ ಹೆಸರಿನಲ್ಲಿ ನಡೆಯುತ್ತಿದ್ದ ತಾರತಮ್ಯದ ವಿರುದ್ಧ ಶ್ರೀ ನಾರಾಯಣ ಗುರು ಅವರು ತಾರ್ಕಿಕ ಮತ್ತು ವಾಸ್ತವಿಕ ಹೋರಾಟ ನಡೆಸಿದರು. ಇಂದು ನಾರಾಯಣ ಗುರೂಜಿ ಅವರ ಪ್ರೇರಣೆಯಿಂದ ದೇಶ ಬಡವರು, ದೀನ ದಲಿತರು, ಹಿಂದುಳಿದವರ ಸೇವೆ ಮಾಡುತ್ತಿದೆ ಮತ್ತು ಅವರ ಹಕ್ಕುಗಳನ್ನು ನೀಡುತ್ತಿದೆ” ದೇಶ ಇಂದು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಮಂತ್ರದೊಂದಿಗೆ ಮುನ್ನಡೆಯುತ್ತಿದೆ ಎಂದು ಹೇಳಿದರು.
ಶ್ರೀ ನಾರಾಯಣ ಗುರು ಅವರು ಆಮೂಲಾಗ್ರ ಚಿಂತಕ ಮತ್ತು ವಾಸ್ತವಿಕ ಸುಧಾರಕ. ಗುರೂಜಿ ಅವರು ಸದಾ ಕಾಲ ಸೌಹಾರ್ದತೆಯ ಚರ್ಚೆಯನ್ನು ಅನುಸರಿಸುತ್ತಿದ್ದರು ಮತ್ತು ಯಾವಾಗಲೂ ಇತರರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಇತರೊಂದಿಗೆ ಸೇರಿ ಕೆಲಸ ಮಾಡುವ ಮೂಲಕ ಅವರ ದೃಷ್ಟಿಕೋನವನ್ನು ಸಹಕಾರದ ಮೂಲಕ ತಿಳಿಸಿಕೊಡಲು ಪ್ರಯತ್ನಿಸುತ್ತಿದ್ದರು ಎಂದು ನೆನಪಿಸಿಕೊಂಡರು. ಸಮಾಜದಲ್ಲಿ ಸರಿಯಾದ ತರ್ಕದೊಂದಿಗೆ ಸ್ವತಃ ಸಮಾಜವೇ ಸ್ವಯಂ ಸುಧಾರಣೆಯ ದಿಕ್ಕಿನತ್ತ ಸಾಗುವ ವಾತಾವರಣವನ್ನು ಅವರು ನಿರ್ಮಿಸುತ್ತಿದ್ದರು. ಸಮಾಜ ಸುಧಾರಣೆಯ ಮಾರ್ಗದಲ್ಲಿ ಅವರು ನಡೆಯುತ್ತಿದ್ದರೆ, ಸಮಾಜದಲ್ಲಿ ಸ್ವಯಂ ಸುಧಾರಣೆಯ ಶಕ್ತಿ ಜಾಗೃತವಾಗುತ್ತಿತ್ತು. ಸಮಾಜದಲ್ಲಿ ಅಳವಡಿಸಿಕೊಂಡ ಅಭಿಯಾನ ಕುರಿತಂತೆ ಉದಾಹರಣೆ ನೀಡಿದ ಪ್ರಧಾನಮಂತ್ರಿ ಅವರು, ಸರ್ಕಾರ ಸರಿಯಾದ ರೀತಿಯಲ್ಲಿ ಅಭಿಯಾನದ ವಾತಾವರಣ ನಿರ್ಮಿಸಲು ಸಾಧ್ಯವಾಗಿದ್ದರಿಂದ ಪರಿಸ್ಥಿತಿಯೂ ಸಹ ವೇಗವಾಗಿ ಸುಧಾರಣೆ ಕಂಡಿತು ಎಂದರು.     

ಭಾರತೀಯರೆಲ್ಲರೂ ಕೇವಲ ಒಂದು ಜಾತಿ, ಅದು ಭಾರತೀಯತೆ. ನಾವು ಒಂದೇ ಧರ್ಮ – ಕರ್ತವ್ಯ ಮತ್ತು ಸೇವೆಯ ಧರ್ಮ. ನಮಗೆ ಒಂದೇ ದೇವರು – ತಾಯಿ ಭಾರತಮಾತೆ. ನಾರಾಯಣ ಗುರು ಅವರ ಉಪದೇಶ ಕೂಡ “ ಒಂದು ಜಾತಿ. ಒಂದು ಧರ್ಮ, ಒಂದು ದೇವರು” ಎಂಬುದಾಗಿತ್ತು, ಇದು ದೇಶ ಭಕ್ತಿಗೆ ಧಾರ್ಮಿಕ ಆಯಾಮ ಒದಗಿಸಿತ್ತು. “ಅಖಂಡ ಭಾರತೀಯರಿಗೆ ಜಗತ್ತಿನ ಯಾವ ಗುರಿಯೂ ಅಸಾಧ್ಯವಲ್ಲ ಎಂಬುದು ನಮಗೆಲ್ಲರಿಗೂ ಗೊತ್ತು” ಎಂದು ಹೇಳಿದರು.  

ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಆಧ್ಯಾತ್ಮಿಕ ತಳಹದಿಯನ್ನು ಹೊಂದಿದ ಸ್ವಾತಂತ್ರ್ಯ ಹೋರಾಟ ಕುರಿತು ವಿಶ್ಲೇಷಿಸಿದರು. “ನಮ್ಮ ಸ್ವಾತಂತ್ರ್ಯ ಹೋರಾಟ ಅಭಿವ್ಯಕ್ತಿಯ ಪ್ರತಿಭಟನೆ ಮತ್ತು ರಾಜಕೀಯ ತಂತ್ರಗಳಿಗೆ ಸೀಮಿತವಾಗಿಲ್ಲ. ಗುಲಾಮಗಿರಿಯ ಸರಪಳಿಯನ್ನು ಮುರಿಯುವ ಹೋರಾಟವಾಗಿದೆ.  ಸ್ವಾತಂತ್ರ ರಾಷ್ಟ್ರವಾಗಿ ನಾವು ಹೇಗೆ ಇರುತ್ತೇವೆ ಎನ್ನುವ ದೃಷ್ಟಿಕೋನದ ಮೂಲಕ ಇದನ್ನು ತಿಳಿಸಲಾಗಿದೆ. ನಾವು ಯಾವುದನ್ನು ವಿರೋಧಿಸುತ್ತೇವೆ ಎನ್ನುವುದು ಮುಖ್ಯವಲ್ಲ, ಬದಲಿಗೆ ನಾವು ಯಾವುದಕ್ಕಾಗಿ ನಿಲ್ಲುತ್ತೇವೆ ಎನ್ನುವುದು ಎಲ್ಲಕ್ಕಿಂತ ಮುಖ್ಯವಾಗಿದೆ” ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೈತ್ಯ ಯುಗ ನಿರ್ಮಾಣ ಮಾಡಲು ನಡೆದ ಸಭೆಗಳನ್ನು ಪ್ರಧಾನಮಂತ್ರಿ ಅವರು ಸ್ಮರಿಸಿಕೊಂಡರು. ಗುರುದೇವ್ ರವೀಂದ್ರನಾಥ‍್ ಟ್ಯಾಗೋರ್, ಗಾಂಧೀಜಿ ಮತ್ತು ಸ್ವಾಮಿ ವಿವೇಕಾನಂದರು ಹಾಗೂ ಇತರೆ ಹಲವು ಗಣ್ಯರು ವಿವಿಧ ಸಂದರ್ಭಗಳಲ್ಲಿ ಶ್ರೀ ನಾರಾಯಣ ಗುರು ಅವರನ್ನು ಭೇಟಿ ಮಾಡಿದ್ದರು. ಈ ಸಮಯದಲ್ಲಿ ಭಾರತದ ಪುನರ್ ನಿರ್ಮಾಣದ ಬೀಜಗಳನ್ನು ಬಿತ್ತಲಾಗಿದೆ. ಈ ಪಯಣದಲ್ಲಿ ಅದರ ಪಲಿತಾಂಶ ಪ್ರಸ್ತುತ ಭಾರತ ಮತ್ತು 75 ವರ್ಷಗಳ ಈ ಅವಧಿಯಲ್ಲಿ ಗೋಚರಿಸುತ್ತಿದೆ ಎಂದು ಹೇಳಿದರು. ಹತ್ತು ವರ್ಷಗಳಲ್ಲಿ ಶಿವಗಿರಿ ಯಾತ್ರೆ ಮತ್ತು 25 ವರ್ಷಗಳಲ್ಲಿ ಭಾರತದ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವ ಆಚರಿಸಲಿದ್ದೇವೆ. ಈ ಸಮಾರಂಭದ ವೇಳೆಗೆ ನಮ್ಮ ಸಾಧನೆಗಳು ಮತ್ತು ದೃಷ್ಟಿಕೋನ ಜಾಗತಿಕ ಆಯಾಮ ಹೊಂದಿರಬೇಕು ಎಂದು ಹೇಳಿದರು.   

ಶಿವಗಿರಿ ತೀರ್ಥಯಾತ್ರೆ ಪ್ರತಿವರ್ಷ ಡಿಸೆಂಬರ್ 30 ರಿಂದ ಜನವರಿ 1 ರ ವರೆಗೆ ತಿರುವನಂತಪುರಂನ ಶಿವಗಿರಿಯಲ್ಲಿ ನಡೆಯುತ್ತದೆ. ಶ್ರೀ ನಾರಾಯಣ ಗುರು ಅವರ ಪ್ರಕಾರ ಯಾತ್ರಾರ್ಥಿಗಳು ಜನರಿಗೆ ಸಮಗ್ರ ವಿಧಾನದಲ್ಲಿ ಜ್ಞಾನವನ್ನು ಪಸರಿಸಬೇಕು ಮತ್ತು ಯಾತ್ರಾರ್ಥಿಗಳು ಸರ್ವಾಂಗೀಣ ಅಭಿವೃದ್ಧಿ ಮತ್ತು ಸಮೃದ್ಧಿಗೆ ನೆರವು ನೀಡಬೇಕು. ಹೀಗಾಗಿ ಯಾತ್ರಾರ್ಥಿಗಳು ಶಿಕ್ಷಣ, ಸ್ವಚ್ಛತೆ, ಧರ್ಮನಿಷ್ಠೆ, ಕರಕುಶಲ, ವಾಣಿಜ್ಯ ಮತ್ತು ವ್ಯಾಪಾರ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಂಘಟಿತ ಪ್ರಯತ್ನದಂತಹ ಎಂಟು ಅಂಶಗಳನ್ನು ಕೇಂದ್ರೀಕರಿಸಬೇಕಾಗಿದೆ ಎಂದರು.  

1933 ರಲ್ಲಿ ಬೆರಳೆಣಿಕೆಯ ಭಕ್ತರೊಂದಿಗೆ ಈ ಯಾತ್ರೆ ಆರಂಭವಾಗಿತ್ತು. ಆದರೆ ಈಗ ದಕ್ಷಿಣ ಭಾರತದ ಪ್ರಮುಖ ಘಟನೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ತೀರ್ಥಯಾತ್ರೆಯಲ್ಲಿ ಪಾಲ್ಗೊಳ್ಳಲು ಪ್ರಪಂಚದಾದ್ಯಂತ ಭಕ್ತರು ಜಾತಿ, ನಂಬಿಕೆ, ಧರ್ಮ ಮತ್ತು ಭಾಷೆಯ ಬೇಧವಿಲ್ಲದೇ ಶಿವಗಿರಿಗೆ ಭೇಟಿ ನೀಡುತ್ತಾರೆ ಎಂದು ಹೇಳಿದರು.   

ಶ್ರೀ ನಾರಾಯಣ ಗುರುಗಳು ಎಲ್ಲಾ ಧರ್ಮಗಳ ತತ್ವಗಳನ್ನು ಸಮಚಿತ್ತದಿಂದ ಮತ್ತು ಸಮಾನ ಗೌರವದಿಂದ ಬೋಧಿಸಲು ಸೂಕ್ತ ಸ್ಥಳವನ್ನು ಕಲ್ಪಿಸಿದ್ದರು. ಈ ದೃಷ್ಟಿಕೋನವನ್ನು ಶಿವಗಿರಿಯ ಬ್ರಹ್ಮ ವಿದ್ಯಾಲಯ ಸಾಕಾರಗೊಳಿಸುತ್ತಿದೆ. ಬ್ರಹ್ಮ ವಿಶ್ವವಿದ್ಯಾಲಯ ಶ್ರೀ ನಾರಾಯಣಗುರುಗಳ ಕೃತಿಗಳು ಮತ್ತು ಪ್ರಪಂಚದ ಎಲ್ಲಾ ಪ್ರಮುಖ ಧರ್ಮಗ್ರಂಥಗಳನ್ನು ಒಳಗೊಂಡಂತೆ 7 ವರ್ಷಗಳ ಭಾರತೀಯ ತತ್ವಶಾಸ್ತ್ರದ ಕೋರ್ಸ್ ಅನ್ನು ನಡೆಸುತ್ತಿದೆ ಎಂದರು.  

 

 

***



(Release ID: 1820197) Visitor Counter : 132