ಪ್ರಧಾನ ಮಂತ್ರಿಯವರ ಕಛೇರಿ

ಏಪ್ರಿಲ್ 24 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಆಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಮಂತ್ರಿಯವರು ಜಮ್ಮುಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ


20,000 ಕೋಟಿ ರೂ.ಗೂ ಹೆಚ್ಚು ಮೊತ್ತದ ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ

ಜಮ್ಮು ಮತ್ತು ಕಾಶ್ಮೀರದ ಪ್ರದೇಶಗಳನ್ನು ಸಮೀಪಗೊಳಿಸುವ ಬನಿಹಾಲ್ ಖಾಜಿಗುಂಡ್ ರಸ್ತೆ ಸುರಂಗವನ್ನು ಪ್ರಧಾನಿಯವರು ಉದ್ಘಾಟಿಸಲಿದ್ದಾರೆ

ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇಯ ಮೂರು ರಸ್ತೆ ಪ್ಯಾಕೇಜ್‌ಗಳಿಗೆ ಮತ್ತು ರಾಟಲ್‌ ಮತ್ತು ಕ್ವಾರ್ ಜಲವಿದ್ಯುತ್ ಯೋಜನೆಗಳಿಗೆ ಪ್ರಧಾನಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ

ದೇಶದ ಪ್ರತಿ ಜಿಲ್ಲೆಯಲ್ಲಿ 75 ಜಲಮೂಲಗಳನ್ನು ಅಭಿವೃದ್ಧಿಪಡಿಸುವ ಮತ್ತು ಪುನರುಜ್ಜೀವನಗೊಳಿಸುವ ಉದ್ದೇಶದ ಅಮೃತ ಸರೋವರ ಯೋಜನೆಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ

ಪ್ರಧಾನಮಂತ್ರಿಯವರು ಮುಂಬೈಗೆ ಭೇಟಿ ನೀಡಲಿದ್ದು, ಅಲ್ಲಿ ಅವರಿಗೆ ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಅಸಾಧಾರಣ ಕೊಡುಗೆಗಾಗಿ ಮೊದಲ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು

Posted On: 23 APR 2022 10:46AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 24 ಏಪ್ರಿಲ್ 2022 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಆಚರಣೆಯಲ್ಲಿ ಭಾಗವಹಿಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಅಂದು ಬೆಳಿಗ್ಗೆ 11.30 ಕ್ಕೆ ದೇಶಾದ್ಯಂತದ ಎಲ್ಲಾ ಗ್ರಾಮ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಾಂಬಾ ಜಿಲ್ಲೆಯ ಪಲ್ಲಿ ಪಂಚಾಯತ್ ಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಸುಮಾರು 20,000 ಕೋಟಿ ರೂಪಾಯಿಗಳ ಹಲವು ಅಭಿವೃದ್ಧಿ ಉಪಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಿಯವರು ನೆರವೇರಿಸಲಿದ್ದಾರೆ. ಅವರು ಅಮೃತ ಸರೋವರ ಉಪಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಪ್ರಧಾನಿಯವರು, ಸಂಜೆ 5 ಗಂಟೆಗೆ ಪ್ರಧಾನಮಂತ್ರಿಯವರು ಮುಂಬೈನಲ್ಲಿ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ, ಅಲ್ಲಿ ಅವರು ಮೊದಲನೇ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನಿ
ಆಗಸ್ಟ್ 2019 ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸಾಂವಿಧಾನಿಕ ಸುಧಾರಣೆಗಳನ್ನು ಪರಿಚಯಿಸಿದಾಗಿನಿಂದ, ಆಡಳಿತವನ್ನು ಗಣನೀಯವಾಗಿ ಸುಧಾರಿಸಲು ಮತ್ತು ಈ ಪ್ರದೇಶದ ಜನರಿಗೆ ಅಭೂತಪೂರ್ವ ವೇಗದಲ್ಲಿ ಜೀವನ ಸೌಕರ್ಯವನ್ನು ಹೆಚ್ಚಿಸಲು ವ್ಯಾಪಕ ಶ್ರೇಣಿಯ ಸುಧಾರಣೆಗಳತ್ತ ಸರ್ಕಾರವು ಗಮನಹರಿಸಿದೆ. ಈ ಭೇಟಿಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ಮತ್ತು ಶಂಕುಸ್ಥಾಪನೆ ಮಾಡಲಾಗುತ್ತಿರುವ ಯೋಜನೆಗಳು ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ, ಸಂಚಾರ ವ್ಯವಸ್ಥೆಯ ಸುಲಭತೆ ಮತ್ತು ಈ ಪ್ರದೇಶದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
3100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬನಿಹಾಲ್ ಖಾಜಿಗುಂಡ್ ರಸ್ತೆ ಸುರಂಗವನ್ನು ಪ್ರಧಾನಿಯವರು ಉದ್ಘಾಟಿಸಲಿದ್ದಾರೆ. 8.45 ಕಿಮೀ ಉದ್ದದ ಸುರಂಗವು ಬನಿಹಾಲ್ ಮತ್ತು ಖಾಜಿಗುಂಡ್ ನಡುವಿನ ರಸ್ತೆಯ ಅಂತರವನ್ನು 16 ಕಿ.ಮೀ. ಕಡಿಮೆ ಮಾಡುತ್ತದೆ ಮತ್ತು ಪ್ರಯಾಣದ ಸಮಯವನ್ನು ಸುಮಾರು ಒಂದೂವರೆ ಗಂಟೆಯಷ್ಟು ಕಡಿಮೆ ಮಾಡುತ್ತದೆ. ಇದು ಅವಳಿ ಟ್ಯೂಬ್ ಸುರಂಗವಾಗಿದೆ - ಪ್ರಯಾಣದ ಪ್ರತಿಯೊಂದು ದಿಕ್ಕಿಗೆ ಒಂದು. ಅವಳಿ ಟ್ಯೂಬ್‌ಗಳು ನಿರ್ವಹಣೆ ಮತ್ತು ತುರ್ತು ಸ್ಥಳಾಂತರಿಸುವಿಕೆಗಾಗಿ ಪ್ರತಿ 500 ಮೀ.ಗೆ ಕ್ರಾಸ್ ಪ್ಯಾಸೇಜ್ ಮೂಲಕ ಪರಸ್ಪರ ಸಂಪರ್ಕ ಹೊಂದಿವೆ. ಈ ಸುರಂಗವು ಜಮ್ಮು ಮತ್ತು ಕಾಶ್ಮೀರದ ನಡುವೆ ಎಲ್ಲಾ ಋತುವಿನಲ್ಲೂ ಸಂಪರ್ಕವನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ ಮತ್ತು ಎರಡು ಪ್ರದೇಶಗಳನ್ನು ಹತ್ತಿರಕ್ಕೆ ತರುತ್ತದೆ.
7500 ಕೋಟಿಗೂ ರೂ. ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇಯ ಮೂರು ರಸ್ತೆ ಪ್ಯಾಕೇಜ್‌ಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವುಗಳೆಂದರೆ, 4/6 ಮಾರ್ಗ ಪ್ರವೇಶ ನಿಯಂತ್ರಿತ ದೆಹಲಿ-ಕತ್ರಾ-ಅಮೃತಸರ ಎಕ್ಸ್‌ಪ್ರೆಸ್‌ವೇ ನಿರ್ಮಾಣ: ಎನ್‌ ಹೆಚ್-44 ರ ಬಲ್ಸುವಾದಿಂದ ಗುರ್ಹಾ ಬೈಲ್‌ದಾರನ್, ಹೀರಾನಗರ; ಗುರ್ಹಾ ಬೈಲ್ದಾರನ್, ಹೀರಾನಗರದಿಂದ ಜಖ್, ವಿಜಯಪುರ ಮತ್ತು ಜಮ್ಮುವಿನಿಂದ ಜಮ್ಮುವಿಮಾನ ನಿಲ್ದಾಣಕ್ಕೆ ತ್ವರಿತ ಸಂಪರ್ಕದೊಂದಿಗೆ ಜಖ್, ವಿಜಯಪುರ, ಕುಂಜ್ವಾನಿ, 
ಪ್ರಧಾನಮಂತ್ರಿ ಅವರು ರಾಟಲ್ ಮತ್ತು ಕ್ವಾರ್ ಜಲವಿದ್ಯುತ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕಿಶ್ತ್ವಾರ್ ಜಿಲ್ಲೆಯ ಚೆನಾಬ್ ನದಿಯಲ್ಲಿ ಸುಮಾರು 5300 ಕೋಟಿ ರೂಪಾಯಿ ವೆಚ್ಚದಲ್ಲಿ 850 ಮೆ.ವ್ಯಾ. ರಾಟಲ್ ಜಲವಿದ್ಯುತ್ ಯೋಜನೆಯನ್ನು ನಿರ್ಮಿಸಲಾಗುವುದು. 540 ಮೆ.ವ್ಯಾ. ಸಾಮರ್ಥ್ಯದ ಕ್ವಾರ್ ಜಲವಿದ್ಯುತ್ ಯೋಜನೆಯನ್ನು ಕಿಶ್ತ್ವಾರ್ ಜಿಲ್ಲೆಯ ಚೆನಾಬ್ ನದಿಯ ಮೇಲೆ 4500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಎರಡೂ ಯೋಜನೆಗಳು ಈ ಪ್ರದೇಶದ ವಿದ್ಯುತ್ ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡುತ್ತವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಜನೌಷಧಿ ಕೇಂದ್ರಗಳ ಜಾಲವನ್ನು ಮತ್ತಷ್ಟು ವಿಸ್ತರಿಸಲು ಮತ್ತು ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಜೆನೆರಿಕ್ ಔಷಧಿಗಳು ಲಭ್ಯವಾಗುವಂತೆ ಮಾಡಲು, 100 ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇವುಗಳನ್ನು ಪ್ರಧಾನ ಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಕೇಂದ್ರಗಳು ಕೇಂದ್ರಾಡಳಿತ ಪ್ರದೇಶದ ದೂರದ ಮೂಲೆಗಳಲ್ಲಿವೆ. ಪ್ರಧಾನಿವರು ಪಲ್ಲಿಯಲ್ಲಿ 500 ಕಿ.ವ್ಯಾ. ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರವನ್ನು ಉದ್ಘಾಟಿಸಲಿದ್ದಾರೆ, ಇದು ದೇಶದ ಮೊದಲ ಇಂಗಾಲದ ತಟಸ್ಥ ಪಂಚಾಯತ್ ಆಗಲಿದೆ.
ಪ್ರಧಾನಮಂತ್ರಿಯವರು ಯೋಜನೆಯಡಿ ಫಲಾನುಭವಿಗಳಿಗೆ ಸ್ವಾಮಿತ್ವ ಕಾರ್ಡ್‌ಗಳನ್ನು ಹಸ್ತಾಂತರಿಸಲಿದ್ದಾರೆ. ರಾಷ್ಟ್ರೀಯ ಪಂಚಾಯತ್ ರಾಜ್ ದಿನದಂದು ವಿವಿಧ ವಿಭಾಗಗಳಲ್ಲಿ ನೀಡಲಾಗುವ ಪ್ರಶಸ್ತಿಗಳನ್ನು ತಮ್ಮ ಸಾಧನೆಗಳಿಗಾಗಿ ವಿಜೇತರಾದ ಪಂಚಾಯತ್‌ಗಳಿಗೆ ಪ್ರಶಸ್ತಿ ಮೊತ್ತವನ್ನು ವರ್ಗಾಯಿಸುತ್ತಾರೆ. ಪ್ರಧಾನಮಂತ್ರಿ ಅವರು ಈ ಪ್ರದೇಶದ ಗ್ರಾಮೀಣ ಪರಂಪರೆಯನ್ನು ಬಿಂಬಿಸುವ ಐ ಎನ್‌ ಟಿ ಎ ಸಿ ಹೆಚ್‌ ಫೋಟೋ ಗ್ಯಾಲರಿ ಮತ್ತು ಭಾರತದಲ್ಲಿ ಆದರ್ಶ ಸ್ಮಾರ್ಟ್ ಹಳ್ಳಿಗಳನ್ನು ರಚಿಸಲು ವಿನ್ಯಾಸಗೊಳಿಸಲಾದ ಗ್ರಾಮೀಣ ಉದ್ಯಮಶೀಲತೆ ಆಧಾರಿತ ಮಾದರಿಯಾದ ನೀಕಿಯಾ ಸ್ಮಾರ್ಟ್‌ಪುರ ಕ್ಕೆ ಭೇಟಿ ನೀಡಲಿದ್ದಾರೆ.
ಅಮೃತ ಸರೋವರ
ಜಲಮೂಲಗಳ ಪುನರುಜ್ಜೀವನವನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ, ಪ್ರಧಾನಿಯವರು ಜಮ್ಮು ಮತ್ತು ಕಾಶ್ಮೀರ ಭೇಟಿಯ ಸಮಯದಲ್ಲಿ, ಅಮೃತ ಸರೋವರ ಎಂಬ ಹೊಸ ಉಪಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇದು ದೇಶದ ಪ್ರತಿ ಜಿಲ್ಲೆಯಲ್ಲಿ 75 ಜಲಮೂಲಗಳನ್ನು ಅಭಿವೃದ್ಧಿಪಡಿಸುವ ಮತ್ತು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿದೆ. ಇದು ಆಜಾದಿ ಕಾ ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ಸರ್ಕಾರದ ಮತ್ತೊಂದು ಕೊಡುಗೆಯಾಗಿದೆ.
ಮುಂಬೈನಲ್ಲಿ ಪ್ರಧಾನಿ
ಪ್ರಧಾನಮಂತ್ರಿಯವರು ಮುಂಬೈನಲ್ಲಿ ಸಂಜೆ 5 ಗಂಟೆಗೆ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿಯವರಿಗೆ ಮೊದಲ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಭಾರತ ರತ್ನ ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥ ಸ್ಥಾಪಿಸಲಾಗಿರುವ ಈ ಪ್ರಶಸ್ತಿಯನ್ನು ರಾಷ್ಟ್ರ ನಿರ್ಮಾಣಕ್ಕೆ ಅನುಕರಣೀಯ ಕೊಡುಗೆ ನೀಡಿದ ವ್ಯಕ್ತಿಗೆ ಪ್ರತಿ ವರ್ಷ ನೀಡಲಾಗುವುದು.

***



(Release ID: 1819341) Visitor Counter : 196