ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿ ವಿಜೇತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಂವಾದ


ಭಾರತದ ನಾಗರಿಕತೆ, ಸಂಸ್ಕೃತಿ, ವಿಶ್ವಾಸ ಹಾಗೂ ಧರ್ಮಕ್ಕೆ ಗುರುಗೋವಿಂದ್‌ ಸಿಂಗ್‌ ಅವರ ಶಿಷ್ಯ ಬಳಗದ ಬಲಿದಾನವು ಅನೂಹ್ಯವಾದುದು

ಇಂದು ಭಾರತೀಯ ಯುವಜನತೆಯನ್ನು ನೋಡಿದಾಗ ಹೆಮ್ಮೆಯೆನಿಸುತ್ತದೆ. ಸ್ಟಾರ್ಟ್‌ಅಪ್‌ ನ ಈ ಜಗತ್ತಿನಲ್ಲಿ ಮುಂಚೂಣಿಯಲ್ಲಿರುವುದು ನಮ್ಮ ಹೆಮ್ಮೆಯಾಗಿದೆ. ನವ್ಯ ಪ್ರಯೋಗಗಳನ್ನು ಮಾಡುವಲ್ಲಿ, ಹೊಸತನವನ್ನು ತರುವಲ್ಲಿ ಭಾರತೀಯ ಯುವಜನತೆಯ ಉತ್ಸಾಹ, ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುವ ಹೊಣೆಗಾರಿಕೆಯನ್ನು ಒಪ್ಪಿರುವುದು ಕಂಡಾಗ ಹೆಮ್ಮೆಯೆನಿಸುತ್ತದೆ

ಇದು ನವಭಾರತ, ಹೊಸತನದ ಪ್ರಯೋಗಗಳಿಗೆ ಹಿಂಜರಿಯದ ದೇಶ. ಧೈರ್ಯ ಮತ್ತು ದೃಢನಿಶ್ಚಯ ನಮ್ಮ ಭಾರತದ ಹೊಸ ಗುರುತಾಗಿವೆ

ಭಾರತೀಯ ಮಕ್ಕಳು ಲಸಿಕಾಕರಣದ ಈ ಹಂತದಲ್ಲಿ ಅವರ ಆಧುನಿಕ ಮತ್ತು ವೈಜ್ಞಾನಿಕ ಮನೋಭಾವವನ್ನು ತೋರಿದ್ದಾರೆ. ಈ 20 ದಿನಗಳಲ್ಲಿ ನಲ್ವತ್ತ ದಶಲಕ್ಷ ಮಕ್ಕಳು ಕೊರೊನಾ ಲಸಿಕೆಯನ್ನು ಪಡೆದುಕೊಂಡಿದ್ದಾರೆ

Posted On: 24 JAN 2022 1:45PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪುರಸ್ಕೃತರೊಂದಿಗೆ ಇಂದು ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂವಾದದಲ್ಲಿ ಪಾಲ್ಗೊಂಡರು. ಬ್ಲಾಕ್‌ಚೈನ್‌ ತಂತ್ರಜ್ಞಾನವನ್ನು ಬಳಸಿಕೊಂಡು 2021 ಹಾಗೂ 2022 ಪುರಸ್ಕೃತರಿಗೆ ಡಿಜಿಟಲ್‌ ಪ್ರಮಾಣಪತ್ರಗಳನ್ನೂ ವಿತರಿಸಿದರು. ಡಿಜಿಟಲ್‌ ಪ್ರಮಾಣಪತ್ರಗಳನ್ನು ನೀಡಲು, ಮೊದಲ ಸಲ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕೇಂದ್ರ ಸಚಿವಾಲಯದ ಸಚಿವೆ ಸ್ಮೃತಿ ಇರಾನಿ ಮತ್ತು ರಾಜ್ಯ ಸಚಿವರಾದ ಡಾ. ಮುನಿಪಾರಾ ಮಹೇಂದ್ರಭಾಯಿ ಈ ಸಂದರ್ಭದಲ್ಲಿ ಹಾಜರಿದ್ದರು.

ಮಧ್ಯಪ್ರದೇಶದ ಇಂದೋರ್‌ನ ಮಾಸ್ಟರ್‌ ಅವಿ ಶರ್ಮಾ ಜೊತೆಗೆ ಮಾತನಾಡುತ್ತ, ರಾಮಾಯಣದ ಕುರಿತು ಹಲವಾರು ಅಂಶಗಳನ್ನು ಅರಿತಿರುವ ರಹಸ್ಯವನ್ನು ಕೇಳಿದರು. ಮಾಸ್ಟರ್‌ ಅವಿ ಶರ್ಮಾ, ಲಾಕ್‌ಡೌನ್‌ ಸಮಯದಲ್ಲಿ ರಾಮಾಯಣವನ್ನು ಪ್ರಸಾರ ಮಾಡಿದ ನಿರ್ಧಾರವು ತಮ್ಮ ಸಾಧನೆಗೆ ಪ್ರೇರಣೆಯಾಯಿತು. ಅವಿ ರಾಮಾಯಣದ ಕುರಿತು ತಮ್ಮ ರಚನೆಯ ಹಲವು ಸಾಲುಗಳನ್ನೂ ವಾಚಿಸಿದರು.

ಪ್ರಧಾನಿಗಳು ತಮ್ಮ ಬಾಲ್ಯದಲ್ಲಿ ಸುಶ್ರಿ ಉಮಾ ಭಾರತಿ ಅವರ ಭಾಷಣದಿಂದ ಪ್ರಭಾವಿತರಾದ ಸಂದರ್ಭವನ್ನು ವಿವರಿಸಿದರು. ಉಮಾ ಭಾರತಿಯವರಲ್ಲಿನ ಆಳವಾದ ಅಧ್ಯಾತ್ಮಿಕ ಜ್ಞಾನ ಹಾಗೂ ಅವರ ಅರಿವು ಕಂಡು ಸೋಜಿಗರಾಗಿದ್ದನ್ನು ವಿವರಿಸಿದರು. ಮಧ್ಯಪ್ರದೇಶದ ಮಣ್ಣಿನಲ್ಲಿಯೇ ದೇಶಕ್ಕೆ ಅಮೂಲ್ಯವಾದ ಪ್ರತಿಭೆಗಳನ್ನು ಕೊಡುವ ಸೊಗಡಿದೆ ಎಂದು ಬಣ್ಣಿಸಿದರು. ಅವಿಶರ್ಮಾ ಅವರ ಕೃತಿ ರಚನೆಯು ಈ ದೇಶದ ಮಕ್ಕಳಿಗೆ ಬಹುದೊಡ್ಡ ಪ್ರೇರಣೆಯಾಗಿದೆ. ದೊಡ್ಡ ಸಾಧನೆಗಳಿಗೆ ವಯಸ್ಸು ಯಾವತ್ತೂ ಚಿಕ್ಕದಾಗಿರುವುದಿಲ್ಲ ಎಂದೂ ಹೇಳಿದರು.

ಕರ್ನಾಟಕದ ರೆಮೊನಾ ಎವೆತ್ತೆ ಪೆರೆರಾ ಜೊತೆಗೆ ಸಂವಾದಕ್ಕೆ ಇಳಿದ ಮೋದಿ ಅವರು ನೃತ್ಯದ ಕುರಿತು ರೆಮೊನಾ ಆಸಕ್ತಿ ತಳೆದ ಬಗೆಯನ್ನು ವಿಚಾರಿಸಿದರು. ಈ ಸಾಧನೆಯ ಹಾದಿಯಲ್ಲಿ ರೆಮೊನಾ ಎದುರಿಸಿದ ಅಡೆತಡೆಗಳ ಕುರಿತು ವಿಚಾರಿಸಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಅವರು, ರೆಮೊನಾ ಅವರ ತಾಯಿ, ಎಲ್ಲ ಸಾಮಾಜಿಕ ಪ್ರತಿರೋಧಗಳನ್ನು ನಿರ್ಲಕ್ಷಿಸಿ, ಮಗಳ ಆಸಕ್ತಿ ಅಭಿರುಚಿಯನ್ನು ಬೆಳೆಸುವಲ್ಲಿ ತೋರಿದ ಸ್ಥೈರ್ಯವನ್ನೂ ಮೆಚ್ಚಿಕೊಂಡರು. ಮಗಳ ಕನಸುಗಳನ್ನು ನನಸಾಗಿಸುವಲ್ಲಿ ಅವರು ತೋರಿದ ಆಸ್ಥೆಯನ್ನು ಮೆಚ್ಚಿಕೊಂಡರು. ಭಾರತೀಯ ನೃತ್ಯ ಪ್ರಕಾರದಲ್ಲಿ ರೆಮೊನಾಳ ಸಾಧನೆ ಅವಳ ವಯಸ್ಸಿಗೂ ಮೀರಿದ್ದಾಗಿದೆ. ಕಲೆಯು ಭಾರತೀಯರ ಹಾಗೂ ದೇಶದ ಅಂತಃಸತ್ವವನ್ನು ಅಭಿವ್ಯಕ್ತಿಸುವ ಕಲೆಯಾಗಿದೆ ಎಂದು ಶ್ಲಾಘಿಸಿದರು.

ತ್ರಿಪುರಾದ ಕುಮಾರಿ ಪುಹಾಬಿ ಚಕ್ರವರ್ತಿ ಅವರೊಂದಿಗೆ ಮಾತನಾಡುತ್ತ, ಕೋವಿಡ್‌ ಸಂಬಂಧಿ ನೂತನ ಆವಿಷ್ಕಾರದ ಕುರಿತು ವಿಚಾರಿಸಿದರು. ಪುಹಾಬಿ ಕ್ರೀಡಾ ಪಟುಗಳಿಗಾಗಿ ವಿನ್ಯಾಸಗೊಳಿಸಿದ ಫಿಟ್ನೆಸ್‌ ಆ್ಯಪ್‌ ಕುರಿತು ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದರು. ಈ ನಾವೀನ್ಯ ಪ್ರಯೋಗಗಳಿಗೆ ಶಾಲೆಯಲ್ಲಿ ದೊರೆಯುವ ಬೆಂಬಲ, ಸ್ನೇಹಿತರ ಹಾಗೂ ಪಾಲಕರು ನೀಡುವ ಪ್ರೋತ್ಸಾಹದ ಕುರಿತು ವಿಚಾರಿಸಿಕೊಂಡರು. ಕ್ರೀಡೆಯ ಜೊತೆಜೊತೆಗೆ ಆ್ಯಪ್‌ ಅಭಿವೃದ್ಧಿಪಡಿಸಲು ಸಮಯ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆಯೂ ಅವರು ಮಾಹಿತಿ ಪಡೆದರು.

ಬಿಹಾರಿನ ಪಶ್ಚಿಮ ಚಂಪಾಪರಣದ ಧೀರಜ್‌ ಕುಮಾರ್‌ ಜೊತೆಗೆ ಮಾತನಾಡುತ್ತ, ಧೀರಜ್‌ನ ಸಾಹಸಗಾಥೆಯ ವಿವರಗಳನ್ನು ಪಡೆದುಕೊಂಡರು. ಮೊಸಳೆದಾಳಿಯಲ್ಲಿ ತನ್ನ ಸಹೋದರರನ್ನು ಅಪಾಯದಿಂದ ಪಾರು ಪಾಡಿದ ಕತೆಯನ್ನು ಹೇಳಿದರು. ಮೊಸಳೆಯ ಬಾಯಿಂದ ತಮ್ಮನನ್ನು ಬದುಕುಳಿಸುವ ಸಂಘರ್ಷದ ಸಮಯದಲ್ಲಿ ಧೀರಜ್‌ ಯಾವ ಭಾವವನ್ನು ತಳೆದಿದ್ದರು, ಹೇಗನಿಸಿತ್ತು, ಮತ್ತು ನಂತರ ಈ ಸಾಹಸದಿಂದ ಬಂದ ಜನಪ್ರಿಯತೆಯನ್ನು ಕಂಡಾಗ ಏನೆನಿಸಿತು ಎಂದು ಕೇಳಿದರು. ಪ್ರಧಾನಿಗಳು ಧೀರಜ್‌ನ ಮನೋಸ್ಥೈರ್ಯ ಹಾಗೂ ಸಮಯಪ್ರಜ್ಞೆಯನ್ನು ಕೊಂಡಾಡಿದರು. ಭಾರತೀಯ ಸೇನೆ ಸೇರಿ ದೇಶ ಸೇವೆಯನ್ನು ಮಾಡುವ ಬಯಕೆಯನ್ನು ಧೀರಜ್‌ ಪ್ರಧಾನಿಯೊಂದಿಗೆ ಹಂಚಿಕೊಂಡರು.

ಪಂಜಾಬಿನ ಮೀಧಾಂಶ್‌ ಕುಮಾರ್‌ ಗುಪ್ತಾ ಅವರನ್ನು ಮಾತನಾಡಿಸಿದ ಪ್ರಧಾನಿ ನರೇಂದ್ರ ಮೋದಿ, ಕೋವಿಡ್‌ಗೆ ಸಂಬಂಧಿಸಿದ ಆ್ಯಪ್‌ ಅಭಿವೃದ್ಧಿಪಡಿಸಿದ ಅನುಭವಗಳನ್ನು ಕೇಳಿದರು.  ನಂತರ ಮೀಧಾಂಶ್‌ ಅಂತಹ ಹುಡುಗರು ಇದ್ದಾಗ ಸರ್ಕಾರವು ಉದ್ಯಮಶೀಲತೆಗೆ ನೀಡುತ್ತಿರುವ ಪ್ರೋತ್ಸಾಹ ಫಲದಾಯಕವಾಗುತ್ತಿದೆ ಎನಿಸುತ್ತದೆ. ಉದ್ಯೋಗಾಕಾಂಕ್ಷಿಗಳಾಗಿ ಅಲೆಯುವ ಬದಲು, ಉದ್ಯೋಗದಾತರಾಗಿ ಬದಲಾಗುತ್ತಿರುವುದು ಶ್ಲಾಘನೀಯ ಎಂದರು.

ಚಂಡೀಗಢದ ಕುಮಾರಿ ತಾರುಶಿ ಗೌರ್‌ ಜೊತೆಗೆ ಮಾತನಾಡುತ್ತ, ಕ್ರೀಡೆ ಮತ್ತು ಓದಿನ ನಡುವೆ ಸಮತೋಲನ ಸಾಧಿಸುವ ಬಗೆಯನ್ನು ಕೇಳಿದರು. ಬಾಕ್ಸರ್‌ ಮೇರಿ ಕೋಮ್‌ ತಾರುಷಿಗೆ ಹೇಗೆ ಆದರ್ಶ ಮತ್ತು ಮಾದರಿ ವ್ಯಕ್ತಿಯಾಗಿದ್ದಾರೆ ಎಂದು ವಿಚಾರಿಸಿಕೊಂಡರು. ಅದಕ್ಕೆ ತಾರುಷಿ, ಮೇರಿ ಕೋಮ್‌ ಅವರು ಕ್ರೀಡಾಳು ಆಗಿ ಹಾಗೂ ತಾಯಿ ಆಗಿ ಜೀವನವನ್ನು ಸಮತೋಲನದಿಂದ ನಡೆಸಿಕೊಂಡು ಹೋಗುವುದು ಆದರ್ಶಪ್ರಾಯವಾಗಿದೆ. ಮೇರಿಕೋಮ್‌ ಅವರ ಬದ್ಧತೆ ಹಾಗೂ ಅವರ ಕೌಶಲಗಳು ತಮಗೆ ಆದರ್ಶಪ್ರಾಯವಾಗಿವೆ ಎಂದು ತಿಳಿಸಿದರು. ಕ್ರೀಡಾಳುಗಳು ಪ್ರತಿ ಹಂತದಲ್ಲಿಯೂ ವಿಜೇತರಾಗಿ ಹೊರಹೊಮ್ಮಲು, ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಸರ್ಕಾರ ಕೈಗೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದರು.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಅಮೂಲ್ಯವಾದ ಅವಧಿಯಲ್ಲಿ ಈ ಪ್ರಶಸ್ತಿಗಳ ಮಹತ್ವ ಇನ್ನೂ ಹೆಚ್ಚಿದೆ ಎಂದು ಸಮಾರಂಭದಲ್ಲಿ ಯುವಜನತೆಯನ್ನು ಉದ್ದೇಶಿಸಿ ಮಾತನಾಡುತ್ತ, ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಭೂತಕಾಲದಿಂದ ಶಕ್ತಿಯನ್ನು, ಪ್ರೇರಣೆಯನ್ನು ಪಡೆದು, ನಮ್ಮನ್ನು ದೇಶಕ್ಕಾಗಿ ಸಮರ್ಪಿಸಿಕೊಳ್ಳಬೇಕು. ಮುಂಬರಲಿರುವ 25 ವರ್ಷಗಳು ನಮ್ಮ ಅಭಿವೃದ್ಧಿಯ ಅಮೃತಕಾಲವಾಗಿದೆ ಎಂದು ಬಣ್ಣಿಸಿದರು. ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಅಂಗವಾಗಿ ದೇಶದ ಎಲ್ಲ ಹೆಣ್ಣುಮಕ್ಕಳಿಗೆ ಶುಭಕೋರಿದರು.

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಭವ್ಯ ಇತಿಹಾಸವನ್ನು ಸ್ಮರಿಸಿದ ಪ್ರಧಾನಿಗಳು, ಬೀರಬಲಾ ಕನಕಲತಾ ಬರುವಾ, ಖುದಿರಾಮ್‌ ಬೋಸ್‌, ರಾಣಿಗೈದಿನಿಲು ಬಗ್ಗೆ ನೆನಪಿಸಿಕೊಂಡರು. ಈ ಸ್ವಾತಂತ್ರ್ಯ ಸೇನಾನಿಗಳು  ತಮ್ಮ ಯೌವ್ವನದ ದಿನಗಳಲ್ಲಿಯೇ ಭಾರತದ ಸ್ವಾತಂತ್ರ್ಯವನ್ನೇ ಗುರಿಯಾಗಿಸಿಕೊಂಡು ಶ್ರಮಿಸಿದರು. ದೇಶಕ್ಕಾಗಿ ತಮ್ಮನ್ನು ತಾವೇ ಸಮರ್ಪಿಸಿಕೊಂಡಿದ್ದರು ಎಂದು ಹೇಳಿದರು. 

ನರೇಂದ್ರ ಮೋದಿ ಅವರು ದೀಪಾವಳಿ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ನೌಶೇರಾ ಕ್ಷೇತ್ರಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿಕೊಂಡರು. ಅಲ್ಲಿ ಸ್ವಾತಂತ್ರ್ಯೋತ್ತರ ಸಮರದಲ್ಲಿ ಬಾಲಸೇನೆಯಲ್ಲಿ ಪಾಲ್ಗೊಂಡಿದ್ದ ಬಲದೇವ್‌ ಸಿಂಗ್‌ ಹಾಗೂ ಬಸಂತ್‌ ಸಿಂಗ್‌ ಅವರನ್ನು ಭೇಟಿ ಮಾಡಿದ ಪ್ರಸಂಗವನ್ನು ನೆನಪಿಸಿಕೊಂಡು ಹೇಳಿದರು. ಪ್ರಾಣದ ಹಂಗು ತೊರೆದು, ಸೇನೆಗಾಗಿ ಶ್ರಮಿಸಿದ ಅವರ ಸಾಹಸಕಥೆಗಳನ್ನು ಹೇಳಿ ಗೌರವ ಸೂಚಿಸಿದರು.

ಗುರುಗೋವಿಂದ್‌ ಅವರ ಮಕ್ಕಳ ಧೈರ್ಯ ಮತ್ತು ಬಲಿದಾನವನ್ನೂ ನಿದರ್ಶಿಸುತ್ತ ಮಾತನಾಡಿದರು. ಗುರು ಗೋವಿಂದ್‌ ಅವರ ಸಾಹಿಬ್‌ಜಾದಾ (ಗುರು ಗೋವಿಂದ್‌ ಅವರ ಮಕ್ಕಳು) ಅವರ ಬಲಿದಾನ ಅತ್ಯಮೂಲ್ಯವಾದುದು. ಅತಿ ಕಿರಿಯ ವಯಸ್ಸಿನಲ್ಲಿಯೇ ನೀಡಿದ ಆ ಬಲಿದಾನ, ಭಾರತೀಯ ಪರಂಪರೆ, ಸಂಸ್ಕೃತಿ, ನಾಗರಿಕತೆ ಹಾಗೂ ಧರ್ಮ ರಕ್ಷಣೆಯ ಕುರಿತಾದ ಬದ್ಧತೆ ಅನೂಹ್ಯವಾದುದು ಎಂದರು. ಈ ಸಾಹಿಬ್‌ ಜಾದಾ ಅವರ ಕುರಿತು ಭಾರತೀಯ ಯುವಜನತೆ ಹೆಚ್ಚು ಅರಿತುಕೊಳ್ಳಬೇಕು. ಅವರ ಬಲಿದಾನದ ಕುರಿತು ತಿಳಿದಿರಬೇಕು ಎಂಬ ಆಶಯ ವ್ಯಕ್ತಪಡಿಸಿದರು. 

ನವದೆಹಲಿಯ ಇಂಡಿಯಾ ಗೇಟ್‌ ಬಳಿ ಸ್ಥಾಪಿಸಿರುವ ಡಿಜಿಟಲ್‌ ಪ್ರತಿಮೆಯ ಕುರಿತೂ ಮಾತನಾಡಿದ ಪ್ರಧಾನಮಂತ್ರಿ ಅವರು, ನೇತಾಜಿ ಅವರ ಧೀಶಕ್ತಿಯು ನಮಗೆ ಅತಿ ದೊಡ್ಡ ಪ್ರೇರಣೆಯಾಗಿದೆ ಎಂದು ಅಭಿಪ್ರಾಯ ಪಟ್ಟರು.  ದೇಶದ ಕರ್ತವ್ಯವೇ ಮೊದಲು ಎಂಬ ಪ್ರೇರಣಾದಾಯಕ ಮಾತು, ನಿಮ್ಮೆಲ್ಲರನ್ನೂ ದೇಶದ ಪ್ರಗತಿ ಪಥದಲ್ಲಿ ಹೆಜ್ಜೆಹಾಕುವಂತೆ ಮಾಡಿದೆ ಎಂದು ತಿಳಿಸಿದರು.

ಯಾವುದೇ ಕ್ಷೇತ್ರದಲ್ಲಿಯಾದರೂ ತೆಗೆದುಕೊಳ್ಳುತ್ತಿರುವ ಉಪಕ್ರಮಗಳು, ರಚಿಸಲಾಗುತ್ತಿರುವ ನೀತಿ ನಿಯಮಗಳು, ಯುವಜನಕೇಂದ್ರಿತವಾಗಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಿಳಿಸಿದರು. ಸ್ಟಾರ್ಟ್‌ ಅಪ್‌ ಇಂಡಿಯಾ,ಸ್ಟ್ಯಾಂಡಪ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ, ಮೇಕಿನ್‌ ಇಂಡಿಯಾಗಳಂಥವುಗಳ ಜೊತೆಗೆ ಆತ್ಮನಿರ್ಭರದಂಥ ಜನ ಆಂದೋಲನವನ್ನು ಮಾಡಿದ್ದು, ಆಧುನಿಕ ನಿರ್ಮಾಣಕಾರ್ಯಗಳಿಗಾಗಿಯೇ ರಚಿಸಲಾಗಿದೆ. ಭಾರತದಲ್ಲಿ ಹಾಗೂ ದೇಶದ ಹೊರಗೆ ಶ್ರಮಿಸುತ್ತಿರುವರು ಒಟ್ಟುಗೂಡಿ, ದೇಶದ ಅಭಿವೃದ್ಧಿಗೆ ಒಂದು ವೇಗೋತ್ಕರ್ಷ ಒದಗಿಸಿಕೊಡಬೇಕಾಗಿದೆ. ದೇಶವು ಹೊಸತನದ ಪ್ರಯೋಗಗಳಲ್ಲಿ, ನಾವೀನ್ಯವನ್ನು ತರುವಲ್ಲಿ, ಸ್ಟಾರ್ಟ್‌ ಅಪ್‌ ಹಾಗೂ ಜಾಗತಿಕ ಕಂಪನಿಗಳನ್ನು ಸೆಳೆಯುವಲ್ಲಿ ಗುರುತರವಾಗಿ ಬೆಳೆಯುತ್ತಿದೆ. ಜಾಗತಿಕವಾಗಿ ಹೆಸರು ಮಾಡಿರುವ ಬ್ರಹತ್‌ ಕಂಪನಿಗಳ ಸಿಇಒಗಳಾಗಿ ಭಾರತದ ಯುವಜನತೆ ಮುನ್ನಡೆಸುತ್ತಿದೆ. ಸ್ಟಾರ್ಟ್‌ಪ್‌ಗಳಲ್ಲಿ ಭಾರತದ ಸಾಮರ್ಥ್ಯವನ್ನು ಕಂಡಾಗ ಭಾರತೀಯ ಯುವಜನಾಂಗದ ಚಾಣಾಕ್ಷ್ಯತೆ ಹಾಗೂ ಜಾಣ್ಮೆಯ ಕುರಿತು ಹೆಮ್ಮೆಯೆನಿಸುತ್ತದೆ. ಭಾರತವನ್ನು ಮುನ್ನಡೆಸುತ್ತಿರುವ ಈ ಯುವ ಜನಾಂಗ ಹೆಮ್ಮೆ ಮೂಡಿಸುತ್ತಿದೆ ಎಂದು ಶ್ಲಾಘಿಸಿದರು.

ಕೆಲವು ಕ್ಷೇತ್ರಗಳ ಕುರಿತು, ಹೆಣ್ಣುಮಕ್ಕಳು ಮಾತನಾಡಲೂ ಹಿಂಜರಿಯುತ್ತಿದ್ದ ಕಾಲವೊಂದಿತ್ತು. ಈಗ ಎಲ್ಲ ಕ್ಷೇತ್ರಗಳಲ್ಲಿಯೂ ಹೆಣ್ಣುಮಕ್ಕಳು ಅದ್ಭುತವಾಗಿರುವುದನ್ನು ಸಾಧಿಸುತ್ತಿದ್ದಾರೆ. ಇದು ಆಧುನಿಕ ಭಾರತ. ಹೊಸತನಗಳಿಂದ, ಅನ್ವೇಷಣೆಗಳಿಂದ ತಡೆಯಲಾಗದು. ಸ್ಥೈರ್ಯ ಮತ್ತು ದೃಢನಿಶ್ಚಯಗಳು ಇಂದು ಭಾರತದ ಗುರುತಾಗಿವೆ

ಲಸಿಕಾಕರಣದ ಸಮಯದಲ್ಲಿಯೂ ಭಾರತೀಯ ಮಕ್ಕಳು ತಮ್ಮ ಆಧುನಿಕ ಹಾಗೂ ವೈಜ್ಞಾನಿಕ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ಜನವರಿ 3ರಿಂದ ಆರಂಭವಾದ ಲಸಿಕಾಕರಣ, 20 ದಿನಗಳಲ್ಲಿ 40 ದಶಲಕ್ಷ ಜನರು ಲಸಿಕೆ ಪಡೆದಿದ್ದಾರೆ. ಸ್ವಚ್ಛ ಭಾರತ ಅಭಿಯಾನದಲ್ಲಿ ಮಕ್ಕಳು ಮುಂಚೂಣಿಯಲ್ಲಿದ್ದುದ್ದನ್ನು ಸ್ಮರಿಸಿದರು. ಆತ್ಮನಿರ್ಭರ ಭಾರತ ಜನ ಅಭಿಯಾನಕ್ಕೆ ಇವರೆಲ್ಲರೂ ಪ್ರತಿನಿಧಿಗಳಾಗಲಿ ಎಂದು ಪ್ರಧಾನಿ ಬಯಸಿದರು.

***



(Release ID: 1792213) Visitor Counter : 242