ಪ್ರಧಾನ ಮಂತ್ರಿಯವರ ಕಛೇರಿ

ಭೋಪಾಲ್, ಮಧ್ಯಪ್ರದೇಶದಲ್ಲಿ ನಾನಾ ರೈಲು ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ

Posted On: 15 NOV 2021 8:08PM by PIB Bengaluru

ಮಧ್ಯಪ್ರದೇಶ ರಾಜ್ಯಪಾಲರಾದ ಗೌರವಾನ್ವಿತ ಶ್ರೀ ಮಂಗುಬಾಯ್ ಪಟೇಲ್ ಜೀ, ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಜೀ, ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಜೀ, ವೇದಿಕೆಯಲ್ಲಿ ಉಪಸ್ಥಿತರಿರುವ ಗಣ್ಯರೇ, ಸಹೋದರ, ಸಹೋದರಿಯರೇ...

ಭೋಪಾಲ್, ಮಧ್ಯಪ್ರದೇಶ ಮತ್ತು ಇಡೀ ರಾಷ್ಟ್ರದ ಭವ್ಯ ಇತಿಹಾಸ ಮತ್ತು ಉಜ್ವಲ ಭವಿಷ್ಯ ಸಾರುವ ಸಮ್ಮಿಲನ ದಿನ ಇಂದಾಗಿದೆ. ಭೋಪಾಲದಲ್ಲಿ ನಿರ್ಮಾಣವಾಗಿರುವ ವೈಭವದ ರೈಲು ನಿಲ್ದಾಣಕ್ಕೆ ಯಾರೇ ಬರಲಿ, ಭಾರತೀಯ ರೈಲ್ವೆಯ ಆಧುನಿಕ ಮತ್ತು ಉಜ್ವಲ ಭವಿಷ್ಯವನ್ನು ಇಲ್ಲಿ ಕಾಣುತ್ತಾರೆ. ಭೋಪಾಲದ ಐತಿಹಾಸಿಕ ರೈಲು ನಿಲ್ದಾಣವನ್ನು ನವೀಕರಿಸುವುದು ಮಾತ್ರವಲ್ಲ, ಮಹಾರಾಣಿ ಗಿನ್ನೋರ್ ಗರ್ ಕಮಲಾಪತಿ ಜೀ ಅವರ ಹೆಸರು ಮರುನಾಮಕರಣ ಮಾಡಿ, ಈ ರೈಲು ನಿಲ್ದಾಣದ ಪ್ರಾಮುಖ್ಯತೆಯನ್ನು ಹೆಚ್ಚಿಸಲಾಗಿದೆ. ಗೊಂಡ್ವಾನದ ಹೆಮ್ಮೆಯು ಭಾರತೀಯ ರೈಲ್ವೆಯ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ. ಜಂಜಾತಿಯಾ ಗೌರವ ದಿನವನ್ನು ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಭೋಪಾಲ ರೈಲು ನಿಲ್ದಾಣ ದೇಶಕ್ಕೆ ಸಮರ್ಪಣೆ ಆಗುತ್ತಿರುವುದು ಸಂತಸದ ವಿಚಾರ. ಈ ಸುಸಂದರ್ಭದಲ್ಲಿ ನಾನು ಮಧ್ಯಪ್ರದೇಶದ ಎಲ್ಲಾ ಸಹೋದರ, ಸಹೋದರಿಯರಿಗೆ ಅದರಲ್ಲೂ ವಿಶೇಷವಾಗಿ ಬುಡಕಟ್ಟು ಸಮುದಾಯಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಭೋಪಾಲ್-ರಾಣಿ ಕಮಾಲಪತಿ-ಬರ್ಖೇಡಾ ವಿಭಾಗದ ಮೂರನೇ ರೈಲು ಮಾರ್ಗ, ವಿದ್ಯುದೀಕರಿಸಿದ ಗುನಾ-ಗ್ವಾಲಿಯರ್ ವಿಭಾಗದ ಮಾರ್ಗ, ವಿದ್ಯುದೀಕರಿಸಿದ ಮತ್ತು ಗೇಜ್ ಪರಿವರ್ತಿಸಿದ ಫತೆಹಾಬಾದ್-ಚಂದ್ರವಾತಿಗಂಜ್-ಉಜ್ಜಯಿನಿ ಮತ್ತು ಮತೆಲಾ-ನಿಮರ್ಖೇಡಿ ವಿಭಾಗದ ರೈಲು ಮಾರ್ಗ ಯೋಜನೆಗಳನ್ನು ಉದ್ಘಾಟಿಸಲಾಗಿದೆ. ಮಧ್ಯಪ್ರದೇಶದ ಅತ್ಯಂತ ಜನನಿಬಿಡ ರೈಲು ಮಾರ್ಗಗಳಲ್ಲಿ ಒಂದಾದ ಈ ಮಾರ್ಗದಲ್ಲಿ ಪ್ರಯಾಣಿಕರ ಒತ್ತಡವನ್ನು ಇದು ಕಡಿಮೆ ಮಾಡುವ ಜತೆಗೆ, ಪ್ರವಾಸಿ ತಾಣಗಳು ಮತ್ತು ಯಾತ್ರಾಸ್ಥಳಗಳಿಗೆ ರೈಲು ಸಂಪರ್ಕವನ್ನು ಬಲಪಡಿಸಿದೆ. ಮಹಾಕಾಳೇಶ್ವರ ಖ್ಯಾತಿಯ ಉಜ್ಜಯಿನಿ ನಗರ ಮತ್ತು ದೇಶದ ಅತ್ಯಂತ ಸ್ವಚ್ಛ ನಗರ ಇಂದೋರ್ ನಡುವೆ ಮೆಮು ರೈಲು ಸೇವೆ ಆರಂಭಿಸಿರುವುದು, ದೈನಂದಿನ ಸಾವಿರಾರು ಪ್ರಯಾಣಿಕರಿಗೆ ನೇರ ಪ್ರಯೋಜನ ಸಿಕ್ಕಂತಾಗಿದೆ. ಇದೀಗ ಇಂದೋರ್ ನ ಜನರು ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ಸಕಾಲದಲ್ಲಿ ವಾಪಸಾಗಲು ಮತ್ತು ನಿತ್ಯ ಸಂಚರಿಸುವ ಉದ್ಯೋಗಿಗಳಿಗೆ ಇದರಿಂದ ಸಾಕಷ್ಟು ಅನುಕೂಲವಾಗಿದೆ. ಅಲ್ಲದೆ, ದಿನನಿತ್ಯ ಸಂಚರಿಸುವ ವರ್ತಕರು, ವ್ಯಾಪಾರಸ್ಥರಿಗೂ ಸಹ ಅನುಕೂಲವಾಗಿದೆ.

ಸಹೋದರಿಯರೇ ಮತ್ತು ಸಹೋದರರೇ,

ಭಾರತ ಹೇಗೆ ಬದಲಾಗುತ್ತಿದೆ ಮತ್ತು ಕನಸುಗಳು ಹೇಗೆ ನನಸಾಗುತ್ತಿವೆ ಎಂಬುದನ್ನು ಯಾರೊಬ್ಬರಾದರೂ ನೋಡಲು ಭಾರತೀಯ ರೈಲ್ವೆ ಉತ್ತಮ ಉದಾಹರಣೆ ಆಗಿದೆ. ಆರೇಳು ವರ್ಷಗಳ ಹಿಂದೆ ರೈಲು ಪ್ರಯಾಣಿಕರು ಭಾರತೀಯ ರೈಲ್ವೆ ಕಾರ್ಯವೈಖರಿ ಮತ್ತು ಕಾರ್ಯಕ್ಷಮತೆ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದರು, ಗೊಣಗುಡುತ್ತಿದ್ದರು. ಪ್ರಯಾಣಿಕರ ದಟ್ಟಣೆ ಮತ್ತು ಕೊಳಕಿನಿಂದ ಕೂಡಿರುತ್ತಿದ್ದ ರೈಲು ನಿಲ್ದಾಣಗಳಲ್ಲಿ ರೈಲುಗಳಿಗಾಗಿ ದೀರ್ಘ ಕಾಲ ಕಾದು ಕುಳಿತಿರುತ್ತಿದ್ದರು, ನಿಲ್ದಾಣಗಳಲ್ಲಿ ಆಸನ ಸಮಸ್ಯೆ, ತಿಂಡಿ ತಿನಿಸುಗಳು ಸಿಗುತ್ತಿರಲಿಲ್ಲ, ಗಬ್ಬು ನಾರುತ್ತಿದ್ದ ರೈಲುಗಳಲ್ಲಿ ಕೂರುವುದೇ ಯಾತನಾಮಯವಾಗಿರುತ್ತಿತ್ತು, ಭದ್ರತಾ ಕಳವಳ ಮತ್ತೊಂದು ಕಡೆ. ಪ್ರಯಾಣಿಕರು ರೈಲಿನಲ್ಲಿ ತಮ್ಮ ಸಾಮಾನು ಸರಂಜಾಮುಗಳನ್ನು ಭದ್ರ ಮಾಡಲು ಸರಪಳಿಯನ್ನು ಸಹ ಕೊಂಡೊಯ್ಯುತ್ತಿದ್ದರು. ಜತೆಗೆ, ಅಪಘಾತ ಭೀತಿ ಅವರನ್ನು ಆವರಿಸುತ್ತಿತ್ತು. ಇದು ಅಂದಿನ ರೈಲು ಪ್ರಯಾಣದ ಬಗ್ಗೆ ಜನರಲ್ಲಿ ಇದ್ದ ಮನಸ್ಥಿತಿಯಾಗಿತ್ತು. ಭಾರತೀಯ ರೈಲ್ವೆಯ ಪರಿಸ್ಥಿತಿ ಬದಲಾಗುತ್ತದೆ ಎಂಬ ಭರವಸೆಯನ್ನೇ ಜನರು ಬಿಟ್ಟಿದ್ದರು. ಈ ಪರಿಸ್ಥಿತಿ ಹೀಗೇ ಮುಂದುವರೆಯುತ್ತದೆ ಎಂಬುದು ಜನರ ಭಾವನೆಯಾಗಿತ್ತು.  ಆದರೆ ದೇಶವು ತನ್ನ ದೃಢ ನಿರ್ಣಯಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಸಜ್ಜುಗೊಂಡಾಗ, ಬದಲಾವಣೆಗಳು ಆಗತೊಡಗಿದವು, ಸುಧಾರಣೆಗಳು ಜಾರಿಯಾಗುತ್ತಾ ಬಂದವು. ನಾವೆಲ್ಲಾ ಅದನ್ನು ಕಳೆದ ಕೆಲವು ವರ್ಷಗಳಿಂದ ಅನುಭವಿಸುತ್ತಾ ಬಂದಿದ್ದೇವೆ.

ಸ್ನೇಹಿತರೆ,

ದೇಶದ ಶ್ರೀಸಾಮಾನ್ಯನಿಗೆ ಆಧುನಿಕ ಅನುಭವ ನೀಡುವ ನಮ್ಮೆಲ್ಲರ ಶ್ರಮದ ಫಲ ಈಗ ಗೋಚರಿಸುತ್ತಿದೆ. ಕೆಲವೇ ತಿಂಗಳ ಹಿಂದೆ ಗುಜರಾತಿನ ಗಾಂಧಿ ನಗರ ರೈಲು ನಿಲ್ದಾಣದ ಹೊಸ ಅವತಾರವನ್ನು ದೇಶ ಸೇರಿದಂತೆ ಇಡೀ ವಿಶ್ವವೇ ನೋಡಿ ಆನಂದಿಸಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸುಸಜ್ಜಿತವಾಗಿ ನಿರ್ಮಿಸಿರುವ ಚೊಚ್ಚಲ ಐಎಸ್ಒ ಪ್ರಮಾಣೀಕೃತ ರೈಲು ನಿಲ್ದಾಣವನ್ನು ರಾಣಿ ಕಮಲಾಪತಿ ರೈಲು ನಿಲ್ದಾಣ ರೂಪದಲ್ಲಿ ನಾವಿಂದು ದೇಶಕ್ಕೆ ಸಮರ್ಪಿಸುತ್ತಿದ್ದೇವೆ. ವಿಮಾನ ನಿಲ್ದಾಣಗಳಲ್ಲಿ ಮಾತ್ರ ಸಿಗುವ ಎಲ್ಲಾ ಮೂಲಸೌಲಭ್ಯಗಳು ಇದೀಗ ಈ ರೈಲು ನಿಲ್ದಾಣಗಳಲ್ಲಿ ಸಿಗುತ್ತಿವೆ. ಆಧುನಿಕ ಶೌಚಾಲಯಗಳು, ರುಚಿಕರ ಆಹಾರ ಮತ್ತು ಪಾನೀಯಗಳು, ಶಾಪಿಂಗ್ ಸಂಕೀರ್ಣಗಳು, ಹೋಟೆಲ್ ಗಳು, ಮ್ಯೂಸಿಯಂಗಳು, ಗೇಮಿಂಗ್ ಸೌಲಭ್ಯ, ಆಸ್ಪತ್ರೆಗಳು, ಮಾಲ್ ಗಳು, ಸ್ಮಾರ್ಟ್ ಪಾರ್ಕಿಂಗ್ ಇತ್ಯಾದಿ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗಿದೆ. ಭಾರತೀಯ ರೈಲ್ವೆಯು ಇಲ್ಲಿ ಚೊಚ್ಚಲ ತೆರೆದ ಸಾರ್ವಜನಿಕ ಅಂಗಣವನ್ನು ನಿರ್ಮಿಸಿದೆ. ಇಲ್ಲಿ ಪ್ರಯಾಣಿಕರು ಕುಳಿತು ರೈಲುಗಳಿಗಾಗಿ ಕಾಯುತ್ತಾ ಕೂರಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿಂದ ಎಲ್ಲಾ ಪ್ಲಾಟ್ ಫಾರಂಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಪ್ರಯಾಣಿಕರು ಅನಗತ್ಯವಾಗಿ ದೌಡಾಯಿಸುವುದನ್ನು ತಪ್ಪಿಸಲು ಈ ಸೌಲಭ್ಯ ಒದಗಿಸಲಾಗಿದೆ.

ಸಹೋದರ ಮತ್ತು ಸಹೋದರಿಯರೇ,

ಸಾಮಾನ್ಯ ತೆರಿಗೆ ಪಾವತಿದಾರರು ಮತ್ತು ದೇಶದ ಮಧ್ಯಮ ವರ್ಗದವರು ಯಾವಾಗಲೂ ಸಹ ಇಂತಹ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಪಡೆಯಬೇಕು ಎಂಬ ನಿರೀಕ್ಷೆಗಳನ್ನು ಹೊಂದಿದ್ದರು. ಇಂತಹ ಸೌಲಭ್ಯಗಳನ್ನು ಒದಗಿಸಿ ತೆರಿಗೆದಾರರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ. ಇದು ವಿಐಪಿ ಸಂಸ್ಕೃತಿಯಿಂದ ಇಪಿಐ ಸಂಸ್ಕೃತಿಗೆ ಮಾಡುವ ಮಾದರಿ ಪರಿವರ್ತನೆಯಾಗಿದೆ. ಇಪಿಐ ಅಂದರೆ ಪ್ರತಿಯೊಬ್ಬ ವ್ಯಕ್ತಿಯೂ ಮುಖ್ಯ ಎಂಬುದಾಗಿದೆ. ರೈಲ್ವೆ ನಿಲ್ದಾಣಗಳ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಪರಿವರ್ತಿಸುವ ಉದ್ದೇಶದಿಂದ ದೇಶದ 200ಕ್ಕಿಂತ ಹೆಚ್ಚಿನ ರೈಲು ನಿಲ್ದಾಣಗಳನ್ನು ನವೀಕರಿಸಲಾಗುತ್ತಿದೆ.

ಸ್ನೇಹಿತರೆ,

ಭಾರತವು ಭವಿಷ್ಯಕ್ಕಾಗಿ ತನ್ನನ್ನು ತಾನು ಸಿದ್ಧವಾಗುತ್ತಿದೆ. ಆತ್ಮನಿರ್ಭರ್ ಭಾರತ್ ಕಟ್ಟುವ ಸಂಕಲ್ಪದೊಂದಿಗೆ ದೊಡ್ಡ ಗುರಿಗಳನ್ನು ಹಾಕಿಕೊಂಡಿದೆ.  ಇಂದಿನ ಭಾರತವು ಆಧುನಿಕ ಮೂಲಸೌಕರ್ಯ ಹೊಂದಲು ದಾಖಲೆ ಪ್ರಮಾಣದ ಹೂಡಿಕೆ ಮಾಡುವ ಜತೆಗೆ, ಯೋಜನೆಗಳು ವಿಳಂಬವಾಗದಂತೆ, ಅಡೆತಡೆಗಳು ಎದುರಾಗದಂತೆ ನಿಗಾ ವಹಿಸಿದೆ. ಇತ್ತೀಚೆಗೆ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಸಮಗ್ರ ಯೋಜನೆ(ಮಾಸ್ಟರ್ ಪ್ಲಾನ್)ಯು ಈ ನಿರ್ಣಯವನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತಿದೆ. ಗತಿಶಕ್ತಿ ರಾಷ್ಟ್ರೀಯ ಮಹಾ ಯೋಜನೆಯು ಮೂಲಸೌಕರ್ಯಕ್ಕೆ ಸಂಬಂಧಿಸಿದ ಸರ್ಕಾರದ ನೀತಿಗಳೇ ಇರಲಿ, ಬೃಹತ್ ಯೋಜನೆಗಳೇ ಇರಲಿ, ಅವುಗಳ ಅನುಷ್ಠಾನಕ್ಕೆ ಸಂಬಂಧಿಸಿ ಎಲ್ಲರಿಗೂ ಮಾರ್ಗದರ್ಶನ ನೀಡುತ್ತಿದೆ. ನಾವು ಈ ಮಾಸ್ಟರ್ ಪ್ಲಾನ್‌ಗೆ ಭದ್ರ ಬುನಾದಿ ಹಾಕಿದಾಗ,  ದೇಶದ ಸಂಪನ್ಮೂಲಗಳು ಸರಿಯಾಗಿ ಬಳಕೆಯಾಗುತ್ತವೆ. ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿ ಸರ್ಕಾರವು ವಿವಿಧ ಸಚಿವಾಲಯಗಳನ್ನು ಒಂದೇ ವೇದಿಕೆಗೆ ತರುತ್ತಿದೆ. ಪ್ರತಿಯೊಂದು ಇಲಾಖೆಯು ವಿವಿಧ ಯೋಜನೆಗಳ ಬಗ್ಗೆ ಸಮಯಕ್ಕೆ ಮಾಹಿತಿ ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಸ್ನೇಹಿತರೆ,

ರೈಲು ನಿಲ್ದಾಣಗಳ ಮರುಅಭಿವೃದ್ಧಿ ಅಭಿಯಾನವು ಕೇವಲ ಸೌಲಭ್ಯಗಳಿಗೆ ಸೀಮಿತವಾಗಿರದೆ, ಇದು ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ನ ಒಂದು ಭಾಗವಾಗಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಪುಣ್ಯ ಕಾಲದಲ್ಲಿ ಇಂತಹ ಮೂಲಸೌಕರ್ಯ ಯೋಜನೆಗಳ ಅಭಿವೃದ್ಧಿ ಅಭಿಯಾನವು ದೇಶದ ಒಟ್ಟಾರೆ ಅಭಿವೃದ್ಧಿಗೆ ಅಭೂತಪೂರ್ವ ವೇಗ ನೀಡುತ್ತಿದೆ. ಬಹುವಿಧಾನದ ಸಂಪರ್ಕ ಮತ್ತು ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಇದು ಆವೇಗ ನೀಡುತ್ತಿದೆ.  ಉದಾಹರಣೆಗೆ, ರಾಣಿ ಕಮಲಾಪತಿ ರೈಲು ನಿಲ್ದಾಣವನ್ನು ಸಮೀಪದ ರಸ್ತೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಇಲ್ಲಿ ಬೃಹತ್ ಪಾರ್ಕಿಂಗ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಭೋಪಾಲ್ ಮೆಟ್ರೋಗೆ ಇಲ್ಲಿಂದ ಸಂಪರ್ಕ ಖಾತ್ರಿಪಡಿಸಲಾಗಿದೆ. ರೈಲು ನಿಲ್ದಾಣವನ್ನು ಬಸ್ ಮಾರ್ಗಗಳಿಗೆ  ಸಂಯೋಜಿಸಲು ನಿಲ್ದಾಣದ ಎರಡೂ ಬದಿ ಬಿಆರ್ ಟಿಎಸ್ ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸರಾಗ ಮತ್ತು ತಡೆರಹಿತ ಪ್ರಯಾಣದ ಜತೆಗೆ, ಸರಕುಗಳನ್ನು ಸಾಗಿಸಲು ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲಾ ಸಾಲಭ್ಯಗಳು ಸಾಮಾನ್ಯ ಭಾರತೀಯರಿಗೆ ಸುಲಭವಾಗಿ ಬದುಕುವುದನ್ನು ಖಚಿತಪಡಿಸುತ್ತಿವೆ. ರೈಲ್ವೆಯ ಹಲವು ಯೋಜನೆಗಳನ್ನು ಗತಿಶಕ್ತಿ ರಾಷ್ಟ್ರೀಯ ಮಹಾಯೋಜನೆಯೊಂದಿಗೆ ಜೋಡಿಸುತ್ತಿರುವುದು ನನಗೆ ಸಂತಸ ತಂದಿದೆ.

ಸ್ನೇಹಿತರೆ,

ರೈಲ್ವೇ ಮೂಲಸೌಕರ್ಯ ಯೋಜನೆಗಳನ್ನು ಜಾರಿಗೆ ತರಲು ಯೋಚಿಸಿದ ನಂತರ ಅವು ಅನುಷ್ಠಾನಕ್ಕೆ ಬರಲು ಹಲವಾರು ವರ್ಷಗಳನ್ನೇ ತೆಗೆದುಕೊಳ್ಳುತ್ತಿದ್ದ ಕಾಲವೊಂದಿತ್ತು. ನಾನು ಪ್ರತಿ ತಿಂಗಳ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಪ್ರತಿ ಯೋಜನೆಯ ಪ್ರಗತಿ ಪರಿಶೀಲಿಸುತ್ತೇನೆ. 35-40 ವರ್ಷಗಳ ಹಿಂದೆ ಘೋಷಿಸಿದ ಕೆಲವು ರೈಲ್ವೆ ಯೋಜನೆಗಳು ಈಗಲೂ ಪರಿಶೀಲನೆಗೆ ಬಂದರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ವಾಸ್ತುವೆಂದರೆ, 40 ವರ್ಷ ಕಳೆದರೂ ಕಾಗದದ ಮೇಲೆ ಒಂದು ಗೆರೆ ಕೂಡ ಬಿದ್ದಿಲ್ಲ. ಆದ್ದರಿಂದ ಈಗ ನಾನು ಆ ಎಲ್ಲಾ ಕೆಲಸಗಳನ್ನು ಪೂರ್ಣ ಮಾಡುತ್ತೇನೆ ಎಂಬ ಆಶ್ವಾಸನೆ ಕೊಡುತ್ತೇನೆ. ಅದನ್ನು ಮಾಡೇ ತೀರುತ್ತೇನೆ.  ಆದರೆ ಇಂದು ಭಾರತೀಯ ರೈಲ್ವೆಯ ಹೊಸ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಇನ್ನಷ್ಟು ಗಂಭೀರತೆ ಅಗತ್ಯವಿದೆ.

ಪೂರ್ವ ಮತ್ತು ಪಶ್ಚಿಮ ಸಮರ್ಪಿತ ಸರಕು ಕಾರಿಡಾರ್‌ ಯೋಜನೆಗಳು ಇದಕ್ಕೆ ಉತ್ತಮ ಉದಾಹರಣೆಯಾಗಿವೆ. ದೇಶದ ಸಾರಿಗೆ ರಂಗದ ಚಿತ್ರಣವನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುವ ಈ ಮೂಲಸೌಕರ್ಯ ಯೋಜನೆಗಳು ಹಲವು ವರ್ಷಗಳಿಂದ ಪೂರ್ಣಗೊಳ್ಳಲಿಲ್ಲ. ಆದರೆ ಕಳೆದ ಆರೇಳು ವರ್ಷಗಳಲ್ಲಿ 1,100 ಕಿ.ಮೀ.ಗಿಂತ ಹೆಚ್ಚಿನ ಮಾರ್ಗ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿ ಶರವೇಗದಲ್ಲಿ ನಡೆಯುತ್ತಿದೆ.

ಸ್ನೇಹಿತರೆ,

ಇಂದು ಇತರೆ ರೈಲು ಯೋಜನೆಗಳ ಕಾಮಗಾರಿಗಳಲ್ಲೂ ಅದೇ ವೇಗ ಗೋಚರಿಸುತ್ತಿದೆ. ಕಳೆದ 7 ವರ್ಷಗಳಲ್ಲಿ, ಪ್ರತಿ ವರ್ಷ ಸರಾಸರಿ 2,500 ಕಿಲೋಮೀಟರ್ ರೈಲು ಮಾರ್ಗ ಕಾರ್ಯಾರಂಭ ಮಾಡಿದ್ದರೆ, ಹಿಂದಿನ ವರ್ಷಗಳಲ್ಲಿ ಇದು ಸುಮಾರು 1, 500 ಕಿಲೋಮೀಟರ್‌ಗಳಷ್ಟಿತ್ತು. ರೈಲು ಹಳಿಗಳ ವಿದ್ಯುದೀಕರಣ ಕಾಮಗಾರಿ ವೇಗವು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷಗಳಲ್ಲಿ 5 ಪಟ್ಟು ಹೆಚ್ಚಾಗಿದೆ. ಮಧ್ಯಪ್ರದೇಶದ 35 ರೈಲು ಯೋಜನೆಗಳ ಪೈಕಿ ಸುಮಾರು 1,125 ಕಿ.ಮೀ. ಮಾರರ್ಗದಲ್ಲಿ ರೈಲುಗಳು ಸಂಚರಿಸುತ್ತಿವೆ.

ಸ್ನೇಹಿತರೆ,

ದೇಶದಲ್ಲಿ ಬೆಳೆಯುತ್ತಿರುವ ರೈಲ್ವೆ ಮೂಲಸೌಕರ್ಯವು ರೈತರು, ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ಉದ್ಯಮಶೀಲರಿಗೆ ಅಪಾರ  ಪ್ರಯೋಜನಗಳನ್ನು ನೀಡುತ್ತಿದೆ. ಕಿಸಾನ್ ರೈಲುಗಳ ಮೂಲಕ ನಮ್ಮ ರೈತರು ತಮ್ಮ ಉತ್ಪನ್ನಗಳನ್ನು ದೇಶದ ದೂರದ ಪ್ರದೇಶಗಳಿಗೆ ಹೇಗೆ ಕಳುಹಿಸಲು ಸಾಧ್ಯವಾಗುತ್ತಿದೆ ಎಂಬುದನ್ನು ನಾವು ಇಂದು ನೋಡುತ್ತಿದ್ದೇವೆ. ಭಾರತೀಯ ರೈಲ್ವೆಯು ಈ ರೈತರಿಗೆ ಸರಕು ಸಾಗಣೆಯಲ್ಲಿ ಸಾಕಷ್ಟು ರಿಯಾಯಿತಿ ನೀಡುತ್ತಿದೆ. ಇದರಿಂದ ಸಣ್ಣ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಅವರು ಹೊಸ ಮಾರುಕಟ್ಟೆಗಳನ್ನು ಹುಡುಕಿಕೊಂಡಿದ್ದಾರೆ. ಜತೆಗೆ, ಹೊಸ ಸಾಮರ್ಥ್ಯಗಳನ್ನು ಪಡೆದುಕೊಂಡಿದ್ದಾರೆ.

ಸ್ನೇಹಿತರೆ,

ಭಾರತೀಯ ರೈಲ್ವಯು ವಿವಿಧ ಸ್ಥಳಗಳನ್ನು ಸಂಪರ್ಕಿಸುವ ಮಾಧ್ಯಮ ಮಾತ್ರವಾಗಿರದೆ, ದೇಶದ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಯಾತ್ರಾ ಕೇಂದ್ರಗಳನ್ನು ಸಂಪರ್ಕಿಸುವ ಪ್ರಮುಖ ಮಾಧ್ಯಮವಾಗಿದೆ. ಸ್ವಾತಂತ್ರ್ಯದ ಹಲವು ದಶಕಗಳ ನಂತರ ಭಾರತೀಯ ರೈಲ್ವಂಯ ಈ ಸಾಮರ್ಥ್ಯವನ್ನು ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಅನ್ವೇಷಿಸಲಾಗುತ್ತಿದೆ. ಈ ಹಿಂದೆ ರೈಲ್ವೆಯನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಂಡರೂ ಅದು ಉಳ್ಳವರ ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಇದೀಗ ಮೊಟ್ಟಮೊದಲ ಬಾರಿಗೆ, ದೇಶದ ಶ್ರೀಸಾಮಾನ್ಯನಿಗೆ ಸಮಂಜಸ ಅಥವಾ ಕೈಗೆಟಕುವ ಬೆಲೆಗೆ ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆಯ ದಿವ್ಯ ಅನುಭವ ನೀಡಲಾಗುತ್ತಿದೆ. ರಾಮಾಯಣ ಸರ್ಕ್ಯೂಟ್ ರೈಲು ಅಂತಹ ಒಂದು ನವೀನ ಪ್ರಯತ್ನವಾಗಿದೆ. ಕೆಲವು ದಿನಗಳ ಹಿಂದೆ, ಮೊದಲ ರಾಮಾಯಣ ಎಕ್ಸ್‌ಪ್ರೆಸ್ ರೈಲು ದೇಶದ ವಿವಿಧೆಡೆ ಇರುವ  ರಾಮಾಯಣ ಕಾಲದ ಹತ್ತಾರು ಸ್ಥಳಗಳಿಗೆ ಹೊರಟಿತು. ಈ ರೈಲಿನ ಬಗ್ಗೆ ದೇಶವಾಸಿಗಳಲ್ಲಿ ಹೆಚ್ಚಿನ ಉತ್ಸಾಹ ಉಂಟಾಗಿದೆ.

ಅತಿಶೀಘ್ರದಲ್ಲೇ, ಇನ್ನೂ ಹಲವಾರು ರಾಮಾಯಣ ಎಕ್ಸ್‌ಪ್ರೆಸ್ ರೈಲುಗಳು ದೇಶದ ವಿವಿಧ ಭಾಗಗಳಿಂದ ಸಂಚರಿಸಲಿವೆ. ವಿಸ್ಟಾಡೋಮ್ ರೈಲುಗಳ ಅನುಭವವನ್ನು ಸಹ ಜನರು ಆನಂದಿಸುತ್ತಿದ್ದಾರೆ. ಭಾರತೀಯ ರೈಲ್ವೆಯ ಮೂಲಸೌಕರ್ಯ, ಕಾರ್ಯಾಚರಣೆ ಮತ್ತು ವಿಧಾನದಲ್ಲಿ ಎಲ್ಲ ರೀತಿಯಲ್ಲೂ ವ್ಯಾಪಕವಾದ ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಬ್ರಾಡ್ ಗೇಜ್ ಜಾಲದಲ್ಲಿ  ಮಾನವರಹಿತ ಗೇಟ್‌ಗಳನ್ನು(ಲೆವೆಲ್ ಕ್ರಾಸಿಂಗ್) ತೆಗೆದುಹಾಕಿರುವುದರಿಂದ ರೈಲುಗಳ ವೇಗ ಸುಧಾರಿಸಿದೆ, ಅಪಘಾತಗಳನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಇಂದು ಸೆಮಿ ರೈಲುಗಳು ರೈಲ್ವೆ ಜಾಲದ ಭಾಗವಾಗುತ್ತಿವೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಸುಸಂದರ್ಭದಲ್ಲಿ, ಮುಂದಿನ 2 ವರ್ಷಗಳಲ್ಲಿ ದೇಶಾದ್ಯಂತ 75 ಹೊಸ ವಂದೇ ಭಾರತ್ ರೈಲುಗಳನ್ನು ಓಡಿಸಲು ರೈಲ್ವೆ ಯೋಜಿಸುತ್ತಿದೆ. ಬೇರೆ ರೀತಿ ಹೇಳುವುದಾದರೆ, ಭಾರತೀಯ ರೈಲ್ವೆ ಈಗ ತನ್ನ ಪುರಾತನ ಪರಂಪರೆಯನ್ನು ಆಧುನಿಕತೆಗೆ ರೂಪಿಸುತ್ತಿದೆ.

ಸ್ನೇಹಿತರೆ,

ಉತ್ತಮ ಮೂಲಸೌಕರ್ಯ ಅಭಿವೃದ್ಧಿ ಪಡಿಸುವುದು ಭಾರತದ ಆಶಯ ಮಾತ್ರವಲ್ಲ, ಇಂದಿನ ಅಗತ್ಯವೂ ಆಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರವು ರೈಲ್ವ ಸೇರಿದಂತೆ ಸಾವಿರಾರು ಮೂಲಸೌಕರ್ಯ ಯೋಜನೆಗಳ ಮೇಲೆ ಅಭೂತಪೂರ್ವ ಹೂಡಿಕೆಗಳನ್ನು ಮಾಡುತ್ತಿದೆ. ಭಾರತದ ಮೂಲಸೌಕರ್ಯ ಆಧುನೀಕರಣವು ಸ್ವಾವಲಂಬಿ ಭಾರತ ಕಟ್ಟುವ  ನಿರ್ಣಯಗಳನ್ನು ದೇಶದ ಸಾಮಾನ್ಯ ಜನರರ ಬಳಿಗೆ ಅತ್ಯಂತ ವೇಗವಾಗಿ ಕೊಂಡೊಯ್ಯುತ್ತದೆ ಎಂದು ನನಗೆ ಖಾತ್ರಿಯಿದೆ.

ಆಧುನಿಕ ರೈಲು ನಿಲ್ದಾಣ ಸ್ಥಾಪಿಸಲು ಮತ್ತು ಅನೇಕ ಹೊಸ ರೈಲು ಸೇವೆ ಒದಗಿಸಲು ಶ್ರಮಿಸಿದ ನಿಮ್ಮೆಲ್ಲರನ್ನು ನಾನು ಮತ್ತೊಮ್ಮೆ ಅಭಿನಂದಿಸುತ್ತೇನೆ. ಈ ಹೊಸ ಬದಲಾವಣೆಯನ್ನು ಒಪ್ಪಿಕೊಂಡಿದ್ದಕ್ಕಾಗಿ, ಹೊಸ ಉತ್ಸಾಹದಿಂದ ಈ ಬದಲಾವಣೆಯನ್ನು ನಿಜವಾಗಿಸಿದ್ದಕ್ಕಾಗಿ ನಾನು ಭಾರತೀಯ ರೈಲ್ವೆಯ ಇಡೀ ತಂಡವನ್ನು ಅಭಿನಂದಿಸುತ್ತೇನೆ. ಎಲ್ಲರಿಗೂ ತುಂಬು ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲಿಷ್ ಅನುವಾದ ಇದಾಗಿದೆ. ಮೂಲ ಭಾಷಣ ಹಿಂದಿ ಭಾಷೆಯಲ್ಲಿದೆ.

***



(Release ID: 1773323) Visitor Counter : 167