ಪ್ರಧಾನ ಮಂತ್ರಿಯವರ ಕಛೇರಿ

ಮಧ್ಯಪ್ರದೇಶದ ಭೋಪಾಲದಲ್ಲಿ ಜನಜಾತೀಯ ಗೌರವ ದಿವಸ್ ಮಹಾಸಮ್ಮೇಳನದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 15 NOV 2021 5:55PM by PIB Bengaluru

ಜೋಹರ್ (ನಮಸ್ಕಾರಗಳು) ಮಧ್ಯಪ್ರದೇಶ! ರಾಂ ರಾಂ ಸೇವಾ ಜೋಹರ್!. ಬುಡಕಟ್ಟು ಸಹೋದರರು ಮತ್ತು ಸಹೋದರಿಯರಿಗೆ ನನ್ನ ನಮಸ್ಕಾರಗಳು!. ನೀವೆಲ್ಲಾ ಹೇಗಿದ್ದೀರಿ?. ನಿಮ್ಮನ್ನು ಭೇಟಿಯಾಗಲು ನನಗೆ ಬಹಳ ಸಂತೋಷವೆನಿಸುತ್ತಿದೆ. ನಿಮ್ಮೆಲ್ಲರಿಗೂ ಮತ್ತೊಮ್ಮೆ ರಾಂ ರಾಂ

ಮಧ್ಯಪ್ರದೇಶದ ಮೊದಲ ಬುಡಕಟ್ಟು ರಾಜ್ಯಪಾಲರು ಎಂಬ ಗೌರವ ಶ್ರೀ ಮಂಗೂಭಾಯಿ ಪಟೇಲ್ ಜೀ ಅವರದಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಅವರು ತಮ್ಮ ಇಡೀ ಜೀವನವನ್ನು ಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ವಿನಿಯೋಗಿಸಿದರು. ತಮ್ಮ ಬದುಕಿನುದ್ದಕ್ಕೂ ಅವರು ಸಾಮಾಜಿಕ ಸಂಘಟನೆಯ ಅರ್ಪಣಾಭಾವದಸೇವಕನಾಗಿ ಉಳಿದರು ಮತ್ತು ಬಳಿಕ ಸರಕಾರದಲ್ಲಿ ಸಚಿವರೂ ಆದರು.

ವೇದಿಕೆಯಲ್ಲಿ ಕುಳಿತಿರುವ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ನರೇಂದ್ರ ಸಿಂಗ್ ತೋಮರ್ ಜೀ, ಜ್ಯೋತಿರಾದಿತ್ಯ ಸಿಂಧ್ಯಾ ಜೀ, ವೀರೇಂದ್ರ ಕುಮಾರ್ ಜೀ, ಪ್ರಹ್ಲಾದ್ ಪಟೇಲ್ ಜೀ, ಫಗ್ಗಾನ್ ಸಿಂಗ್ ಕುಲಸ್ಥೇ ಜೀ, ಎಲ್. ಮುರುಗನ್ ಜೀ, ಮಧ್ಯ ಪ್ರದೇಶ  ಸರಕಾರದ ಸಚಿವರೇ, ನನ್ನ ಸಂಸತ್ ಸಹೋದ್ಯೋಗಿಗಳೇ, ಶಾಸಕರೇ, ಮತ್ತು ನಮ್ಮನ್ನು ಆಶೀರ್ವದಿಸಲು ಮಧ್ಯ ಪ್ರದೇಶದ ಮೂಲೆ ಮೂಲೆಗಳಿಂದ ಬಂದಿರುವ ಬುಡಕಟ್ಟು ಸಮುದಾಯದ ನನ್ನ ಸಹೋದರರೇ ಹಾಗು ಸಹೋದರಿಯರೇ, ನಿಮಗೆಲ್ಲರಿಗೂ  ನಾನು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನದ ಶುಭಾಶಯಗಳು.

ಇಡೀ ದೇಶಕ್ಕೆ ಇಂದು ಬಹಳ ಪ್ರಮುಖ ದಿನ ಮಾತ್ರವಲ್ಲ ಇಡೀ ಬುಡಕಟ್ಟು ಸಮಾಜಕ್ಕೂ ಬಹಳ ಪ್ರಮುಖ ದಿನ. ಇಂದು ಭಾರತವು ಮೊದಲ ಜನಜಾತೀಯ ಗೌರವ ದಿವಸವನ್ನು ಆಚರಿಸುತ್ತಿದೆ. ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ದೇಶವು ಬುಡಕಟ್ಟು ಸಮಾಜದ ಕಲೆ, ಸಂಸ್ಕೃತಿ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಹಾಗು ರಾಷ್ಟ್ರ ನಿರ್ಮಾಣದಲ್ಲಿ ಅವರ ಕೊಡುಗೆಯನ್ನು ಹೆಮ್ಮೆಯಿಂದ ಸ್ಮರಿಸುತ್ತಿದೆ. ಮತ್ತು ಅವರನ್ನು ಇಂತಹ ದೊಡ್ಡ ಪ್ರಮಾಣದಲ್ಲಿ ಗೌರವಿಸಲಾಗುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಹೊಸ ದೃಢ ನಿರ್ಧಾರಕ್ಕಾಗಿ ನಾನು ಇಡೀ ರಾಷ್ಟ್ರವನ್ನು ಅಭಿನಂದಿಸುತ್ತೇನೆ. ಮಧ್ಯ ಪ್ರದೇಶದ ಬುಡಕಟ್ಟು ಸಮಾಜಕ್ಕೂ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಾವು ನಿರಂತರವಾಗಿ ನಿಮ್ಮ ಪ್ರೀತಿಯನ್ನು, ಹಲವಾರು ವರ್ಷಗಳ ವಿಶ್ವಾಸವನ್ನೂ  ಪಡೆದಿದ್ದೇವೆ. ಪ್ರೀತಿ, ವಿಶ್ವಾಸ ಎಲ್ಲಾ ಸಂದರ್ಭಗಳಲ್ಲೂ ಗಟ್ಟಿಯಾಗುತ್ತಿದೆನಿಮ್ಮ ಪ್ರೀತಿ ನಿಮಗಾಗಿ ಅವಿಶ್ರಾಂತವಾಗಿ ಕೆಲಸ ಮಾಡಲು ನಮಗೆ ಶಕ್ತಿಯನ್ನು ಕೊಡುತ್ತದೆ.

ಸ್ನೇಹಿತರೇ,

ಸೇವೆಯ ಸ್ಪೂರ್ತಿಯಿಂದಾಗಿ ಶಿವರಾಜ್ ಜೀ ಅವರ ಸರಕಾರ ಇಂದು ಹಲವು ದೊಡ್ಡ ಯೋಜನೆಗಳನ್ನು ಅನುಷ್ಟಾನಕ್ಕೆ ತರುತ್ತಿದೆ. ವೇದಿಕೆಯ ಮೇಲೆ ಹುಮ್ಮಸ್ಸಿನೊಂದಿಗೆ ಬುಡಕಟ್ಟು ಜನರ ಗುಂಪುಗಳು  ಪ್ರಸ್ತುತಪಡಿಸುತ್ತಿದ್ದ ಹಾಡುಗಳ ಅರ್ಥವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದೆ. ನಾನೂ ನನ್ನ ಜೀವನದ ಪ್ರಮುಖ ಭಾಗವನ್ನು ಬುಡಕಟ್ಟು ಸಮುದಾಯಗಳ ಜೊತೆ ಕಳೆದಿದ್ದೇನೆ. ಅಲ್ಲಿ ಅವರು ಹೇಳುವ ಎಲ್ಲಾ ಸಂಗತಿಗಳಲ್ಲು ಒಂದು ತತ್ವಶಾಸ್ತ್ರ ಇರುವುದನ್ನು ನಾನು ಮನಗಂಡಿದ್ದೇನೆ. ಅವರು ತಮ್ಮ ನೃತ್ಯಗಳಲ್ಲಿ, ಹಾಡುಗಳಲ್ಲಿ, ಮತ್ತು ಸಂಪ್ರದಾಯಗಳಲ್ಲಿ ಜೀವನದ ಉದ್ದೇಶಗಳನ್ನು ಪ್ರಸ್ತುತಪಡಿಸುತ್ತಾರೆ. ಮತ್ತು ಇದರಿಂದಾಗಿ ಇಂದಿನ ಹಾಡು ಸಹಜವಾಗಿ ನನ್ನ ಗಮನವನ್ನು ಸೆಳೆಯಿತು. ಮತ್ತು ನಾನು ಹಾಡಿನ ಸಂಗೀತವನ್ನು ಅಸ್ವಾದಿಸುತ್ತಿದ್ದಾಗ ಮತ್ತು ನಾನು ಹಾಡನ್ನು ಮತ್ತೆ ಹೇಳುವುದು ಸಾಧ್ಯವಾಗದಿದ್ದರೂ, ನೀವು ಹೇಳಿದ ಪ್ರತೀ ಮಾತೂ ದೇಶದ ಜನರಿಗೆ ಅವರ ಬದುಕನ್ನು ಉತ್ತಮವಾಗಿ ಬದುಕಲು ಕಾರಣಗಳನ್ನು ಒದಗಿಸುತ್ತದೆ. ನಿಮ್ಮ ನೃತ್ಯಗಳು, ಕುಣಿತಗಳ ಮೂಲಕ ನೀವುಮಾನವ ದೇಹ ಕೆಲವು ದಿನಗಳದ್ದು ಮತ್ತು ಅಂತಿಮವಾಗಿ ಅದು ಮಣ್ಣಿನೊಂದಿಗೆ ಸೇರುತ್ತದೆ. ಉಲ್ಲಾಸದಿಂದಿದ್ದೆ  ಮತ್ತು ದೇವರನ್ನು ಮರೆತೆ ಎಂಬುದನ್ನು ವಿವರಿಸಿದ್ದೀರಿ. ಬುಡಕಟ್ಟು ಜನರತ್ತ ನೋಡಿ, ಅವರು ನಮಗೇನು ಹೇಳುತ್ತಿದ್ದಾರೆ. ಅವರು ನಿಜಾರ್ಥದಲ್ಲಿ ಶಿಕ್ಷಿತರಾಗಿದ್ದಾರೆ ಮತ್ತು ನಾವು ಇನ್ನಷ್ತೇ ಕಲಿಯಬೇಕಾಗಿದೆ. ಅವರು ಮತ್ತೂ ಹೇಳುತ್ತಾರೆಜೀವನವನ್ನು ಉಲ್ಲಸದಿಂದಿದ್ದು ಕಳೆದದ್ದು, ಜೀವನವನ್ನು ಅರ್ಥಪೂರ್ಣವಾಗಿಸುವುದಿಲ್ಲ. ಜೀವನದಲ್ಲಿ ಬಹಳಷ್ಟು ಹೋರಾಟಗಳನ್ನು ಮಾಡಿ ಮತ್ತು ಮನೆಯಲ್ಲಿ ಬಹಳ ತುಂಟಾಟಗಳನ್ನು ಮಾಡಿ, ಆದರೆ ಅಂತ್ಯ ಬರುವಾಗ ಅದಕ್ಕೆ ಪಶ್ಚಾತ್ತಾಪ ಪಡುವುದರಲ್ಲಿ ಅರ್ಥವಿಲ್ಲ. ಭೂಮಿ, ಹೊಲಗದ್ದೆಗಳು ಮತ್ತು ಕೊಟ್ಟಿಗೆಗಳು ಯಾರಿಗೂ ಸೇರಿದ್ದಲ್ಲ. ಅವುಗಳ ಹೆಗ್ಗಳಿಕೆ ನಿರರ್ಥಕ. ಭೌತಿಕ ಸಂಪತ್ತು ಬಳಕೆಗೆ ಬಾರದು, ಅದು ಪ್ರಯೋಜನಕ್ಕಿಲ್ಲ. ನಾವು ಹೋಗುವಾಗ ಅದು ಇಲ್ಲಿಯೇ ಉಳಿಯುತ್ತದೆ”. ಹಾಡುಗಳ ಮೂಲಕ ಮತ್ತು ಕುಣಿತಗಳ ಮೂಲಕ ಮಾತನಾಡಿರುವ ಶಬ್ದಗಳತ್ತ ನೋಡಿ. ಅರಣ್ಯಗಳಲ್ಲಿ ಬದುಕುವ ನನ್ನ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು  ಜೀವನದಲ್ಲಿ ಬಹಳ ಉತ್ತಮವಾದ ತತ್ವಾದರ್ಶಗಳನ್ನು ಮೈಗೂಢಿಸಿಕೊಂಡಿದ್ದಾರೆ. ದೇಶಕ್ಕೆ ಇದಕ್ಕಿಂತ ದೊಡ್ಡ ಬಲ ಯಾವುದಿರಬಹುದು!. ದೇಶಕ್ಕೆ ಇದಕ್ಕಿಂತ ದೊಡ್ಡ ಪರಂಪರೆ ಯಾವುದಿರಬಹುದು!. ದೇಶಕ್ಕೆ ಇದಕ್ಕಿಂತ ದೊಡ್ಡ ಆಸ್ತಿ ಯಾವುದಿರಬಹುದು!.

ಸ್ನೇಹಿತರೇ,

ಸೇವೆಯ ಸ್ಪೂರ್ತಿಯಿಂದಾಗಿಯೇ ಇಂದು ಶಿವರಾಜ್  ಜೀ ಅವರ  ಸರಕಾರ ಬುಡಕಟ್ಟು ಸಮಾಜಕ್ಕಾಗಿ ಹಲವು ದೊಡ್ಡ ಯೋಜನೆಗಳನ್ನು ಜಾರಿಗೆ ತರುತ್ತಿದೆ. “ರೇಶನ್ ಆಪ್ ಕೇ ಗ್ರಾಮ್ ಯೋಜನಾಅಥವಾಮಧ್ಯಪ್ರದೇಶ ಸಿಕ್ಲ್ ಸೆಲ್ ಮಿಶನ್ಇರಲಿ, ಇವೆರಡೂ ಬುಡಕಟ್ಟು ಸಮಾಜದಲ್ಲಿ ಆರೋಗ್ಯ ಮತ್ತು ಪೋಷಕಾಂಶ ಸುಧಾರಣೆ ನಿಟ್ಟಿನಲ್ಲಿ ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸಲಿವೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನಾ ಅಡಿಯಲ್ಲಿ ಉಚಿತ ಪಡಿತರದಿಂದಾಗಿ ಕೊರೊನಾ ಅವಧಿಯಲ್ಲಿ ಬಡ ಬುಡಕಟ್ಟು ಕುಟುಂಬಗಳಿಗೆ  ದೊಡ್ಡ ಪ್ರಮಾಣದಲ್ಲಿ ಸಹಾಯ ಆಗಿರುವುದು ನನಗೆ ತೃಪ್ತಿ ತಂದಿದೆ. ಈಗ ಕಡಿಮೆ ದರದಲ್ಲಿ ಪಡಿತರವು  ಹಳ್ಳಿಯಲ್ಲಿರುವ ನಿಮ್ಮ ಮನೆಗೆ ತಲುಪಲಿರುವಾಗ ನಿಮ್ಮ ಸಮಯ ಮತ್ತು ಹೆಚ್ಚಿನ ಖರ್ಚು ಕೂಡಾ ಉಳಿತಾಯವಾಗುತ್ತದೆ.

ಆಯುಷ್ಮಾನ್ ಭಾರತ್ ಯೋಜನೆ ಅನುಷ್ಟಾನಕ್ಕೆ ಮೊದಲು ಬುಡಕಟ್ಟು ಸಮಾಜ ಮತ್ತು ದೇಶದ ಬಡವರು ಹಲವಾರು ರೋಗಗಳಿಗೆ ಉಚಿತ ಚಿಕಿತ್ಸೆ ಪಡೆಯುತ್ತಿದ್ದರು. ಮಧ್ಯ ಪ್ರದೇಶದಲ್ಲಿ ಬುಡಕಟ್ಟು ಕುಟುಂಬಗಳು ಆದ್ಯತೆಯ ಮೇಲೆ ತ್ವರಿತವಾಗಿ ಉಚಿತ ಲಸಿಕೆ ಪಡೆಯುತ್ತಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ಜಗತ್ತಿನ ಸುಶಿಕ್ಷಿತ ದೇಶಗಳಲ್ಲಿಯೂ ಲಸಿಕಾಕರಣದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳನ್ನು ಎತ್ತುತ್ತಿರುವ ವರದಿಗಳು ಬರುತ್ತಿವೆ. ಆದರೆ ನನ್ನ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ಲಸಿಕಾಕರಣದ ಮಹತ್ವವನ್ನು ಅರಿತುಕೊಂಡು ಅದನ್ನು ಅನುಸರಿಸಿದರು ಮತ್ತು ದೇಶದ ರಕ್ಷಣೆಯಲ್ಲಿ ತಮ್ಮ ಪಾತ್ರವನ್ನು ನಿಭಾಯಿಸಿದರು. ಇದಕ್ಕಿಂತ ದೊಡ್ಡ ಬುದ್ಧಿವಂತಿಕೆ ಯಾವುದಿದೆ?. ಇಡೀ ಜಗತ್ತೇ ನೂರು ವರ್ಷಗಳಲ್ಲಿಯೇ ಅತ್ಯಂತ ದೊಡ್ಡದಾದ ಜಾಗತಿಕ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿದೆ. ಬುಡಕಟ್ಟು ಸಮುದಾಯದ ಎಲ್ಲಾ ಸದಸ್ಯರೂ ದೊಡ್ಡ ಜಾಗತಿಕ ಸಾಂಕ್ರಾಮಿಕದ ವಿರುದ್ಧ ಲಸಿಕಾಕರಣಕ್ಕೆ ಮುಂದೆ ಬರುತ್ತಿದ್ದಾರೆ, ಇದು ನಿಜವಾಗಿಯೂ ಹೆಮ್ಮೆಯ ಸಂಗತಿ. ನಗರಗಳಲ್ಲಿ ವಾಸಿಸುತ್ತಿರುವ ಸುಶಿಕ್ಷಿತರು ಬುಡಕಟ್ಟು ಸಹೋದರರಿಂದ ಕಲಿತುಕೊಳ್ಳಬೇಕಾಗಿರುವುದು ಬಹಳಷ್ಟಿದೆ.

ಸ್ನೇಹಿತರೇ,

ಭೋಪಾಲಕ್ಕೆ ಬರುವ ಮೊದಲು, ನನಗೆ ಭಗವಾನ್ ಬಿರ್ಸಾ ಮುಂಡಾ ಸ್ವಾತಂತ್ರ್ಯ ಹೋರಾಟಗಾರ ವಸ್ತುಸಂಗ್ರಹಾಯವನ್ನು ರಾಂಚಿಯಲ್ಲಿ ಉದ್ಘಾಟಿಸುವ ಅವಕಾಶ ದೊರಕಿತ್ತು. ಬುಡಕಟ್ಟು ಹೀರೋಗಳು ಮತ್ತು ಹೀರೋಯಿನ್ ಗಳ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ದೇಶದ ಮುಂದಿಡುವುದು ನಮ್ಮ ಕರ್ತವ್ಯ. ಮತ್ತು ಅವರನ್ನು ಹೊಸ ತಲೆಮಾರಿಗೆ ಪರಿಚಯಿಸುವುದು ನಮ್ಮ ಜವಾಬ್ದಾರಿ. ಗುಲಾಮಗಿರಿಯ ಕಾಲದಲ್ಲಿ ಖಾಸಿಗಾರೋ ಚಳವಳಿ, ಮೀಜೋ ಚಳವಳಿ, ಕೋಲ್ ಚಳವಳಿಗಳಂತಹ ಅನೇಕ ಹೋರಾಟಗಳು ವಿದೇಶೀ ಆಡಳಿತದ ವಿರುದ್ಧ ನಡೆದಿವೆ. ಗೊಂಡ ಮಹಾರಾಣಿ ವೀರ ದುರ್ಗಾದೇವಿಯ ಶೌರ್ಯಅಥವಾ ರಾಣಿ ಕಮಲಾಪತಿ ಅವರ ತ್ಯಾಗವನ್ನು ದೇಶ ಮರೆಯಲಾರದು. ವೀರ ಭೀಲರಿಲ್ಲದೆ ವೀರ ಮಹಾರಾಣಾ ಪ್ರತಾಪ್ ಸಿಂಗ್ ಅವರ ಹೋರಾಟವನ್ನು ಕಲ್ಪಿಸಿಕೊಳ್ಳಲಾಗದು. ಯುದ್ಧ ಭೂಮಿಯಲ್ಲಿ ರಾಣಾ ಪ್ರತಾಪ್ ಸಿಂಗ್ ಅವರ ಜೊತೆ ಹೋರಾಡುತ್ತಲೇ ಪ್ರಾಣ ತ್ಯಾಗ ಮಾಡಿದವರು ಭೀಲರು. ನಾವು ಅವರಿಗೆಲ್ಲ ಋಣಿಗಳಾಗಿದ್ದೇವೆ. ಋಣವನ್ನು ನಾವೆಂದಿಗೂ ತೀರಿಸಲಾರೆವು. ಆದರೆ ನಾವು ಅವರ ಪರಂಪರೆಯನ್ನು ಸ್ಮರಿಸುವ ಮೂಲಕ, ಅದಕ್ಕೆ  ಸೂಕ್ತ ಸ್ಥಾನ ಮಾನ ಕಲ್ಪಿಸುವ  ನಮ್ಮ ಜವಾಬ್ದಾರಿಯನ್ನು  ಖಂಡಿತವಾಗಿಯೂ ಈಡೇರಿಸಲು ಸಾಧ್ಯವಿದೆ.

ಸಹೋದರರೇ ಮತ್ತು ಸಹೋದರಿಯರೇ,

ಇಂದು, ನಾನು ನಮ್ಮ ಪರಂಪರೆಯನ್ನು ರಕ್ಷಿಸಬೇಕು ಎಂದು ಹೇಳುತ್ತಿರುವಾಗ, ನಾನು ನಮ್ಮ ದೇಶದ ಪ್ರಖ್ಯಾತ ಚರಿತ್ರಕಾರ ಶಿವ್ ಶಾಹೀರ್ ಬಾಬಾ ಸಾಹೇಬ್ ಪುರಂದರೆ ಜೀ ಅವರನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ. ಇಂದು ಬೆಳಿಗ್ಗೆಯಷ್ಟೇ, ಅವರು ತೀರಿಕೊಂಡಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿತು. ಛತ್ರಪತಿ ಶಿವಾಜಿ ಮಹಾರಾಜ್ ಅವರ ಜೀವನ ಮತ್ತು ಚರಿತ್ರೆಯನ್ನು ಜನಮಾನಸಕ್ಕೆ ಒಯ್ಯುವಲ್ಲಿ  ’ಪದ್ಮ ವಿಭೂಷಣಬಾಬಾಸಾಹೇಬ್ ಪುರಂದರೆ ಜೀ ಅವರ ಕೊಡುಗೆ ಅಮೂಲ್ಯವಾದುದು. ಇಲ್ಲಿಯ ಸರಕಾರ ಕೂಡಾ ಅವರಿಗೆ ಕಾಳಿದಾಸ ಪ್ರಶಸ್ತಿ ನೀಡಿ ಗೌರವಿಸಿದೆ. ಬಾಬಾಸಾಹೇಬ್ ಪುರಂದರೆ ಅವರು ದೇಶದ ಮುಂದಿಟ್ಟ ಛತ್ರಪತಿ ಶಿವಾಜಿ ಮಹಾರಾಜ್ ಅವರ ಆದರ್ಶಗಳು ನಮಗೆ  ನಿರಂತರವಾಗಿ ಪ್ರೇರೇಪಣೆ ನೀಡಲಿವೆ. ಬಾಬಾಸಾಹೇಬ್ ಪುರಂದರೆ ಜೀ ಅವರಿಗೆ ನಾನು ಹೃದಯಸ್ಪರ್ಶೀ ಗೌರವಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ನಾವು ರಾಷ್ಟ್ರೀಯ ವೇದಿಕೆಗಳಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಬುಡಕಟ್ಟು ಸಮಾಜದ ಕೊಡುಗೆಯ ಬಗ್ಗೆ ಚರ್ಚೆ ಮಾಡುವಾಗ ಕೆಲವು ಜನರಿಗೆ ಸಖೇದಾಶ್ಚರ್ಯವಾಗುತ್ತದೆ. ಭಾರತದ ಸಂಸ್ಕೃತಿಯನ್ನು ಇಷ್ಟೊಂದು ಬಲಿಷ್ಟವಾಗಿ ರೂಪಿಸುವಲ್ಲಿ ಬುಡಕಟ್ಟು ಸಮಾಜದ ಕೊಡುಗೆ ಇದೆ ಎಂದು ನಂಬಲು ಬಹಳ ಕಷ್ಟಪಡುತ್ತಾರೆ. ಇದಕ್ಕೆ ಕಾರಣ ಬುಡಕಟ್ಟು ಸಮಾಜದ ಕೊಡುಗೆಯ ಬಗ್ಗೆ ದೇಶಕ್ಕೆ ಮಾಹಿತಿ ಹಂಚಿಕೊಳ್ಳದಿರುವುದು ಅಥವಾ ಅದನ್ನು ಅಲ್ಲಲ್ಲಿ ಮಾತ್ರವೇ ತೇಪೆ ಹಾಕಿದಂತೆ ಹಂಚಿಕೊಂಡಿರುವುದು. ಅದನ್ನು ಕತ್ತಲಲ್ಲಿಡಲು ಪ್ರಯತ್ನಗಳನ್ನು ಮಾಡಲಾಯಿತು. ಸ್ವಾತಂತ್ರ್ಯದ ನಂತರ  ದೇಶದಲ್ಲಿ ದಶಕಗಳ ಕಾಲ ಸರಕಾರವನ್ನು ನಡೆಸಿದವರು ಇದಕ್ಕೆ ಕಾರಣ. ಅವರು ತಮ್ಮ ಸ್ವಾರ್ಥಸಾಧನೆಯ ರಾಜಕೀಯಕ್ಕಾಗಿ ಹೆಚ್ಚು ಆದ್ಯತೆ ನೀಡಿದರು. ದೇಶದ ಜನಸಂಖ್ಯೆಯಲ್ಲಿ 10 ಶೇಖಡಾದಷ್ಟಿದ್ದರೂ ಕೂಡಾ ಬುಡಕಟ್ಟು ಸಮಾಜದ ಸಂಸ್ಕೃತಿ ಮತ್ತು ಸಾಮರ್ಥ್ಯವನ್ನು ದಶಕಗಳ ಕಾಲ ಸಂಪೂರ್ಣ ನಿರ್ಲಕ್ಷಿಸಲಾಯಿತು. ಅವರ ನೋವು, ಆರೋಗ್ಯ, ಮತ್ತು ಮಕ್ಕಳ ಶಿಕ್ಷಣ  ಅವರಿಗೆ ಗಮನಿಸಬೇಕಾದ ಅಂಶವಾಗದೇ ಹೋಯಿತು.

ಸ್ನೇಹಿತರೇ,

ಭಾರತದ ಸಾಂಸ್ಕೃತಿಕ ಪ್ರಯಾಣದಲ್ಲಿ ಬುಡಕಟ್ಟು ಸಮಾಜದ ಕೊಡುಗೆ ಅಸಾಮಾನ್ಯವಾದುದು. ನೀವು ಹೇಳಿ, ಭಗವಾನ್ ರಾಮನ ಜೀವನದಲ್ಲಿ ಬುಡಕಟ್ಟು ಸಮಾಜದ ಕೊಡುಗೆ ಇಲ್ಲದಿದ್ದರೆ ಯಶಸ್ಸನ್ನು ಕಲ್ಪಿಸಿಕೊಳ್ಳಲು ಸಾಧ್ಯವಿದೆಯೇ?. ಖಂಡಿತವಾಗಿಯೂ ಇಲ್ಲ!. ಅರಣ್ಯವಾಸಿಗಳ ಜೊತೆ ಕಳೆದ ಕಾಲ ರಾಜಕುಮಾರ ಮರ್ಯಾದಾ ಪುರುಷೋತ್ತಮನನ್ನು ರೂಪಿಸುವಲ್ಲಿ ಬಹಳ ದೊಡ್ಡ ಕೊಡುಗೆ ನೀಡಿದೆ. ಅರಣ್ಯವಾಸದಲ್ಲಿ  ಭಗವಾನ್ ರಾಮ ಸಂಪ್ರದಾಯಗಳಿಂದ, ಆಚರಣೆಗಳಿಂದ, ಜೀವನ ವಿಧಾನದಿಂದ, ಸಹಿತ ಜೀವನದ ಎಲ್ಲಾ ಅಂಶಗಳಲ್ಲೂ ವನವಾಸಿ ಸಮಾಜದಿಂದ ಪ್ರೇರಣೆ ಪಡೆದ.

ಸ್ನೇಹಿತರೇ,

ಹಿಂದಿನ ಸರಕಾರಗಳು ಮಾಡಿದ ಅಪರಾಧಗಳನ್ನು ನಿಯಮಿತವಾಗಿ ಮಾತನಾಡುವ ಅಗತ್ಯವಿದೆ. ಅದು ಬುಡಕಟ್ಟು ಜನರಿಗೆ ನೀಡಬೇಕಾಗಿದ್ದಂತಹ ಆದ್ಯತೆಯನ್ನಾಗಲೀ, ಪ್ರಾಮುಖ್ಯವನ್ನಾಗಲೀ ನೀಡಲಿಲ್ಲ. ಇದನ್ನು ಪ್ರತಿಯೊಂದು ವೇದಿಕೆಯಲ್ಲಿಯೂ ಚರ್ಚಿಸಬೇಕಾಗಿದೆ. ದಶಕಗಳ ಹಿಂದೆ ನಾನು ನನ್ನ ಸಾರ್ವಜನಿಕ ಜೀವನವನ್ನು ಗುಜರಾತಿನಲ್ಲಿ ಆರಂಭ ಮಾಡಿದಾಗಿನಿಂದ ನೋಡುತ್ತಿದ್ದೇನೆ, ದೇಶದಲ್ಲಿಯ ಕೆಲವು ರಾಜಕೀಯ ಪಕ್ಷಗಳು ಬುಡಕಟ್ಟು ಜನರಿಗೆ ಪ್ರತೀ ಸೌಲಭ್ಯಗಳನ್ನು ನಿರಾಕರಿಸುತ್ತಾ ಬಂದವು. ಅಭಿವೃದ್ಧಿಯ ಸಂಪನ್ಮೂಲಗಳನ್ನೂ ನಿರಾಕರಿಸಿದವು. ಅವರಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸದೆ ವಂಚಿಸಲಾಯಿತು, ಸಮೃದ್ಧಿಯ ಅವಕಾಶಗಳನ್ನು ನಿರಾಕರಿಸಲಾಯಿತು, ಚುನಾವಣೆಗಳ ಬಳಿಕ  ಚುನಾವಣೆಗಳಲ್ಲಿ ಸೌಕರ್ಯಗಳನ್ನು ಒದಗಿಸುವ ಹೆಸರಿನಲ್ಲಿ ಅವರಿಂದ ಮತಗಳನ್ನು ಕೇಳಲಾಯಿತು. ಆದರೆ ಬುಡಕಟ್ಟು ಸಮುದಾಯಕ್ಕೆ ಏನು ಮಾಡಬೇಕಾಗಿತ್ತೋ , ಅದನ್ನು ಮಾಡಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಅವರು ಅಸಹಾಯಕರಾಗಿ ಉಳಿದರು. ಗುಜರಾತಿನ ಮುಖ್ಯಮಂತ್ರಿಯಾದ ಬಳಿಕ ನಾನು ಅಲ್ಲಿ ಬುಡಕಟ್ಟು  ಸಮಾಜದ ಪರಿಸ್ಥಿತಿಯನ್ನು ಬದಲಾಯಿಸಲು ಹಲವು ಆಂದೋಲನಗಳನ್ನು ಆರಂಭ ಮಾಡಿದೆ. 2014ರಲ್ಲಿ ನಿಮ್ಮ ಸೇವೆ ಮಾಡುವ ಅವಕಾಶವನ್ನು ದೇಶವು ನನಗೆ ನೀಡಿದಾಗ, ನಾನು ಬುಡಕಟ್ಟು ಸಮುದಾಯದ ಆಸಕ್ತಿಗಳಿಗೆ ಗರಿಷ್ಟ ಆದ್ಯತೆ ನೀಡಿದೆ.

ಸಹೋದರರೇ ಮತ್ತು ಸಹೋದರಿಯರೇ,

ಇಂದು ಬುಡಕಟ್ಟು ಸಮಾಜದ ಪ್ರತೀ ಸಹೋದ್ಯೋಗಿಗೂ ನಿಜಾರ್ಥದಲ್ಲಿ ದೇಶದ ಅಭಿವೃದ್ಧಿಯಲ್ಲಿ ನ್ಯಾಯೋಚಿತ ಪಾಲು ಮತ್ತು ಸಹಭಾಗಿತ್ವವನ್ನು ಕೊಡಲಾಗುತ್ತಿದೆ. ಬಡವರಿಗೆ ಮನೆ ಇರಲಿ, ಶೌಚಾಲಯ ಇರಲಿ, ಉಚಿತ ವಿದ್ಯುತ್ ಇರಲಿ, ಮತ್ತು ಅನಿಲ ಸಂಪರ್ಕ ಇರಲಿ, ಶಾಲೆಗಳು, ರಸ್ತೆಗಳು, ಉಚಿತ ಚಿಕಿತ್ಸೆ, ಇವೆಲ್ಲ ದೇಶದ ಇತರ ಭಾಗಗಳಲ್ಲಿ ನಡೆಯುತ್ತಿರುವಂತೆ ಬುಡಕಟ್ಟು ಪ್ರದೇಶಗಳಲ್ಲೂ ನಡೆಯುತ್ತಿವೆ. ದೇಶದ ಇತರ ಭಾಗಗಳಲ್ಲಿಯ ರೈತರ ಬ್ಯಾಂಕ್ ಖಾತೆಗಳಿಗೆ ಸಾವಿರಾರು ಕೋಟಿ ರೂಪಾಯಿಗಳು ಜಮೆಯಾಗುತ್ತಿರುವಂತೆಯೇ, ಅದೇ ವೇಳೆಗೆ ಬುಡಕಟ್ಟು ಪ್ರದೇಶಗಳ ರೈತರ ಖಾತೆಗಳಿಗೂ ಜಮೆ ಆಗುತ್ತಿವೆ. ಇಂದು ದೇಶದ ಕೋಟ್ಯಾಂತರ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಕೊಳವೆ ಮೂಲಕ ಪೂರೈಕೆ ಆಗುತ್ತಿದ್ದರೆಅದೇ ವೇಗದಲ್ಲಿ ಸೌಲಭ್ಯವನ್ನು ಬುಡಕಟ್ಟು ಕುಟುಂಬಗಳಿಗೂ ಒದಗಿಸುವ ಇಚ್ಛಾ ಶಕ್ತಿ ಅಲ್ಲಿದೆ. ಹಲವಾರು ವರ್ಷಗಳಿಂದ ಬುಡಕಟ್ಟು ಸಮುದಾಯದ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ನೀರಿಗಾಗಿ ಎಷ್ಟೊಂದು ಕಷ್ಟ ಅನುಭವಿಸುತ್ತಿದ್ದರು ಎಂಬುದು ನನಗಿಂತ ನಿಮಗೆ ಚೆನ್ನಾಗಿ ತಿಳಿದಿದೆ. ಜಲ್ ಜೀವನ್ ಮಿಷನ್ ಅಡಿಯಲ್ಲಿ ಮಧ್ಯ ಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿಯ 30 ಲಕ್ಷ ಕುಟುಂಬಗಳು ಈಗ ಕೊಳವೆ ಮೂಲಕ ನೀರು ಪಡೆಯಲು ಆರಂಭ ಮಾಡಿದ್ದಾರೆ ಎಂಬುದು ನನಗೆ ಬಹಳ ಸಂತೋಷದ ಸಂಗತಿಯಾಗಿದೆ. ಮತ್ತು ಅದರಲ್ಲಿ ಹೆಚ್ಚಿನವರು ನಮ್ಮ ಬುಡಕಟ್ಟು ಪ್ರದೇಶದವರಾಗಿದ್ದಾರೆ.

ಸ್ನೇಹಿತರೇ,

ಬುಡಕಟ್ಟು ಜನರ ಅಭಿವೃದ್ಧಿಯ ಪ್ರಸ್ತಾಪ ಬಂದಾಗೆಲ್ಲ ಬುಡಕಟ್ಟು ಜನ ವಾಸ್ತವ್ಯದ ಪ್ರದೇಶಗಳು ಭೌಗೋಳಿಕವಾಗಿ ಸಂಪರ್ಕಿಸಲು ಸಾಧ್ಯವಾಗದಂತಹವು ಮತ್ತು ಅಲ್ಲಿ ಸೌಲಭ್ಯಗಳನ್ನು ಒದಗಿಸುವುದು ಕಷ್ಟಕರ ಎಂಬುದು ಸಾಮಾನ್ಯ ಹಿಂಜರಿಕೆಯ ನಂಬಿಕೆಯಾಗಿತ್ತು. ವಿವರಣೆಗಳು ಏನನ್ನೂ ಮಾಡದೇ ಇರುವುದಕ್ಕೆ ನೆಪಗಳಲ್ಲದೆ ಬೇರೇನೂ ಆಗಿರಲಿಲ್ಲ. ಇಂತಹ ನೆಪದ ಕಾರಣಗಳನ್ನು ಬುಡಕಟ್ಟು ಜನರ ಸಮುದಾಯಕ್ಕೆ ಸವಲತ್ತುಗಳನ್ನು ಒದಗಿಸಲು ಆದ್ಯತೆ ನೀಡದಿರುವುದಕ್ಕಾಗಿ ಮಾಡಲಾಗುತ್ತಿತ್ತೇ ವಿನಹ ಬೇರೇನೂ ಅಲ್ಲ. ಅವರನ್ನು ಅವರ ಅದೃಷ್ಟವನ್ನು ನೆಚ್ಚಿಕೊಂಡು ಇರುವಂತೆ ಮಾಡಲಾಗುತ್ತಿತ್ತು.

ಸ್ನೇಹಿತರೇ,

ಇಂತಹ ನೀತಿಗಳು ಮತ್ತು ಆಲೋಚನೆಗಳಿಂದ, ಬುಡಕಟ್ಟು ಪ್ರಾಬಲ್ಯದ ಜಿಲ್ಲೆಗಳು ಅಭಿವೃದ್ಧಿಯ ಮೂಲ ಸೌಕರ್ಯಗಳಿಂದಲೂ ವಂಚಿಸಲ್ಪಟ್ಟವು. ಅವರ ಅಭಿವೃದ್ಧಿಗೆ ಪ್ರಯತ್ನಗಳನ್ನು ಮಾಡುವುದಕ್ಕಿಂತ ಜಿಲ್ಲೆಗಳನ್ನು ಹಿಂದುಳಿದ ಜಿಲ್ಲೆಗಳೆಂದು ಹಣೆ ಪಟ್ಟಿ ಕಟ್ಟಲಾಯಿತು.

ಸಹೋದರರೇ ಮತ್ತು ಸಹೋದರಿಯರೇ,

ಯಾವುದೇ ರಾಜ್ಯ, ಜಿಲ್ಲೆ, ವ್ಯಕ್ತಿ ಅಥವಾ ಸಮಾಜ ಅಭಿವೃದ್ಧಿಯ ಸ್ಪರ್ಧೆಯಲ್ಲಿ ಹಿಂದುಳಿಯಲು ಇಚ್ಛಿಸುವುದಿಲ್ಲ. ಪ್ರತೀ ವ್ಯಕ್ತಿಯೂ, ಪ್ರತೀ ಸಮಾಜವೂ ಆಶೋತ್ತರಗಳನ್ನು ಮತ್ತು ಕನಸುಗಳನ್ನು ಹೊಂದಿರುತ್ತದೆ. ಇಂದು ನಮ್ಮ ಸರಕಾರದ ಆದ್ಯತೆ ಎಂದರೆ ಹಲವಾರು ವರ್ಷಗಳಿಂದ ಅದುಮಿಟ್ಟ  ಕನಸುಗಳಿಗೆ ಮತ್ತು ಆಶೋತ್ತರಗಳಿಗೆ ಹಾರಾಟದ ಶಕ್ತಿಯನ್ನು ಕೊಡಲು ಪ್ರಯತ್ನಿಸುವುದು. ನಿಮ್ಮ ಆಶೀರ್ವಾದದೊಂದಿಗೆ ಅಭಿವೃದ್ಧಿಯ ಆಶೋತ್ತರಗಳು ಇಂತಹ 100 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಈಡೇರಿಸಲ್ಪಡುತ್ತಿವೆ. ಇಂದು ಬುಡಕಟ್ಟು ಪ್ರಾಬಲ್ಯದ ಆಶೋತ್ತರಗಳ ಜಿಲ್ಲೆಯಲ್ಲಿ ಕೇಂದ್ರ ಸರಕಾರದ ಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆಯನ್ನು ನೀಡಲಾಗುತ್ತಿದೆ. ಆಸ್ಪತ್ರೆಗಳಿಲ್ಲದ, ಮತ್ತು ಆಶೋತ್ತರಗಳ ಜಿಲ್ಲೆಗಳಲ್ಲಿ 150 ಕ್ಕೂ ಅಧಿಕ ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ.

ಸ್ನೇಹಿತರೇ,

ಸಂಪನ್ಮೂಲಗಳಿಗೆ ಸಂಬಂಧಿಸಿ ನಮ್ಮ ದೇಶದ  ಬುಡಕಟ್ಟು ವಲಯ ಸದಾ ಸಂಪದ್ಭರಿತವಾಗಿದೆ. ಆದರೆ ಮೊದಲು ಸರಕಾರದಲ್ಲಿದ್ದವರು ಪ್ರದೇಶಗಳನ್ನು ಶೋಷಣೆ ಮಾಡುವ ನೀತಿಯನ್ನು ಅನುಸರಿಸಿದರು. ನಾವು ಪ್ರದೇಶಗಳ ಸಾಮರ್ಥ್ಯವನ್ನು ಸೂಕ್ತ ರೀತಿಯಲ್ಲಿ  ಬಳಕೆ ಮಾಡಿಕೊಳ್ಳುವ ನೀತಿಯನ್ನು ಅನುಸರಿಸುತ್ತಿದ್ದೇವೆ. ಇಂದು ದೇಶದ ಅಭಿವೃದ್ಧಿಗಾಗಿ ಜಿಲ್ಲೆಗಳಿಂದ ಯಾವೆಲ್ಲಾ ನೈಸರ್ಗಿಕ ಸಂಪನ್ಮೂಲ ಲಭ್ಯವಾಗುತ್ತದೆಯೋ, ಅದರಲ್ಲಿ ಒಂದು ಭಾಗ ಜಿಲ್ಲೆಯ ಅಭಿವೃದ್ಧಿಗಾಗಿ ಬಳಕೆಯಾಗುತ್ತದೆ. ಜಿಲ್ಲಾ ಖನಿಜ ನಿಧಿ ಅಡಿಯಲ್ಲಿ ಸುಮಾರು 50,000 ಕೋ.ರೂ.ಗಳನ್ನು ರಾಜ್ಯಗಳು ಪಡೆದಿವೆ. ಇಂದು ನಿಮ್ಮ ಸಂಪನ್ಮೂಲಗಳನ್ನು ನಿಮಗಾಗಿ ಮತ್ತು ನಿಮ್ಮ ಮಕ್ಕಳಿಗಾಗಿ ಬಳಸಲಾಗುತ್ತಿದೆ. ನಾವೀಗ ಗಣಿಗಾರಿಕೆಗೆ ಸಂಬಂಧಿಸಿದ ನೀತಿಗಳಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿದ್ದೇವೆ, ಇದರಿಂದ ಬುಡಕಟ್ಟು ಪ್ರದೇಶಗಳಲ್ಲಿಯೂ ಉದ್ಯೋಗಾವಕಾಶಗಳು ನಿರ್ಮಾಣವಾಗುತ್ತಿವೆ.

ಸಹೋದರರೇ ಮತ್ತು ಸಹೋದರಿಯರೇ,

ಸ್ವಾತಂತ್ರ್ಯದ ಪುಣ್ಯಕರ ಕಾಲಾವಧಿ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಸಕಾಲ. ಬುಡಕಟ್ಟು ಜನರ ಪಾಲುದಾರಿಕೆ ಇಲ್ಲದೆ ಭಾರತದ ಸ್ವಾವಲಂಬನೆ ಸಾಧ್ಯವಿಲ್ಲ. ಇತ್ತೀಚೆಗೆ ಪ್ರದಾನ ಮಾಡಲಾದ ಪದ್ಮ ಪ್ರಶಸ್ತಿಗಳನ್ನು ನೀವು ನೋಡಿರಬಹುದು. ಬುಡಕಟ್ಟು ಸಮಾಜದ ಸಹೋದ್ಯೋಗಿಗಳು ಕಾಲುಗಳಲ್ಲಿ ಪಾದರಕ್ಷೆಗಳಿಲ್ಲದೆ  ರಾಷ್ಟ್ರಪತಿ ಭವನ  ತಲುಪಿದ್ದನ್ನು ನೋಡಿ ಇಡೀ ಜಗತೇ ಬೆರಗಾಗಿದೆ. ಬುಡಕಟ್ಟು ಪ್ರದೇಶಗಳಲ್ಲಿ ಮತ್ತು ಗ್ರಾಮೀಣ ಸಮಾಜದಲ್ಲಿ ಕೆಲಸ ಮಾಡುತ್ತಿರುವ ಜನರು ದೇಶದ ನೈಜ ಹೀರೋಗಳು. ಅವರು ನಮ್ಮ ವಜ್ರಗಳು.

ಸಹೋದರರೇ ಮತ್ತು ಸಹೋದರಿಯರೇ,

ಬುಡಕಟ್ಟು ಸಮಾಜದಲ್ಲಿ ಪ್ರತಿಭೆಗಳಿಗೆ ಎಂದೂ ಕೊರತೆ ಇರಲಿಲ್ಲ. ಆದರೆ ದುರದೃಷ್ಟವಶಾತ್, ಅಲ್ಲಿ ಬುಡಕಟ್ಟು ಸಮಾಜಕ್ಕೆ ಅವಕಾಶಗಳನ್ನು ಒದಗಿಸಲು ಹಿಂದಿನ ಸರಕಾರಗಳಲ್ಲಿ ರಾಜಕೀಯ ಇಚ್ಛಾಶಕ್ತಿ ಬಹಳ ಕಡಿಮೆ ಇತ್ತು. ರಚನಾತ್ಮಕತೆ ಬುಡಕಟ್ಟು ಸಂಪ್ರದಾಯದ ಒಂದಂಗ. ನಾನಿಲ್ಲಿಗೆ ಬರುವುದಕ್ಕೆ ಮೊದಲು ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ಮಾಡಿದ ಕಾರ್ಯಗಳನ್ನು ನೋಡಿದೆ, ಅದು ನಿಜವಾಗಿಯೂ ನನ್ನನ್ನು ಸಂತೋಷಗೊಳಿಸಿದೆ. ಅವರ ಕೈಬೆರಳುಗಳಲ್ಲಿ ಏನು ಜಾದೂ ಇದೆ?. ರಚನಾತ್ಮಕತೆ ಬುಡಕಟ್ಟು ಸಂಪ್ರದಾಯದ ಅಂಗ, ಆದರೆ ಬುಡಕಟ್ಟು ಜನರು ನಿರ್ಮಾಣ ಮಾಡಿದ ವಸ್ತುಗಳು ಮಾರುಕಟ್ಟೆಗೆ ಸಂಪರ್ಕಿಸಲ್ಪಟ್ಟಿಲ್ಲ. ಬಹಳ ಸರಳವಾದ ಸೆಣಬು, ಅಥವಾ ಬಿದಿರು ಕೃಷಿ ಕೂಡಾ ಕಾನೂನುಗಳ ಜಾಲದಲ್ಲಿ ಸಿಕ್ಕಿಕೊಂಡಿತ್ತು ಎಂಬುದನ್ನು ನೀವು ಕಲ್ಪಿಸಿಕೊಳ್ಳಬಲ್ಲಿರಾ?. ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ಬಿದಿರು ಅಥವಾ ಸೆಣಬು ಬೆಳೆದು ಮತ್ತು ಅದನ್ನು ಮಾರಾಟ ಮಾಡಿ ಸ್ವಲ್ಪ ಹಣ ಗಳಿಸುವ ಹಕ್ಕನ್ನು ಹೊಂದಿರಬಾರದೇ?.ನಾವು ಚಿಂತನೆಯನ್ನು ಅರಣ್ಯ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಬದಲಾಯಿಸಿದೆವು.

ಸ್ನೇಹಿತರೇ,

ಈಗ ಸಮಾಜವನ್ನು ಸ್ವಾವಲಂಬಿಯನ್ನಾಗಿ ಮಾಡುವ ಪ್ರಯತ್ನಗಳು ಚಾಲ್ತಿಯಲ್ಲಿವೆ. ಹಿಂದೆ ಸಮುದಾಯವು ತನ್ನ ಸಣ್ಣ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ದಶಕಗಳ ಕಾಲ ಕಾಯುವಂತೆ ಮಾಡಲಾಗಿತ್ತು ಮತ್ತು ಅವುಗಳನ್ನು ನಿರ್ಲಕ್ಷಿಸಲಾಗಿತ್ತು. ಬುಡಕಟ್ಟು ಸಮಾಜವು ಶತಮಾನಗಳಿಂದ ಕಾಷ್ಠಶಿಲ್ಪದಲ್ಲಿ ಮತ್ತು ಶಿಲಾಶಿಲ್ಪಗಳಲ್ಲಿ ತೊಡಗಿಕೊಂಡಿದೆ, ಈಗ ಅವರ ಉತ್ಪಾದನೆಗಳಿಗೆ ಹೊಸ ಮಾರುಕಟ್ಟೆ ಲಭಿಸುವಂತೆ ಮಾಡಲಾಗುತ್ತಿದೆಬುಡಕಟ್ಟು ಕಲಾವಿದರ ಉತ್ಪಾದನೆಗಳು ಟ್ರೈಫೆಡ್ ಮೂಲಕ ಆನ್ ಲೈನ್ ಪೋರ್ಟಲಿನಲ್ಲಿ ದೇಶೀಯ ಹಾಗು ವಿದೇಶಿ ಮಾರುಕಟ್ಟೆಗಳಲ್ಲಿ ಮಾರಲ್ಪಡುತ್ತವೆ. ಒಂದೊಮ್ಮೆ ಒರಟು ಧಾನ್ಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದವು, ಈಗ ಭಾರತದ ಬ್ರ್ಯಾಂಡ್ ಆಗಿದೆ.

ಸ್ನೇಹಿತರೇ,

ವನ್ ಧನ್ ಯೋಜನಾವು ಅರಣ್ಯೋತ್ಪನ್ನಗಳನ್ನು ಎಂ.ಎಸ್.ಪಿ. ವ್ಯಾಪ್ತಿಯ ಅಡಿಯಲ್ಲಿ ತಂದಿದೆ. ಸಹೋದರಿಯರ ಸಂಘಟನಾತ್ಮಕ ಶಕ್ತಿಗೆ ಹೊಸ ಶಕ್ತಿಯನ್ನು ತುಂಬಿದೆ. ಇದು ಬುಡಕಟ್ಟು ಪ್ರದೇಶಗಳಲ್ಲಿ ಅಭೂತಪೂರ್ವ ಅವಕಾಶಗಳನ್ನು ಸೃಷ್ಟಿ ಮಾಡುತ್ತಿದೆ. ಮೊದಲಿನ ಸರಕಾರಗಳು 8-10 ಅರಣ್ಯೋತ್ಪನ್ನಗಳಿಗೆ ಮಾತ್ರವೇ ಎಂ.ಎಸ್.ಪಿ.ಯನ್ನು ನೀಡುತ್ತಿದ್ದವು. ಇಂದು ನಮ್ಮ ಸರಕಾರ ಸುಮಾರು 90 ಅರಣ್ಯೋತ್ಪನ್ನಗಳಿಗೆ ಎಂ.ಎಸ್.ಪಿ.ಯನ್ನು ನೀಡುತ್ತಿದೆ. 9-10 ಮತ್ತು 90 ನಡುವಿನ ವ್ಯತ್ಯಾಸವನ್ನು ನೋಡಿ?. ನಾವು 2500 ಕ್ಕೂ ಹೆಚ್ಚಿನ ವನ್ ಧನ್ ವಿಕಾಸ್ ಕೇಂದ್ರಗಳನ್ನು 37,000 ಕ್ಕೂ ಅಧಿಕ ವನ್ ಧನ್ ಸ್ವಸಹಾಯ ಗುಂಪುಗಳ ಜೊತೆ ಜೋಡಿಸಿದ್ದೇವೆ. ಇಂದು 7.5 ಲಕ್ಷ ಸ್ನೇಹಿತರು ಅವರೊಂದಿಗೆ ಸೇರಿದ್ದಾರೆ ಮತ್ತು ಅವರಿಗೆ ಉದ್ಯೋಗ, ಮತ್ತು ಸ್ವ ಉದ್ಯೋಗ ಲಭಿಸುತ್ತಿದೆ. ನಮ್ಮ ಸರಕಾರ ಅರಣ್ಯ ಭೂಮಿಗೆ ಸಂಬಂಧಿಸಿ ಪ್ರಾಮಾಣಿಕ ಹೆಜ್ಜೆಗಳನ್ನು ಇಡುತ್ತಿದೆ. ರಾಜ್ಯಗಳಲ್ಲಿ ಸುಮಾರು 20 ಲಕ್ಷ ಭೂಮಿ ಲೀಸ್ ಗಳನ್ನು ಹಸ್ತಾಂತರಿಸುವ ಮೂಲಕ ಲಕ್ಷಾಂತರ ಬುಡಕಟ್ಟು ಸಂಗಾತಿಗಳ ಬಹಳ ದೊಡ್ಡ ಆತಂಕವನ್ನು ನಿವಾರಣೆ ಮಾಡಿದ್ದೇವೆ.

ಸಹೋದರರೇ ಮತ್ತು ಸಹೋದರಿಯರೇ,

ನಮ್ಮ ಸರಕಾರ ಶಿಕ್ಷಣ ಮತ್ತು ಬುಡಕಟ್ಟು ಯುವಜನತೆಯ ಕೌಶಲ್ಯಗಳಿಗೆ ವಿಶೇಷ ಒತ್ತನ್ನು ನೀಡುತ್ತಿದೆ. ಏಕಲವ್ಯ ಮಾದರಿ ವಸತಿ ಶಾಲೆಗಳು ಬುಡಕಟ್ಟು ಪ್ರದೇಶಗಳಲ್ಲಿ ಶಿಕ್ಷಣದ ಹೊಸ ಬೆಳಕನ್ನು ಬೀರುತ್ತಿವೆ. ಇಂದು ಇಲ್ಲಿ ನನಗೆ 50 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಶಿಲಾನ್ಯಾಸ ಮಾಡುವ ಅವಕಾಶ ದೊರಕಿದೆ. ದೇಶಾದ್ಯಂತ ಇಂತಹ 750 ಶಾಲೆಗಳನ್ನು ತೆರೆಯುವುದು ನಮ್ಮ ಗುರಿಯಾಗಿದೆ. ಇವುಗಳಲ್ಲಿ ಬಹಳಷ್ಟು ಏಕಲವ್ಯ ಶಾಲೆಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಏಳು ವರ್ಷಗಳ ಹಿಂದೆ ಸರಕಾರವು ಸುಮಾರು 40,000 ರೂಪಾಯಿಗಳನ್ನು ಪ್ರತೀ ವಿದ್ಯಾರ್ಥಿಯ ಮೇಲೆ ಖರ್ಚು ಮಾಡುತ್ತಿತ್ತು. ಇಂದು ಇದು ಒಂದು ಲಕ್ಷ ರೂಪಾಯಿಗೂ ಅಧಿಕವಾಗಿದೆ. ಇದರ ಪರಿಣಾಮವಾಗಿ ಬುಡಕಟ್ಟು ವಿದ್ಯಾರ್ಥಿಗಳು ಹೆಚ್ಚಿನ ಸವಲತ್ತು ಪಡೆಯುತ್ತಿದ್ದಾರೆ. ಕೇಂದ್ರ ಸರಕಾರವು ಸುಮಾರು 30 ಲಕ್ಷ ಬುಡಕಟ್ಟು ಯುವಜನತೆಗೆ ಪ್ರತೀ ವರ್ಷ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಬುಡಕಟ್ಟು ಜನರಿಗೆ ಉನ್ನತ ಶಿಕ್ಷಣ ಒದಗಿಸಲು ಮತ್ತು ಸಂಶೋಧನೆಯತ್ತ ಅವರನ್ನು ಜೋಡಿಸಲು ಅಭೂತಪೂರ್ವ ಕೆಲಸಗಳನ್ನು ಮಾಡಲಾಗುತ್ತಿದೆ. ಸ್ವಾತಂತ್ರ್ಯದ ಬಳಿಕ ಬರೇ 18 ಬುಡಕಟ್ಟು ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಲಾಗಿತ್ತು, ಆದರೆ ಬರೇ ಏಳು ವರ್ಷಗಳಲ್ಲಿ ಒಂಭತ್ತು ಹೊಸ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ.

ಸ್ನೇಹಿತರೇ,

ಕಲಿಯುವಿಕೆಯಲ್ಲಿ ಬುಡಕಟ್ಟು ಜನರಿಗೆ ಭಾಷೆ ಒಂದು ಬಹಳ ದೊಡ್ಡ ಸಮಸ್ಯೆಯಾಗಿದೆ. ಈಗ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಯಲ್ಲಿ ಬೋಧಿಸುವುದಕ್ಕೆ ಬಹಳಷ್ಟು ಒತ್ತು ನೀಡಲಾಗುತ್ತಿದೆ. ನಮ್ಮ ಬುಡಕಟ್ಟು ಸಮಾಜದ ಮಕ್ಕಳು ಇದರಿಂದ ಖಂಡಿತವಾಗಿಯೂ ಲಾಭ ಪಡೆಯಲಿದ್ದಾರೆ.

ಸಹೋದರರೇ ಮತ್ತು ಸಹೋದರಿಯರೇ,

ಬುಡಕಟ್ಟು ಜನರ ಪ್ರಯತ್ನಗಳು ಮತ್ತು ಸಬ್ಕಾ ಪ್ರಯಾಸ್ (ಪ್ರತಿಯೊಬ್ಬರ ಪ್ರಯತ್ನಗಳು) ಸ್ವಾತಂತ್ರ್ಯದ ಪುಣ್ಯಕರ ಸಂದರ್ಭದಲ್ಲಿ ಉತ್ತುಂಗಕ್ಕೇರುವ ಭಾರತವನ್ನು ನಿರ್ಮಾಣ ಮಾಡಲು ಶಕ್ತಿ ನೀಡುತ್ತವೆ. ನಾವು ಆತ್ಮ ಗೌರವಕ್ಕಾಗಿ, ಆತ್ಮ ವಿಶ್ವಾಸಕ್ಕಾಗಿ, ಮತ್ತು ಬುಡಕಟ್ಟು ಜನರ ಹಕ್ಕುಗಳಿಗಾಗಿ ಅವಿಶ್ರಾಂತವಾಗಿ ಹಗಲು ರಾತ್ರಿ ಕೆಲಸ ಮಾಡುತ್ತೇವೆ. ನಾವು ದೃಢ ನಿರ್ಧಾರವನ್ನು ಜನಜಾತೀಯ ಗೌರವ ದಿವಸದಂದು ಪುನರುಚ್ಚರಿಸುತ್ತೇವೆ. ನಾವು ಗಾಂಧೀ ಜಯಂತಿ, ಸರ್ದಾರ್ ಪಟೇಲ್ ಅವರ ಜನ್ಮದಿನವನ್ನು ಆಚರಿಸುವಂತೆ, ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮವರ್ಷಾಚರಿಸುವಂತೆ ನವೆಂಬರ್ 15 ರಂದು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ದಿನವನ್ನು ಪ್ರತೀ ವರ್ಷ ದೇಶಾದ್ಯಂತ ಜನಜಾತೀಯ ಗೌರವ ದಿನವನ್ನಾಗಿ ಆಚರಿಸಲಾಗುವುದು.

ಮತ್ತೊಮ್ಮೆ ನಿಮ್ಮೆಲ್ಲರಿಗೂ ಶುಭವನ್ನು ಹಾರೈಸುತ್ತೇನೆ! ಎರಡೂ ಕೈಗಳನ್ನು ಮೇಲೆತ್ತಿ ನನ್ನೊಂದಿಗೆ ಗಟ್ಟಿಯಾಗಿ ಹೇಳಿ-

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಬಹಳ ಧನ್ಯವಾದಗಳು!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿ ಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1772919) Visitor Counter : 157