ಪ್ರಧಾನ ಮಂತ್ರಿಯವರ ಕಛೇರಿ

ಮಧ್ಯಪ್ರದೇಶದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ [ಪಿ.ಎಂ.ಜಿ.ಕೆ.ಎ.ವೈ] ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ


ರಾಜ್ಯದ ಸುಮಾರು 5 ಕೋಟಿ ಫಲಾನುಭವಿಗಳು ಪಿ.ಎಂ.ಜಿ.ಕೆ.ಎ.ವೈ ನಡಿ ಸೌಲಭ್ಯ ಪಡೆಯುತ್ತಿದ್ದಾರೆ

ಮಳೆ ಮತ್ತು ಪ್ರವಾಹ ಸಂಕಷ್ಟದಲ್ಲಿ ಭಾರತ ಸರ್ಕಾರ ಮತ್ತು ಇಡೀ ದೇಶದ ಜನತೆ ಮಧ್ಯಪ್ರದೇಶದೊಂದಿಗಿದೆ : ಪ್ರಧಾನಮಂತ್ರಿ

ಕೊರೋನಾ ಬಿಕ್ಕಟ್ಟು ಎದುರಿಸುವ ಕಾರ್ಯತಂತ್ರದಲ್ಲಿ ಭಾರತ ಬಡವರಿಗೆ ಪ್ರಧಾನ ಆದ್ಯತೆ ನೀಡಿದೆ : ಪ್ರಧಾನಮಂತ್ರಿ

80 ಕೋಟಿಗೂ ಹೆಚ್ಚು ನಾಗರಿಕರು ಉಚಿತವಾಗಿ ಆಹಾರ ಧಾನ್ಯವಷ್ಟೇ ಅಲ್ಲದೇ 8 ಕೋಟಿಗೂ ಹೆಚ್ಚು ಬಡ ಕುಟುಂಬಗಳು ಉಚಿತ ಅಡುಗೆ ಅನಿಲ ಸಿಲಿಂಡರ್ ಗಳನ್ನು ಸಹ ಪಡೆಯುತ್ತಿದ್ದಾರೆ

ಕಾರ್ಮಿಕರು ಮತ್ತು ರೈತರ ಖಾತೆಗಳಿಗೆ ಸಹಸ್ರಾರು ಕೋಟಿ ರೂಪಾಯಿ ವರ್ಗಾವಣೆ

ಡಬಲ್ ಎಂಜಿನ್ ಸರ್ಕಾರದಲ್ಲಿ ರಾಜ್ಯ ಸರ್ಕಾರಕ್ಕೆ ಕೇಂದ್ರ ಪೂರಕ: ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಸುಧಾರಣೆ ಮತ್ತು ಶಕ್ತಿ ಹೆಚ್ಚಳಕ್ಕೆ ಇದು ಸಹಕಾರಿ ; ಪ್ರಧಾನಮಂತ್ರಿ

ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚವ್ಹಾಣ್ ಅವರ ನಾಯಕತ್ವದಲ್ಲಿ ಮಧ್ಯಪ್ರದೇಶ ಬಹಳ ಹಿಂದೆಯೇ “ಬಿಮಾರು” ರಾಜ್ಯ ಚಿತ್ರಣವನ್ನು ಕಳಚಿಕೊಂಡಿದೆ : ಪ್ರಧಾನಮಂತ್ರಿ

ಮೊದಲು ಅವರು ಯಾವುದೇ ಸೌಲಭ್ಯವನ್ನು ಒದಗಿಸಲಿಲ್ಲ. ಕೇವಲ ತಪ್ಪಾಗಿ ಸಹಾನುಭೂತಿ ವ್ಯಕ್ತಪಡಿಸಿದ್ದರು. ಆದರೆ ನಾವು ತಳಮಟ್ಟದಿಂದ ಮೇಲೆದ್ದ ಜನರ ವಿಭಿನ್ನ ಕಾರ್ಯ ಶೈಲಿ ಮತ್ತು ನಾವು ಎಲ್ಲಾ ಸವಾಲುಗಳನ್ನು ಎದುರಿಸಿದ್ದೇವೆ : ಪ್ರಧಾನಮಂತ್ರಿ

ಬಡವರನ್ನು ಸಶಕ್ತೀಕರಣ ಮತ್ತು ಸಬಲೀಕರಣಗೊಳಿಸಲು ಇತ್ತೀ

Posted On: 07 AUG 2021 1:20PM by PIB Bengaluru

ಮಧ್ಯಪ್ರದೇಶದಲ್ಲಿನ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನಾ ಯೋಜನೆ [ಪಿ.ಎಂ.ಜಿ.ಕೆ.ಎ.ವೈ] ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಸಂವಾದ ನಡೆಸಿದರು. ಈ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಹೆಚ್ಚಿನ ಜಾಗೃತಿ ಮೂಡಿಸುತ್ತಿದ್ದು, ಯಾವುದೇ ಅರ್ಹವ್ಯಕ್ತಿ ಸೌಲಭ್ಯದಿಂದ ವಂಚಿತರಾಗುವುದಿಲ್ಲ ಎಂದು ಹೇಳಿದರು.

2021 ರ ಆಗಸ್ಟ್ 7 ಅನ್ನು ಮಧ್ಯಪ್ರದೇಶ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ದಿನವನ್ನಾಗಿ ಆಚರಿಸುತ್ತಿದೆ. ರಾಜ್ಯಪಾಲರು ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮಧ್ಯಪ್ರದೇಶದ ಸುಮಾರು 5 ಕೋಟಿ ಫಲಾನುಭವಿಗಳು ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ.

ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು, ಮಧ್ಯಪ್ರದೇಶದ ಮಳೆ ಮತ್ತು ಪ್ರವಾಹದಿಂದ ಜೀವನ ಮತ್ತು ಜಿವನೋಪಾಯದ ಮೇಲೆ ಆಗಿರುವ ಪರಿಣಾಮಗಳ ಕುರಿತು ಪ್ರಸ್ತಾಪಿಸಿದರು. ಇದು ಸಂಕಷ್ಟದ ಘಳಿಗೆ, ಭಾರತ ಸರ್ಕಾರ ಮತ್ತು ಇಡೀ ದೇಶದ ಜನತೆ ನಿಮ್ಮೊಂದಿಗಿದೆ ಎಂದು ವಾಗ್ದಾನ ಮಾಡಿದರು.

ಕೊರೋನಾ ಸಾಂಕ್ರಾಮಿಕ ಕುರಿತು ಉಲ್ಲೇಖಿಸಿ, ಇದು ಶತಮಾನದಲ್ಲಿ ಒಮ್ಮೆ ಸಂಭವಿಸುವ ವಿಪತ್ತು. ಈ ಸವಾಲಿನ ವಿರುದ್ಧ ಹೋರಾಡಲು ಇಡೀ ರಾಷ್ಟ್ರ ಒಟ್ಟಾಗಿ ನಿಂತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಕೊರೋನಾ ಬಿಕ್ಕಟ್ಟು ಎದುರಿಸುವ ಕಾರ್ಯತಂತ್ರದಲ್ಲಿ ಭಾರತ ಬಡವರಿಗೆ ಪ್ರಧಾನ ಆದ್ಯತೆ ನೀಡಿದೆ ಎಂದು ಪುನರುಚ್ಚರಿಸಿದರು. ಮೊದಲ ದಿನದಿಂದಲೂ ಬಡವರು ಮತ್ತು ಕಾರ್ಮಿಕರಿಗೆ ಆಹಾರ ಮತ್ತು ಉದ್ಯೋಗ ಒದಗಿಸುವ ಕುರಿತು ಸರ್ಕಾರ ಗಮನಹರಿಸಿತ್ತು. ದೇಶದ 80 ಕೋಟಿಗೂ ಹೆಚ್ಚು ನಾಗರಿಕರು ಪಡಿತರವನ್ನಷ್ಟೇ ಅಲ್ಲ, 8 ಕೋಟಿಗೂ ಹೆಚ್ಚು ಕುಟುಂಬಗಳು ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್ ಗಳನ್ನು ಸಹ ಪಡೆಯುತ್ತಿವೆ. 20 ಕೋಟಿಗೂ ಹೆಚ್ಚು ಮಹಿಳೆಯರ ಜನ್ ಧನ್ ಖಾತೆಗಳಿಗೆ 30 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ನೇರವಾಗಿ ವರ್ಗಾವಣೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಕಾರ್ಮಿಕರು ಮತ್ತು ರೈತರ ಖಾತೆಗಳಿಗೆ ಸಹಸ್ರಾರು ಕೋಟಿ ರೂಪಾಯಿಗಳನ್ನು ವರ್ಗಾಯಿಸಲಾಗಿದೆ. ಆಗಸ್ಟ್ 9 ರಂದು 10 ರಿಂದ 11 ಕೋಟಿ ರೈತರ ಖಾತೆಗಳಿಗೆ ಸಹಸ್ರಾರು ಕೋಟಿ ರೂಪಾಯಿ ವರ್ಗಾಯಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇತ್ತೀಚೆಗೆ 50 ಕೋಟಿ ಕೋವಿಡ್ ಲಸಿಕೆ ಡೋಸ್ ಗಳನ್ನು ಹಾಕಿ ಹೆಗ್ಗುರುತು ದಾಖಲಿಸಿರುವ ಕುರಿತು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಭಾರತದಲ್ಲಿ ಕೇವಲ ಒಂದು ವಾರದಲ್ಲಿ ಜಗತ್ತಿನ ಹಲವು ರಾಷ್ಟ್ರಗಳ ಜನಸಂಖ್ಯೆಗೆ ಸರಿ ಸಮಾನವಾಗಿ ಲಸಿಕೆ ಹಾಕಲಾಗಿತ್ತು. “ ಇದು ನವ ಭಾರತದ ಹೊಸ ಸಾಮರ್ಥ್ಯವಾಗಿದ್ದು, ಭಾರತ ಸ್ವಾವಲಂಬಿಯಾಗುತ್ತಿದೆ”. ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ಲಸಿಕಾ ಅಭಿಯಾನವನ್ನು ಮತ್ತಷ್ಟು ತ್ವರಿತಗೊಳಿಸಬೇಕು ಎಂದರು.

ಪ್ರಪಂಚದಾದ್ಯಂತ ಜೀವನೋಪಾಯದ ಮೇಲೆ ಈ ಅಭೂತಪೂರ್ವ ಬಿಕ್ಕಟ್ಟು ಎದುರಾಗಿರುವ ಸಂದರ್ಭದಲ್ಲಿ ಭಾರತದಲ್ಲಿ ಕನಿಷ್ಠ ಹಾನಿ ಸಂಭವಿಸುವುದನ್ನು ಸಹ ನಿರಂತರವಾಗಿ ಖಾತ್ರಿಪಡಿಸುತ್ತಿದೆ. ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ವಲಯಕ್ಕೆ ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ನೆರವು ನೀಡಲಾಗಿದ್ದು,  ಈ ವಲಯದ ಪಾಲುದಾರರು ತಮ್ಮ ಚಟುವಟಿಕೆ ಮುಂದುವರೆಸಲು ಹಾಗೂ ಜೀವನೋಪಾಯವನ್ನು ಖಚಿತಪಡಿಸಲು ಇದರಿಂದ ಸಹಕಾರಿಯಾಗಲಿದೆ. ಒಂದು ದೇಶ – ಒಂದು ಪಡಿತರ ಚೀಟಿ, ನ್ಯಾಯಯುತ ಬಾಡಿಗೆ ಯೋಜನೆ, ಪಿ.ಎಂ. ಸ್ವನಿಧಿ ಯೋಜನೆಯಡಿ ಸುಲಭ ಮತ್ತು ಕೈಗೆಟುವ ರೀತಿಯಲ್ಲಿ ಸಾಲ, ದೇಶದಲ್ಲಿನ ಮೂಲ ಸೌಕರ್ಯ ಕಾರ್ಯಕ್ರಮಗಳು ಕಾರ್ಮಿಕ ವಲಯಕ್ಕೆ ದೊಡ್ಡ ಪ್ರಮಾಣದಲ್ಲಿ ನೆರವಾಗಿವೆ ಎಂದರು.  

ಡಬಲ್ ಎಂಜಿನ್ ಸರ್ಕಾರದ ಅನುಕೂಲಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆ – ಎಂ.ಎಸ್.ಪಿ ಅಡಿ ದಾಖಲೆ ಪ್ರಮಾಣದಲ್ಲಿ ಖರೀದಿ ಪ್ರಕ್ರಿಯೆ ನಡೆಸಿದೆ. ಮಧ್ಯಪ್ರದೇಶದಲ್ಲಿ ಈ ವರ್ಷ 17 ಲಕ್ಷ ರೈತರಿಂದ ಗೋಧಿ ಖರೀದಿಸಲಾಗಿದೆ ಮತ್ತು 25 ಸಾವಿರ ಕೋಟಿ ರೂಪಾಯಿ ಹಣವನ್ನು ಸಂಬಂಧಪಟ್ಟವರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಡಬಲ್ ಎಂಜಿನ್ ಸರ್ಕಾರಗಳು ಗರಿಷ್ಠ ಸಂಖ್ಯೆಯ ಗೋಧಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿವೆ. ಡಬಲ್ ಎಂಜಿನ್ ಸರ್ಕಾರದಲ್ಲಿ ರಾಜ್ಯ ಸರ್ಕಾರಕ್ಕೆ ಕೇಂದ್ರ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಸುಧಾರಣೆ ಮತ್ತು ಶಕ್ತಿ ಹೆಚ್ಚಳಕ್ಕೆ ಇದು ಸಹಕಾರಿಯಾಗಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚವ್ಹಾಣ್ ಅವರ ನಾಯಕತ್ವದಲ್ಲಿ ಮಧ್ಯಪ್ರದೇಶ ಬಹಳ ಹಿಂದೆಯೇ “ಬಿಮಾರು” ರಾಜ್ಯ ಚಿತ್ರಣವನ್ನು ಕಳಚಿಕೊಂಡಿದೆ  ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಹಾಲಿ ಅವಧಿಯಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುತ್ತಿರುವ ಕುರಿತು ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ವಿಳಂಬ ಧೋರಣೆ ಇತ್ತು. ಅವರು ಬಡವರ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು ಮತ್ತು ಫಲಾನುಭವಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ತಮ್ಮಷ್ಟಕ್ಕೆ ತಾವು ಉತ್ತರಿಸುತ್ತಿದ್ದರು. ಬಡ ಜನತೆ ಬ್ಯಾಂಕ್ ಖಾತೆ, ರಸ್ತೆ, ಅಡುಗೆ ಅನಿಲ ಸಂಪರ್ಕ, ಶೌಚಾಲಯ, ಕೊಳಾಯಿ ಮೂಲಕ ನೀರು ಪೂರೈಕೆ, ಸಾಲದ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿರಲಿಲ್ಲ. ಸುಳ್ಳು ನಿರೂಪಣೆಯಿಂದ ಬಹಳ ಸಮಯದವರೆಗೆ ಬಡವರನ್ನು ಸೌಲಭ್ಯದಿಂದ ವಂಚಿತರನ್ನಾಗಿ ಮಾಡಿತ್ತು. ಬಡಜನರಂತೆ ಹಾಲಿ ನಾಯಕತ್ವ ಕೂಡ ಕಷ್ಟಕರ ಸನ್ನಿವೇಶ ಎದುರಿಸಿ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದೆ ಎಂದು ಅವರು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಬಡವರನ್ನು ಸಶಕ್ತೀಕರಣ ಮತ್ತು ಸಬಲೀಕರಣಗೊಳಿಸಲು ನೈಜ ಮತ್ತು ಅರ್ಥಪೂರ್ಣ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ಇಂದು ರಸ್ತೆಗಳು ಪ್ರತಿಯೊಂದು ಗ್ರಾಮಗಳನ್ನು ಸಂಪರ್ಕಿಸುತ್ತಿವೆ. ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದ್ದು, ರೈತರಿಗೆ ಮಾರುಕಟ್ಟೆಗಳು ಕೈಗೆಟುಕುತ್ತಿವೆ ಮತ್ತು ಬಡವರು ಸಕಾಲದಲ್ಲಿ ಆಸ್ಪತ್ರೆಗಳಿಗೆ ತಲುಪಲು ಸಾಧ್ಯವಾಗುತ್ತಿದೆ ಎಂದರು.

ರಾಷ್ಟ್ರೀಯ ಕೈಮಗ್ಗ ದಿನದ ದಿನದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಅವರು, 1905 ರ ಅಗಸ್ಟ್ 7 ರ ದಿನವನ್ನು ಸ್ಮರಿಸಿಕೊಂಡು, ಅಂದು ಸ್ವದೇಶಿ ಚಳವಳಿ ಆರಂಭವಾಯಿತು. ದೇಶದಲ್ಲಿ ಗ್ರಾಮೀಣ, ಬಡ ಮತ್ತು ಬುಡಕಟ್ಟು ವರ್ಗಗಳನ್ನು ಸಬಲೀಕರಣಗೊಳಿಸುವ ಒಂದು ದೊಡ್ಡ ಅಭಿಯಾನ ನಡೆಯುತ್ತಿದೆ ಮತ್ತು ಜವಳಿ ವಲಯದಲ್ಲಿ ನಮ್ಮ ಕರಕುಶಲ, ಕೈಮಗ್ಗ ಕೆಲಸಗಾರರನ್ನು ಈ ಅಭಿಯಾನದಡಿ ಪ್ರೋತ್ಸಾಹಿ, ಉತ್ತೇಜಿಸಲಾಗುತ್ತಿದೆ. ಇದು ಸ್ಥಳೀಯರಿಗೆ ಧ್ವನಿ ನೀಡುವ ಚಳವಳಿಯಾಗಿದ್ದು, ಈ ಭಾವನೆಯೊಂದಿಗೆ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.

ಖಾದಿ ವಸ್ತ್ರವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಮರೆತುಹೋಗಿದ್ದ ಖಾದಿ ಇಂದು ಉಜ್ವಲ ಬ್ರ್ಯಾಂಡ್ ಆಗಿ ಹೊರ ಹೊಮ್ಮಿದೆ ಎಂದರು. “ಸ್ವಾತಂತ್ರ್ಯದ 100 ವರ್ಷಗಳ ಪಯಣದಲ್ಲಿ ನಾವು ಮುಂದೆ ಸಾಗುತ್ತಿದ್ದಂತೆ ಖಾದಿಯಲ್ಲಿ ಸ್ವಾತಂತ್ರ್ಯದ ಸ್ಫೂರ್ತಿಯನ್ನು ಬಲಪಡಿಸಿದ್ದೇವೆ” ಎಂದು ಹೇಳಿದರು.

ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಕೆಲವು ಸ್ಥಳೀಯ ಕರಕುಶಲ ವಸ್ತುಗಳನ್ನು ಖರೀದಿಸುವಂತೆ ಅವರು ಜನರಿಗೆ ಸಲಹೆ ನೀಡಿದರು. ತಮ್ಮ ಭಾಷಣದ ಕೊನೆಯಲ್ಲಿ ಹಬ್ಬಗಳ ಸಂದರ್ಭದಲ್ಲಿ ಕೊರೋನಾ ಬಾರದಂತೆ ತಡೆಯಲು ಅನುಸರಿಸಬೇಕಾದ ಎಚ್ಚರಿಕೆಗಳನ್ನು ಮರೆಯಬಾರದು. ಸಾಂಕ್ರಾಮಿಕದ ಮೂರನೇ ಅಲೆ ತಡೆಯಬೇಕು ಮತ್ತು ಜನತೆ ಸೋಂಕು ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಪಾಲಿಸಬೇಕು ಎಂದು ಒತ್ತಿ ಹೇಳಿದರು. ಕೊನೆಯಲ್ಲಿ ಆರೋಗ್ಯಕರ ಭಾರತ ಮತ್ತು ಸಮೃದ್ಧ ಭಾರತದ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು ಎಂದು ಶ‍್ರೀ ನರೇಂದ್ರ ಮೋದಿ ಅವರು ಹೇಳಿದರು.  

ಪ್ರಧಾನಮಂತ್ರಿ ಅವರು ಇತ್ತೀಚೆಗೆ ಗುಜರಾತ್ ಮತ್ತು ಉತ್ತರ ಪ್ರದೇಶದ ಪಿ.ಎಂ.ಜಿ.ಕೆ.ಎ.ವೈ ಫಲಾನುಭವಿಗಳೊಂದಿಗೂ ಸಹ ಸಂವಾದ ನಡೆಸಿದ್ದರು.

 

 

***

 



(Release ID: 1743668) Visitor Counter : 218