ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ನಿಯಂತ್ರಣ ಮತ್ತು ಹತೋಟಿಗಾಗಿ 6 ರಾಜ್ಯಗಳಿಗೆ ಕೇಂದ್ರದಿಂದ ತಂಡಗಳ ರವಾನೆ


ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ, ಅರುಣಾಚಲ ಪ್ರದೇಶ, ತ್ರಿಪುರ, ಒಡಿಶಾ, ಛತ್ತೀಸ್|ಗಢ ಮತ್ತು ಮಣಿಪುರಕ್ಕೆ ಉನ್ನತಾಧಿಕಾರಿಗಳಿರುವ ತಂಡಗಳ ರವಾನೆ

Posted On: 02 JUL 2021 11:32AM by PIB Bengaluru

ಕೋವಿಡ್-19 ಜಾಗತಿಕ ಸಾಂಕ್ರಾಮಿಕ ಸೋಂಕಿನ ವಿರುದ್ಧ ನಿರಂತರ  ಹೋರಾಟ ನಡೆಸುತ್ತಾ ಬಂದಿರುವ ಕೇಂದ್ರ ಸರ್ಕಾರವು ‘ಸಂಪೂರ್ಣ ಸರ್ಕಾರ’ ಮತ್ತು ‘ಸಂಪೂರ್ಣ ಸಮಾಜ’ ಎಂಬ ಕಾರ್ಯ ವಿಧಾನದಲ್ಲಿ ತನ್ನ ಹೋರಾಟವನ್ನು ಮುನ್ನಡೆಸುತ್ತಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೋವಿಡ್-19 ಸೋಂಕು ನಿಯಂತ್ರಣಕ್ಕೆ ನಡೆಸುತ್ತಿರುವ ಪ್ರಯತ್ನಗಳನ್ನು ಬಲಪಡಿಸಲು ಕೇಂದ್ರ ಸರ್ಕಾರ ಮಾಡುತ್ತಾ ಬಂದಿರುವ ಪ್ರಯತ್ನಗಳ ಭಾಗವಾಗಿ ಇದೀಗ, ಕೇಂದ್ರ ತಂಡಗಳನ್ನು ಸೃಜಿಸಿ, ವಿವಿಧ ರಾಜ್ಯಗಳಿಗೆ ನಿಯೋಜಿಸುತ್ತಿದೆ. ಕೋವಿಡ್-19 ಹೊಸ ಪ್ರಕರಣಗಳು ಹೆಚ್ಚಾಗುತ್ತಿರುವ ರಾಜ್ಯಗಳು ಮತ್ತು .ಕೇಂದ್ರಾಡಳಿತ ಪ್ರದೇಶಗಳಿಗೆ ಈ ತಂಡಗಳನ್ನು ರವಾನಿಸಲಾಗುತ್ತಿದೆ. ಈ ತಂಡಗಳು ರಾಜ್ಯಗಳಲ್ಲಿ ನಡೆಯುತ್ತಿರುವ ಕೋವಿಡ್-19 ನಿಯಂತ್ರಣ ಪ್ರಯತ್ನಗಳನ್ನು ಬಲಪಡಿಸಲಿವೆ. ರಾಜ್ಯಗಳ ನಿಯಂತ್ರಣ ಪ್ರಯತ್ನಗಳ ಜತೆಗೆ, ಈ ತಂಡಗಳು ಸಹ ಕೋವಿಡ್-19 ನಿಯಂತ್ರಣಕ್ಕೆ ತಮ್ಮ ಪ್ರಯತ್ನಗಳನ್ನು ಹಾಕುವ ಜತೆಗೆ, ಸೂಕ್ತ ಸಲಹೆ, ಸೂಚನೆಗಳನ್ನು ನೀಡಲಿವೆ.
ಕೋವಿಡ್-19 ಹೊಸ ಪ್ರಕರಣಗಳು ಹೆಚ್ಚುತ್ತಿರುವ ಕೇರಳ, ಅರುಣಾಚಲ ಪ್ರದೇಶ, ತ್ರಿಪುರ, ಒಡಿಶಾ, ಛತ್ತೀಸ್|ಗಢ ಮತ್ತು ಮಣಿಪುರ ರಾಜ್ಯಗಳಿಗೆ ಕೇಂದ್ರ ಸರ್ಕಾರ ಇಂದು ಬಹುಶಿಸ್ತೀಯ ತಂಡಗಳನ್ನು ಕಳುಹಿಸಿದೆ. ಮಣಿಪುರಕ್ಕೆ ಹೋಗಿರುವ ತಂಡಕ್ಕೆ ಇಎಂಆರ್ ಹೆಚ್ಚುವರಿ ಉಪ ಮಹಾನಿರ್ದೇಶಕ ಮತ್ತು ನಿರ್ದೇಶಕ ಡಾ. ಸ್ವಸ್ತಿಚರಣ್ ನೇತೃತ್ವ ವಹಿಸಿದ್ದಾರೆ. ಅರುಣಾಚಲ ಪ್ರದೇಶಕ್ಕೆ ತೆರಳಿರುವ ತಂಡಕ್ಕೆ ಎಐಐಎಚ್ ಅಂಡ್ ಪಿಎಚ್ ಸಂಸ್ಥೆಯ ಪ್ರಾಧ್ಯಾಪಕ ಡಾ. ಸಂಜಯ್ ಸಾಧುಖಾನ್, ತ್ರಿಪುರ ತಂಡಕ್ಕೆ ಎಐಐಎಚ್ ಅಂಡ್ ಪಿಎಚ್ ಸಂಸ್ಥೆಯ ನಿರ್ದೇಶಕ ಪ್ರಾಧ್ಯಾಪಕ ಡಾ. ಆರ್ ಎನ್ ಸಿನ್ಹಾ, ಕೇರಳ ತಂಡಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಾರ್ವಜನಿಕ ಆರೋಗ್ಯ ವಿಭಾಗದ ತಜ್ಞೆ ಡಾ. ರುಚಿ ಜೈನ್, ಒಡಿಶಾ ತಂಡಕ್ಕೆ ಎಐಐಎಚ್ ಅಂಡ್ ಪಿಎಚ್ ಸಂಸ್ಥೆಯ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಎ. ದನ್, ಛತ್ತೀಸ್|ಗಢ ತಂಡಕ್ಕೆ ರಾಯ್|ಪುರ ಎಐಐಎಂಎಸ್ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ದಿಬಾಕರ್ ಸಾಹು ನೇತೃತ್ವ ವಹಿಸಿದ್ದಾರೆ. ಈ ತಂಡಗಳು ಆಯಾ ರಾಜ್ಯಗಳಲ್ಲಿ ನಡೆಯುತ್ತಿರುವ ಕೋವಿಡ್-19 ನಿಯಂತ್ರಣ ಪ್ರಯತ್ನಗಳಿಗೆ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸಲು ಸಹಕಾರ ಮತ್ತು ಬೆಂಬಲ ನೀಡಲಿವೆ. 
ಇಬ್ಬರು ಉನ್ನತಾಧಿಕಾರಿಗಳಿರುವ ಪ್ರತಿ ತಂಡದಲ್ಲಿ ವೈದ್ಯ ಮತ್ತು ಸಾರ್ವಜನಿಕ ಆರೋಗ್ಯ ತಜ್ಞರಿರುತ್ತಾರೆ. ಈ ತಂಡಗಳು 6 ರಾಜ್ಯಗಳ ಒಟ್ಟಾರೆ ಕೋವಿಡ್-19 ನಿರ್ವಹಣೆಯ ಮೇಲೆ ನಿಗಾ ಇಡಲಿವೆ. ವಿಶೇಷವಾಗಿ, ಗಂಟಲು ದ್ರವ ಪರೀಕ್ಷೆ, ಮೇಲ್ವಿಚಾರಣೆ, ಹತೋಟಿ ಕಾರ್ಯಾಚರಣೆ, ಕೋವಿಡ್-19 ಸೂಕ್ತ ನಡವಳಿಕೆ, ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮತ್ತು ವೈದ್ಯಕೀಯ ಆಮ್ಲಜನಕ ಲಭ್ಯತೆ, ವೆಂಟಿಲೇಟರ್, ಆಂಬ್ಯುಲೆನ್ಸ್ ಸೇರಿದಂತೆ ಸಾಗಣೆ ವ್ಯವಸ್ಥೆ ಮತ್ತು ಜಾರಿಯ ಮೇಲ್ವಿಚಾರಣೆ ನಡೆಸಲಿವೆ. ಜತೆಗೆ, ಲಸಿಕೆ ನೀಡಿಕೆಯ ಪ್ರಗತಿಯ ಸ್ಥಿತಿಗತಿಯ ಮೇಲೆ ನಿಗಾ ಇಡಲಿವೆ. ಒಟ್ಟಾರೆ, ಕೇಂದ್ರ ತಂಡಗಳು ಕೋವಿಡ್-19 ನಿಯಂತ್ರಣ ಪರಿಸ್ಥಿತಿಯನ್ನು ನಿರ್ವಹಿಸುವ ಜತೆಗೆ, ಪರಿಹಾರ ಕ್ರಮಗಳನ್ನು ಸೂಚಿಸಲಿವೆ. 
ಕೇಂದ್ರ ತಂಡಗಳು ಆಯಾ ರಾಜ್ಯಗಳ ಒಟ್ಟಾರೆ ಪರಿಸ್ಥಿತಿಯ ಪರಾಮರ್ಶೆ ನಡೆಸಿ, ಅಲ್ಲಿನ ಸರ್ಕಾರಗಳಿಗೆ ಸಾರ್ವಜನಿಕ ಆರೋಗ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ಪರಿಹಾರ ಕ್ರಮಗಳನ್ನು ಸೂಚಿಸುವ ಜತೆಗೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳಿಗೆ ಸಮಗ್ರ ವರದಿ ಕಳಿಸಲಿವೆ. 

****



(Release ID: 1732413) Visitor Counter : 208