ಪ್ರಧಾನ ಮಂತ್ರಿಯವರ ಕಛೇರಿ

ಡಿಜಿಟಲ್ ಇಂಡಿಯಾ ಅಭಿಯಾನದ 6 ನೇ ವಾರ್ಷಿಕೋತ್ಸವದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಇಂಗ್ಲೀಷ್ ಅವತರಣಿಕೆ.

Posted On: 01 JUL 2021 2:32PM by PIB Bengaluru

ನಮಸ್ಕಾರ

ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ರವಿಶಂಕರ ಪ್ರಸಾದ್ ಜೀ, ಶ್ರೀ ಸಂಜಯ್ ಧೋತ್ರೇ ಜೀ, ನನ್ನೆಲ್ಲಾ ಸಹೋದ್ಯೋಗಿಗಳೇ, ಡಿಜಿಟಲ್ ಇಂಡಿಯಾದ ವಿವಿಧ ಉಪಕ್ರಮಗಳಲ್ಲಿ ತೊಡಗಿಸಿಕೊಂಡಿರುವ, ಸಹೋದರರೇ ಮತ್ತು ಸಹೋದರಿಯರೇ!. ಡಿಜಿಟಲ್ ಆಂದೋಲನದ ಆರು ವರ್ಷ ಪೂರ್ಣಗೊಳಿಸಿರುವುದಕ್ಕೆ ನಿಮಗೆಲ್ಲಾ ಅಭಿನಂದನೆಗಳು!.

ಈ ದಿನವು ಭಾರತದ ಸಾಮರ್ಥ್ಯ, ದೃಢ ನಿರ್ಧಾರ, ಮತ್ತು ಭವಿಷ್ಯದ ಸೀಮಾತೀತ ಸಾಧ್ಯತೆಗಳಿಗೆ ಅರ್ಪಿತವಾದಂತಹ ದಿನ. ಈ ದಿನವು ನಮಗೆ ರಾಷ್ಟ್ರವಾಗಿ ಕಳೆದ 5-6 ವರ್ಷಗಳಲ್ಲಿ ನಾವು ಸಾಧಿಸಿದ ಭಾರೀ ನೆಗೆತವನ್ನು ನೆನಪಿಸಿಕೊಡುವ ದಿನ.

ಸ್ನೇಹಿತರೇ,

ಪ್ರತಿಯೊಬ್ಬ ನಾಗರಿಕನ ಬದುಕನ್ನು ಸುಲಭಗೊಳಿಸಲು ಭಾರತವನ್ನು ಡಿಜಿಟಲ್ ಪಥದಲ್ಲಿ ಬಹಳ ತ್ವರಿತವಾಗಿ ಮುನ್ನಡೆಸಬೇಕು ಎನ್ನುವುದು ದೇಶದ ಕನಸು. ಈ ಕನಸನ್ನು ನನಸು ಮಾಡಲು ನಾವೆಲ್ಲರೂ ಹಗಲು-ರಾತ್ರಿ ಶ್ರಮಿಸುತ್ತಿದ್ದೇವೆ. ಒಂದೆಡೆ ಅನ್ವೇಷಣೆಗೆ ಆಸಕ್ತಿ ಇದ್ದರೆ, ಅವುಗಳನ್ನು ತ್ವರಿತವಾಗಿ ಅನುಸರಿಸುವ ಆಸಕ್ತಿ ಇರಬೇಕು. ಆದುದರಿಂದ ಡಿಜಿಟಲ್ ಇಂಡಿಯಾ ಭಾರತದ ದೃಢ ನಿರ್ಧಾರ. ಡಿಜಿಟಲ್ ಇಂಡಿಯಾವು ಆತ್ಮನಿರ್ಭರ ಭಾರತಕ್ಕೆ ಒಂದು ಸಲಕರಣೆ ಮತ್ತು ಅದು 21 ನೇ ಶತಮಾನದಲ್ಲಿ ಮೂಡಿ ಬರುತ್ತಿರುವ ಬಲಿಷ್ಟ ಭಾರತದ ಸ್ಪಷ್ಟ ಶಕ್ತಿ. ಘೋಷಣೆ. 

ಸ್ನೇಹಿತರೇ,

ಕನಿಷ್ಠ ಸರಕಾರ-ಗರಿಷ್ಠ ಆಡಳಿತ ಎಂಬ ತತ್ವವನ್ನು ಅನುಸರಿಸಿ ಸರಕಾರ ಮತ್ತು ಜನತೆಯ , ವ್ಯವಸ್ಥೆ ಮತ್ತು ಸೌಲಭ್ಯಗಳ, ಸಮಸ್ಯೆಗಳು ಮತ್ತು ಪರಿಹಾರಗಳ ನಡುವಿನ ಅಂತರವನ್ನು ನಿವರಿಸುವುದು. ಸಂಕಷ್ಟಗಳನ್ನು ತೊಡೆದು  ಸಾರ್ವಜನಿಕರಿಗೆ ಅನುಕೂಲತೆಗಳನ್ನು ಹೆಚ್ಚಿಸುವುದು ಈ ಕ್ಷಣದ ಆವಶ್ಯಕತೆಯಾಗಿದೆ.ಮತ್ತು ಆದುದರಿಂದ ಡಿಜಿಟಲ್ ಇಂಡಿಯಾ ಎಂಬುದು ಸಾಮಾನ್ಯ ನಾಗರಿಕರಿಗೆ ಸೌಲಭ್ಯಗಳನ್ನು ಖಾತ್ರಿಪಡಿಸುವುದಕ್ಕೆ  ಮತ್ತು ಅವರ ಸಶಕ್ತೀಕರಣಕ್ಕೆ ಬಹಳ ಸಹಕಾರಿ.

ಸ್ನೇಹಿತರೇ,

ಡಿಜಿಟಲ್ ಇಂಡಿಯಾ ಇದನ್ನು ಹೇಗೆ ಸಾಧ್ಯ ಮಾಡಿದೆ ಎಂಬುದಕ್ಕೆ ಬಹಳ ದೊಡ್ಡ ಉದಾಹರಣೆ ಡಿಜಿಲಾಕರ್. ಶಾಲೆಯ ಪ್ರಮಾಣ ಪತ್ರಗಳು, ಕಾಲೇಜು ಪದವಿಗಳು, ಚಾಲನಾ ಪರವಾನಗಿಗಳು, ಪಾಸ್ ಪೋರ್ಟ್ ಗಳು, ಆಧಾರ್ ಅಥವಾ ಯಾವುದೇ ಇತರ ದಾಖಲೆಗಳನ್ನು ಕಾಪಿಡುವುದು ಜನರಿಗೆ ಸದಾ ಪ್ರಮುಖ ಕಳವಳದ ಸಂಗತಿ. ಬಹಳ ಸಂದರ್ಭಗಳಲ್ಲಿ ಮಹಾಪೂರ, ಭೂಕಂಪ, ಸುನಾಮಿ, ಅಥವಾ ಅಗ್ನಿ ಆಕಸ್ಮಿಕದಲ್ಲಿ ಪ್ರಮುಖ ಗುರುತಿನ ಕಾರ್ಡ್ ಗಳು ಹಾನಿಯಾಗುತ್ತವೆ ಅಥವಾ ನಾಶವಾಗುತ್ತವೆ. ಆದರೆ ಈಗ ಈ ಎಲ್ಲಾ ದಾಖಲೆಗಳನ್ನು 10 ನೇ , 12 ನೇ, ಕಾಲೇಜು, ವಿಶ್ವವಿದ್ಯಾಲಯ ಅಂಕಪಟ್ಟಿಗಳು, ಇತ್ಯಾದಿಗಳನ್ನು ಡಿಜಿಲಾಕರ್ ನಲ್ಲಿ  ಸುಲಭದಲ್ಲಿ ಸಂರಕ್ಷಿಸಿ ಇಡಬಹುದು. ಕೊರೊನಾ ಅವಧಿಯಲ್ಲಿ ಹಲವಾರು ನಗರಗಳಲ್ಲಿಯ ಕಾಲೇಜುಗಳು ಸೇರ್ಪಡೆಗಾಗಿ ಶಾಲಾ ಪ್ರಮಾಣ ಪತ್ರಗಳನ್ನು ಪರಿಶೀಲಿಸುವ ಕೆಲಸವನ್ನು   ಡಿಜಿಲಾಕರ್ ಸಹಾಯದಿಂದ ಮಾಡುತ್ತಿವೆ.

ಸ್ನೇಹಿತರೇ,

ಈಗ ಪ್ರಕ್ರಿಯೆಗಳು ಅನುಕೂಲಕರ ಆಗಿರುವುದು ಮಾತ್ರವಲ್ಲ, ಡಿಜಿಟಲ್ ಇಂಡಿಯಾ ಮೂಲಕ ಬಹಳ ತ್ವರಿತವೂ ಆಗಿವೆ. ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸುವುದಿರಲಿ, ಅಥವಾ ಜನನ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸುವುದಿರಲಿ, ವಿದ್ಯುತ್ ಬಿಲ್, ನೀರಿನ ಬಿಲ್ ಪಾವತಿ,ಆದಾಯ ತೆರಿಗೆ ರಿಟರ್ನ್ ಮತ್ತು ಇಂತಹ ಹಲವು ಸೇವೆಗಳನ್ನು  ಪಡೆಯುವುದಿರಲಿ ಅಲ್ಲಿ ಪ್ರಕ್ರಿಯೆಗಳು ಅನುಕೂಲಕರ ಮತ್ತು ತ್ವರಿತ ಆಗಿವೆ. ಮತ್ತು ಜನತೆಗೆ ಈ ಎಲ್ಲಾ ಸೇವೆಗಳೂ ಹಳ್ಳಿಗಳ ಸಿ.ಎಸ್.ಸಿ. ಕೇಂದ್ರಗಳಲ್ಲಿ ಲಭ್ಯವಾಗುತ್ತವೆ. ಡಿಜಿಟಲ್ ಇಂಡಿಯಾ ಬಡವರಿಗೆ ಪಡಿತರ ಪೂರೈಕೆಯ ಪ್ರಕ್ರಿಯೆಯನ್ನು ಸರಳ ಮಾಡಿದೆ. 

ಒಂದು ದೇಶ, ಒಂದು ಪಡಿತರ ಕಾರ್ಡ್ ಎಂಬ ನಿರ್ಧಾರವನ್ನು ಈಡೇರಿಸಿದ ಶಕ್ತಿ ಡಿಜಿಟಲ್ ಇಂಡಿಯಾದ್ದು. ಈಗ ಇನ್ನೊಂದು ರಾಜ್ಯಕ್ಕೆ ವಲಸೆ ಹೋದರೆ ಹೊಸ ಪಡಿತರ ಕಾರ್ಡ್ ಮಾಡಬೇಕಿಲ್ಲ. ಒಂದು ರೇಶನ್ ಕಾರ್ಡ್ (ಪಡಿತರ ಕಾರ್ಡ್) ಇಡೀ ದೇಶದಲ್ಲಿ ಮಾನ್ಯವಾಗುತ್ತದೆ. ಕಾರ್ಮಿಕರ ಕುಟುಂಬಗಳು ಕೆಲಸಕ್ಕಾಗಿ ಇತರ ರಾಜ್ಯಗಳಿಗೆ ಹೋದಾಗ ಇದರಿಂದ ಅವರಿಗೆ ಬಹಳ ಪ್ರಯೋಜನವಾಗುತ್ತದೆ. ನಾನು ಅಂತಹ ಸಹೋದ್ಯೋಗಿಯೊಬ್ಬರ ಜೊತೆ ಈಗಷ್ಟೇ ಮಾತನಾಡಿದ್ದೆ.

ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯ ಇದಕ್ಕೆ ಸಂಬಂಧಿಸಿ ಬಹಳ ಪ್ರಮುಖವಾದ ತೀರ್ಪನ್ನು ನೀಡಿದೆ. ಒಂದು ದೇಶ, ಒಂದು ಪಡಿತರ ಕಾರ್ಡ್ ಯೋಜನೆಗೆ ಒಪ್ಪದ ಕೆಲವು ರಾಜ್ಯಗಳಿವೆ. ಈಗ ಸರ್ವೋಚ್ಚ ನ್ಯಾಯಾಲಯ ಆ ರಾಜ್ಯಗಳಿಗೆ ಇದನ್ನು ತ್ವರಿತವಾಗಿ ಅನುಷ್ಠಾನ ಮಾಡುವಂತೆ ಆದೇಶ ನೀಡಿದೆ. ಈ ನಿರ್ಧಾರಕ್ಕಾಗಿ ನಾನು ಸರ್ವೋಚ್ಚ ನ್ಯಾಯಾಲಯವನ್ನು ಶ್ಲಾಘಿಸುತ್ತೇನೆ. ಯಾಕೆಂದರೆ ಈ ಯೋಜನೆ ಬಡವರಿಗೆ ಮತ್ತು ಕೆಲಸಕ್ಕಾಗಿ ವಲಸೆ ಹೋಗುವಂತಹ ಕಾರ್ಮಿಕರಿಗಾಗಿ ಇರುವಂತಹ ಯೋಜನೆ. ಮತ್ತು ಅಲ್ಲಿ ಸೂಕ್ಷ್ಮತೆ ಇದ್ದರೆ ಇಂತಹ ಕೆಲಸಕ್ಕೆ ಆದ್ಯತೆ ದೊರೆಯುತ್ತದೆ.

ಸ್ನೇಹಿತರೇ,

ಡಿಜಿಟಲ್ ಇಂಡಿಯಾವು ಆತ್ಮನಿರ್ಭರ ಭಾರತ ನಿರ್ಧಾರದ ಹಾದಿಯನ್ನು ಬಲಪಡಿಸುತ್ತಿದೆ. ಡಿಜಿಟಲ್ ಇಂಡಿಯಾವು ವ್ಯವಸ್ಥೆಯ ಜೊತೆ ಸಂಪರ್ಕಿಸುವ ಕಲ್ಪನೆಯನ್ನೇ ಮಾಡಿರದ ಜನರನ್ನು ವ್ಯವಸ್ಥೆಯ ಜೊತೆ ಬೆಸೆಯುತ್ತಿದೆ. ನಾನು ಈಗ ಕೆಲವು ಫಲಾನುಭವಿಗಳ ಜೊತೆ ಮಾತನಾಡಿದೆ. ಅವರು ಹೆಮ್ಮೆಯಿಂದ ಡಿಜಿಟಲ್ ಪರಿಹಾರಗಳ ಮೂಲಕ ತಮ್ಮ ಬದುಕಿನಲ್ಲಾಗಿರುವ ಬದಲಾವಣೆಗಳನ್ನು ಕುರಿತಂತೆ ತಮ್ಮ ಅನುಭವವನ್ನು ಹಂಚಿಕೊಂಡರು.

ಬೀದಿ ಬದಿ ವ್ಯಾಪಾರಿಗಳು ಬ್ಯಾಂಕಿಂಗ್ ವ್ಯವಸ್ಥೆಯ ಭಾಗವಾಗುತ್ತೇವೆ ಎಂದು ಕನಸು ಕಾಣುವುದು ಸಾಧ್ಯವಿತ್ತೇ ?. ಅವರಿಗೆ ಕಡಿಮೆ ಬಡ್ಡಿದರದಲ್ಲಿ ಮತ್ತು ಸುಲಭದಲ್ಲಿ ಬ್ಯಾಂಕುಗಳಿಂದ ಸಾಲ ಪಡೆಯುವುದು ಸಾಧ್ಯವಿತ್ತೇ? ಆದರೆ ಇದು ಸ್ವನಿಧಿ ಯೋಜನೆಯ ಮೂಲಕ ಸಾಧ್ಯವಾಗಿದೆ. ನಾವು ಗ್ರಾಮಗಳಲ್ಲಿ, ಹಳ್ಳಿಗಳಲ್ಲಿ ಆಗಾಗ ಮನೆ ಮತ್ತು ಭೂಮಿಗೆ ಸಂಬಂಧಿಸಿ ವಿವಾದಗಳ ಸುದ್ದಿಗಳನ್ನು ಕೇಳುತ್ತೇವೆ. ಈಗ ಹಳ್ಳಿಗಳ ಭೂಮಿಗಳ ಡ್ರೋನ್ ಮ್ಯಾಪಿಂಗ್ ನ್ನು ಸ್ವಾಮಿತ್ವ ಯೋಜನೆಯಡಿ ಮಾಡಲಾಗುತ್ತಿದೆ. ಗ್ರಾಮಸ್ಥರು ಅವರ ಮನೆಗಳಿಗೆ ಸಂಬಂಧಿಸಿದ ಕಾನೂನು ಬದ್ಧ ದಾಖಲೆಗಳನ್ನು ಡಿಜಿಟಲ್ ಮೂಲಕ ಪಡೆಯುತ್ತಿದ್ದಾರೆ. ದೇಶದ ಕೋಟ್ಯಂತರ ನಾಗರಿಕರು ಈಗ ಆನ್ ಲೈನ್ ಶಿಕ್ಷಣ ಮತ್ತು ವೈದ್ಯಕೀಯ ಸೇವೆಯನ್ನು ಒದಗಿಸುವ ವೇದಿಕೆಗಳ ಅಭಿವೃದ್ಧಿಯಿಂದ ದೊರೆಯುವ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.

ಸ್ನೇಹಿತರೇ,

ಅತ್ಯಂತ ದೂರದ ದುರ್ಗಮ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ಖಾತ್ರಿಪಡಿಸುವಲ್ಲಿ ಡಿಜಿಟಲ್ ಇಂಡಿಯಾ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಬಿಹಾರದ ಒಬ್ಬರು ನನಗೆ ಈಗಷ್ಟೇ ಇ-ಸಂಜೀವನಿ ತಮ್ಮ ಅಜ್ಜಿಯ ರಕ್ಷಣೆಗೆ ಹೇಗೆ ಈ ಬಿಕ್ಕಟ್ಟಿನ ಸಮಯದಲ್ಲಿಯೂ ನೆರವಾಯಿತು ಎಂಬುದನ್ನು ಹೇಳಿದರು. ನಮ ಆದ್ಯತೆ ಏನೆಂದರೆ ಪ್ರತಿಯೊಬ್ಬರಿಗೂ ಸಕಾಲದಲ್ಲಿ ಉತ್ತಮ ಮತ್ತು ಮತ್ತು ಆರೋಗ್ಯ ಸವಲತ್ತುಗಳು ಲಭ್ಯವಾಗಬೇಕು ಎಂಬುದು. ಈ ಉದ್ದೇಶಕ್ಕಾಗಿ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಆಂದೋಲನ ಅಡಿಯಲ್ಲಿ ಸಕ್ರಿಯ ವೇದಿಕೆಯು ಪ್ರಸ್ತುತ ಕಾರ್ಯಾಚರಣೆಯಲ್ಲಿದೆ.

ಕೊರೊನಾ ಅವಧಿಯಲ್ಲಿ ಭಾರತ ಅಭಿವೃದ್ಧಿಪಡಿಸಿದ ಡಿಜಿಟಲ್ ಪರಿಹಾರಗಳು ಕೂಡಾ ಚರ್ಚೆಯ ವಿಷಯಗಳು. ಮತ್ತು ಅವು ಜಗತ್ತಿನಾದ್ಯಂತ ಇಂದು ಆಕರ್ಷಣೆಯ ಸಂಗತಿಗಳಾಗಿವೆ. ಜಗತ್ತಿನ ಅತ್ಯಂತ ದೊಡ್ಡ ಡಿಜಿಟಲ್ ಸಂಪರ್ಕ ಪತ್ತೆ ಆಪ್ ಆಗಿರುವ ಆರೋಗ್ಯ ಸೇತು ಕೊರೊನಾ ಸೋಂಕು ತಡೆಯುವಲ್ಲಿ ಬಹಳ ದೊಡ್ಡ ಸಹಾಯ ಮಾಡಿದೆ. ಲಸಿಕೆಗಾಗಿ ಅಭಿವೃದ್ಧಿ ಮಾಡಿದ ಭಾರತದ ಕೊವಿನ್ ಆಪ್ ಬಗ್ಗೆ ಹಲವಾರು ದೇಶಗಳು ಆಸಕ್ತಿ ತೋರಿಸುತ್ತಿವೆ. ಅವರು ತಮ್ಮ ದೇಶಗಳಲ್ಲಿ ಈ ಯೋಜನೆಯ ಲಾಭವನ್ನು ಪಡೆಯಲು ಇಚ್ಛಿಸುತ್ತಿದ್ದಾರೆ. ಲಸಿಕಾಕರಣದ ಪ್ರಕ್ರಿಯೆಗಾಗಿ ಇಂತಹ ಮೇಲುಸ್ತುವಾರಿ ನಿಗಾ ಸಲಕರಣೆಯನ್ನು ಹೊಂದಿರುವುದು ನಮ್ಮ ತಾಂತ್ರಿಕ ಪ್ರಾವೀಣ್ಯಕ್ಕೆ ಸಾಕ್ಷಿ.

ಸ್ನೇಹಿತರೇ,

ಕೋವಿಡ್ ಅವಧಿಯಲ್ಲಿ ಡಿಜಿಟಲ್ ಇಂಡಿಯಾ ಹೇಗೆ ನಮ್ಮ ಕೆಲಸದ ಶೈಲಿಯನ್ನು ಸುಲಭಗೊಳಿಸಿತು ಎಂಬುದನ್ನು ನಾವೆಲ್ಲಾ ಅರಿತುಕೊಂಡಿದ್ದೇವೆ. ನಾವಿಂದು ಗ್ರಾಮಗಳಲ್ಲಿ ಅಭಿವೃದ್ಧಿ ಮಾಡಲಾಗಿರುವ ಹೋಂ ಸ್ಟೇಗಳಿಂದ, ಪರ್ವತ ಪ್ರದೇಶಗಳಿಂದ ಜನರು ಕೆಲಸ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಡಿಜಿಟಲ್ ಸಂಪರ್ಕ ಇಲ್ಲದಿದ್ದರೆ ಕೊರೊನಾ ಅವಧಿಯಲ್ಲಿ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಕಲ್ಪಿಸಿಕೊಳ್ಳಿ?. ಕೆಲವು ಜನರು ಡಿಜಿಟಲ್ ಇಂಡಿಯಾ ಬರೇ ಬಡವರಿಗೆ ಮಾತ್ರ ಎಂದು ಭಾವಿಸಿದ್ದಾರೆ. ಆದರೆ ಈ ಆಂದೋಲನ ಮಧ್ಯಮ ವರ್ಗದ ಜನರ ಮತ್ತು ಯುವ ಜನತೆಯ ಬದುಕನ್ನೂ ಬದಲಾಯಿಸಿದೆ.

ಅಲ್ಲಿ ತಂತ್ರಜ್ಞಾನ ಇರದಿದ್ದರೆ ನಮ್ಮ ಹೊಸ ಸಹಸ್ರಮಾನದಲ್ಲಿ ಜನಿಸಿದವರ ಏನಾಗುತ್ತಿತ್ತು?. ಅಲ್ಲಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳು, ಅಂತರ್ಜಾಲ ಮತ್ತು ದತ್ತಾಂಶ ಲಭ್ಯ ಇಲ್ಲದಿದ್ದರೆ ಅವರ ದೈನಂದಿನ ಕೆಲಸ ಕಾರ್ಯಗಳು ಅಸ್ತವ್ಯಸ್ತವಾಗುತ್ತಿದ್ದವು. ಆದುದರಿಂದ ಡಿಜಿಟಲ್ ಇಂಡಿಯಾ ಅಂದರೆ ಎಲ್ಲರಿಗೂ ಅವಕಾಶಗಳು, ಎಲ್ಲರಿಗೂ ಸವಲತ್ತುಗಳು, ಮತ್ತು ಅದು ಎಲ್ಲರ ಸಹಭಾಗಿತ್ವ. ಡಿಜಿಟಲ್ ಇಂಡಿಯಾ ಎಂದರೆ ಪ್ರತಿಯೊಬ್ಬರಿಗೂ ಸರಕಾರದ ವ್ಯವಸ್ಥೆಯ ಸಂಪರ್ಕ. ಡಿಜಿಟಲ್ ಇಂಡಿಯಾ ಎಂದರೆ ಪಾರದರ್ಶಕ, ಪಕ್ಷಪಾತ ರಹಿತ ವ್ಯವಸ್ಥೆ. ಮತ್ತು ಅದು ಭ್ರಷ್ಟಾಚಾರದ ಮೇಲಿನ ದಾಳಿ. ಡಿಜಿಟಲ್ ಇಂಡಿಯಾ ಎಂದರೆ ಸಮಯದ ಉಳಿತಾಯ, ಶ್ರಮದ ಉಳಿತಾಯ ಮತ್ತು ಹಣದ ಉಳಿತಾಯ. ಡಿಜಿಟಲ್ ಇಂಡಿಯಾ ಎಂದರೆ ತ್ವರಿತ ಮತ್ತು ಪೂರ್ಣ ಲಾಭ. ಡಿಜಿಟಲ್ ಇಂಡಿಯಾ ಎಂದರೆ ಕನಿಷ್ಠ ಸರಕಾರ, ಗರಿಷ್ಠ ಆಡಳಿತ.

ಸ್ನೇಹಿತರೇ, ಡಿಜಿಟಲ್ ಇಂಡಿಯಾ ಆಂದೋಲನದ ಇನ್ನೊಂದು ವೈಶಿಷ್ಟ್ಯ ಎಂದರೆ ಮೂಲ ಸೌಕರ್ಯದ ಪ್ರಮಾಣ ಮತ್ತು ವೇಗದ ಮೇಲೆ ಭಾರೀ ಒತ್ತನ್ನು ನೀಡಲಾಗಿದೆ. ದೇಶದ ಹಳ್ಳಿಗಳಲ್ಲಿ 2.5 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳಿಗೆ ಅಂತರ್ಜಾಲ ಸೇವೆಯನ್ನು ಒದಗಿಸಲಾಗಿದೆ. ಒಂದು ಕಾಲದಲ್ಲಿ ಇದು ಬಹಳ ಕಷ್ಟದ ಕೆಲಸವೆಂದು ಭಾವಿಸಲಾಗಿತ್ತು. ಭಾರತ್ ನೆಟ್ ಯೋಜನೆ ಅಡಿಯಲ್ಲಿ ಗ್ರಾಮಗಳಿಗೆ ಬ್ರಾಡ್ ಬ್ಯಾಂಡ್ ಅಂತರ್ಜಾಲ ಸೌಲಭ್ಯವನ್ನು ಒದಗಿಸಲು ಆಂದೋಲನ ಮಾದರಿಯಲ್ಲಿ ಕೆಲಸಗಳು ನಡೆಯುತ್ತಿವೆ.

ಪಿ.ಎಂ.-ವಾಣಿ ಯೋಜನೆ ಅಡಿಯಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಬ್ರಾಡ್ ಬ್ಯಾಂಡ್ –ವೈಫೈ-ಅಂತರ್ಜಾಲ ಸೌಲಭ್ಯ ಲಭ್ಯವಾಗುವಂತಾಗಲು ಸಂಪರ್ಕ ಲಭ್ಯತಾ ಬಿಂದುಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು ನಮ್ಮ ಯುವಜನತೆಗೆ ಮತ್ತು ಬಡ ಕುಟುಂಬಗಳ ಮಕ್ಕಳಿಗೆ ಆನ್ ಲೈನ್ ಶಿಕ್ಷಣವನ್ನು ಪಡೆದುಕೊಳ್ಳಲು ಬಹಳ ದೊಡ್ಡ ಸಹಾಯವನ್ನು ಮಾಡುತ್ತದೆ. ದೇಶದಲ್ಲಿ ಕಡಿಮೆ ಬೆಲೆಯ ಟ್ಯಾಬ್ಲೆಟ್ ಮತ್ತು ಇತರ ಡಿಜಿಟಲ್ ಸಲಕರಣೆಗಳು ಲಭ್ಯವಾಗುವಂತೆ ಮಾಡಲು ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಪಿ.ಎಲ್.ಐ. ಯೋಜನೆಯ ಸೌಲಭ್ಯವನ್ನು ದೇಶದ ಮತ್ತು ಜಗತ್ತಿನ ಇಲೆಕ್ಟ್ರಾನಿಕ್ಸ್ ಕಂಪೆನಿಗಳಿಗೆ ವಿಸ್ತರಿಸಲಾಗುತ್ತಿದೆ.

ಸ್ನೇಹಿತರೇ,

ಭಾರತವು ಜಗತ್ತಿನ ಪ್ರಮುಖ ಡಿಜಿಟಲ್ ಆರ್ಥಿಕತೆಯಲ್ಲಿ ಒಂದಾಗಿರುವುದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ಸಂಗತಿ. ಕಳೆದ 6-7 ವರ್ಷಗಳಲ್ಲಿ ಸುಮಾರು 17 ಲಕ್ಷ ಕೋ.ರೂ.ಗಳನ್ನು ವಿವಿಧ ಯೋಜನೆಗಳ ಅಡಿಯಲ್ಲಿ ಜನರ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆ ಮಾಡಲಾಗಿದೆ. ಕೊರೊನಾ ಅವಧಿಯಲ್ಲಿ ಡಿಜಿಟಲ್ ಇಂಡಿಯಾ ಆಂದೋಲನದ ಪರಿಣಾಮವನ್ನು ನಾವು ನೋಡಿದ್ದೇವೆ. ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ನಾಗರಿಕರಿಗೆ ಲಾಕ್ ಡೌನ್ ಕಾರಣದಿಂದಾಗಿ ನೆರವಿನ ಹಣಕಾಸನ್ನು ಕಳುಹಿಸಲು ಸಾಧ್ಯವಾಗದೆ ಪರಿತಪಿಸುತ್ತಿರುವಾಗ, ಭಾರತವು ಜನತೆಯ ಖಾತೆಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ನೇರ ವರ್ಗಾವಣೆ ಮಾಡಿತ್ತು. ಕೊರೊನಾದ ಈ ಒಂದೂವರೆ ವರ್ಷದ ಅವಧಿಯಲ್ಲಿ ಭಾರತವು ಡಿ.ಬಿ.ಟಿ. ಮೂಲಕ ವಿವಿಧ ಯೋಜನೆಗಳ ಅಡಿಯಲ್ಲಿ ಸುಮಾರು 7 ಲಕ್ಷ ಕೋಟಿ ರೂಪಾಯಿಗಳನ್ನು ಜನರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದೆ. ಭಾರತದಲ್ಲಿ ಪ್ರತೀ ತಿಂಗಳೂ ಭೀಮ್ ಯು.ಪಿ.ಐ. ಮೂಲಕ ಐದು ಲಕ್ಷ ಕೋ.ರೂ. ಗಳಷ್ಟು ಮೌಲ್ಯದ ವ್ಯಾಪಾರ ವಹಿವಾಟು ವರ್ಗಾವಣೆ ನಡೆಯುತ್ತದೆ.   

ಸ್ನೇಹಿತರೇ,

ಡಿಜಿಟಲ್ ವರ್ಗಾವಣೆ ರೈತರ ಬದುಕಿನಲ್ಲಿ ಅಭೂತಪೂರ್ವ ಬದಲಾವಣೆಗಳನ್ನು ತಂದಿದೆ. ಪಿ.ಎಂ. ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ 10 ಕೋಟಿಗೂ ಅಧಿಕ ರೈತರ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ 1 ಲಕ್ಷದ 35 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತವನ್ನು ಜಮಾ ಮಾಡಲಾಗಿದೆ. ಡಿಜಿಟಲ್ ಇಂಡಿಯಾವು ಒಂದು ದೇಶ, ಒಂದು ಎಂ.ಎಸ್.ಪಿ.ಯ ಹುರುಪನ್ನು ಮನಗಂಡಿದೆ. ಈ ವರ್ಷ ಸುಮಾರು 85 ಸಾವಿರ ಕೋ.ರೂ.ಗಳನ್ನು ದಾಖಲೆ ಪ್ರಮಾಣದಲ್ಲಿ ಗೋಧಿ ಖರೀದಿಯ ಕಾರಣಕ್ಕೆ ನೇರವಾಗಿ ರೈತರ ಖಾತೆಗಳಿಗೆ ಪಾವತಿ ಮಾಡಲಾಗಿದೆ. ಇದುವರೆಗೆ ದೇಶದ ರೈತರು ಇ-ನಾಮ್ ಪೋರ್ಟಲ್ ಮೂಲಕ 1.35 ಲಕ್ಷ ಕೋ.ರೂ.ಗಳಿಗೂ ಅಧಿಕ ಮೌಲ್ಯದ ವಹಿವಾಟನ್ನು  ಮಾಡಿದ್ದಾರೆ.

ಸ್ನೇಹಿತರೇ,

ಒಂದು ದೇಶ, ಒಂದು ಕಾರ್ಡ್ ದೇಶಾದ್ಯಂತ ಸಾರಿಗೆ ಮತ್ತು ಇತರ ಸೌಲಭ್ಯಗಳಿಗೆ ಏಕ ಪಾವತಿ ಮಾಧ್ಯಮವಾಗಿ ಬಹಳ ದೊಡ್ಡ ಪ್ರಯೋಜನಗಳನ್ನು ಒದಗಿಸಲಿದೆ.ಫಾಸ್ಟ್ಯಾಗ್  ಜಾರಿಯಿಂದಾಗಿ ಸಾರಿಗೆ ಬಹಳ ಸುಲಭವಾಗಿದೆ, ಕಡಿಮೆ ಖರ್ಚಿನದಾಗಿದೆ, ಮತ್ತು ಅಲ್ಲಿ ಸಮಯದ ಉಳಿತಾಯವೂ ಆಗುತ್ತದೆ. ಅದೇ ರೀತಿ ಜಿ.ಎಸ್.ಟಿ. ಮತ್ತು ಇ-ವೇ ಬಿಲ್ ಗಳು ದೇಶದಲ್ಲಿ ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಅನುಕೂಲತೆ ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸಿವೆ.  ನಿನ್ನೆಯಷ್ಟೇ ಜಿ.ಎಸ್.ಟಿ. ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಿದೆ. ಕೊರೊನಾ ಕಾಲವಾಗಿದ್ದರೂ, ಜಿಎಸ್.ಟಿ. ಆದಾಯ ಕಳೆದ ಎಂಟು ತಿಂಗಳಿಂದ ಸತತವಾಗಿ 1 ಲಕ್ಷ ಕೋ.ರೂ.ಗಳನ್ನು ದಾಟುತ್ತಿದೆ. ಇಂದು 1.28 ಕೋಟಿ ನೊಂದಾಯಿತ ಉದ್ಯಮಿಗಳು ಇದರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಇದೇ ವೇಳೆ ಸರಕಾರಿ ಇ-ಮಾರುಕಟ್ಟೆ ಸ್ಥಳದಿಂದ ಅಂದರೆ ಜಿ.ಇ.ಎಂ. ನಿಂದ ಸರಕಾರಿ ಖರೀದಿ ಸಣ್ಣ ವ್ಯಾಪಾರಿಗಳಿಗೆ ಅವಕಾಶಗಳನ್ನು ಒದಗಿಸಿರುವುದು ಮಾತ್ರವಲ್ಲ, ಪಾರದರ್ಶಕತೆಯನ್ನೂ ಹೆಚ್ಚಿಸಿದೆ.

ಸ್ನೇಹಿತರೇ

 ಈ ದಶಕ ಡಿಜಿಟಲ್ ತಂತ್ರಜ್ಞಾನದಲ್ಲಿ ಭಾರತದ ಸಾಮರ್ಥ್ಯವನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಿದೆ ಮತ್ತು ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಅದರ ಪಾಲನ್ನೂ ಹೆಚ್ಚಿಸಲಿದೆ. ಆದುದರಿಂದ ಹಿರಿಯ ತಜ್ಞರು ಈ ದಶಕವನ್ನು ಭಾರತದ ದಶಕ ಎಂಬುದಾಗಿ ಭಾವಿಸುತ್ತಿದ್ದಾರೆ. ಭಾರತದಲ್ಲಿಯ ಡಜನ್ನುಗಳಷ್ಟು ತಂತ್ರಜ್ಞಾನ ಕಂಪೆನಿಗಳು ಮುಂದಿನ ಕೆಲವು ವರ್ಷಗಳಲ್ಲಿ ಯೂನಿಕಾರ್ನ್ ಕ್ಲಬ್ ಗೆ ಸೇರ್ಪಡೆಯಾಗಲಿವೆ. ದತ್ತಾಂಶದ ಸಾಮೂಹಿಕ ಶಕ್ತಿ ಮತ್ತು ಜನಾಂಗೀಯ ವೈವಿಧ್ಯದ ಪ್ರತಿಫಲ ಭಾರೀ ಅವಕಾಶಗಳನ್ನು ಒದಗಿಸಲಿದೆ.

ಸ್ನೇಹಿತರೇ,

ಜಗತ್ತಿನಾದ್ಯಂತ 5 ಜಿ ತಂತ್ರಜ್ಞಾನವು ಜೀವನದ ಎಲ್ಲಾ ಆಯಾಮಗಳಲ್ಲಿಯೂ ಬಹಳ ದೊಡ್ಡ ವ್ಯತ್ಯಾಸಗಳನ್ನು ಮಾಡಲಿದೆ. ಭಾರತ ಕೂಡಾ ಇದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇಂದು ಜಗತ್ತು ಕೈಗಾರಿಕೋದ್ಯಮ 4.೦ ಬಗ್ಗೆ ಮಾತನಾಡುತ್ತಿರುವಾಗ ಭಾರತ ಅದರ ಬಹಳ ದೊಡ್ಡ ಭಾಗೀದಾರನಾಗಿದೆ. ದತ್ತಾಂಶ ಶಕ್ತಿಕೇಂದ್ರವಾಗಿ (ಪವರ್ ಹೌಸ್) ಭಾರತಕ್ಕೆ ಅದರ ಜವಾಬ್ದಾರಿಯ ಬಗ್ಗೆ ಅರಿವಿದೆ. ಆದುದರಿಂದ, ದತ್ತಾಂಶ ರಕ್ಷಣೆಗೆ ಸಂಬಂಧಿಸಿ ಪ್ರತಿಯೊಂದು ಅವಶ್ಯ ಪ್ರಸ್ತಾವನೆಗಳ ನಿಟ್ಟಿನಲ್ಲಿ ನಿರಂತರ ಕೆಲಸ ಸಾಗುತ್ತಿದೆ. ಕೆಲವು ದಿನಗಳ ಹಿಂದೆ ಸೈಬರ್ ಭದ್ರತೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಶ್ರೇಯಾಂಕಗಳು ಬಿಡುಗಡೆಯಾಗಿವೆ. ಭಾರತವು 180 ಕ್ಕೂ ಅಧಿಕ ದೇಶಗಳ ಐ.ಟಿ.ಯು-ಜಾಗತಿಕ ಸೈಬರ್ ಭದ್ರತೆ ಸೂಚ್ಯಂಕಗಳಲ್ಲಿ ಉನ್ನತ ಹತ್ತು ರಾಷ್ಟ್ರಗಳಲ್ಲಿ ಒಂದಾಗಿದೆ. ನಮ್ಮ ಶ್ರೇಯಾಂಕ ಒಂದು ವರ್ಷದ ಹಿಂದಿನವರೆಗೂ  47 ರಲ್ಲಿತ್ತು.

ಸ್ನೇಹಿತರೇ,

ನನಗೆ ಭಾರತದ ಯುವ ಜನತೆ ಮತ್ತು ಅವರ ಸಾಮರ್ಥ್ಯದ ಬಗ್ಗೆ ಪೂರ್ಣ ನಂಬಿಕೆ ಇದೆ. ನಮ್ಮ ಯುವ ಜನರು ಡಿಜಿಟಲ್ ಸಶಕ್ತೀಕರಣವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಮುಂದುವರೆಯುತ್ತಾರೆ  ಎಂಬ ಬಗ್ಗೆ ನನಗೆ ಖಚಿತವಿದೆ. ನಾವು ಒಗ್ಗೂಡಿ ಪ್ರಯತ್ನಗಳನ್ನು ಮಾಡುತ್ತಲೇ ಇರಬೇಕು. ಈ ಆಶಯದೊಂದಿಗೆ ಈ ದಶಕವನ್ನು ಭಾರತದ ತಂತ್ರಜ್ಞಾನದ ಕೇಂದ್ರವನ್ನಾಗಿ ಮಾಡುವಲ್ಲಿ ನಾವು ನಾವು ಯಶಸ್ವಿಯಾಗುತ್ತೇವೆ ಎಂಬ ಆಶಯದೊಂದಿಗೆ, ನಾನು ನಿಮ್ಮೆಲ್ಲರಿಗೂ ಮತ್ತೊಮ್ಮೆ ಶುಭವನ್ನು ಹಾರೈಸುತ್ತೇನೆ.

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1732410) Visitor Counter : 360