ರೈಲ್ವೇ ಸಚಿವಾಲಯ

ರೈಲ್ವೇ ರಕ್ಷಣಾ ಪಡೆ (ಆರ್.ಪಿ.ಎಫ್.) ಬಳಸುತ್ತಿರುವ ಆಧುನಿಕ ತಂತ್ರಜ್ಞಾನದಿಂದ ಪ್ರಯಾಣಿಕರ ಹಾಗು ಇತರ ರೈಲ್ವೇ ಕಾರ್ಯಾಚರಣೆಗಳ ಸುರಕ್ಷೆ ಮತ್ತು ಭದ್ರತೆ ಹೆಚ್ಚಳ


ಕೋವಿಡ್ ಅನಾಥರನ್ನು ರಕ್ಷಿಸಲು ಆರ್.ಪಿ.ಎಫ್. ನಿಂದ ವಿಶೇಷ ಯೋಜನೆ

ತನ್ನ ಶ್ರೇಣಿಗಳಲ್ಲಿ ಗರಿಷ್ಠ ಮಹಿಳಾ ಪಾಲುದಾರಿಕೆಯನ್ನು ಹೊಂದಿರುವ

ಕೇಂದ್ರೀಯ ಪಡೆಗಳಲ್ಲಿ ಆರ್.ಪಿ.ಎಫ್. ಅಗ್ರಣಿ

ಆರ್.ಪಿ.ಎಫ್. ನಲ್ಲಿ ಮಹಿಳೆಯರ ಸಂಖ್ಯೆ 9% (6242)

ಸುಮಾರು 3 ವರ್ಷಗಳಲ್ಲಿ ಆರ್.ಪಿ.ಎಫ್. 56000 ಕ್ಕೂ ಅಧಿಕ  ಮಕ್ಕಳನ್ನು ರಕ್ಷಿಸಿದೆ

ಕಳೆದ ಮೂರು ವರ್ಷಗಳಲ್ಲಿ ಕಳ್ಳಸಾಗಾಣಿಕೆದಾರರಿಂದ 976 ಮಕ್ಕಳನ್ನು ಆರ್.ಪಿ.ಎಫ್. ರಕ್ಷಿಸಿದೆ

ಕಳೆದ ಎರಡು ವರ್ಷಗಳಲ್ಲಿ ಒಟ್ಟು 37.13 ಕೋ.ರೂ.ಗಳ ಮೌಲ್ಯದ ಒಟ್ಟು 22835 ಲಗೇಜ್ ಬಿಟ್ಟು ಹೋದ ಪ್ರಕರಣಗಳಲ್ಲಿ ಅವುಗಳನ್ನು ಸರಿಯಾದ ಮಾಲಕರಿಗೆ ತಲುಪಿಸಲಾಗಿದೆ

Posted On: 25 JUN 2021 4:54PM by PIB Bengaluru

ಸುರಕ್ಷೆ ಮತ್ತು ಭದ್ರತೆಗಳು ಭಾರತೀಯ ರೈಲ್ವೇಯ ಆದ್ಯತಾ ಕ್ಷೇತ್ರಗಳಲ್ಲಿ ಒಂದಾಗಿವೆ. ಪ್ರಯಾಣಿಕರ ಸುರಕ್ಷೆ  ಮತ್ತು ಭದ್ರತೆಯಲ್ಲದೆ, ರೈಲ್ವೇ ರಕ್ಷಣಾ ಪಡೆಯು (ಆರ್.ಪಿ.ಎಫ್.) ಕೋವಿಡ್ -19 ಅವಧಿಯಲ್ಲಿಯೂ ವೈರಸ್ ವಿರುದ್ಧ ನಡೆಸಲಾಗುತ್ತಿರುವ ಯುದ್ಧದಲ್ಲಿ ಭಾರತೀಯ ರೈಲ್ವೇಯ ಪ್ರಯತ್ನಗಳಿಗೆ ದೊಡ್ಡ ಪ್ರಮಾಣದ ಕೊಡುಗೆಯನ್ನು ಕೊಡುತ್ತಿದೆ. ಜಾಗತಿಕ ಸಾಂಕ್ರಾಮಿಕದಲ್ಲಿ ಭಾರತೀಯ ರೈಲ್ವೇಯ  ದಾಸ್ತಾನುಗಾರಗಳ ಭದ್ರತೆ, ಆವಶ್ಯಕತೆ ಇರುವವರಿಗೆ ಆಹಾರ ಒದಗಣೆ, ಎಲ್ಲಾ ಶ್ರಮಿಕ ವಿಶೇಷ ರೈಲುಗಳಿಗೆ ಬೆಂಗಾವಲು ನೀಡಿಕೆ, ಶ್ರಮಿಕ ವಿಶೇಷ ರೈಲುಗಳಲ್ಲಿ 45 ಹೆರಿಗೆಗಳು ಮತ್ತು 34 ವೈದ್ಯಕೀಯ ತುರ್ತುಸ್ಥಿತಿಗಳ ನಿಭಾವಣೆಯನ್ನು ಆರ್.ಪಿ.ಎಫ್. ಮಾಡಿ ಮುಂಚೂಣಿಯಲ್ಲಿದೆ.

ಕೋವಿಡ್ ಅನಾಥರನ್ನು ರಕ್ಷಿಸಲು ಆರ್.ಪಿ.ಎಫ್. ತಲುಪಿರಿ, ವಶಕ್ಕೆ ತೆಗೆದುಕೊಳ್ಳಿ ಮತ್ತು ಪುನರ್ವಸತಿ ಒದಗಿಸಿಎಂಬ ವಿಶೇಷ ಯೋಜನೆಯನ್ನು ರೂಪಿಸಿದೆ. ಕೋವಿಡ್ ನಿಂದ ಅನಾಥರಾದ ಹತ್ತಿರದ ಪಟ್ಟಣ/ಗ್ರಾಮಗಳು/ಆಸ್ಪತ್ರೆಗಳಲ್ಲಿರುವ ಅಥವಾ ರೈಲ್ವೇ ನಿಲ್ದಾಣಗಳಲ್ಲಿರುವ ಮಕ್ಕಳನ್ನು ಗುರುತಿಸಲು ಆರ್.ಪಿ.ಎಫ್. ಕಾರ್ಯಾಚರಣೆಯನ್ನು ಕೈಗೊಂಡಿದೆ. ಜಾಗತಿಕ ಸಾಂಕ್ರಾಮಿಕ ಕೋವಿಡ್ -19 ಹರಡುವಿಕೆಯಿಂದ ಸಂತ್ರಸ್ಥರಾದ ಮಕ್ಕಳಿಗೆ ವಿಶೇಷ ಗಮನ ಕೊಡಲು ಸಿಬ್ಬಂದಿಗಳಲ್ಲಿ ಸೂಕ್ಷ್ಮತ್ವವನ್ನು ಮೂಡಿಸಲಾಗಿದೆಹತ್ತಿರದ ಪ್ರದೇಶಗಳಲ್ಲಿರುವ ಮತ್ತು ನಿಲ್ದಾಣಕ್ಕೆ ಭೇಟಿ ಕೊಡುವ ಪ್ರಯಾಣಿಕರಲ್ಲಿ ಬಹಳ ಯಾತನಾಮಯ ಸ್ಥಿತಿಯಲ್ಲಿರುವ ಮಕ್ಕಳಿಗೆ ಹತ್ತಿರದಲ್ಲಿಯೇ ಲಭ್ಯ ಇರುವ ಸೇವೆಗಳು ಮತ್ತು ಸೌಲಭ್ಯಗಳ  ಬಗ್ಗೆ ಸೂಕ್ಷ್ಮತ್ವ ಮೂಡಿಸಲಾಗಿದೆ. ಒಂದು ಮಗುವನ್ನು ವಶಕ್ಕೆ ಪಡೆದುಕೊಂಡ ಬಳಿಕ ಅದಕ್ಕೆ ಪುನರ್ವಸತಿ ಒದಗಿಸುವವರೆಗೆ ಪ್ರತೀ ಮಗುವಿಗೂ ಓರ್ವ ನೋಡಲ್ ಆರ್.ಪಿ.ಎಫ್. ಸಿಬ್ಬಂದಿ ಅದಕ್ಕೆ ಜವಾಬ್ದಾರಿಯಾಗಿರುತ್ತಾರೆ.

ನಿಲ್ದಾಣಗಳಲ್ಲಿ ಆರ್.ಪಿ.ಎಫ್. ಸಿಬ್ಬಂದಿಗಳು ತಮ್ಮ ಜೀವವನ್ನು ಪಣವಾಗಿಟ್ಟುಕೊಂಡು ಇತರರ ಅಮೂಲ್ಯ ಜೀವಗಳನ್ನು ರಕ್ಷಿಸಿದ ಹಲವು ಘಟನೆಗಳು ವರದಿಯಾಗಿವೆ. ಜೀವ ಉಳಿಸಿದುದಕ್ಕಾಗಿ 2018 ರಿಂದೀಚೆಗೆ ಗೌರವಾನ್ವಿತ ರಾಷ್ಟ್ರಪತಿಗಳಿಂದ 9 ಜೀವನ ರಕ್ಷಾ ಪದಕ ಮತ್ತು ಒಂದು ಶೌರ್ಯ ಪದಕಗಳನ್ನು ಆರ್.ಪಿ.ಎಫ್. ಸಿಬ್ಬಂದಿಗೆ ಪ್ರದಾನಿಸಲಾಗಿದೆ.

ಆರ್.ಪಿ.ಎಫ್.ಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಸೇರ್ಪಡೆ ಮೂಲಕ ಮಹಿಳಾ ಭದ್ರತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೇಯ ಪ್ರಯತ್ನಗಳಿಗೆ ವೇಗವನ್ನು ನೀಡಲಾಗಿದೆ. 2019 ರಲ್ಲಿ 10568 ಹುದ್ದೆಗಳಿಗೆ ನೇಮಕಾತಿಯನ್ನು ಪೂರ್ಣಗೊಳಿಸಲಾಗಿದೆ. ಸಿ.ಬಿ.ಟಿ, ಪಿ..ಟಿ/ಪಿ.ಎಂ.ಟಿ., ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮತ್ತು ಪೊಲೀಸ್ ಪರಿಶೀಲನೆ, ನೇಮಕಾತಿ ಪೂರ್ಣಗೊಂಡಿದೆ. ನೇಮಕಾತಿಗೆ ಮೊದಲು ಆರ್.ಪಿ.ಎಫ್. ನಲ್ಲಿ ಮಹಿಳೆಯರ ಸಂಖ್ಯೆ 3% (2312) ಇತ್ತು, ನೇಮಕಾತಿ ಬಳಿಕ ಅದು 9% (6242) ಆಗಿದೆ. ಮಹಿಳೆಯರ ಪಾಲು ಹೆಚ್ಚು ಇರುವ ಕೇಂದ್ರೀಯ ಪಡೆಗಳಲ್ಲಿ ಆರ್.ಪಿ.ಎಫ್. ಮುಂಚೂಣಿಯಲ್ಲಿದೆ.

2020 ಅಕ್ಟೋಬರ್ 17 ರಿಂದ ರೈಲ್ವೇ ವಲಯಗಳಾದ್ಯಂತ ಮೇರಿ ಸಹೇಲಿ ಉಪಕ್ರಮವನ್ನು ಆರ್.ಪಿ.ಎಫ್. ಕೈಗೊಂಡಿದೆ. ದೂರ ಪ್ರಯಾಣದ ರೈಲುಗಳಲ್ಲಿ ಏಕಾಂಗಿಯಾಗಿ ಪ್ರಯಾಣಿಸುವ ಮಹಿಳೆಯರನ್ನು ಆದ್ಯತೆಯಾಗಿರಿಸಿಕೊಂಡು ಇದನ್ನು ಅಳವಡಿಸಿಕೊಳ್ಳಲಾಗಿದೆ. ಆರ್.ಪಿ.ಎಫ್. ಸಿಬ್ಬಂದಿಗಳ ಯುವ ಮಹಿಳಾ ತಂಡದವರು ಅವರ ಜೊತೆ ಪ್ರಯಾಣ ಆರಂಭದ ನಿಲ್ದಾಣಗಳಲ್ಲಿ ಸಂವಾದ ನಡೆಸುತ್ತಾರೆ ಮತ್ತು ಅವರು ಇಳಿಯುವಲ್ಲಿಯ ನಿಲ್ದಾಣದವರೆಗೆ ನಿಗಾ ವಹಿಸುತ್ತಾರೆ.

ಆರ್.ಪಿ.ಎಫ್., ವಿಶೇಷ ಮಹಿಳಾ ದಳಗಳಾದ ಭೈರವಿ, ವೀರಾಂಗನಾ, ಶಕ್ತಿ ಗಳ ರಚನೆಯೊಂದಿಗೆ ಮಹಿಳಾ ಪ್ರಯಾಣಿಕರ ಭದ್ರತೆಯನ್ನು ಮೇಲ್ದರ್ಜೆಗೆ ಏರಿಸಿದೆ. ಮೆಟ್ರೋ ನಗರಗಳಲ್ಲಿ ಎಲ್ಲಾ ಮಹಿಳಾ ವಿಶೇಷ ರೈಲುಗಳಿಗೆ ಮತ್ತು ಲೋಕಲ್ ರೈಲುಗಳಿಗೆ ಆರ್.ಪಿ.ಎಫ್. ಭದ್ರತೆಯನ್ನು ಖಾತ್ರಿಪಡಿಸಲಾಗಿದೆ. ತಡ ರಾತ್ರಿಯ ಮತ್ತು ಮುಂಜಾನೆಯ ಲೋಕಲ್ ರೈಲುಗಳಿಗೆ ಭದ್ರತಾ ಸಿಬ್ಬಂದಿ ನಿಯೋಜನೆಗೆ ಗಮನ ಕೇಂದ್ರಿತ ಆದ್ಯತೆ ನೀಡಲಾಗಿದೆ. ಲಿಂಗತ್ವ ಸೂಕ್ಷ್ಮತೆ /ಪ್ರಯಾಣಿಕ ಜಾಗೃತಿ ಕಾರ್ಯಕ್ರಮಗಳನ್ನು ನಿಯಮಿತವಾಗಿ ಕೈಗೊಳ್ಳಲಾಗುತ್ತದೆ. ಮಹಿಳಾ ಬೋಗಿಗಳಲ್ಲಿ ಪ್ರಯಾಣಿಸುವ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆರ್.ಪಿ.ಎಫ್. ಸಿಬ್ಬಂದಿಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿರುತ್ತಾರೆ. ಮಹಿಳಾ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 129500 (2019 ರಿಂದ 2021 ಮೇ ತಿಂಗಳವರೆಗೆ )   ಪುರುಷ ಪ್ರಯಾಣಿಕರನ್ನು ರೈಲ್ವೇ ಕಾಯ್ದೆಯ ಸೆಕ್ಷನ್ 162 ಅಡಿಯಲ್ಲಿ ಬಂಧಿಸಲಾಗಿದೆ ಮತ್ತು ಆರ್.ಪಿ.ಎಫ್. ವಿಚಾರಣೆಗೆ ಒಳಪಡಿಸಿದೆ.

ಮಕ್ಕಳನ್ನು ರಕ್ಷಣೆ ಮಾಡುವಲ್ಲಿ ಆರ್.ಪಿ.ಎಫ್. ಪ್ರಮುಖವಾದಂತಹ ಪಾತ್ರವನ್ನು ವಹಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಸಚಿವಾಲಯ (ಎಂ.ಡಬ್ಲ್ಯು.ಸಿ.ಡಿ.) ಜೊತೆ ಸಮಾಲೋಚಿಸಿ ಗುಣಮಟ್ಟದ ಕಾರ್ಯಾಚರಣಾ ಪ್ರಕ್ರಿಯೆ (ಎಸ್..ಪಿ.) ಗಳನ್ನು ಅಂತಿಮಗೊಳಿಸಲಾಗಿದೆ. ನಾಮನಿರ್ದೇಶಿತ ಎನ್.ಜಿ.. ಗಳಿಂದ 2020 ರವರೆಗೆ 132 ನಿಲ್ದಾಣಗಳಲ್ಲಿ ಮಕ್ಕಳ ಸಹಾಯ ಕೇಂದ್ರಗಳನ್ನು ನಿರ್ವಹಿಸಲಾಗುತ್ತಿದೆ. 2017 ರಿಂದ 2021 ಮೇ ತಿಂಗಳವರೆಗೆ ಒಟ್ಟು 56318 ಮಕ್ಕಳನ್ನು ರಕ್ಷಿಸಲಾಗಿದೆ. 2018 ರಿಂದ ಮೇ 2021 ರವರೆಗೆ ಕಳ್ಳಸಾಗಣೆದಾರರಿಂದ ಒಟ್ಟು 976 ಮಕ್ಕಳನ್ನು ರಕ್ಷಿಸಲಾಗಿದೆ.

ಪ್ರಯಾಣಿಕರು ಪ್ರಯಾಣವನ್ನು ಆರಾಮದಾಯಕವಾಗಿ ನಡೆಸಲು ಆರ್.ಪಿ.ಎಫ್. ಪ್ರಯಾಣಿಕರಿಗೆ ನೆರವು ನೀಡುತ್ತದೆ. ಕಿರುಕುಳ ನಿವಾರಣೆ, ಬಿಟ್ಟು ಹೋದ ಲಗೇಜ್ ಗಳ ನಿರ್ವಹಣೆ ಮತ್ತು ಆರ್.ಪಿ.ಎಫ್. ಪ್ರಮುಖ ಪಾತ್ರವಹಿಸುವ ಕ್ಷೇತ್ರಗಳಲ್ಲಿ ಭದ್ರತಾ ಸಂಬಂಧಿ ಕೆಲಸಗಳನ್ನು ಅದು ನಿಭಾಯಿಸುತ್ತದೆ.

ಒಟ್ಟು 37.13 ಕೋ.ರೂ. ಮೌಲ್ಯದ ವಸ್ತುಗಳಿದ್ದ, ಲಗೇಜ್ ಬಿಟ್ಟು ಹೋದ  ಒಟ್ಟು 22835 ಪ್ರಕರಣಗಳಲ್ಲಿ ( 2019 ರಿಂದ ಮೇ 2021 ರವರೆಗೆ ) ಅವುಗಳನ್ನು ಅವುಗಳ ಸರಿಯಾದ ಮಾಲಕರಿಗೆ ತಲುಪಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ (2019-20) ಅಖಿಲ ಭಾರತ ಮಟ್ಟದಲ್ಲಿ 37275 ಭದ್ರತಾ ಸಂಬಂಧಿ ಕರೆಗಳು ಭದ್ರತಾ ಸಹಾಯವಾಣಿ 182 ಕ್ಕೆ ಬಂದಿದ್ದು ಅವುಗಳನ್ನು ಪರಿಹರಿಸಲಾಗಿದೆ. ಸಹಾಯವಾಣಿ 182 ನ್ನು 01.04.2021ರಿಂದ ಜಾರಿಗೆ ಬರುವಂತೆ  139 ರೊಂದಿಗೆ ವಿಲಯನಗೊಳಿಸಲಾಗಿದೆ. 2021 ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 139 ಸಂಖ್ಯೆಗೆ ಬಂದ 8258 ಭದ್ರತಾ ಕರೆಗಳನ್ನು ಪರಿಹರಿಸಲಾಗಿದೆ.

ರೈಲ್ವೇ ನೆರೆ ಪರಿಹಾರ ತಂಡ (ಆರ್.ಎಫ್.ಆರ್.ಟಿ.) ಇದು ಆರ್.ಪಿ.ಎಫ್. ವಿಪತ್ತು  ಪರಿಹಾರ ಉಪಕ್ರಮವಾಗಿದ್ದು, ನೆರೆಯಿಂದಾಗಿ ಸ್ಥಗಿತಗೊಳ್ಳುವ ರೈಲುಗಳಲ್ಲಿ ಸಿಕ್ಕಿ ಹಾಕಿಕೊಳ್ಳುವ ಪ್ರಯಾಣಿಕರಿಗೆ ಸಹಾಯ ಮಾಡುವುದಕ್ಕಾಗಿ ಇದನ್ನು ಆರಂಭಿಸಲಾಗಿದೆ. ತಂಡವು ನೀರು, ಆಹಾರ ಮತ್ತು ಔಷಧಿಗಳು ಹಾಗು ಇತ್ಯಾದಿ ವಸ್ತುಗಳನ್ನು ಕೊಂಡೊಯ್ಯುತ್ತದೆ. ಇದು ಇತರ ರಕ್ಷಣಾ ಹಾಗು ಪರಿಹಾರ ಏಜೆನ್ಸಿಗಳ ಜೊತೆ ನಿಕಟ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತದೆ. ಮತ್ತು ಇದಕ್ಕೆ ಸ್ಪಷ್ಟವಾದ ಎಸ್..ಪಿ.ಗಳನ್ನು ರೂಪಿಸಲಾಗಿದ್ದು, ಅದರನ್ವಯ ಕಾರ್ಯಾಚರಿಸುತ್ತದೆ. ಎನ್.ಡಿ.ಆರ್.ಎಫ್. ನಿಂದ 15 ಆರ್.ಪಿ.ಎಫ್. ಪುರುಷರು ಮತ್ತು ಮಹಿಳೆಯರಿಗೆ ತರಬೇತಿ ನೀಡಲಾಗಿದೆ ಮತ್ತು ಇತರ 75 ಮಂದಿಗೆ ತರಬೇತಿ ನೀಡಲಾಗುತ್ತಿದೆ. 05 ಮೋಟಾರೀಕೃತ ..ಬೋಟುಗಳನ್ನು ಸುರಕ್ಷಾ ಸಲಕರಣೆಗಳೊಂದಿಗೆ ಖರೀದಿಸಿ ಅಪಾಯ ಸಂಭಾವ್ಯತೆಯ 05 ಸ್ಥಳಗಳಲ್ಲಿ ಇಡಲಾಗಿದೆ. ಇದು ರೈಲ್ವೇಯಿಂದ ಹೊರಗೂ ನಾಗರಿಕ ಆಡಳಿತದಡಿ ಇಂತಹ ಕೆಲಸಗಳಲ್ಲಿ ಕೈಜೋಡಿಸಲಿದೆ.

***



(Release ID: 1730491) Visitor Counter : 236