ಪ್ರಧಾನ ಮಂತ್ರಿಯವರ ಕಛೇರಿ

ವಿವಾಟೆಕ್‌ 5 ನೇ ಆವೃತ್ತಿಯಲ್ಲಿ ಪ್ರಧಾನಿಯವರಿಂದ ಪ್ರಧಾನ ಭಾಷಣ


ಮುಂದಿನ ಸಾಂಕ್ರಾಮಿಕ ರೋಗದ ವಿರುದ್ಧ ನಮ್ಮ ಗ್ರಹಕ್ಕೆ ರಕ್ಷಣೆಯ ಅಗತ್ಯವಿದೆ: ಪ್ರಧಾನಿ

ಸಾಂಕ್ರಾಮಿಕ ಸಂದರ್ಭದಲ್ಲಿ ಡಿಜಿಟಲ್ ತಂತ್ರಜ್ಞಾನವು ನಿಭಾಯಿಸಲು, ಸಂಪರ್ಕಿಸಲು, ಸೌಕರ್ಯ ಕಲ್ಪಿಸಲು ಮತ್ತು ಸಾಂತ್ವನಕ್ಕೆ ನೆರವಾಯಿತು: ಪ್ರಧಾನಿ

ಅಡಚಣೆಯಿಂದ ಹತಾಶರಾಗಬೇಕಿಲ್ಲ, ದುರಸ್ತಿ ಮತ್ತು ಸಿದ್ಧತೆ ಎಂಬ ಅವಳಿ ಅಡಿಪಾಯಗಳತ್ತ ನಾವು ಗಮನ ಹರಿಸಬೇಕು: ಪ್ರಧಾನಿ

ನಮ್ಮ ಗ್ರಹವು ಎದುರಿಸುತ್ತಿರುವ ಸವಾಲುಗಳನ್ನು ಸಾಮೂಹಿಕ ಮನೋಭಾವ ಮತ್ತು ಮಾನವ ಕೇಂದ್ರಿತ ವಿಧಾನದಿಂದ ಮಾತ್ರ ನಿವಾರಿಸಬಹುದು: ಪ್ರಧಾನಿ

ಸಾಂಕ್ರಾಮಿಕವು ನಮ್ಮ ಸ್ಥಿತಿಸ್ಥಾಪಕತ್ವವನ್ನು ಮಾತ್ರ ಪರೀಕ್ಷಿಸುತ್ತಿಲ್ಲ, ನಮ್ಮ ಕಲ್ಪನೆಯನ್ನೂ ಪರೀಕ್ಷಿಸುತ್ತಿದೆ. ಪ್ರತಿಯೊಬ್ಬರಿಗೂ ಹೆಚ್ಚು ಅಂತರ್ಗತವಾದ, ಕಾಳಜಿಯ ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಿಸಲು ಇದೊಂದು ಅವಕಾಶ: ಪ್ರಧಾನಿ

ಭಾರತವು ವಿಶ್ವದ ಅತಿದೊಡ್ಡ ನವೋದ್ಯಮ ವ್ಯವಸ್ಥೆಗಳಲ್ಲಿ ಒಂದಾಗಿದೆ, ಭಾರತವು ನಾವೀನ್ಯಕಾರರು ಮತ್ತು ಹೂಡಿಕೆದಾರರಿಗೆ ಬೇಕಾದುದನ್ನು ನೀಡುತ್ತದೆ: ಪ್ರಧಾನಿ

ಪ್ರತಿಭೆ, ಮಾರುಕಟ್ಟೆ, ಬಂಡವಾಳ, ಪರಿಸರ ವ್ಯವಸ್ಥೆ ಮತ್ತು ಮುಕ್ತ ಸಂಸ್ಕೃತಿ ಎಂಬ ಐದು ಸ್ತಂಭಗಳ ಆಧಾರದ ಮೇಲೆ ನಿಂತಿರುವ ಭಾರತದಲ್ಲಿ ಹೂಡಿಕೆ ಮಾಡಲು ಜಗತ್ತನ್ನು ಆಹ್ವಾನಿಸುತ್ತೇನೆ: ಪ್ರಧಾನಿ

ಫ್ರಾನ್ಸ್ ಮತ್ತು ಯುರೋಪ್ ನಮ್ಮ ಪ್ರಮುಖ ಪಾಲುದಾರರು, ನಮ್ಮ ಪಾಲುದಾರಿಕೆಗಳು ಮನುಕುಲದ ಸೇವೆಯ ದೊಡ್ಡ ಉದ್ದೇಶವನ್ನು ಪೂರೈಸಬೇಕು: ಪ್ರಧಾನಿ

Posted On: 16 JUN 2021 4:28PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿವಾಟೆಕ್‌ನ 5 ನೇ ಆವೃತ್ತಿಯನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನ ಭಾಷಣ ಮಾಡಿದರು. 2016 ರಿಂದ ಪ್ರತಿವರ್ಷ ಪ್ಯಾರಿಸ್‌ನಲ್ಲಿ ನಡೆಯುವ ಯುರೋಪಿನ ಅತಿದೊಡ್ಡ ಡಿಜಿಟಲ್ ಮತ್ತು ನವೋದ್ಯಮ ಕಾರ್ಯಕ್ರಮಗಳಲ್ಲಿ ಒಂದಾದ ವಿವಾಟೆಕ್ 2021 ರಲ್ಲಿ ಮುಖ್ಯ ಭಾಷಣ ಮಾಡಲು ಪ್ರಧಾನ ಮಂತ್ರಿಯನ್ನು ಗೌರವ ಅತಿಥಿಯಾಗಿ ಆಹ್ವಾನಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು, ಭಾರತ ಮತ್ತು ಫ್ರಾನ್ಸ್ ವ್ಯಾಪಕವಾದ ವಿಷಯಗಳಲ್ಲಿ ನಿಕಟವಾಗಿ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ತಂತ್ರಜ್ಞಾನ ಮತ್ತು ಡಿಜಿಟಲ್ ವಲಯಗಳು ಸಹಕಾರದ ಉದಯೋನ್ಮುಖ ಕ್ಷೇತ್ರಗಳಾಗಿವೆ. ಈ ಸಹಕಾರವು ಮತ್ತಷ್ಟು ಬೆಳೆಯುವುದು ಸದ್ಯದ ಅವಶ್ಯಕತೆಯಾಗಿದೆ. ಇದು ನಮ್ಮ ರಾಷ್ಟ್ರಗಳಿಗೆ ಮಾತ್ರವಲ್ಲ, ಜಗತ್ತಿಗೂ ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ. ಫ್ರೆಂಚ್ ಓಪನ್ ಪಂದ್ಯಾವಳಿಗೆ ಇನ್ಫೋಸಿಸ್ ತಾಂತ್ರಿಕ ಬೆಂಬಲವನ್ನು ನೀಡುತ್ತಿದೆ ಮತ್ತು ಫ್ರೆಂಚ್ ಕಂಪೆನಿಗಳಾದ ಅಟೋಸ್, ಕ್ಯಾಪ್ ಜೆಮಿನಿ ಮತ್ತು ಭಾರತದ ಟಿಸಿಎಸ್ ಮತ್ತು ವಿಪ್ರೊಗಳನ್ನು ಒಳಗೊಂಡ ಸಹಯೋಗದೊಂದಿಗೆ ಉಭಯ ದೇಶಗಳ ಐಟಿ ಪ್ರತಿಭೆಗಳು ವಿಶ್ವದಾದ್ಯಂತ ಕಂಪನಿಗಳು ಮತ್ತು ನಾಗರಿಕರಿಗೆ ಸೇವೆ ಸಲ್ಲಿಸುತ್ತಿರುವುದು ಇದಕ್ಕೆ ಉದಾಹರಣೆಗಳಾಗಿವೆ ಎಂದು ಶ್ರೀ ಮೋದಿ ಹೇಳಿದರು.

 


ಸಾಂಪ್ರದಾಯಿಕತೆ ವಿಫಲವಾದರೆ ನಾವೀನ್ಯತೆ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು. ಸಾಂಕ್ರಾಮಿಕದ ಸಮಯದಲ್ಲಿ, ನಿಭಾಯಿಸಲು, ಸಂಪರ್ಕಿಸಲು, ಸೌಲಭ್ಯ ಕಲ್ಪಿಸಲು ಮತ್ತು ಸಾಂತ್ನ ಹೇಳಲು ಡಿಜಿಟಲ್ ತಂತ್ರಜ್ಞಾನವು ನಮಗೆ ಸಹಾಯ ಮಾಡಿದೆ ಎಂದು ಪ್ರಧಾನಿ ಹೇಳಿದರು. ಭಾರತದ ಸಾರ್ವತ್ರಿಕ ಮತ್ತು ವಿಶಿಷ್ಟ ಬಯೋ ಮೆಟ್ರಿಕ್ ಡಿಜಿಟಲ್ ಗುರುತಿನ ವ್ಯವಸ್ಥೆ - ಆಧಾರ್ - ಬಡವರಿಗೆ ಸಮಯೋಚಿತ ಆರ್ಥಿಕ ನೆರವು ನೀಡಲು ಸಹಾಯ ಮಾಡಿತು. "ನಾವು 800 ಮಿಲಿಯನ್ ಜನರಿಗೆ ಉಚಿತ ಆಹಾರ ಧಾನ್ಯವನ್ನು ಪೂರೈಸಲಾಗುತ್ತಿದೆ ಮತ್ತು ಅಡುಗೆ-ಇಂಧನ ಸಬ್ಸಿಡಿಗಳನ್ನು ಅನೇಕ ಮನೆಗಳಿಗೆ ತಲುಪಿಸಲಾಗುತ್ತಿದೆ. ಭಾರತದಲ್ಲಿ ನಾವು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಎರಡು ಸಾರ್ವಜನಿಕ ಡಿಜಿಟಲ್ ಶಿಕ್ಷಣ ಕಾರ್ಯಕ್ರಮಗಳಾದ ಸ್ವಯಂ ಮತ್ತು ದೀಕ್ಷಾ ಕಾರ್ಯರೂಪಕ್ಕೆ ತರಲು ಸಾಧ್ಯವಾಯಿತು ” ಎಂದು ಪ್ರಧಾನಿ ಹೇಳಿದರು.

 

 


ಸಾಂಕ್ರಾಮಿಕ ರೋಗದ ಸವಾಲನ್ನು ಎದುರಿಸುವಲ್ಲಿ ನವೋದ್ಯಮ (ಸ್ಟಾರ್ಟ್ ಅಪ್) ವಲಯದ ಪಾತ್ರವನ್ನು ಪ್ರಧಾನಿ ಶ್ಲಾಘಿಸಿದರು. ಪಿಪಿಇ ಕಿಟ್‌ಗಳು, ಮುಖಗವಸುಗಳು, ಪರೀಕ್ಷಾ ಕಿಟ್‌ಗಳು ಇತ್ಯಾದಿಗಳ ಕೊರತೆಯನ್ನು ಪರಿಹರಿಸುವಲ್ಲಿ ಖಾಸಗಿ ವಲಯವು ಪ್ರಮುಖ ಪಾತ್ರ ವಹಿಸಿದೆ. ಕೆಲವು ಕೋವಿಡ್ ಮತ್ತು ಕೋವಿಡೇತರ  ಸಮಸ್ಯೆಗಳನ್ನು ಪರಿಹರಿಸಲು ವೈದ್ಯರು ಟೆಲಿ-ಮೆಡಿಸಿನ್ ಅನ್ನು ಬೃಹತ್ ಪ್ರಮಾಣದಲ್ಲಿ ಅಳವಡಿಸಿಕೊಂಡರು. ಭಾರತದಲ್ಲಿ ಎರಡು ಲಸಿಕೆಗಳನ್ನು ತಯಾರಿಸಲಾಗುತ್ತಿದೆ ಮತ್ತು ಇನ್ನೂ ಕೆಲವು ಅಭಿವೃದ್ಧಿ ಅಥವಾ ಪ್ರಯೋಗ ಹಂತದಲ್ಲಿವೆ. ಸ್ಥಳೀಯ ಐಟಿ ಪ್ಲಾಟ್‌ಫಾರ್ಮ್, ಆರೋಗ್ಯ-ಸೇತು ಪರಿಣಾಮಕಾರಿ ಸಂಪರ್ಕ ಪತ್ತೆಹಚ್ಚುವಿಕೆಯನ್ನು ಸಕ್ರಿಯಗೊಳಿಸಿದೆ. ಕೋಟ್ಯಂತರ ಜನರಿಗೆ ಲಸಿಕೆಗಳನ್ನು ಖಚಿತಪಡಿಸಿಕೊಳ್ಳಲು ಕೋವಿನ್ ಡಿಜಿಟಲ್ ಪ್ಲಾಟ್‌ಫಾರ್ಮ್ ಈಗಾಗಲೇ ಸಹಾಯ ಮಾಡಿದೆ ಎಂದು ಪ್ರಧಾನಿ ಸೂಚಿಸಿದರು.
ವಿಶ್ವದ ಅತಿದೊಡ್ಡ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಗೆ ಭಾರತ ನೆಲೆಯಾಗಿದೆ ಎಂದು ಪ್ರಧಾನಿ ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಹಲವಾರು ಯುನಿಕಾರ್ನ್ಗಳು ಬಂದಿವೆ. ನಾವೀನ್ಯಕಾರರು ಮತ್ತು ಹೂಡಿಕೆದಾರರಿಗೆ ಬೇಕಾದುದನ್ನು ಭಾರತ ನೀಡುತ್ತದೆ. ಪ್ರತಿಭೆ, ಮಾರುಕಟ್ಟೆ, ಬಂಡವಾಳ, ಪರಿಸರ ವ್ಯವಸ್ಥೆ ಮತ್ತು ಮುಕ್ತ ಸಂಸ್ಕೃತಿ ಎಂಬ ಐದು ಸ್ತಂಭಗಳ ಆಧಾರದ ಮೇಲಿರುವ ಭಾರತದಲ್ಲಿ ಹೂಡಿಕೆ ಮಾಡಲು ಅವರು ಜಗತ್ತನ್ನು ಆಹ್ವಾನಿಸಿದರು. ಭಾರತದ ಪ್ರತಿಭಾ ಕಣಜ, ಮೊಬೈಲ್ ಫೋನ್ ಹೆಚ್ಚಳ ಮತ್ತು 775 ಮಿಲಿಯನ್ ಇಂಟರ್ನೆಟ್ ಬಳಕೆದಾರರು, ವಿಶ್ವದ ಅತಿ ಹೆಚ್ಚು ಮತ್ತು ಅಗ್ಗದ ದತ್ತಾಂಶ ಬಳಕೆ ಮತ್ತು ಸಾಮಾಜಿಕ ಮಾಧ್ಯಮದ ಹೆಚ್ಚು ಬಳಕೆ ಮುಂತಾದ ಸಾಮರ್ಥ್ಯಗಳ ಬಗ್ಗೆ ಪ್ರಧಾನಿಯವರು ಹೂಡಿಕೆದಾರರನ್ನು ಭಾರತಕ್ಕೆ ಆಹ್ವಾನಿಸಲು ಒತ್ತಿ ಹೇಳಿದರು.

 


ಅತ್ಯಾಧುನಿಕ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯ 523 ಕಿಲೋಮೀಟರ್ ಫೈಬರ್ ಆಪ್ಟಿಕ್ ನೆಟ್‌ವರ್ಕ್‌ನಿಂದ 156 ಸಾವಿರ ಗ್ರಾಮ ಪರಿಷತ್ತುಗಳ ಸಂಪರ್ಕ, ದೇಶಾದ್ಯಂತ ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳನ್ನು ಸಂಪರ್ಕಿಸುವಂತಹ ಉಪಕ್ರಮಗಳನ್ನು ಪ್ರಧಾನಿ ವಿವರಿಸಿದರು. ನಾವೀನ್ಯತೆಯ ಸಂಸ್ಕೃತಿಯನ್ನು ಪೋಷಿಸುವ ಪ್ರಯತ್ನಗಳ ಬಗ್ಗೆಯೂ ಅವರು ವಿವರಿಸಿದರು. ಅಟಲ್ ಇನ್ನೋವೇಶನ್ ಮಿಷನ್ ಅಡಿಯಲ್ಲಿ 7500 ಶಾಲೆಗಳಲ್ಲಿ ಅತ್ಯಾಧುನಿಕ ನಾವೀನ್ಯತೆ ಪ್ರಯೋಗಾಲಯಗಳಿವೆ ಎಂದು ಪ್ರಧಾನಿ ತಿಳಿಸಿದರು.
ಕಳೆದ ಒಂದು ವರ್ಷದಿಂದ ವಿವಿಧ ವಲಯಗಳಲ್ಲಿನ ಅಡೆತಡೆಗಳ ಬಗ್ಗೆ ಮಾತನಾಡಿದ ಪ್ರಧಾನಿಯವರು, ಅಡಚಣೆಯಿಂದ ಹತಾಶರಾಗಬೇಕಾಗಿಲ್ಲ ಎಂದು ಹೇಳಿದರು. ಬದಲಾಗಿ, ದುರಸ್ತಿ ಮತ್ತು ಸಿದ್ಧತೆ ಎಂಬ ಅವಳಿ ಅಡಿಪಾಯಗಳ ಮೇಲೆ ಗಮನ ಕೇಂದ್ರೀಕರಿಸಬೇಕು. "ಕಳೆದ ವರ್ಷದ ಈ ಸಮಯದಲ್ಲಿ, ಜಗತ್ತು ಇನ್ನೂ ಲಸಿಕೆಯನ್ನು ಬಯಸುತ್ತಿತ್ತು. ಇಂದು, ನಾವು ಕೆಲವು ಲಸಿಕೆಗಳನ್ನು ಹೊಂದಿದ್ದೇವೆ. ಅಂತೆಯೇ, ನಾವು ಆರೋಗ್ಯ ಮೂಲಸೌಕರ್ಯ ಮತ್ತು ನಮ್ಮ ಆರ್ಥಿಕತೆಗಳನ್ನು ಸರಿಪಡಿಸುವುದನ್ನು ಮುಂದುವರಿಸಬೇಕಾಗಿದೆ. ಗಣಿಗಾರಿಕೆ, ಬಾಹ್ಯಾಕಾಶ, ಬ್ಯಾಂಕಿಂಗ್, ಪರಮಾಣು ಶಕ್ತಿ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಭಾರತದಲ್ಲಿ ಬೃಹತ್ ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ. ಸಾಂಕ್ರಾಮಿಕ ರೋಗದ ನಡುವೆಯೂ, ರಾಷ್ಟ್ರವಾಗಿ ಭಾರತವು ಹೊಂದಿಕೊಳ್ಳಬಲ್ಲದು ಮತ್ತು ಚಟುವಟಿಕೆಯಿಂದ ಇರಬಲ್ಲದು ಎಂಬುದನ್ನು ಇದು ತೋರಿಸುತ್ತದೆ ”ಎಂದು ಶ್ರೀ ಮೋದಿ ಹೇಳಿದರು.

 


ಮುಂದಿನ ಸಾಂಕ್ರಾಮಿಕ ರೋಗದ ವಿರುದ್ಧ ನಮ್ಮ ಗ್ರಹಕ್ಕೆ ರಕ್ಷಣೆ ಒದಗಿಸುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ಪರಿಸರ ನಾಶವನ್ನು ತಡೆಯುವ ಸುಸ್ಥಿರ ಜೀವನ ಶೈಲಿಗಳ ಮೇಲೆ ನಾವು ಗಮನ ಹರಿಸಬೇಕು. ಸಂಶೋಧನೆ ಮತ್ತು ನಾವೀನ್ಯತೆಯನ್ನು ಹೆಚ್ಚಿಸುವಲ್ಲಿ ಸಹಕಾರವನ್ನು ಬಲಪಡಿಸಬೇಕು. ಈ ಸವಾಲನ್ನು ಜಯಿಸಲು ಸಾಮೂಹಿಕ ಮನೋಭಾವ ಮತ್ತು ಮಾನವ ಕೇಂದ್ರಿತ ವಿಧಾನದೊಂದಿಗೆ ಕೆಲಸ ಮಾಡಲು ಮುಂದಾಗಬೇಕು ಎಂದು ಪ್ರಧಾನ ಮಂತ್ರಿ ಸ್ಟಾರ್ಟ್ ಅಪ್ ಸಮುದಾಯಕ್ಕೆ ಕರೆ ನೀಡಿದರು. “ಸ್ಟಾರ್ಟ್ ಅಪ್ ಕ್ಷೇತ್ರದಲ್ಲಿ ಯುವಕರು ಪ್ರಾಬಲ್ಯ ಹೊಂದಿದ್ದಾರೆ. ಇವರು ಭೂತ ಕಾಲದ ಹೊರೆಯಿಂದ ಮುಕ್ತರಾಗಿದ್ದಾರೆ. ಜಾಗತಿಕ ಪರಿವರ್ತನೆಗೆ ಶಕ್ತಿ ತುಂಬಲು ಅವರು ಸೂಕ್ತ ಸ್ಥಳದಲ್ಲಿದ್ದಾರೆ. ನಮ್ಮ ಸ್ಟಾರ್ಟ್ ಅಪ್‌ಗಳು ಆರೋಗ್ಯ ರಕ್ಷಣೆ. ತ್ಯಾಜ್ಯ ಮರುಬಳಕೆ, ಕೃಷಿ, ಕಲಿಕೆಯ ಹೊಸ ಯುಗದ ಸಾಧನಗಳು ಸೇರಿದಂತೆ ಪರಿಸರ ಸ್ನೇಹಿ ತಂತ್ರಜ್ಞಾನದಂತಹ ಕ್ಷೇತ್ರಗಳನ್ನು ಅನ್ವೇಷಿಸಬೇಕು ”ಎಂದು ಪ್ರಧಾನಿ ಹೇಳಿದರು.
ಭಾರತದ ಪ್ರಮುಖ ಪಾಲುದಾರರಲ್ಲಿ ಫ್ರಾನ್ಸ್ ಮತ್ತು ಯುರೋಪ್ ಸೇರಿವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಮೇ ತಿಂಗಳಲ್ಲಿ ಪೋರ್ಟೊದಲ್ಲಿ ನಡೆದ ಯುರೋಪಿಯನ್ ಯೂನಿಯನ್ ನಾಯಕರ ಶೃಂಗಸಭೆಯಲ್ಲಿ ಅಧ್ಯಕ್ಷ ಮ್ಯಾಕ್ರನ್ ಅವರೊಂದಿಗಿನ ಮಾತುಕತೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಸ್ಟಾರ್ಟ್ ಅಪ್‌ಗಳಿಂದ ಹಿಡಿದು ಕ್ವಾಂಟಮ್ ಕಂಪ್ಯೂಟಿಂಗ್‌ವರೆಗಿನ ಡಿಜಿಟಲ್ ಪಾಲುದಾರಿಕೆ ಪ್ರಮುಖ ಆದ್ಯತೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು. "ಹೊಸ ತಂತ್ರಜ್ಞಾನದ ನಾಯಕತ್ವವು ಆರ್ಥಿಕ ಶಕ್ತಿ, ಉದ್ಯೋಗಗಳು ಮತ್ತು ಸಮೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ಇತಿಹಾಸವು ತೋರಿಸಿದೆ. ಆದರೆ, ನಮ್ಮ ಪಾಲುದಾರಿಕೆಗಳು ಮನುಕುಲದ ಸೇವೆಯಲ್ಲಿ ದೊಡ್ಡ ಉದ್ದೇಶವನ್ನು ಪೂರೈಸಬೇಕು. ಈ ಸಾಂಕ್ರಾಮಿಕವು ನಮ್ಮ ಸ್ಥಿತಿಸ್ಥಾಪಕತ್ವವನ್ನು ಮಾತ್ರ ಪರೀಕ್ಷೆ ಮಾಡುತ್ತಿಲ್ಲ,  ನಮ್ಮ ಕಲ್ಪನೆಯನ್ನೂ ಪರೀಕ್ಷಿಸುತ್ತಿದೆ. ಇದು ಪ್ರತಿಯೊಬ್ಬರಿಗೂ ಹೆಚ್ಚು ಅಂತರ್ಗತವಾದ, ಕಾಳಜಿಯುಳ್ಳ ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಿಸುವ ಅವಕಾಶವಾಗಿದೆ” ಎಂದು ಪ್ರಧಾನಿ ತಿಳಿಸಿದರು.

 


 

****



(Release ID: 1727727) Visitor Counter : 250