ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೇಂದ್ರ ಸರ್ಕಾರದಿಂದ ಯುವ ಲೇಖಕರ ಮಾರ್ಗದರ್ಶನಕ್ಕೆ ಯುವ-ಪ್ರಧಾನಮಂತ್ರಿಗಳ ಕಾರ್ಯಕ್ರಮ ಆರಂಭ


ಯುವ ಮತ್ತು ಉದಯೋನ್ಮುಖ ಬರಹಗಾರರಿಗೆ ಲೇಖಕ ಮಾರ್ಗದರ್ಶನ ಕಾರ್ಯಕ್ರಮ

ಭಾರತದ 75ನೇ ಸ್ವಾತಂತ್ರ್ಯೋತ್ಸವ ದಿನ ಆಚರಣೆವೇಳೆಗೆ ದೇಶದ ಸ್ವಾತಂತ್ರ್ಯ ಸಂಗ್ರಾಮದ ಯೋಧರಿಗೆ ಯುವ ಬರಹಗಾರರಿಂದ ಗೌರವ ನಮನ

Posted On: 29 MAY 2021 1:32PM by PIB Bengaluru

ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆ ಇಂದು ಯುವ ಲೇಖಕರಿಗೆ ಮಾರ್ಗದರ್ಶನ ನೀಡುವ ಯುವ-ಪ್ರಧಾನಮಂತ್ರಿಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ದೇಶದಲ್ಲಿ ಓದುವುದು, ಬರೆಯುವುದು ಮತ್ತು ಪುಸ್ತಕ ಸಂಸ್ಕೃತಿಯನ್ನು ಉತ್ತೇಜಿಸುವುದು ಹಾಗೂ ಭಾರತದ ಬರಹಗಳನ್ನು ಜಾಗತಿಕವಾಗಿ ಜನಪ್ರಿಯಗೊಳಿಸುವುದು, ಭಾರತವನ್ನು ಬಿಂಬಿಸುವ ಉದ್ದೇಶದಿಂದ ಯುವ ಮತ್ತು ಉದಯೋನ್ಮುಖ ಲೇಖಕರಿಗೆ (30 ವರ್ಷದೊಳಗಿನವರು) ತರಬೇತಿ ಮತ್ತು ಮಾರ್ಗದರ್ಶನ ನೀಡುವ ಕಾರ್ಯಕ್ರಮ ಇದಾಗಿದೆ.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಯುವ ಬರಹಗಾರರ ಬರವಣಿಗೆಗಳನ್ನು ಉತ್ತೇಜಿಸಬೇಕೆಂಬ ಪ್ರಧಾನಮಂತ್ರಿಗಳ ಕನಸನ್ನು ನನಸು ಮಾಡಲು ಈ ಯುವ (ಯುವ, ಮುಂಬರುವ ಮತ್ತು ಉದಯೋನ್ಮುಖ ಲೇಖಕರು) ಕಾರ್ಯಕ್ರಮವನ್ನು ರೂಪಿಸಲಾಗಿದೆ. 2021ರ ಜನವರಿ 31ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ, ಭಾರತಕ್ಕೆ ಸ್ವಾತಂತ್ರ್ಯದ 75ನೇ ವರ್ಷ ಆಚರಣೆ ವೇಳೆ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅದಕ್ಕೆ ಸಂಬಂಧಿಸಿದ ಘಟನೆಗಳು ಹಾಗೂ ಆಯಾ ಪ್ರದೇಶಗಳಲ್ಲಿನ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿನ ಶೌರ್ಯ ಪ್ರದರ್ಶನ ಗಾಥೆಗಳ ಕುರಿತು ಯವ ಜನಾಂಗ ಬರೆಯುವ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟದ ನಾಯಕರಿಗೆ ತಮ್ಮ ಅತ್ಯುತ್ತಮ ಕೊಡುಗೆಯನ್ನು ಸಲ್ಲಿಸಬೇಕು ಎಂದು ಕರೆ ನೀಡಿದರು.  

“ಇದು ಭವಿಷ್ಯದ ಹಾದಿಯನ್ನು ನಿರ್ಧರಿಸುವಂತಹ ಚಿಂತನೆಯುಳ್ಳ ನಾಯಕರ ವರ್ಗವನ್ನು ಸೃಷ್ಟಿಸುವ ಸಿದ್ಧತೆಯೂ ಆಗಿದೆ” ಎಂದು ಪ್ರಧಾನಮಂತ್ರಿ ಹೇಳಿದ್ದರು.

ಯುವ ಭಾರತ @75 ಯೋಜನೆ(ಆಜಾದಿ ಕಾ ಅಮೃತ ಮಹೋತ್ಸವ)ಯ ಭಾಗವಾಗಿದ್ದು, ಅಸಾಮಾನ್ಯ ನಾಯಕರು, ಸ್ವಾತಂತ್ರ್ಯ ಹೋರಾಟಗಾರರು ಗುರುತಿಸಲಾಗದಂತಹ ಮತ್ತು ಮರೆತು ಹೋಗಿರುವಂತಹ ಸ್ಥಳಗಳು ಮತ್ತು ರಾಷ್ಟ್ರೀಯ ಚಳವಳಿಗಳಲ್ಲಿ ಅವುಗಳ ಪಾತ್ರ ಮತ್ತು ಇತರೆ ವಿಷಯಗಳನ್ನು ಮುನ್ನೆಲೆಗೆ ತರಲು ವಿನೂತನ ಹಾಗೂ ಕ್ರಿಯಾಶೀಲ ಯುವ ತಲೆಮಾರಿನ ಲೇಖಕರ ದೃಷ್ಟಿಕೋನಗಳನ್ನು ಹಂಚಿಕೊಳ್ಳುವ ಉದ್ದೇಶವಿದೆ. ಅಲ್ಲದೆ ಈ ಯೋಜನೆ ಭಾರತೀಯ ಪರಂಪರೆ ಸಂಸ್ಕೃತಿ ಮತ್ತು ಜ್ಞಾನ ವ್ಯವಸ್ಥೆಯ ಉತ್ತೇಜನಕ್ಕೆ ವೈವಿಧ್ಯಮಯ ವಿಷಯಗಳ ಕುರಿತು ಬರಹಗಾರರು ನಾನಾ ಆಯಾಮಗಳನ್ನು ಅಭಿವ್ಯಕ್ತಗೊಳಿಸಲು ನೆರವಾಗಲಿದೆ.

ಶಿಕ್ಷಣ ಸಚಿವಾಲಯದಡಿ ಬರುವ ಭಾರತದ ನ್ಯಾಷನಲ್ ಬುಕ್ ಟ್ರಸ್ಟ್ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಸ್ಥೆಯಾಗಿದ್ದು, ಮೊದಲೇ ನಿಗದಿಪಡಿಸಿರುವ ಹಂತಗಳಲ್ಲಿ ಮಾರ್ಗದರ್ಶನ ನೀಡುವ ಈ ಯೋಜನೆಯನ್ನು ಹಂತ ಹಂತವಾರು ಜಾರಿಗೊಳಿಸಲಾಗುವುದು. ಈ ಯೋಜನೆ ಅಡಿ ಸಿದ್ಧಪಡಿಸಿರುವ ಪುಸ್ತಕಗಳನ್ನು ಭಾರತದ ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಲಿದೆ ಮತ್ತು ಅವುಗಳನ್ನು ಇತರೆ ಭಾರತೀಯ ಭಾಷೆಗಳಿಗೂ ಅನುವಾದಿಸುವ ಮೂಲಕ ‘ಏಕ ಭಾರತ್ ಶ್ರೇಷ್ಠ ಭಾರತ್” ಉತ್ತೇಜನಕ್ಕೆ ಸಂಸ್ಕೃತಿ ಮತ್ತು ಸಾಹಿತ್ಯ ವಿನಿಮಯವನ್ನು ಖಾತ್ರಿಪಡಿಸಲಾಗುವುದು. ಆಯ್ದ ಯುವ ಲೇಖಕರಿಗೆ ಜಗತ್ತಿನ ಅತ್ಯುತ್ತಮ ಲೇಖಕರೊಡನೆ ಸಂವಾದ ನಡೆಸಲು ಮತ್ತು ಸಾಹಿತ್ಯ ಉತ್ಸವ ಮತ್ತಿತರವುಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು.  

ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಯುವ ಮನಸ್ಸುಗಳ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಮತ್ತು ಭವಿಷ್ಯದ ಜಗತ್ತಿನಲ್ಲಿ ನಾಯಕತ್ವ ಪಾತ್ರವನ್ನು ವಹಿಸುವಂತಹ ಯುವ ಓದುಗಾರರು/ಕಲಿಕಾರ್ಥಿಗಳನ್ನು ಸಿದ್ಧಪಡಿಸುವಂತಹ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಲಾಗುವುದು. ಈ ನಿಟ್ಟಿನಲ್ಲಿ ಯುವ, ಸೃಜನಾತ್ಮಕ ಜಗತ್ತಿನಲ್ಲಿ ಭವಿಷ್ಯದ ನಾಯಕರನ್ನು ರೂಪಿಸಲು ದೀರ್ಘಾವಧಿಯಲ್ಲಿ ಭದ್ರ ಬುನಾದಿಯನ್ನು ಹಾಕಲಿದೆ.

ಯುವ ಕಾರ್ಯಕ್ರಮದ ಪ್ರಮುಖಾಂಶಗಳು (ಯುವ, ಮುಂಬರುವ ಮತ್ತು ಉದಯೋನ್ಮುಖ ಲೇಖಕರು):

  • 2021ರ ಜೂನ್ 1 ರಿಂದ 31ರ ವರೆಗೆ ಅಖಿಲ ಭಾರತ ಸ್ಪರ್ಧೆಗಳನ್ನು https://www.mygov.in/ ವೆಬ್ ಸೈಟ್ ಮೂಲಕ ನಡೆಸಿ ಒಟ್ಟು 75 ಲೇಖಕರನ್ನು ಆಯ್ಕೆ ಮಾಡಲಾಗುವುದು.
  • ವಿಜೇತರನ್ನು 2021ರ ಆಗಸ್ಟ್ 15ರಂದು ಘೋಷಿಸಲಾಗುವುದು.
  • ಯುವ ಲೇಖಕರಿಗೆ ಖ್ಯಾತ ಲೇಖಕರು/ಮಾರ್ಗದರ್ಶಕರಿಂದ ತರಬೇತಿ ಕೊಡಿಸಲಾಗುವುದು.
  • ಮಾರ್ಗದರ್ಶಕ ಯೋಜನೆಯಡಿ 2021ರ ಡಿಸೆಂಬರ್ 15ರ ವೇಳೆಗೆ ಹಸ್ತಪ್ರತಿಗಳು ಪ್ರಕಟಣೆಗೆ ಸಿದ್ಧವಾಗಲಿವೆ.
  • ಪ್ರಕಟಣೆಗೊಂಡ ಕೃತಿಗಳನ್ನು ರಾಷ್ಟ್ರೀಯ ಯುವ ದಿನದ ಸಂದರ್ಭದಲ್ಲಿ(ಯುವ ದಿವಸ್) 2020ರ ಜನವರಿ 12ರಂದು ಬಿಡುಗಡೆ ಮಾಡಲಾಗುವುದು.
  • ಮಾರ್ಗದರ್ಶಕ ಯೋಜನೆಯಡಿ ಪ್ರತಿ ಲೇಖಕರಿಗೆ ಆರು ತಿಂಗಳ ಅವಧಿಗೆ ಪ್ರತಿ ತಿಂಗಳು 50,000 ರೂ. ಒಟ್ಟು ವಿದ್ಯಾರ್ಥಿವೇತನವನ್ನು ನೀಡಲಾಗುವುದು. 

***



(Release ID: 1722682) Visitor Counter : 391