ಪ್ರಧಾನ ಮಂತ್ರಿಯವರ ಕಛೇರಿ

ಮಾರ್ಚ್ 12 ರಂದು ʻಸ್ವಾತಂತ್ರ್ಯದ ಅಮೃತ ಮಹೋತ್ಸವʼಕ್ಕೆ (ಆಜಾದಿ ಕಾ ಅಮೃತ್ ಮಹೋತ್ಸವ್) ಸಂಬಂಧಿಸಿದ ಕಾರ್ಯಕ್ರಮಗಳನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ


ಸಾಬರಮತಿ ಆಶ್ರಮದಿಂದ ಪಾದಯಾತ್ರೆಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ

ಭಾರತ@75 ರ ಅಡಿಯಲ್ಲಿ ಯೋಜಿಸಲಾದ ವಿವಿಧ ಉಪಕ್ರಮಗಳಿಗೂ ಚಾಲನೆ ನೀಡಲಿರುವ ಪ್ರಧಾನಿ ಅವರು, ಸಾಬರಮತಿ ಆಶ್ರಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ

Posted On: 11 MAR 2021 3:25PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2021 ಮಾರ್ಚ್ 12 ರಂದು ಅಹಮದಾಬಾದ್ ಸಾಬರಮತಿ ಆಶ್ರಮದಿಂದ 'ಪಾದಯಾತ್ರೆʼಗೆ (ಸ್ವಾತಂತ್ರ್ಯ ಜಾಥಾ) ಚಾಲನೆ ನೀಡಲಿದ್ದಾರ. ಜೊತೆಗೆ, 'ಸ್ವಾತಂತ್ರ್ಯದ ಅಮೃತ ಮಹೋತ್ಸವ' (ಭಾರತ @ 75) ಪ್ರಾರಂಭೋತ್ಸವ ಕಾರ್ಯಕ್ರಮಗಳನ್ನು ಅವರು ಉದ್ಘಾಟನೆ ಮಾಡಲಿದ್ದಾರೆ. ʻಭಾರತ@75ʼ ಅಂಗವಾಗಿ ಇತರ ಸಾಂಸ್ಕೃತಿಕ ಮತ್ತು ಡಿಜಿಟಲ್ ಉಪಕ್ರಮಗಳಿಗೂ ಚಾಲನೆ ನೀಡಲಿರುವ ಪ್ರಧಾನಿ ಸಾಬರಮತಿ ಆಶ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬೆಳಗ್ಗೆ 10: 30 ಕ್ಕೆ ಪ್ರಾರಂಭವಾಗಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಹಾಯಕ ಸಚಿವ (ಸ್ವತಂತ್ರ್ಯ ನಿರ್ವಹಣೆ) ಶ್ರೀ ಪ್ರಹಲಾದ್ಸಿಂಗ್ ಪಟೇಲ್ ಮತ್ತು ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಉಪಸ್ಥಿತರಿರಲಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ (ಆಜಾದಿ ಕಾ ಅಮೃತ್ಮಹೋತ್ಸವ್‌)

ಸ್ವಾತಂತ್ರ್ಯದ ಅಮೃತ ಮಹೋತ್ಸವʼವು ಭಾರತದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ನೆನಪಿಗಾಗಿ ಭಾರತ ಸರಕಾರ ಆಯೋಜಿಸಲಿರುವ ಕಾರ್ಯಕ್ರಮಗಳ ಸರಣಿಯಾಗಿದೆ. ಮಹೋತ್ಸವವನ್ನು ʻಜನ-ಭಾಗೀದಾರಿʼ ಸ್ಫೂರ್ತಿಯೊಂದಿಗೆ ʻಜನ-ಉತ್ಸವʼವಾಗಿ  ಆಚರಿಸಲಾಗುವುದು.

ಸ್ವಾತಂತ್ರ್ಯ ಸ್ಮರಣಾರ್ಥ ಅಭಿಯಾನದ ಅಂಗವಾಗಿ ಕೈಗೊಳ್ಳಬೇಕಾದ ವಿವಿಧ ಕಾರ್ಯಕ್ರಮಗಳು ನೀತಿಗಳು ಮತ್ತು ಯೋಜನೆಗಳನ್ನು ರೂಪಿಸಲು ಗೃಹ ಸಚಿವರ ನೇತೃತ್ವದಲ್ಲಿ ರಾಷ್ಟ್ರೀಯ ಅನುಷ್ಠಾನ ಸಮಿತಿಯನ್ನು ರಚಿಸಲಾಗಿದೆ. ಆಗಸ್ಟ್ 15, 2022 ಕ್ಕೆ 75 ವಾರಗಳ ಮೊದಲು ಮಾರ್ಚ್ 12, 2021ರಿಂದ ಪ್ರಾರಂಭೋತ್ಸವ ಕಾರ್ಯಕ್ರಮಗಳು ಶುರುವಾಗಲಿವೆ.

ಪಾದಯಾತ್ರೆ

ಪ್ರಧಾನಿ ಮೋದಿ ಅವರು ಪಾದಯಾತ್ರೆಗೆ ಚಾಲನೆ ನೀಡಲಿದ್ದು,  81 ಮೆರವಣಿಗೆಕಾರರು ಅಹ್ಮದಾಬಾದ್ ಸಾಬರಮತಿ ಆಶ್ರಮದಿಂದ ನವಸಾರಿಯ ದಾಂಡಿಯವರೆಗೂ 241 ಮೈಲು ದೂರ ಜಾಥಾ ಆರಂಭಿಸಲಿದ್ದಾರೆ. 25 ದಿನಗಳ ಪಾದಯಾತ್ರೆಯು ಏಪ್ರಿಲ್ 5ರಂದು ಕೊನೆಗೊಳ್ಳಲಿದೆ. ದಂಡಿಯ ಹಾದಿಯುದ್ದಕ್ಕೂ ವಿಭಿನ್ನ ಜನರ ಗುಂಪುಗಳು ಪಾದಯಾತ್ರೆಯ ತಂಡವನ್ನು ಸೇರಿಕೊಳ್ಳಲಿವೆ. ಕೇಂದ್ರ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಪಾದಯಾತ್ರೆಯ 75 ಕಿಲೋಮೀಟರ್ ಮೊದಲ ಚರಣವನ್ನು ಮುನ್ನಡೆಸಲಿದ್ದಾರೆ.  

ಭಾರತ@75 ಪ್ರಾರಂಭೋತ್ಸವ ಕಾರ್ಯಕ್ರಮಗಳು

ʻಭಾರತ@75ʼ ಎಂಬ ವಿಷಯದಡಿ ಆಯೋಜಿಸಲಾದ ಚಲನಚಿತ್ರ, ವೆಬ್ಸೈಟ್, ಗಾಯನ, ಆತ್ಮನಿರ್ಭರ್ ಚರಕ ಮತ್ತು ಆತ್ಮನಿರ್ಭರ್ ತರಬೇತಿ ಮುಂತಾದ ಕಾರ್ಯಕ್ರಮಗಳ ಚಾಲನೆಗೂ ಕಾರ್ಯಕ್ರಮ ಸಾಕ್ಷಿಯಾಗಲಿದೆ.

ಮೇಲಿನ ಕಾರ್ಯಕ್ರಮಗಳ ಜೊತೆಗೆ, ದೇಶದ ಅದಮ್ಯ ಸ್ಫೂರ್ತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಆಯೋಜಿಸಲಾಗುವುದು. ಇದು ಸಂಗೀತ, ನೃತ್ಯ, ಪಠಣ, ಮುನ್ನುಡಿಯ ಓದುವಿಕೆ (ಪ್ರತಿಯೊಂದು ಸಾಲನ್ನು ದೇಶದ ವಿವಿಧ ಪ್ರದೇಶಗಳನ್ನು ಪ್ರತಿನಿಧಿಸುವ ಬೇರೆ ಭಾಷೆಯಲ್ಲಿ ಓದುವುದು) ಒಳಗೊಂಡಿರುತ್ತದೆ. ಭಾರತದ ಉಜ್ವಲ ಭವಿಷ್ಯದ ಯುವ ಶಕ್ತಿಯನ್ನು ಚಿತ್ರೀಕರಿಸುವ ನಿಟ್ಟಿನಲ್ಲಿ 75 ಗಾಯಕರ ಧ್ವನಿಗಳು ಮತ್ತು 75 ನರ್ತಕರು ಕಾರ್ಯಕ್ರಮದಲ್ಲಿರುತ್ತಾರೆ.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳು 2021 ಮಾರ್ಚ್ 12 ರಂದು ಭಾರತದಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಕಾರ್ಯಕ್ರಮಗಳ ಜೊತೆಗೆ, ಭಾರತೀಯ ಪುರಾತತ್ವ ಇಲಾಖೆ ಮತ್ತು ಸಂಸ್ಕೃತಿ ಸಚಿವಾಲಯದ ಪ್ರಾದೇಶಿಕ ಸಾಂಸ್ಕೃತಿಕ ಕೇಂದ್ರಗಳು, ಯುವ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ಬುಡಕಟ್ಟು ಸಹಕಾರ ಮಾರುಕಟ್ಟೆ ಸಂಘಟನೆ (ಟ್ರಿಫೆಡ್) ಕಾರ್ಯಕ್ರಮದ ಅಂಗವಾಗಿ ವಿವಿಧ ಚಟುವಟಿಕೆಗಳನ್ನು ಯೋಜಿಸಿವೆ.

***



(Release ID: 1704318) Visitor Counter : 805