ಪ್ರಧಾನ ಮಂತ್ರಿಯವರ ಕಛೇರಿ

ಅಂತಾರಾಷ್ಟ್ರೀಯ ಭಾರತಿ ಉತ್ಸವ 2020: ಪ್ರಧಾನಿ ಭಾಷಣ


ಸರ್ಕಾರದ ಮಹಿಳಾ ಕೇಂದ್ರಿತ ನೀತಿಗಳು ಸುಬ್ರಮಣ್ಯ ಭಾರತಿ ಅವರ ಚಿಂತನೆಗೆ ಗೌರವದ ಕಾಣಿಕೆ: ಪ್ರಧಾನಿ ನರೇಂದ್ರ ಮೋದಿ

Posted On: 11 DEC 2020 5:42PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಂತಾರಾಷ್ಟ್ರೀಯ ಭಾರತೀ ಉತ್ಸವ-2020 ನ್ನುದ್ದೇಶಿಸಿ ಮಾತನಾಡಿದರು ಮತ್ತು ಭಾರತೀಯಾರರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸಿದರು. ವನವಿಲ್ ಸಾಂಸ್ಕೃತಿಕ ಕೇಂದ್ರವು ಮಹಾಕವಿ ಸುಬ್ರಮಣ್ಯ ಭಾರತಿ ಅವರ 138 ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಉತ್ಸವವನ್ನು ಆಯೋಜಿಸಿತ್ತು. ಪ್ರಧಾನ ಮಂತ್ರಿ ಅವರು ವರ್ಷದ ಭಾರತೀ ಪ್ರಶಸ್ತಿ ಪಡೆದ ವಿದ್ವಾಂಸ ಶ್ರೀ ಸೀನಿ ವಿಶ್ವನಾಥನ್ ಅವರನ್ನು ಅಭಿನಂದಿಸಿದರು. ವಿಶ್ವನಾಥನ್ ಅವರಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸುಬ್ರಮಣ್ಯ ಭಾರತೀಯವರನ್ನು ವಿವರಿಸುವುದು ಬಹಳ ಕಷ್ಟ. ಭಾರತೀಯಾರ್ ಅವರನ್ನು ಯಾವುದೇ ಏಕ ವೃತ್ತಿಗೆ ಅಥವಾ ಆಯಾಮಕ್ಕೆ ಸೀಮಿತ ಮಾಡಲಾಗದು. ಅವರೊಬ್ಬ ಕವಿ, ಬರಹಗಾರ, ಸಂಪಾದಕ, ಪತ್ರಕರ್ತ, ಸಮಾಜ ಸುಧಾರಕ, ಸ್ವಾತಂತ್ರ್ಯ ಹೋರಾಟಗಾರ, ಮಾನವೀಯ ಕಳಕಳಿ ಇದ್ದವರು ಮತ್ತು ಇದಕ್ಕಿಂತ ಹೆಚ್ಚಿನ ಆಯಾಮಗಳನ್ನು ಹೊಂದಿದ್ದವರು ಎಂದು ಶ್ರೀ ಮೋದಿ ಬಣ್ಣಿಸಿದರು.

ದೊಡ್ಡ ಕವಿಯ ಕೆಲಸದ ಗಾತ್ರ, ಅವರ ಕಾವ್ಯ, ಅವರ ತತ್ವಜ್ಞಾನ ಮತ್ತು ಅವರ ಬದುಕು ನೋಡಿದ ಯಾರೇ ಆದರೂ ಇದೊಂದು ಅದ್ಭುತ ಎಂದು ಹೇಳುತ್ತಾರೆ ಎಂದು ಪ್ರಧಾನ ಮಂತ್ರಿ ನುಡಿದರು. ಮಹಾಕವಿ ಅವರು ವಾರಾಣಾಸಿ ಜೊತೆ ಹೊಂದಿದ್ದ ನಿಕಟ ಸಂಪರ್ಕವನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ಅವರು, ಭಾರತೀ ಅವರನ್ನು ಕೊಂಡಾಡುತ್ತಾ, 39 ವರ್ಷದ ಸಣ್ಣ ಜೀವಿತಾವಧಿಯಲ್ಲಿ ಅವರು ಬಹಳಷ್ಟನ್ನು ಬರೆದರು, ಬಹಳಷ್ಟು ಕೆಲಸಗಳನ್ನು ಮಾಡಿದರು ಮತ್ತು ಉತ್ಕೃಷ್ಟವಾದುದನ್ನು ಸಾಧಿಸಿದರು. ಆವರ ಬರಹಗಳು ಭವ್ಯ ಭವಿತವ್ಯದತ್ತ ಸಾಗಲು ನಮಗೆ ಮಾರ್ಗದರ್ಶನ ಮಾಡುವ ಬೆಳಕು ಎಂದೂ ಹೇಳಿದರು.

ಸುಬ್ರಮಣ್ಯ ಭಾರತೀಯವರಿಂದ ಇಂದಿನ ಯುವಜನತೆ ಕಲಿಯಬೇಕಾದುದು ಬಹಳಷ್ಟಿದೆ ಎಂದ ಪ್ರಧಾನ ಮಂತ್ರಿ ಅವರು ಇದರಲ್ಲಿ ಬಹಳ ಮುಖ್ಯವಾದುದೆಂದರೆ ಧೈರ್ಯಶಾಲಿಯಾಗುವುದು ಎಂದರು. ಸುಬ್ರಮಣ್ಯ ಭಾರತಿಯವರಿಗೆ ಭಯ ಎಂಬುದೇ ಇರಲಿಲ್ಲ. “ ಭಯ ನನಗಿಲ್ಲ, ಭಯ ನನಗಿಲ್ಲ, ಇಡೀ ವಿಶ್ವವೇ ನನ್ನನ್ನು ವಿರೋಧಿಸಿದರೂ ಎಂಬ ಭಾರತೀಯವರ ಹೇಳಿಕೆಯನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಅವರು, ಅನ್ವೇಷಣೆ ಮತ್ತು ಪ್ರಾವೀಣ್ಯದಲ್ಲಿ ಮುಂಚೂಣಿಯಲ್ಲಿರುವ ಯುವ ಭಾರತದಲ್ಲಿ ಸ್ಪೂರ್ತಿಯನ್ನು ತಾವಿಂದು ಕಾಣುತ್ತಿರುವುದಾಗಿ ಹೇಳಿದರು. ಭಾರತದ ನವೋದ್ಯಮ ಅವಕಾಶ ಭಯರಹಿತ ಯುವ ಜನರನ್ನು ಹೊಂದಿದೆ ಮತ್ತು ಅದು ಮಾನವತೆಗೆ ಹೊಸದನ್ನು ನೀಡುತ್ತಿದೆ ಎಂದೂ ಹೇಳಿದರು. ಇಂತಹಮಾಡಬಹುದುಸ್ಪೂರ್ತಿ ನಮ್ಮ ದೇಶಕ್ಕೆ ಮತ್ತು ನಮ್ಮ ಭೂಗ್ರಹಕ್ಕೆ ಅದ್ಭುತವಾದುದನ್ನು ತರಲಿದೆ ಎಂದರು.

ಭಾರತೀಯಾರ್ ಅವರು ಪ್ರಾಚೀನ ಮತ್ತು ಆಧುನಿಕತೆಯ ಆರೋಗ್ಯಪೂರ್ಣ ಮಿಶ್ರಣದಲ್ಲಿ ನಂಬಿಕೆ ಇಟ್ಟವರಾಗಿದ್ದರು ಎಂದು ಹೇಳಿದ ಪ್ರಧಾನ ಮಂತ್ರಿ ಅವರು ನಮ್ಮ ಬೇರುಗಳ ಜೊತೆ ಸಂಪರ್ಕ ಉಳಿಸಿಕೊಂಡು, ಜೊತೆಗೆ ಭವಿಷ್ಯದತ್ತ ಕಣ್ಣು ನೆಟ್ಟುಕೊಂಡು ಜ್ಞಾನವನ್ನರಸುವವರಾಗಿದ್ದರು, ಅವರು ತಮಿಳು ಭಾಷೆ ಮತ್ತು ಭಾರತ ಮಾತೆಯನ್ನು ತಮ್ಮ ಎರಡು ಕಣ್ಣುಗಳೆಂಬಂತೆ ಪರಿಗಣಿಸಿದ್ದರು. ಭಾರತೀ ಅವರು ಪ್ರಾಚೀನ ಭಾರತದ ಶ್ರೇಷ್ಟತೆಯನ್ನು, ವೇದಗಳ ಮತ್ತು ಉಪನಿಷತ್ ಗಳ ಶ್ರೇಷ್ಟತೆಯನ್ನು, ಸಾರುವ ಗೀತೆಗಳನ್ನು ಹಾಡಿದ್ದರು. ನಮ್ಮ ಸಂಸ್ಕೃತಿ, ಪರಂಪರೆ, ಮತ್ತು ನಮ್ಮ ಹಿಂದಿನ ಕಾಲದ ವೈಭವದ ಕುರಿತೂ ಅವರ ಹಾಡುಗಳಿದ್ದವು. ಇದೇ ವೇಳೆಗೆ ಅವರು ಹಿಂದಿನ ವೈಭವದ ರಮಾರಮಣೀಯತೆಯಲ್ಲಿ ಬದುಕಿದರೆ ಸಾಲದು ಎಂಬ ಎಚ್ಚರಿಕೆಯನ್ನೂ ನಮಗೆ ನೀಡುತ್ತಿದ್ದರು ಎಂದರು. ವೈಜ್ಞಾನಿಕ ಮನೋಭಾವ, ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು ಪ್ರಗತಿಯತ್ತ ಮುನ್ನಡೆಯುವ ಅಗತ್ಯವನ್ನು ಪ್ರಧಾನ ಮಂತ್ರಿ ಅವರು ಪ್ರತಿಪಾದಿಸಿದರು.

ಮಹಾಕವಿ ಭಾರತೀಯಾರ್ ಅವರ ಪ್ರಗತಿಯ ವ್ಯಾಖ್ಯೆಯಲ್ಲಿ ಮಹಿಳೆಯರಿಗೆ ಬಹಳ ಮಹತ್ವದ ಪಾತ್ರವಿದೆ ಎಂದು ಹೇಳಿದ ಪ್ರಧಾನ ಮಂತ್ರಿ ಅವರು, ಅದರಲ್ಲಿ ಪ್ರಮುಖವಾದ ದೃಷ್ಟಿಕೋನವೆಂದರೆ ಸ್ವತಂತ್ರ ಮತ್ತು ಸಶಕ್ತ ಮಹಿಳೆಯರಿಗೆ ಸಂಬಂಧಿಸಿದ್ದು. ಮಹಾಕವಿ ಭಾರತೀಯಾರ್ ಅವರು ಜನರನ್ನು ಕಣ್ಣಿನಲ್ಲಿ ನೋಡುತ್ತಾ ಮಹಿಳೆಯರು ತಲೆ ಎತ್ತಿ ನಡೆಯಬೇಕು ಎಂದು ಬರೆದಿದ್ದಾರೆ ಎಂದರು. ಚಿಂತನೆಯಿಂದ ಸರಕಾರ ಪ್ರೇರಣೆ ಪಡೆದಿದೆ ಮತ್ತು ಮಹಿಳಾ ನಾಯಕತ್ವದ ಅಭಿವೃದ್ಧಿಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದೂ ಪ್ರಧಾನ ಮಂತ್ರಿ ಹೇಳಿದರು. ಸರಕಾರದ ಕಾರ್ಯಚಟುವಟಿಕೆಯ ಪ್ರತೀ ಕ್ಷೇತ್ರದಲ್ಲಿಯೂ ಮಹಿಳೆಯರ ಘನತೆಗೆ ಮಹತ್ವ ನೀಡಲಾಗಿದೆ. ಇಂದು ಸುಮಾರು 15 ಕೋಟಿ ಮಹಿಳಾ ಉದ್ಯಮಿಗಳಿಗೆ ಮುದ್ರಾ ಯೋಜನಾದಂತಹ ಯೋಜನೆಗಳಿಂದ ಹಣಕಾಸು ಒದಗಿಸಲಾಗಿದೆ. ಇಂದು ಮಹಿಳೆಯರು ಸಶಸ್ತ್ರ ಪಡೆಗಳ ಭಾಗವಾಗಿದ್ದಾರೆ, ಅವರಿಗೆ ಖಾಯಂ ಕಮಿಶನಿಂಗ್ ಒದಗಿಸಲಾಗಿದೆ. ಸುರಕ್ಷಿತ ಶೌಚಾಲಯ ಸೌಲಭ್ಯ ಇಲ್ಲದಿದ್ದ, ಬಡವರಲ್ಲಿ ಅತ್ಯಂತ ಬಡ ಮಹಿಳೆ ಕೂಡಾ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ, ಸುಮಾರು 10 ಕೋಟಿಗೂ ಅಧಿಕ ಸುರಕ್ಷಿತ ಮತ್ತು ನೈರ್ಮಲ್ಯ ಕಾಪಾಡುವಂತಹ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅವರು ಇನ್ನು ಇಂತಹ ಸಮಸ್ಯೆಗಳನ್ನು ಎದುರಿಸುವ ಅಗತ್ಯ ಇಲ್ಲ ಎಂದ ಪ್ರಧಾನ ಮಂತ್ರಿ ಅವರುಇದು ನವಭಾರತದ ನಾರೀ ಶಕ್ತಿಯ ಯುಗ. ಅವರು ಅಡೆ ತಡೆಗಳನ್ನು ದಾಟುತ್ತಿದ್ದಾರೆ ಮತ್ತು ಪರಿಣಾಮಗಳನ್ನು ಬೀರುತ್ತಿದ್ದಾರೆ. ಇದು ಸುಬ್ರಮಣ್ಯ ಭಾರತಿ ಅವರಿಗೆ ನವಭಾರತದ ಗೌರವಎಂದೂ ಹೇಳಿದರು.

ವಿಭಜನೆಗೊಂಡ ಯಾವುದೇ ಸಮಾಜ ಯಶಸ್ಸನ್ನು ಸಾಧಿಸಲಾರದು ಎಂಬುದನ್ನು ಮಹಾಕವಿ ಭಾರತೀಯಾರ್ ಅವರು ತಿಳಿದುಕೊಂಡಿದ್ದರು ಎಂಬುದನ್ನು ಹೇಳಿದ ಪ್ರಧಾನ ಮಂತ್ರಿ ಇದೇ ವೇಳೆ ಅವರು ಸಾಮಾಜಿಕ ಅಸಮಾನತೆಯನ್ನು, ಸಾಮಾಜಿಕ ಅನಿಷ್ಟಗಳನ್ನು ಪರಿಹರಿಸದ ರಾಜಕೀಯ ಸ್ವಾತಂತ್ರ್ಯದ ಖಾಲಿತನದ ಬಗ್ಗೆಯೂ ಬರೆದಿದ್ದಾರೆ ಎಂದರು. “ ಈಗ ನಾವು ಕಾನೂನು ಮಾಡುತ್ತೇವೆ, ಮತ್ತು ಅದನ್ನು ಎಂದೆಂದೂ ಜಾರಿಗೆ ತರುತ್ತೇವೆ. ಯಾರಾದರೊಬ್ಬರು ಹಸಿವೆಯಿಂದ ಕಂಗಾಲಾಗುತ್ತಿದ್ದರೆ ವಿಶ್ವವು ಹಾನಿಯ ನೋವಿನ ಪ್ರಾಯಶ್ಚಿತ್ತದಲ್ಲಿರುತ್ತದೆಎಂಬ ಭಾರತಿಯವರ ಮಾತುಗಳನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಅವರು ಅವರ ಬೋಧನೆಗಳು ನಾವು ಸದಾ ಒಗ್ಗಟ್ಟಾಗಿರುವುದಕ್ಕೆ ಮತ್ತು ಪ್ರತೀ ವ್ಯಕ್ತಿಯೂ ಅದರಲ್ಲೂ ವಿಶೇಷವಾಗಿ ಬಡವರು ಮತ್ತು ಸಮಾಜದ ಅಂಚಿನಲ್ಲಿರುವವರು, ನಿರ್ಲಕ್ಷಿಸಲ್ಪಟ್ಟವರ ಸಶಕ್ತೀಕರಣಕ್ಕೆ ಬದ್ಧತೆಯಿಂದಿರುವುದಕ್ಕೆ ಬಲಿಷ್ಟವಾದ ನೆನಪೋಲೆಗಳಿದ್ದಂತೆ ಎಂದರು.

ಭಾರತೀ ಅವರಿಂದ ನಮ್ಮ ಯುವ ಜನತೆ ಕಲಿಯುವುದು ಬಹಳಷ್ಟಿದೆ ಎಂದ ಪ್ರಧಾನ ಮಂತ್ರಿ ಅವರು ನಮ್ಮ ದೇಶದಲ್ಲಿರುವ ಪ್ರತಿಯೊಬ್ಬರೂ ಅವರ ಬರಹಗಳನ್ನು ಓದಬೇಕು ಮತ್ತು ಅದರಿಂದ ಪ್ರೇರಣೆ ಪಡೆಯುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಭಾರತೀಯಾರ್ ಅವರ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಅದ್ಭುತ ಕಾರ್ಯವನ್ನು ಮಾಡುತ್ತಿರುವ ವನವಿಲ್ ಸಾಂಸ್ಕೃತಿಕ ಕೇಂದ್ರವನ್ನು ಅವರು ಶ್ಲ್ಯಾಘಿಸಿದರು. ಉತ್ಸವ ಭಾರತವನ್ನು ಹೊಸ ಭವಿಷ್ಯದತ್ತ ಮುನ್ನಡೆಸಲು ಸಹಾಯ ಮಾಡುವಂತಹ ಫಲಪ್ರದ ಚರ್ಚೆಗಳನ್ನು ನಡೆಸುತ್ತದೆ ಎಂಬ ಭರವಸೆ ತಮ್ಮದಾಗಿದೆ ಎಂದೂ ಅವರು ನುಡಿದರು.

***



(Release ID: 1680485) Visitor Counter : 203