ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಮತ್ತು ಕತಾರಿನ ಅಮೀರ್ ಗೌರವಾನ್ವಿತ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ನಡುವೆ ದೂರವಾಣಿ ಸಂಭಾಷಣೆ

Posted On: 08 DEC 2020 1:55PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕತಾರಿನ ಅಮೀರ್, ಗೌರವಾನ್ವಿತ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.

ಪ್ರಧಾನಮಂತ್ರಿ ಅವರು ಗೌರವಾನ್ವಿತ ಅಮೀರ್ ಅವರಿಗೆ ಬರಲಿರುವ ಕತಾರ್ ರಾಷ್ಟ್ರೀಯ ದಿನದ ಅಂಗವಾಗಿ ತಮ್ಮ ಅಭಿನಂದನೆಗಳನ್ನು ತಿಳಿಸಿದರು. ಶುಭಾಶಯಕ್ಕಾಗಿ ಪ್ರಧಾನಮಂತ್ರಿ ಅವರಿಗೆ ಧನ್ಯವಾದ ಸಲ್ಲಿಸಿದ ಗೌರವಾನ್ವಿತರಾದ ಅಮೀರ್ ಅವರು ಕತಾರಿನಲ್ಲಿರುವ ಭಾರತೀಯ ಸಮುದಾಯ ರಾಷ್ಟ್ರೀಯ ದಿನ ಆಚರಣೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಲ್ಲಿ ತೋರುತ್ತಿರುವ ಉತ್ಸಾಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಇತ್ತೀಚಿನ ದೀಪಾವಳಿ ಹಬ್ಬಕ್ಕಾಗಿ ಪ್ರಧಾನ ಮಂತ್ರಿ ಅವರಿಗೆ ಶುಭಾಶಯಗಳನ್ನು ತಿಳಿಸಿದರು.

ಇಬ್ಬರೂ ನಾಯಕರು ಹೂಡಿಕೆ ಹರಿವು ಮತ್ತು ಇಂಧನ ಭದ್ರತೆ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವಣ ದೃಢವಾದ ಸಹಕಾರದ ಬಗ್ಗೆ ಚರ್ಚಿಸಿದರಲ್ಲದೆ, ಈ ನಿಟ್ಟಿನಲ್ಲಿ ಇತ್ತೀಚಿನ ಧನಾತ್ಮಕ ಬೆಳವಣಿಗೆಗಳ ಬಗ್ಗೆಯೂ ಪರಾಮರ್ಶಿಸಿದರು. ಭಾರತದಲ್ಲಿ ಕತಾರ್ ಹೂಡಿಕೆ ಪ್ರಾಧಿಕಾರದಿಂದ ಇನ್ನಷ್ಟು ಹೂಡಿಕೆ ಮಾಡಲು ಅನುಕೂಲವಾಗುವಂತೆ ವಿಶೇಷ ಕಾರ್ಯ ಪಡೆಯನ್ನು ರಚಿಸಲೂ ಅವರು ನಿರ್ಧರಿಸಿದರು. ಮತ್ತು ಭಾರತದಲ್ಲಿಯ ಇಡೀ ಇಂಧನ ಮೌಲ್ಯವರ್ಧನೆಯ ಸರಪಳಿಯಲ್ಲಿ ಹೂಡಿಕೆ ಸಾಧ್ಯತೆಯ ಅನ್ವೇಷಣೆ ನಡೆಸುವುದಕ್ಕೂ ನಿರ್ಧರಿಸಿದರು.

ನಿಯಮಿತವಾಗಿ ಸಂಪರ್ಕದಲ್ಲಿರಲು ಒಪ್ಪಿಕೊಂಡ ನಾಯಕರು, ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಉಂಟು ಮಾಡಿರುವ ಸಾರ್ವಜನಿಕ ಆರೋಗ್ಯ ಪರಿಸ್ಥಿತಿಯು ಸಹಜ ಸ್ಥಿತಿಗೆ ಮರಳಿದ ಬಳಿಕ ಪರಸ್ಪರ ಮುಖತಃ ಭೇಟಿ ಮಾಡಲೂ ನಿರ್ಧರಿಸಿದರು.

***



(Release ID: 1679084) Visitor Counter : 217