ಪ್ರಧಾನ ಮಂತ್ರಿಯವರ ಕಛೇರಿ

ಉತ್ತರಪ್ರದೇಶದ ವಿಂಧ್ಯಾಚಲದಲ್ಲಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ


ಜಲಜೀವನ್ ಮಿಷನ್: 2.6 ಕೋಟಿ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರಿನ ಕೊಳವೆ ಸಂಪರ್ಕ

ಕೊಳವೆ ನೀರು ಪೂರೈಕೆಯಿಂದ ಬಡ ಕುಟುಂಬಗಳ ಆರೋಗ್ಯದಲ್ಲಿ ಸುಧಾರಣೆ

ಜಲ ಯೋಜನೆಗಳಿಂದ ವಿಂಧ್ಯಾಚಲದಲ್ಲಿ ಸದ್ಯದಲ್ಲೇ ನೀರಿನ ಕೊರತೆ ಮತ್ತು ನೀರಾವರಿ ಸಮಸ್ಯೆ ಪರಿಹಾರ: ಪ್ರಧಾನಿ

Posted On: 22 NOV 2020 1:06PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಉತ್ತರ ಪ್ರದೇಶದ ವಿಂಧ್ಯಾಚಲ ಪ್ರಾಂತ್ರ್ಯದ ಮಿರ್ಜಾಪುರ ಮತ್ತು ಸೋನ್ಭದ್ರಾ ಜಿಲ್ಲೆಗಳಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಅಲ್ಲದೆ ಪ್ರಧಾನಮಂತ್ರಿ ಅವರು, ಗ್ರಾಮೀಣ ನೀರು ಮತ್ತು ನೈರ್ಮಲೀಕರಣ ಸಮಿತಿ/ಪಾನಿ ಸಮಿತಿ ಸದಸ್ಯರೊಂದಿಗೆ ಕಾರ್ಯಕ್ರಮದ ವೇಳೆ ಸಂವಾದ ನಡೆಸಿದರು. ಕೇಂದ್ರ ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೆಖಾವತ್, ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿ ಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಧಾನಮಂತ್ರಿ ಅವರು, ಇಂದು ಶಂಕುಸ್ಥಾಪನೆ ನೆರವೇರಿಸಿದ ಯೋಜನೆಗಳಿಂದಾಗಿ ಎಲ್ಲಾ 2,995 ಗ್ರಾಮಗಳ ಕುಟುಂಬಗಳಿಗೆ ಕೊಳವೆ ಮೂಲಕ ನೀರಿನ ಸಂಪರ್ಕ ಲಭ್ಯವಾಗುವುದಲ್ಲದೆ, ಜಿಲ್ಲೆಗಳ ಸುಮಾರು 42 ಲಕ್ಷ ಜನರಿಗೆ ಅನುಕೂಲವಾಗಲಿದೆ. ಎಲ್ಲ ಗ್ರಾಮಗಳಲ್ಲಿ ಗ್ರಾಮ ಜಲ ಮತ್ತು ನೈರ್ಮಲೀಕರಣ ಸಮಿತಿ/ಪಾನಿ ಸಮಿತಿಗಳನ್ನು ರಚಿಸಲಾಗಿದ್ದು, ಅವು ಕೊಳವೆ ನೀರಿನ ಸಂಪರ್ಕಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಹೊಣೆಗಾರಿಕೆಯನ್ನು ನಿಭಾಯಿಸಲಿವೆ. ಯೋಜನೆಯ ಒಟ್ಟು ಅಂದಾಜು ವೆಚ್ಚ 5,555.38 ಕೋಟಿ ರೂ. ಯೋಜನೆಗಳ ಕಾಮಗಾರಿಯನ್ನು 24 ತಿಂಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಕಳೆದ ಒಂದೂವರೆ ವರ್ಷಗಳ ಹಿಂದೆ ಜಲ ಜೀವನ್ ಮಿಷನ್ ಆರಂಭವಾದ ನಂತರ 2 ಕೋಟಿ 60 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಕೊಳವೆ ಮೂಲಕ ಕುಡಿಯುವ ನೀರಿನ ಸಂಪರ್ಕವನ್ನು ಕಲ್ಪಿಸಲಾಗಿದೆ. ಇದರಲ್ಲಿ ಉತ್ತರ ಪ್ರದೇಶದ ಲಕ್ಷಾಂತರ ಕುಟುಂಬಗಳು ಸಹ ಸೇರಿವೆ ಎಂದರು. ಜಲಜೀವನ್ ಮಿಷನ್ ಅಡಿಯಲ್ಲಿ ಶುದ್ಧ ನೀರು ಪೂರೈಸುತ್ತಿರುವುದರಿಂದ ನಮ್ಮ ಗ್ರಾಮೀಣ ತಾಯಂದಿರು ಮತ್ತು ಸಹೋದರಿಯರ ಜೀವನ ಸುಲಭವಾಗಿದ್ದು, ಅವರು ತಮ್ಮ ಮನೆಗಳಲ್ಲಿಯೇ ಸುಲಭವಾಗಿ ನೀರನ್ನು ಪಡೆಯುವಂತಾಗಿದೆ ಎಂದರು. ಇದರಿಂದ ಆಗಿರುವ ಅತ್ಯಂತ ಪ್ರಮುಖ ಅನುಕೂಲ ಅಥವಾ ಪ್ರಯೋಜನ ಎಂದರೆ ಬಡ ಕುಟುಂಬಗಳು ಅಶುದ್ಧ ನೀರನ್ನು ಬಳಕೆ ಮಾಡುತ್ತಿದ್ದರಿಂದ ಬರುತ್ತಿದ್ದ ಕಾಲರಾ, ಟೈಫಾಯ್ಡ್, ಮೆದುಳು ಜ್ವರ ಮತ್ತಿತರ ಕಾಯಿಲೆಗಳು ನಿವಾರಣೆಯಾಗಿವೆ. ವಿಂಧ್ಯಾಚಲ ಅಥವಾ ಬುಂಡೇಲ್ ಖಂಡ್ ಪ್ರಾಂತ್ಯದಲ್ಲಿ ವಿಫುಲ ನೈಸರ್ಗಿಕ ಸಂಪನ್ಮೂಲಗಳಿದ್ದರೂ ಅದು ಅತ್ಯಂತ ಹಿಂದುಳಿದು ಹಲವು ಕೊರತೆಗಳನ್ನು ಎದುರಿಸುವಂತಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಹಲವು ನದಿಗಳು ಹರಿಯುತ್ತಿದ್ದರೂ ಪ್ರದೇಶದಲ್ಲಿ ನೀರಿಗೆ ಭಾರೀ ಬೇಡಿಕೆ ಇದೆ ಮತ್ತು ಬರಪೀಡಿತ ಪ್ರದೇಶವೆಂದು ಹೆಸರಾಗಿದೆ ಹಾಗೂ ಹಲವರು ಇಲ್ಲಿಂದ ಬಲವಂತವಾಗಿ ವಲಸೆ ಹೋಗುತ್ತಿದ್ದಾರೆ ಎಂದರು. ಇದೀಗ ಯೋಜನೆಗಳಿಂದ ನೀರಿನ ಕೊರತೆ ಮತ್ತು ನೀರಾವರಿ ಸಮಸ್ಯೆಗಳು ನಿವಾರಣೆಯಾಗುವುದಲ್ಲದೆ, ಕ್ಷಿಪ್ರ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.

ವಿಂಧ್ಯಾಚಲದ ಸಹಸ್ರಾರು ಗ್ರಾಮಗಳಿಗೆ ಕೊಳವೆ ಮೂಲಕ ಶುದ್ಧ ಕುಡಿಯುವ ನೀರು ತಲುಪಿದಾಗ ಪ್ರಾಂತ್ಯದ ಮಕ್ಕಳ ಆರೋಗ್ಯ ವೃದ್ಧಿಯಾಗುವುದಲ್ಲದೆ, ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಇನ್ನೂ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಲಿದ್ದಾರೆ ಎಂದು ಅವರು ಹೇಳಿದರು.  ಯಾರು ಸ್ವತಂತ್ರವಾಗಿ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೋ ಅಂತಹ ನಿರ್ಧಾರಗಳಿಂದ ಇಡೀ ಗ್ರಾಮಗಳ ಅಭಿವೃದ್ಧಿಯಾಗುತ್ತದೆ. ಜೊತೆಗೆ ಗ್ರಾಮಗಳಲ್ಲಿನ ಪ್ರತಿಯೊಬ್ಬ ಜನರ ವಿಶ್ವಾಸವೂ ವೃದ್ಧಿಯಾಗುತ್ತದೆ. ಸ್ವಾವಲಂಬಿ ಗ್ರಾಮಗಳಿಂದ ಸ್ವಾವಲಂಬಿ ಭಾರತಕ್ಕೆ ಬಲ ಬರಲಿದೆ ಎಂದು ಅವರು ಹೇಳಿದರು.

ಸಾಂಕ್ರಾಮಿಕದ ವೇಳೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದಕ್ಕೆ ಮತ್ತು ಅತ್ಯಂತ ವೇಗವಾಗಿ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದಕ್ಕಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರಧಾನಮಂತ್ರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪ್ರಾಂತ್ಯದ ಅಭಿವೃದ್ಧಿಯ ನೋಟವನ್ನು ಬಿಡಿಸಿಟ್ಟರು. ಅವರು ಮಿರ್ಜಾಪುರದಲ್ಲಿ ಎಲ್ ಪಿಜಿ ಸಿಲಿಂಡರ್, ವಿದ್ಯುತ್ ಪೂರೈಕೆ ಮತ್ತು ಸೋಲಾರ್ ಘಟಕಗಳು ಆರಂಭವಾಗಲಿವೆ. ನೀರಾವರಿ ಯೋಜನೆಗಳು ಪೂರ್ಣಗೊಳ್ಳಲಿವೆ. ಕೃಷಿಗೆ ಬಳಸಲಾಗದ ಭೂಮಿಯಲ್ಲಿ ಸೌರಶಕ್ತಿ ಯೋಜನೆಗಳನ್ನು ಕೈಗೊಳ್ಳುವ ಮೂಲಕ ರೈತರಿಗೆ ಸ್ಥಿರ ಹೆಚ್ಚುವರಿ ಆದಾಯ ಲಭ್ಯವಾಗಲಿದೆ ಎಂದು ಹೇಳಿದರು.    

ಸ್ವಾಮಿತ್ವ ಯೋಜನೆಯನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಮಾಲಿಕರಿಗೆ ವಸತಿ ಮತ್ತು ಪ್ರಮಾಣೀಕರಿಸಿದ ಭೂದಾಖಲೆಗಳನ್ನು ವಿತರಿಸಲಾಗುವುದು. ಇದರಿಂದ ಸ್ವತ್ತುಗಳ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು, ಸ್ಥಿರ ಮತ್ತು ಖಚಿತವಾಗಲಿವೆ ಎಂದರು. ಇದರಿಂದಾಗಿ ಸಮಾಜದ ಬಡವರ್ಗದ ಜನರ ಆಸ್ತಿಯನ್ನು ಯಾರೊಬ್ಬರೂ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲು ಸಾಧ್ಯವಾಗದಂತಹ ಭರವಸೆ ದೊರಕಲಿದೆ ಮತ್ತು ಆಸ್ತಿಯನ್ನು ಸಾಲಕ್ಕಾಗಿ ಖಾತ್ರಿ ನೀಡುವ ಸಾಧ್ಯತೆ ಹೆಚ್ಚಿಸುವ ಸುಧಾರಣೆಗಳಾಗಲಿವೆ ಎಂದರು.

ಪ್ರಾಂತ್ಯದ ಬುಡಕಟ್ಟು ಜನರ ಅಭಿವೃದ್ಧಿ ಪ್ರಯತ್ನಗಳ ಕುರಿತಂತೆ ಮಾತನಾಡಿದ ಶ್ರೀ ನರೇಂದ್ರ ಮೋದಿ ಅವರು, ವಿಶೇಷ ಯೋಜನೆಗಳಡಿ ಬುಡಕಟ್ಟು ಪ್ರಾಂತ್ಯದ ಜನರಿಗೆ ಸರ್ಕಾರದ ಯೋಜನೆಗಳು ತಲುಪುತ್ತಿವೆ ಎಂದರು. ಉತ್ತರ ಪ್ರದೇಶ ಸೇರಿದಂತೆ ಬುಡಕಟ್ಟು ಜನಾಂಗದವರು ಹೆಚ್ಚಿರುವ ಜಾಗಗಳಲ್ಲಿ 100 ಏಕಲವ್ಯ ಮಾದರಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿಯೊಂದು ಬುಡಕಟ್ಟು ಸಮುದಾಯದ ಘಟಕಗಳಿಗೆ ಸೌಕರ್ಯವನ್ನು ಒದಗಿಸುವ ಗುರಿ ಹೊಂದಲಾಗಿದೆ. ಅರಣ್ಯ ಉತ್ಪನ್ನ ಆಧಾರಿತ ಯೋಜನೆಗಳನ್ನೂ ಸಹ ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲಾ ಖನಿಜ ನಿಧಿಗಳನ್ನು ಆರಂಭಿಸಲಾಗಿದ್ದು, ಬುಡಕಟ್ಟು ಪ್ರಾಂತ್ಯಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಯಾವುದೇ ಹಣಕಾಸಿನ ಕೊರತೆಯಿಲ್ಲ. ಯೋಜನೆಗಳಿಂದ ಸಂಪನ್ಮೂಲಗಳು ಸೃಷ್ಟಿಯಾಗುತ್ತಿರುವುದಲ್ಲದೆ, ಸ್ಥಳೀಯವಾಗಿ ಹೂಡಿಕೆ ಮಾಡಬಹುದಾಗಿದೆ. ಉತ್ತರ ಪ್ರದೇಶ ಒಂದರಲ್ಲೇ ನಿಧಿ ಅಡಿ 800 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ ಮತ್ತು ಸುಮಾರು 6,000 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಕೊರೊನಾದ ಅಪಾಯ ಇನ್ನೂ ದೂರವಾಗಿಲ್ಲ, ಹಾಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಮತ್ತು ತುಂಬಾ ಪ್ರಾಮಾಣಿಕವಾಗಿ ಅಗತ್ಯ ಮುನ್ನೆಚ್ಚರಿಕೆಗಳನ್ನು ಜನರು ಕಾಯ್ದುಕೊಳ್ಳಬೇಕು ಎಂದು ಪ್ರಧಾನಮಂತ್ರಿ ಕರೆ ನೀಡಿದರು.

***



(Release ID: 1674967) Visitor Counter : 253