ಪ್ರಧಾನ ಮಂತ್ರಿಯವರ ಕಛೇರಿ

ಹಿಮಾಚಲ ಪ್ರದೇಶದ ರೋಹ್ಟಂಗ್ ನಲ್ಲಿ ಅಟಲ್ ಸುರಂಗ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 03 OCT 2020 1:56PM by PIB Bengaluru

ದೇಶದ ರಕ್ಷಣಾ ಸಚಿವರಾದ ಶ್ರೀ ರಾಜ್ ನಾಥ್ ಸಿಂಗ್ ಜೀ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಜೈರಾಂ ಠಾಕೂರ್ ಜೀ , ನನ್ನ ಸಂಪುಟ ಸಹೋದ್ಯೋಗಿ ಮತ್ತು ಹಿಮಾಚಲದ ಯುವ ಪುತ್ರ ಅನುರಾಗ್ ಠಾಕೂರ್ ಜೀ, ಹಿಮಾಚಲ ಪ್ರದೇಶ ಸರಕಾರದ ಸಚಿವರೇ, ಇತರ ಜನಪ್ರತಿನಿಧಿಗಳೇ, ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥರಾದ ಬಿಪಿನ್ ರಾವತ್ ಜೀ ಮತ್ತು ಹಿಮಾಚಲ ಪ್ರದೇಶದ ನನ್ನ ಸಹೋದರರೇ ಮತ್ತು ಸಹೋದರಿಯರೇ !

ಇಂದು ಚಾರಿತ್ರಿಕ ದಿನ . ಇಂದು ಅಟಲ್ ಜೀ ಅವರ ಕನಸು ನನಸಾದ ದಿನ, ಮಾತ್ರವಲ್ಲ, ಹಿಮಾಚಲ ಪ್ರದೇಶದ ಕೋಟ್ಯಾಂತರ ಜನತೆಯ ದಶಕಗಳ ಕಾಯುವಿಕೆ ಅಂತ್ಯಗೊಂಡ ದಿನವೂ ಹೌದು.

ಇಂದು ನಾನು ಅಟಲ್ ಸುರಂಗ ಕಾರ್ಯಾರಂಭದ ಅವಕಾಶವನ್ನು ಪಡೆದ ಅದೃಷ್ಟವಂತನಾಗಿದ್ದೇನೆ. ರಾಜ್ ನಾಥ್ ಜೀ ಹೇಳಿದಂತೆ , ನಾನಿಲ್ಲಿ ಸಂಘಟನೆಯ ಕೆಲಸ ನೋಡಿಕೊಂಡಿದ್ದೆ ಮತ್ತು ನಾನಿಲ್ಲಿ ನನ್ನ ಬದುಕಿನ ಉತ್ತಮ ದಿನಗಳನ್ನು ಇಲ್ಲಿಯ ಪರ್ವತ ಪ್ರದೇಶ ಮತ್ತು ಕಣಿವೆಗಳಲ್ಲಿ ಕಳೆದಿದ್ದೇನೆ. ಅಟಲ್ ಜೀ ಅವರು ಮನಾಲಿಗೆ ಬಂದು ಉಳಿದುಕೊಳ್ಳುತ್ತಿದ್ದಾಗ , ನಾನವರನ್ನು ಭೇಟಿ ಮಾಡುತ್ತಿದ್ದೆ ಮತ್ತು ನಾವು ಮಾತುಕತೆ ನಡೆಸುತ್ತಿದ್ದೆವು. ಒಂದು ದಿನ ನಾನು ಮತ್ತು ಧುಮಾಲ್ ಜೀ ಅವರು ಚಹಾ ಕುಡಿಯುತ್ತಾ ಈ ವಿಷಯದ ಕುರಿತಂತೆ ಚರ್ಚಿಸುವಾಗ ಈ ಬಗ್ಗೆ ಒಂದು ಕೋರಿಕೆ ಮಂಡಿಸಿದೆವು. ಮತ್ತು ಅಟಲ್ ಜೀ ಅವರು ನಮ್ಮ ಮಾತುಗಳನ್ನು ಗಮನವಿಟ್ಟು ಕೇಳುತ್ತಿದ್ದರು. ಅವರು ತಮ್ಮ ಕಣ್ಣುಗಳನ್ನು ವಿಶಾಲವಾಗಿ ತೆರೆದು ನಮ್ಮನ್ನು ಆಳವಾಗಿ ಅಭ್ಯಸಿಸುತ್ತಿರುವಂತೆ ಕಾಣುತ್ತಿದ್ದರು. ಆಗಾಗ ಅವರು ನಮ್ಮ ಚಿಂತನೆಯನ್ನು ಒಪ್ಪಿಕೊಂಡಂತೆ ತಲೆ ಆಡಿಸುತ್ತಿದ್ದರು. ಅಂತಿಮವಾಗಿ ನಾನು ಮತ್ತು ಧುಮಾಲ್ ಜೀ ಅವರು ಅಟಲ್ ಜೀ ಅವರೆದುರು ಚರ್ಚಿಸುತ್ತಿದ್ದ ವಿಷಯ ಅಟಲ್ ಜೀ ಅವರ ಕನಸಾಯಿತು. ಮತ್ತು ಇಂದು ಅದು ಈಡೇರಿದ್ದನ್ನು ನಾವು ನಮ್ಮ ಕಣ್ಣೆದುರು ಕಾಣಬಹುದಾಗಿದೆ. ವ್ಯಕ್ತಿಯ ಜೀವನದಲ್ಲಿ ಇದು ಎಂತಹ ಮತ್ತು ಯಾವ ಮಟ್ಟದ ತೃಪ್ತಿ ತರಬಹುದು ಎಂಬುದನ್ನು ನೀವು ಕಲ್ಪಿಸಿಕೊಳ್ಳಬಹುದು !. .

ಕೆಲವು ನಿಮಿಷಗಳ ಹಿಂದೆ , ನಾವೆಲ್ಲರೂ ಒಂದು ಚಲನಚಿತ್ರವನ್ನು ನೋಡಿದೆವು. ಮತ್ತು ನಾನು ಅಲ್ಲಿ ಚಿತ್ರ ಪ್ರದರ್ಶನವನ್ನೂ ವೀಕ್ಷಿಸಿದೆ-“ಅಟಲ್ ಸುರಂಗ ನಿರ್ಮಾಣ” ಕ್ಕೆ ಸಂಬಂಧಿಸಿದ್ದು ಅದು. ಅಂತಹ ಜನರ ಕಠಿಣ ದುಡಿಮೆಯಿಂದ ಇದು ಸಾಧ್ಯವಾಗಿದೆ.ಆದರೆ ಅವರು ಈ ಕಾರ್ಯಾರಂಭದ ಅದ್ದೂರಿ ಪ್ರದರ್ಶನದಿಂದ ದೂರ ಉಳಿದಿದ್ದಾರೆ. ನಾವು ಒಳಪ್ರವೇಶಿಸಲಾಗದ ಪೀರ್ ಪಂಜಾಲ್ ವಲಯವನ್ನು ಒಳಪ್ರವೇಶ ಮಾಡಲು ಸಮರ್ಥರಾದುದು ನಮ್ಮ ದೃಢ ನಿರ್ಧಾರದ ದ್ಯೋತಕವಾಗಿದೆ. ಇಂದು ಈ ಬೃಹತ್ ಯೋಜನೆಗಾಗಿ ತಮ್ಮ ಜೀವವನ್ನು ಒತ್ತೆಯಾಗಿ ಇಟ್ಟು ದುಡಿದ ಕಠಿಣ ದುಡಿಮೆಯ ಸೈನಿಕರು, ಇಂಜಿನಿಯರುಗಳು, ಎಲ್ಲಾ ಕಾರ್ಮಿಕ ಸಹೋದರರು ಮತ್ತು ಸಹೋದರಿಯರನ್ನು ವಂದಿಸುತ್ತೇನೆ.

ಸ್ನೇಹಿತರೇ,

ಅಟಲ್ ಸುರಂಗ ಹಿಮಾಚಲ ಪ್ರದೇಶ ಮತ್ತು ಹೊಸ ಕೇಂದ್ರಾಡಳಿತ ಪ್ರದೇಶ ಲೇಹ್ –ಲಡಾಖ್ ಗಳ ಬಹುಭಾಗಕ್ಕೆ ಜೀವನ ರೇಖೆಯಾಗಲಿದೆ. ಈಗ ಹಿಮಾಚಲ ಪ್ರದೇಶದ ವಿಸ್ತಾರವಾದ ಪ್ರದೇಶ ಮತ್ತು ಲೇಹ್ –ಲಡಾಖಿನ ಪ್ರದೇಶ ದೇಶದ ಇತರ ಭಾಗಗಳ ಜೊತೆ ನಿರಂತರ ಸಂಪರ್ಕ ಹೊಂದಿರುತ್ತದೆ. ಹಾಗು ಅಭಿವೃದ್ಧಿಯ ಪಥದಲ್ಲಿ ವೇಗದಿಂದ ಮುನ್ನಡೆಯಲಿದೆ.

ಈ ಸುರಂಗದಿಂದಾಗಿ ಮನಾಲಿ ಮತ್ತು ಕೇಲಾಂಗ್ ನಡುವಣ ದೂರ 3-4 ಗಂಟೆ ಕಡಿಮೆಯಾಗಲಿದೆ. ಈ ಗುಡ್ಡಗಾಡಿನ ನನ್ನ ಸಹೋದರ ಮತ್ತು ಸಹೋದರಿಯರಿಗೆ ಗುಡ್ಡ ಗಾಡಿನ ಪ್ರದೇಶಗಳಲ್ಲಿ ಪ್ರಯಾಣ ದೂರ 3-4 ಗಂಟೆ ಕಡಿಮೆಯಾಗುವುದೆಂದರೆ ಅದರ ಪ್ರಯೋಜನ ಏನೆಂಬುದು ಚೆನ್ನಾಗಿ ತಿಳಿದಿದೆ !.

ಸ್ನೇಹಿತರೇ,

ರೈತರು, ತೋಟಗಾರರು ಮತ್ತು ಲೇಹ್ , ಲಡಾಕಿನ ಯುವ ಜನತೆಗೆ ಈಗ ರಾಜಧಾನಿ ದಿಲ್ಲಿ ಮತ್ತು ಇತರ ಮಾರುಕಟ್ಟೆಗಳನ್ನು ತಲುಪಲು ಸುಲಭ ಸಾಧ್ಯವಾಗಲಿದೆ. ಅವರ ಸಂಭಾವ್ಯ ಅಪಾಯದ ಪ್ರಮಾಣ ಕೂಡಾ ಕಡಿಮೆಯಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಪವಿತ್ರ ಭೂಮಿ ಹಿಮಾಚಲ ಮತ್ತು ಬುದ್ಧ ಪರಂಪರೆಯ ನಡುವಣ ಸಂಪರ್ಕ ಈ ಸುರಂಗದಿಂದ ಇನ್ನಷ್ಟು ಬಲಯುತವಾಗಿದೆ. ಭಾರತದಿಂದ ಹೊರಟ ಹೊಸ ಪಥ ಮತ್ತು ಹೊಸ ಬೆಳಕನ್ನು ಇದು ದರ್ಶಿಸಲಿದೆ. ಹಿಮಾಚಲ ಮತ್ತು ಲೇಹ್, ಲಡಾಖ್ ಗಳ ಸ್ನೇಹಿತರಿಗೆ ಇದಕ್ಕಾಗಿ ಹೃದಯ ಪೂರ್ವಕ ಶುಭಾಶಯಗಳು.

ಸ್ನೇಹಿತರೇ,

ಅಟಲ್ ಸುರಂಗವು ಭಾರತದ ಗಡಿ ಮೂಲಸೌಕರ್ಯಕ್ಕೆ ಹೊಸ ಚೈತನ್ಯ ನೀಡಲಿದೆ. ವಿಶ್ವ ದರ್ಜೆಯ ಗಡಿ ಸಂಪರ್ಕಕ್ಕೆ ಇದು ಜೀವಂತ ಸಾಕ್ಷಿಯಾಗಲಿದೆ. ಹಿಮಾಲಯದ ಭಾಗವಾಗಿರಲಿ, ಪಶ್ಚಿಮ ಭಾರತದ ಮರುಭೂಮಿ ಪ್ರದೇಶವಾಗಿರಲಿ, ಅಥವಾ ದಕ್ಷಿಣ ಮತ್ತು ಪೂರ್ವ ಭಾರತದ ಕರಾವಳಿ ಪ್ರದೇಶವಾಗಿರಲಿ ಇದು ದೇಶದ ಭದ್ರತೆ ಮತ್ತು ಸಮೃದ್ಧತೆಗೆ ಬಹಳ ದೊಡ್ಡ ಸಂಪನ್ಮೂಲ. ಈ ಪ್ರದೇಶಗಳ ಸಂಪೂರ್ಣ ಮತ್ತು ಸಮತೋಲನದ ಅಭಿವೃದ್ಧಿಗೆ ಮೂಲಸೌಕರ್ಯಗಳನ್ನು ಅಭಿವೃದ್ಧಿ ಮಾಡಬೇಕು ಎಂಬ ಬೇಡಿಕೆ ಸದಾ ಇತ್ತು. ಆದರೆ ಬಹಳ ಧೀರ್ಘ ಕಾಲದಿಂದ ಇಲ್ಲಿಯ ಗಡಿಯನ್ನು ಸಂಪರ್ಕಿಸುವ ಮೂಲಸೌಕರ್ಯ ಯೋಜನೆಗಳು ಒಂದೋ ಯೋಜನಾ ಹಂತವನ್ನು ದಾಟಿ ಹೋಗಲಿಲ್ಲ ಇಲ್ಲವೇ ನೆನೆಗುದಿಗೆ ಬಿದ್ದು ಬಾಕಿಯಾದವು. ಅಟಲ್ ಸುರಂಗಕ್ಕೆ ಸಂಬಂಧಿಸಿಯೂ ಇಂತಹದೇ ಸ್ಥಿತಿ ಬಂದಿತ್ತು.

2002 ರಲ್ಲಿ ಅಟಲ್ ಜೀ ಅವರು ಈ ಸುರಂಗಕ್ಕೆ ಸಂಪರ್ಕ ರಸ್ತೆಗೆ ಶಿಲಾನ್ಯಾಸ ಮಾಡಿದ್ದರು. ಆಟಲ್ ಜೀ ಅವರ ಸರಕಾರ ಅಧಿಕಾರದಿಂದ ನಿರ್ಗಮಿಸಿದ ಬಳಿಕ ಈ ಕೆಲಸ ಸ್ಥಗಿತಗೊಂಡಿತು ಮತ್ತು ಮರೆತು ಹೋಯಿತು. 2013-14 ರ ವರೆಗೆ ಇಂತಹ ಸ್ಥಿತಿ ಇತ್ತು. ಬರೇ 1300 ಮೀಟರ್ ಸುರಂಗವನ್ನು ಅಂದರೆ 1.5 ಕಿಲೋ ಮೀಟರಿಗೂ ಕಡಿಮೆ ಉದ್ದದಷ್ಟು ಸುರಂಗ ನಿರ್ಮಾಣವಾಗಿತ್ತು.

ಇಂತಹ ವೇಗದಲ್ಲಿ ಅಟಲ್ ಸುರಂಗ ನಿರ್ಮಾಣ ಮುಂದುವರೆದರೆ , ಇದು 2040 ರ ವೇಳೆಗೆ ಪೂರ್ಣಗೊಳ್ಳಬಹುದು ಎಂದು ತಜ್ಞರು ಹೇಳಿದ್ದರು. ಸುಮ್ಮನೆ ಕಲ್ಪಿಸಿಕೊಳ್ಳಿ !. ನಿಮ್ಮ ಈಗಿನ ವಯಸ್ಸಿಗೆ ಇನ್ನೂ 20 ವರ್ಷ ಸೇರಿಸಿಕೊಳ್ಳಿ. ಮತ್ತು ಕನಸು ಆ ಸಮಯಕ್ಕೆ ನನಸಾಗುತ್ತಿತ್ತು !.

ಯಾರೇ ಆದರೂ ತ್ವರಿತಗತಿಯ ಬೆಳವಣಿಗೆಯ ಪಥದಲ್ಲಿ ಸಾಗಬೇಕಾದರೆ, ಆಗ ದೇಶದ ಜನತೆಯ ಅಬಿವೃದ್ಧಿಗಾಗಿ ಬಲವಾದ ಆಶಯ-ಆಕಾಂಕ್ಷೆ ಇರಬೇಕಾಗುತ್ತದೆ. ಆಗ ವೇಗ ಹೆಚ್ಚಬೇಕಾಗುತ್ತದೆ. ಹಾಗಾಗಿ ಅಟಲ್ ಸುರಂಗದ ಕೆಲಸಕ್ಕೆ 2014 ರ ಬಳಿಕ ವೇಗ ನೀಡಲಾಯಿತು. ಬಿ.ಆರ್.ಒ. ಎದುರಿಸುತ್ತಿದ್ದ ಪ್ರತಿಯೊಂದು ಅಡ್ಡಿ ಆತಂಕಗಳನ್ನು ನಿವಾರಿಸಲಾಯಿತು.

ಇದರ ಪರಿಣಾಮವಾಗಿ , ಒಂದಾನೊಂದು ಕಾಲದಲ್ಲಿ ವರ್ಷಕ್ಕೆ ಬರೇ 300 ಮೀಟರಿನಷ್ಟು ನಿರ್ಮಾಣ ಕಾರ್ಯ ನಡೆಯುತ್ತಿದ್ದುದನ್ನು ವರ್ಷಕ್ಕೆ 1400 ಮೀಟರಿಗೆ ಹೆಚ್ಚಿಸಲಾಯಿತು. ಬರೇ 6 ವರ್ಷಗಳಲ್ಲಿ ನಾವು 26 ವರ್ಷಗಳ ಕೆಲಸವನ್ನು ಪೂರ್ಣಗೊಳಿಸಿದೆವು !.

ಸ್ನೇಹಿತರೇ,

ಇಂತಹ ದೊಡ್ಡ ಮತ್ತು ನಿರ್ಣಾಯಕ ಮೂಲಸೌಕರ್ಯ ಯೋಜನೆಯೊಂದರ ನಿರ್ಮಾಣ ಕಾರ್ಯದಲ್ಲಿಯ ವಿಳಂಬ ಪ್ರತಿಯೊಂದು ರೀತಿಯಲ್ಲೂ ದೇಶಕ್ಕೆ ಬಹಳ ರೀತಿಯಲ್ಲಿ ಹಾನಿಯನ್ನುಂಟು ಮಾಡುತ್ತದೆ. ಜನತೆಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಳಂಬವಾಗುವುದು ಮಾತ್ರವಲ್ಲ ದೇಶಕ್ಕೆ ಕೂಡಾ ಆರ್ಥಿಕ ಮಟ್ಟದಲ್ಲಿ ಅದರಿಂದ ಹಾನಿಯುಂಟಾಗುತ್ತದೆ.

2005 ರಲ್ಲಿ ಮಾಡಲಾದ ಮೌಲ್ಯಮಾಪನದ ಪ್ರಕಾರ , ಈ ಸುರಂಗವು ಸುಮಾರು 950 ಕೋ.ರೂ. ವೆಚ್ಚದಲ್ಲಿ ಸಿದ್ದಗೊಳ್ಳಬೇಕಿತ್ತು. ಆದರೆ ನಿರಂತರ ವಿಳಂಬದಿಂದ ಇಂದು ಇದು ಮೂರು ಪಟ್ಟು ಅಧಿಕ ವೆಚ್ಚದಲ್ಲಿ ಪೂರ್ಣಗೊಂಡಿದೆ, ಅಂದರೆ ಖರ್ಚು 3,200 ಕೋ. ರೂ. ಗಳಿಗೂ ಅಧಿಕ. ಈ ಯೋಜನೆ ಇನ್ನೂ 20 ವರ್ಷ ತೆಗೆದುಕೊಳ್ಳುತ್ತಿದ್ದರೆ ಏನಾಗುತ್ತಿತ್ತು ಎಂಬುದನ್ನು ಕಲ್ಪಿಸಿಕೊಳ್ಳಿ. !

ಸ್ನೇಹಿತರೇ,

ದೇಶದ ಅಭಿವೃದ್ಧಿಯಲ್ಲಿ ಸಂಪರ್ಕವು ನೇರ ಸಂಬಂಧ ಹೊಂದಿರುತ್ತದೆ. ಹೆಚ್ಚು ಸಂಪರ್ಕ ಲಭ್ಯವಿದ್ದಲ್ಲಿ ತ್ವರಿತಗತಿಯ ಅಬಿವೃದ್ಧಿ ಆಗುತ್ತದೆ. ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಸಂಪರ್ಕ ಎಂಬುದು ದೇಶದ ಭದ್ರತಾ ಆವಶ್ಯಕತೆಗಳಿಗೆ ನೇರ ಸಂಬಂಧ ಹೊಂದಿರುತ್ತದೆ. ಆದರೆ ಈ ನಿಟ್ಟಿನಲ್ಲಿ ಅವಶ್ಯವಾದ ರಾಜಕೀಯ ಇಚ್ಛಾಶಕ್ತಿ ಮತ್ತು ಆ ಕುರಿತ ಗಂಭೀರ ದೃಷ್ಟಿ ದುರದೃಷ್ಟವಶಾತ್ ಕಂಡುಬರಲಿಲ್ಲ.

ಅಟಲ್ ಸುರಂಗದಂತೆಯೇ ಹಲವು ಇತರ ಮಹತ್ವದ ಯೋಜನೆಗಳಿಗೂ ಇಂತಹ ಸ್ಥಿತಿ ಬಂದಿತ್ತು. ವ್ಯೂಹಾತ್ಮಕವಾಗಿ ಪ್ರಮುಖವಾದ ಲಡಾಖಿನ ವಾಯು ನೆಲೆ ಅಂದರೆ ದೌಲತ್ ಬೇಗ್ ಓಲ್ಡಿ ಕಳೆದ 40-50 ವರ್ಷಗಳಿಂದ ಮುಚ್ಚಲ್ಪಟ್ಟಿದೆ. ಇದಕ್ಕೆ ಅನಿವಾರ್ಯತೆ ಏನಿತ್ತು, ಒತ್ತಡ ಏನಿತ್ತು ಎಂಬುದರ ವಿವರಕ್ಕೆ ನಾನು ಹೋಗುವುದಿಲ್ಲ. ಅದರ ಬಗ್ಗೆ ಬಹಳಷ್ಟು ಹೇಳಲಾಗಿದೆ ಮತ್ತು ಬರೆಯಲಾಗಿದೆ. ಆದರೆ ಸತ್ಯ ಏನೆಂದರೆ ದೌಲತ್ ಬೇಗ್ ಓಲ್ಡಿ ವಾಯು ನೆಲೆಯನ್ನು ವಾಯು ಪಡೆಯ ಪ್ರಯತ್ನದ ಫಲವಾಗಿ ಪುನರಾರಂಭಿಸಲಾಗಿದೆಯೇ ಹೊರತು ಯಾವುದೇ ರಾಜಕೀಯ ಇಚ್ಛಾಶಕ್ತಿಯಿಂದಲ್ಲ.

ಸ್ನೇಹಿತರೇ,

ವ್ಯೂಹಾತ್ಮಕವಾಗಿ ಪ್ರಮುಖವಾದ ಮತ್ತು ಸೌಕರ್ಯಗಳ ದೃಷ್ಟಿಯಿಂದ ಮಹತ್ವದ್ದಾದ , ಆದರೆ ಹಲವಾರು ವರ್ಷಗಳ ಕಾಲ ನಿರ್ಲಕ್ಷಿಸಲ್ಪಟ್ಟ ಡಜನ್ನಿನಷ್ಟು ಯೋಜನೆಗಳನ್ನು ನಾನು ಲೆಕ್ಕ ಮಾಡಬಲ್ಲೆ.

ನನಗೆ ನೆನಪಿದೆ. ಎರಡು ವರ್ಷಗಳ ಹಿಂದೆ ನಾನು ಅಟಲ್ ಜೀ ಅವರ ಜನ್ಮದಿನದಂಗವಾಗಿ ಅಸ್ಸಾಂನಲ್ಲಿದ್ದೆ. ಆಗ ನನಗೆ ಭಾರತದ ಅತ್ಯಂತ ಉದ್ದದ ರೈಲ್ ರಸ್ತೆ ಸೇತುವೆಯಾದ ’ಬೋಗಿಬೀಲ್ ಸೇತುವೆ’ಯನ್ನು ಲೋಕಾರ್ಪಣೆ ಮಾಡುವ ಅವಕಾಶ ಲಭಿಸಿತ್ತು. ಇಂದು ಇದು ಈಶಾನ್ಯ ಮತ್ತು ಅರುಣಾಚಲ ಪ್ರದೇಶದ ನಡುವಿನ ಸಂಪರ್ಕದ ಪ್ರಮುಖ ಮಾಧ್ಯಮವಾಗಿದೆ. ಬೋಗಿಬೀಲ್ ಸೇತುವೆಯ ಕೆಲಸ ಅಟಲ್ ಜೀ ಅವರ ಆಡಳಿತದ ಅವಧಿಯಲ್ಲಿ ಆರಂಭವಾಗಿತ್ತು. ಆದರೆ ಅವರ ಸರಕಾರ ಅಧಿಕಾರದಿಂದ ನಿರ್ಗಮಿಸಿದ ಬಳಿಕ ಈ ಸೇತುವೆಯ ಕೆಲಸ ನಿಧಾನಗತಿಗೆ ಸರಿದಿತ್ತು. ಆದರೆ 2014 ರ ಬಳಿಕ ಇದರ ಕಾಮಗಾರಿಗೆ ವೇಗ ದೊರೆಯಿತು ಮತ್ತು ನಾಲ್ಕು ವರ್ಷಗಳಲ್ಲಿ ಈ ಸೇತುವೆ ಪೂರ್ಣಗೊಂಡಿತು.

ಅಟಲ್ ಜೀ ಅವರ ಹೆಸರಿನೊಂದಿಗೆ ಗುರುತಿಸಲ್ಪಟ್ಟಿರುವ ಇನ್ನೊಂದು ಸೇತುವೆ ಎಂದರೆ ಕೋಶಿ ಮಹಾಸೇತು. ಬಿಹಾರದ ಮಿಥಿಲಾಂಚಲದ ಎರಡು ಭಾಗಗಳನ್ನು ಜೋಡಿಸುವ ಕೋಶಿ ಮಹಾಸೇತುವಿಗೆ ಅಟಲ್ ಜಿ ಶಿಲಾನ್ಯಾಸ ಮಾಡಿದ್ದರು. ಆದರೆ ಈ ಕೆಲಸ ಕೂಡಾ ನೆನೆಗುದಿಗೆ ಬಿದ್ದಿತ್ತು. .

ನಾವು ಕೋಶಿ ಮಹಾಸೇತು ಕಾಮಗಾರಿಯನ್ನು 2014 ರಲ್ಲಿ ನಮ್ಮ ಸರಕಾರ ರಚನೆಗೊಂಡ ತರುವಾಯ ತ್ವರಿತಗೊಳಿಸಿದೆವು. ಕೆಲವು ದಿನಗಳ ಹಿಂದೆ ಕೋಶಿ ಮಹಾಸೇತುವನ್ನು ಕಾರ್ಯಾರಂಭ ಮಾಡಲಾಯಿತು.

ಸ್ನೇಹಿತರೇ,

ದೇಶದ ಬಹುತೇಕ ಪ್ರತಿಯೊಂದು ಭಾಗದಲ್ಲಿ ಸಂಪರ್ಕಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಗಳ ಸ್ಥಿತಿ ಇದಾಗಿತ್ತು. ಆದರೆ ಈಗ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದೆ. ಕಳೆದ 6 ವರ್ಷಗಳಲ್ಲಿ ಅಭೂತಪೂರ್ವ ಪ್ರಯತ್ನಗಳನ್ನು ಈ ನಿಟ್ಟಿನಲ್ಲಿ ಮಾಡಲಾಗಿದೆ, ಅದರಲ್ಲೂ ವಿಶೇಷವಾಗಿ ಗಡಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೆಚ್ಚು ಪ್ರಯತ್ನಗಳಾಗಿವೆ.

ಹಿಮಾಲಯನ್ ವಲಯದಲ್ಲಿ ಅದು ಹಿಮಾಚಲ , ಜಮ್ಮು ಮತ್ತು ಕಾಶ್ಮೀರ, ಕಾರ್ಗಿಲ್-ಲೇಹ್-ಲಡಾಖ್ , ಉತ್ತರಾಖಂಡ, ಸಿಕ್ಕಿಂ, ಅರುಣಾಚಲ ಪ್ರದೇಶ-ಅಥವಾ ಈ ಯಾವುದೇ ಪ್ರದೇಶಗಳಿರಲಿ ಡಜನ್ನಿನಷ್ಟು ಯೋಜನೆಗಳು ಪೂರ್ಣಗೊಂಡಿವೆ ಮತ್ತು ಹಲವು ಯೋಜನೆಗಳು ಪ್ರಗತಿಯಲ್ಲಿವೆ. ರಸ್ತೆ ನಿರ್ಮಾಣವಿರಲಿ, ಸೇತುವೆ ಅಥವಾ ಸುರಂಗ ನಿರ್ಮಾಣ ಇರಲಿ, ಇಷ್ಟು ದೊಡ್ಡ ಮಟ್ಟದಲ್ಲಿ ದೇಶದ ಈ ಭಾಗಗಳಲ್ಲಿ ಕಾಮಗಾರಿ ಹಿಂದೆಂದೂ ನಡೆದಿರಲಿಲ್ಲ.

ಇದರ ಜೊತೆಗೆ , ನಮ್ಮ ಸೈನಿಕರಿಗೆ ಇದರಿಂದ ಬಹಳ ಲಾಭವಾಗಲಿದೆ. ಇಲ್ಲಿ ರಸ್ತೆ ಜಾಲವನ್ನು ಯಾವ ರೀತಿ ರೂಪಿಸಲಾಗುತ್ತಿದೆ ಎಂದರೆ ಚಳಿಗಾಲದಲ್ಲಿ ಅವರಿಗೆ ಸರಕು, ರಕ್ಷಣಾ ಸಲಕರಣೆಗಳನ್ನು ಸುಲಭವಾಗಿ ಪಡೆಯಬಹುದಾಗಿದೆ ಮತ್ತು ಇದರಿಂದ ಗಸ್ತು ಕಾರ್ಯವೂ ಸುಲಭವಾಗುತ್ತದೆ.

ಸ್ನೇಹಿತರೇ

ದೇಶದ ರಕ್ಷಣಾ ಅವಶ್ಯಕತೆಗಳು ; ದೇಶವನ್ನು ರಕ್ಷಿಸುವವರ ಅವಶ್ಯಕತೆಗಳು ಮತ್ತು ಹಿತಾಸಕ್ತಿಗಳು , ನಮ್ಮ ಸರಕಾರದ ಗರಿಷ್ಟ ಆದ್ಯತೆಗಳಾಗಿವೆ.

ಹಿಮಾಚಲ ಪ್ರದೇಶದ ನಮ್ಮ ಸಹೋದರರು ಮತ್ತು ಸಹೋದರಿಯರಿಗೆ ಹಿಂದಿನ ಸರಕಾರಗಳು ಒಂದು ಹುದ್ದೆ ಒಂದು ನಿವೃತ್ತಿ ವೇತನವನ್ನು ಹೇಗೆ ಪರಿಗಣಿಸಿದರು ಎಂಬುದು ಈಗಲೂ ನೆನಪಿದೆ. ನಾಲ್ಕು ದಶಕಗಳ ಕಾಲ ನಮ್ಮ ನಿವೃತ್ತ ಸೈನಿಕರಿಗೆ ಬರೇ ಭರವಸೆಗಳನ್ನಷ್ಟೇ ನೀಡಲಾಯಿತು. 500 ಕೋ.ರೂ. ಗಳನ್ನು ಕಾಗದ ಪತ್ರಗಳಲ್ಲಷ್ಟೇ ತೋರಿಸಿಕೊಂಡು ಒಂದು ಹುದ್ದೆ , ಒಂದು ನಿವೃತ್ತಿ ವೇತನವನ್ನು ಜಾರಿಗೆ ತರುವುದಾಗಿ ಅವರು ಹೇಳಿಕೊಂಡು ಬಂದರು. ಆದರೆ ಅವರದನ್ನು ಜಾರಿಗೆ ತರಲೇ ಇಲ್ಲ. ಇಂದು ದೇಶದ ಲಕ್ಷಾಂತರ ನಿವೃತ್ತ ಸೈನಿಕರು ಒಂದು ಹುದ್ದೆ ಒಂದು ನಿವೃತ್ತಿ ವೇತನದ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಬಾಕಿ ವೇತನ ಎಂದು ನಿವೃತ್ತ ಸೈನಿಕರಿಗೆ ಸುಮಾರು 11 ಸಾವಿರ ಕೋ.ರೂ. ಗಳನ್ನು ಕೇಂದ್ರ ಸರಕಾರ ನೀಡಿದೆ.

ಹಿಮಾಚಲ ಪ್ರದೇಶದ ಸುಮಾರು 1 ಲಕ್ಷ ಸೇನಾ ಸಿಬ್ಬಂದಿಗಳು ಇದರ ಪ್ರಯೋಜನ ಪಡೆದಿದ್ದಾರೆ. ನಾವು ತೆಗೆದುಕೊಂಡ ನಿರ್ಧಾರಗಳನ್ನು ಜಾರಿಗೆ ತರುತ್ತೇವೆ ಎನ್ನುವುದಕ್ಕೆ ನಿದರ್ಶನವಾಗಿವೆ ನಮ್ಮ ಸರಕಾರದ ನಿರ್ಧಾರಗಳು. ದೇಶದ ಭದ್ರತೆ ಮತ್ತು ಕಲ್ಯಾಣಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಆದರೆ ದೇಶವು ಕಾಲಾನುಕ್ರಮದಲ್ಲಿ ಅದರ ರಕ್ಷಣಾ ಹಿತಾಸಕ್ತಿಗಳ ವಿಷಯದಲ್ಲಿ ರಾಜಿ ಮಾಡಿಕೊಂಡಿರುವುದನ್ನೂ ನೋಡಿದೆ. ದೇಶದ ವಾಯು ಪಡೆಯು ಆಧುನಿಕ ಯುದ್ದ ವಿಮಾನಗಳಿಗೆ ಬೇಡಿಕೆ ಸಲ್ಲಿಸುತ್ತಲೇ ಇತ್ತು. ಆದರೆ ಈ ಜನಗಳು ಕಡತಗಳ ಆಟದಲ್ಲಿ ನಿರತರಾಗಿದ್ದರು.

ಮದ್ದು ಗುಂಡುಗಳಿರಲಿ, ಆಧುನಿಕ ರೈಫಲ್ ಗಳಿರಲಿ, ಬುಲೆಟ್ ಪ್ರೂಫ್ ಜಾಕೆಟ್ ಗಳಿರಲಿ , ಕಠಿಣ ಚಳಿಗಾಲಕ್ಕೆ ಅವಶ್ಯವಾದ ಸಲಕರಣೆಗಳಿರಲಿ, ಪ್ರತಿಯೊಂದನ್ನೂ ಹಿಡಿದಿಡಲಾಗಿತ್ತು. ನಮ್ಮ ಶಸ್ತ್ರಾಸ್ತ್ರ ಕಾರ್ಖಾನೆಗಳ ಬಲ ಕುಂದಿದ ಕಾಲವೂ ಬಂದಿತ್ತು. ಆದರೆ ಅವುಗಳನ್ನು ಅವುಗಳ ಅದೃಷ್ಟಕ್ಕೆ ಬಿಡಲಾಗಿತ್ತು.

ವಿಶ್ವ ದರ್ಜೆಯ ಸಂಸ್ಥೆಯಾದ ಎಚ್.ಎ.ಎಲ್. ನ್ನು ಭಾರತೀಯ ಯುದ್ದ ವಿಮಾನಗಳ , ಹೆಲಿಕಾಪ್ಟರುಗಳ ತಯಾರಿಕೆಗಾಗಿ ಸ್ಥಾಪಿಸಲಾಗಿತ್ತು. ಆದರೆ ಅವುಗಳನ್ನು ಉತ್ತೇಜಿಸಲು ಸಾಕಷ್ಟು ಗಮನವನ್ನು ಕೊಡಲಿಲ್ಲ. ಅಧಿಕಾರದಲ್ಲಿದ್ದ ಸ್ವಾರ್ಥಿ ಜನರು ನಮ್ಮ ಮಿಲಿಟರಿ ಸಾಮರ್ಥ್ಯ ವೃದ್ಧಿಯಾಗುವುದಕ್ಕೆ ಅಡ್ಡಿಯಾದರು. ಮತ್ತು ಅದಕ್ಕೆ ಹಾನಿಯನ್ನು ಮಾಡಿದರು.

ಈ ಜನರು ತೇಜಸ್ ಯುದ್ದ ವಿಮಾನಗಳ ಚಿಂತನೆಯನ್ನೂ ಬದಿಗೆ ಸರಿಸಲು ಪ್ರಯತ್ನಿಸಿದರು. ಈ ವಿಮಾನಗಳು ಇಂದು ದೇಶದ ಹೆಮ್ಮೆಯಾಗಿವೆ. ಇದು ಈ ಜನಗಳ ನಿಜಾಂಶ.

ಸ್ನೇಹಿತರೇ,

ಈಗ ದೇಶದಲ್ಲಿ ಈ ಸ್ಥಿತಿ ಬದಲಾಗುತ್ತಿದೆ. ’ಮೇಕ್ ಇನ್ ಇಂಡಿಯಾ” ಅಡಿಯಲ್ಲಿ ದೇಶದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಮತ್ತು ಸಲಕರಣೆಗಳನ್ನು ಅಭಿವೃದ್ಧಿಪಡಿಸಲು ಪ್ರಮುಖ ಸುಧಾರಣೆಗಳನ್ನು ತರಲಾಗಿದೆ. ಧೀರ್ಘ ಕಾಲದ ಕಾಯುವಿಕೆ ಬಳಿಕ ಈಗ ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥರ ವ್ಯವಸ್ಥೆ ನಮ್ಮ ವ್ಯವಸ್ಥೆಯ ಭಾಗವಾಗಿದೆ.

ಇದರಿಂದ ದೇಶದ ಪಡೆಗಳಿಗೆ ಅವಶ್ಯವಾದ ಸಲಕರಣೆಗಳ ಖರೀದಿ ಮತ್ತು ಉತ್ಪಾದನೆಯಲ್ಲಿ ಉತ್ತಮ ಸಮನ್ವಯ ಸಾಧ್ಯವಾಗಲಿದೆ. ಈಗ ಅಲ್ಲಿ ಹಲವು ವಸ್ತುಗಳ ಆಮದನ್ನು ನಿಷೇಧಿಸಲಾಗಿದೆ. ಈ ಸರಕುಗಳನ್ನು ಅವಶ್ಯವಿದ್ದಲ್ಲಿ ಭಾರತೀಯ ಕಂಪೆನಿಗಳಿಂದಲೇ ಖರೀದಿಸಬೇಕಾಗುತ್ತದೆ.

ಸ್ನೇಹಿತರೇ,

ಭಾರತದ ರಕ್ಷಣಾ ಕೈಗಾರಿಕೆಗಳಲ್ಲ್ಲಿ ವಿದೇಶೀ ತಂತ್ರಜ್ಞಾನ ಮತ್ತು ವಿದೇಶೀ ಹೂಡಿಕೆಗಳ ಹರಿವನ್ನು ಖಾತ್ರಿಗೊಳಿಸಲು ವಿವಿಧ ಉತ್ತೇಜನಗಳನ್ನು ಭಾರತೀಯ ಸಂಸ್ಥೆಗಳಿಗೆ ನೀಡಲಾಗುತ್ತಿದೆ. ಭಾರತದ ಜಾಗತಿಕ ಪಾತ್ರ ಬದಲಾಗುತ್ತಿರುವುದರಿಂದ , ನಾವು ನಮ್ಮ ಮೂಲಸೌಕರ್ಯಗಳನ್ನು ಆರ್ಥಿಕ ಮತ್ತು ವ್ಯೂಹಾತ್ಮಕ ಸಾಮರ್ಥ್ಯ ಹೆಚ್ಚಿಸುವ ರೀತಿಯಲ್ಲಿ ನಿಭಾಯಿಸಬೇಕಾದ ಅಗತ್ಯವಿದೆ.

ಸ್ವಾವಲಂಬಿ ಭಾರತದ ಆತ್ಮವಿಶ್ವಾಸ ಇಂದು ಜನತೆಯ ಮನಸ್ಥಿತಿಯ ಭಾಗವಾಗಿದೆ. ಅಟಲ್ ಸುರಂಗ ಈ ಆತ್ಮವಿಶ್ವಾಸದ ಒಂದು ಸಂಕೇತ.

ಮತ್ತೊಮ್ಮೆ, ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ !. ಹಿಮಾಚಲ ಪ್ರದೇಶಕ್ಕೆ ಮತ್ತು ಲೇಹ್ –ಲಡಾಖಿನ ಲಕ್ಷಾಂತರ ಸ್ನೇಹಿತರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು !.

ಹಿಮಾಚಲ ಪ್ರದೇಶದ ಮೇಲೆ ನನಗೆಷ್ಟು ಅಧಿಕಾರ ಇದೆ ಎಂಬುದನ್ನು ನಾನು ಹೇಳಲಾರೆ, ಆದರೆ ಹಿಮಾಚಲಕ್ಕೆ ನನ್ನಿಂದ ಹೆಚ್ಚು ಕೇಳಲಿಕ್ಕಿದೆ. ಇಂದಿನ ಕಾರ್ಯಕ್ರಮದಲ್ಲಿ ಸಮಯ ಬಹಳ ಕಡಿಮೆ ಇದ್ದರೂ, ಹಿಮಾಚಲ ಪ್ರದೇಶದ ಬಗ್ಗೆ ಇರುವ ಪ್ರೀತಿ ನನ್ನ ಮೇಲೆ ಬಹಳ ಒತ್ತಡ ಹಾಕಿದೆ , ಮತ್ತು ಇಂದು ಮೂರು ಕಾರ್ಯಕ್ರಮಗಳು ಆಯೋಜನೆಯಾಗಿವೆ. ಇದರ ಬಳಿಕ ನಾನು ಬಹಳ ಅತ್ಯಲ್ಪ ಸಮಯದಲ್ಲಿ ನಾನು ಇನ್ನೆರಡು ಕಾರ್ಯಕ್ರಮಗಳಲ್ಲಿ ಮಾತನಾಡಬೇಕಿದೆ. ಆದುದರಿಂದ ನಾನಿಲ್ಲಿ ವಿವರವಾಗಿ ಮಾತನಾಡಲು ಹೋಗುವುದಿಲ್ಲ. ನಾನು ಇನ್ನೆರಡು ಕಾರ್ಯಕ್ರಮಗಳಿಗಾಗಿ ಕೆಲವಂಶಗಳನ್ನು ಉಳಿಸಿಕೊಳ್ಳುತ್ತೇನೆ.

ಆದರೆ, ನಾನು ಕೆಲವು ಸಲಹೆಗಳನ್ನು ಇಲ್ಲಿ ಕೊಡಲಿಚ್ಚಿಸುತ್ತೇನೆ. ನನ್ನ ಸಲಹೆಗಳು ಭಾರತ ಸರಕಾರದ ರಕ್ಷಣಾ ಸಚಿವಾಲಯಕ್ಕಾಗಿ ಮತ್ತು ಭಾರತ ಸರಕಾರದ ಶಿಕ್ಷಣ ಸಚಿವಾಲಯ ಹಾಗು ಬಿ.ಆರ್.ಒ ಗಳಿಗಾಗಿ. ಕೆಲಸದ ಸಂಸ್ಕೃತಿ ಮತ್ತು ಇಂಜಿನಿಯರಿಂಗಿಗೆ ಸಂಬಂಧಿಸಿ ಈ ಸುರಂಗ ವಿಶಿಷ್ಟವಾದುದಾಗಿದೆ. ಈ ಯೋಜನೆಯಲ್ಲಿ ಪಾಲ್ಗೊಂಡ ಸುಮಾರು 1000-1500 ಜನರು , ಕಾರ್ಮಿಕರಿಂದ ಹಿಡಿದು ಹಿರಿಯ ಅಧಿಕಾರಿಯವರೆಗೆ ಈ ಸುರಂಗದ ವಿನ್ಯಾಸದ ಆರಂಭದ ಹಂತದಿಂದ ಹಿಡಿದು ಇದುವರೆಗಿನ ತಮ್ಮ ತಮ್ಮ ಅನುಭವವನ್ನು ತಮ್ಮದೇ ಭಾಷೆಯಲ್ಲಿ ದಾಖಲಿಸುವಂತೆ ಕೇಳಬಹುದು. 1500 ಮಂದಿ ಇಡೀ ಪ್ರಯತ್ನಗಳ ಬಗ್ಗೆ ದಾಖಲಿಸಿದರೆ , ತಮ ಅನುಭವಗಳನ್ನು ಕ್ರೋಢೀಕರಿಸಿದರೆ ,ಕೆಲಸದ ಸಂದರ್ಭದಲ್ಲಿ ಎದುರಿಸಿದ ಸವಾಲುಗಳನ್ನು, ಏನಾಯಿತು ಎಂಬುದನ್ನು , ಅದು ಹೇಗಾಯಿತು , ಯಾವಾಗ ಆಯಿತು ಎಂಬುದನ್ನು ದಾಖಲಿಸಿದರೆ ಅಲ್ಲಿ ಮಾನವ ಸ್ಪರ್ಶ ಇರುತ್ತದೆ. ನಾನು ಅಕಾಡೆಮಿಕ್ ದಾಖಲೀಕರಣವನ್ನು ಕೇಳುತ್ತಿಲ್ಲ. ಇದು ಮಾನವ ಸ್ಪರ್ಶವಿರುವ ದಾಖಲೆಯಾಗಿರಲಿದೆ. ಬಹುಷಃ ನಿರ್ಮಾಣ ಕಾರ್ಮಿಕರು ಇಲ್ಲಿ ಸಕಾಲದಲ್ಲಿ ಆಹಾರ ಪೂರೈಕೆಯಾಗದೆಯೂ ಕೆಲಸ ಮಾಡಿರಬಹುದು. ಆ ಸಂದರ್ಭದಲ್ಲಿ ಆತ ಹೇಗೆ ಕೆಲಸ ಮಾಡಿರಬಹುದು !. ಇಂತಹ ಸಂಗತಿಗಳು ಬಹಳ ಮಹತ್ವದವು. ಕೆಲವೊಮ್ಮೆ ಕೆಲವು ಸಲಕರಣೆಗಳು ಹಿಮದಿಂದಾಗಿ ಬಂದಿಲ್ಲದೇ ಇರಬಹುದು, ಆಗ ಅವರು ಹೇಗೆ ಕೆಲಸ ಮಾಡಿರಬಹುದು.!.

ಬಹುಷಃ ಇಂಜಿನಿಯರ್ ಸವಾಲನ್ನು ಎದುರಿಸಿರಬೇಕು. ಪ್ರತೀ ಹಂತದಲ್ಲಿಯೂ ಕೆಲಸ ಮಾಡಿದ 1500 ಮಂದಿ ತಮ್ಮ ಅನುಭವವನ್ನು ಬರೆದು 5,6 ಅಥವಾ 10 ಪುಟಗಳಲ್ಲಿ ದಾಖಲಿಸಿಡಬೇಕು ಎಂಬುದಾಗಿ ನಾನು ಆಶಿಸುತೇನೆ. ಈ ಜವಾಬ್ದಾರಿಯನ್ನು ಒಬ್ಬರಿಗೆ ಕೊಡಿ, ಮತ್ತು ಭಾಷೆಯನ್ನು ಸಂಕಲಿಸಿದ ಬಳಿಕ ಇಡೀ ಸಂಗತಿಗಳನ್ನು ದಾಖಲಿಸಿಡಿ. ಅದನ್ನು ಅಚ್ಚು ಹಾಕಿಸಬೇಕಿಲ್ಲ. ನೀವದನ್ನು ಡಿಜಿಟಲ್ ಮಾದರಿಯಲ್ಲಿ ರೂಪಿಸಿ.

ಎರಡನೆಯದಾಗಿ , ನಾನು ಶಿಕ್ಷಣ ಸಚಿವಾಲಯಕ್ಕೆ ಮನವಿ ಮಾಡುವುದೇನೆಂದರೆ, ನಮ್ಮ ದೇಶದ ಎಲ್ಲಾ ತಾಂತ್ರಿಕ ಮತ್ತು ಇಂಜಿನಿಯರಿಂಗ್ ಸಂಬಂಧಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಪ್ರಕರಣಗಳ ಅಧ್ಯಯನವನ್ನು ನೀಡಬೇಕು. ಮತ್ತು ಪ್ರತೀ ವರ್ಷ ಪ್ರತೀ ವಿಶ್ವವಿದ್ಯಾಲಯಗಳಿಂದ ಎಂಟರಿಂದ ಹತ್ತು ವಿದ್ಯಾರ್ಥಿಗಳ ತಂಡ ಇಲ್ಲಿಗೆ ಬರಬೇಕು ಮತ್ತು ಈ ಯೋಜನೆಯ ರೂಪುರೇಖೆ, ಪ್ರಕ್ರಿಯೆ, ಸವಾಲುಗಳು ಮತ್ತು ಅವುಗಳನ್ನು ನಿಭಾಯಿಸಿದ ಪರಿಯನ್ನು ಅಧ್ಯಯನ ಮಾಡುವಂತಾಗಬೇಕು. ನಮ್ಮ ದೇಶದ ವಿದ್ಯಾರ್ಥಿಗಳಿಗೆ ವಿಶ್ವದ ಅತ್ಯಂತ ಎತ್ತರದ ಪ್ರದೇಶದಲ್ಲಿರುವ, ಅತ್ಯಂತ ಉದ್ದದ ಸುರಂಗದ ಇಂಜಿನಿಯರಿಂಗ್ ಜ್ಞಾನ ಲಭಿಸಬೇಕು.

ಎಲ್ಲಕ್ಕಿಂತ ಮಿಗಿಲಾಗಿ ನಾನು ಎಂ.ಇ.ಎ. ಯು ವಿಶ್ವದ ಇತರೆಡೆಯಿಂದ ಕೆಲವು ವಿಶ್ವವಿದ್ಯಾಲಯಗಳನ್ನು ಆಹ್ವಾನಿಸಬೇಕು ಎಂದು ಆಶಿಸುತ್ತೇನೆ. ವಿದೇಶಗಳ ವಿಶ್ವವಿದ್ಯಾಲಯಗಳು ಇಲ್ಲಿಗೆ ಬಂದು ಇದನ್ನೊಂದು ಪ್ರಕರಣ ಅಧ್ಯಯನ ನಡೆಸಬೇಕು ಮತ್ತು ಯೋಜನೆಯ ಅಧ್ಯಯನ ನಡೆಸಬೇಕು. ನಮ್ಮ ಶಕ್ತಿ ವಿಶ್ವದ ಪರಿಗಣನೆಗೆ ಬರಬೇಕು. ನಮ್ಮ ಬಲ ಏನೆಂಬುದು ವಿಶ್ವದ ಅರಿವಿಗೆ ಬರಬೇಕು. ನಮ್ಮ ಈ ತಲೆಮಾರಿನ ಜವಾನರು, ಯುವಕರು ನಿಯಮಿತ ಸಂಪನ್ಮೂಲಗಳಿದ್ದಾಗ್ಯೂ ಹೇಗೆ ಅದ್ಭುತವಾದುದನ್ನು ಸಾಧಿಸಬಲ್ಲರು ಎಂಬುದು ಜಗತ್ತಿಗ್ಗೆ ಗೊತ್ತಾಗಬೇಕು.

ಮತ್ತು ಆದುದರಿಂದ ರಕ್ಷಣಾ ಸಚಿವಾಲಯ, ಶಿಕ್ಷಣ ಸಚಿವಾಲಯ, ಎಂ.ಇ.ಎ. ಮತ್ತು ಬಿ.ಆರ್.ಒ. ಗಳು ಒಗ್ಗೂಡಿ ಈ ಸುರಂಗವನ್ನು ನಿರಂತರವಾಗಿ ಶಿಕ್ಷಣದ ಭಾಗವಾಗಿಸಬೇಕು ಎಂದು ನಾನು ಆಶಿಸುತ್ತೇನೆ. ಇಡೀ ಹೊಸ ತಲೆಮಾರು ಇದರ ಜೊತೆ ಸಿದ್ದವಾದರೆ ಸುರಂಗ ಮೂಲಸೌಕರ್ಯವನ್ನು ನಿರ್ಮಾಣ ಮಾಡಬಹುದು. ಇದೇ ವೇಳೆ, ಮಾನವ ಸಂಪನ್ಮೂಲ ಅಭಿವೃದ್ಧಿ ಕೂಡಾ ಇಂದು ದೊಡ್ಡ ಕೆಲಸ . ಈ ಸುರಂಗವನ್ನು ಉತ್ತಮ ಇಂಜಿನಿಯರುಗಳನ್ನು ನಿರ್ಮಾಣ ಮಾಡುವುದಕ್ಕೆ ಕೂಡಾ ಬಳಸಬಹುದು ಮತ್ತು ನಾವೀ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕು.

ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ನಿಮ್ಮೆಲ್ಲರಿಗೂ ಬಹಳ ಧನ್ಯವಾದಗಳು !. ಈ ಕೆಲಸವನ್ನು ಅತ್ಯುತ್ತಮವಾಗಿ ಮಾಡಿದ, ಮತ್ತು ದೇಶಕ್ಕೆ ಕೀರ್ತಿಯನ್ನು ತಂದುಕೊಟ್ಟ ಯುವಕರಿಗೂ (ಜವಾನ್ ) ನನ್ನ ಅಭಿನಂದನೆಗಳು.

ಬಹಳ ಬಹಳ ಧನ್ಯವಾದಗಳು.!!!.

****

 


(Release ID: 1662667) Visitor Counter : 210