ಪ್ರಧಾನ ಮಂತ್ರಿಯವರ ಕಛೇರಿ

ಫಿಟ್ ಇಂಡಿಯಾ ಆಂದೋಲನದ ಪ್ರಥಮ ವಾರ್ಷಿಕೋತ್ಸವದಂದು ಫಿಟ್ ಇಂಡಿಯಾ ಚರ್ಚೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 24 SEP 2020 3:23PM by PIB Bengaluru

ದೇಶಕ್ಕೆ ಪ್ರೇರೇಪಣೆ ನೀಡುತ್ತಿರುವ ಏಳು ಶ್ರೇಷ್ಟ ವ್ಯಕ್ತಿತ್ವಗಳಿಗೆ, ತಮ್ಮ ಸಮಯವನ್ನು ವಿನಿಯೋಗಿಸಿ ದೈಹಿಕ ಕ್ಷಮತೆಯ ಬಗಿಗಿನ ವಿವಿಧ ಅಂಶಗಳ ಬಗ್ಗೆ ವೈಯಕ್ತಿಕ ಅನುಭವವನ್ನು ಹಂಚಿಕೊಂಡವರಿಗೆ ನಾನು ಹೃದಯ ತುಂಬಿದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಇದು ಪ್ರತೀ ತಲೆಮಾರಿಗೂ ಪ್ರಯೋಜನಕಾರಿಯಾಗಲಿದೆ ಎಂದು ನಾನು ನಂಬಿದ್ದೇನೆ.ಇಂದಿನ ಸಮಾಲೋಚನೆ, ಚರ್ಚೆ ಪ್ರತೀ ವಯೋಮಾನದ ಗುಂಪಿಗೂ ಮತ್ತು ಬದುಕಿನ ಎಲ್ಲಾ ವರ್ಗದ ಜನತೆಗೂ ಬಹಳಷ್ಟು ಪ್ರಯೋಜನಕಾರಿ. ಫಿಟ್ ಇಂಡಿಯಾ ಆಂದೋಲನದ ಮೊದಲ ವಾರ್ಷಿಕೋತ್ಸವದಂದು , ನನ್ನೆಲ್ಲಾ ದೇಶವಾಸಿಗಳಿಗೆ ನಾನು ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ.

ವರ್ಷದೊಳಗೆ ಈ ಫಿಟ್ ಇಂಡಿಯಾ ಆಂದೋಲನವು “ಜನತೆಯ ಆಂದೋಲನ” ಮತ್ತು “ಧನಾತ್ಮಕ ಆಂದೋಲನ” ವಾಗಿ ಪರಿವರ್ತನೆಗೊಂಡಿದೆ. ಆರೋಗ್ಯ ಮತ್ತು ದೈಹಿಕ ಕ್ಷಮತೆಯ ಜಾಗೃತಿ ಮತ್ತು ಉತ್ಸಾಹವು ದೇಶಾದ್ಯಂತ ವಿಸ್ತರಿಸುತ್ತಿದೆ. ಯೋಗ, ಆಸನ, ವ್ಯಾಯಾಮ, ನಡಿಗೆ, ಓಟ, ಈಜು, ಆರೋಗ್ಯಪೂರ್ಣ ಆಹಾರಾಭ್ಯಾಸಗಳು, ಆರೋಗ್ಯಪೂರ್ಣ ಜೀವನ ವಿಧಾನಗಳು ನಮ್ಮ ಸಹಜ ಪ್ರಜ್ಞಾವಸ್ಥೆಯ ಭಾಗವಾಗುತ್ತಿವೆ.

ಸ್ನೇಹಿತರೇ,

ಆರು ತಿಂಗಳ ಕಾಲ ನಾವು ವಿವಿಧ ರೀತಿಯ ನಿರ್ಬಂಧಗಳ ನಡುವೆ ಬದುಕಬೇಕಾದ ಸಮಯದಲ್ಲಿ ಫಿಟ್ ಇಂಡಿಯಾ ಆಂದೋಲನ ತನ್ನ ಒಂದು ವರ್ಷವನ್ನು ಪೂರೈಸುತ್ತಿದೆ. ಆದರೆ ಫಿಟ್ ಇಂಡಿಯಾ ಆಂದೋಲನವು ಅದರ ಪ್ರಸ್ತುತತೆಯನ್ನು ಸಾಬೀತು ಮಾಡಿದೆ ಮತ್ತು ಈ ಕೊರೋನಾ ಅವಧಿಯಲ್ಲಿಯೂ ಅದರ ಪ್ರಭಾವವನ್ನು ತೋರಿಸಿದೆ. ವಾಸ್ತವವಾಗಿ ಕೆಲವು ಜನರು ನಂಬುವಂತೆ ದೈಹಿಕ ಕ್ಷಮತೆಯನ್ನು ಹೊಂದುವುದು ಬಹಳ ಕಷ್ಟದ ಕೆಲಸ ಅಲ್ಲ ! ಕೆಲವು ನಿಯಮಗಳನ್ನು ಅನುಸರಿಸುವ ಮತ್ತು ಸ್ವಲ್ಪ ಕಠಿಣ ದುಡಿಮೆ ಮಾಡುವ ಮೂಲಕ ನೀವು ಸದಾ ಆರೋಗ್ಯಯುತರಾಗಿರಬಹುದು. ಪ್ರತಿಯೊಬ್ಬರ ಆರೋಗ್ಯ ಮತ್ತು ಸಂತೋಷವು 'फिटनेस की डोज़, आधा घंटा रोज' (ಫಿಟ್ನೆಸ್ ಡೋಸ್, ಪ್ರತೀ ದಿನ ಅರ್ಧ ಗಂಟೆಯ ಕೆಲಸ) ಎಂಬ ಮಂತ್ರದ ಹಿಂದೆ ಅಡಗಿದೆ. ಯೋಗ ಇರಲಿ, ಬ್ಯಾಡ್ಮಿಂಟನ್; ಟೆನ್ನಿಸ್; ಅಥವಾ ಫುಟ್ಬಾಲ್; ಕರಾಟೆ ಅಥವಾ ಕಬಡ್ಡಿ ಅಥವಾ ನೀವೇನು ಇಚ್ಚಿಸುತ್ತೀರೋ ಅದನ್ನು ದಿನನಿತ್ಯ ಕನಿಷ್ಟ 30 ನಿಮಿಷ ಕಾಲ ಮಾಡಿ. ನಾವು ಈಗಷ್ಟೇ ಯುವ ಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯಗಳು ಜಂಟಿಯಾಗಿ ಹೊರಡಿಸಿರುವ ದೈಹಿಕ ಕ್ಷಮತೆಯ ಶಿಷ್ಟಾಚಾರವನ್ನು ನೋಡಿದ್ದೇವೆ.

ಸ್ನೇಹಿತರೇ,

ಇಂದು ವಿಶ್ವದಾದ್ಯಂತ ದೈಹಿಕ ಕ್ಷಮತೆಯ ಬಗ್ಗೆ ಜಾಗೃತಿ ಇದೆ. ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯು. ಎಚ್.ಒ.) ಆಹಾರ, ದೈಹಿಕ ಕಾರ್ಯಚಟುವಟಿಕೆ ಮತ್ತು ಆರೋಗ್ಯದ ಬಗ್ಗೆ ಜಾಗತಿಕ ವ್ಯೂಹವನ್ನು ರೂಪಿಸಿದೆ. ದೈಹಿಕ ಕಾರ್ಯಚಟುವಟಿಕೆಗಳ ಬಗ್ಗೆ ಜಾಗತಿಕ ಶಿಫಾರಸುಗಳನ್ನು ಕೂಡಾ ಹೊರಡಿಸಲಾಗಿದೆ. ಇಂದು ಜಗತ್ತಿನ ಹಲವಾರು ದೇಶಗಳು ದೈಹಿಕ ಕ್ಷಮತೆಯ ಬಗ್ಗೆ ಹೊಸ ಗುರಿಗಳನ್ನು ನಿಗದಿ ಮಾಡಿವೆ ಮತ್ತು ಅವುಗಳು ಹಲವು ಆಯಾಮಗಳಲ್ಲಿ ತೊಡಗಿಕೊಂಡು ವಿವಿಧ ರೀತಿಯ ಕಾರ್ಯಚಟುವಟಿಕೆಗಳಲ್ಲಿ ನಿರತವಾಗಿವೆ. ಆಸ್ಟ್ರೇಲಿಯಾ, ಜರ್ಮನಿ, ಯು.ಕೆ. , ಯು.ಎಸ್.ಎ. ಗಳಂತಹ ದೇಶಗಳಲ್ಲಿ ವ್ಯಾಪಕವಾದ ದೈಹಿಕ ಕ್ಷಮತೆ ಆಂದೋಲನ ನಡೆಯುತ್ತಿದೆ. ಅಲ್ಲಿಯ ಹೆಚ್ಚು ಹೆಚ್ಚು ನಾಗರಿಕರು ದೈಹಿಕ ವ್ಯಾಯಾಮದ ದಿನಚರಿಯಲ್ಲಿ ಸೇರುತ್ತಿದ್ದಾರೆ.

ಸ್ನೇಹಿತರೇ , ನಮ್ಮ ಆಯುರ್ವೇದದಲ್ಲಿ ಇದನ್ನು ಹೇಳಲಾಗಿದೆ-

सर्व प्राणि भृताम् नित्यम्

आयुः युक्तिम् अपेक्षते।

दैवे पुरुषा कारे

स्थितम् हि अस्य बला बलम्॥

ಅಂದರೆ, ಕಠಿಣ ದುಡಿಮೆ , ಯಶಸ್ಸು, ಅದೃಷ್ಟ, ವಿಶ್ವದಲ್ಲಿಯ ಪ್ರತಿಯೊಂದೂ ಆರೋಗ್ಯವನ್ನು ಅವಲಂಬಿಸಿದೆ. ಆರೋಗ್ಯ ಇದ್ದಲ್ಲಿ , ಅದೃಷ್ಟ ಇರುತ್ತದೆ ಮತ್ತು ಯಶಸ್ಸು ಇರುತ್ತದೆ. ನಾವು ದಿನ ನಿತ್ಯ ವ್ಯಾಯಾಮ ಮಾಡುತ್ತಿದ್ದರೆ ಮತ್ತು ನಮ್ಮ ದೈಹಿಕ ಕ್ಷಮತೆಯನ್ನು ಕಾಪಾಡಿಕೊಂಡಿದ್ದರೆ ಮತ್ತು ಬಲಿಷ್ಟರಾಗಿದ್ದರೆ, ಅದರೊಳಗೋಂದು ಭಾವನೆ ಉದಿಸುತ್ತದೆ, ಅದೆಂದರೆ- ಹೌದು ನಮ್ಮನ್ನು ನಾವು ರೂಪಿಸಿಕೊಳ್ಳಬೇಕು ಎಂದು; ಇದರಿಂದ ಆತ್ಮವಿಶ್ವಾಸವೂ ಬೆಳೆಯುತ್ತದೆ. ವ್ಯಕ್ತಿಯ ಈ ಆತ್ಮ ವಿಶ್ವಾಸ ಆ ವ್ಯಕ್ತಿಗೆ ಜೀವನದ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸನ್ನು ಗಳಿಸಲು ಸಹಾಯ ಮಾಡುತ್ತದೆ. ಇದು ಕುಟುಂಬಕ್ಕೂ ಅನ್ವಯಿಸುತ್ತದೆ, ಸಮಾಜಕ್ಕೂ ಮತ್ತು ದೇಶಕ್ಕೂ ಅನ್ವಯಿಸುತ್ತದೆ. ಒಟ್ಟಾಗಿ ಆಟ ಆಡುವ ಕುಟುಂಬ , ಸದಾ ಒಟ್ಟಾಗಿ ದೈಹಿಕ ಕ್ಷಮತೆಯನ್ನು ಹೊಂದಿರುತ್ತದೆ.

ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ಹಲವಾರು ಕುಟುಂಬಗಳು ಈ ಪ್ರಯೋಗವನ್ನು ಅನುಸರಿಸಿವೆ. ಅವರು ಒಟ್ಟಾಗಿ ಆಡಿದ್ದಾರೆ. ಯೋಗ ಮಾಡಿದ್ದಾರೆ ಮತ್ತು ಒಟ್ಟಾಗಿ ವ್ಯಾಯಾಮ ಮಾಡಿದ್ದಾರೆ, ಆ ಮೂಲಕ ಬೆವರು ಸುರಿಸಿದ್ದಾರೆ. ಇದು ದೈಹಿಕ ಕ್ಷಮತೆಗೆ ಉಪಯುಕ್ತ ಮಾತ್ರವಲ್ಲ ಇತರ ಉಪ ಉತ್ಪನ್ನಗಳಾದ ಭಾವನಾತ್ಮಕ ಅನುಬಂಧ, ಪರಸ್ಪರ ಉತ್ತಮ ತಿಳುವಳಿಕೆ, ಪರಸ್ಪರ ಸಹಕಾರಗಳನ್ನು ಬೆಳೆಸಿಕೊಳ್ಳುವುದಕ್ಕೂ ಇದು ಉಪಯೋಗವಾಗಿದೆ ಮತ್ತು ಅದು ಕುಟುಂಬದ ಶಕ್ತಿಯೂ ಆಗಿದೆ. ಅದು ಇದ್ದಕ್ಕಿದ್ದಂತೆ ಆವರ್ಭವಿಸಿದೆ. ನಮ್ಮ ಪೋಷಕರು ನಮಗೆ ಯಾವುದೇ ಅಭ್ಯಾಸವನ್ನು ಕಲಿಸಿದರೆ ಅದು ಒಳ್ಳೆಯ ಅಭ್ಯಾಸವೇ ಆಗಿರುವುದನ್ನು ಸಾಮಾನ್ಯವಾಗಿ ಕಾಣಬಹುದು. ಆದರೆ ದೈಹಿಕ ಕ್ಷಮತೆಗೆ ಸಂಬಂಧಿಸಿದರೆ ಇದು ಅದಕ್ಕೆ ವಿರುದ್ದ. ಈಗ ಯುವಜನತೆ ಈ ನಿಟ್ಟಿನಲ್ಲಿ ಆರಂಭಿಕ ಉಪಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಮತ್ತು ಪೋಷಕರಿಗೆ ವ್ಯಾಯಾಮ ಮಾಡುವಂತೆ, ಆಡುವಂತೆ ಪ್ರೇರಣೆ ನೀಡುತ್ತಿದ್ದಾರೆ.

ಸ್ನೇಹಿತರೇ, ಜನಪ್ರಿಯವಾದ ಮಾತೊಂದಿದೆ - मन चंगा तो कठौती में गंगा।. ಈ ಸಂದೇಶ ಆಧ್ಯಾತ್ಮಿಕವಾಗಿ ಮತ್ತು ಸಾಮಾಜಿಕವಾಗಿ ಮಾತ್ರ ಮಹತ್ವವಾದುದಲ್ಲ , ಇದು ನಮ್ಮ ದೈನಂದಿನ ಜೀವನದಲ್ಲಿ ಬಹಳ ಪ್ರಮುಖವಾಗಿ ಆಳವಾದ ಪರಿಣಾಮವನ್ನುಂಟು ಮಾಡಬಲ್ಲಂತಹದ್ದು. ಇದರ ಅರ್ಥ ಏನೆಂದರೆ ನಮ್ಮ ಮಾನಸಿಕ ಆರೋಗ್ಯ ಕೂಡಾ ಪ್ರಮುಖವಾದುದು ಎಂದು. ಅಂದರೆ ದೃಢ ಮನಸ್ಸು ದೃಢ ಶರೀರದಲ್ಲಿರುತ್ತದೆ. ಇದರ ತಿರುವು ಮುರುವು ಕೂಡಾ ಅಷ್ಟೇ ಸತ್ಯ. ನಮ್ಮ ಮನಸ್ಸು ಆರೋಗ್ಯಪೂರ್ಣವಾಗಿದ್ದರೆ, ದೇಹ ಕೂಡಾ ಆರೋಗ್ಯಪೂರ್ಣವಾಗಿರುತ್ತದೆ. ಮನಸ್ಸನ್ನು ಆರೋಗ್ಯಪೂರ್ಣವಾಗಿರಿಸುವ ಮತ್ತು ಅದನ್ನು ವಿಸ್ತರಿಸುವ ಬಗ್ಗೆ ಈಗಷ್ಟೇ ಚರ್ಚಿಸಲಾಗಿದೆ. ಯಾವುದೇ ಮನುಷ್ಯ “ನಾನು” ಎಂಬುದನ್ನು ದಾಟಿ ಹೋದರೆ ಮತ್ತು ಕುಟುಂಬವನ್ನು, ಸಮಾಜವನ್ನು ಮತ್ತು ದೇಶವನ್ನು ತನ್ನ ವಿಸ್ತರಣೆ ಎಂದು ಪರಿಗಣಿಸಿದರೆ ಮತ್ತು ಅವುಗಳಿಗಾಗಿ ಸೇವೆ ಸಲ್ಲಿಸಿದರೆ , ಆಗ ಆತ ಭರವಸೆಯ, ವಿಶ್ವಾಸದ ಮಟ್ಟವನ್ನು ಮುಟ್ಟುತ್ತಾನೆ. ಅದು ಆತನನ್ನು ಮಾನಸಿಕವಾಗಿ ಬಲಿಷ್ಟನನ್ನಾಗಿಸುವ ಮೂಲಿಕೆಯಾಗುತ್ತದೆ. ಮತ್ತು ಅದರಿಂದಾಗಿಯೇ ಸ್ವಾಮಿ ವಿವೇಕಾನಂದರು ಹೇಳಿದ್ದು –“ ಶಕ್ತಿಯೆಂದರೆ ಜೀವನ, ದುರ್ಬಲತೆ ಎಂದರೆ ಸಾವು. ವಿಸ್ತರಣೆ ಎಂದರೆ ಬದುಕು, ಸಂಕೋಚನ ಎಂದರೆ ಸಾವು” ಎಂಬುದಾಗಿ.

ಇಂದು ಅಲ್ಲಿ ವಿಧಾನಗಳಿಗೆ ಕೊರತೆ ಇಲ್ಲ. ಅಥವಾ ಸಂಪರ್ಕಕ್ಕೆ ಹಾದಿಗಳ ಕೊರತೆಯೂ ಇಲ್ಲ. ಮತ್ತು ಜನತೆಯೊಂದಿಗೆ , ಸಮಾಜದೊಂದಿಗೆ ಹಾಗು ದೇಶದೊಂದಿಗೆ ಸಂಪರ್ಕಿತರಾಗಿ ಉಳಿಯಲು ಯಾವುದೇ ಕೊರತೆಗಳು ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ವಿಪುಲ ಅವಕಾಶಗಳಿವೆ. ಮತ್ತು ಅಲ್ಲಿ ನಮಗೆ ಹತ್ತಿರವಾಗಿರುವಂತಹ ವಿವಿಧ ಉದಾಹರಣೆಗಳಿವೆ. ಇಂದು ಏಳು ಶ್ರೇಷ್ಟ ವ್ಯಕ್ತಿತ್ವಗಳಿಂದ ನಾವು ಕೇಳಿದುದಕ್ಕಿಂತ ದೊಡ್ಡ ಉತ್ತೇಜನ, ಸ್ಪೂರ್ತಿ ಬೇರೆ ಯಾವುದಿದೆ ? ನಾವೆಲ್ಲರೂ ಮಾಡಬೇಕಾದುದೇನೆಂದರೆ, ನಮ್ಮ ಹವ್ಯಾಸ, ಆಸಕ್ತಿಗೆ ಅನುಗುಣವಾದುದನ್ನು ಆಯ್ಕೆ ಮಾಡಿಕೊಂಡು ಅದನ್ನು ದಿನನಿತ್ಯ ಅನುಷ್ಟಾನ ಮಾಡುತ್ತಿರಬೇಕು. ನಾನು ದೇಶವಾಸಿಗಳನ್ನು, ಎಲ್ಲಾ ತಲೆಮಾರಿನ ಗಣ್ಯರನ್ನು ಕೇಳಿಕೊಳ್ಳುವುದೇನೆಂದರೆ ಇತರರಿಗೆ ಸಹಾಯ ಮಾಡುವ ನಿರ್ಧಾರವನ್ನು ಕೈಗೊಳ್ಳಿ ಎಂಬುದಾಗಿ. ನೀವು ಅವರಿಗೇನನ್ನು ಕೊಡುತ್ತೀರಿ? ನಿಮ್ಮ ಸಮಯವನ್ನೇ, ನಿಮ್ಮ ಜ್ಞಾನವನ್ನೇ, ನಿಮ್ಮ ಕೌಶಲ್ಯಗಳನ್ನೇ ಅಥವಾ ಸ್ವಲ್ಪ ದೈಹಿಕ ಸಹಾಯವನ್ನೇ? ನೀವು ಏನನ್ನಾದರೂ ಮಾಡಬಹುದು ಆದರೆ ಖಚಿತವಾಗಿ ಏನನ್ನಾದರೂ ಮಾಡುತ್ತಿರಬೇಕು.

ಸ್ನೇಹಿತರೇ,

ಫಿಟ್ ಇಂಡಿಯಾ ಆಂದೋಲನದ ಜೊತೆ ದೇಶವಾಸಿಗಳು ಇನ್ನಷ್ಟು ಹೆಚ್ಚು ಹೆಚ್ಚು ತೊಡಗಿಕೊಳ್ಳುತ್ತಾರೆ ಮತ್ತು ನಾವು ಒಗ್ಗೂಡಿ ಜನರನ್ನು ಪರಸ್ಪರ ಸಂಪರ್ಕಿಸುತ್ತೇವೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ. “ಫಿಟ್ ಇಂಡಿಯಾ ಆಂದೋಲನ” ವಾಸ್ತವವಾಗಿ ’ಭಾರತವನ್ನು ಬಡಿದೆಬ್ಬಿಸುವ ಆಂದೋಲನ” . ಆದುದರಿಂದ ಭಾರತ ದೈಹಿಕ ಕ್ಷಮತೆಯನ್ನು ವರ್ಧಿಸಿಕೊಂಡಷ್ಟು , ಬಾರತ ಬಲಿಷ್ಟವಾಗುತ್ತದೆ. ಇದರಲ್ಲಿ ನಿಮ್ಮ ಎಲ್ಲಾ ಪ್ರಯತ್ನಗಳು ಸದಾ ದೇಶಕ್ಕೆ ಸಹಾಯ ಮಾಡುತ್ತವೆ.

ನಿಮ್ಮೆಲ್ಲರಿಗೂ ಶುಭ ಹಾರೈಕೆಯೊಂದಿಗೆ , ನಾನು ನಿಮ್ಮೆಲ್ಲರಿಗೂ ಹೃದಯ ತುಂಬಿದ ಕೃತಜ್ಞತೆಯನ್ನು ಹೇಳುತ್ತೇನೆ! ನೀವು ಇಂದು ಫಿಟ್ ಇಂಡಿಯಾ ಆಂದೋಲನಕ್ಕೆ ಹೊಸ ಉತ್ಸಾಹ ತುಂಬುತ್ತೀರಿ ಎಂದು ಭಾವಿಸುತ್ತೇನೆ. ಹೊಸ ನಿರ್ಧಾರಗಳೊಂದಿಗೆ ಮುನ್ನಡೆಯುತ್ತೀರಿ ಮತ್ತು ಫಿಟ್ ಇಂಡಿಯಾ ಸರಣಿಯನ್ನು ಮುಂದಕ್ಕೆ ಒಯ್ಯುತ್ತೀರಿ ಎಂಬ ಭರವಸೆಯನ್ನು ಹೊಂದಿದ್ದೇನೆ !

ಈ ಸ್ಪೂರ್ತಿಯೊಂದಿಗೆ, ನಾನು ನಿಮ್ಮೆಲ್ಲರಿಗೂ ದನ್ಯವಾದಗಳನ್ನು ಸಲ್ಲಿಸುತ್ತೇನೆ.

***



(Release ID: 1658996) Visitor Counter : 173