ಉಪರಾಷ್ಟ್ರಪತಿಗಳ ಕಾರ್ಯಾಲಯ

ಉಪ-ರಾಷ್ಟ್ರಪತಿ ಭವನದಲ್ಲಿ ಪತ್ನಿಯೊಂದಿಗೆ ದೀಪ ಬೆಳಗಿಸಿದ ಉಪ ರಾಷ್ಟ್ರಪತಿ

Posted On: 05 APR 2020 9:10PM by PIB Bengaluru

ಉಪ-ರಾಷ್ಟ್ರಪತಿ ಭವನದಲ್ಲಿ ಪತ್ನಿಯೊಂದಿಗೆ ದೀಪ ಬೆಳಗಿಸಿದ ಉಪ ರಾಷ್ಟ್ರಪತಿ

COVID-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ದೃಢ ಸಂಕಲ್ಪ ತೋರಿಸಿದ್ದಕ್ಕಾಗಿ ದೇಶದ ಜನತೆಯನ್ನು ಪ್ರಶಂಸಿಸಿದ ಉಪ ರಾಷ್ಟ್ರಪತಿ

ನೊವೆಲ್ ಕೊರೊನಾವೈರಸ್ ಹರಡುವುದನ್ನು ತಡೆಗಟ್ಟಲು ಸಾಮಾಜಿಕ ಅಂತರ ಮತ್ತು ಇತರ ಸೂಚನೆಗಳನ್ನು ಪಾಲಿಸುವಂತೆ ಜನತೆಗೆ ಕರೆ

ಬಡವರು ಮತ್ತು ನಿರ್ಗತಿಕರ ರಕ್ಷಣೆಗೆ ಧಾವಿಸುವಂತೆ ಮನವಿ

ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿಯ ಬಗ್ಗೆ ಕಳವಳ: ವದಂತಿಗಳನ್ನು ಹತ್ತಿಕ್ಕಲು ಅಧಿಕೃತ ಮಾಹಿತಿಯ ಮುಕ್ತ ಹರಿವಿಗೆ ಕರೆ

ಪರಿಸ್ಥಿತಿ ಸುಧಾರಿಸುವವರೆಗೆ ಪ್ರತಿ ತಿಂಗಳು ತಮ್ಮ ಸಂಬಳದ ಶೇ. 30 ರಷ್ಟನ್ನು COVID-19 ವಿರುದ್ಧದ ಹೋರಾಟಕ್ಕೆ ಕೊಡುಗೆ: ಉಪರಾಷ್ಟ್ರಪತಿ

 

ಉಪ ರಾಷ್ಟ್ರಪತಿ ಶ್ರೀ ಎಂ.ವೆಂಕಯ್ಯ ನಾಯ್ಡು ಮತ್ತು ಅವರ ಪತ್ನಿ ಶ್ರೀಮತಿ ಉಷಮ್ಮ COVID -19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಲು ಇಂದು ರಾತ್ರಿ 9 ಗಂಟೆಗೆ ನವದೆಹಲಿಯ ಉಪರಾಷ್ಟ್ರಪತಿ  ಭವನದಲ್ಲಿ ದೀಪಗಳನ್ನು ಬೆಳಗಿಸಿದರು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಉಪಕ್ರಮವು ನೊವೆಲ್ ಕೊರೊನಾವೈರಸ್ ನಿಂದ ಉಂಟಾಗಿರುವ ಅಂಧಕಾರವನ್ನು ಹೋಗಲಾಡಿಸಲು ಹಾಗೂ ನಮ್ಮ ಐಕ್ಯತೆ ಮತ್ತು ಸಾಮೂಹಿಕ ಶಕ್ತಿಯನ್ನು ಪ್ರದರ್ಶಿಸಲು ಉದ್ದೇಶಿಸಿದೆ ಎಂದು ಹೇಳಿದ ಉಪ ರಾಷ್ಟ್ರಪತಿಯವರು ತಂಡ ಕಾರ್ಯದ ಅಪಾರ ಶಕ್ತಿಯನ್ನು ತೋರಿಸಿದ್ದಕ್ಕಾಗಿ ದೇಶದ ಜನರನ್ನು ಶ್ಲಾಘಿಸಿದರು.

ಪ್ರಧಾನ ಮಂತ್ರಿಯವರ ಕರೆಗೆ ತಮ್ಮ ಅಗಾಧ ಪ್ರತಿಕ್ರಿಯೆಯ ಮೂಲಕ, ಸಾಂಕ್ರಾಮಿಕ ರೋಗದ ಬಿಕ್ಕಟ್ಟನ್ನು ನಿವಾರಿಸಲು ಭಾರತದ ಜನರು ದೃಢ ನಿಶ್ಚಯವನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಲಾಕ್-ಡೌನ್ ಅವಧಿಯಲ್ಲಿ ಜನರು ಮನೆಯಲ್ಲಿಯೇ ಇರಬೇಕೆಂದು ಮನವಿ ಮಾಡಿದ ಉಪ ರಾಷ್ಟ್ರಪತಿಯವರು, ವೈರಸ್ ಹರಡುವುದನ್ನು ತಡೆಯವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

COVID-19 ಅನ್ನು ಎದುರಿಸಲು ಎಲ್ಲಾ ಆರೋಗ್ಯ ಕಾರ್ಯಕರ್ತರು, ಪೊಲೀಸ್, ಪುರಸಭೆ, ನೈರ್ಮಲ್ಯ ಕಾರ್ಮಿಕರು ಮತ್ತು ನಾಗರಿಕ ಸಮಾಜದ ಗುಂಪುಗಳ ಶ್ರದ್ಧೆಯನ್ನು ಶ್ಲಾಘಿಸಿದ ಅವರು, ಸಾಮಾಜಿಕ ಅಂತರವನ್ನು ಪಾಲಿಸುವಂತೆ ಮತ್ತು ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವಂತೆ ಎಂದು ಜನತೆಗೆ ಮನವಿ ಮಾಡಿದರು. COVID-19 ಹರಡುವುದನ್ನು ನಿಯಂತ್ರಿಸಲು ಸರ್ಕಾರ ಮತ್ತು ಆರೋಗ್ಯ ತಜ್ಞರು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅವರು ಆಗ್ರಹಿಸಿದರು.

ಜನರಿಗೆ ಆಗುತ್ತಿರುವ ಕಷ್ಟಗಳನ್ನು ಕಡಿಮೆ ಮಾಡಲು ವಿವಿಧ ಕ್ರಮಗಳನ್ನು ಜಾರಿಗೆ ತಂದಿದ್ದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಶ್ಲಾಘಿಸಿದ ಶ್ರೀ ನಾಯ್ಡು ಅವರು, ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ವಲಸೆ ಕಾರ್ಮಿಕರು, ನಿರ್ಗತಿಕರು ಮತ್ತು ಬಡವರ ರಕ್ಷಣೆಗೆ ಧಾವಿಸುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಸಾಂಕ್ರಾಮಿಕ ರೋಗದ ಬಗ್ಗೆ ಸುದ್ದಿ ಮತ್ತು ನಿರಂತರ ಮಾಹಿತಿಯನ್ನು ಪ್ರಸಾರ ಮಾಡುತ್ತಿರುವ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮ ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ವದಂತಿಗಳು, ಸುಳ್ಳು ಸುದ್ದಿಗಳು ಮತ್ತು ದಾರಿತಪ್ಪಿಸುವ ಮಾಹಿತಿಯ ಬಗ್ಗೆ, ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳ ಬಗ್ಗೆ ಎಚ್ಚರದಿಂದ ಇರುವಂತೆ  ಜನರಿಗೆ ಮನವಿ ಮಾಡಿದರು.

ನಂತರ ಉಪ ರಾಷ್ಟ್ರಪತಿಯವರು ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ, ತಪ್ಪು ಮಾಹಿತಿಯ ಹರಡುವಿಕೆಯ ಬಗ್ಗೆ, ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು ಮತ್ತು ಇದು ವೈರಸ್ ಆಗಿದ್ದು, ಅದನ್ನು ತಕ್ಷಣವೇ ನಿಯಂತ್ರಿಸಬೇಕಾಗಿದೆ ಎಂದು ಹೇಳಿದರು.

"ನಾವು ಸಮುದಾಯಗಳ ಬಗ್ಗೆ ಅಸಮರ್ಥನೀಯವಾದ ಸಾಮಾನ್ಯೀಕರಣಗಳಿಂದ ದೂರವಿರಬೇಕು ಮತ್ತು ರೀತಿಯ ಘಟನೆಗಳನ್ನು ನಮ್ಮ ಪೂರ್ವಾಗ್ರಹ ಮತ್ತು ಪಕ್ಷಪಾತ ದೃಷ್ಟಿಯಿಂದ ನೋಡಬಾರದು. ನಿಗದಿತ ಮಾರ್ಗಸೂಚಿಗಳ ಉಲ್ಲಂಘನೆಗಳಂತಹ ದುರದೃಷ್ಟಕರ ಘಟನೆಗಳು ಮತ್ತೆ ನಡೆಯುವುದಿಲ್ಲ ಎಂದು ನಾವು ಆಶಿಸೋಣಎಂದು ಅವರು ಹೇಳಿದರು.

ವದಂತಿಗಳು ಮತ್ತು ತಪ್ಪು ಮಾಹಿತಿಯನ್ನು ನಿಗ್ರಹಿಸಲು ಅಧಿಕೃತ ಮಾಹಿತಿಯ ಮುಕ್ತ ಹರಿವು ನಿರ್ಣಾಯಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಎಲ್ಲಾ ವೈರುಧ್ಯಗಳ ವಿರುದ್ಧ ಮುಂಚೂಣಿಯಲ್ಲಿ ನಿಂತು ಧೈರ್ಯವಾಗಿ ಹೋರಾಟ ನಡೆಸುತ್ತಿರುವ ವೈದ್ಯಕೀಯ ವೃತ್ತಿಪರರ ಮೇಲಿನ ಹಲ್ಲೆಗೆ ಸಂಬಂಧಿಸಿದ ಗೊಂದಲದ ಘಟನೆಗಳು ನಡೆದಿವೆ ಎಂದು ಉಪ ರಾಷ್ಟ್ರಪತಿಯವರು ಹೇಳಿದರು

"ಮುಂಚೂಣಿಯ ಯೋಧರ ಸುರಕ್ಷತೆಗಾಗಿ ಗೌರವ ಮತ್ತು ಕಾಳಜಿ ತೋರಿಸಿ, ವಿಶೇಷವಾಗಿ ವೈದ್ಯಕೀಯ ವೃತ್ತಿಪರರು ನಮ್ಮ ಉದ್ದೇಶವನ್ನು ಸಾಧಿಸಲು ಸಂಪೂರ್ಣವಾಗಿ ಅವಶ್ಯಕವಾಗಿದ್ದಾರೆ" ಎಂದರು.

ಏತನ್ಮಧ್ಯೆ, ರಾಜ್ಯಸಭೆಯ ಅಧ್ಯಕ್ಷರೂ ಆಗಿರುವ ಉಪ ರಾಷ್ಟ್ರಪತಿಯವರು ಪರಿಸ್ಥಿತಿ ಸುಧಾರಿಸುವವರೆಗೆ ಪ್ರತಿ ತಿಂಗಳು ತಮ್ಮ ಸಂಬಳದ ಶೇ 30 ರಷ್ಟನ್ನು COVID-19 ವಿರುದ್ದದ ಹೋರಾಟಕ್ಕೆ ಕೊಡುಗೆಯಾಗಿ ನೀಡಲು ನಿರ್ಧರಿಸಿದ್ದಾರೆ.

***



(Release ID: 1611551) Visitor Counter : 498